Monday, December 7, 2009

ಅವರಿಗೆ ’ಮತ’ದಾಸೆ, ನಮಗೆ ದೇಶದಾಸೆ!

ಛೇ, ಏನಿದು? ಇಲ್ಲ, ಅವರು ದೇಶದ ಮುಖ್ಯವಾಹಿನಿಗೆ ಸೇರುವುದೇ ಇಲ್ಲ. ಉಳಿದವರನ್ನು ಸೇರಲು ಕೂಡ ಬಿಡುವುದಿಲ್ಲ. ಅವರ ಸ್ವಾರ್ಥಕ್ಕೆ ಮತದ ಮುಖವಾಡ, ಅಲ್ಲಿ ಮತವೇ ಫುಟ್‌ಬಾಲ್ ಮತ್ತು ಅಂಪೈರ್‌ಗಳಾದ್ದೇ ಆಟ!
ಈ ರೀತಿ ಹೇಳದೆ, ಬರೆಯದೆ ವಿಧಿಯಿಲ್ಲ. ಕಾರಣ, ಮುಸ್ಲಿಂಮರು ’ವಂದೇ ಮಾತರಂ’ ಹಾಡುವುದರ ವಿರುದ್ದ ಜಾಮತೇ ಉಲೇಮಾ ಈ ಹಿಂದ್ ಹೊರಡಿಸಿರುವ ಫತ್ವಾ!
ವಾರೆವ್ಹಾ ಜಾಮತೇ ಉಲೇಮಾ ಈ ಹಿಂದ್ ವಾರೆವ್ಹಾ!
ಮುಸ್ಲಿಂಮರು, ಕೊಲೆ, ಕಳ್ಳತನ, ಅತ್ಯಾಚಾರ, ದೇಶದ್ರೋಹ ಮಾಡುವುದು ವಿಶಾಲವಾಗಿ ಹೇಳುವುದಾದರೆ ದೇಶದ ಕಾನೂನನ್ನು , ಮಾನವೀಯತೆಯನ್ನು ಗೌರವಿಸದಿರುವುದು ಇಸ್ಲಾಂ ವಿರೋಧಿಯಲ್ಲ ಆದರೆ ’ವಂದೇ ಮಾತರಂ’ ಹಾಡುವುದು ಮಾತ್ರ ಇಸ್ಲಾಂ ವಿರೋಧಿ! ಎಂಥಹ ಪರಿಕಲ್ಪನೆ ನಿಮ್ಮದು. ಅದ್ಭುತ... ಅದ್ಭುತ!
’ವಂದೇ ಮಾತರಂ’ನ್ನು ಬಂಕಿಮ ಚಂದ್ರ ಚಟರ್ಜಿ ಬರೆದದ್ದು ೧೮೭೫ರಲ್ಲಿ. ಆದರೆ ಅದು ಅವರ ಕಾದಂಬರಿ ’ಅನಂದ ಮಠ’ದ ಮೂಲಕ ಬೆಳಕು ಕಂಡದ್ದು ಮುಂದಿನ ದಶಕದ ಆದಿಯಲ್ಲಿ.
’ವಂದೇ ಮಾತರಂ’ನ್ನು ೧೮೯೬ರ ಕಾಂಗ್ರೇಸ್ ಅಧಿವೇಶನದಲ್ಲಿ ರವೀಂದ್ರನಾಥ್ ಠಾಗೋರ್ ಹಾಡಿದರು. ತದನಂತರ ೧೯೦೫ರಲ್ಲಿ ಲಾರ್ಡ್ ಕರ್ಜನ್ ಬಂಗಾಳವನ್ನು ವಿಭಜಿಸಿದ. ಈ ಸಂದರ್ಭದಲ್ಲೇ ’ವಂದೇ ಮಾತರಂ’ ಎಂಬ ಸುಪ್ತ ಜ್ವಾಲಾಮುಖಿ ಸ್ಪೋಟಗೊಂಡು ಇಡೀ ಬೆಂಗಾಳಿಯರನ್ನು ಬೆಸೆದು ಬ್ರಿಟೀಷ್ ಆದಿಪತ್ಯದ ಮೇಲೆ ಬೆಂಕಿಯ ವರ್ಷಧಾರೆ ಸುರಿಸಿದ್ದು.
ವಂಗ ಭಂಗ ಚಳವಳಿಯ ಬೀಜಮಂತ್ರವಾಯಿತು ಈ ಹಾಡು. ೧೯೧೧ರಲ್ಲಿ ಬಂಗಾಳ ಮತ್ತೆ ಒಂದಾಯಿತು. ಅಷ್ಟರಲ್ಲೇ ’ವಂದೇ ಮಾತರಂ’ ಗಿದ್ದ ಅಗಾಧ ಶಕ್ತಿ ಮತ್ತು ಚೈತನ್ಯ ಬೆಂಗಾಳಿಯರಿಗೆ ಮನದಟ್ಟಾಗಿತ್ತು ಮತ್ತು ಬ್ರಿಟೀಷ್ ದೊರೆಗಳಿಗೆ ಆರ್ಥವಾಗಿತ್ತು!
ಇದೇ ಕಾಲದಲ್ಲಿ ಮತ್ತು ತದನಂತರ ಈ ಹಾಡು ಬಂಗಾಳದ ಎಲ್ಲೆಗಳನ್ನು ದಾಟಿ, ದೇಶದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರ ಹೃದಯಗಳನ್ನು ಮೀಟಿ ಬ್ರೀಟಿಷರ ಹುಟ್ಟಡಗಿಸಲೆಂದೇ ಹುಟ್ಟಿಕೊಂಡ ಹೊಸ ಅಸ್ತ್ರ ಅಥವಾ ಶಕ್ತಿಯಾಗಿ ಪರಿಗಣಿಸಲ್ಪಟ್ಟಿತ್ತು.
ಅಲ್ಲಿಂದ ೧೯೨೩ರ ಕಾಕಿನಾಡ ಕಾಂಗ್ರೇಸ್ ಅಧಿವೇಶನದ ತನಕ ’ವಂದೇ ಮಾತರಂ’ ಯಾವುದೇ ವಿವಾದಗಳಿಗೆ ತುತ್ತಾಗದೇ ದೇಶ ಬಾಂಧವರನ್ನು ಒಟ್ಟುಗೂಡಿಸುತ್ತ ಸಾಗಿತು.
ಆದರೆ ಆ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಮೌಲಾನಾ ಮಹಮ್ಮದ್ ಆಲಿ, ಅಧಿವೇಶನದಲ್ಲಿ ಈ ಹಾಡನ್ನು ಹಾಡುವುದಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿ ಈ ಹಾಡಿಗೆ ಮತ್ತು ಈ ಹಾಡಿನ ಆಶಯಕ್ಕೆ ಮೈಲಿಗೆ ಮಾಡುವ ಕೆಲಸಕ್ಕೆ ಮೂಹುರ್ತವಿಟ್ಟರು.
ಅಲ್ಲಿಂದ ನಂತರ ಹೆಚ್ಚಿನ ಮುಸ್ಲಿಂ ನಾಯಕರುಗಳಿಂದ ’ವಂದೇ ಮಾತರಂ’ನ ವಿರೋಧ ಪರ್ವ. ಇದೀಗ ಜಮಾತೆ ಉಲೇಮಾ ಸಂಘಟನೆ ಈ ಪರಂಪರೆಗೆ ಮತ್ತೊಂದು ಕೊಂಡಿ ಸೇರಿಸಿದೆ. ಇದು ಆ ಸಂಘಟನೆ ಸಂಕುಚಿತ ಚಿಂತನೆ ಮತ್ತು ಮನೋಭಾವದ ತುತ್ತಾತುದಿ ತಲುಪಿದೆ ಎಂಬುದನ್ನು ಸಾರಿದೆ. ಇಂತಹ ಮನಸ್ಥಿತಿ ಹುಟ್ಟಿಕೊಳ್ಳಲು ದೇಶದ ’ಜಾತ್ಯತೀತ’ಪಕ್ಷಗಳ ಕೊಡುಗೆ ಅಪಾರ. ಮುಸ್ಲಿಂ ಒಲವಿಗಾಗಿ ಪರಿತಪಿಸುವ ಪಕ್ಷಗಳಿಗೆ ’ವಂದೇ ಮಾತರಂ’ಅಸ್ಪಶ್ಯ,
ಇಲ್ಲೊಂದು ಗಮನಿಸಬೇಕಾದ ಸಂಗತಿಯಿದೆ. ಅದೇನೇಂದರೆ ೧೮೮೦ ರಿಂದ ೧೯೨೩ರವರೆಗೆ ಯಾವೊಬ್ಬ ಮುಸ್ಲಿಂ ಮತ ಪಂಡಿತನೂ ಈ ಹಾಡಿನ ಬಗ್ಗೆ ತಕರಾರು ಎತ್ತಿರಲಿಲ್ಲ. ಸ್ವತ: ಈಗ ಫತ್ವಾ ಹೊರಡಿಸಿರುವ ಜಾಮಾತೇ ಉಲೇಮಾ ಕೂಡ! ಅಂದರೆ ಇದರರ್ಥ, ಆಗಿದ್ದ ಇಸ್ಲಾಂ ಮತ ಪಂಡಿತರಲ್ಲಿ ಮತ ಪಾಂಡಿತ್ಯದ ಕೊರತೆಯಿತ್ತೆಂದ? ಅಥವಾ ಅವರಿಗೆ ವಂದೇ ಮಾತರಂನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇರಲಿಲ್ಲ ಎಂದಾ? ಅಥವಾ ಅವರಿಗೆ ಇಸ್ಲಾಂ ಸರಿಯಾಗಿ ಗೊತ್ತಿರಲಿಲ್ಲ ಎಂದಾ? ಅಥವಾ ೧೯೨೦ರ ನಂತರದ ಹಲವು ಮುಸ್ಲಿಂ ನಾಯಕರು ಅಧಿಕಾರ ದಾಹಕ್ಕಾಗಿ ಈ ಹಾಡನ್ನು ಗೊತ್ತಿದ್ದು ಗೊತ್ತಿದ್ದು ತಪ್ಪಾಗಿ ಅರ್ಥೈಸಿಕೊಂಡರಾ?
ಮುಸ್ಲಿಂ ನಾಯಕರ ’ವಂದೇ ಮಾತರಂ’ದ್ವೇಷಕ್ಕೆ ಮತ್ತೊಂದು ಕಾರಣವನ್ನು ಊಹಿಸಬಹುದು. ಅದೇನೆಂದರೆ ಈ ಹಾಡು ಇರುವ ’ಅನಂದ ಮಠ’ಕಾದಂಬರಿಯ ಕಥಾವಸ್ತು. ಇಲ್ಲಿ ಬಂಗಾಳದ ಸಂತಾನ ಎಂಬ ಗುಡ್ಡಗಾಡು ಜನರು, ಆಕ್ರಮಣಕಾರಿ ಮುಸ್ಲಿಂರ ವಿರುದ್ಧ ಹೋರಾಡುತ್ತಾರೆ. ಈ ಗುಡ್ಡಗಾಡು ಜನರಿಗೆ ಸ್ಪೂರ್ತಿಯಾಗಿ ಈ ಹಾಡು ಕಾದಂಬರಿಯಲ್ಲಿ ಬಳಕೆಯಾಗುತ್ತದೆ. ಇದು ಮುಸ್ಲಿಂ ನಾಯಕರುಗಳಿಗೆ ನೋವು ತಂದಿರಬಹುದು.
ಸರಿ, ಒಪ್ಪೋಣ. ದೇಶದ ಜನರು ಆ ಕಾದಂಬರಿಯನ್ನು ಬಾಯಿ ಪಾಠ ಹೊಡೆಯಲಿ, ಆ ಪುಸ್ತಕವನ್ನ ’ರಾಷ್ಟ್ರ ಪುಸ್ತಕ’ಎಂದು ಘೋಷಿಸಲಿ ಎಂದು ಇಲ್ಲಿ ಯಾರೂ ಹೇಳುತ್ತಿಲ್ಲ. ಇನ್ನು ಈ ಕಾದಂಬರಿಯ ಬಗ್ಗೆ ದೇಶದ ಶೇ. ೯೯ ಮಂದಿಗೆ ಅರಿವೆ ಇರಲಿಕ್ಕಿಲ್ಲ. ಇದ್ದರೂ ಅದರ ಕಥಾಹಂದರದ ಬಗ್ಗೆ ಗೊತ್ತೇ ಇರಲಿಕ್ಕಿಲ್ಲ. ಅವರಿಗೆ ಈ ಹಾಡು ಹುಟ್ಟಿಸುವ ದೇಶಭಕ್ತಿ ಮುಖ್ಯ ಉಳಿದ ವಿಷಯಗಳು ನಗಣ್ಯ.
ಅದರಲ್ಲೂ ಆ ’ಹಿರಿದಾದ’ಹಾಡಿನಲ್ಲಿರುವ ಹಿಂದೂ ದೇವತೆಗಳ ವರ್ಣನೆಯನ್ನು ತೆಗೆದು ಟ್ರಿಮ್ ಮಾಡಿ ಮುಸ್ಲಿಂಮರ ಧಾರ್ಮಿಕ ನಂಬಿಕೆಗೆ ಯಾವ ಚ್ಯುತಿಯೂ ಆಗದ ರೀತಿಯಲ್ಲಿ ಈ ಹಾಡನ್ನು ಈಗ ಬಳಸಿಕೊಳ್ಳಲಾಗುತ್ತಿದೆ. ಆದರೂ ಉಲೇಮಾದ ನಖಾರ ಅದರ ಉದ್ದಟತನದ ಪ್ರತೀಕ.
ಈಗ ದೇಶದ ರಾಷ್ಟ್ರಗೀತೆ ’ಜನಗಣಮನ’ವನ್ನು ತೆಗೆದುಕೊಳ್ಳಿ. ಈ ಹಾಡನ್ನು ಎಲ್ಲರೂ ಗೌರವಿಸುತ್ತಾರೆ ನಿಜ. ಅದರೆ ಈ ಹಾಡು ’ಉತ್ಸವ ಮೂರ್ತಿ’ ರೀತಿ ಅನಿಸಿಬಿಟ್ಟಿದೆ. ಅದು ಇಂದಿಗೂ ದೇಶವಾಸಿಗಳ ಹೃದಯದ ಹಾಡಗಿಲ್ಲ, ಜನರನ್ನು ಬೆಸೆದಿಲ್ಲ, ಜನರಲ್ಲಿ ಯಾವುದೋ ಒಂದು ಉದ್ದೇಶಕ್ಕಾಗಿ ಶ್ರಮಿಸುವಂತೆ, ಹೋರಾಡುವಂತೆ ಮಾಡಿಲ್ಲ, ಜನರಿಗೆ ಸ್ಪೂರ್ತಿಯಾಗಿಲ್ಲ ಅದಕ್ಕಿಂತ ಹೆಚ್ಚಾಗಿ ಜನರ ಪ್ರಜ್ಞೆಗೆ ಇಳಿದೇ ಇಲ್ಲ.
’ವಂದೇ ಮಾತರಂ’ ಆ ಕಾಲದಲ್ಲಿ ಕೇವಲ ಹತ್ತು ವರ್ಷದಲ್ಲಿ ಸಾಧಿಸಿದನ್ನು ’ಜನಗಣಮನ’ಕ್ಕೇ ಈ ಕಾಲದಲ್ಲಿ ಕಳೆದ ೬೦ ವರ್ಷಗಳಿಂದ ಸಾಧಿಸಲು ಸಾಧ್ಯವಾಗಿಲ್ಲ.
ಇನ್ನು ಜಮಾತೇ ಉಲೇಮಾದ ವಿಷಯಕ್ಕೆ ಬರೋಣ, ಇದು ಅಸ್ತಿತ್ವಕ್ಕೆ ಬಂದದ್ದು ೧೯೧೯ರಲ್ಲಿ. ಭಾರತದಲ್ಲಿನ ಮುಸ್ಲಿಂಮರ ಶ್ರೇಯೋಭಿವೃಧಿ ಇದರ ಉದ್ದೇಶ. ಇದರ ಮುಖ್ಯ ಕಚೇರಿ ೧, ಬಹದ್ದೂರ್ ಶಾ ಜಾಫರ್ ರಸ್ತೆ, ನವದೆಹಲಿಯಲ್ಲಿದೆ.
ಇದು ಪಾಕಿಸ್ತಾನದ ಸೃಷ್ಟಿಯನ್ನು ವಿರೋಧಿಸಿತ್ತು. ಇದಕ್ಕಿಂತ ಅಶ್ಚರ್ಯದ ವಿಷಯವೆಂದರೆ ಕಳೆದವರ್ಷ ಭಯೋತ್ಪಾದನೆ ವಿರುದ್ದ ಪತ್ವಾ ಹೋರಡಿಸಿತ್ತು. ಈಗ ’ವಂದೇ ಮಾತರಂ’ವಿರುದ್ದ ಫತ್ವಾ! ಅಂದರೆ ಮುಗ್ದರನ್ನು ಕೊಲ್ಲವವರು ಮತ್ತು ’ವಂದೇ ಮಾತರಂ’ಹಾಡುವ ಮುಸ್ಲಿಂಮರು ಒಂದೇ ಎಂದ ಹಾಗಯ್ತು.
ಒಬ್ಬ ಮುಗ್ದನನ್ನು ಕೊಲ್ಲುವುದು, ಇಡೀ ಮಾನವ ಜನಾಂಗದ ಹತ್ಯೆ ಮಾಡಿದ ಪಾಪಕ್ಕೆ ಸಮ ಎಂದು ಕುರಾನ್‌ನಲ್ಲಿ ಇದೆಯೆಂದು ಬಲ್ಲವರು ಹೇಳುತ್ತಾರೆ. ಆದರೆ ಅದೆಲ್ಲದಕ್ಕಿಂತ ಹೆಚ್ಚು ಪಾಪದ ಕೆಲಸ ’ವಂದೇ ಮಾತರಂ’ಹಾಡುವುದು!
’ವಂದೇ ಮಾತರಂ’ಹಾಡಿದೊಡನೆ ಕುಸಿದು ಬೀಳುವಷ್ಟು ಜಾಳಾಗಿದೆಯಾ ಇಸ್ಲಾಂ? ಇದು ಪ್ರಶ್ನೆಯಲ್ಲ, ಸಂಶಯ.
ಸೂಡಾನ್‌ನ ಶೇಕ್ ಸಾದಿಕ್ ಅಬ್ದದಲ್ಲಾ ಬಿನ್ ಮಜೀದ್ ಎಂಬ ಮುಸ್ಲಿಂ ನಾಯಕ ಮಕ್ಕಳಿಗೆ ಲಸಿಕೆ ಕೊಡಿಸುವುದರ ವಿರುದ್ದ ಫತ್ವಾ ಹೊರಡಿಸಿದ್ದ. ಇರಾನ್‌ನ ಅಯೆತೊಲ್ಲ ಆಲಿ ಕಮೇನಿ, ಅಣ್ವಸ್ತ್ರ ಬಳಕೆ ಮತ್ತು ಶೇಖರಣೆ ವಿರುದ್ದ ಫತ್ವಾ ಹೊರಡಿಸಿದ್ದ. ಇನ್ನು, ಒಸಮಾ ಬಿನ್ ಲಾದನ್ ೧೯೯೬ ಮತ್ತು ೧೯೯೮ರಲ್ಲಿ ಹೊರಡಿಸಿದ್ದ ಫತ್ವಾದಲ್ಲಿ ಅಮೆರಿಕ, ಇಸ್ರೇಲ್‌ಗೆ ತನ್ನ ಬೆಂಬಲ ವಾಪಸ್ ಪಡೆದುಕೊಳ್ಳುವವರೆಗೆ ಮತ್ತು ಮುಸ್ಲಿಂ ರಾಷ್ಟ್ರಗಳಲ್ಲಿರುವ ತನ್ನ ಸೈನ್ಯವನ್ನು ವಾಪಸ್ ಪಡೆದುಕೊಳ್ಳುವವರೆಗೆ ಅದರ ನಾಗರಿಕರನ್ನು ಮತ್ತು ಸೈನಿಕರನ್ನು ಕೊಲ್ಲುವಂತೆ ಹೇಳಿದ್ದ. ಇವು ಕೆಲವೇ ಕೆಲವು ಸಾಮಾಜಿಕ ಪರಿಣಾಮ ಬೀರುವ ಮತ್ತು ಬೀರಿದ ಫತ್ವಾಗಳು.
ಇದರ ಜೊತೆ ಜೊತೆಗೆ ಸಿಗರೇಟ್ ಸೇವನೆಯ ವಿರುದ್ದ ಫತ್ವಾವಿದೆ. ಭಯೋತ್ಪಾದನೆಯ ವಿರುದ್ದವೂ ಫತ್ವಾವಿದೆ. ಇಂತಹ ಫತ್ವಾ ಇದ್ದರೂ ಮುಸ್ಲಿಂಮರು ಎಗ್ಗಿಲ್ಲದೆ ಸಿಗರೇಟ್ ಸೇದುತ್ತಾರೆ. ಭಯೋತ್ಪಾದನ ಚಟುವಟಿಕೆ ಅಥವಾ ಕೊಲ್ಲುವ, ಹಲ್ಲೆ ಮಾಡುವ ಚಟುವಟಿಕೆಗಳಲ್ಲಿ ’ಉತ್ಸಾಹ’ದಿಂದ ಪಾಲ್ಗೊಳ್ಳುತ್ತಾರೆ. ಇದರರ್ಥ, ಅವರು ಫತ್ವಾಕ್ಕೆ ಸೊಪ್ಪು ಹಾಕುತ್ತಿಲ್ಲ ಬದಲು ಟೋಪಿ ಹಾಕುತ್ತಿದ್ದರೆ ಎಂದಾಯಿತು.
ಅದ್ದರಿಂದ ’ವಂದೇ ಮಾತರಂ’ಬಗೆಗೂ ಅವರ ಪ್ರತಿಕ್ರಿಯೆ ಅದೇ ರೀತಿ ಇರಬಹುದು ಎಂದು ಊಹಿಸಬಹುದು. ಹಾಗೇ ಆಗಿದ್ದೇ ಆದಲ್ಲಿ ಖಂಡಿತ ಇದೊಂದು ಅಭೂತ ಪೂರ್ವ ಬೆಳವಣಿಗೆ. ಆದರೆ ಇದು ಹಾಗೇ ಆಗುವುದಿಲ್ಲ ಎಂದು ನಂಬಲು ಬಲವಾದ ಕಾರಣವಿದೆ. ಯಾಕೆಂದರೆ ’ವಂದೇ ಮಾತರಂ’ನ್ನು ವಿರೋಧಿಸಲು ಮತ ಪಂಡಿತರು ನೀಡಿರುವ ಕಾರಣ ಅದು ಹಿಂದೂ ದೇವತೆಗಳನ್ನು ಹೊಗಳುತ್ತದೆ ಎಂಬುದು. ಇಸ್ಲಾಂ ’ಅಲ್ಲಾಹು’ನ ಹೊರತಾಗಿ ಯಾರನ್ನೂ ಮತ್ತೂ ಯಾವುದನ್ನು ದೇವರೆಂದು ಪರಿಗಣಿಸುವುದಿಲ್ಲ. ಈಗ ನೀ ’ವಂದೇ ಮಾತರಂ’ಹಾಡಿದರೆ ಅದು ನೀನು ’ಅಲ್ಲಾಹು’ವಿಗೆ ಮಾಡುವ ಅಪಚಾರ ಎಂದು ಬಿಂಬಿಸಿದರೆ ಸಾಕು. ಮುಸ್ಲಿಂಮರು ತಪ್ಪಿಯೂ ಅ ಪದವನ್ನು ಉಸುರುವುದಿಲ್ಲ.
ಫತ್ವಾ ಹೊರಡಿಸುವವರು ’ಪರಿಶುದ್ದ’ರು ಎಂದು ನೀವು ತಿಳಿದುಕೊಳ್ಳಬೇಡಿ. ೨೦೦೮ರಲ್ಲಿ ಟಿವಿ ಚಾನೆಲ್‌ವೊಂದು ನಡೆಸಿದ ’ಕುಟುಕು ಕಾರ್ಯಾಚರಣೆ’ಯಲ್ಲಿ ಹಣ ಪಡೆದು ಫತ್ವಾ ಹೋರಾಡಿಸುತ್ತಿದ್ದ ಅನೇಕ ಮುಸ್ಲಿಂ ನಾಯಕರು ’ಬೆಳಕಿಗೆ’ ಬಂದಿದ್ದರು.
ದೇಶದ ೯೦ ಕೋಟಿ ಜನರಿಂದ ಈ ೧೬ ಕೋಟಿ ಮುಸ್ಲಿಂಮರನ್ನು ದೂರವಿಡುವ ಕೆಲಸವನ್ನು ಕಾಲಕಾಕ್ಕೆ ಈ ಮುಸ್ಲಿಂ ನಾಯಕರುಗಳು ಯಾಕೆ ಮಾಡುತ್ತಿದ್ದಾರೆ? ಈ ಹಿಂದೆಯೂ ಇಂತಹ ನಾಯಕರುಗಳ ಮಾತು ಕೇಳಿದ ಮುಸ್ಲಿಂಮರು ಇಂದು ಪಾಕಿಸ್ತಾನ ಮತ್ತು ಬಾಂಗ್ಲದೇಶಗಳಲ್ಲಿ ಪಡಬಾರದ ಯಾತನೆ ಪಡುತ್ತಿದ್ದಾರೆ. ಅದ್ದರಿಂದ ಇಂತಹ ದೊಣ್ಣೆ ನಾಯಕರುಗಳ ವಿಷ ಮಾತುಗಳಿಗೆ ದೇಶದ ಮುಸ್ಲಿಂಮರು ಮಣೆ ಹಾಕಬಾರದು.
ಇಲ್ಲಿನ ಬಹುಸಂಖ್ಯಾತರ ಜೊತೆ ಕೂಡಿ ಬಾಳುವ ದಿಸೆಯಲ್ಲಿ, ಮತ್ತವರ ನಂಬಿಕೆಯನ್ನು ಗೌರವಿಸಿ ಸಾಮರಸ್ಯದ ಬದುಕು ಕಟ್ಟುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ದೇಶ ಖಂಡಿತವಾಗಿಯೂ ಅವರನ್ನು ಹೃದಯದಲ್ಲಿಟ್ಟು ಗೌರವಿಸುತ್ತದೆ. ಉದಾಹರಣೆಗೆ ಪ್ರಸಕ್ತ ಭಾರತದ ಸರ್ವಶ್ರೇಷ್ಟ ನಾಯಕ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಚಲನಚಿತ್ರ ತಾರೆಯರು, ಕ್ರೀಡಾ ಕಲಿಗಳನ್ನು, ನಾನ ಕ್ಷೇತ್ರಗಳಲ್ಲಿನ ಸಾಧಕರನ್ನು ನಾವು ಜಾತಿ ಮತದ ಹಂಗಿಲ್ಲದೆ ಗೌರವಿಸಿದ್ದೇವೆ, ಪ್ರೀತಿಸಿದ್ದೇವೆ ಮುಂದೆಯೂ ನಾವು ಈ ಕಾರ್ಯ ಮಾಡಲಿದ್ದೇವೆ.
ಇಲ್ಲ, ನಿಮಗೆ ಇಂತಹ ಫತ್ವಾಗಳೇ ಮುಖ್ಯವಾಗುವುದಾದರೇ ಅಂದು ಫತ್ವಾ ಹೊರಡಿಸುವಾಗ ವೇದಿಕೆಯಲ್ಲಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಇದ್ದರು ಮತ್ತು ಅವರು ಸುಮ್ಮನಿದ್ದರು ಮತ್ತು ಈಗಲೂ ಸುಮ್ಮನಿದ್ದಾರೆ ಬಹುಶಃ ಮುಂದೆಂಯೂ ಸುಮ್ಮನಿರುತ್ತಾರೆ. ಅವರಿಗೆ ಮತ್ತು ಫತ್ವಾ ಹೊರಡಿಸಿದವರಿಗೆ ’ಮತ’ದಾಸೆ. ಆದರೆ ದೇಶದ ೯೦ ಕೋಟಿ ಜನರು ಹಾಗಿಲ್ಲ, ಹಾಗಿರುವುದು ಇಲ್ಲ! ಯಾಕೆಂದರೆ ಅವರಿಗಿರುವುದು ದೇಶದ ಸಮಗ್ರತೆಯನ್ನು ಉಳಿಸಿಕೊಳ್ಳುತ್ತೇವೆ ಎಂಬ ಮಹಾದಾಸೆ!

Friday, October 23, 2009

ಮೈಸೂರಿನಲ್ಲೊಂದು ಪತ್ರಿಕೋದ್ಯಮ ಕಾರ್ಯಾಗಾರ... ಈಗ ನನ್ನದು ವರದಿ ನೀಡೋ ಸರದಿ!

[ಈ ಬರಹ ಸ್ವಲ್ಪ ಅಲ್ಲ ತುಂಬಾನೇ ಉದ್ದವಿದೆ... ಇದನ್ನು ಟ್ರೀಮ್ ಮಾಡಿ ಬ್ಲಾಗ್ ಗೆ ಹಾಕೋಣ ಎಂದು ಒಮ್ಮೆ ಯೋಚಿಸಿದ್ದೆ. ಆದರೆ ಹಾಗೆ ಮಾಡಿಲ್ಲ... ಇಲ್ಲಿನ ಕೆಲ ವಿಷಯಗಳು ಕೆಲವರಿಗೆ ಅಪ್ರಸ್ತುತ ಎಂದು ಅನಿಸಬಹುದು ಅದರೆ ಕೆಲವರಿಗೆ ಅದು ಬೇಕಾಗಿರುವುದರಿಂದ ಅದನ್ನು 'ಕಟ್' ಮಾಡಿಲ್ಲ. ಅದ್ದರಿಂದ ಸಹೃದಯಿ ಓದುಗರು ಸಹಕರಿಬೇಕು.]
ಇದನ್ನು ನಾನು ವಿಶ್ಲೇಷಣ ವರದಿ ಅಂತ ಅಂದ್ಕೊಡಿದ್ದೇನೆ...!
ಅಂದು ಗುರುವಾರ, ದಿನಾಂಕ 8/10/2009. ಸಮಯ ಮಧ್ಯಾಹ್ನ 2 ಗಂಟೆ. ನಮ್ಮ ಕಾಲೇಜಿನ (ಎಸ್ ಡಿ ಎಂ ಕಾಲೇಜು) ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ 16 ವಿದ್ಯಾರ್ಥಿಗಳು ಧರ್ಮಸ್ಥಳದಿಂದ ಮೈಸೂರಿಗೆ ಹೋಗುತ್ತಿದ್ದ ಬಸ್ ಏರಿ ಆಗಿತ್ತು. ನಮ್ಮೊಂದಿಗೆ ಚಂದ್ರಲೇಖ ಮ್ಯಾಮ್ ಕೂಡ ಇದ್ದರು. ಆ ಬಸ್ ನಲ್ಲಿ ನಾವು 17 ಮಂದಿಯ ಹೊರತಾಗಿ ಒಬ್ಬನೇ ಪಯಣಿಗನಿದ್ದದ್ದು! ಅದ್ದರಿಂದ ಆ ಬಸ್ಸು ನಮ್ಮದೇ ಆಗಿತ್ತು ಎನ್ನಲೂ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಾಗಿಲ್ಲ!
ಬಸ್ಸಿನ ಕುಲುಕಾಟಕ್ಕೆ ನಮ್ಮ ಹುಡುಗಾಟದ ಸಾಥ್ ಸೇರಿ ಪಯಣವಂತೂ ಬೊಂಬಾಟ್. ಬಗೆ ಬಗೆ ತಿಂಡಿತಿನಿಸುಗಳು ಗೆಳೆಯ - ಗೆಳತಿಯರ ಜೋಳಿಗೆಯಲ್ಲಿತ್ತು. ಅದನ್ನು ನಾವೆಲ್ಲ ಹಂಚಿಕೊಂಡು ತಿನ್ನುತ್ತಾ 'ಹಂಚಿ ತಿನ್ನುವುದರಲ್ಲಿ ಸ್ವರ್ಗಸುಖವಿದೆ' ಎಂಬ ಹಿರಿಯರ ಮಾತನ್ನು ಪರಾಂಬರಿಸಿ ನೋಡಿದೇವು. ಚೇತನ್ ಅಲಿಯಾಸ್ ಚೇತು ತಿಂಡಿ ವಿತರಣೆಯ ಸಂಪೂರ್ಣ ಹಕ್ಕನ್ನು ಪಡೆದುಕೊಂಡಿದ್ದ ಮತ್ತು ಇದರಿಂದ ಅವನು ಸಾಕಷ್ಟು ಲಾಭಮಾಡಿಕೊಂಡಿದ್ದಾನೆ ಎಂದು ಜನರಾಡಿಕೊಳ್ಳುತ್ತಿದ್ದಾರೆ! ನಂದಂತೂ 'ಓಸಿ ಜೀವನವೇ ಲೇಸು ಸರ್ವಜ್ಙ' ಎಂಬ ಜನರ ಮಾತನ್ನು ಸತ್ಯಮಾಡಲೇಬೇಕು ಎಂಬ ಪಣ.
ನಾವು ರಾತ್ರಿ 9 ಗಂಟೆಯ ಸುಮಾರಿಗೆ ಮೈಸೂರು ತಲುಪಿದೆವು. ಅಲ್ಲಿ ಊಟ ಮುಗಿಸ್ಕೊಂಡು ಎರಡು ಗುಂಪಾಗಿ ಭಾಗವಾದೇವು. ಒಂದು ಗುಂಪು ಕೇಂದ್ರ ಸರಕಾರದ ಒಡೆತನದ ಯೂತ್ ಹಾಸ್ಟೆಲ್ ಗೆ ಹೋದರೆ ಮತ್ತೊಂದು ಗುಂಪು ಕರ್ನಾಟಕ ಒಪನ್ ಯುನಿವರ್ಸಿಟಿಯ ಹಾಸ್ಟೇಲ್ ಸೇರಿಕೊಂಡಿತು.
ನಾವು ಸುಖಾಸುಮ್ಮನೆ ಮೈಸೂರಿಗೆ ಹೋದದ್ದಲ್ಲ. ಅಲ್ಲಿನ ಜಯಲಕ್ಷ್ಮಿಪುರಂನಲ್ಲಿರುವ ಮಹಾಜನ ಕಾಲೇಜಿನಲ್ಲಿ ಅಕ್ಟೋಬರ್ 9 ಮತ್ತು 10 ರಂದು ಆಯೋಸಲಾಗಿದ್ದ 'ಪ್ರಸ್ತುತ ಪತ್ರಿಕೋದ್ಯಮ: ಪತ್ರಕರ್ತರ ಮುಂದಿರುವ ಸೃಜನಶೀಲ ಸವಾಲುಗಳು' ಎಂಬ ರಾಜ್ಯಮಟ್ಟದ ಕಾರ್ಯಗಾರದಲ್ಲಿ ಭಾಗವಹಿಸಲು.
ಕಾರ್ಯಗಾರ: ಮಾಹಿತಿಯ ಆಗರ
ನಾನು ಅಲ್ಲಿ ಕಳೆದ ಎಲ್ಲಾ ಕ್ಷಣಗಳನ್ನು ಇಲ್ಲಿ ಬರೆಯುವುದಿಲ್ಲ. ಬರೆದರೆ, ಅದು ನನ್ನ ಡೈರಿ ಅಥವಾ ವರದಿಯಾಗಿ ಬಿಡಬಹುದು. ಅದ್ದರಿಂದ ಹೇಳಲೇ ಬೇಕು ಎಂದೆನಿಸಿ, ಹೇಳದೆ ಇರಲಾಗದ್ದನ್ನು ಮತ್ತು ಈ ಬ್ಲಾಗ್ ನ ಓದುಗರಿಗೆ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಒಂಚೂರಾದರೂ ಪ್ರಯೋಜನವಾಗಬಹುದು ಎಂದೆನಿಸಿದನ್ನು ಮಾತ್ರ ಇಲ್ಲಿ ಬರೆಯುತ್ತೇನೆ.
ಕಾರ್ಯಗಾರವನ್ನು 'ವಾಯ್ಸ್ ಅಫ್ ಮೈಸೂರು' ಪತ್ರಿಕೆಯ ಸಂಪಾದಕ, ರಾಜಕಾರಣಿ, ವಾಸು ಉದ್ಘಾಟಿಸಿದರು.
ಆದರೆ ಕಾರ್ಯಕ್ರಮದಲ್ಲಿ ಚಿಂತನೆಯ ಕಿಡಿ ಹೊತ್ತಿಸಿದ್ದು 'ಮೈಸೂರು ಮಿತ್ರ’ ಮತ್ತು 'ಸ್ಟಾರ್ ಅಫ್ ಮೈಸೂರು' ಪತ್ರಿಕೆಯ ಸಂಪಾದಕ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ. ವಿ. ಗಣಪತಿ. ಅವರು ಅಕ್ಷರಶ: ಸಿಡಿಗುಂಡೇ ಆಗಿದ್ದರು. ಅದರಲ್ಲೂ ಕೆಲ ಪತ್ರಿಕೆಗಳ ’ತಲೆಬರಹ’ ಶೈಲಿಯನ್ನು ಉದಾಹರಣೆ ಸಹಿತ ಖಂಡಿಸಿದ ಅವರು ಪತ್ರಿಕೆಗಳ ಮನೋಭಾವವನ್ನು ಪ್ರಶ್ನಿಸುತ್ತಾ ಸಾಗಿದರು. ಸ್ವಾತಂತ್ರ್ಯ ಪೂರ್ವದಲ್ಲೂ ಜನಪ್ರಿಯ ಅಂಗ್ಲ ಪತ್ರಿಕೆಗಳ ಬ್ರಿಟೀಷ್ ಸೇವೆ ಮತ್ತು ಅದರ ಇಬ್ಬಂದಿತನವನ್ನು ಬೆತ್ತಲೆ ಮಾಡಿದ ಅವರು ಭಾಷಾ ಪತ್ರಿಕೆಗಳು ಮಾತ್ರ ಸ್ವಾತಂತ್ರ್ಯ ಹೋರಾಟದ ಕೈಂಕರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವು ಎಂದರು. 'ಕಾರ್ಯಕಾರಿ ಸಂಪಾದಕ' ಎಂಬ ಹೊಸ ಬೆಳವಣಿಗೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು ಪರ್ತಕರ್ತರು ಸ್ವತಂತ್ರ ಮತ್ತು ವೃತ್ತಿಪರರಾಗಿರಬೇಕು ಎಂದರು.
ಅವರು ಕನ್ನಡದ ಜನಪ್ರಿಯ ಪತ್ರಿಕೆಯೊಂದನ್ನು ಗುರಿಯಾಗಿಸಿಕೊಂಡೇ ಮಾತನಾಡಿದರು ಎಂದು ಯಾರಿಗಾದರೂ ಅನಿಸದೇ ಹೋಗಿದ್ದರೆ ಅವರ ಮಾತಿಗೆಯೇ ಅವಮಾನ ಮಾಡಿದಂತೆ.
ಕೆ.ವಿ. ಗಣಪತಿ ಹೇಳಿದ ಅನೇಕ ಸಂಗತಿಗಳು ಸತ್ಯವಾದದ್ದು. ಆದರೆ ಅವರು ಎಲ್ಲೋ ಒಂದು ಕಡೆ ವಸ್ತುನಿಷ್ಟತೆಯನ್ನು ಮರೆತು 'ಇಸಂ'ನಿಷ್ಟತೆಗೆ ಬಲಿಯಾದರು ಎಂದು ಅನಿಸದೇ ಇರಲಿಲ್ಲ. ಅದರಲ್ಲು ಅವರು 'ತಲೆ ಬರಹ'ಕ್ಕೆ ಉದಾಹರಣೆ ಕೊಡುತ್ತ ಒಂದು ಅಥವಾ ಎರಡು ಪತ್ರಿಕೆಯ 'ತಲೆಬರಹ'ಗಳ ಉದಾಹರಣೆ ಮಾತ್ರ ಕೊಟ್ಟರು. ಅದರರ್ಥ, ಕನ್ನಡದಲ್ಲಿ ನೂರಾರು ಪತ್ರಿಕೆಗಳಿದ್ದರು ಎರಡು ಪತ್ರಿಕೆಗಳು ಮಾತ್ರ ಕೆಟ್ಟ 'ತಲೆಬರಹ' ಕೊಡುತ್ತವೆ ಎಂದಾ? ಹಾಗಾದರೆ ಇದು ಸಂತಸ ಪಡಬೇಕಾದ ಸಂಗತಿ ಅಲ್ಲವೇ?

ಮುಂದಿನದ್ದು ಅವಧಿಗಳ ಯುಗ...

ಬೀಟ್ ನಲ್ಲಿ ಬೇರು ಬಿಡಿ ಆದರೆ ತಳವೂರಬೇಡಿ: ಭಟ್

ಮೊದಲ ಅವಧಿ 'ಸಂಪಾದಕೀಯ ಪುಟ'ದ ಬಗೆ ಇತ್ತು. ಸಂಪನ್ಮೂಲ ವ್ಯಕ್ತಿಯಾಗಿ ’ವಿಜಯ ಕರ್ನಾಟಕ’ದ ಕಾರ್ಯನಿವಾರ್ಹಕ ಸಂಪಾದಕ, ವಿಶ್ವೇಶ್ವರ ಭಟ್ ಆಗಮಿಸಿದರು. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಅವರು 'ಸಂಪಾದಕೀಯ ಪುಟ'ದ ಬಗೆ ಒಂದೇ ಒಂದು ಮಾತು ಆಡಲಿಲ್ಲ! ಹಾಗಂತ ಗೊತ್ತುಗುರಿಯಿಲ್ಲದ ಮಾತು ಅವರದಾಗಿರಲಿಲ್ಲ. ಅವರ ಮಾತು ಗಿರಕಿ ಹೊಡೆದದ್ದು ಒಬ್ಬ ಪತ್ರಕರ್ತನಿಗೆ ಅದರಲ್ಲೂ ಭಾವಿ ಪತ್ರಕರ್ತನಿಗೆ ಇ- ಮೈಲ್, ಟ್ವೀಟರ್, ಬ್ಲಾಗ್ ಮುಂತಾದವು ಎಷ್ಟು ಅವಶ್ಯಕ ಎಂಬುದರ ಬಗೆ.
ಆಧುನಿಕ ಸಂಪರ್ಕ ಸಾಧನಗಳ ಬಳಕೆಯ ಬಗ್ಗೆ ನಿಮಗೆ ಗೊತ್ತಿಲ್ಲವೆಂದರೆ ನೀವು ಎಷ್ಟು ಚೆನ್ನಾಗಿ ಬರೆಯುವವರಾದರೂ ನಾನಂತು ನಿಮಗೆ ಖಂಡಿತವಾಗಿಯೂ ಕೆಲಸ ಕೊಡುವುದಿಲ್ಲ ಎಂದು ಭಟ್ರು ಇದೇ ಸಂದರ್ಭದಲ್ಲಿ ಒಂಚೂರು ಖಾರವಾಗಿ ಹೇಳಿದರು.. ಒಬ್ಬ ಪತ್ರಕರ್ತನಿಗೆ ಅಧುನಿಕ ಸಂಪರ್ಕ ಸಾಧನಗಳ ಬಗೆಗಿನ ಆರಿವು ಇರಬೇಕು, ನಿಜ. ಆದರೆ ಆದೇ ಅವನ ಬರವಣಿಗೆಗೆ ಬದಲಿ ಎಂದೆನಿಸಿಕೊಳ್ಳುವುದು ಸರಿಯಾ? ಉದಾಹರಣೆಗೆ ಇ - ಮೈಲ್ ಬಳಕೆಯನ್ನು ಒಂದು ಗಂಟೆಯೊಳಗೆ ಯಾರು ಬೇಕಾದರೂ ಕಲಿತುಕೊಳ್ಳಬಹುದು, ಅದೇ ಬರವಣಿಗೆಯನ್ನು ಹಾಗೆ ಬಗ್ಗಿಸಿಕೊಳ್ಳಲು ಸಾಧ್ಯನಾ?
ಇನ್ನೂ ಎರಡು ವರ್ಷಗಳಲ್ಲೇ ಭಾಷಣ ವರದಿಗಾರಿಕೆ ಎಂಬುದೇ ಇರುವುದಿಲ್ಲ ಎಂಬ ಅಭಿಪ್ರಾಯ ಅವರದ್ದು. ಅದ್ದರಿಂದ ಭಾಷಣಗಳ ವರದಿ ಮಾಡಿ ನಾನು ಪತ್ರಕರ್ತನಾಗುತ್ತೇನೆ ಅಥವಾ ಆಗಿದ್ದೇನೆ ಎಂದು ಭಾವಿಸುವವರ ಅಥವಾ ಭಾವಿಸುತ್ತಿರುವವರ ತಲೆ ಮೇಲೆ ಅಪಾಯದ ಬಾವುಟ ನೆಟ್ಟಿದ್ದಾರೆ ಭಟ್ರು. ಇದು ನಮಗೆಲ್ಲರಿಗೂ ಎಚ್ಚರಿಕೆಯ ಗಂಟೆಯೂ ಹೌದು ಪತ್ರಿಕಾವರದಿಗಾರಿಕೆ ಹೊಸ ಸಾದ್ಯತೆಯೊಂದನ್ನು ಕಂಡುಕೊಳ್ಳಲಿದೆ ಎಂಬುದರ ಸೂಚನೆಯೂ ಹೌದು.
ಭಟ್ರು, ಮತ್ತೊಂದು ವಾಗ್ಬಾಣ ಬಿಟ್ಟದ್ದು ಹುಡುಗಿಯರ ಮೇಲೆ. ಅವರು ತಮ್ಮ ದೈನಂದಿನ ಅಂಕಣ, 'ವಕ್ರತುಂಡೋಕ್ತಿ'ಯಲ್ಲಿ ಹುಡುಗಿಯರ ಮೇಲೆ ಸಾಕಷ್ಟು ಬಾಣ ಪ್ರಯೋಗಿಸಿದ್ದರೂ ಕೂಡ ಇಲ್ಲಿ ಅವರು ಎತ್ತಿಕೊಂಡಿದ್ದ ವಿಷಯ ತುಸು ಗಂಭೀರ. ನಾನು ಎರಡು ಮೂರು ವರ್ಷ ಪರ್ತಕರ್ತೆಯಾಗಿರುತ್ತೇನೆ ಅಥವಾ ಮದುವೆಯಾಗುವ ತನಕ ಮಾತ್ರ ಈ ವೃತ್ತಿ ನನ್ನದು ಎಂದು ಭಾವಿಸಿಕೊಂಡು ದಯಮಾಡಿ ಈ ಕ್ಷೇತ್ರಕ್ಕೆ ಬರಬೇಡಿ ಎಂಬುದು ಅವರ ವಿನಂತಿ. ವಿಷಯ ಸರಳವಾಗಿದ್ದರು ಕೂಡ ಇದರೊಳಗೊಂದು ಗಂಭೀರ ಪ್ರಶ್ನೆ ಮತ್ತು ಕಟು ಸತ್ಯವಿದೆ.
ನಮ್ಮನ್ನು ನಾವು 'ರಿ - ಇನ್ವೇಂಟ್' ಮಾಡಿಕೊಳ್ಳುತ್ತಿರಬೇಕು ಇಲ್ಲದಿದ್ದಲ್ಲಿ ಅಪ್ರಸ್ತುತರಾಗಿ ಬಿಡುತ್ತೇವೆ, ನಮ್ಮ ಯೋಚನೆಗಳು ಉಳಿದವರಿಗಿಂತ ಭಿನ್ನವಾಗಿರಲಿ ನಾವು ಎಲ್ಲಿದ್ದೇವೆ ಎಂಬುದು ಮುಖ್ಯವಲ್ಲ ಏನು ಮಾಡುತ್ತಿದ್ದೇವೆ ಎಂಬುದು ಮುಖ್ಯ ಹೀಗೆ ಅವರ ಮಾತು ಸಾಗಿತು.
'ನೀವು ನೀಡುವ ವರದಿ ವಿಭಿನ್ನವಾಗಿರಲಿ' ಎಂಬ ಅವರ ಮಾತು ಕೂಡ ಚಚರ್ಗೆ ಕಾರಣವಾಗುವಂತದ್ದು ಮತ್ತು ಕಾರಣವಾಗಿದ್ದು. ಯಾಕೆಂದರೆ 'ವರದಿ' ಅಂದಾಗ ನಮ್ಮ ಕಣ್ಣ ಮುಂದೆ ಕೆಲವು ಸಿದ್ಧ ಮಾದರಿಗಳು ಬರುತ್ತವೆ. ಆದರೆ ಅದರೊಂದಿಗೆ ಕೆಲವು ಸುದ್ದಿ ಮೌಲ್ಯಗಳು ಕೂಡ ಸೇರಿಕೊಂಡಿರುತ್ತದೆ ಅದರಲ್ಲೂ ಸರಳ ಭಾಷೆ, ವಸ್ತುನಿಷ್ಟತೆ ಮತ್ತು ನಿಖರತೆ ಮುಖ್ಯವಾದದು ಅನ್ನುವುದಕ್ಕಿಂತ ಇರಲೇ ಬೇಕಾದದ್ದು ಎಂದರೆ ಸೂಕ್ತ. ಇನ್ನೂ ಯಾವ ಪತ್ರಿಕೆ, ಎಷ್ಟರ ಮಟ್ಟಿಗೆ ಈ ಮೌಲ್ಯಗಳನ್ನು ಪಾಲಿಸುತ್ತಿದೆ ಎಂಬ ಪ್ರಶ್ನೆ ನಮ್ಮ ಮುಂದೆ ಬರಬಹುದು. ಅದರೆ ಅದನ್ನು ಬದಿಗಿಟ್ಟು ಯೋಚಿಸಿದರೆ 'ವರದಿಗಾರಿಕೆ'ಗೆ ವಿಭಿನ್ನತೆ ಕೊಡುವ ಪ್ರಯತ್ನ ಪತ್ರಿಕೋದ್ಯಮದ ಬುಡವನ್ನೇ ಅಲುಗಾಡಿಸುವಂತದ್ದು ಎಂದು ನನಗನಿಸುತ್ತದೆ. ಯಾಕೆಂದರೆ ಈ ಸಂದರ್ಭದಲ್ಲಿ ವರದಿಗಾರ ತನ್ನ 'ವರದಿ'ಯ ಮೇಲೆ ಒಂದು ರೀತಿಯ ಸ್ವಾಯತ್ತತೆ ಪಡೆದುಕೊಳ್ಳುತ್ತಾನೆ ಮತ್ತು ತನ್ನ ಮೂಗಿನ ನೇರಕ್ಕೆ ಎಲ್ಲವನ್ನೂ ಕಾಣಲು ಶುರುಮಾಡುತ್ತಾನೆ ಇದರಿಂದ ಸುದ್ದಿಯ ವಿಶ್ವಾಸಾರ್ಹತೆ ಕುಂದುತ್ತದೆ ಅದರೊಂದಿಗೆ ಪತ್ರಿಕೆಯ 'ಇಸಂ' ಕೂಡ ಸೇರಿ ಸುದ್ದಿಯ ಶುದ್ದತೆ ಹಾಳಾಗಿ ಸುದ್ದಿ ಎಂಜಲೆಲೆ ಆಗಬಹುದು. ಆದರೆ ಪ್ರಬುದ್ಧ ವರದಿಗಾರ ಮತ್ತು ಉಪಸಂಪಾದಕರಿದ್ದಲ್ಲಿ ಇದು ಒಳಿತನ್ನುಂಟು ಮಾಡಬಹುದು. ಆದರೆ ಪತ್ರಕರ್ತ ಮತ್ತು ಪ್ರಬುದ್ದತೆ ಎಂಬುದು ಪರಸ್ಸರ ವಿರುದ್ಧ ಪದಗಳಾಗುತ್ತಿರುವ ಈ ಕಾಲಘಟ್ಟದಲ್ಲಿ ಇಂತಹ ಯೋಚನೆಯೇ ತಿರುಕನ ಕನಸು ಎಂದು ನನಗನಿಸುತ್ತದೆ.
ಭಟ್ರು 'ಪವರ್ ಪಾಯಿಂಟ್ ಪ್ರಸೆಂಟೇಶನ್' ಮೂಲಕ ತಮ್ಮ ಸಲಹೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ 'ಸಾಸಿವೆ ಬಿದ್ದರು ಕೇಳಿಸುವಷ್ಟು ಮೌನ'ವಿತ್ತು. ಇದರರ್ಥ ಎಲ್ಲರೂ ನಿದ್ದೆ ಮಾಡುತ್ತಿದ್ದರು ಎಂದಲ್ಲ! ಅಷ್ಟೂ ತದೇಕಚಿತ್ತರಾಗಿ ಭಟ್ರ ಮಾತು ಕೇಳಿಸುತ್ತಿದ್ದರು.
ಅವರ ಸರಳತೆಯ ಅರಿವು ನನಗಾದದ್ದು, ಅವರು ಊಟಕ್ಕೆ ಕುಳಿತಾಗ. ಒಬ್ಬ ಅರೆ ಹುಚ್ಚ ತಾನು ಕೂಡ ಅವರ ಜತೆ ಊಟಕ್ಕೆ ಕೂರುತ್ತೇನೆ ಎಂದು ಹಠ ಹಿಡಿದಿದ್ದ. ಸಂಘಟಕರು ಅವನನ್ನು ಒದ್ದು ಹೊರ ಹಾಕಲು ಸಿದ್ಧರಾಗಿದ್ದರು ಆದರೆ ಭಟ್ರು ಅವನನ್ನು ತನ್ನ ಜೊತೆ ಕುಳ್ಳಿರಿಸಿ ಸಹಭೋಜನ ಮಾಡಿದರು.
ಮಧ್ಯಾಹ್ನದ ಸುಗ್ರಾಸ ಭೋಜನದ ಬಳಿಕದ ಅವಧಿಯನ್ನು ಪ್ರಖ್ಯಾತ ಸುದ್ದಿ ಚಿತ್ರ ಬರಹಗಾರ್ತಿ ಸುಶೀಲಾ ನಾಯರ್ ತೆಗೆದುಕೊಂಡರು. ಅವರು ವಿಶೇಷ ವಿಷಯಗಳನ್ನೇನೂ ಹೇಳಲಿಲ್ಲ. ಬಹುಶ: ಒಂಚೂರಾದರೂ ಸಪ್ಪೆ ಎನಿಸಿಕೊಂಡ ಅವಧಿ ಇವರದ್ದೇ ಇರಬೇಕು. ಪ್ರತಿ ಅವಧಿಯಲ್ಲಿ ಮುಗಿ ಬಿದ್ದು ಪ್ರಶ್ನೆ ಕೇಳುತ್ತಿದ್ದವರು ಆಗ ನಿದ್ದೆಗೆ ಶರಣಾಗಿದ್ದರು!
ಅನಂತರದ ಅವಧಿ ಬಿಸಿಬಿಸಿ ಸುದ್ದಿಗೆ ಹೆಸರಾದ ಕನ್ನಡದ ಮೊದಲ 24*7 ಸುದ್ದಿ ಚಾನೆಲ್ ಟಿವಿ 9ನ ಕಾರ್ಯಕ್ರಮ ನಿರ್ಮಾಪಕ ರಾಘವೇಂದ್ರರಿಂದ. ಅವರು ಮಾತನಾಡಿದ್ದು ಕ್ರೈಮ್ ರಿಪೋರ್ಟಿಂಗ್ ಬಗೆಗೆ.
ಅವರು ಆರಂಭ ಮಾಡಿದ್ದೆ 'ವರದಿ' ಯೆಂಬುದು ನಿರಾಭರಣ ಸುಂದರಿ ಎಂಬುದರ ಮೂಲಕ. ಅಂದರೆ ಭಟ್ರು ಹೇಳಿದ ಮಾತಿಗೆ ಸರಿ ಉಲ್ಟಾ! ಆದರೆ ಅವರ ಚಾನೆಲ್ ಇದನ್ನು ಎಷ್ಟು ಪಾಲಿಸುತ್ತದೆ ಎಂದು ಕೇಳಿದರೆ ಖಂಡಿತವಾಗಿಯೂ ಅವರಲ್ಲಿ ಉತ್ತರವಿರಲಿಕ್ಕಿಲ್ಲ. ಬಹುಶ: ಭಟ್ರ ಮಾತನ್ನು ಪಾಲಿಸಿದ್ದೆ ಆದರೆ ಮಾಧ್ಯಮಗಳು ಯಾವ ರೀತಿ ಆಗಬಹುದು ಎಂಬುದಕ್ಕೇ ಈ ಚಾನೆಲ್ ನಷ್ಟು ಒಳ್ಳೆಯ ನಿದರ್ಶನ ಬೇರೆ ಎಲ್ಲೂ ಸಿಗಲಿಕ್ಕಿಲ್ಲ!
'ಒಬ್ಬ ಕ್ರೈಂ ರಿಪೋರ್ಟರ್ ಮನುಷ್ಯನನ್ನು ಸರಿಯಾಗಿ ಅರ್ಥ ಮಾಡಿಕೊಂಡಿರಬೇಕು, ಸುದ್ದಿಯ ಮೂಲ ಮತ್ತು ಅದರಾಚೆಯೂ ಹುಡುಕುವ ಛಾತಿ ಇರಬೇಕು. ಆದರೆ ಯಾವ ಕಾರಣಕ್ಕೂ ಇನ್ನೊಬ್ಬರ ತೆಜೋವಧೆ ಮಾಡಬಾರದು' ಎಂಬ 'ವಾರಾಂಟ್' ಅವರಿಂದ. ಸಹಜವಾಗಿಯೇ ಅವರಿಗೆ ಪ್ರಶ್ನೆಗಳ ಸುರಿಮಳೆ, ಅಷ್ಟೇ ಚಾಣಕ್ಷತನದ ಉತ್ತರ ಅವರಿಂದ.
ನಂತರ ಮನರಂಜನಾ ಕಾರ್ಯಕ್ರಮ.

ಜೋಗಿ ಜೋಳಿಗೆಯಿಂದ...

ಎರಡನೇ ದಿನ ಅರ್ಥಾತ್ ಕೊನೆಯ ದಿನದ ಮೊದಲ ಅವಧಿಯನ್ನು ಕನ್ನಡದ ಖ್ಯಾತ ಬರಹಗಾರ, 'ಜೋಗಿ'ಯೆಂದೆ ಪ್ರಸಿದ್ದರಾಗಿರುವ ಗಿರೀಶ್ ರಾವ್ ತೆಗೆದುಕೊಂಡರು.
ಪತ್ರಕರ್ತರು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶುರುವಿಟ್ಟುಕೊಂಡ ಅವರು ಅನಂತರ ಅಂಕಣ ಅಂದರೆ ಹೇಗಿರಬೇಕು ಎಂಬುದರ ಬಗೆಗೆಯೇ ತಮ್ಮ ಗಮನ ಹರಿಸಿದರು.
ಬರೆಯುತ್ತ ಬರೆಯುತ್ತ ಬರಹ ಮತ್ತು ಬರಹಗಾರ ಪಕ್ವವಾಗುತ್ತಾನೆ ಎಂಬುದು ಅವರ ಅನಿಸಿಕೆ.
ಅವರು ಮಾತನಾಡುತ್ತ 'ಸತ್ಯ’ ಬದಲಾಗುತ್ತದೆ ಎಂದು ಹೇಳಿದರು. ಅದು ಹೇಗೆ ಸಾಧ್ಯ ಎಂಬುದು ನನ್ನ ಪ್ರಶ್ನೆ. ಒಂದೋ ಬರಹಗಾರನ ಮನೋಭಾವ, ದೃಷ್ಟಿಕೋನ ಬದಲಾಗಬಹುದು ಅಥವಾ ಅವನು ವಿಷಯವನ್ನು ಗ್ರಹಿಸಿಕೊಂಡ ರೀತಿ ಅಥವಾ ಗ್ರಹಿಸುವ ರೀತಿ ಬದಲಾಗಬಹುದೇ ಹೊರತು 'ಸತ್ಯ' ಹೇಗೆ ಬದಲಾಗುತ್ತದೆ? ಹಾಗೆ ಬದಲಾಗುವುದಿದ್ದರೇ ಅದನ್ನು 'ಸತ್ಯ' ಎಂದು ಕರೆಯುತ್ತೇವೇಯೇ?

ಭಡ್ತಿ ಹೇಳಿದ್ದು...

ಅನಂತರದ ಅವಧಿ 'ವಿಜಯ ಕರ್ನಾಟಕ' ಪತ್ರಿಕೆಯ ಹಿರಿಯ ಉಪಸಂಪಾದಕ ಮತ್ತು ತಮ್ಮ 'ನೀರು ನೆರಳು' ಅಂಕಣದಿಂದ ಪ್ರಖ್ಯಾತರಾಗಿರುವ ರಾಧಕೃಷ್ಣ ಭಡ್ತಿ ಅವರಿಂದ 'ಪುಟ ವಿನ್ಯಾಸ'ದ ಬಗ್ಗೆ. ಅವರು 'ಪವರ್ ಪಾಯಿಂಟ್'ನ ಬಳಕೆಯನ್ನು ಅತ್ಯುತ್ತಮವಾಗಿ ಮಾಡಿದರು. ಅವರು ಅಡುಗೆ ಭಟ್ಟನ ಕೆಲಸ ಮತ್ತು ಒಬ್ಬ ಉಪಸಂಪಾದಕನ ಕೆಲಸಕ್ಕಿರುವ ಸಾಮ್ಯತೆಯ ಮೂಲಕವೇ ಉದಾಹರಣೆಗಳನ್ನು ಪೋಣಿಸುತ್ತ ಸಾಗಿದರು. ಒಂದು ಪುಟದಲ್ಲಿರುವ ಬೇರೆ ಬೇರೆ ಭಾಗಗಳು ಮತ್ತು ಅಂಶಗಳ ಬಗ್ಗೆ ಅವರು ಮಾಹಿತಿ ನೀಡಿದರು.
ಬ್ಲಬ್ð, ಬಾಕ್ಸ್, ಇಂಟ್ರೋ, ಬುಲೆಟ್ ಪಾಯಿಂಟ್ ಗಳ ಬಳಕೆಯ ಅಗತ್ಯತೆಯ ಬಗ್ಗೆ ಒತ್ತಿ ಹೇಳಿದ ಅವರು ಇವುಗಳ ಬಳಕೆ ಇಲ್ಲದಿದ್ದಲ್ಲಿ ಸುದ್ದಿ ಮತ್ತು ಪುಟ ಹೇಗೆ ನೀರಸವಾಗುತ್ತದೆ ಎಂಬುದನ್ನು ತೋರಿಸಿಕೊಟ್ಟರು.
ಅವರು ಒಳ್ಳೆಯ ಪುಟ ವಿನ್ಯಾಸಕ್ಕೆ ವಿಜಯ ಕರ್ನಾಟಕವನ್ನೇ ಉದಾಹರಣೆಯಾಗಿಸಿಕೊಂಡು ಕೆಟ್ಟ ಪುಟ ವಿನ್ಯಾಸಕ್ಕೇ ಕನ್ನಡದ ಮತ್ತೊಂದು ಜನಪ್ರಿಯ ಪತ್ರಿಕೆಯನ್ನು ಹೆಚ್ಚಾಗಿ ಬಳಸಿದ್ದು ಮುಂದಿನ ಅವಧಿ ತೆಗೆದು ಕೊಳ್ಳಲಿದ್ದವರ ಕಣ್ಣು ಕೆಂಪಾಗುವಂತೆ ಮಾಡಿತ್ತು. ಅದರೊಂದಿಗೆ ದಕ್ಷಿಣ ಕನ್ನಡದ ಜನ 'ಉದಯವಾಣಿ'ಯನ್ನು ಅದರಲ್ಲಿರುವ ಸತ್ತವರ ಜಾಹೀರಾತು ನೋಡಲು ಮತ್ತು ಬೆಂಗಳೂರು ನಗರದ ಜನ 'ಪ್ರಜಾವಾಣಿ' ಪತ್ರಿಕೆಯನ್ನು ಬಿಡಿಎ ಜಾಹೀರಾತಿಗಾಗಿ ನೋಡುತ್ತಾರೆ ಎಂದದ್ದು ನನಗಂತೂ ಒಂಚೂರು ಕಸಿವಿಸಿಯುಂಟು ಮಾಡಿತು. ನಿಮಗೇ ಭಡ್ತಿ ಹೇಳಿದ ಈ ಮಾತು ಸತ್ಯ ಎಂದೆನಿಸುತ್ತಾ?

'ನಾಲ್ಕಾನೆ ಆಯಾಮ' ನೀಡಿದ ಪದ್ಮರಾಜ ದಂಡಾವತಿ

ಪ್ರಜಾವಾಣಿಯ ಸುದ್ದಿ ಸಂಪಾದಕ ಪದ್ಮರಾಜ ದಂಡಾವತಿ ಮಾತನಾಡಿದ್ದು ಪ್ರಸ್ತುತ ಪತ್ರಿಕೋದ್ಯಮದ ಬಗ್ಗೆ. ಆರಂಭದಲ್ಲೇ ತಮ್ಮ ಖಡಕ್ ಮಾತಿನಿಂದ ಉಸಿರು ಬಿಗೆ ಹಿಡಿದು ಅವರ ಮಾತಿಗೆ ಕಿವಿಯಾಗುವಂತೆ ಮಾಡಿದ ಅವರು ಅನಂತರ ತಮ್ಮ ಮಾತಿಗೆ ಕೇಳುಗರು ತನ್ಮಯರಾಗುವಂತೆ ಮಾಡಿದರು.
ಅವರು 'ಕನ್ನಡ ಪತ್ರಿಕೋದ್ಯಮದ ಪಿತಾಮಹ' ಡಿ. ವಿ. ಗುಂಡಪ್ಪರ 'ವೃತ್ತ ಪತ್ರಿಕೆ'ಯನ್ನು ಎಷ್ಟು ಮಂದಿ ಓದಿದ್ದೀರಿ? ಎಂದು ಕೇಳಿದಾಗ ಒಂದೇ ಒಂದು ಕೈ ಮೇಲೆಳಲಿಲ್ಲ.
"ಇಂದಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಲ್ಲಿ ಶ್ರಧ್ಧೆಯ ಕೊರತೆಯಿದೆ. ಕುವೆಂಪು, ಶಿವರಾಮ ಕಾರಂತ, ಮಾಸ್ತಿ, ಲಂಕೇಶ್ ಮುಂತಾದವರನ್ನು ಓದಿಲ್ಲ, ಓದುತ್ತಿಲ್ಲ. ಹೀಗಾದ್ದಲ್ಲಿ ಭಾಷೆಯ ಬೆಳವಣಿಗೆ ಸಾಧ್ಯವಿಲ್ಲ" ಎಂದು ತಿಳಿಸಿದರು.
ಡಿವಿಜಿಯವರ ’ಪತ್ರಿಕೆಗಳು ಕಲಿಸಬೇಕಾದದ್ದು ಸಿದ್ದಾಂತವನ್ನಲ್ಲ, ಸಿದ್ದಾಂತ ಮಾಡುವ ಪ್ರಕ್ರಿಯೆಯನ್ನು’ ಎಂಬ ಮಾತನ್ನು ಉದ್ದರಿಸಿ ಇಂದಿನ ಪತ್ರಿಕೋದ್ಯಮದ ವಿಶ್ಲೇಷಣೆಗೆ ಇಳಿದರು.
ಇಂದು ಪತ್ರಿಕೋದ್ಯಮ ವಿಭಾಗಗಳು ಮತ್ತು ಪತ್ರಿಕಾ ಕಚೇರಿಗಳ ನಡುವಿನ ಸಂಬಂಧ ಇಂಟನ್ðಶಿಪ್ ಗೆ ಮಾತ್ರ ಸೀಮಿತವಾಗುತ್ತಿರುವುದಕ್ಕೆ ಅವರು ಖೇದ ವ್ಯಕ್ತಪಡಿಸಿದರು.
ವಾಚಕರ ವಾಣಿಯ ವೇದಿಕೆಯನ್ನು ಯುವ ಬರಹಗಾರರು ಬಳಸಿಕೊಳ್ಳಬೇಕು, ಪರ್ತಕರ್ತರಲ್ಲಿ ವಿನಯವಿರಲೇಬೇಕು ಎಂದರು.
ಮಾಧ್ಯಮಗಳ ಬ್ರೇಕಿಂಗ್ ದಿ ಸೊಸೈಟಿ ಟ್ರೆಂಡ್ ಹೋಗಿ ಬ್ರೀಡ್ಜೀಂಗ್ ದ ಸೊಸೈಟಿ ಆಗಲಿ ಎಂದು ಆಶಿಸಿದರು.
ಪತ್ರಿಕೆಗಳನ್ನು ಪ್ರತಿಕ್ರಿಯಾತ್ಮಕ ಮನೋಭಾವ ಬೆಳೆಸಿಕೊಳ್ಳಲು ಓದಬೇಕು, ಸಾಹಿತ್ಯವನ್ನು ಮಾನವೀಯ ಮುಖ ನೀಡಲು ಓದಬೇಕು ಎಂಬುದು ಅವರ ಸಲಹೆ.
ನಂತರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಉಪನ್ಯಾಸಕ ಕೆ. ಜಿ. ಜೋಸೆಫ್, "ಪದವಿಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಬರೆಯುತ್ತಾರೆ ಆದರೆ ಸ್ನಾತಕೋತ್ತರ ಪದವಿಗೆ ಬಂದಾಗ ಬರವಣಿಗೆ ಕಡಿಮೆಯಾಗುತ್ತದೆ. ಇದಕ್ಕೆ ಮನಸ್ಸು ಕಲ್ಮಷವಾಗುವುದೇ ಕಾರಣ" ಎಂದರು. ಇದರೊಂದಿಗೆ ನನಗನಿಸುವ ಮಟ್ಟಿಗೆ ಸ್ನಾತಕೋತ್ತರ ಪದವಿಯ ಪತ್ರಿಕೋದ್ಯಮ ಸಿಲೆಬಸ್ ಗಳು ವಿಧ್ಯಾರ್ಥಿಯನ್ನು ಒಬ್ಬ ಪತ್ರಕರ್ತನನ್ನಾಗಿ ಮಾಡೋದಕ್ಕಿಂತ ಲೆಕ್ಚರರ್ ಮಾಡೋದು ಹೇಗೆ ಎಂಬುದರ ಸುತ್ತಲೇ ಸುತ್ತುತ್ತಿರುವುದು ಕೂಡ ಒಂದು ಮುಖ್ಯ ಕಾರಣ ಎಂದು ನನಗನಿಸುತ್ತದೆ.
ಸುಮಾರು 16 ಕಾಲೇಜುಗಳಿಂದ 300ಕ್ಕೂ ಮಿಕ್ಕ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಬಹುಶ: ಕಾರ್ಯಾಗಾರದ ಮಟ್ಟಿಗೆ ಇದು ಮೂರು ಪಟ್ಟು ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದರು ಎಂದು ನನಗನಿಸುತ್ತದೆ. ಅದ್ದರಿಂದ ಇದು ಸ್ವಲ್ಪ ಮಟ್ಟಿಗೆ ಜಾತ್ರೆ ರೀತಿ ಆಯಿತು ಎಂದು ನನಗನಿಸಿತ್ತು.
ಅದರೊಂದಿಗೆ ಕಾರ್ಯಗಾರದ ಶೀರ್ಷಿಕೆಗೆ ಪೂರಕವಾದ ಅವಧಿಯೇ ಇರಲಿಲ್ಲ!
ಪತ್ರಕರ್ತರು, ರಾಜಕಾರಣಿಗಳನ್ನು ಮೀರಿಸುವಂತೆ ಪರಸ್ಪರರ ಕಾಲೆಲೆದರು, ಕೆಸರೆರಚಿಕೊಂಡರು. ’ಹೇಳುವುದು ಶಾಸ್ತ್ರ ತಿನ್ನುವುದು ಬದನೆಕಾಯಿ’ ಎಂಬ ಗಾದೆಮಾತನ್ನು ಸತ್ಯ ಮಾಡಿದರು!
ಉಳಿದಂತೆ ಎಲ್ಲ ವ್ಯವಸ್ಥೆಗಳು ಅಚ್ಚುಕಟ್ಟಾಗಿತ್ತು. ಸಮಯಪಾಲನೆಗೆ ಹೆಚ್ಚಿನ ಮಹತ್ವ ನೀಡಲಾಗಿತ್ತು.
ಮರುದಿನ ಮೈಸೂರು ದರ್ಶನ. ರಾತ್ರಿ 11ಕ್ಕೆ ಮರಳಿ ಗೂಡಿಗೆ...
ಒಂದಷ್ಟು ನೆನಪು ಮತ್ತು ಪಾಠದೊಂದಿಗೆ!

Friday, September 18, 2009

ಬಾಲ್ಯದ ನೆನಪುಗಳವು!

ನೆನಪಿನ ರಾಶಿಯನ್ನು ಕೆದಕಿದಾಗ ದೊಡ್ಡ ಪೆಟ್ಟಿಗೆಯಲ್ಲಿ ಕಟ್ಟಿಟ್ಟ ಪೊಗದಸ್ತಾದ ನೆನಪೊಂದು ಸಿಕ್ಕಿತ್ತು. ಬಿಚ್ಚಿ ನೋಡುತ್ತೇನೆ... ಇಂದಿಗೂ ಘಮಘಮಿಸುವ ಬಾಲ್ಯದ ನೆನಪುಗಳವು! ಅದರಲ್ಲೂ ಚಿಕ್ಕ ರಜೆ ಸಿಗಲೆಂದು ಕಾತರಿಸಿ ಸಿಕ್ಕಾಗ ಕುಣಿದು ಕುಪ್ಪಳಿಸಿ ಸಿಕ್ಕ ನಂತರ ಪ್ರತಿಕ್ಷಣವನ್ನು ಅಸ್ವಾದಿಸಿದ ಸುಮಧುರ ನೆನಪದು.
ಆಡೋದು, ಓಡೋದು, ನೆಂಟರ ಮನೆಗೆ ಹೋಗೋದು, ಚಿಕ್ಕ ತೊರೆಯಲ್ಲಿ ಮೀನು ಹಿಡಿಯೋದು ಇವೆಲ್ಲ ಪ್ರತಿ ರಜೆಯ ಸಹಜ ದಿನಚರಿ. ಅಂದು ಚಿಕ್ಕ ಚಿಕ್ಕ ಸಂತೋಷಗಳನ್ನು ಬೃಹತ್ತಾಗಿ ಕಂಡು ಅನುಭವಿಸುವ ಮುಗ್ದ ಮನಸ್ಸಿತ್ತು. ಆ ಮನಸ್ಸಿಗೋ ತನಗನಿಸಿದ ಕೀಟಲೆ ಮಾಡುವ ಸ್ವಾತಂತ್ರ್ಯವಿತ್ತು. ಆ ಸ್ವಾತಂತ್ರ್ಯ ಸ್ವೇಚ್ಚೆಯಾದಗ ನಿಯಂತ್ರಿಸಲು ಅಪ್ಪನ ಗದರಿಕೆ, ಬೆತ್ತ ಅಥವಾ ಅಮ್ಮನ ಬುದ್ದಿಮಾತಿನ ಕಡಿವಾಣವಿತ್ತು. ನೋವಾದಾಗ ಆಳುವ ಅವಕಾಶವಿತ್ತು. ಖುಷಿಯಾದಾಗ ನಮ್ಮ ಅಭಿವ್ಯಕ್ತಿಯನ್ನು ಕಂಡೇ ಸಂತೋಷಪಡುವ ಬಂಧುಬಳಗವಿತ್ತು. ಆಡಿದ, ಆಡುವ ಪ್ರತಿ ಮಾತಲ್ಲೂ ಮುಗ್ದತೆಯನ್ನು ಕಂಡು ಅದಕ್ಯಾವುದೇ ಅರ್ಥ ಆರೋಪಿಸದೆ ಅದರ ಸ್ನಿಗ್ದ ಸೌಂದರ್ಯವನ್ನು ಅನುಭವಿಸುವ ನೆಂಟರಿಷ್ಟರಿದ್ದರು. ನಮ್ಮ ಬಗ್ಗೆ ನಮಗಿಂತ ಹೆಚ್ಚು ಕಾಳಜಿ ವಹಿಸುವ ಮನೆಯವರಿದ್ದರು.
ಅವರೇ ಈಗಲೂ ಇದ್ದಾರೆ. ರಜೆಯೀಗಲೂ ಬರುತ್ತದೆ. ಆದರೆ ಅವರಿಗೂ ನಮಗೂ ಪ್ರಬುದ್ಧತೆ ಎಂಬ ಬೇಡಿ ಹಾಕಲಾಗಿದೆ. ಇವತ್ತೇನಿದ್ದರೂ ಆಟವೆಂದರೆ, ಕ್ರಿಕೆಟ್, ಕಬಡ್ಡಿ, ವಾಲಿಬಾಲ್ ಗಳೆಂಬ ಆಟಗಳನ್ನೇ ಆಡಬೇಕಾಗಿದೆ. ಮನಸ್ಸಿಗನಿಸಿದ ಕೀಟಲೆ ಮಾಡ ಹತ್ತಿದರೆ ಸಾರ್ವಜನಿಕರಿಂದ ಧರ್ಮದೇಟು ತಿನ್ನಬೇಕು!. ಅದರೊಂದಿಗೆ ಅನಾಮತ್ತಾಗಿ ಹುಚ್ಚನ ಸ್ಥಾನ ಸಿಗುತ್ತದೆ. ಬೇಸರವೆನಿಸಿ ಅತ್ತರೆ ಧಮಿಲ್ಲದವನೆಂಬ ಪಟ್ಟ ಕಾದಿರುತ್ತದೆ. ಖುಷಿಯಾದರೆ ನಗಬೇಕು ಅಥವಾ ಪಾರ್ಟಿ ಕೊಡಬೇಕು. ಅದು ಬಿಟ್ಟು ಬೇರೇನೋ ಮಾಡ ಹತ್ತಿದರೆ ಅದಕ್ಕೆ ನೂರಾರು ಅರ್ಥ. ಆಡುವ ಪ್ರತಿ ಮಾತು ಕೂಡ ಜಾಗರೂಕವಾಗಿರಬೇಕು. ಇಲ್ಲದೇ ಹೋದಲ್ಲಿ ಆಡಿದವನ ಯೋಚನೆಗೆ ನಿಲುಕದ ಭಾವಗಳು ಮಾತಿನ ಹಿಂದೆ ಇದೆ ಎಂಬ ಗುಮಾನಿ. ನಮ್ಮ ಬಗ್ಗೆ ಯಾರಾದರೂ ಹೆಚ್ಚಿನ ಕಾಳಜಿ ವಹಿಸಿದರೆ 'ಏನೋ ಇದೆ' ಎಂಬ ಶಂಕೆ ಅದರಲ್ಲೂ ಅವರು ನಮ್ಮ ವಿರುಧ್ಧ ಲಿಂಗಿಯಾಗಿದ್ದಾರೆ ಕತೆ ಮುಗಿಯಿತು. ನೋಡು ನೋಡುತ್ತಲೇ ಅದೇಷ್ಟು ಬದಲಾವಣೆ!
ಬಾಲ್ಯ, ಈ ಯವ್ವನ ಎರಡು ಬೇರೆ ಬೇರೆ ತುಂಡುಗಳು ಎಂದು ಅನಿಸುತ್ತಿಲ್ಲವೇ?

Friday, September 11, 2009

ಗುರು

ಅಂದು ಗುರು ಸಾಕ್ಷತ್ ಪರಬ್ರಹ್ಮ ಸ್ವರೂಪ. ಇದ್ದದ್ದು, ಇ(ಬ)ರುತ್ತಿದ್ದದ್ದು ಪೂಜ್ಯ ಭಾವನೆಯೊಂದೇ. ಅವರು ಏನು ಹೇಳಿದರು, ಮಾಡಿದರು ಅದರಲ್ಲಿ ಜಿನುಗುತ್ತಿದ್ದದ್ದು ಸದಾಶಯ. ಆ ಗುರುವಿನ ಶಿಷ್ಯನಾಗುವುದು ಅಷ್ಟು ಸುಲಭವಾಗಿರಲಿಲ್ಲ. ಸಾಕಷ್ಟು ಸತ್ವ ಪರೀಕ್ಷೆಗಳಿಗೆ ಈಡಾಗಬೇಕಿತ್ತು, ಅದರಲ್ಲಿ ಯಶ ಪಡೆಯಬೇಕಿತ್ತು. ಅಷ್ಟರಲ್ಲೇ ವಿದ್ಯಾಕಾಂಕ್ಷಿ ಹಣ್ಣುಗಾಯಿ ನೀರುಗಾಯಿಯಾಗುತ್ತಿದ್ದ. ಮತ್ತೂ ಗುರುಮುಖೇನ ಕಲಿಯುವ ತುಡಿತ ಉಳಿದಿದ್ದೇ ಆದರೆ ಅನಂತರ 'ಮಾಗುವ' ಪ್ರಕ್ರಿಯೆ ಶುರು.
ಕಲಿಕೆ ಅಂದರೆ ಅದೊಂದು ತಪಸ್ಸು. ಕಲಿಯುವಿಕೆಯ ಹಂತಗಳಲ್ಲಿ ಗುರು ಶಿಷ್ಯರು ಪರಸ್ಪರ ವಶ ಮತ್ತು ವಿವಶ. ಗುರು ಕೊಡುವ ಶಿಕ್ಷೆ ಅಂದರೆ ಆದು ಆಶಿರ್ವಾದ ಸ್ವರೂಪ. ಅದರಲ್ಲೂ ಕಲಿಯುವಿಕೆಯ ಆನಂದ. ಗುರುವಿನ ಶಿಕ್ಷೆ ಆತನ ಮನಸ್ಸಿನ ಅಸಹನೆ, ದ್ವೇಷ, ಅಹಂ ಅಥವಾ ಹೆಂಡತಿ ಜೊತೆ ಜಗಳವಾಡಿದ ಕಾರಣದಿಂದ ಬರುತ್ತಿದ್ದಲ್ಲ. ಅದು ಸಹಜ, ಅನಿವಾರ್ಯ ಮತ್ತು ಶಿಷ್ಯನಲ್ಲಿ ಕಲಿಯುವಿಕೆಯ ಹಪಾಹಪಿ ಹುಟ್ಟಿಸುವಂತದ್ದು ಮತ್ತು ಆ ಕಲಿಕೆಗೆ ಸಮಗ್ರತೆಗೆ ತುಂಬುತ್ತಿತ್ತು. ಇದು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲ, ಬದಲು ಗುರು ಪರಂಪರೆ. ಗುರುಕುಲವೇ ಅಂದಿನ ಜ್ಞಾನದೇಗುಲ.
ಅನಂತರ
ಗುರು ಪರಂಪರೆಯನ್ನು ಆವರಿಸಿಕೊಂಡದ್ದು ಶಿಕ್ಷಣ ವ್ಯವಸ್ಥೆ. ಇದು ಮೊಳಕೆಯೊಡೆದದ್ದು 1835ರಲ್ಲಿ. ಈ ವ್ಯವಸ್ಥೆಯ ಓಘ 1990ರ ತನಕ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿತ್ತು. ಇದೇ ಸಂದರ್ಭ ಭಾರತದ ಸ್ವಾತಂತ್ರ್ಯ ಹೋರಾಟ, ಅದರಲ್ಲಿನ ಗೆಲುವು ಮತ್ತು ಎಲ್ಲಾ ರೀತಿಯ ಐರೋಪ್ಯ ಮತ್ತು ಪೌರತ್ಯ ಪ್ರಣೀತ ಚಿಂತನೆಗಳು ಮತ್ತು ಸಾಧನಗಳು ನಮ್ಮ ನೆಲವನ್ನು ಪ್ರವೇಶಿಸಿದ್ದು. ಮತ್ತು ನಾವು ಕೂಡ ಆ ಸಂಗತಿಗಳಲ್ಲಿ ಸಾಧನೆ ಮಾಡಿದ್ದು. ಇದಕ್ಕೆಲ್ಲ ಕಲಶವಿಟ್ಟಂತೆ ಪ್ರಜಾಪ್ರಭುತ್ವವನ್ನು ನಮ್ಮ ಆಡಳಿತ ವಿಧಾನವಾಗಿ ಸ್ವೀಕರಿಸಿದ್ದು. ಈ ವ್ಯವಸ್ಥೆಯ ಸಮರ್ಪಕತೆಯ ಬಗ್ಗೆ ಪ್ರಶ್ನೆಗಳಿದ್ದರೂ ವಿದ್ಯೆಯನ್ನು ಸಾರ್ವತ್ರಿಕ ಮಾಡಿತು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಉಳಿದಂತೆ ಇದರ ಒಳಿತು ಕೆಡುಕುಗಳು ಮತ್ತು ಈ ವ್ಯವಸ್ಥೆ ಹುಟ್ಟಿಕೊಳ್ಳಲು ಕಾರಣವಾದ ಸಂಗತಿಗಳು ಒತ್ತಟ್ಟಿಗಿರಲಿ. ಇಲ್ಲಿ 'ಗುರು' 'ಶಿಕ್ಷಕ'ನಾದ. ಆದರೆ ಆಶಯ ಬದಲಾಗಲಿಲ್ಲ, ಬರಡಾಗಲಿಲ್ಲ. ಕಾರಣವಿಷ್ಟೇ ಈ ವ್ಯವಸ್ಥೆ ಹೀರಿಕೊಂಡದ್ದು ಆ ಪರಂಪರೆಯಿಂದ!
ಶಿಕ್ಷಕ, ಮೇಷ್ಟ್ರು, ಟೀಚರ್, ಲೆಕ್ಚರರ್ ಅಂದರೆ ತುಂಬು ಗೌರವ ಅ ಗುರುವಿಗೆ ಸಂದಂತೆ ಇವರಿಗೂ ಸಲ್ಲುತ್ತಿತ್ತು. ಇಲ್ಲಿ ಅವರಿಗೆ ದೈವಂಶ ಸಂಭೂತರೆಂಬ ಪಟ್ಟವಿರದಿದ್ದರು ಬೀದಿಯಲ್ಲಿ ಅವರ ತಲೆ ಕಂಡರೆ ಸಾಕು ಹಿರಿಕಿರಿಯರೆನ್ನದೇ ಎಲ್ಲರಿಂದಲೂ ನಮಸ್ತೆಗಳ ಸುರಿಮಳೆ. ಅದೇನೂ ಒತ್ತಾಯಪೂರ್ವಕವಾಗಿ ಬರುತ್ತಿದ್ದದ್ದಲ್ಲ. ಅದು ಸಹಜ ಮತ್ತು ಭಕ್ತಿ ಪೂರ್ವಕ. ನಮ್ಮ ಹಳ್ಳಿಗಳಲ್ಲಿ ಈ ಟೀಚರ್ ಕೈಗೇ ಮಕ್ಕಳನ್ನು ಒಪ್ಪಿಸಿ ಅಂದರೆ ಶಾಲೆಗೆ ಕಳುಹಿಸಿದರೆ ಮನೆಮಂದಿಯಲ್ಲಿ ಅದೇನೋ ಒಂದು ಸಂತೃಪ್ತ ಭಾವ ಮತ್ತೊಂದು ಸುಂದರ ಕನಸು.
ಈ ವ್ಯವಸ್ಥೆಯಲ್ಲಿ ಪ್ರೀತಿಯಿಂದ ತೀಡುವ ವಿಠಲ ಮೇಷ್ಟ್ರು ಇದ್ದರು, ಕೋಲಿನಿಂದ ಬಡಿಯುವ ರುದ್ರಪ್ಪ ಮೇಷ್ಟ್ರು ಇದ್ದರು. ಅವೆಲ್ಲವನ್ನು, ಅವರೆಲ್ಲರನ್ನೂ ಮಕ್ಕಳು ಜೀರ್ಣಿಸಿಕೊಳ್ಳುತ್ತಿದ್ದರು ಅದಕ್ಕಿಂತ ಹೆಚ್ಚಾಗಿ ಹೆತ್ತವರು ಕೂಡ! ಆ ಪೆಟ್ಟಿನ ಭಯದಿಂದ ಕಲಿತು ಮಹನೀಯರಾದವರು ಬಹಳಷ್ಟು ಮಂದಿ. ನಮ್ಮ ನಮ್ಮ ಅಪ್ಪ ಅಮ್ಮಂದಿರೂ ಕೂಡ!
ಈಗ
ಹೊಡೆತಕ್ಕೆ ಬಿದ್ದಿದೆ ಫುಲ್ ಸ್ಟಾಪ್. ಸ್ವತಃ ಸರಕಾರವೇ ಈ ನಿರ್ದೆಶನವಿತ್ತಿದೆ. ಶಿಕ್ಷಣ ವ್ಯವಸ್ಥೆ, ಶಿಕ್ಷಣ ಕ್ಷೇತ್ರವಾಗಿದೆ. ಶಿಕ್ಷಕನದ್ದು ಒಂದು ವೃತ್ತಿ ಅಷ್ಟೆ. ಅದಕ್ಕಿಂತ ಆಚೆ ಅವನು ವಿಸ್ತರಿಸಲಾರ. ವಿಸ್ತರಿಸಿದರೂ ಕತ್ತರಿಸುವ ಕೈಗಳು ಸಮಾಜದಲ್ಲೇ ಇದೆ. ಒಬ್ಬ ವಿಧ್ಯಾರ್ಥಿಯ ಮೇಲಿರುವ ತನ್ನ ಜವಾಬ್ದಾರಿಗಳನ್ನು ಆತ ಸಂಕುಚಿತಗೊಳಿಸಿಕೊಂಡಿದ್ದಾನೆ ಅಥವಾ ಹಾಗೇ ಮಾಡುವಂತೆ ನಿರ್ಬಂಧಿಸಲಾಗುತ್ತಿದೆ. ಈ ಶಿಕ್ಷಕನಿಗೆ ವೃತ್ತಿ ಪರತೆ ತುಂಬುವ ಪ್ರಯತ್ನ ನಡೆಯುತ್ತದೆಯೇ ಹೊರತು ಸಮಗ್ರತೆ ಮತ್ತು ಸಂಸ್ಕಾರವನಲ್ಲ. ಅವನಿಗೆ ಸಿಗದ ಸಂಸ್ಕಾರವನ್ನು ಅವ ಹೇಗೆ ತಾನೇ ತನ್ನ ವಿಧ್ಯಾರ್ಥಿಗಳಿಗೆ ಅಂದರೆ ಮುಂದಿನ ಪೀಳಿಗೆಗೆ ದಾಟಿಸಬಲ್ಲ?
ಈಗ ಮಕ್ಕಳಿಗೆ ಹೊಡೆಯುವಂತಿಲ್ಲ. ನಿಜ, ಯಾವ ರೀತಿಯ ಹೊಡೆತವೂ ಅಕ್ಷಮ್ಯವೇ. ಆದರೆ ಕೆಲ ಮಕ್ಕಳು ಪೆಟ್ಟು ತಿನ್ನದೇ ಸರಿಯಾಗುವುದಿಲ್ಲ. ಕಲ್ಲು ಮೂರ್ತಿಯಾಗುವುದು ಉಳಿ ಪೆಟ್ಟಿನಿಂದಾಗಿಯೇ ಹೊರತು ಪ್ರಾರ್ಥನೆಯಿಂದ ಅಲ್ಲ! ನಾ ಆಗಲೇ ಬರೆದಂತೆ ನಮ್ಮಲ್ಲಿ ಅಥವಾ ನಮ್ಮ ಹಿಂದಿನ ಪೀಳಿಗೆಯ ಬಹಳಷ್ಟು ಮಂದಿ ಮೇಷ್ಟ್ರ ಕೈಯಿಂದ ಪೆಟ್ಟು ತಿಂದೆ ಗಟ್ಟಿಯಾದವರು.
ಈಗ ಶಿಕ್ಷಕನ ಜ್ಞಾನಕ್ಕೂ ಅಷ್ಟೊಂದು ಮಹತ್ವವಿಲ್ಲ. ಅದು ಎಲ್ಲ ಕಡೆಯೂ ಸಿಗುವ ಸಂಗತಿಯಾಗಿ ಬಿಟ್ಟಿದೆ. ಮಕ್ಕಳನ್ನು ಬೇಕಾಬಿಟ್ಟಿ ಪಾಸ್ ಮಾಡಿಸಬೇಕೆಂಬ ಸರಕಾರದ ಹವಣಿಕೆಗೆ ಈ ಮೇಷ್ಟ್ರುಗಳು ಬಲಿಪಶುಗಳು. ಈ ಕ್ಷೇತ್ರದ ಮೇಲೆ ಮತ್ತು ಇಲ್ಲಿ ದುಡಿಯುವವರ ಮೇಲೆ ಇಡಬಹುದಾದ ನಂಬಿಕೆ ಧರಾಶಾಯಿಯಾಗುತ್ತಿದೆ. ಇದು ಜಾಗತಿಕರಣದ ಕೊಡುಗೆ. ಇಲ್ಲಿ ಶಿಕ್ಷಕನ ಮಾದರಿತನಕ್ಕೆ ಕುರುಹು ಆತ ವಿಧ್ಯಾರ್ಥಿಗಳಿಗೆ ತುಂಬಿರುವ ಆದರ್ಶವಲ್ಲ ಬದಲು ಆವರಿಗೆ ಉದ್ಯೋಗ ಲೋಕದಲ್ಲಿ ಐದಂಕಿ ಸಂಬಳ ಗಳಿಸುವ ಆರ್ಹತೆ ಇದೆಯಾ? ಎಂಬುದು. ಈಗ ಗುರುವಿಗೂ ಗುರಿ ಇಲ್ಲ ಇದ್ದರೂ ಆದಕ್ಕೇ ಬೆಲೆ ಇಲ್ಲ!
ನಾಳೆ
ಮಾನವ ಪಾಠ ಮಾಡುವುದು ಅನುಮಾನ. ಯಂತ್ರ ಮಾನವನಿಗೆ ಸಿಗಬಹುದು ಈ ಸ್ಥಾನಮಾನ. ಮಾನವ ಪಾಠ ಮಾಡಿದರೂ ಮಕ್ಕಳು ಮತ್ತು ಮೇಷ್ಟ್ರ ಮಧ್ಯೆ ಭಾವನಾ ಶೂನ್ಯತೆ ಆಥವಾ ನಿರ್ವಾತ ನೆಲೆ ಮಾಡಿರಬಹುದು. ಬಿಳಿ ಚಾಕ್, ಕರಿ ಬೋರ್ಡ್ ನಮ್ಮ ನೆನಪಿನ ಕೋಶ ಸೇರಿರಬಹುದು. ಸಮಾಜದ ದೃಷ್ಟಿಯಲ್ಲಿ ಮೇಷ್ಟ್ರು ಕೆಲಸಕ್ಕೂ ಕಾರಕೂನನ ಕೆಲಸಕ್ಕೂ ಒಂದಿನಿತೂ ವ್ಯತ್ಯಾಸ ಉಳಿದಿರಲಾರದು. ಈ ಮೇಷ್ಟ್ರುಗಳು ಮತ್ತವರು ಕಲಿಸಿದ ಪಾಠ ಎರಡು ವರ್ಷವೂ ವಿಧ್ಯಾರ್ಥಿಗಳ ಮನದಲ್ಲಿ ಬಾಳದೇ ಹೋಗಬಹುದು. ಮಗುವಿನ ಅಗತ್ಯಕ್ಕೂ ಮಿಗಿಲಾದ ಕಂಪ್ಯೂಟರ್ ಬಳಕೆ ಸೇರಿಕೊಳ್ಳಬಹುದು. ಶಿಸ್ತಿನ ಹೆಸರಲ್ಲಿ ಅನೇಕ ಸರ್ಕಸ್ ಗಳು ನಡೆಯಬಹುದು.
ಶಿಕ್ಷಕರ ದಿನಾಚರಣೆ ಮಾತ್ರ ಅದ್ದೂರಿಯಾಗಿ ಜರುಗಬಹುದು!

Saturday, September 5, 2009

ನ್ಯಾನೋಗೆ ಉತ್ತರವಾಗಬಲ್ಲದೇ ರೈನೋ?



ನ್ಯಾನೋ ಕಾರು ಆರ್ಥಿಕವಾಗಿ ಎಷ್ಟು ಮುಖ್ಯವಾಗಿದೆಯೋ ಅಷ್ಟೇ ಮುಖ್ಯವಾಗಿ ಅದು ನಮ್ಮ ಚಿಂತನಕ್ರಮದಲ್ಲೊಂದು ಬದಲಾವಣೆ ತಂದಿದೆ. ಇಂದು ಬಹುತೇಕ ಕಾರು ಉತ್ಪಾದಕರು ಚಿಕ್ಕ ಕಾರು ತಯಾರಿಸುವತ್ತ ಗಮನಹರಿಸುತ್ತಿರುವಾಗಲೇ ಬೆಂಗಳೂರಿನ ಮೆಕ್ಯಾನಿಕಲ್ ಇಂಜಿನಿಯರೊಬ್ಬರು ಅದನ್ನು ಸಾಧಿಸಿ ತೋರಿಸಿದ್ದಾರೆ.
'ರೈನೋ' ಎಂಬ ನಾಮಧೇಯದ ಈ ಕಾರು ನೋಡಲು ರೈನೋಸಾರಸ್ ನಂತೆಯೆ ಇದೆ.ಅಚ್ಚರಿಯೆಂದರೇ ರೈನೋ ಬರೀ 150 ಕೆಜಿ ತೂಗುತ್ತದೆ. ಆದರೆ 30 ರಿಂದ 35 ಕಿ.ಮೀ ಮೈಲೇಜ್ ಕೊಡುತ್ತದೆ. ಗಂಟೆಗೆ 60 ಕಿ.ಮೀ ವೇಗದಲ್ಲಿ ಸರಾಗವಾಗಿ ಚಲಿಸಬಲ್ಲದು.ನಾಲ್ಕು ಫೀಟ್ ಅಗಲ, ನಾಲ್ಕು ಫೀಟ್ ಎತ್ತರ ಮತ್ತು ಎಂಟು ಫೀಟ್ ಉದ್ದವಿರುವ ಈ ಕಾರಲ್ಲಿ ಡ್ರೈವರ್ ಸೇರಿ ಇಬ್ಬರು ಕೂರಬಹುದು. 25 ಕೆ.ಜಿ ಲಗೇಜ್ ಇಟ್ಟುಕೊಳ್ಳಬಹುದು.ಮಡಚಬಹುದಾದ ಸ್ಟೇರಿಂಗ್ ಮತ್ತು ಒಂದೇ ಬಾಗಿಲು ಈ ಕಾರಿನ ವೈಶಿಷ್ಟ್ಯ. ಯಾವುದೇ ಇಂಜಿನ್ ಕೂಡ ಬಳಸಬಹುದು.ಗೇರ್ ವ್ಯವಸ್ಥೆ ಇರುವ ಕಾರು ಇದಾಗಿರುವುದರಿಂದ ಎತ್ತರ ಪ್ರದೇಶಕ್ಕೂ ನಿರಾಯಾಸವಾಗಿ ಚಲಿಸಬಲ್ಲದು ಆದರೆ ಚಕ್ರ ಚಿಕ್ಕದಾಗಿರುವುದರಿಂದ ಗುಂಡಿಗಳಿರುವ ರಸ್ತೆಯಾದ್ರೆ ಸ್ವಲ್ಪ ಕಷ್ಟ, ಆದರೆ
ದೊಡ್ಡ ಚಕ್ರವನ್ನು ಬೇಕಾದರೆ ಆಳವಡಿಸಿಕೊಳ್ಳಬಹುದು ಎಂಬುದು ನಿರ್ಮಾತೃವಿನ ಅಭಿಪ್ರಾಯ.
ಬೆಂಗಳೂರಿನ ಪಾರ್ಕಿಂಗ್ ಸಮಸ್ಯೆಯಿಂದ ಬೇಸತ್ತು ಅದಕ್ಕೆ ಪರಿಹಾರವಾಗಿ ನಾನು ಈ ಕಾರು ತಯಾರಿಸುವ ನಿಟ್ಟಿನಲ್ಲಿ ಯೋಚಿಸಿದೆ ಎನ್ನುತ್ತಾರೆ ಇದರ ರೂವಾರಿ ನರಸಿಂಹರಾಜು. ಇಂಜಿನ್ ಮತ್ತು ಚಕ್ರಗಳನ್ನು ಹೊರತು ಪಡಿಸಿದರೆ ಉಳಿದೆಲ್ಲವನ್ನು ನಾನೇ ವಿನ್ಯಾಸ ಮಾಡಿಕೊಂಡೆ ಎನ್ನುತ್ತಾರವರು. ಅಂಗವಿಕಲರಿಂದ ಈ ಕಾರಿಗೆ ಹೆಚ್ಚಿನ ಬೇಡಿಕೆ ಇದೆ ಆದರೆ ಕ್ಲಚ್ ಮತ್ತು ಬ್ರೇಕ್ ಕಾಲಲ್ಲೇ ಉಪಯೋಗಿಸುವ ರೀತಿಯಲ್ಲಿ ವಿನ್ಯಾಸವಿರುವುದರಿಂದ ಅದರ ಬಳಕೆಗೆ ಕಷ್ಟವಾಗಬಹುದು ಅದ್ದರಿಂದ ಅವನ್ನು ಕೈಯಿಂದ ಬಳಸುವಂತೆ ರೂಪಿಸುವ ದಿಸೆಯಲ್ಲಿ ಅವರು ಗಂಭೀರವಾಗಿ ಚಿಂತಿಸುತ್ತಿದ್ದಾರೆ.ನನ್ನಿಂದ ಇದರ ಬೃಹತ್ ಪ್ರಮಾಣದ ಉತ್ಪಾದನೆ ಸಾಧ್ಯವಿಲ್ಲ, ದೊಡ್ಡ ಕಂಪೆನಿಗಳು ಮುಂದೆ ಬಂದರೆ ನಾನು ಇದರ ತಂತ್ರಜ್ಙಾನ ಕೊಡುತ್ತೇನೆ ಎನ್ನುವ ಇವರು ಹೀಗಾದರೆ ಈ ಕಾರು ರೂ. 80,000ಕ್ಕೆ ಗ್ರಾಹಕರ ಕೈಸೇರಬಹುದು ಎಂದು ಅಭಿಪ್ರಾಯ ಪಡುತ್ತಾರೆ. ಕಿಸೆಗೂ, ರಸ್ತೆಗೂ ಹಗುರವಾಗಿರುವ ಈ ಕಾರು ಅದಷ್ಟೂ ಬೇಗ ನಮ್ಮ ರಸ್ತೆಗಳಲ್ಲಿ ಓಡುವಂತಾದರೆ ಅನೇಕರ ಕಾರು ಕೊಳ್ಳುವ ಕನಸು ನನಸಾಗಬಹುದು. ಹಾಗೆಯೇ ನಗರಗಳ ಪಾರ್ಕಿಂಗ್ ಸಮಸ್ಯೆ ಕೂಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು.
ಇವರ ಪ್ರಯೋಗಶೀಲತೆ ಇಷ್ಟಕ್ಕೆ ಸೀಮಿತವಾಗಿಲ್ಲ. ಗ್ರಾಮೀಣ ಜನತೆಯನ್ನು ಗಮನವಿಟ್ಟುಕೊಂಡು ಸೈಕಲ್ ಗೆ ಶಾಕ್ ಅಬ್ಸರ್ವರ್ ಅಳವಡಿಸುವ ಪ್ರಯತ್ನ ಮಾಡಿ ಅದರಲ್ಲೂ ಯಶ ಕಂಡಿದ್ದಾರೆ. ಇದು ಬೆನ್ನು ನೋವಿನಿಂದ ನರಳುತ್ತಿರುವವರಿಗೆ ಉಪಯುಕ್ತ ಎಂಬುದು ಅವರ ಅನಿಸಿಕೆ. ರಕ್ಷಣಾ ಉದ್ದೇಶಕ್ಕೆ ಬಳಸಬಹುದಾದ ರೊಬೊಟ್ ಕೂಡ ಇವರ ಕೈಯಲ್ಲಿ ರೂಪುಗೊಂಡಿದೆ. ಇದನ್ನು ರಿಮೋಟ್ ಕಂಟ್ರೋಲ್ ಬಳಸಿ ನಿಯಂತ್ರಸಬಹುದಾಗಿದ್ದು ತನ್ನ ಕೈಯಲ್ಲಿ ಮೂರು ಕೆಜಿ ಭಾರ
ಎತ್ತಿ ಅದನ್ನು ಅತ್ತಿತ್ತ ಕೊಂಡೊಯ್ಯಬಲ್ಲದು ಅಲ್ಲದೆ ಅದನ್ನು ನಾಶಮಾಡಬಲ್ಲದು. ಇದು ಬಾಂಬ್ ನಿಷ್ಕ್ರೀಯಗೊಳಿಸಲು ಸಹಕಾರಿ. ತಲೆ ಮೇಲೆ ಗನ್ ಇಟ್ಟುಕೊಳ್ಳುವ ವ್ಯವಸ್ಥೆಯಿದ್ದು ಅದನ್ನು 360 ಡಿಗ್ರಿಯಷ್ಟು ತಿರುಗಿಸಬಹುದಾಗಿದೆ. ಮೇಲೆ ಕೆಳಗೆ ಚಲಿಸುವಂತೆಯೂ ಮಾಡಬಹುದು. ಇದು ಶತ್ರುಗಳ ಮೇಲೆ ಗುಂಡಿನ ದಾಳಿ ನಡೆಸಲು ಉಪಯುಕ್ತ. ಇದು ಚಕ್ರದ ಸಹಾಯದಿಂದ ಚಲಿಸುತ್ತದೆ ಅದುದರಿಂದ ಸಮತಟ್ಟಾದ ಜಾಗಗಳಲ್ಲಿ ಮಾತ್ರ ಇದರ ಬಳಕೆ ಸಾಧ್ಯ. ಅದರೆ ಚಕ್ರದ ಬದಲು ಟ್ರ್ಯಾಕ್ ಬಳಸಿ ಗುಡ್ಡಗಾಡು ಪ್ರದೇಶಗಳಲ್ಲೂ ಇದನ್ನು ಬಳಸುವಂತೆ ಮಾಡಬಹುದಾಗಿದೆ.
ಇದರೊಂದಿಗೆ ರೋಟಿ ಮೇಕರ್ ಎಂಬ ಅಡುಗೆ ಮನೆಯಲ್ಲಿ ಬಳಸುವ ಉಪಕರಣವೊಂದನ್ನು ಅವರು ತಯಾರಿಸಿದ್ದು ಇದರ ಸಹಾಯದಿಂದ ಅರೆ ನಿಮಿಷದಲ್ಲಿ ಎಣ್ಣೆ ರಹಿತ ಚಪಾತಿ ಮಾಡಲು ಸಾಧ್ಯ. ಇನ್ನು ಬೆಂಗಳೂರಿನ ಚರಂಡಿ, ಮೋರಿಗಳಲ್ಲಿ ಹರಿದ ವ್ಯರ್ಥವಾಗುತ್ತಿರುವ ಕೊಳಚೆ ನೀರನ್ನು ಬಳಸಿ ವಿದ್ಯುತ್‌ ತಯಾರಿಸುವ ಹಂಬಲ ಇವರದ್ದು. ಆಸಕ್ತರು ನರಸಿಂಹರಾಜು ಅವರನ್ನು (9845115142) ಸಂಪರ್ಕಿಸಬಹುದು.

Thursday, August 13, 2009

ಅವಳನ್ನು ಅದು ಹೇಗೆ ತಾನೇ ಕಥೆ ಮಾಡಲಿ?

ನಾನು 'ಅವಳ' ಹೆಸರು ಬರೆಯುವಂತಿಲ್ಲ. ಯಾಕೆಂದರೆ 'ಅವಳು' ಯಾರೆಂದು ನನ್ನ ಹತ್ತಿರದವರಿಗೆ ಗೊತ್ತಾಗಿ ಬಿಡುತ್ತದೆ. ಅದಕ್ಕಿಂತ ಹೆಚ್ಚಾಗಿ 'ಅವಳಿಗೆ' ಅದು 'ಅವಳೇ' ಎಂದು ಗೊತ್ತಾಗುತ್ತದೆ. ಅದು 'ಅವಳೇ' ಎಂದು 'ಅವಳಿಗೆ' ಗೊತ್ತಾದರೆ 'ಅವಳು' 'ಅವಳಾಗಿ'ಯೇ ಇರುವುದಿಲ್ಲ. (ಈಗ ಹಾಗೆ ಇದ್ದಾಳೆ ಎಂದೇನೂ ನನಗನಿಸುತ್ತಿಲ್ಲ). ಅದು ಮತ್ತೊಂದು ಬಿರುಗಾಳಿಗೆ ಕಾರಣವಾಗುತ್ತದೆ. ಮತ್ತವಳು ಏರಿರುವ ಸಂಸಾರ ನೌಕೆಯಲ್ಲಿ ಅನಾಮತ್ತಾಗಿ ಒಂದು ಬಿರುಕು ಸೃಷ್ಟಿಯಾಗುತ್ತದೆ. ನನಗದು ಇಷ್ಟವಾಗದ ಸಂಗತಿ.
ಇಲ್ಲ, ಅದು 'ಅವಳೇ' ಎಂದು 'ಅವಳಿಗೆ' ಗೊತ್ತಾಗಬಾರದು ಹಾಗೆಯೇ ನಮ್ಮಿಬ್ಬರ ಬಗ್ಗೆ ಗೊತ್ತಿರುವ ಯಾರಿಗೂ ಕೂಡ. ಅದರಲ್ಲೂ ನನ್ನ ಬರವಣಿಗೆಯ ಸೂಕ್ಷ್ಮ ವಿಮರ್ಶಕನಾಗಿರುವ 'ಅವಳ' ಗಂಡನಿಗೆ!
ನಾನು ಏನೇ ಬರೆದರೂ ಅದು ನಮ್ಮಿಬ್ಬರ ನಡುವೆ ನಡೆದ ಯಾವುದೇ ಘಟನೆಯನ್ನು ಪುನರಪಿ ನೆನಪಿಸಲೇ ಬಾರದು. ನೆನಪಿಸಿದರೂ ಅದು ಯಾರ ಜತೆಗೂ ನಡೆಯುವಂತದ್ದೆ ಎಂದು 'ಅವಳು' ಸಹಿತ ಎಲ್ಲರಿಗೂ ಅನಿಸಿ ಬಿಡಬೇಕು. ಅದರಲ್ಲಿ 'ವಿಶೇಷ' ಕಾಣಲೇಬಾರದು.
ನಾ ಬರೆಯುವ ಯಾವ ಪದವೂ ನಮ್ಮ 'ಗೌಪ್ಯ ಪದಕೋಶ'ದಲ್ಲಿದ್ದಿರಬಾರದು. ಅದರ ಬಗ್ಗೆ ನಮ್ಮ ಹತ್ತಿರವರಿಗೆ ಯಾವುದೇ 'ಕ್ಲೂ' ಸಿಗಲೇಬಾರದು. ನಾ ವರ್ಣಿಸುವ ಸ್ಥಳ, ಸನ್ನಿವೇಶ, ಭಾವನೆಗಳೆಲ್ಲವೂ ಅಪರಿಚಿತವೆನಿಸಬೇಕು. ಇಲ್ಲ, ತೀರಾ ಪರಿಚಿತವೆಂದೆನಿಸಿ ಅದು 'ಸಾಮಾನ್ಯೀಕರಣ'ಕ್ಕೊಳಗಾಗಬೇಕು. ಅದರಲ್ಲಿ ನನ್ನ ಅವಳ ಪ್ರೀತಿ, ಒಡನಾಟ, ಮತ್ತೊಂದಿಷ್ಟು ಕಣ್ಣಾಮುಚ್ಚಾಲೆ ವ್ಯವಹಾರಗಳ ಚಿತ್ರಣ ಅವಳಲ್ಲಿ ಇವ 'ಇನ್ಯಾರನ್ನೋ ಇಟ್ಟು ಕೊಂಡಿದ್ನ' ಎಂಬ ಅನುಮಾನ ಮೂಡಿಸಬೇಕು.
ಅದೇ ನಮ್ಮ ಹತ್ತಿರದವರಿದ್ದಾರಲ್ಲ, ಅವರು ಅದ್ಯಾವ ಹುಡುಗಿ ಎಂದು ತಲೆ ಕೆರೆದುಕೊಂಡು, ಕುತೂಹಲದ ಹಿಮಾಲಯ ಏರಿ, ಕಾಲ್ ಮಾಡಿ ಅದ್ಯಾರು ಅಂತ ಹೇಳೋ ಪ್ಲೀಸ್... ಎಂದು ಗೋಗರೆಯಬೇಕು. ಹೇಳು ನಾವು ಯಾರಿಗೂ ಹೇಳುವುದಿಲ್ಲ ಎಂದು ಆಣೆಗಳ ಸುರಿಮಳೆ ಸುರಿಸಿ ನಂತರ ಆಧುನಿಕವಾಗಿ ಚಿಂತಿಸಿ ಬಾಂಡ್ ಪೇಪರ್ ಮೇಲೆ ಸಹಿ ಹಾಕೋ ಮಟ್ಟಕ್ಕೆ ಬರಬೇಕು, ನಮ್ಮ ಮೇಲೆ ನಿನಗೆ ನಂಬಿಕೆ ಇಲ್ವಾ? ಎಂದು ಅವರು ಕೇಳ ಬೇಕು. ಇನ್ನೂ ಹತ್ತಿರವರು ನನ್ನ ಕಾಲರ್ ಹಿಡಿದು ಕೇಳುವ ಸ್ಥಿತಿಗೆ ಬರಬೇಕು. ಊಹೂಂ ಅದರು ಅವರಿಗೆ 'ಅವಳು' ಯಾರು ಎಂದು ಗೊತ್ತಾಗಲೇ ಬಾರದು.
ಬರವಣಿಗೆಯಲ್ಲಿನ ಯಾವುದೇ ಹೆಸರಿನ ಯಾವುದೇ ಪದ ಕೂಡ 'ಅವಳ' ಹೆಸರನ್ನು ಸೂಚಿಸಲೇಬಾರದು. ಒಂದು ಸತ್ಯ ಹೇಳಿದರೆ ಆ ಸತ್ಯವನ್ನು ಸುಳ್ಳು ಮಾಡುವ ನೂರು ಸುಳ್ಳು ಹೇಳಬೇಕು. ಅಥವಾ ನೂರು ಸತ್ಯ ಹೇಳಿ ಒಂದು 'ದೊಡ್ಡ' ಸುಳ್ಳು ಹೇಳಿದರೂ ಆಗುತ್ತದೆ.
ಅವಳ ರೂಪ, ಗುಣ, ಹಾವಭಾವಗಳೆಲ್ಲವನ್ನೂ ಗೊಂದಲ ಹುಟ್ಟಿಸುವಂತೆ ಹೇಳಬೇಕು. ಬೇಡ, ಅದು ಹೇಗೆ ಬರೆದರೂ ಅವಳಿಗೆ ಅದು 'ಅವಳೇ' ಎಂಬ ಅನುಮಾನ ಬಂದೇ ಬರುತ್ತದೆ. ಅವಳಿಗೆ ಬಾರದಿದ್ದರೂ ಅವಳ ಬಗ್ಗೆ ಮನಸಲ್ಲೇ ಮಂಡಿಗೆ ಮೆಲ್ಲುತ್ತಿದ್ದರಿಗಂತೂ ಬಂದೇ ಬರುತ್ತದೆ. ಇದರ ಸಹವಾಸವೇ ಬೇಡ. ಅವಳು ಬಳಸುತ್ತಿದ್ದ ವಸ್ತು, ಇಷ್ಟಪಡುವ ತಿಂಡಿ ತಿನಿಸು, ನಟ ನಟಿ, ಬಣ್ಣ ಹೀಗೆ ಇನ್ನೇನೋ ಗಳನ್ನು ರೂಪಕವಾಗಿ ಬಳಸೋಣ... ಅಂದರೆ ಅದು ಹೆಚ್ಚಿನವರಿಗೆ ಗೊತ್ತಿದೆ.
"ಇಲ್ಲಿನ ಎಲ್ಲ ಸನ್ನಿವೇಶ, ಪಾತ್ರ ಹಾಗೂ ಸಂಭಾಷಣೆಗಳು ಕೇವಲ ಕಾಲ್ಪನಿಕ. ಇದಕ್ಕೂ ನೈಜ ಘಟನೆಗಳಿಗೂ ಯಾವುದೇ ಸಂಬಂಧವಿದೆ ಎಂದೆನಿಸಿದರೆ ಅದು ಕೇವಲ ಕಾಕತಾಳೀಯ" ಎಂದು ಕಥೆಯ ಆರಂಭದಲ್ಲಿ ಬರೆದು ಬಿಟ್ಟರೇ...? ಆದರೆ ಈ ಸಾಲುಗಳು ನಂಬಿಕೆ ಹುಟ್ಟಿಸುವ ಸಾಮರ್ಥ್ಯ ಕಳೆದುಕೊಂಡು ತುಂಬ ಸಮಯವಾಗಿದೆ.
ಈಗೇನು ಮಾಡಲಿ? ನನಗೆ 'ಅದನ್ನು' ಬರೆಯಲೇ ಬೇಕು. ಆದರೆ ಅದರಲ್ಲಿರುವ 'ಅವಳನ್ನು' ಏನು ಮಾಡೋದು?
'ಅವಳ' ಕಥೆ ನನ್ನ ಮನದಲ್ಲಿ ಗರ್ಭಂಕುರವಾಗಿ ಕೆಲ ಸಮಯಗಳೇ ಸಾಗಿದೆ... ಅದನ್ನು ಗರ್ಭಪಾತ ಮಾಡಿಸಲು ನನಗೆ ಸುತಾರಾಂ ಇಷ್ಟವಿಲ್ಲ. ಅದು ನನ್ನ ಬರವಣಿಗೆಯ ಸೋಲು ಅಥವಾ ಅತ್ಮಹತ್ಯೆ. ಹಾಗೇ ಅಥವಾ ಹೀಗೆ ಜನ್ಮ ನೀಡಲು ಸಾಧ್ಯವಿಲ್ಲ, ಅದು ಅವಳ ಬದುಕಿನ ಪ್ರಶ್ನೆ... ಈಗ ತಾನೇ ಗಂಡನ ಮನೆ ಸೇರಿ ಆತನ ಬಿಸಿಯುಸಿರಿಗೆ ಕರಗುತ್ತಿರುವವಳು ನನ್ನ ಬಿಸಿಯುಸಿರಿಗೂ ಕರಗಿದ್ದಳು ಎಂದು 'ಅವನಿಗೆ' ಗೊತ್ತಾದರೆ ನಂತರ 'ಅವಳ' ಉಸಿರೆಲ್ಲ ಬಿಸಿಯೇ. ಆಕೆಯ ಆ ಬಿಸಿ ಉಸಿರಿನ ತಾಪಕ್ಕೆ ನನ್ನ ಬರವಣಿಗೆಯ ಸೆಲೆ ಬತ್ತಿ ಹೋಗಬಹುದು. ಅಲ್ಲಿಗೆ ನನ್ನ ಬರವಣಿಗೆಯ ಶವಸಂಸ್ಕಾರವೂ ನಡೆದು ಹೋಗುತ್ತದೆ! ಕಥೆಯಾಗಲೇ ಬೇಕಾದ ಹುಡುಗಿಯನ್ನು ಅದು ಹೇಗೆ ತಾನೇ ಕಥೆ ಮಾಡಲಿ?

Friday, August 7, 2009

ಕಾಲೇಜು ಚುನಾವಣೆ: ಕಾಸೇ ಬಾಸ್!

ಶಿಕ್ಷಣ ವ್ಯವಸ್ಥೆಗೂ ಆ ದೇಶದ ಆಡಳಿತ ಕ್ರಮಕ್ಕೂ ನೇರ ಸಂಬಂಧವಿದೆ. ಅದರಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿ(ಬೆಳೆ)ಯುವಿಕೆಗೆ ಶಿಕ್ಷಣದ ಕೊಡುಗೆ ಅಪಾರ.ನಮ್ಮ ದೇಶದ ಮಕ್ಕಳಿಗೆ ಪ್ರಜಾಪ್ರಭುತ್ವ ಎಂದರೆ ಏನು ಎಂಬುದು ಆರ್ಥವಾಗುವುದೇ ಶಾಲಾ ಕಾಲೇಜುಗಳ ಮೂಲಕ. ಈ 'ಆರ್ಥವಾಗುವಿಕೆ' ಸೈಧಾಂತಿಕ ಮತ್ತು ಪ್ರಾಯೋಗಿಕ ಅನುಭವಗಳೆರಡನ್ನು ಹೊಂದಿರುತ್ತವೆ.
ಸೈಧಾಂತಿಕ ವಿಷಯಗಳನ್ನು ಪಠ್ಯಗಳ ಮೂಲಕ ತಿಳಿದುಕೊಳ್ಳವ ನಾವುಗಳು ಅದರ ಪ್ರಾಯೋಗಿಕ ಅನುಭವವನ್ನು ಶಾಲಾ ಕಾಲೇಜು ಚುನಾವಣೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಪಡೆಯುತ್ತಿವೆ.
ಆಂದರೆ ಶಾಲಾ ಕಾಲೇಜು ಚುನಾವಣೆಗಳು ದೇಶದ ಭಾವಿ ಪ್ರಜೆಗಳಿಗೆ ಪ್ರಜಾಪ್ರಭುತ್ವದ ಮೊದಲ ಪಾಠಶಾಲೆ ಎಂದಾಯಿತು. ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಈ ಚುನಾವಣೆಗಳಲ್ಲಿ ನಾವು ಇಂದು ಕಾಣುವ ವಾತಾವರಣ ದೇಶದ ಮುಂದಿನ ಚುನಾವಣೆಗಳ ಪರಿಸರ ಯಾವ ರೀತಿ ಇರುತ್ತದೆ ಎಂಬುದರ ಸ್ಪಷ್ಟ ಮುನ್ಸೂಚಣೆ. ಹಾಗಾದರೆ 'ಡೆಮೋಕ್ರಸಿ ಇಸ್ ಇನ್ ಡೇಂಜರ್'!
ಕಾಲೇಜಿನ ವಿದ್ಯಾರ್ಥಿ ಸಂಘಗಳಿಗೆ ನಡೆಯುವ ಚುನಾವಣೆಗಳು ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಗಳಿಗೆ 'ಎಲ್ಲಾ' ರೀತಿಯಿಂದಲೂ ಪೈಪೋಟಿ ನೀಡುತ್ತಿದೆ. ಸದನದಲ್ಲೊಂದು ಸ್ಥಾನ ಪಡೆಯಲು ಒಬ್ಬ ಅಭ್ಯರ್ಥಿ ಏನೆಲ್ಲಾ ಕಸರತ್ತು ಮಾಡುತ್ತಾನೋ ಅದೆಲ್ಲವನ್ನು ಒಂದು ವರ್ಷದ ಆವಧಿಗೆ ಒಂದು ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಲು ವಿಧ್ಯಾರ್ಥಿಯೊಬ್ಬ ಮಾಡುತ್ತಾನೆ ಎಂದರೆ ನೀವು ನಂಬಲೇ ಬೇಕು.
ಚುನಾವಣೆ ಅಂದಾಗ ಪೈಪೋಟಿ ಇದ್ದೆ ಇರುತ್ತದೆ. ರಾಜಕೀಯ ಪಕ್ಷಗಳ ನಡುವೆ ನಡೆಯುವ ಚುನಾವಣೆಯಲ್ಲಿ ಹೆಸರಿಗಾದರೂ ಅಧಿಕಾರಕ್ಕಾಗಿ 'ತತ್ವ ಸಿದ್ದಾಂತಗಳ ನಡುವಿನ ಸೆಣಸಾಟ' ಎಂಬ ಪರಿಕಲ್ಪನೆ ಇದೆ. ಈ ಸೆಣಸಾಟವನ್ನು ವ್ಯವಸ್ಥಿತವಾಗಿ ಮತ್ತು ಕಾನೂನು ಬದ್ಧವಾಗಿ ನಡೆಸಲು ಚುನಾವಣ ಆಯೋಗ ಎಂಬ ಒಂದು ಸಂಸ್ಠೆಯೇ ಇದೆ. ಹಾಗೆಯೇ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವವರಿಗೆ ಶಿಕ್ಷೆಯ ಭಯ ಕೂಡವಿರುತ್ತದೆ. ಆದರೆ ಕಾಲೇಜುಗಳಲ್ಲಿ?
ಇಂದು ಕಾಲೇಜು ಚುನಾವಣೆ ಗೆಲ್ಲಲ್ಲು ವಿದ್ಯಾರ್ಥಿಗಳು ಲಕ್ಷಗಟ್ಟಲೆ ಹಣ ಸುರಿಯುತ್ತಾನೆ. ನನಗೆ ಗೊತ್ತಿರುವಂತೆ, ಕಳೆದ ವರ್ಷ ಒಂದು ಗ್ರಾಮೀಣ ಕಾಲೇಜಿನ ವಿದ್ಯಾರ್ಥಿ ಚುನಾವಣೆ ಗೆಲ್ಲಲ್ಲು ಸುರಿದದ್ದು ಬರೋಬ್ಬರಿ 75,000 ರೂಪಾಯಿಗಳು!
ಇದರರ್ಥ, ಹಿಂದೆ ಕಾಲೇಜು ಚುನಾವಣೆಗಳು ಮಾದರಿಯಾಗಿ ನಡೆಯುತ್ತಿತ್ತು, ಒಳ್ಳೆಯವರು ಮಾತ್ರ ಚುನಾವಣೆಗೆ ನಿಲ್ಲುತ್ತಿದ್ದರು ಮತ್ತು ಗೆಲ್ಲುತ್ತಿದ್ದರು ಎಂದಲ್ಲ. ಆದರೆ ಈಗಿನ ಕಾಲೇಜು ಚುನಾವಣೆಗಳಷ್ಟು ಅಧಃಪತನಕ್ಕೀಡಾಗಿರಲಿಲ್ಲ.
ಕಾಲೇಜು ಚುನಾವಣೆಗಳು ಗಮ್ಮತ್ತಿನ ಮತ್ತು ಮೋಜು ಮಸ್ತಿ ಮಾಡುವ ಅವಕಾಶವೊದಗಿಸುತ್ತದೆ. ಇದನ್ನು ಎಲ್ಲರು ಅನುಭವಿಸಬೇಕು, ಅಸ್ವಾದಿಸಬೇಕು, ಖುಷಿಪಡಬೇಕು. ಆದರೆ ಇದು ಉತ್ತಮ ಚುನಾವಣ ಹವಾ ಇದ್ದಲ್ಲಿ ಮಾತ್ರ ಸಾಧ್ಯ.
ಇಂದು ಕಾಲೇಜು ಚುನಾವಣೆ ಪ್ರತಿಷ್ಟೆಯ ಸಂಕೇತವಾಗಿ ಬಿಟ್ಟಿದೆ. ಇಲ್ಲಿ ಎರಡು ರೀತಿಯ ಪ್ರತಿಷ್ಟೆಗಳು ಮುಖ್ಯವಾಗಿ ವರ್ತಿಸುತ್ತದೆ. ಅದೇ ವ್ಯಕ್ತಿ ಪ್ರತಿಷ್ಟೆ ಮತ್ತು ವಿದ್ಯಾರ್ಥಿ ಸಂಘಟನೆಗಳ ಪ್ರತಿಷ್ಟೆ. ಈ ಕಾರಣಕ್ಕಾಗಿಯೇ ಇಂದು ಕಾಲೇಜು ಚುನಾವಣೆಗಳು ಪೊಲೀಸ್ ಭದ್ರತೆಯಲ್ಲಿ ನಡೆಯುತ್ತಿರುವುದು.
ನಮ್ಮ ಸಂಘಟನೆಯ ಅಭ್ಯರ್ಥಿ ಗೆಲ್ಲಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು ಏನೆಲ್ಲಾ ಕಸರತ್ತು ಮಾಡುತ್ತವೆ. ಹಾಗೆಯೇ, 'ನಮ್ಮ ಮಕ್ಕಳು ಗೆಲ್ಲಬೇಕು' ಎಂದು ಪೋಷಕರು ಹಣ ಸುರಿಯುತ್ತಾರೆ. ಅದರೊಂದಿಗೆ ಕೆಲ ಸಂದರ್ಭಗಳಲ್ಲಿ ತಮ್ಮ ತಂದೆ ತಾಯಿಗಳ ಹೆಸರನ್ನು ಬಂಡವಾಳ ಮಾಡಿಕೊಂಡು ವಿದ್ಯಾರ್ಥಿಗಳು ಸಾಲ ಮಾಡಿ ಚುನಾವಣೆಗೆ ನಿಲ್ಲುವುದು ಇದೆ.
ಸಾಮಾನ್ಯವಾಗಿ ಚುನಾವಣೆಗೆ ನಿಲ್ಲುವ ಅಭ್ಯರ್ಥಿ ಒಂದು ವರ್ಷದಿಂದಲೇ ಆ ಸ್ಥಾನದ ಮೇಲೆ ಕಣ್ಣಿಟ್ಟಿರುತ್ತಾನೆ. ಅದಕ್ಕಾಗಿ ವ್ಯವಸ್ಥಿತವಾದ ಕಾರ್ಯಾಚರಣೆ ಮಾಡುತ್ತಾನೆ. ತನ್ನ ಸುತ್ತ 'ಸಮಾನ ಮನಸ್ಕ' ವಿದ್ಯಾರ್ಥಿಗಳ ಪಟಾಲಾಂ ಕಟ್ಟಿಕೊಳ್ಳುತ್ತಾನೆ. ಇದು ಒಂಥರ ಭಟ್ಟಂಗಿಗಳ ಪಡೆ.
ಇನ್ನು ತರಗತಿ ಪ್ರತಿನಿಧಿಗಳ ಅಧ್ಯಕ್ಷನನ್ನು ಆಯ್ಕೆ ಮಾಡುವ ಕಾಲೇಜುಗಳಲ್ಲಿ ಆತ ತನನ್ನು ಬೆಂಬಲಿಸುವ ವಿದ್ಯಾರ್ಥಿಗಳು ಚುನಾವಣೆಗೆ ನಿಲ್ಲುವಂತೆ ನೋಡಿಕೊಳ್ಳುತ್ತಾನೆ. ಇದರಲ್ಲಿ ತಪ್ಪೇನಿಲ್ಲ, ಆದರೆ ಅವರ ಗೆಲುವಿನ ಸಂಪೂರ್ಣ 'ಜವಾಬ್ದಾರಿ' ತಾನೇ ಹೊರುತ್ತಾನೆ. ಇಲ್ಲೇ ಹಣದ ಚಲಾವಣೆ ಮೇರೆ ಮೀರುವುದು. ಇಲ್ಲ, ಗೆಲ್ಲುವ ಸಾಧ್ಯತೆ ಇರುವ ಅಭ್ಯರ್ಥಿಯನ್ನು ಕೊಂಡುಕೊಳ್ಳುತ್ತಾನೆ. ಒಂದು ವೇಳೆ ತನ್ನ ವಿರೋಧಿ ಪಾಳೆಯದಲ್ಲಿ ಗುರುತಿಸಿಕೊಂಡಿರುವ ವಿದ್ಯಾರ್ಥಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದಾದರೆ ಅವನನ್ನು ಬೆಂಬಲಿಸುವವರನ್ನು ತೃಪ್ತಿ ಪಡಿಸುವ ಕೆಲಸಕ್ಕೆ ಕೈ ಹಾಕುತ್ತಾನೆ. ಇನ್ನು ನೇರ ಚುನಾವಣೆ ನಡೆಯುವ ಕಾಲೇಜುಗಳಲ್ಲಿ ಅಭ್ಯರ್ಥಿಗೆ 'ರಿಸ್ಕ್' ಹೆಚ್ಚಿರುತ್ತದೆ. ಅಂದರೆ 'ಮಾನವ ಸಂಪನ್ಮೂಲ' ಮತ್ತು ಹಣದ ಹೂಡಿಕೆ ಹೆಚ್ಚು ಬೇಕಾಗುತ್ತದೆ. ಅದರೊಂದಿಗೆ ಪ್ರತಿಫಲದ ಗ್ಯಾರಂಟಿ ಇರುವುದಿಲ್ಲ. ಚುನಾವಣೆಯಲ್ಲಿ ಸೋತರೆ ಯಾರ ಕಾಲರ್ ಹಿಡಿಯುವುದು? ಎಂಬ ಸ್ಥಿತಿ. ಅದರೂ ಇಲ್ಲೂ ಹಣ, ಮದಿರೆ, ಪಾರ್ಟಿ ಯಥೇಚ್ಚವಾಗಿ ನಡೆಯುತ್ತದೆ. ಇಲ್ಲಿ ಕೆಲವು 'ಒಪಿನಿಯನ್ ಲೀಡರ್'ಗಳಿಗೆ ವಿಶೇಷ ಮನ್ನಣೆ.
ಅನಂತರ ಚುನಾವಣೆ... ಕಾಲೇಜುಗಳ ಆಡಳಿತ ಮಂಡಳಿ ನಮ್ಮದು ಬಹಳ ವ್ಯವಸ್ಥಿತವಾಗಿ, ಶಿಸ್ತುಬದ್ದವಾಗಿ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ಅನುಗುಣವಾಗಿ ನಡೆಯುವ ಚುನಾವಣೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತವೆ. ಯಾಕೆಂದರೆ ಅವರಿಗೆ ಚುನಾವಣೆ ಶಾಂತಿಯುತವಾಗಿ ನಡೆದರೆ ಸಾಕು. ಉಳಿದ ವಿಷಯಗಳು ಹೇಗಾದರೂ ಪರವಾಗಿಲ್ಲ. ಮತ್ತೇ ಕೆಲ ಸಂದರ್ಭಗಳಲ್ಲಿ ಅವರಿಗೆ ಈ 'ಭೂಗತ ಚಟುವಟಿಕೆ'ಯ ಅರಿವೇ ಇರುವುದಿಲ್ಲ.
ಇವುಗಳ ಒಟ್ಟು ಫಲವಾಗಿ ಬಡ ವಿದ್ಯಾರ್ಥಿಯೊಬ್ಬ ಚುನಾವಣೆಗೆ ನಿಲ್ಲುವಂತಿಲ್ಲ, ನಿಂತು ಗೆಲ್ಲಬೇಕಾದರೆ ಅವನಿಗೆ ಯಾರದದ್ದರೂ ಆರ್ಥಿಕ ಅಥವಾ ಸಂಘಟನೆಗಳ ಬೆಂಬಲ ಬೇಕೇ ಬೇಕು. ಅದರೊಂದಿಗೆ 'ಸಕಲ ಕಲಾ ವಲ್ಲಭ'ರಾಗಿರಬೇಕು. ಇದೇ ನಾಯಕತ್ವ ಗುಣ! ಹಾಗಂತ, ಕಾಲೇಜು ಚುನಾವಣೆ ನಡೆಸದೇ, ಅಂಕದ ಅಧಾರದ ಮೇಲೆ ಅಥವಾ ಇನ್ನೀತರ ಮಾನದಂಡಗಳ ಮೂಲಕ ವಿದ್ಯಾರ್ಥಿ ಪ್ರತಿನಿಧಿಗಳನ್ನು ಆರಿಸುವುದು ಆಕ್ಷಮ್ಯ.ವಿದ್ಯಾರ್ಥಿ ಸಂಘದ ನಾಯಕ ಸ್ಥಾನಕ್ಕೆ ಚುನಾವಣೆಗಳ ಮೂಲಕವೇ ಆಯ್ಕೆ ನಡೆಯಬೇಕು. ಆದರೆ ಈ ಆಯ್ಕೆ ಪ್ರಕ್ರಿಯೆಯಲ್ಲಿ ಬದಲಾವಣೆಯಾಗಬೇಕು. ಯಾವುದೇ ವಿದ್ಯಾರ್ಥಿ ಅನೈತಿಕ ಮಾರ್ಗದಲ್ಲಿ ಚುನಾವಣೆ ಎದುರಿಸುತ್ತಿದ್ದಾನೆ ಅಥವಾ ಎದುರಿಸಿದ್ದಾನೆ ಎಂಬುದು ಸಾಬೀತಾದರೆ ಅವನ ಅಭ್ಯರ್ಥಿತನವನ್ನು ಅನೂರ್ಜಿತಗೊಳಿಸಬೇಕು.
ಕಾಲೇಜು ಚುನಾವಣೆ ಗೆಲ್ಲಲ್ಲು ಹಣ ಚೆಲ್ಲಿದ್ದೇ ಆದರೆ ಅಥವಾ ಆ ಅಭ್ಯರ್ಥಿಯ ಪರವಾಗಿ ಬೇರೆ ಯಾರದರೂ ಆ ಕೆಲಸ ಮಾಡಿದರೆ ಆ ವಿದ್ಯಾರ್ಥಿಯ ನಾಮಪತ್ರ ತಿರಸ್ಕರಿಸಬೇಕು, ಚುನಾವಣೆ ಬಳಿಕ ಈ ವರ್ತನೆ ಕಂಡರೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು.
ಅಭ್ಯರ್ಥಿಗಳಿಗೆ ಪ್ರಚಾರ ನಡೆಸಲು ಒಂದು ನೀತಿ ಸಂಹಿತೆ ರಚಿಸಿಡಬೇಕು, ಆ ಪ್ರಕಾರವೇ ಅವರು ಪ್ರಚಾರ ನಡೆಸಬೇಕು.
ಕಾಲೇಜು ಚುನಾವಣೆ ನಡೆದು ಫಲಿತಾಂಶ ಘೋಷಣೆಯಾದ ಬಳಿಕ ವಿದ್ಯಾರ್ಥಿಗಳು ನಡೆಸುವ ಮೆರವಣಿಗೆ ಮತ್ತು ಸುಡುಮದ್ದು ಪ್ರದರ್ಶನಗಳಿಗೆ ಸಂಪೂರ್ಣ ನಿಷೇಧ ಹೇರಬೇಕು.
ಈ ಬಗ್ಗೆ ಕಾಲೇಜುಗಳ ಅಡಳಿತ ಮಂಡಳಿ ಮತ್ತು ಸರಕಾರ ಗಂಭೀರವಾಗಿ ಯೋಚಿಸಬೇಕು. ಕಾಲೇಜು ಚುನಾವಣೆಗಳನ್ನು ನಡೆಸುವ ಜವಾಬ್ಧಾರಿಯನ್ನು ಚುನಾವಣಾ ಆಯೋಗಕ್ಕೆ ನೀಡಬೇಕು ಅಥವಾ ಕಾಲೇಜುಗಳು ಇಡೀ ಚುನಾವಣ ಪ್ರಕಿಯೆಯ ಮೇಲೆಯೇ ನಿಗಾವಿಡುವ ಕೆಲಸ ಮಾಡಬೇಕು.
ಯಾಕೆಂದರೆ ಪ್ರಜಾಪ್ರಭುತ್ವದ ಯಶಸ್ಸಿನ ನಿರೀಕ್ಷೆಗಳು ಹುಟ್ಟ ಬೇಕಾದ ಜಾಗದಲ್ಲೇ ಭ್ರಮನಿರಶನವಾದರೆ ಪ್ರಜಾಪ್ರಭುತ್ವದ ಆಯುಷ್ಯಕ್ಕೆ ಗೆದ್ದಲು ಹಿಡಿದಂತೆ. (ವಿಜಯ ಕರ್ನಾಟಕದಲ್ಲಿ ಪ್ರಕಟಿತ ಲೇಖನ)

Thursday, July 23, 2009

ಆ ಸ್ವಾತಂತ್ರ್ಯ ಉಳಿಸಿಕೊಟ್ಟವರನ್ನು ಕೂಡ ನೆನಪಿಸಿಕೊಳ್ಳವುದು ಮುಖ್ಯವಲ್ಲವೇ?

ಅವರು ಬೇರೆಯವರಿಗಾಗಿ ಮರಣವನ್ನಪ್ಪಿದ್ದಲ್ಲ, ತಮ್ಮ ಸ್ವಂತಕ್ಕಂತೂ ಅಲ್ಲವೇ ಅಲ್ಲ. ಆದರೆ ಎಲ್ಲರಿಗಾಗಿ, ಅದರಲ್ಲೂ ನಮಗಾಗಿ! ಭಾರತೀಯರೆಂದು ಕರೆಸಿಕೊಳ್ಳುವ ನಮ್ಮೆಲ್ಲರಿಗಾಗಿ!
ನಾವು ಪಾಕಿಸ್ತಾನದೊಂದಿಗೆ ಮೂರು ಯುದ್ಧ ಮಾಡಿದೇವು, ಮೂರರಲ್ಲೂ ಗೆದ್ದೆವು. ಚೀನಾದೊಂದಿಗೆ ನಡೆದ ಏಕಮಾತ್ರ ಸಮರದಲ್ಲಿ ಹೀನಾತಿಹೀನವಾಗಿ ಸೋತೆವು. ಚೀನಾ, ಜಮ್ಮು ಕಾಶ್ಮೀರದ ಮೇಲೆ ದಾಳಿ ನಡೆಸುತ್ತಿದ್ದಾಗ, 'ಅಲ್ಲಿ ಒಂದು ಹುಲ್ಲು ಕೂಡ ಬೆಳೆಯುವುದಿಲ್ಲ ಅದು ನಮಗ್ಯಾಕೆ? ಎಂದು ಆಗಿನ ಪ್ರಧಾನಿ ಜವಾಹರ್ ಲಾಲ್ ನೆಹರು ಪ್ರಶ್ನಿಸುತ್ತಾರೆ. ಆದಕ್ಕೆ ಆಗಿನ ಸಂಸದರೊಬ್ಬರು, 'ನಿಮ್ಮ ತಲೆಯಲ್ಲೂ ಕೂಡ ಒಂದೂ ಕೂದಲು ಬೆಳೆಯುವುದಿಲ್ಲ ಅದು ನಿಮಗ್ಯಾಕೆ'? ಎಂದು ಕೇಳುತ್ತಾರೆ. ನೆಹರೂ ಅ ಕ್ಷಣ ಪೆಚ್ಚಾಗುತ್ತಾರೆ. ಆದರೆ ನೆಹರುರಲ್ಲಿದ್ದ ಮನಸ್ಥಿತಿ ಮಾತ್ರ ಇಂದಿಗೂ ನಮ್ಮಿಂದ ದೂರವಾಗಿಲ್ಲ.

ತಾವಾಗಿ ಯಾರ ಮೇಲು ಯುದ್ಧ ಸಾರದ ಜಗತ್ತಿನ ಏಕೈಕ ದೇಶ ನಮ್ಮದು, ಅದೇ ರೀತಿ ಬ್ರಿಟಿಷರನ್ನು ಹೊರತುಪಡಿಸಿ ಬೇರೆ ಯಾವ ದಾಳಿಕೋರರ ಮೇಲೂ ಸಂಘಟಿತವಾಗಿ ಹೋರಾಡದವರು ಕೂಡ ನಾವೇ! ಆದರೆ ನಾವು ಸ್ವಾತಂತ್ರ್ಯಗಳಿಸಿದ ಬಳಿಕವೇ ನಾಲ್ಕು ಪ್ರಮುಖ ಯುದ್ಧಗಳನ್ನು ಎದುರಿಸಬೇಕಾಯಿತು. ಈ ನಾಲ್ಕು ಸಂದರ್ಭದಲ್ಲಿ ದೇಶಕ್ಕೆ ದೇಶವೇ ಒಂದಾಗಿತ್ತು.

ಈ ಎಲ್ಲ ಸಂದರ್ಭದಲ್ಲೂ ದೇಶದ ಸಾರ್ವಭೌಮತೆ ಉಳಿಸಿಕೊಟ್ಟದ್ದು ಮತ್ತು ಮುಂದೆಯೂ ಉಳಿಸಿಕೊಡುವುದು ನಮ್ಮ ಸೈನಿಕರೇ. ತೀರಾ ಇತ್ತೀಚಿಗೆ ನಡೆದ 1999ರ ಕಾರ್ಗಿಲ್ ಕದನ ಅಂದರೆ ಮಿಲಿಟರಿ ಭಾಷೆಯಲ್ಲಿ 'ಅಪರೇಷನ್ ವಿಜಯ' ಕಾರ್ಯಚರಣೆಯಲ್ಲಿ 533 ವೀರಯೋಧರನ್ನು ನಾವು ಕಳೆದುಕೊಂಡೆವು. ಆದರೆ ಇಂತಹ ಒಬ್ಬನೇ ಒಬ್ಬ ವೀರಯೋಧನ ಸಾಹಸಗಾಥೆಯ ಸಮಗ್ರ ಪರಿಚಯ ನಮ್ಮ ಪಾಠ ಪುಸ್ತಕಗಳ ಮೂಲಕ ನಮಗಾಗಿಲ್ಲ.

ಲೆಪ್ಟಿನೆಂಟ್ ಸೌರವ್ ಕಾಲಿಯಾ ತನ್ನ ಎಲ್. ಎಮ್. ಜಿ ಬಂದೂಕಿನಿಂದ 20 ಉಗ್ರರನ್ನು ಸದೆಬಡಿದ ಮೇಲೆಯೆ ತಾನು ಇತಿಹಾಸ ಪುಟ ಸೇರಿದ್ದು. ಹಾಗೇಯೇ ನಾಯ್ಕ್ ಅಂಗ್ರೇಜ್ ಸಿಂಗ್, ಎದೆಗೆ ಗುಂಡು ತಿಂದು ಅಸ್ಪತ್ರೆಯಲ್ಲಿ ಮಲಗಿದ್ದಾಗ, ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿಯಾಗುತ್ತಾರೆ. ಆಗ ಆಂಗ್ರೇಜ್ ಸಿಂಗ್, "ಸಾಬ್, ನಾವೆಲ್ಲ ಎದೆಗೆ ಗುಂಡು ತಿಂದಿದ್ದೇವೆ ಬೆನ್ನಿಗಲ್ಲ, ಅಂತ ಎಲ್ಲರಿಗೂ ಹೇಳಿ" ಅಂದಾಗ ಎಲ್ಲರ ಕಣ್ಣಾಲಿಗಳು ತುಂಬಿ ಬಂದವಂತೆ.

ಹೀಗೆ ಈ ಯುದ್ಧಗಳಲ್ಲಿ ಮಡಿದ, ದುಡಿದ ಪ್ರತಿಯೊಬ್ಬ ಸೈನಿಕನೂ ಒಂದೊಂದು ಪುಸ್ತಕವಾಗುವಷ್ಟು ಅನುಭವ ಹೊತ್ತುಕೊಂಡಿದ್ದಾರೆ. ಆದರೆ ಇಂತಹವರ ಬಗ್ಗೆ ನಮ್ಮ ಪಠ್ಯ ಪುಸ್ತಕಗಳಲ್ಲಿ ಎಲ್ಲದರೂ ಉಲ್ಲೇಖವಿದೇಯೇ? ಕೆಲವು ರಾಷ್ಟ್ರ ನಾಯಕರ ಕಥೆಗಳನ್ನು ಅಕ್ಷರ ಜೋಡಿಸಿ ಓದಲಾರಂಭಿಸಿದಂದಿನಿಂದ ನಾವು ಓದುತ್ತಿದ್ದೇವೆ. ಇದರಿಂದ ನಮ್ಮಲ್ಲಿ ಅಪರಿಮಿತ ದೇಶಪ್ರೇಮ ಬೆಳೆದಿದೆ ಎನ್ನುವಂತಿಲ್ಲ. ಯಾಕೆಂದರೆ ಅವರ ಹೋರಾಟ ಬೇರೊಂದು ದೇಶ ನಮ್ಮ ಮೇಲೆ ದಾಳಿ ನಡೆಸಿದಾಗ ಅಥವಾ ನಡೆಸುತ್ತಿರುವಾಗ ಪ್ರಯೋಜನಕ್ಕೆ ಬರುವುದಿಲ್ಲ. ಆದರೆ ಈಗ ಇರುವ ಸಂಭವ್ಯಯತೆಗಳು ಇಂತದ್ದೇ.

ಆಗ ನಮ್ಮ ಸಹಾಯಕ್ಕೇ ಬರುವುದು ನಮ್ಮ ಸೈನಿಕರ ಹೋರಾಟ. ಇಂದು ದೇಶಕ್ಕೆ ಬೇಕಾಗಿರುವುದು ಸೈನಿಕರ ಹಾದಿಯನ್ನು ತುಳಿಯಲು ಸಿದ್ದವಾಗಿರುವ ಮನಸ್ಸುಗಳು. ಇದರರ್ಥ, ಎಲ್ಲಕ್ಕೂ ರಕ್ತಪಾತವೇ ಮದ್ದು, ಅಥವಾ ಎಲ್ಲರೂ ಸೈನ್ಯ ಸೇರಬೇಕೆಂದೂ ಅಲ್ಲ ಆದರೆ ಆ ಬಗ್ಗೆ ಗೌರವ ಮತ್ತು ದೇಶಕ್ಕಾಗಿ ಹೋರಾಡುವ ಮತ್ತು ದುಡಿಯುವ ಆಯ್ಕೆಯನ್ನು ಮುಕ್ತವಾಗಿಟ್ಟು ಕೊಂಡವರು ಬೇಕು. ಅಂತಹವರು ಸೃಷ್ಟಿಯಾಗಬೇಕಾದರೆ ನಮ್ಮ ಪಠ್ಯಗಳು ಕೂಡ ಅದಕ್ಕೆ ಪೂರಕವಾಗಿರಬೇಕು.

ಆದರೆ ನಮ್ಮ ಪಠ್ಯ ಪುಸ್ತಕಗಳನ್ನು ಓದುವವನಲ್ಲಿ ಒಂದಿಷ್ಟು ದೇಶಪ್ರೇಮವಿದ್ದರೂ ಅದು ಬತ್ತಿ ಹೋಗಬಹುದು. ಅದು ಅಷ್ಟು ನಿಸ್ತೇಜ ಮತ್ತು ಚೈತನ್ಯ ಹೀನ ಒಟ್ಟಿನಲ್ಲಿ ಜಡ. ಅದು ಸೃಷ್ಟಿಸುತ್ತೀರುವ ಜನಾಂಗ ಕೂಡ ಅಂತದ್ದೇ!

ಪಾಠ ಪುಸ್ತಕಗಳಲ್ಲಿ ಭಾವನೆಗಳಿಗೆ ಹೆಚ್ಚು ಪ್ರಾಶಸ್ತ್ಯ ಇರಬಾರದು, ಒಪ್ಪಿಕೊಳ್ಳೋಣ. ಆದರೆ ಒಂದು ಸಮಾಜ ಪ್ರೇರಣೆ ಪಡೆಯುವ ಸಂಗತಿಗಳೇ ಇಲ್ಲ ಎಂದಾದರೇ ಅದು ದೇಶದ ಸಮಗ್ರತೆಯನ್ನು ಎತ್ತಿ ಹಿಡಿಯುವಲ್ಲಿ ಸಹಕಾರಿ ಆಗಬಲ್ಲುದೇ? ಈ ಕೆಲಸ ಮಾಡದಿದ್ದ ಪಾಠ ಪುಸ್ತಕವಿದ್ದು ಪ್ರಯೋಜನವೇನು? ನಮ್ಮ ಸಮಾಜ ವಿಜ್ಞಾನ ಪುಸ್ತಕಗಳಿಗೆ ಕಾಣುವ ದೇಶಪ್ರೇಮವೆಂದರೆ ಸ್ವತಂತ್ರ ಹೋರಾಟಗಾರರದ್ದು ಮಾತ್ರ. ಇತಿಹಾಸದಲ್ಲಂತೂ ರಾಜ ಮಹಾರಾಜರು ಮತ್ತು ಅವರ ಆಡಳಿತ, ಮಾಡಿದ ಯುದ್ಧ ಮತ್ತು ಒಂದಿಷ್ಟು ಅವರ ಸಾಧನೆ ಹೇಳಿ, ಮಕ್ಕಳನ್ನು ಪರೀಕ್ಷೆಯಲ್ಲಿ ಪಾಸ್ ಮಾಡಿಸಿ 'ಧನ್ಯೋಸ್ಮಿ' ಎನಿಸಿಕೊಳ್ಳುತ್ತಿದೇಯೆ ಹೊರತು ಅದರಿಂದ ಇಂದಿನ ಪೀಳಿಗೆ ಮತ್ತು ದೇಶಕ್ಕೇ ಏನು ಲಾಭವಿದೆ? ನನಗಂತೂ ಗೊತ್ತಾಗುತ್ತಿಲ್ಲ.

ಇತಿಹಾಸದ ಪರಿಚಯ ನಮಗೆ ಇರಬೇಕು, ಆದರೆ ಅದು ರಾಜ ಮಹಾರಾಜರ ಚರಿತ್ರೆಯಾಗಿ ಅಲ್ಲ. ಈ ಬಗ್ಗೇ ಇನ್ನೋಮ್ಮೆ ಚರ್ಚೆ ಮಾಡೋಣ.

ಸ್ವಾತಂತ್ರ್ಯೋತ್ತರದ ಮಹಾನ್ ಸೇನಾನಿಗಳಾದ ಜನರಲ್ ಕಾರ್ಯಪ್ಪ, ಮಾಣಿಕ್ ಷಾ... ಹೀಗೆ ಸಾವಿರಾರು ಸೈನಿಕರು ನಮ್ಮ ಪಾಠ ಪುಸ್ತಕಗಳಲ್ಲಿ ಹೆಚ್ಚೆಂದರೆ ಗೆರೆಯೊಂದರಲ್ಲಿ ಸೆರೆಯಾಗಿ ಮರೆಯಾಗಿ ಹೋಗುವ ಪರಿ ನಿಜಕ್ಕೂ ರೇಜಿಗೆ ಹುಟ್ಟಿಸುತ್ತದೆ.

ದೇಶಕ್ಕೆ ಸ್ವಾತಂತ್ರ್ಯ ದೊರೆಯಲು ಕಾರಣರಾದವರನ್ನು ನೆನಪಿಸಿಕೊಳ್ಳುವುದು ಮುಖ್ಯವೇ, ಆದರೆ ಆ ಸ್ವಾತಂತ್ರ್ಯ ಉಳಿಸಿಕೊಟ್ಟವರನ್ನು ಕೂಡ ನೆನಪಿಸಿಕೊಳ್ಳವುದು ಮುಖ್ಯವಲ್ಲವೇ?

ಈ ವರ್ಷ ಜುಲೈ 26ರಂದು 'ವಿಜಯ ದಿನ' ಅಥವಾ 'ಅಪರೇಷನ್ ವಿಜಯ'ದ ದಶಮಾನೋತ್ಸವವನ್ನು ರಾಜಕೀಯದ ಸೋಂಕಿಲ್ಲದೆ, ಆರ್ಥಪೂರ್ಣವಾಗಿ ಆಚರಿಸುವ ಶಕ್ತಿ, ಬುದ್ದಿ, ಮಾನಸಿಕ ಆರೋಗ್ಯ ನಮ್ಮ ಸರಕಾರಕ್ಕೆ ಬರಲಿ, ಸಿಗಲಿ ಎಂದು ಸದ್ಯ ಪ್ರಾರ್ಥಿಸುತ್ತಿದ್ದೇನೆ.

ಅಮೇಲೆ ಉಳಿದದ್ದು!

ಜ್ಯೆ ಜವಾನ್, ಜ್ಯೆ ಕಿಸಾನ್, ಜ್ಯೆ ವಿಜ್ಞಾನ್!

Tuesday, June 30, 2009

ಕುದುರೆ ನಿಂತರೆ, ಇನ್ನೇನು ಓಡುತ್ತೆ?

ಬೆಂಗಳೂರಿನ್ನು ರೇಸ್ ಕುದುರೆಗಳ ಕೆನೆಯುವಿಕೆ ಮತ್ತು ಖರಪುಟದಿಂದ ಮುಕ್ತವಾಗುವುದು ನಿಶ್ಚಿತ. ನಗರದ ಕೇಂದ್ರ ಭಾಗದಲ್ಲಿದ್ದ ರೇಸ್ ಕೋರ್ಸ್ ನ್ನು ಸ್ಥಳಾಂತರಿಸಲು ಸರಕಾರ ಗಟ್ಟಿ ನಿರ್ಧಾರ ಕೈಗೊಂಡಿದೆ. ಇದರೊಂದಿಗೆ ಸುಮಾರು 90 ವರ್ಷಗಳ ಒಂದು ಪರಂಪರೆ ಬೆಂಗಳೂರಿನಿಂದ ಕಳಚಿಕೊಳ್ಳಲಿದೆ. ಇದು ಸರಕಾರದ ಪಾಲಿಗೆ ಅನಿವಾರ್ಯ, ಅತ್ಯಗತ್ಯ ಎರಡೂ ಹೌದು.
ಇಲ್ಲೊಂದು ಉದ್ಯಾನ ಬರಲಿದೆ, ಬಸ್ ನಿಲ್ದಾಣ ಆಗಲಿದೆ, ವೀಕ್ಷಣಾ ಗೋಪುರ ನಿರ್ಮಾಣವಾಗಲಿದೆ, ಮೃಗಾಲಯವೂ ಆಗಬಹುದು ಎಂಬಿತ್ಯಾದಿ ಗಾಳಿ ಮಾತುಗಳು ಕೇಳಿ ಬರುತ್ತಿವೆ. ಒಟ್ಟಾರೆ ಇದೊಂದು ರೇಸ್ ಕೋರ್ಸ್ ಆಗಿದ್ದ ಸಂದರ್ಭದಲ್ಲಿ ಆದುದಕ್ಕಿಂತ ಹೆಚ್ಚಿನ ಚರ್ಚೆಗಳು ಇದೀಗ ಆರಂಭವಾಗಿದೆ.
ಹೌದು, ಚರ್ಚೆಗೆ ಇದು ಸಕಾಲ. ಈ ಹಿಂದೆ ಕೇಂದ್ರ ಕಾರಾಗೃಹ ಬದಲಾದಗಲೂ ಇದೇ ಮಾದರಿ ಚರ್ಚೆಗಳು ಕೇಳಿ ಬಂದಿದ್ದವು. ಜನ ಇದೇ ರೀತಿ ಮಾತನಾಡಿಕೊಳ್ಳುತ್ತಿದ್ದರು. ಆದರೆ ಕೊನೆಗೆ ಆದದ್ದು ಇವುಗಳಲ್ಲಿ ಕೆಲವು ಮಾತ್ರ. ಅದೇ ಮಾದರಿ ಚರ್ಚೆ ಈಗ ಆರಂಭವಾಗಿದೆ.
ಬಹುಶಃ ಕುದುರೆ ರೇಸ್ ಗಾಗ ನಗರದ ಹೃದಯಭಾಗದಲ್ಲಿ ನೂರಾರು ಕೋಟಿ ರೂ. ಬೆಲೆಬಾಳುವ 85 ಎಕರೆ ಜಾಗ ಬಳಕೆಯಾಗುತ್ತಿರುವುದು ಜಗತ್ತಿನ ಯಾವುದೇ ಭಾಗದಲ್ಲೂ ಕಂಡುಬರಲಿಕ್ಕಿಲ್ಲ.
ರೇಸ್ ಕೋರ್ಸ್ ಅದು ಈಗೀರುವ ಜಾಗದಿಂದ ಸ್ಥಳಾಂತರ ಮಾಡಿದ ತಕ್ಷಣ ಸರಕಾರದ ಕೆಲಸ ಮುಗಿಯಿತು ಎಂದಲ್ಲ. ಸರಕಾರದ ನಿಜಬಣ್ಣ/ ಯೊಗ್ಯತೆ ಗೊತ್ತಾಗುವುದು ಸರಕಾರ ಮುಂದೆ ಆ ಜಾಗವನ್ನು ಯಾವ ರೀತಿ ಬಳಸಿಕೊಳ್ಳುತ್ತದೆ ಎಂಬುದರ ಮೇಲೆ.
ಆದರೆ ನಮ್ಮ ಸರಕಾರದ ಬಳಿ ಈ ಅಮೂಲ್ಯ ಪ್ರದೇಶವನ್ನು ಯಾವ ರೀತಿ ಅಭಿವೃದ್ಧಿ ಮಾಡಬೇಕು ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಯೋಚನೆಯಾಗಲಿ, ಯೋಜನೆಯಾಗಲಿ ಇಲ್ಲ.
ಬೆಂಗಳೂರು ಕಾಂಕ್ರಿಟ್ ಕಾಡಾಗಿದೆ. ತುಂಡು ಭೂಮಿಯನ್ನು ಬಿಡದಂತೆ ರಿಯಲ್ ಎಸ್ಟೇಟ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಮಾಲ್ ಗಳು ಮತ್ತಿತ್ತರ ವಾಣಿಜ್ಯ ಬಳಕೆಯ ಕಟ್ಟಡಗಳು ಎಲ್ಲ ಮಿತಿಯನ್ನು ಮೀರಿ ನಿರ್ಮಾಣಗೊಳ್ಳುತ್ತಿವೆ. ಅದರೊಂದಿಗೆ ಕೆಳ ರಸ್ತೆ, ಮೇಲು ರಸ್ತೆ. ಮೆಟ್ರೋ ರೈಲಿಗಾಗಿ ಸಾಕಷ್ಟು ಮರಗಳ ಮಾರಣ ಹೋಮ ನಡೆದಿದೆ. ಇದರಿಂದ ಬೆಂಗಳೂರಿಗಿರುವ 'ಹಸಿರು ನಗರಿ' ಎಂಬ ಪಟ್ಟಕ್ಕೂ ಧಕ್ಕೆ ಬಂದಿದೆ. ಅದ್ದರಿಂದ ಈ ಸ್ಥಳದಲ್ಲಿ ಉದ್ಯಾನವನ ನಿರ್ಮಿಸುವುದೇ ಸೂಕ್ತ ಎಂದು ಬಹುಪಾಲು ಜನರ ಅಭಿಪ್ರಾಯ.
'ಇಂದು ಬೆಂಗಳೂರಿನ ಟ್ರೇಡ್ ಮಾರ್ಕ್ ನಂತಿರುವುದು ಲಾಲ್ ಭಾಗ್ ಮತ್ತು ಕಬ್ಬನ್ ಪಾರ್ಕ್ ಉದ್ಯಾನ ವನಗಳು. ಇವುಗಳೊಂದಿಗೆ ಅನೇಕ ಚಿಕ್ಕ ಪುಟ್ಟ ಉದ್ಯಾನವನಗಳಿವೆ. ಇಲ್ಲಿ ಉದ್ಯಾನ ನಿರ್ಮಿಸಿದ್ದೆ ಆದರೆ ಇದನ್ನು ಲಾಲ್ ಭಾಗ್. ಕಬ್ಬನ್ ಪಾರ್ಕ್ ಗಳ ಮಟ್ಟಕ್ಕೆ ಅಥವಾ ಅವುಗಳನ್ನು ಮೀರಿಸುವಂತೆ ಮಾಡಬಹುದು' ಎನ್ನುತ್ತಾರೆ ವಿದ್ಯಾನಗರದ ಶ್ರೀಧರ್ ದೀಕ್ಷಿತ್.
ಉದ್ಯಾನವನ ಎಂದೊಡನೇ 50 ಮರ, 25 ಕಲ್ಲು ಬೆಂಚುಹಾಕಿ ಪ್ರೇಮಿಗಳಿಗೆ, ಜಾಗಿಂಗ್, ವಾಕಿಂಗ್ ಮಾಡುವವರಿಗೆ ಸೀಮಿತ ಮಾಡುವುದರ ಬದಲು ನಾನಾ ಔಷಧೀಯ ಗುಣವಿರುವ ಗಿಡಮರಗಳನ್ನು ಜೊತೆಜೊತೆಗೆ ಅಪರೂಪದ ವಿನಾಶದಂಚಿನಲ್ಲಿರುವ ಮತ್ತು ಇನ್ನಿತರ ಕಾರಣಗಳಿಗಾಗಿ ಉಪಯುಕ್ತವಾಗಿರುವ ಗಿಡಮರಗಳನ್ನು ಬೆಳೆಸಿದ್ದೆ ಆದಲ್ಲಿ ಇದು ಜಗತ್ತಿನ ಮಹತ್ವದ ಉದ್ಯಾನವೆಂದು ಕರೆಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಇದು ಪರಿಸರ ಉಳಿಸುವಿಕೆಗಿನ ಸರಕಾರದ ಬದ್ದತೆಯನ್ನು ಕೂಡ ಎತ್ತಿಹಿಡಿಯುತ್ತದೆ. ಹೊಗೆ. ಧೂಳು ಮುಂತಾದ ಕಲ್ಮಶಗಳನ್ನೆ ಸೇವಿಸಿ ಸೇವಿಸಿ ಜಡ್ಡುಗೊಂಡಿರುವ ಬೆಂಗಳೂರಿಗರ ಮೂಗಿಗೆ, ಕಣ್ಣಿಗೆ ಸ್ವಲ್ಪ ಮಟ್ಟಿನ ಆಹ್ಲಾದತೆಯನ್ನು ನೀಡಬಲ್ಲದು ಎನ್ನುತ್ತಾರೆ ಅವರು.
ಇಲ್ಲೊಂದು ಮೃಗಾಲಯ ನಿರ್ಮಿಸುವುದರ ಬಗ್ಗೆಯೂ ಸರಕಾರ ಗಂಭೀರವಾಗಿ ಚಿಂತಿಸಬಹುದು. ಬೆಂಗಳೂರಿನಲ್ಲಿ ಎಲ್ಲವೂ ಇದೆ. ಆದರೆ ಮೃಗಾಲಯವೊಂದಿಲ್ಲ. ಈ ಸ್ಥಳ ಬಿಟ್ಟರೆ ಮೃಗಾಲಯ ನಿರ್ಮಿಸಲು ಬೇರೆ ಪ್ರಶಸ್ತ ಜಾಗ ಇಷ್ಟು ಸುಲಭವಾಗಿ ದೊರಕುವುದು ಅನುಮಾನ. ಮೃಗಾಲಯ ನಿರ್ಮಿಸಿದ್ದೆ ಆದರೆ ಇದು ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗುವುದರಲ್ಲಿ ಅನುಮಾನವೇ ಇಲ್ಲ ಎಂಬುದು ವಿಜಯನಗರದ ವೆಂಕಟೇಶ್ ಗೌಡರ ಅಭಿಪ್ರಾಯ.
ಆದರೆ ಗೋವಿಂದರಾಜನಗರದ ಶ್ರೀನಿವಾಸ್ ಪ್ರಕಾರ, ಇಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಸರಕಾರ ಯೋಚಿಸುವುದು ಉತ್ತಮ. ನಗರದ ದರ್ಶನ ಮಾಡಿಸಲು ಇಲ್ಲೊಂದು ವೀಕ್ಷಣ ಗೋಪುರ ರಚಿಸಬಹುದು. ಇದರಿಂದ ಬೆಂಗಳೂರಿಗರಿಗೆಯೇ ಅಪರಿಚಿತವಾಗುತ್ತಿರುವ ನಗರವನ್ನು ಪರಿಚಯ ಮಾಡಿಕೊಳ್ಳಬಹುದು.
ಈ ಮೂರು ಸಾಧ್ಯತೆಗಳನ್ನು ಒಟ್ಟಿಗೆ ಸಾಕರಗೊಳಿಸಲು ಸಾಧ್ಯವಿದೆ ಕೂಡ.
ನಗರದ ದಟ್ಟಣೆಯ ನಡುವೆ ನಿಲುಗಡೆಗೆ ಎಲ್ಲೂ ತಾಣವೇ ಇಲ್ಲದಂತಾಗಿದೆ. ಅದ್ದರಿಂದ ಈ ಸ್ಥಳವನ್ನು ವಾಹನ ನಿಲುಗಡೆ ತಾಣವನ್ನಾಗಿ ಬಳಸಿಕೊಳ್ಳಬಹುದು. ಹಾಗಂತ ಇದನ್ನು ಸಂಪೂರ್ಣ ನಿಲುಗಡೆಗೂ ಬಳಸಿಕೊಳ್ಳಲು ಆಗದು. ಕಾರಣ ಇಷ್ಟು ವಿಶಾಲ ಸ್ಥಳದಲ್ಲಿ ನಿಲ್ಲಿಸಬಹುದಾದಷ್ಟು ವಾಹನ ಇತ್ತ ಬರುವುದೂ ಇಲ್ಲ. ಒಂದಿಷ್ಟು ಜಾಗ ಇದಕ್ಕಾಗಿ ಬಳಸಿಕೊಳ್ಳಬಹುದು ಎಂಬ ಸಲಹೆ ನೀಡುತ್ತಾರೆ ವಸಂತನಗರದದ ಶೇಖ್ ಅಬ್ದುಲ್ ರಶೀದ್.
ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬಸ್ ಗಳು ತುಂಬಿಕೊಂಡು ಕೆಲವೊಮ್ಮೇ ಇಡೀ ಸಂಚಾರಿ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲ ಆಗಿ ಬಿಡುತ್ತದೆ. ಅದ್ದರಿಂದ ಅಲ್ಲಿಂದ ಒಂದಿಷ್ಟು ಬಸ್ ಗಳನ್ನು ಇಲ್ಲಿಗೆ ವರ್ಗಾಯಿಸಿ ಇಲ್ಲಿಂದಲೆ ಸಾಗುವಂತೆ ಮಾಡಬಹುದು ಎಂಬುದು ಶೇಷಾದ್ರಿಪುರದ ನಾಗರಾಜ್ ಅಭಿಪ್ರಾಯ.
ಒಟ್ಟಿನಲ್ಲಿ ಬೆಂಗಳೂರಿನ ಮುಂದಿನ ಬೆಳವಣಿಗೆಯಲ್ಲಿ ಅತ್ಯಂತ ಉಪಯುಕ್ತ ಪಾತ್ರ ವಹಿಸಲಿರುವ ಈ ಜಾಗ ಮತ್ತೊಂದು ಸಮಸ್ಯೆಯಾಗುವ ಬದಲು ಇರುವ ಸಮಸ್ಯೆಗೆ ಪರಿಹಾರವಾಗಲಿ ಎಂಬುದೇ ಬಹುಪಾಲು ಜನರ ಆಶಯ. ಸರಕಾರ ಕೂಡ ಈ ನಿಟ್ಟಿನಲ್ಲಿ ಯೋಚಿಸಲಿ.

Tuesday, June 23, 2009

ಬಿಜೆಪಿ ನಾಯಕರು ಕಥೆ ಹೇಳುತ್ತ ಕೂರಬೇಕಾದೀತು, ಎಚ್ಚರ!


ಬಿಜೆಪಿ ಕಳೆದ ಲೋಕಸಭೆಯಲ್ಲಿ ಇಷ್ಟು ಹೀನಾಯ ಪ್ರದರ್ಶನ ನೀಡಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಅದರೆ ಫಲಿತಾಂಶ ಪ್ರಕಟವಾದೊಡನೆ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದದ್ದು ನಿರೀಕ್ಷಿತವಾಗಿತ್ತು. ವಾಸ್ತವವಾಗಿ ಚುನಾವಣಾಪೂರ್ವದಲ್ಲೇ ಪಕ್ಷದಲ್ಲಿ 'ಎಲ್ಲವೂ ನೆಟ್ಟಗಿರ ಆದರೂ ನಾವೆಲ್ಲ ಒಂದೇ ಎಂಬ ಮುಖವಾಡತೊಟ್ಟು ಪಕ್ಷ ಚುನಾವಣೆ ಎದುರಿಸಿತ್ತು.

ಭಿನ್ನಮತ, ಬಂಡಾಯ ಮತ್ತು ಪಕ್ಷದಿಂದ ಹೊರಹೋಗುವುದು, ಹೊರಹಾಕುವುದು ಭಾರತೀಯ ರಾಜಕಾರಣಕ್ಕೆ ತೀರಾ ಪರಿಚಿತ ಸಂಗತಿ. ದೇಶದ ಜನರಿಗೆ ಇದರಲ್ಲೇನು ಹೊಸದು ಕಾಣಿಸೋದಿಲ್ಲ. ಆದರೆ ಬಿಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆಗಳು ನಮ್ಮ ರಾಜಕೀಯ ವ್ಯವಸ್ಢೆಯಲ್ಲಿ ಒಂದು ಅಪರಿಚಿತ ವಾತವರಣ ಸೃಷ್ಟಿಸಿಬಿಟ್ಟಿದೆ. 'ಪಾರ್ಟಿ ವಿತ್ ಡಿಫರೆನ್ಸ್' ಎಂದು ಬೀಗುತ್ತಿದ್ದವರು 'ಡಿಫರೆನ್ಸ್ ಇನ್ ಪಾರ್ಟಿ’ಯಿಂದ ನರಳುತ್ತಿದ್ದಾರೆ.

ಭಿನ್ನಮತ ಬಿಜೆಪಿಗೆ ಹೊಸದಲ್ಲ. ವಾಜಪೇಯಿ ಮತ್ತು ಅಡ್ವಾಣಿ ಅದೇಷ್ಟೆ ಅತ್ಮೀಯರಾಗಿದ್ದರೂ ಕೂಡ ಪಕ್ಷದಲ್ಲಿ ಹಿಂದಿನಿಂದಲೂ ವಾಜಪೇಯಿ ಬಣ ಮತ್ತು ಅಡ್ವಾಣಿ ಬಣ ಎಂಬ 'ಬಣ ಸಂಸ್ಕ್ರತಿ' ಗುಪ್ತಗಾಮಿನಿಯಾಗಿ ಹರಿಯುತ್ತಲೆ ಇತ್ತು. ಆದರೆ ಅದು ಎಂದಿಗೂ ಭಿನ್ನಮತದ ಸ್ವರೂಪ ಪಡೆದಿರಲಿಲ್ಲ. ಬಿಜೆಪಿ ನೇತೃತ್ವದ ಎನ್ ಡಿಎ ಕೇಂದ್ರದಲ್ಲಿ 2004ರಲ್ಲಿ ಅಧಿಕಾರ ಕಳೆದುಕೊಂಡದ್ದೆ ತಡ ಭಿನ್ನಮತದ ಗೆದ್ದಲು ಪಕ್ಷವನ್ನು ಕೊರೆಯುತ್ತಲೆ ಬಂದಿತ್ತು. ಈ ಗೆದ್ದಲು ಪಕ್ಷದ ಎಲ್ಲೊ ಹುಟ್ಟಿಕೊಂಡಿರಲಿಲ್ಲ ಬಿಜೆಪಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಯಕರಲ್ಲಿ ಮತ್ತು ಅವರಿಂದಲೇ ಹುಟ್ಟಿಕೊಂಡಿತ್ತು. ಇದು ಉಮಾಭಾರತಿ, ಕಲ್ಯಾಣ್ ಸಿಂಗ್, ಗೋವಿಂದಾಚಾರ್ಯ ಮುಂತಾದ ಮೂಂಚೂಣಿ ನಾಯಕರು ಪಕ್ಷದಿಂದ ಹೊರ ಹೋಗುವಂತೆ ಮಾಡಿತ್ತು. ಇದರಿಂದ ಪಕ್ಷಕ್ಕೆ ನೇರವಾದ ಹೊಡೆತ ಬೀಳಲಿಲ್ಲ ಅದರೆ ಪಕ್ಷದಲ್ಲಿ ಕೆಲಸಕ್ಕೆ ಬಾರದ ವ್ಯಕ್ತಿಗಳು ಅಥವಾ ಯಾರ್‍ಯಾರೋ ಉನ್ನತ ಹುದ್ದೆ ಅಲಂಕರಿಸಲಾಂಭಿಸಿದರು. ಇವತ್ತಿನ ಎಲ್ಲಾ ಅಸಮಧಾನಗಳ ಮೂಲವಿರವುದೇ ಇಲ್ಲಿ!

ಬಿಜೆಪಿ ತನ್ನದು ಸಿದ್ಧಾಂತ ನಿಷ್ಠ ಪಕ್ಷವೆಂದು ಅದೇಷ್ಟೇ ಹೇಳಿಕೊಂಡರೂ ಅದು ಅ(ಒ)ಪ್ಪಿಕೊಂಡಿರುವುದು ವಾಜಪೇಯಿ ಮತ್ತು ಎಲ್. ಕೆ ಅಡ್ವಾಣಿಯವರ ನಡೆಯನ್ನು. ಅವರ ನಡೆ ನುಡಿ ಪಕ್ಷದ ಪಂಚಾಂಗವಾಯಿತು. ಆದರೆ ಅವರ ನಡೆ ನುಡಿಗೆ ಒಂದು ಚೌಕಟ್ಟಿತ್ತು ಆದನ್ನು ಮೀರಿದ ಅವರ ಚಿಂತನೆಯನ್ನಾಗಲಿ ಕಾರ್ಯವನ್ನಾಗಲೀ ಪಕ್ಷ ಸರ್ವಸಮ್ಮತವಾಗಿ ಒಪ್ಪಿಕೊಂಡಿರಲಿಲ್ಲ. ಉದಾಹರಣೆಗೆ ವಾಜಪೇಯಿ ರೈಲು ಮೂಲಕ ಪಾಕಿಸ್ತಾನಕ್ಕೆ ನೀಡಿದ ಭೇಟಿ ಮತ್ತು ಅದರೊಂದಿಗಿನ ಸ್ನೇಹ ಸಂಬಂಧಕ್ಕಾಗಿನ ಅವರ ಒತ್ತಾಸೆಗಳನ್ನು ಪಕ್ಷದಲ್ಲಿನ ಎಲ್ಲರೂ ಒಪ್ಪಿರಲಿಲ್ಲ. ಅದೇ ರೀತಿ, ಕಂದಹಾರ್ ವಿಮಾನ ಅಪಹರಣದ ಸಮಯದಲ್ಲಿ ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆಗಾಗಿ ಭಾರತದ ಜೈಲಿನಲ್ಲಿದ್ದ ಪರಮ ಪಾತಕಿ ಉಗ್ರರನ್ನು ಅಪಹರಣಕಾರರ ಕೈಗೆ ಒಪ್ಪಿಸಿದ್ದನ್ನು ಕೂಡ. ಆದರೆ ಆಗ ಕೈಯಲ್ಲಿದ್ದ ಅಧಿಕಾರವೆಂಬ ಮಂತ್ರದಂಡ ಎಲ್ಲ ನವೆಗಳಿಗೂ ಮದ್ದರಿಯಿತು.

ಪಕ್ಷದ ಮತ್ತೊಬ್ಬ ನಾಯಕ ಅಡ್ವಾಣಿ, ಜಿನ್ನಾರನ್ನು 'ಜಾತ್ಯಾತೀತವಾದಿ' ಎಂದು ಕರೆದು ಇಕ್ಕಟ್ಟು ಸೃಷ್ಟಿಸಿಕೊಂಡರು. ವಿವಾದ ಹೆಮ್ಮರವಾಗಿ ಬೆಳೆಯಿತು, ಜಿನ್ನಾರನ್ನು ಜಾತ್ಯತೀತವಾದಿ ಎಂದದ್ದು ಪಕ್ಷದ ಸಿದ್ಧಾಂತಕ್ಕೆ ಮಾಡಿದ ಅಪಚಾರ ಎಂದೆ ಬಗೆಯಲಾಯಿತು. ಇದೆಲ್ಲದಕ್ಕಿಂತ ಹೆಚ್ಚು ರಾಷ್ಟೀಯ ಸ್ವಯಂ ಸೇವಕ ಸಂಘಕ್ಕೆ ಈ ಮಾತು ಅಪಥ್ಯವೆನಿಸಿತು. ಆಗ ಪಕ್ಷ ಅಧಿಕಾರದಲ್ಲಿರಲಿಲ್ಲ, ಅದ್ದರಿಂದ ಅಡ್ವಾಣಿ ಸಾಕಷ್ಟು ತೊಂದರೆಗೀಡಾದದ್ದು ಮಾತ್ರ ಸತ್ಯ. ಇದು ವ್ಯಕ್ತಿಗಿಂತ ಪಕ್ಷದ ಸಿದ್ಧಾಂತ ದೊಡ್ಡದು ಎಂಬುದಕ್ಕೆ ಪುರಾವೆ ಖಂಡಿತವಾಗಿಯೂ ಅಲ್ಲ. ಯಾಕೆಂದರೆ ಬಿಜೆಪಿಗೆ ತನ್ನ ಸಿದ್ಧಾಂತವೇ ಮುಖ್ಯ ಎಂಬುದಾದರೆ ಅವತ್ತೇ ಪಕ್ಷ ಅಡ್ವಾಣಿಯ ಮೇಲೆ ಉಳಿದ ಭಿನ್ನಮತೀಯರ ಮೇಲೆ ಕೈಗೊಂಡ ಕ್ರಮ ತೆಗೆದುಕೊಂಡು 'ಮುಖ ನೋಡಿ ಮಣೆ ಹಾಕುವುದು' ತನ್ನ ಸಂಸ್ಕ್ರತಿಯಲ್ಲ ಎಂದು ಸಾಬೀತು ಮಾಡುತ್ತಿತ್ತು. ಆದರೆ ಹಾಗಾಗಲಿಲ್ಲ. ಅಂದರೆ ಬಿಜೆಪಿಯಲ್ಲಿ ಪಕ್ಷ ನಿಷ್ಠೆ ವ್ಯಕ್ತಿ ನಿಷ್ಠೆಯೊಂದಿಗೆ ಮಿಳಿತವಾಗಿದೆ ಎಂದು ಅರ್ಥ ತಾನೇ?

ಪಕ್ಷದ ಈಗಿನ ಭಿನ್ನಮತಗಳತ್ತ ಗಮನ ಹರಿಸೋಣ. ಇವತ್ತು ಬಿಜೆಪಿ ಕೇಂದ್ರ, ತಾನು ಅಧಿಕಾರದಲ್ಲಿರುವ ಕರ್ನಾಟಕ ಮತ್ತು ಉತ್ತರಾಖಂಡದಲ್ಲಿ ಭಿನ್ನಮತದ ಸಮಸ್ಯೆ ಎದುರಿಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಉತ್ತರಾಖಂಡದಲ್ಲಿ ಪಕ್ಷದ ಶೂನ್ಯ ಸಾಧನೆಯನ್ನು ಅಧರಿಸಿ ಅಲ್ಲಿನ ಕೆಲ ಶಾಸಕರು ಮುಖ್ಯಮಂತ್ರಿ ಬಿ.ಸಿ. ಖಂಡೂರಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇನ್ನು ಕರ್ನಾಟಕದಲ್ಲಿನ ಬಿಜೆಪಿಯಲ್ಲಿ ಕಾಣಿಸಿಕೊಂಡಿರುವ ಈಶ್ವರಪ್ಪ ಬಣದ ಬಂಡಾಯದಲ್ಲಿ ಸೈಧಾಂತಿಕ ಕಾರಣಗಳಿರುವುದನ್ನು ಅಲ್ಲಗಳೆಯುವಂತಿಲ್ಲ. ಸೈಧಾಂತಿಕವಾಗಿ ನೋಡಿದರೆ ಈಶ್ವರಪ್ಪರೇ ನೈಜ ಬಿಜೆಪಿಯನ್ನು ಪ್ರತಿನಿಧಿಸುತ್ತಿದ್ದಾರೇನೋ ಎಂದೆನಿಸುತ್ತದೆ. ಆದರೆ ಸದ್ಯ ಪರಿಸ್ಥಿತಿ ಅವರಿಗೆ ಅನುಕೂಲಕರವಾಗಿಲ್ಲ.

ಪಕ್ಷದ ರಾಜ್ಯ ಘಟಕಗಳಲ್ಲಿನ ಭಿನ್ನಮತಿಯರಿಗೆ ಮಂಗಳಾರತಿ ಎತ್ತಬೇಕಾದವರೆ ಬೆಂಕಿ ಹಾಕಿಕೊಂಡು ಕುಣಿಯುತ್ತಿದ್ದಾರೆ!

ಕಳೆದ ಲೋಕಸಭಾ ಚುನಾವಣಾ ಸಂದರ್ಭ ಪಕ್ಷದ ಪಿಲಿಭಿತ್ ಅಭ್ಯರ್ಥಿಯಾಗಿದ್ದ ವರುಣ್ ಗಾಂಧಿ ಮಾಡಿದ ವಿವಾದಾಸ್ಪದ ಭಾಷಣಕ್ಕೆ ಬಿಜೆಪಿ ನಾಯಕರ ಪ್ರತಿಕಿಯಿಸಿದ ವಿಧಾನದಲ್ಲೇ ಪಕ್ಷದೊಳಗಿನ ಗೊಂದಲಗಳು ಬೆಳಕಿಗೆ ಬಂದಿದ್ದವು. ಅನಂತರ ಅಡ್ವಾಣಿಯ ನಂತರ ಮೋದಿ ಪಕ್ಷದ ಪ್ರಧಾನಿ ಅಭ್ಯರ್ಥಿಯೆಂಬ ಅರುಣ್ ಶೌರಿ ಮತ್ತು ಅರುಣ್ ಜೇಟ್ಲಿ ಹೇಳಿಕೆಗಳು ಈ ಗೊಂದಲವನ್ನು ಸಿಕ್ಕಾಗಿಸಿದವು.ಸುಧಾನ್ಷು ಮಿತ್ತಾಲ್ ರನ್ನು ಈಶಾನ್ಯ ರಾಜ್ಯಗಳ ಚುನಾವಣಾ ಉಸ್ತುವಾರಿ ನೋಡಿಕೊಳ್ಳಲು ರಾಜನಾಥ್ ಸಿಂಗ್ ನೇಮಿಸಿದ್ದು ಜೇಟ್ಲಿಯ ಕಣ್ಣು ಕೆಂಪಾಗುವಂತೆ ಮಾಡಿತ್ತು. ಆದರೆ ಚುನಾವಣೋತ್ತರದಲ್ಲಿ ವರುಣ್ ಗಾಂಧಿಯನ್ನು ಚುನಾವಣಾ ಸೋಲಿಗೆ ಹೊಣೆಗಾರರಾನ್ನಾಗಿಸುವ ಪ್ರಯತ್ನ ಕೂಡ ನಡೆಯಿತು. ಇದೀಗ ಸುಧಿಂದ್ರ ಕುಲಕರ್ಣಿ, ಜಸ್ವಂತ್ ಸಿಂಗ್ ಮತ್ತು ಯಶವಂತ ಸಿನ್ಹಾರಂತ ಪ್ರಭಾವಿ ನಾಯಕರುಗಳು ಪಕ್ಷದಲ್ಲಿನ ಸಮಸ್ಯೆಗೆ ಪರಿಹಾರವಾಗುವ ಬದಲು ತಾವೇ ಒಂದು ಸಮಸ್ಯೆಯಾಗಿ ಪರಿವರ್ತನೆಗೊಂಡಿದ್ದಾರೆ.

ಇಲ್ಲಿ ಸಿನ್ಹಾ ಎತ್ತಿರುವ ಪ್ರಶ್ನೆಗಳಲ್ಲಿ ಖಂಡಿತವಾಗಿಯೂ ಸಾರವಿದೆ. ಅವರು ಪಕ್ಷದ ಕರ್ನಾಟಕ ಘಟಕದ ಉಸ್ತುವಾರಿ ವಹಿಸಿಕೊಂಡಿದ್ದರೂ ರಾಜ್ಯ ಬಿಜೆಪಿಯಲ್ಲಿ ಏನೇ ಅದರೂ ಅದು ತಲುಪುತ್ತಿದ್ದದ್ದು ಜೇಟ್ಲಿ ಬಳಿಗೆ. ಇದು ಕೂಡ ಸಿನ್ಹಾ ಅಸಮಧಾನಕ್ಕೆ ಕಾರಣವಾಗಿರಬಹುದು. ಇಂದು ಬಿಜೆಪಿಯ ಕೇಂದ್ರ ಮಟ್ಟದ ನಾಯಕರಲ್ಲಿ ಎಲ್ ಕೆ ಅಡ್ವಾಣಿ ಮತ್ತು ನರೇಂದ್ರ ಮೋದಿಯವರನ್ನು ಹೊರತುಪಡಿಸಿದರೆ ಬೇರೆ ನೈಜ ನಾಯಕರುಗಳೇ ಇಲ್ಲ. ಉಳಿದವರೆಲ್ಲ ಕೇವಲ ಬಾಯಿ ಮಾತಿನಿಂದ ಮತ್ತು ಬುದ್ಧಿ ಬಲದಿಂದ ನಾಯಕರೆಂದು ಗುರುತಿಸಿಕೊಳ್ಳುತ್ತಿರುವವರು. ಅವರಿಗೆ ಜನ ಬೆಂಬಲ ಮತ್ತು ಯಾವುದೇ ಹೋರಾಟದ ಹಿನ್ನೆಲೆಯಿಲ್ಲ. ಇದರೊಂದಿಗೆ ಸಂಘಟನೆಯಲ್ಲೂ ವಿಫಲರಾಗಿದ್ದಾರೆ. 'ಹೂವಿನೊಂದಿಗೆ ನಾರು ಸ್ವರ್ಗ ಸೇರಿತು' ಎಂಬಂತೆ ವಾಜಪೇಯಿ. ಎಲ್ ಕೆ ಅಡ್ವಾಣಿ ಮತ್ತು ಲಕ್ಷಾಂತರ ಕಾರ್ಯಕರ್ತರ ಹೆಸರು ಹೇಳಿಕೊಂಡು ಅವರು ತಮ್ಮ ಹೊಟ್ಟೆ ಹೊರೆದುಕೊಳ್ಳುತ್ತಿದ್ದಾರೆ.

ಬಿಜೆಪಿಯ ನಾಯಕರೆನಿಸಿಕೊಂಡಿರುವವರ ನಡುವಿನ ಕೆಸರೆರಚಾಟ ಅದರ ಮುಂದಿನ ರಾಜಕಿಯ ಭವಿಷ್ಯಕ್ಕೆ ಮತ್ತು ಪಕ್ಷಕ್ಕೆ ತೀರಾ ಕಂಟಕಪ್ರಾಯವಾಗಬಲ್ಲದು, ಅದೂ ಅಲ್ಲದೇ ಈಗ ಪಕ್ಷದೊಳಗೆ ಸೈಧಾಂತಿಕ ಗೊಂದಲಗಳು ಸೇರಿಕೊಂಡಿವೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಪಕ್ಷದ ಮಾತೃಸಂಸ್ಠೆ ಆರೆಸ್ಸೆಸ್ ಪಕ್ಷದಿಂದ ದೂರ ಸರಿಯುತ್ತಿದೆ. ಆರೆಸ್ಸೆಸ್ ನ ಹಿರಿಯ ನಾಯಕ ಬಾಬುರಾವ್ ವೈದ್ಯ ಪಕ್ಷದ ಹಿಂದುತ್ವ ಸಿದ್ಧಾಂತದೊಂದಿಗಿನ ಆಟವನ್ನು ಖಂಡಿಸಿ ಅದು ಈ ಸಿಧ್ಧಾಂತದಿಂದ ದೂರ ಸರಿಯುವುದೇ ಲೇಸು ಎಂದಿದ್ದಾರೆ. ಹೌದು, ಬಿಜೆಪಿ ಹಿಂದುತ್ವಕ್ಕೆ 1991ರ ಅಯೋಧ್ಯೆ ಚಳುವಳಿಯ ನಂತರ ಎಂದಿಗೂ ನ್ಯಾಯ ಸಲ್ಲಿಸಿಲ್ಲ. ಆದರೆ ಅದನ್ನೆ ತನ್ನ ಮುಖ್ಯ ಸಿಧ್ಧಾಂತ ಎಂದು ಹೇಳುತ್ತ ಬಂದಿದೆ. ಇದರಿಂದ ಹಿಂದೂಗಳು ಕೂಡ ಭ್ರಮನಿರಶನಗೊಂಡಿದ್ದಾರೆ ಅಲ್ಪಸಂಖ್ಯಾತರಂತು ಬಿಜೆಪಿಯಿಂದ ಮಾರುದ್ದ ದೂರ ನಿಂತಿದ್ದಾರೆ.

ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ವಾಜಪೇಯಿ 'ಒಮ್ಮೆಯಾದರೂ' ದೇಶದ ಪ್ರಧಾನಿಯಾಗಲಿ ಎಂಬ ಜನತೆಯ ಆಶಯ ಮತ್ತು ಕಾಂಗ್ರೆಸ್ನಲ್ಲಿ ಆಗ ಇದ್ದ ನಾಯಕತ್ವದ ಸಮಸ್ಯೆಗಳು ಪ್ರಮುಖ ಕಾರಣವಾಗಿತ್ತು. ಆದರೆ ಇಂದು ವಾಜಪೇಯಿ ಹಾಸಿಗೆ ಹಿಡಿದಿದ್ದಾರೆ, ಕಾಂಗ್ರೆಸ್ನ ನಾಯಕತ್ವ ಬಹಳ ಗಟ್ಟಿಯಾಗಿದೆ. ಅದ್ದರಿಂದ ಬಿಜೆಪಿಯ ಮುಂದೆ ಇರುವುದು ಈಗ ಎರಡೇ ಆಯ್ಕೆ ಒಂದೋ ತನ್ನ ಸಿದ್ಧಾಂತವನ್ನು ಗಟ್ಟಿಮಾಡಿಕೊಳ್ಳಬೇಕು. ಇಲ್ಲ, ತನ್ನ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು ಎಂದು ನಿರ್ಧಾರ ಮಾಡಿಕೊಂಡು ಅವರ ಪರ ದೇಶಾದದ್ಯಂತ ಒಂದು ಅಲೆ ಸೃಷ್ಟಿಯಾಗುವಂತೆ ನೋಡಿಕೊಳ್ಳಬೇಕು.

ಪಕ್ಷಕ್ಕೆ ಈಗಿನ ಭಿನ್ನಮತದ ತೊಡಕಿನಿಂದ ಹೊರಬರುವುದು ಅಷ್ಟು ಸುಲಭವಾಗಿಲ್ಲ, ಯಾಕೆಂದರೆ ಸಮಸ್ಯೆ ನಾನ ದಿಕ್ಕಿನಲ್ಲಿ, ನಾನ ಸ್ಥಳಗಳಲ್ಲಿ ಮತ್ತು ನಾನ ರೀತಿಯಲ್ಲಿ ಹುಟ್ಟಿಕೊಂಡಿದೆ. ಇಲ್ಲಿ ವ್ಯಕ್ತಿ ವ್ಯಕ್ತಿಗಳ ನಡುವೆ ಮತ್ತು ಸಿಧ್ಢಾಂತತೊಂದಿಗಿನ ಭಿನ್ನಮತ ಮುಖ್ಯವಾದದ್ದು. ಅದ್ದರಿಂದ ಏಕೌಷಧ ಈ ಸಮಸ್ಯೆಯನ್ನು ಪರಿಹರಿಸದು. ಅದೆಲ್ಲದಕ್ಕಿಂತ ಹೆಚ್ಚಾಗಿ ಈ ಸಮಸ್ಯೆಗಳನ್ನು ಪರಿಹರೀಸೋದು ಯಾರು? ಎಂಬ ದೊಡ್ಡ ಪ್ರಶ್ನೆ ಹುಟ್ಟಿಕೊಂಡಿದೆ. ಯಾಕೆಂದರೆ ಪಕ್ಷದಲ್ಲಿ ಯಾರು ಯಾರನ್ನು ನಂಬದ ಸ್ಥಿತಿ ನಿರ್ಮಾಣವಾಗಿದೆ.

ಒಟ್ಟಿನಲ್ಲಿ ಕಾಂಗ್ರೆಸ್ ಗೆ ಪರ್ಯಾಯವಾಗಿ ಬೆಳೆದಿದ್ದ ಬಿಜೆಪಿ ಈಗ ಇಳಿಜಾರಿನಲ್ಲಿ ಸಾಗುತ್ತಿದೆ. ಅದು ಪಾತಳ ಸೇರುವ ಮುಂಚೆ ಅದರ ನಾಯಕರುಗಳು ಎಚ್ಚೆತ್ತುಕೊಂಡರೆ ಕ್ಷೇಮ. ಇಲ್ಲ ಅಂದರೆ, ’ಹಿಂದೆ ಬಿಜೆಪಿಯೆಂಬ ಪಕ್ಷವಿತ್ತು, ಕಮಲ ಅದರ ಚಿಹ್ನೆಯಾಗಿತ್ತು. ಅದು ದೇಶವನ್ನು 6 ವರ್ಷಗಳ ಕಾಲ ಆಳಿತ್ತು’ ಎಂದು ಬಿಜೆಪಿ ನಾಯಕರುಗಳು ತಮ್ಮ ಮಕ್ಕಳಿಗೆ ಕಥೆ ಹೇಳುತ್ತ ಕೂರಬೇಕಾದೀತು! ಎಚ್ಚರ!

Thursday, May 21, 2009

ಈ ಸೋಲು ಆಡ್ವಾಣಿಯದ್ದು ಮಾತ್ರವಲ್ಲ ಸೋನಿಯಾ ಗಾಂಧಿಯದ್ದು ಹೌದು!

ಲೋಕಸಭೆಗೆ ನಡೆದ ಚುನಾವಣೆ ನಿರೀಕ್ಷಿತ ‌ಫಲಿತಾಂಶ ನೀಡಿದರೂ ಒಂದು ಅಚ್ಚರಿ ಮಾತ್ರ ಎಲ್ಲರಿಗೂ ಕಾದಿತ್ತು. ಅದೇ ಕಾಂಗ್ರೆಸ್ ಗೆ ದಕ್ಕಿದ ಸ್ಥಾನಗಳು! ಇದು ಕಾಂಗ್ರೆಸ್ ಪಕ್ಷದ ಅದ್ಬುತ ಬೆಳವಣಿಗೆ ಎಂದೆನಿಸಿದರೂ ಸೂಕ್ಷ್ಮವಾಗಿ ಗಮನಿಸಿದರೆ ಇದು ಆ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿಗೆ ಆದ ಮುಖಭಂಗ!
ಹಿಂದಿನ ಅಂದರೆ ೨೦೦೪ ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಅಗ ಆಡಳಿತ ನಡೆಸುತ್ತಿದ್ದ ಎನ್‌ಡಿಎ ಈ ಚುನಾವಣೆ ’ಗೆದ್ದೆ ಗೆಲ್ಲುತ್ತೇವೆ’ ಎಂಬ ಹುಮ್ಮಸಿನಲ್ಲಿ ಪಡೆದುಕೊಂಡ ’ಶಾಕ್’ ಕೂಡ ಒಂದು ಅಚ್ಚರಿಯೇ! ಆ ಚುನಾವಣಾ ಫಲಿತಾಂಶವನ್ನು ಕಾಂಗ್ರೆಸ್‌ನ ಗೆಲುವು ಅನ್ನುವುದಕ್ಕಿಂತ ಬಿಜೆಪಿಯ ಸೋಲು ಅನ್ನುವುದು ಹೆಚ್ಚು ಸೂಕ್ತ. ಆ ಚುನಾವಣೆಯ ನಂತರ ಕಾಂಗ್ರೆಸ್ ತನ್ನ ’ಜಾತ್ಯತೀತತೆ’ ಎಂಬ ’ಸಿಮೆಂಟ್’ ಬಳಸಿ ಯುಪಿಎ ಎಂಬ 'ಕಟ್ಟಡ' ಕಟ್ಟಿಕೊಂಡು ೫ ವರ್ಷಗಳ ಆಡಳಿತ ನಡೆಸಿದ್ದು ಎಲ್ಲರಿಗೂ ತಿಳಿದಿರುವಂತದ್ದೆ.
ಇದೀಗ ನನ್ನ ಮುಖ್ಯ ಪ್ರಶ್ನೆಗೆ ಬರುತ್ತೆನೆ, ಅಂದು ಕಾಂಗ್ರೆಸ್ ಪಕ್ಷ ಶ್ರೀಮತಿ ಸೋನಿಯಾ ಗಾಂಧಿಯವರ ನೇತ್ರತ್ವದಲ್ಲಿ ಚುನಾವಣೆ ಎದುರಿಸಿತ್ತು. ಆದರೆ ಈ ಬಾರಿ ಸೋನಿಯಾ ಯುಪಿಎ ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿದ್ದರೂ ಕೂಡ ಅವರ ಮುಂದಾಳತ್ವದಲ್ಲೇ ಕಾಂಗ್ರೆಸ್ ಮತಯಾಚಿಸಿತ್ತು ಎಂದು ಹೇಳಲು ಸಾಧ್ಯವಿಲ್ಲ. ಅದು ಪ್ರಧಾನಿ ಮನಮೋಹನ್ ಸಿಂಗ್‌ ಮತ್ತು ಅವರ ಸರ್ಕಾರದ ಸಾಧನೆಯ ಆಧಾರದಲ್ಲಿ ಜನರ ಬಳಿಗೆ ಬಂದಿತ್ತು. ಒಟ್ಟಿನಲ್ಲಿ ಇಲ್ಲಿ ಮನಮೋಹನ್ ಸಿಂಗ್‌ರೇ ಕೇಂದ್ರಬಿಂದು. ಆದ ಕಾರಣ ಈ ಚುನಾವಣೆಯಲ್ಲಿನ ಕಾಂಗ್ರೆಸ್ ಪಕ್ಷದ ಯಶಸ್ಸಿನ ಸಂಪೂರ್ಣ ಶ್ರೇಯಸ್ಸು ಸಲ್ಲಬೇಕಾದದ್ದು ಸಿಂಗ್‌ಗೆ.
ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಬಳಿ ಇದ್ದದ್ದು ೧೪೫ ಸೀಟುಗಳು ಮಾತ್ರ. ಆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷ ಸೋನಿಯಾ ಗಾಂಧಿಯವರನ್ನು ತನ್ನ ಪ್ರಧಾನಿ ಅಭ್ಯರ್ಥಿಯೆಂದು ಬಿಂಬಿಸುವ ಪ್ರಯತ್ನ ಮಾಡಿತ್ತು. ಆದರೆ ಅದನ್ನು ಜನರು ಸಂಪೂರ್ಣವಾಗಿ ತಿರಸ್ಕರಿಸಿದ್ದರು. ಇಲ್ಲಿ ಕಾಂಗ್ರೆಸಿಗರು ಎನ್‌ಡಿಎ ಆಡಳಿತದಿಂದ ಜನ ಬೇಸತ್ತಿದ್ದರು ಎಂದರೂ ಕೂಡ
ಅದಕ್ಕೆ ಪರ್ಯಾಯವಾಗಿ ಸೋನಿಯಾ ಗಾಂಧಿಯವರನ್ನು ಅವರು ಒಪ್ಪಿಕೊಂಡಿರಲಿಲ್ಲ ಎಂಬುದನ್ನು ಈ ಸಂಖ್ಯೆ ಸ್ಪಷ್ಟವಾಗಿ ಸೂಚಿಸುತ್ತದೆ. ಇದರ ಒಟ್ಟು ತಾತ್ಪರ್ಯ ಸೋನಿಯಾರನ್ನು ದೇಶದ ಜನರು ಕಾಂಗ್ರೆಸ್‌ನ ನಾಯಕಿಯಾಗಿ ಒಪ್ಪಿಕೊಳ್ಳುತ್ತಾರೆಯೇ ಹೊರತು ದೇಶದ ನಾಯಕಿಯಾಗಿ ಅಲ್ಲ.
ಈ ಚುನಾವಣೆಯಲ್ಲಿ ಅದೇ ಪಕ್ಷ ಕಳೆದ ಸಲಕ್ಕಿಂತ ೬೧ ಸೀಟ್‌ಗಳನ್ನು ಹೆಚ್ಚುವರಿಯಾಗಿ ಪಡೆದುಕೊಂಡಿದೆ. ಇದು ಸಿಂಗ್ ಸೋನಿಯಾರಿಗಿಂತ ಪ್ರಬಲ ನಾಯಕ ಎಂಬುದರ ದ್ಯೋತಕವಲ್ಲದೆ ಮತ್ತೇನು? ಮತ್ತೊಂದು ಗಮನಿಸಬೇಕಾದ ಆಂಶವೆಂದರೆ ಸಿಂಗ್‌ರನ್ನು ತನ್ನ ನಾಯಕನನ್ನಾಗಿ ದೇಶವೂ ಒಪ್ಪಿಕೊಂಡಿದೆ, ವಾಸ್ತವವಾಗಿ ಸಿಂಗ್‌ಗೆ ಅವರ ಪಕ್ಷದಲ್ಲೆ ನಾಯಕನ ಸ್ಥಾನವಿಲ್ಲ! ಇದರರ್ಥ ನೆಹರು ಕುಟುಂಬದವರಲ್ಲದೆ ಅನೇಕ ನಾಯಕರು ಕಾಂಗ್ರೆಸ್‌ ಪಕ್ಷದಲ್ಲಿದ್ದಾರೆ ಮತ್ತು ಜನರೂ ಕೂಡ ಅವರನ್ನು ತಮ್ಮ ನಾಯಕನನ್ನಾಗಿ ಅಂಗೀಕರಿಸುತ್ತಾರೆ ಎಂದು ತಾನೇ? ಆದರೆ ಕಾಂಗ್ರೆಸಿಗರು ಮತ್ತೆ ಮತ್ತೆ ಆ ಕುಟುಂಬದ ಹಿಂದೆಯೇ ಮೊರೆ ಹೋಗುತ್ತಿರುವುದು ವಿಪರ್ಯಾಸವೇ ಸರಿ.
ಇಂದಿಗೂ ಕಾಂಗ್ರೆಸ್‌ ಪಕ್ಷದ ಬ್ಯಾನರ್‍, ಕಛೇರಿ ಅಥವಾ ಕಾರ್ಯಕ್ರಮಗಳಲ್ಲಿ ಶಾಶ್ವತವಾಗಿರುವುದು ಜವಹರ ಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯ ಚಿತ್ರಗಳು ಮತ್ತದರೊಂದಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ವಾಧ್ರರ ಚಿತ್ರಗಳು ಮತ್ತು ಸಾಧನೆಗಳು. ಮನಮೋಹನ್ ಸಿಂಗ್‌ಗೆ ಈಗ ಪ್ರಧಾನ್ಯತೆ ಸಿಕ್ಕಿದ್ದರೂ ಕೂಡ ಅದು ಸೀಮಿತ ಆವಧಿಗೆ ಮಾತ್ರ.
ಉದಾಹರಣೆಗೆ ಕಾಂಗ್ರೆಸ್ ಪಕ್ಷದಿಂದಲೇ ದೇಶದ ಪ್ರಧಾನಿಗಳಾದ ಲಾಲ್ ಬಹುದ್ದೂರ್‍ ಶಾಸ್ತ್ರಿ ಅಥವಾ ಪಿ.ವಿ ನರಸಿಂಹ ರಾವ್‌ರ ಬಗೆಗೆ ಆ ಪಕ್ಷ ತೋರಿಸುತ್ತಿರುವ ಅನಾದರ ನಮ್ಮ ಕಣ್ಣ ಮುಂದೆ ಇದೆ.
ಬಿಜೆಪಿಯ ಎರಡನೇ ಪೀಳಿಗೆ ನಾಯಕರು ಕಾಯುವದರಲ್ಲಿ ತಪ್ಪೇನಿಲ್ಲ!
ಇನ್ನು ಬಿಜೆಪಿ ಈ ಸೋಲಿನಿಂದ ತೀವ್ರ ಹತಾಶವಾಗಿದ್ದು ಸಿಕ್ಕ ಸಿಕ್ಕವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಅದು ಯಾವ ಮಟ್ಟಕ್ಕೆ ಬಂದು ಮುಟ್ಟಿದೆಯೆಂದರೆ ತನ್ನ ಮೂಲ ಸಿದ್ಧಾಂತವನ್ನು ಪ್ರಬಲವಾಗಿ ಪ್ರತಿಪಾದಿಸುವವರನ್ನೇ ಅಸ್ಪ್ರಶ್ಯರು ಎಂದು ಪರಿಗಣಿಸುಷ್ಟು. ಇದು ಅದರ ಸೈದ್ಧಾಂತಿಕ ಟೊಳ್ಳುತನವನ್ನು ಬಯಲು ಮಾಡಿದೆ.
ಇಂದು ದೇಶದಾದ್ಯಂತ ಬಿಜೆಪಿಯೆಂಬ ಹೆಸರನ್ನು ನೀವು ಕೇಳುತ್ತಿರುವಿರೆಂದರೆ ಅದಕ್ಕೆ ಕಾರಣ ಅದು ಬಲವಾಗಿ ಪ್ರತಿಪಾದಿಸುತ್ತ ಬಂದಿರುವ ಹಿಂದುತ್ವ. ಅದು ಎಲ್ಲಿ ತನಕ ಹಿಂದುತ್ವವನ್ನೇ ತನ್ನ ಚುನಾವಣಾ ವಿಷಯವನ್ನಾಗಿಸಿಕೊಂಡಿತ್ತೋ ಅಲ್ಲಿ ತನಕ ಅದು ಲೋಕಸಭೆಯಲ್ಲಿ ತನ್ನ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುತ್ತಲೇ ಬಂದಿತ್ತು ಮತ್ತು ಆಡಳಿತದ ಚುಕ್ಕಾಣಿಯನ್ನು ಕೂಡ ಹಿಡಿಯಿತು. ಆದರೆ ಅದೇ ದಿನಗಳಲ್ಲಿ ತನ್ನ ಮೂಲ ಸಿದ್ಧಾಂತದಿಂದ ದೂರ ಸರಿಯಲಾರಂಭಿಸಿತು ಅಂದಿನಿಂದ ಅದರ ಕೆಟ್ಟದಿನಗಳು ಶುರುವಾಯಿತು.
ಅದರ ಸೈದ್ಧಾಂತಿಕ ಪಲಾಯನವಾದಕ್ಕೆ ಇತ್ತೀಚಿನ ನಿದರ್ಶನವೆಂದರೆ ವರುಣ್ ಗಾಂಧಿಯವರ ಹೇಳಿಕೆಗೆ ಅದು ಪ್ರತಿಕ್ರಿಯಿಸಿದ ರೀತಿ. ಅವರನ್ನೇ ಬಿಜೆಪಿಯ ಕಳಪೆ ನಿರ್ವಹಣೆಗೆ ಹೊಣೆಗಾರರನ್ನಾಗಿಸುವ ಪ್ರಯತ್ನ ನಡೆಯುತ್ತಿದೆ. ಕಳೆದ ಸಲದ ಲೋಕಸಭೆ ಚುನಾವಣೆಯಲ್ಲಿ ಗುಜರಾತ್ ಗಲಭೆಯೆ ಪಕ್ಷದ ಸೋಲಿಗೆ ಕಾರಣ ಎಂದು ಅದು ಕಂಡುಕೊಂಡಿತ್ತು. ಆದರೆ ಇಂದು ಬಿಜೆಪಿ ಕೆಲವು ರಾಜ್ಯಗಳಲ್ಲಿ ಆಡಳಿತ ನಡೆಸುತ್ತ ಇದೆ, ಒಮ್ಮೆ ದೇಶವನ್ನೂ ಆಳಿತ್ತು ಹಾಗೆ ಲೋಕಸಭಾ ಚುನಾವಣೆಗಳಲ್ಲಿ ಲೀಲಾಜಾಲವಾಗಿ ೧೦೦ಕ್ಕಿಂತ ಹೆಚ್ಚು ಸೀಟ್‌ಗಳನ್ನು ಪಡೆಯುತ್ತದೆ ಎಂದಾದರೆ ಅದಕ್ಕೆ ಕಾರಣ ೧೯೯೦ರಲ್ಲಿ ನಡೆದ ಅಯೋಧ್ಯ ಚಳುವಳಿ. ಅದು ಹಿಂದುತ್ವದ ಹೆಸರಲ್ಲೇ ನಡೆದದ್ದು ಅಲ್ಲವೇ? ರಾಷ್ಟ್ರಮಟ್ಟದ ಬಿಜೆಪಿ ನಾಯಕರು ಕರ್ನಾಟಕದಿಂದ ಒಂದು ಅಂಶವನ್ನು ಕಲಿತುಕೊಳ್ಳುವ ಜರೂರತ್ತಿದೆ ಅದೇನೆಂದರೆ ಈ ಸಲದ ಚುನಾವಣೆಯಲ್ಲಿ ಬಿಜೆಪಿ ಎಲ್ಲೆಲ್ಲಿ ಹಿಂದುತ್ವದ ಮಂತ್ರ ಪಠಿಸಿತ್ತೋ ಅಲ್ಲೆಲ್ಲಾ ವಿಜಯಶಾಲಿಯಾಗಿದೆ! ಇದರರ್ಥ ಹಿಂದುತ್ವಕ್ಕೆ ಮತಗಳಿಸಿ ಗೆಲ್ಲಿಸಿ ಕೊಡುವ ಸಾಮರ್ಥ್ಯವಿದೆ ಎಂಬದು ತಾನೇ?
ಇನ್ನು ಮುಂದಿನ ಲೋಕಸಭೆ ಚುನಾವಣೆಗೆ ಸಾಕಷ್ಟು ಸಮಯಾವಕಾಶವಿದೆ. ಆದ್ದರಿಂದ ಈಗಲೇ ನಾಯಕತ್ವದ ಬಗೆಗಿನ ಗೊಂದಲ ಪರಿಹರಿಸಿಕೊಂಡು ಸೈದ್ಧಾಂತಿಕ ನಿಷ್ಟೆ ಮೆರೆದರೆ ಮುಂದಿನ ಲೋಕಸಭಾ ಚುನಾವಣೆ ಬಹುಶ: ೨೦೧೪ (ಇದು ನಿಜವಾಗಲಿ ಎಂಬ ಆಶಯದೊಂದಿಗೆ)ರಲ್ಲಿ ಏಕಾಂಗಿಯಾಗಿ ಬಹುಮತ ಪಡೆಯುವ ಪಡೆಯುವ ಸಾಧ್ಯತೆ ಕಡಿಮೆ ಇದ್ದರು ಬಹು ದೊಡ್ಡ ಪಕ್ಷವಾಗಿ ಹೊರಹೊಮ್ಮಬಲ್ಲದು. ಬಿಜೆಪಿಗೆ ೨೦೦+ ಸೀಟ್ ಸಿಕ್ಕರೆ ನಂತರ ಮಿತ್ರಪಕ್ಷಗಳನ್ನು ಹುಡುಕಿಕೊಳ್ಳವಿದು ಕಷ್ಟವಲ್ಲ, ಅವೇ ಹುಡುಕಿಕೊಂಡು ಬರುತ್ತವೆ! ಅವುಗಳ ಅಧಿಕಾರಕ್ಕಾಗಿನ ಹಪಾಹಪಿ ಯಾವ ಪರಿಯದ್ದು ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಅವುಗಳ ನಾಯಕರುಗಳು ತಮ್ಮ ಸ್ವಂತ ಮಾನ ಮಾರ್ಯಾದೆ ಬಿಟ್ಟು ವರ್ತಿಸುತ್ತಾರೆ ಇನ್ನು ಸಿದ್ಧಾಂತ ಸುಮ್ಮನೆ ಹೆಸರಿಗೆ ಮಾತ್ರ!
ಇಂದು ಬಿಜೆಪಿ ಅನೇಕ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದ್ದರು ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾನ್, ಛತ್ತೀಸ್‌ಗಢದ ರಮಣ್ ಸಿಂಗ್ ಮತ್ತು ಗುಜರಾತಿನ ನರೇಂದ್ರ ಮೋದಿಯವರ ಆಡಳಿತ ಹೆಚ್ಚು ಗಮನ ಸೆಳೆದಿದೆ ಮತ್ತು ಉತ್ತಮವಾಗಿದೆ. ಆದರೆ ಮೊದಲ ಇಬ್ಬರಿಗಿಂತ ಮೋದಿ ಹೆಚ್ಚು ಜನಪ್ರಿಯ. ಇದಕ್ಕೆ ಕಾರಣಗಳು ಏನೇ ಇದ್ದರೂ ಅವರು ಬಿಜೆಪಿಯ ಮೂಲ ಸಿದ್ಧಾಂತ ಮತ್ತು ಪಕ್ಷ ಈಗ ಹೆಚ್ಚಾಗಿ ಪ್ರತಿಪಾದಿಸುವ ಪ್ರಗತಿ ಸಿದ್ದಾಂತ ಎರಡಕ್ಕೂ ಅಗತ್ಯವಾದ ಮುಖ ಹೊಂದಿದ್ದಾರೆ. ಒಂದು ರೀತಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್. ಕೆ. ಆಡ್ವಾಣಿಯವರ ವ್ಯಕ್ತಿತ್ವದ ಸಮ್ಮೀಶ್ರಣ ಈ ಮೋದಿ! ಅವರು ಪಕ್ಷದ ಮುಂದಿನ ಪ್ರಧಾನಿ ಆಭ್ಯರ್ಥಿ ಎಂದಾದರೆ ಅವರನ್ನು ದೇಶದ ಮೂಲೆ ಮೂಲೆಗೂ ಪರಿಚಯಿಸುವ ಕೆಲಸ ಈಗಿನಿಂದಲೇ ಆಗಬೇಕು. ಅವರು ಪಕ್ಷದ ಪ್ರಧಾನಿ ಆಭ್ಯರ್ಥಿ ಅಲ್ಲ, ಎಂದಾದರೆ ಮತ್ತ್ಯಾರು? ಅದು ಕೂಡ ಈಗಾಲೇ ನಿರ್ಧಾರವಾಗಿರಲಿ. ಇದು ಅಂತರಿಕವಾಗಿದ್ದರೂ ಸರಿ. ಉಳಿದಂತೆ ಬಿಜೆಪಿಯಲ್ಲಿ ಅನೇಕ ನಾಯಕರಿದ್ದರೂ ಅವರ್‍ಯಾರಿಗೂ ಒಂದು ಹೋರಾಟದ ಅಥವಾ ಜನಬೆಂಬಲದ ನಾಯಕತ್ವವಿಲ್ಲ, ಇದರೊಂದಿಗೆ ಅವರು ಪಕ್ಷದ ಸಂಘಟನೆಯಲ್ಲೂ ವಿಫಲರಾಗಿದ್ದಾರೆ. ಈ ನಾಯಕರು ಕೇವಲ ಬುದ್ಧಿಶಕ್ತಿ ಮತ್ತು ಬಾಯಿಬಲದಿಂದ ನಾಯಕರಾದವರು. ಅವರೆಲ್ಲರನ್ನು ಅವರವರ ರಾಜ್ಯಗಳಿಗೆ ಕಳುಹಿಸಿ ಅಲ್ಲಿ ಪಕ್ಷ ಬಲಪಡಿಸುವ ಕೆಲಸ ಮಾಡುವಂತೆ ಮಾಡಬೇಕು ಇದರಿಂದ ಅವರಿಗೂ ಪಕ್ಷಕ್ಕೂ ಲಾಭವಿದೆ.
ಉದಾಹರಣೆಗೆ ವೆಂಕಯ್ಯ ನಾಯ್ಡು ಬಿಜೆಪಿಯಲ್ಲಿ ಮಹಾನ್ ನಾಯಕನೆಂದೇ ಗುರುತಿಸಲ್ಪಡುವವರು. ಆದರೆ ಆವರ ಸ್ವಂತ ರಾಜ್ಯ ಆಂಧ್ರ ಪ್ರದೇಶದಲ್ಲಿ ಬಿಜೆಪಿಗೆ ಒಂದೇ ಒಂದು ಸ್ಥಾನ ಗೆಲ್ಲುವ ತಾಕತ್ತಿಲ್ಲ! ಅವರು ಕರ್ನಾಟಕದಿಂದ ರಾಜ್ಯಸಭೆ ಸದಸ್ಯರಾಗುತ್ತಾರೆ. ಇನ್ನು ರಾಜನಾಥ್ ಸಿಂಗ್ ಬಿಜೆಪಿಯ ರಾಷ್ಟ್ರಧ್ಯಕ್ಷರು ಅವರು ಉತ್ತರ ಪ್ರದೇಶದವರು. ಕೇವಲ ದಶಕಗಳ ಹಿಂದೆ ಅಲ್ಲಿ ಬಿಜೆಪಿ ಅತ್ಯಂತ ಬಲಶಾಲಿಯಾಗಿತ್ತು ಆದರೆ ಇಂದು ಅಲ್ಲೇ ತೀರಾ ದುರ್ಬಲ. ಅಂದರೆ ಇದು ಅವರ ನಾಯಕತ್ವ ಎಂತದ್ದು ಎಂಬುದನ್ನು ಸೂಚಿಸುತ್ತದೆ.
ಬಿಜೆಪಿಯ ಇನ್ನುಳಿದ ನಾಯಕರಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಜಸ್ವಂತ್ ಸಿಂಗ್, ಯಶವಂತ ಸಿನಾ ಎಲ್ಲರೂ ಇದೇ ವರ್ಗಕ್ಕೆ ಸೇರಿದವರು. ಅಂದರೆ ಪಕ್ಷದ ಮೇಲ್‌ಸ್ತರದ ನಾಯಕರುಗಳೆಲ್ಲ ಇಂತವರೇ! ಒಂದೋ ಈ ನಾಯಕರನ್ನು ಸಂಘಟನೆಯ ಕೆಲಸಕ್ಕಾಗಿ ಅವರವರ ರಾಜ್ಯಕ್ಕೆ ಕಳುಹಿಸಬೇಕು ಅಥವಾ ಜನಬೆಂಬಲವಿರುವ ನಾಯಕರುಗಳಿಗೆ ಪಕ್ಷದಲ್ಲಿ ಹೆಚ್ಚಿನ ಆದ್ಯತೆ ಸಿಗಬೇಕು. ಮುಂದಿನ ಚುನಾವಣೆಗಳಲ್ಲಿ ಪಕ್ಷ ಕೆಟ್ಟ ನಿರ್ವಹಣೆ ತೋರಿಸಿದರೆ ಈ ನಾಯಕರುಗಳನ್ನು ಮುಲಾಜಿಲ್ಲದೆ ಮನೆಗೆ ಕಳುಹಿಸಬೇಕು. ಆಗ ಜವಾಬ್ದಾರಿಯುತವಾಗಿ ಎಲ್ಲರೂ ಕಾರ್ಯನಿರ್ವಹಿಸುತ್ತಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಸರದಿಯಂತೆ ದೇಶವನ್ನಾಳಬೇಕು ಎಂಬುದು ನನ್ನ ಕನಸು. ಈಗ ಕೇರಳದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ನಡುವೆ ನಡೆಯುತ್ತಿರುವಂತೆ. ಆಗ ಎರಡೂ ಪಕ್ಷಗಳ ನಡುವೆ ನಿಕಟ ಸ್ಪರ್ಧೆ ಮೂಡುತ್ತದೆ ಇದರಿಂದ ದೇಶಕ್ಕೆ ಒಳಿತಾಗುತ್ತದೆ ಎಂಬುದು ನನ್ನ ನಿರೀಕ್ಷೆ.
ಅಟಲ್ ಬಿಹಾರಿ ವಾಜಪೇಯಿ ದೇಶ ಕಂಡ ಮಹಾನ್ ನಾಯಕರಾಗಿದ್ದರೂ ದೇಶದ ಪ್ರಧಾನಿಯಾಗಲು ೫೦ ವರ್ಷ ಕಾಯಬೇಕಾಯಿತು, ಇನ್ನು ಅವರಿಗಿಂತ ಒಂದು ಹಿಡಿ ಹೆಚ್ಚೇ ಎಂದೆನ್ನಬಹುದಾದ ಆಡ್ವಾಣಿಯವರಿಗೆ ಆ ಭಾಗ್ಯ ಸಿಗಲಿಲ್ಲ ಬಹುಶ: ಸಿಗಲಿಕ್ಕೂ ಇಲ್ಲ (ಇದು ಸುಳ್ಳಾಗಲೀ ಎಂಬ ಆಶಯ). ಅಂತದ್ದರಲ್ಲಿ ಈ ಇಬ್ಬರ ನಾಯಕತ್ವ ಗುಣ, ಸಂಘಟನಾ ಚಾತುರ್ಯ ಮತ್ತು ಹೋರಾಟದ ಹಿನ್ನೆಲೆಯಿಂದ ಮಾರುದ್ದ ದೂರದಲ್ಲಿರುವ ಬಿಜೆಪಿಯ ಎರಡನೇ ಪೀಳಿಗೆ ನಾಯಕರು ಕಾಯುವದರಲ್ಲಿ ತಪ್ಪೇನಿಲ್ಲ!

Thursday, April 23, 2009

ಯಡಿಯೂರಪ್ಪ ಎಂಬ ಬಿಜೆಪಿಯ ವಿರೋಧ ಪಕ್ಷ

’ಕತ್ತಲು ಕರಗುವುದು, ಕಮಲ ಅರಳುವುದು’ ಇದು ಜನಸಂಘ ಭಾರತೀಯ ಜನತಾ ಪಕ್ಷವಾಗಿ ರೂಪುಗೊಳ್ಳುವ ಸಂದರ್ಭದಲ್ಲಿ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಮಾಡಿದ ಭಾಷಣದಲ್ಲಿದ್ದ ಆಶಯ.
ಸಮಯ ಸಾಗಿದೆ, ವರ್ಷಗಳು ಉರುಳಿದೆ. ಕಮಲ ಅರಳಿದೆ. ಆದರೆ ಕತ್ತಲೆ...? ವಿಪರ್ಯಾಸವೆಂದರೆ ಕಮಲದೊಳಗೆ ಕತ್ತಲೆ ಆವರಿಸಿಕೊಳ್ಳತ್ತಿದೆಯಾ ಎಂಬ ಭಯ ಕಾಡುತ್ತಿದೆ. ಅದರಲ್ಲೂ ರಾಜ್ಯ ಬಿಜೆಪಿಯನ್ನು ಕಂಡಾಗ!
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಉದಾತ್ತ ಗುರಿಗಳನ್ನಿಟ್ಟುಕೊಂಡು ಅದನ್ನು ಸಾಧಿಸಲು ಸನ್ಮಾರ್ಗವನ್ನೇ ಆಯ್ದುಕೊಂಡು ಅದರಲ್ಲೆ ಸಾಗುತಿರುವ ಸಂಘಟನೆ. ಬಿಜೆಪಿ ಅದರ ರಾಜಕೀಯ ಉದ್ದೇಶಗಳನ್ನು ಪೂರೈಸಲಿರುವ ಸಂಘಟನೆಯಾಗಿದ್ದುಕೊಂಡು ಯಾಕಿಷ್ಟು ನೈತಿಕ‌‌‌‌‌‌‌‌‌‌‌ ಅಧ:ಪತನಕ್ಕಿಡಾಗುತ್ತಿದೆ? ಎಂಬುದೇ ಪರಿಹರಿಸಲಾಗದ ಪ್ರಶ್ನೆಯಾಗಿ ಉಳಿದಿದೆ.
ಬಿಜೆಪಿ ಕೇಂದ್ರದಲ್ಲಿ ಸುಮಾರು ಆರು ವರ್ಷಗಳ ಕಾಲ ಆಡಳಿತ ನಡೆಸಿದ ಎನ್ ಡಿ ಎ ಮೈತ್ರಿಕೂಟದ ನೇತ್ರತ್ವ ವಹಿಸಿತ್ತು. ಉತ್ತಮ ಆಡಳಿತವನ್ನೇ ನೀಡಿತ್ತು ಕೂಡ. ಆದರೆ ಅಧಿಕಾರ ಕಳೆದುಕೊಂಡಿದ್ದು ಅನಿರೀಕ್ಷಿತ. ಅದರ ಬಗ್ಗೆ ಇಂದಿಗೂ ಒಂದು ಬಗ್ಗೆಯ ಅವ್ಯಕ್ತ ಖೇದವಿದೆ. ಇವತ್ತಿಗೂ ಒಬ್ಬ ಬಿಜೆಪಿ ಕಾರ್ಯಕರ್ತ ಆ ಆರು ವರ್ಷಗಳ ಬಗ್ಗೆ ಹೆಮ್ಮೆಯಿಂದ ಎದೆ ತಟ್ಟಿ ಮಾತನಾಡುತ್ತಾನೆ ಅದಾಗಿ ಐದು ವರ್ಷಗಳ ಬಳಿಕವೂ!
ಅದೇ ವಾಜಪೇಯಿ ಮತ್ತವರೊಂದಿಗೆ ಹೆಚ್ಚುವರಿಯಾಗಿ ಗುಜರಾತ್ ನ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಆಡಳಿತವನ್ನು ಆದರ್ಶ ಎಂದು ಹೇಳುತ್ತ ನಮ್ಮ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದು ಹತ್ತು ತಿಂಗಳಾಯಿತು. ಅಧಿಕಾರಕ್ಕೆ ಬಂದದ್ದೆ ತಡ ಈ ಆದರ್ಶಗಳು ಹೇಳ ಹೆಸರಿಲ್ಲದಂತೆ ಮಾಯವಾಗಿದೆ.
ಬರಿ ಹತ್ತು ತಿಂಗಳ ಹಿಂದೆ ಕರ್ನಾಟಕದ ಬಿಜೆಪಿ ಕಾರ್ಯಕರ್ತನಿಗೆ ಮಾದರಿ ಹೋರಾಟಗಾರ ಮತ್ತು ಆದರ್ಶ ವ್ಯಕ್ತಿಯಾಗಿದ್ದ ಯಡಿಯೂರಪ್ಪ ಇಂದು ಅದೇ ಕಾರ್ಯಕರ್ತರಿಗೆ ಅಸಹ್ಯ ಹುಟ್ಟಿಸಿದ್ದಾರೆ.
ಒಂದೂರು. ಅಲ್ಲಿ ಬಹು ಹಿಂದಿನಿಂದಲೂ ಒಂದು ಮನೆ ಅರೆಸ್ಸೆಸ್ ಮನೆಯೆಂದೆ ಗುರುತಿಸಲ್ಪಟ್ಟಿತ್ತು. ಆ ಮನೆಯ ಯಜಮಾನ ಜನಸಂಘದ ಕಾಲದಿಂದಲೂ ಇಂದಿನ ಬೆಜೆಪಿಯ ಮೂಲ ತತ್ವಗಳ ಪ್ರತಿಪಾದಕರು.ಅ ಊರಿನಲ್ಲಿ ಈ ಪಕ್ಷದ ಐಡೆಂಟಿಟಿಯಾಗಿ ಗುರುತಿಸಲ್ಪಟ್ಟವರು. ಹಿಂದುತ್ವದ ಕೆಲಸಕ್ಕಾಗಿ ತಮ್ಮ ಕೈಯಿಂದಲೇ ಖರ್ಚು ಮಾಡುತ್ತಿದ್ದವರು. ಸಂಘ ಅಥವಾ ಪಕ್ಷದಿಂದ ಅವರೇನು ಬಯಸಿದವರಲ್ಲ. ಸಂಘಟನೆಗಾಗಿ ಅವರು ಹಲವರ ವಿರೋಧ ಕಟ್ಟಿಕೊಂಡವರು. ಅವರು ಈಗಲೂ ಹಾಗೆಯೇ ಇದ್ದಾರೆ. ಅದೇ ಬಡತನ, ತನ್ನತನ ಮತ್ತು ಆದರ್ಶದೊಂದಿಗೆ!
ಅವರ ಮನೆಯಿಂದ ೨-೩ ಕಿಲೋಮಿಟರ್‍ ದೂರದಲ್ಲಿ ಹೊಸದೊಂದು ಮನೆ ನಿರ್ಮಾಣವಾಗಿದೆ. ಅದಕ್ಕೆ ಸುಮಾರು ೪೦ ಲಕ್ಷ ಖರ್ಚಾಗಿರಬಹುದು. ಆ ಮನೆ ತುಂಬಾ ಐಷಾರಾಮಿ ವಸ್ತುಗಳಿವೆ. ಮನೆ ಸದಸ್ಯರ ಹೆಸರಲ್ಲಿ ಸಾಕಷ್ಟು ಅಕೌಂಟ್ ಗಳಿವೆ. ಅವನಲ್ಲಿ ಕನಿಷ್ಟ ೧ ಕೋಟಿ ರೂಪಾಯಿಯ ಆಸ್ತಿಯಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಎರಡು ವಷðಗಳ ಹಿಂದೆ ಅವನು ಕೇವಲ ಎರಡು ಎಕರೆ ಭೂಮಿಗೆ ಒಡೆಯನಾಗಿದ್ದ. 'ಇಷ್ಟೆಲ್ಲಾ ಅಸ್ತಿಯನ್ನು ಸಂಪಾದಿಸುತ್ತೇನೆ' ಎಂದು ಅವನು ಕನಸ್ಸಿನಲ್ಲೂ ಯೋಚಿಸಿರಲಿಕ್ಕಿಲ್ಲ. ಅವನು ಇಷ್ಟೆಲ್ಲ ಹೇಗೆ, ಎಲ್ಲಿಂದ, ಯಾವಗ ಸಂಪಾದಿಸಿದ? ಉತ್ತರ ಸರಳವಾಗಿದೆ. ಅವನು ಯಡಿಯೂರಪ್ಪನವರ ಹತ್ತಿರದವರೊಬ್ಬರ ಆಪ್ತ ಕಾರ್ಯದರ್ಶಿಯಾಗಿದ್ದಾನೆ ಅಷ್ಟೇ!
ನನಗೆ ಗೊತ್ತಿರುವಂತೆ ಒಬ್ಬರು ಬಿಜೆಪಿ ನಾಯಕರಿದ್ದಾರೆ. ಅವರು ಎಲ್ಲಾ ರೀತಿಯಲ್ಲೂ ಚುನಾವಣೆಗೆ ಸ್ಪರ್ಧಿಸಲು ಆರ್ಹರಾಗಿದ್ದರು. ಆದರೆ ಚುನಾವಣೆಗೆ ಚೆಲ್ಲಲ್ಲು ಬೇಕಾಗಿದ್ದ ಹಣ ಅವರಲ್ಲಿರಲಿಲ್ಲ. ಅವರಿಗೆ ಟಿಕೆಟ್ ನಿರಾಕರಿಸಲು ಇದೇ ವಾಸ್ತವ ಕಾರಣ!
ರಾಜಕೀಯ ಪಕ್ಷಗಳ ಮುಖ್ಯ ಉದ್ದೇಶ ಅಧಿಕಾರ ಗಳಿಸುವುದು ನಾನು ಇದನ್ನು ಒಪ್ಪಿಕೊಳ್ಳುತ್ತೇನೆ. ಹಾಗೆಯೇ, ಎಲ್ಲಾ ರಾಜಕೀಯ ಪಕ್ಷಗಳ ಪ್ರತಿಯೊಬ್ಬ ಕಾರ್ಯಕರ್ತನ ಕನಸು ಆಡಳಿತ ನಡೆಸುವುದು. ಅವರಿಗೂ ಈ ಕನಸಿದೆ. ಇನ್ನಾವರು ಏನೂ ಮಾಡಬೇಕು? ತನ್ನ ’ಜನಪರ’ ಕೆಲಸ ಬಿಟ್ಟು ’ಹಣ’ ಮಾಡಬೇಕು ಅಷ್ಟೇ.
ಹತ್ತು ತಿಂಗಳ ಹಿಂದೆ ಅಂದರೆ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗಾಗಿ ಅಂದರೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿಸಲು ಅವಿರತವಾಗಿ ದುಡಿದಿದ್ದ ಅನೇಕ ಕಾರ್ಯಕರ್ತರು ಈ ಚುನಾವಣ ಸಂದರ್ಭ ಮನೆಯಲ್ಲಿ ಕುಳಿತಿದ್ದಾರೆ. ಕಾರಣ, ಅವರು ಇಷ್ಟರವರೆಗೆ ಕಾಂಗ್ರೇಸ್, ತ್ರತೀಯ ರಂಗ ಏನು ಮಾಡಿದೆ, ಮಾಡಿತ್ತು, ಮಾಡಬಹುದು ಎಂದು ಹೇಳುತ್ತ ಬಂದಿದ್ದರೋ ಅದನ್ನೀಗ ಅವರ ಪಕ್ಷ ಮಾಡುತ್ತಿದೆ. ಇದನ್ನು ಜನ ಸಾಮಾನ್ಯ ಇವರಲ್ಲಿ ಪ್ರಶ್ನಿಸಿದರೆ ಅವರಿಗೆ ಉತ್ತರ ನೀಡಲು ಆಗುತ್ತಿಲ್ಲವಂತೆ.
ಹಿರಿಯ ಅರೆಸ್ಸೆಸ್ ಸ್ವಯಂಸೇವಕರೊಬ್ಬರ ಜತೆ ಮಾತನಾಡುತ್ತಿದೆ ಆಗ ಅವರು " ಹಿಂದೆ ಅರೆಸ್ಸೆಸ್ ಸ್ವಯಂಸೇವಕ ಎಂದರೆ ಊರಿಗೆ ಸ್ವಾಮೀಜಿ ಇದ್ದಂತೆ, ಜನರು ಅಷ್ಟು ಗೌರವದಿಂದ ಕಾಣುತ್ತಿದ್ದರು, ಇಂದಿಗೂ ಅರೆಸ್ಸೆಸ್ ಸ್ವಯಂಸೇವಕರಿಗೆ ಆ ಮಾರ್ಯಾದೆ ಇದ್ದೆ ಇದೆ. ಅದರೆ ಬಿಜೆಪಿಯಲ್ಲಿ ಎಲ್ಲೂ ಸಲ್ಲದ, ಸೈದ್ದಾಂತಿಕವಾಗಿ ಗಟ್ಟಿತನ ಇಲ್ಲದವರೇ ಕಾರ್ಯಕರ್ತರಾಗುತ್ತಿದ್ದರೆ ಮತ್ತು ಅವರಿಗೆ ಪಕ್ಷದಲ್ಲಿ ಒಳ್ಳೆ ಸ್ಥಾನಮಾನ ಸಿಗುತ್ತಿದೆ" ಈ ನೋವು ಯಡ್ಡಿಗೆ ಅರ್ಥವಾಗುತ್ತದೆಯೇ?
ಸೈದ್ದಾಂತಿಕವಾಗಿ ಗಟ್ಟಿತನ ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ೨೦೦೮ರಲ್ಲಿ ಅಣು ಒಪ್ಪಂದದ ಸಂಬಂಧ ನಡೆದ ಅವಿಶ್ವಾಸ ಗೊತ್ತುವಳಿ ಸಂದರ್ಭ ತಿಪ್ಪರಲಾಗ ಹಾಕಿದ ರಾಜ್ಯದ ಮೂವರು ಸಂಸದರ ಉದಾಹರಣೆ ಯಡ್ಡಿ ಮುಂದೆ ಇದೆ. ಅದರೂ...?
ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲಾಗಿ ಗೋಚರಿಸಿರುವ ಕರ್ನಾಟಕ ಅದರ ಪಾಲಿಗೆ ಮತ್ತೊಂದು ಉತ್ತರ ಪ್ರದೇಶವಾಗದಿದ್ದರೆ ಸಾಕು!
ಬಿಜೆಪಿ ಆಡಳಿತದ ಖದರು ನೆರೆಯ ರಾಜ್ಯಗಳಿಂದ ರಾಜ್ಯದ ಗಡಿ ಪ್ರವೇಶಿಸಿದೊಡನೆ ಗೊತ್ತಾಗಬೇಕು, ಈ ರಾಜ್ಯ ಪ್ರಕಾಶಿಸುತ್ತಿದೆ ಎಂದೆನಿಸಬೇಕು. ಬಿಜೆಪಿಯ ಬಗ್ಗೆ ಧನಾತ್ಮಕ ಆಭಿಪ್ರಾಯ ಮೂಡಬೇಕು. ಆದರೆ ಈಗ ಹಾಗಾಗುತ್ತಿದೆ ಎಂದು ಯಾರಿಗದರೂ ಅನಿಸುತ್ತಿದೆಯೇ?
ಒಬ್ಬ ವ್ಯಕ್ತಿಯ ಆಡಳಿತ ಸಾಮರ್ಥ್ಯವನ್ನು ಅಳೆಯಲು ಹತ್ತು ತಿಂಗಳು ಸಾಕಾಗುವುದಿಲ್ಲ ಅದರೆ ಕಳೆದುಕೊಂಡಿರುವ ಸೈದ್ದಾಂತಿಕ ನೆಲೆಗಟ್ಟನ್ನು ಇನ್ನು ಹತ್ತು ವರ್ಷ ಕಳೆದರೂ ಗಳಿಸಿಕೊಳ್ಳಲು ಸಾಧ್ಯನಾ? ವಾಜಪೇಯಿ ಸರ್ಕಾರ ಹದಿಮೂರು ತಿಂಗಳು ಆಡಳಿತ ನಡೆಸಿ ಅಧಿಕಾರದಿಂದ ಕೆಳಗಿಳಿದಾಗ ಒಬ್ಬ ಸಾಮಾನ್ಯ ಕಾರ್ಯಕರ್ತ ಮುಂದಿನ ಬಾರಿ ಬಿಜೆಪಿಯೇ ಆಡಳಿತ ನಡೆಸಬೇಕು ಎಂದು ಹಠ ಕಟ್ಟಿ ದುಡಿದಿದ್ದ, ಆಗ ಯಾರೂ ಕೊಂಕು ನುಡಿದಿರಲಿಲ್ಲ. ಯಾಕೆಂದರೆ ವಾಜಪೇಯಿ, ಅಡ್ವಾಣಿ ರೂಪಿಸಿದ್ದ ಮಾದರಿ ಮತ್ತು ಆ ಬಗೆಗಿನ ಅವರ ನಿಷ್ಟೆ ಅಷ್ಟು ಉನ್ನತವಾಗಿತ್ತು. ಆದರೆ ಯಡ್ಡಿಯದ್ದು?
ವಾಜಪೇಯಿಗೆ ಮಂತ್ರಿಯಾಗಬೇಕು ಎಂದೆನಿಸಿದ್ದರೆ ಅವರು ಆ ಅಸೆ ಯಾವತ್ತೋ ಈಡೇರುತ್ತಿತ್ತು. ಆದರೆ ಆವರು ಹಾಗೇ ಮಾಡಲಿಲ್ಲ ಯಾಕೆಂದರೆ ಅವರಿಗೆ ಸಿದ್ದಾಂತ ಮುಖ್ಯವಾಗಿತ್ತು. ಅದ್ದರಿಂದಲೇ ಅವರು ಇಂದಿಗೂ ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರ ಹ್ರದಯ ಸಿಂಹಾಸನದೀಶ್ವರ. ಈ ಕಾರಣಕ್ಕೇಯೆ ಅವರ ಬಗ್ಗೆ ಬಿ. ಕೆ. ಹರಿಪ್ರಸಾದ್ ಎಂಬ ಕಾಂಗ್ರೇಸ್ ನಾಯಕ ಕೇವಲವಾಗಿ ಮಾತನಾಡಿದಾಗ ನಮ್ಮ ರಕ್ತ ಕುದಿಯುವುದು. ಅದೇ ಯಡ್ಡಿ ಬಗ್ಗೆ ಯಾರಾದರೂ ಏನಾದರೂ ಹೇಳಿದರೆ ಅವರಿಗೆ ಮಾತ್ರ ಕೋಪ ಬರುತ್ತದೆ. ಉಳಿದವರು ಮುಸಿಮುಸಿ ನಗುತ್ತಿರುತ್ತಾರೆ!
ಇಂದು ರಾಜ್ಯ ಬಿಜೆಪಿಗೆ ನಾಯಕರ ಕೊರತೆಯಿಲ್ಲ, ಕೊರತೆ ಇರುವುದು ಸೈದ್ದಾಂತಿಕತೆ ಮತ್ತು ನೈತಿಕತೆಯದ್ದು. ಯಡ್ಡಿ ಸಾಗುತ್ತಿರುವ ಹಾದಿಯಲ್ಲಿ ಸಾಗಿದರೆ ಅವರು ಮತ್ತು ಕೆಲವರು ಮಾತ್ರ ಲಾಭ ಪಡೆಯುತ್ತಾರೆ. ಬಿಜೆಪಿಗೆ ತನಗಿದರಿಂದ ಲಾಭವಾಗಿದೆ ಎಂದೆನಿಸಬಹುದು ಆದರೆ ಇದರ ದೂರಾಗಾಮಿ ಪರಿಣಾಮ ಮಾತ್ರ ಋಣಾತ್ಮಕ. ಮುಂದೊಂದು ದಿನ ಆಥವಾ ಶೀಘ್ರದಲ್ಲೇ ಬಿಜೆಪಿಗೆ ನೈಜ ಮತ್ತು ಜನಪರ ನಾಯಕರು, ಕಾರ್ಯಕರ್ತರೇ ಇಲ್ಲದೇ ಹೋಗಬಹುದು.
ಕೆಲವೇ ದಿನಗಳ ಹಿಂದೆ ಚುನಾವಣೆಯ ಅಮಲಿನಲ್ಲಿ, ಅಲ್ಪಸಂಖ್ಯಾತರನ್ನು ಒಲಿಸಿಕೊಳ್ಳುವ ಬರದಲ್ಲಿ ನಾನು ಆಧಿಕಾರದಲ್ಲಿರುವ ತನಕ ಅಲ್ಪಸಂಖ್ಯಾತರ ಒಂದು ಕೂದಲನ್ನು ಕೂಡ ಕೊಂಕಲು ಬಿಡುವುದಿಲ್ಲ ಎಂದು ಆರ್ಭಟಿಸಿದ್ದರು ನಮ್ಮ ಮುಖ್ಯ ಮಂತ್ರಿಗಳು. ಅದನ್ನೇ ಕೋಮು ಗಲಭೆಯ ಹೆಸರಿನಲ್ಲಿ ರಾಜ್ಯದ ಯಾವುದೇ ನಾಗರಿಕನ ಕೂದಲು ಕೂಡ ಮುಟ್ಟಲು ಬಿಡುವುದಿಲ್ಲ ಎಂದನ್ನುತ್ತಿದ್ದಾರೆ ಅದೇಷ್ಟು ಅರ್ಥಪೂðಣವಾಗಿರುತ್ತಿತ್ತು. ಈ ಮಾತು ಬಿಜೆಪಿ ಬಹುಸಂಖ್ಯಾತರ ಪಕ್ಷ ಅಲ್ಲವೆಂಬುದನ್ನು ಸಾಬೀತು ಪಡಿಸಿತು. ತಾವು ಜಾತ್ಯತೀತರು ಎಂದು ಕರೆದುಕೊಳ್ಳವ ಪಕ್ಷಗಳು ಮತ್ತು ಅಲ್ಪಸಂಖ್ಯಾತ ವರ್ಗದ ಬಹುಪಾಲು ನಾಯಕರುಗಳು ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಎಂದೇ ಹೇಳುತ್ತಾರೆ. ಇನ್ನೂ ರಾಜ್ಯದ ಬಿಜೆಪಿ ಸರಕಾರವನ್ನು ಅಭಿವ್ರಧಿಪರ ಪಕ್ಷ ಎಂದು ಒಪ್ಪಿಕೊಳ್ಳಲು ಕೂಡ ಸಾಧ್ಯವಿಲ್ಲ. ಹಾಗಾದರೆ ಬಿಜೆಪಿ ಯಾರ ಪಕ್ಷ?
ನನಗಂತೂ ಆಡ್ವಾಣಿ ಪ್ರಧಾನಿಯಾಗಬೇಕೆಂಬ ಆಸೆ ಬೆಟ್ಟದಷ್ಟಿದೆ. ಆದರೆ ರಾಜ್ಯ ಬಿಜೆಪಿಯ ಬಗ್ಗೆ ಮತ್ತು ಅದು ಸಾಗುತ್ತಿರುವ ಹಾದಿಯ ಬಗ್ಗೆ ರೇಜಿಗೆಯಿದೆ.
ನನ್ನ ಯೋಚನೆ ಹೀಗಿದೆ, ಆಡ್ವಾಣಿ ದೇಶದ ಪ್ರಧಾನಿ ಆಗಬೇಕು ಆದರೆ ರಾಜ್ಯದಲ್ಲಿ ಬಿಜೆಪಿ ನಿರಾಶಾದಾಯಕ ಪ್ರದರ್ಶನ ನೀಡಬೇಕು. ಇಲ್ಲದೇ ಹೋದಲ್ಲಿ ಯಡ್ಡಿ ಮತ್ತವರ ಸಂಗಡಿಗರು ತಾವು ಮಾಡಿದ್ದು ಸರಿ ಮತ್ತು ಇದಕ್ಕೆ ಜನರ ಆಶಿರ್ವಾದ ಇದೆಯೆಂದು ಭಾವಿಸಿ ರಾಜ್ಯದಲ್ಲಿನ ನೈಜ ಬಿಜೆಪಿಯನ್ನು ಬುಡಸಮೇತ ಕಿತ್ತೆಸೆಯುವುದ ಖಂಡಿತ.

Wednesday, April 8, 2009

ಅದರರ್ಥ ಅವರು ಟೀಕಾತೀತರೆಂದಲ್ಲ! ಆದರೆ....

ಕನ್ನಡ ಪತ್ರಿಕೋದ್ಯಮ ನಿಂತ ನೀರಾಗಿದ್ದ ಕಾಲದಲ್ಲಿ ಹುಟ್ಟಿಕೊಂಡು ಈ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾದ ಪತ್ರಿಕೆ ’ವಿಜಯ ಕರ್ನಾಟಕ’. ’ವಿಜಯ ಕರ್ನಾಟಕ’ ಒಳ್ಳೆಯದನ್ನೇ ಮಾಡಿತು ಎಂಬುದಕ್ಕಿಂತ ಈ ಪತ್ರಿಕೆಯ ಕ್ಷಿಪ್ರ ಬೆಳವಣಿಗೆಗೆ ಇಡೀ ಕನ್ನಡ ಪತ್ರಿಕೋದ್ಯಮಕ್ಕೆ ಮತ್ತು ಆ ಮೂಲಕ ಓದುಗರಿಗೆ ಸಾಕಷ್ಟು ಒಳಿತನ್ನು ಮಾಡಿತು. ಇಂದು ಎಲ್ಲ ಮುಖ್ಯವಾಹಿನಿ ಪತ್ರಿಕೆಗಳಲ್ಲಿ ತಾವು ’ಚಂದ’ ಕಾಣಿಸಿಕೊಳ್ಳಬೇಕೆಂಬ ಹಪಾಹಪಿ ಹುಟ್ಟಲು ’ವಿಜಯ ಕರ್ನಾಟಕ’ವೇ ಕಾರಣ. ವಿಜಯ ಕರ್ನಾಟಕ ಬೇರೆ ಪತ್ರಿಕೆಯ ಓದುಗರನ್ನು ತನ್ನತ್ತ ಸೆಳೆದುಕೊಂಡದಕ್ಕಿಂತ ಹೆಚ್ಚಾಗಿ ಪತ್ರಿಕೆಗಳನ್ನು ಓದುವ ಒಂದು ಓದುಗ ವಲಯವನ್ನೇ ಸ್ರಷ್ಟಿಸಿತು.

ಇದಕ್ಕೇ ಸಾಕ್ಷಿ ಇಂದು ಮುಖ್ಯವಾಹಿನಿ ಪತ್ರಿಕೆಗಳನ್ನು ’ಕೊಂಡು’ ಓದುವ ಸುಮಾರು ಹದಿನೈದು ಲಕ್ಷ ಓದುಗರು. ಅದಕ್ಕೆ ಕಾರಣವಾದ ಅಂಶಗಳ ಬಗ್ಗೆ ನಾನಿಲ್ಲಿ ಚರ್ಚೆ ಮಾಡುತ್ತಿಲ್ಲ. ಆದರೆ ವಿಜಯ ಕರ್ನಾಟಕದ ಈ ಸಾಧನೆಯ ಹಿಂದಿರುವ ವ್ಯಕ್ತಿ ಮತ್ತು ಒಂದು ಅಂಶ ಅಥವಾ ಸಿಧಾಂತದ ಬಗ್ಗೆ ಕೆಲವರು ಉರಿ ಕಾರುತ್ತಿದ್ದಾರೆ ಅದರಲ್ಲೂ ಒಂದು ಸಂಜೆ ಪತ್ರಿಕೆಯ ಸಂಪಾದಕರು.

ಅದಕ್ಕೆ ಕಾರಣವೂ ಇದೆ! ವಿಕ ಅಂದೊಡನೆ ತಕ್ಷಣ ನೆನಪಿಗೆ ಬರುವುದು ಅದರ ಸಂಪಾದಕ ವಿಶ್ವೇಶ್ವರ ಭಟ್ ಮತ್ತು ಅದರ ಅಂಕಣಕಾರರ ದಂಡು! ಇಂದು ಕನ್ನಡ ದಿನಪತ್ರಿಕೆಗಳ ಸಂಪಾದಕರಲ್ಲಿ ವಿಶ್ವೇಶ್ವರ ಭಟ್ ರಷ್ಟು ಜನಪ್ರಿಯ (ಅದೂ ಒಳ್ಳೆಯ ಕಾರಣಕ್ಕೆ) ಮತ್ತು ಬರವಣಿಗೆಯ ಮೂಲಕ ಓದುಗರಿಗೆ ಆಪ್ತರಾಗಿರುವ ಸಂಪಾದಕ ಇನ್ನೊಬ್ಬರಿಲ್ಲ. ಬೇರೆ ಯಶಸ್ವಿ ಸಂಪಾದಕರಿರಬಹುದು ಅದು ಬೇರೆ ವಿಷಯ. ವಿಕದಲ್ಲಿ ಪ್ರಕಟಗೊಳ್ಳುವ ಪ್ರತಾಪ್ ಸಿಂಹ ಮತ್ತು ಭಟ್ರ ಅಂಕಣಗಳು ಓದುಗರಲ್ಲಿ ಸಂಚಲನ ಉಂಟುಮಾಡುವ ಸಾಮರ್ಥ್ಯ ಇರುವಂತಹವು, ಇದು ಈ ಮೊದಲೇ ಹತ್ತಾರು ಸಂದರ್ಭಗಳಲ್ಲಿ ಸಾಬೀತಾಗಿದೆ ಕೂಡ.

ಅವರ ಅಂಕಣದಲ್ಲಿನ ವಿಷಯ ಅಥವಾ ಅಭಿಪ್ರಾಯವನ್ನು ಒಪ್ಪುವುದು ಬಿಡುವುದು ಓದುಗರಿಗೆ ಬಿಟ್ಟದ್ದು. ಆದರೆ ಅವರ ಪ್ರತಿಭೆಯನ್ನೇ ಪ್ರಶ್ನಿಸುವ ಚಾಳಿಯನ್ನು ಕೆಲವರು ಬೆಳೆಸಿಕೊಂಡಿರುವುದು ಕನ್ನಡ ಪತ್ರಿಕೋದ್ಯಮದ ಆರೋಗ್ಯದ ದೃಷ್ಟಿಯಲ್ಲಿ ತೀರಾ ಅನಾಹುತಕಾರಿ. ಇನ್ನು ವಿಕ ಬಲಪಂಥಿಯ ಪತ್ರಿಕೆ ಎಂಬ ಕಾರಣಕ್ಕೇ ಕೆಲವರು ಇದನ್ನು ಟೀಕಿಸುತ್ತಾರೆ. ಈ ದೇಶದಲ್ಲಿ ಎಡಪಂಥಿಯರು ಪತ್ರಿಕೆ ನಡೆಸಬಹುದಾದರೆ ಅವರು ಬರೆಯಬಹುದಾದರೆ ಬಲಪಂಥಿಯರು ಯಾಕೆ ಆ ಕೆಲಸ ಮಾಡಬಾರದು? ಒಂಚೂರು ಅಚೀಚೆ ಆದರೆ ಇದು ಪ್ರಜಾಪ್ರಭುತ್ವ ರಾಷ್ಟ್ರ ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಇದೆ, ಎಲ್ಲರಿಗೂ ತಮಗನಿಸಿದನ್ನು ಹೇಳುವ ಸಂವಿಧಾನದತ್ತ ಹಕ್ಕಿದೆ ಎಂದು ಕೂಗು ಹಾಕುವವರೇ ಬಲಪಂಥಿಯರು ಪತ್ರಿಕೆ ಮಾಡಿ ಅದನ್ನು ಪ್ರಸರಣದಲ್ಲಿ ಮೊದಲ ಸ್ಥಾನಕ್ಕೆ ತಂದರೆ ಅದರಲ್ಲಿ ಅವರ ಅನಿಸಿಕೆ ಹೇಳಿದರೆ ಮೈ ಮೇಲೆ ಇರುವೆ ಬಿಟ್ಟುಕೊಂಡವರ ಥರ ವರ್ತಿಸುವುದು ಯಾಕೆ? ಪಾಪ, ಬಲಪಂಥಿಯರಿಗೆ ಅಭಿವ್ಯಕ್ತಿ ಸ್ವಾತಂತ್ರ ಇಲ್ಲವೇ? ಪ್ರಜಾಪ್ರಭುತ್ವ ನಿಂತಿರುವುದೇ ಅಭಿಪ್ರಾಯ ಹೇಳುವ ಸ್ವಾತಂತ್ರದ ಮೇಲೆ.

ಯಾರದ್ದೇ ಅಭಿಪ್ರಾಯ ನಮಗೆ ಪಥ್ಯವಾಗದಿದ್ದಲ್ಲಿ ಅದನ್ನು ಪ್ರಜಾಪ್ರಭುತ್ವ ರೀತಿಯಲ್ಲಿ ವ್ಯಕ್ತಿ ನಿಂದನೆ ಆಗದಂತೆ ಟೀಕಿಸುವುದು ಬಿಟ್ಟು ವ್ಯಕ್ತಿ ನಿಂದನೆ ಮಟ್ಟಕ್ಕೆ ಇಳಿಯುವುದು ಎಷ್ಟು ಸರಿ? ನಂತರ ಅವರೇ ಪ್ರಜಾಪ್ರಭುತ್ವದ ಬಗ್ಗೆ, ಸಂವಿಧಾನದ ಬಗ್ಗೆ ಪಾಠ ಮಾಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಹೆಚ್ಚು ಜನರ ಆಭಿಪ್ರಾಯಕ್ಕೆ ಮನ್ನಣೆ, ವಿಕವನ್ನು ೬ ಲಕ್ಷ ಜನ ಓದುತ್ತಾರೆ ಅಂದರೆ ಕರ್ನಾಟಕದಲ್ಲಿ ಹೆಚ್ಚು ಜನರು ಬಲಪಂಥಿಯ ಬರಹವನ್ನು ಇಷ್ಟಪಡುತ್ತಾರೆ ಎಂದರ್ಥ ತಾನೇ? ಅಂದರೆ ವಿಕ ಬೇರೊಂದು ಪಂಥದ ಪತ್ರಿಕೆಯಾದರೆ ಈ ೬ ಲಕ್ಷ ಜನರ ಅಭಿರುಚಿ ಮತ್ತು ಧ್ವನಿ ಏನಾಗಬೇಡ?

ಮತ್ತೇ ವಿಕದ ಪ್ರಸರಣ ಸಂಖ್ಯೆ ಕಡಿಮೆಯಾಗಲು ಕೆಲವರು ಊಹಿಸುತ್ತಿರುವ ಕಾರಣಕ್ಕಿ೦ತ ತೀರಾ ಭಿನ್ನ ಕಾರಣವಿದೆ ಆ ಬಗ್ಗೆ ತಾವು ಯೋಚನೆ ಮಾಡದೆ ತಮ್ಮ ತಮ್ಮ ಪತ್ರಿಕೆಗಳ ಪ್ರಸರಣ ಹೆಚ್ಚಿಸುವ ಬಗ್ಗೆ ವಿಕದ ’ಹಿತ ಚಿಂತಕರು’ ಚಿಂತಿಸುವುದು ಒಳಿತು. ಇನ್ನೂ ಸಿಎನ್ಎನ್ ಐಬಿಎನ್ ನ ಮ್ಯಾನೇಜಿಂಗ್ ಎಡಿಟರ್‍ ರಾಜದೀಪ್ ಸರ್‍ ದೇಸಾಯಿಯವರು ಬಿ ವಿ ಸೀತಾರಾಂರನ್ನು ಬೇಟಿಯಾಗಲು ನಿರಾಕರಿಸಿದ್ದರು ಎಂದು ಭಟ್ರು ತಮ್ಮ ’ಜನಗಳ ಮನ’ ಅಂಕಣದಲ್ಲಿ ಬರೆದಿದ್ದರು. "ಇಲ್ಲ, ನಾನು ಸರ್‍ ದೇಸಾಯಿಯವರನ್ನು ಭೇಟಿಯಾಗಿ ಮಾತುಕಥೆ ನಡೆಸಿದ್ದೇನೆ, ಸರ್‍ ದೇಸಾಯಿ ದಂಪತಿ ತಮ್ಮನ್ನು ಬಹಳ ಚೆನ್ನಾಗಿ ಸತ್ಕರಿಸಿದ್ದಾರೆ" ಎಂದೆನ್ನುತ್ತಾರೆ ಸಿತಾರಾಂ. ಇವರಲ್ಲಿ ಯಾರದ್ದು ಸತ್ಯ? ಎಂಬುದೇ ನನಗೆ ಗೊತ್ತಾಗುತ್ತಿಲ್ಲ. ಸತ್ಯ ತಿಳಿದುಕೊಳ್ಳಲು ನನ್ನದೆ ಆದ ಮೂಲಗಳೂ ಇಲ್ಲ.

ಭಟ್ರು ಬರೆದದ್ದು ಸುಳ್ಳೇ ಆಗಿದ್ದರೆ ಸಿತಾರಾಂಗೆ ಆ ಬಗ್ಗೇ ಸ್ಪಷ್ಟೀಕರಣ ಕೊಡುವ ಹಕ್ಕಿದೆ. ಆದರೆ ಭಟ್ರು ಪ್ಯಾರಾನಾಯ್ಡ್ ಕಾಯಿಲೆ ಹಿಡಿದವರಂತೆ ವರ್ತಿಸುತ್ತಿದ್ದಾರೆ ಎಂದು ಹೇಳುವ ಯಾವುದೇ ಹಕ್ಕು ಬಿವಿಸೀ ಯವರಿಗೆ ಇಲ್ಲ. ಕನ್ನಡ ಪತ್ರಿಕೋದ್ಯಮಕ್ಕೆ ಭಟ್ರ ಕೊಡುಗೆ ಅಪಾರವಾದದ್ದು. ಅದು ಲೇಖನ, ಅಂಕಣ, ಪುಸ್ತಕ, ಅಥವಾ ಪತ್ರಿಕೆಯ ರೂಪದಲ್ಲಿರಬಹುದು. ಅದರರ್ಥ ಅವರು ಟೀಕಾತೀತರೆಂದಲ್ಲ! ಆದರೆ ಅವರ ಮೇಲೆ ಒಂದಿಷ್ಟು ಗೌರವವಿಟ್ಟುಕೊಂಡು ರಚನಾತ್ಮಕವಾಗಿ ಟೀಕಿಸಿದರೆ ಆ ರೀತಿ ಟೀಕಿಸುವವರಿಗೂ ಒಂದಿಷ್ಟು ಗೌರವ ಸಿಗಬಹುದೇನೋ...!

Sunday, April 5, 2009

ವರುಣ್ ಹೇಳಿದ್ದು ಸರಿಯಾಗಿದೆ ಕಾರಣ ಜಾತ್ಯತೀತರು ಅವರನ್ನು ಟೀಕಿಸುತ್ತಿದ್ದಾರೆ!

ರಾಜಕಾರಣ ’ಮೂರನ್ನು’ ಬಿಟ್ಟು ಸಾಕಷ್ಟು ವರ್ಷಗಳೇ ಸಂದಿವೆ. ರಾಜಕೀಯಕ್ಕೂ ಒಳ್ಳೆಯತನಕ್ಕೂ ಹಿಂದಿನಿಂದಲೂ ಎಣ್ನೆ ಸೀಗೆ ಸಂಬಂಧ. ಅದರ ಜನರೂ ಕನಿಷ್ಟ ಅಷ್ಟೋ ಇಷ್ಟೋ ಒಳ್ಳೆಯತನವನ್ನು ರಾಜಕಾರಣಿಗಳಿಂದ ನಿರೀಕ್ಷಿಸುತ್ತಿದ್ದರು. ಆದರೆ ಈಗ ಆ ನಿರೀಕ್ಷೆಯಿಂದಲೂ ದೂರ ಸರಿಯುತ್ತಿದ್ದಾರೆ.
ಹೌದು, ಇದಕ್ಕಿಂತ ಹೊಣೆಗೇಡಿತನ, ಅನೈತಿಕ ಮತ್ತು ಬೇಜವಾಬ್ದಾರಿ ರಾಜಕಾರಣ ಇರಲು ಸಾಧ್ಯಾನಾ? ಕೇಂದ್ರ ಸರ್ಕಾರ ೫೦,೦೦೦ ಕೋಟಿ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂಬ ನರೇಂದ್ರ ಮೋದಿಯವರ ಅರೋಪದ ಬಗ್ಗೆ ಯಾರೂ ಉತ್ತರಿಸುತ್ತಿಲ್ಲ, ಅದೂ ಮಾಧ್ಯಮಗಳಲ್ಲಿ ಚರ್ಚೆಯ ವಿಷಯವೂ ಅಗಿಲ್ಲ. ಆದರೆ ವರುಣ್ ಗಾಂಧಿ ಹೇಳಿದ ಆ ಒಂದು ಮಾತು...!
ವರುಣ್ ಗಾಂಧಿ ಹೇಳಿದ್ದದರು ಏನು? "ಹಿಂದೂಗಳ ವಿರುದ್ಧ ಎತ್ತುವ ಕೈಯನ್ನು ಕಡಿಯಬೇಕು" ಎಂದು ತಾನೆ? ಅದರಲ್ಲಿ ತಪ್ಪೇನಿದೆ? ಅದು ಮುಸ್ಲಿಮರದ್ದೆ ’ಕೈ’ಯೆಂದು ನಾವು ಹೇಗೆ ನಿರ್ಧಾರಕ್ಕೆ ಬರುವುದು? ಅದು ಮುಸ್ಲಿಮರದ್ದೆ ’ಕೈ’ ಎಂಬ ನಿರ್ಧಾರ ತೆಗೆದುಕೊಳ್ಳಬೇಕಾದರೆ ಅವರು ಅಂದರೆ ಮುಸ್ಲಿಮರು ಹಿಂದೆ ಹಿಂದೂಗಳ ವಿರುದ್ಧ ’ಕೈ’ ಮಾಡಿರಬೇಕು ತಾನೆ? ಇದೆಲ್ಲದಕ್ಕಿಂತ ಮುಖ್ಯವಾಗಿ ಮುಸ್ಲಿಮರ ವಿರುದ್ಧವೇ ಈ ಮಾತು ವರುಣ್ ಬಾಯಿಂದ ಬಂದಿದೆ ಎಂದೆನ್ನುವುದಾದರೆ ಅದೂ ಮುಸ್ಲಿಮರು ಹಿಂದೂಗಳ ಮೇಲೆ ’ಕೈ’ಯೆತ್ತಿದ ನಂತರ ಅವರ ’ಕೈ’ ಕಡಿಯಬೇಕು ಎಂದು ಅವರು ಹೇಳಿದ್ದು ತಾನೆ? ಅಂದರೆ ಮುಸ್ಲಿಮರು ಹಿಂದೂಗಳ ವಿರುದ್ದ ’ಕೈ’ಯೆತ್ತದಿದ್ದಾರೆ ಅವರ ’ಕೈ’ ಕಡಿಯುವುದಿಲ್ಲ ಎಂಬುದೂ ಕೂಡ ಅಲ್ಲೇ ಸ್ಪಷ್ಟವಾಗಿದೆ. ಅದ್ದರಿಂದ ಇಲ್ಲಿ ರಾಷ್ಟ್ರದ ಭದ್ರತೆಗೆ ಹಾನಿಯಗುವಂತದ್ದು ಏನಿಲ್ಲ ತಾನೆ? ಆದರೆ ಹಿಂದೂಗಳ ವಿರುದ್ಧ ಮುಸ್ಲಿಮರೂ ’ಕೈ’ಯಿತ್ತಿದ್ದರೂ ಸುಮ್ಮನಿರಬೇಕು ಎಂದು ಬಯಸುವುದು ಯಾವ ಸೀಮೆ ನ್ಯಾಯ?
ವರುಣ್, ಯೂ ಅರ್‍ ರೈಟ್.
ವರುಣ್ ಹೇಳಿದ್ದು ಸರಿಯಾಗಿದೆ ಕಾರಣ ಕಾಂಗ್ರೇಸ್ ಮತ್ತು ಜಾತ್ಯತೀತರು ಅವರನ್ನು ಟೀಕಿಸುತ್ತಿದ್ದಾರೆ!
ವರುಣ್ ರ ಸೋದರಿ ಪ್ರಿಯಾಂಕ ವಾಧ್ರ ಭಗವದ್ಗೀತೆಯನ್ನು ಓದುವಂತೆ ವರುಣ್ ಗೆ ಸಲಹೆ ನೀಡಿದ್ದಾರೆ. ನನ್ನ ಪ್ರಶ್ನೆ, ಶ್ರೀಮತಿ ವಾಧ್ರ ಭಗವದ್ಗೀತೆಯನ್ನು ಓದಿದ್ದಾರಾ? ಓದಿದ್ದರೆ ಅದರಲ್ಲಿನ ಯಾವ ಅಂಶವನ್ನು ಪಾಲಿಸುತ್ತಿದ್ದಾರಂತೆ? ಅದರಲ್ಲಿ ಎಲ್ಲಾದರೂ ಧರ್ಮಕ್ಕೆ ಚ್ಯುತಿಯಾದಗ ಸುಮ್ಮನೇ ನೋಡುತ್ತಿರು ಎಂದಿದೆ ಅಂತೆಯಾ? ಭಗವದ್ಗೀತೆಯಾ ಮೂಲ ಇರುವುದೇ ಧರ್ಮ ಸಂಸ್ಥಾಪನೆಯ ಆಶಯದಲ್ಲಿ. ಅದು ಬಿಜೆಪಿ ಹೇಳುವ ಹಿಂದುತ್ವ ಅಲ್ಲದಿರಬಹುದು ಆದರೆ ಹಿಂದುತ್ವವೇ ಇಲ್ಲದಿದ್ದಾರೆ ಭಗವದ್ಗೀತೆ ಇರುತ್ತಾ? ವರುಣ್ ಗಾಂಧಿ ಉಳಿಸುತ್ತೇನೆ ಎಂದದ್ದು ಈ ಹಿಂದುತ್ವವನ್ನು, ಆ ಮೂಲಕ ಶ್ರೀಮತಿ ವಾಧ್ರ ಹೇಳುತ್ತಿರುವ ಭಗವದ್ಗೀತೆಯನ್ನು ಮತ್ತು ಅದರೊಂದಿಗೆ ಹೊಸೆದು ಕೊಂಡಿರುವ ಜೀವನ ಕ್ರಮವನ್ನು. ಆದರೆ ವಂಶದ ಹೆಸರು ಹೇಳಿಕೊಂಡು ರಾಜಕೀಯ ಮಾಡುವವರಿಗೆ ಇದೆಲ್ಲ ಅರ್ಥವಾದರೆ ತಾನೆ?
ಇನ್ನು ಮಹಾಭಾರತದ ಶೈಲಿಯಲ್ಲೇ ಹೇಳಬೇಕಾದರೆ ಕಾಂಗ್ರೆಸ್ ದುಯೋ‌ðಧನನಂತೆ! ಅದು ಕ್ರಷ್ಣ ಮತ್ತು ಆಕ್ಷೋಹಿಣಿ ಸೈನ್ಯದ ಮಧ್ಯ ಆಯ್ಕೆ ಮಾಡುವುದು ಅಕ್ಷೋಹಿಣಿ ಸೈನ್ಯವನ್ನೇ! ಯಾಕೆಂದರೆ ಸಾವಿರಾರು ವೋಟ್ ಗಳಿವೆ ಅಲ್ವಾ?
ಇನ್ನು ವರುಣ್ ವಿರುದ್ಧ ರಾಷ್ಟ್ರೀಯ ಭದ್ರತೆ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ. ಅಂದರೆ ಕಸಬ್, ರಶೀದ್ ಮಲ್ಬಾರಿ, ಅ‌ಫ್ಜಲ್ ಗುರುವಿಗೂ ವರುಣ್ ಗಾಂಧಿಗೂ ವ್ಯತ್ಯಾಸವೇ ಇಲ್ವಾ?
ಹಿಂದಿನ ಎನ್ ಡಿಎ ಸರ್ಕಾರ ರಚಿಸಿದ್ದ ಪೊಟಾ ಕಾಯ್ದೆ ದುರುಪಯೋಗವಾಗುತ್ತದೆ ಎಂದು ಬೊಬ್ಬಿರಿದವರು ಇಂದು ಎನ್ ಎಸ್ ಎಯನ್ನು ಸದುಪಯೋಗ ಪಡಿಸಿಕೊಳುತ್ತಿದ್ದಾರ? ತಮ್ಮ ದ್ವೇಷದ ರಾಜಕಾರಣಕ್ಕೆ ಅದನ್ನೆ ದಾಳವಾಗಿರಿಸಿಕೊಳುತ್ತಿರುವುದು ವಿಪರ್ಯಾಸವೆ ಸರಿ. ಇತ್ತ ಮಾತೆತ್ತಿದರೆ ಸಂವಿಧಾನ, ಪ್ರಜಾಪ್ರಭುತ್ವ ಎನ್ನುವವರು ಯಾವುದೇ ಹುದ್ದೆ ಅಲಂಕರಿಸಲು ಯೋಗ್ಯರಲ್ಲವೆಂದು ವರದಿ ಇದ್ದರೂ ನವೀನ್ ಚಾವ್ಲರನ್ನು ಮುಖ್ಯ ಹುನಾವಣಾ ಆಯುಕ್ತರನ್ನಾಗಿ ನೇಮಿಸಿದ್ದು ಸಂವಿಧಾನ, ಪ್ರಜಾಪ್ರಭುತ್ವದ ಘನತೆ ಎತ್ತಿ ಹಿಡಿಯಲಾ? ಸದ್ದಾಂ ಹುಸೇನ್ ನ ಪೋಟೋ ಹಿಡಿದು ವೋಟ್ ಕೇಳುವುದು ನಮ್ಮ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾದದ್ದ?
ಅದರೂ ಈ ಚುನಾವಣಾ ಸಂದರ್ಭದಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಹಿಂದುತ್ವ ವರುಣ್ ಗಾಂಧಿಯ ಹೇಳಿಕೆಗೆ ಸಿಕ್ಕ ಪ್ರತಿಫಲದಿಂದಾಗಿ ಪುನ: ಭೊರ್ಗರೆಯುವಂತಾಗಿದೆ. ನಾಳೆ ಹಿಂದುತ್ವದ ಬಗ್ಗೆ ಮಾತನಾಡಿದರೆ ನಮಗೂ ಎನ್ ಎಸ್‌ಎಯಡಿ ಶಿಕ್ಷೆ ಗ್ಯಾರಂಟಿ ಎಂಬ ಸ್ಥಿತಿ. ಬಿಜೆಪಿ ಇದನ್ನು ತನ್ನ ಅನುಕೂಲಕ್ಕಾಗಿ ಚೆನ್ನಾಗಿ ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ತಾನು ಮಾಡಿದ ಖೆಡ್ಡಾಕ್ಕೆ ತಾನೇ ಬೀಳುತ್ತಿದೆಯೇನೋ ಅನಿಸುತ್ತಿದೆ.
ನನ್ನನ್ನು ಕಾಡುತ್ತಿರುವ ಬಹುದೊಡ್ಡ ಸಂಶಯವೆಂದರೆ ಈ ಇಡೀ ಪ್ರಕರಣ ವರುಣ್ ಗಾಂಧಿಯ ವಿರುದ್ಧದ ಸಂಚೋ ಅಥವಾ ಹಿಂದುತ್ವದ ವಿರುದ್ಧದ ಸಂಚೋ? ಕಾಲವೇ ಉತ್ತರಿಸಬೇಕಿದೆ.

Wednesday, April 1, 2009

ಅದೂ ನಮ್ಮ ಮೂಲ ನಂಬಿಕೆಯ ಪ್ರಶ್ನೆ ಬಂದಾಗ?

ಪ್ರಶ್ನೆ ಕಾಡುತ್ತಿದೆ. ಉತ್ತರ ಗೊತ್ತಿದ್ದರೂ ಶಾಲೆಯ ಕೆಂಪು ಕಣ್ಣಿನ ನ ಮೇಷ್ಟರ ಮುಂದೆ ನಿಂತು ತತ್ತರಿಸಿದ್ದ ಅಂದಿನ ವ್ಯೆಯುಕ್ತಿಕ ಭಯವಿಂದು ಒಂದು ಸಮಾಜದ ಭಯವಾಗಿದೆಯಾ? ಎಂದೆನಿಸುತ್ತದೆ. ನಾವ್ಯಕೆ ನಿದ್ದೆ ಮಾಡುತ್ತಿರುವವರ ಹಾಗೆ ನಟಿಸುತ್ತಿದ್ದೇವೆ? ಅದೂ ನಮ್ಮ ಮೂಲ ನಂಬಿಕೆಯ ಪ್ರಶ್ನೆ ಬಂದಾಗ?
ಲೆಕ್ಕಕ್ಕೆ ಸಿಗುವಂತೆ ೩,೦೦೦ ದೇಗುಲಗಳನ್ನು ಹಿಂದುಗಳು ಕಳೆದುಕೊಂಡಿದ್ದಾರೆ. ಒಂದು ಹಿಡಿ ಮಣ್ಣಿಗಾಗಿ ನಾವೇ ಅಣ್ಣ ತಮ್ಮಂದಿರು ಕತ್ತಿ ಹಿಡಿದು ಕಾಳಗ ಮಾಡುತ್ತೇವೆ. ಕೋಟ್
ಜೀವನಪೂರ್ತಿ ಅಲೆಯುತ್ತೇವೆ. ಅತ್ತ ಚೀನಾ ಇಡೀ ಅರುಣಾಚಲ ಪ್ರದೇಶವನ್ನೇ ತನ್ನೋಳಗೆ ನುಂಗಿಕೊಳ್ಳವ ಪ್ರಯತ್ನ ಮಾಡುತ್ತಿದೆ. ತಾಜ್ ಮಹಲ್ ಮೂಲತ; ಶಿವ ದೇವಾಲಯವಾಗಿತ್ತು ಎಂದಾಗ ಯಾವುದೇ ತನಿಖೆ ನಡೆಸದೆ ಆ ಸತ್ಯವನ್ನು ಮರೆಮಾಡಿ ನಮಗೆ ಹೇಳುವ ಬುದ್ದಿಮಾತು ಸಾಮಾಜಿಕ ಸೌಹಾರ್ದತೆ. ಆದರೆ ಎದು ಎಷ್ಟರವರೆಗೆ? ಪ್ರತಿಯೊಂದಕ್ಕೂ
ಕೊನೆಯಿದೆಯಂತೆ! ಆದರೆ ಹಿಂದುಗಳ ನಂಬಿಕೆಯ ಮೇಲಿನ ದಾಳಿಗೆ ಕೊನೆ ಯಾವಾಗ? ಇದು ಕೊನೆಗೊಳ್ಳುವಾಗ ನಮ್ಮ ಸಂಸ್ಕ್ರತಿಯೇ ಕೊನೆಯಾಗಿರಬಹುದಾ? ಯೋಚಿಸಲು ಹೊರಟರೆ ಪುಂಖಾನುಪುಂಖವಾಗಿ ಪ್ರಶ್ನೆಗಳು ಏಳತ್ತಲೆ ಇರುತ್ತದೆ.
ಅನೇಕ ಬಾಹ್ಯ ಅಕ್ರಮಣಗಳಿಗೆ ಸಡ್ಡು ಹೊಡೆದು ಉಳಿದ ಸಂಸ್ಕ್ರತಿ ಭಾರತದ್ದು. ಈ ಆಕ್ರಮಣಗಳನ್ನು ನಾವು ಕರಗಿಸಿ ಅರಗಿಸಿಕೊಂಡಿದ್ದೇವೆ. ವಾಸ್ತವವಾಗಿ ಈ ದಾಳಿಗಳು ನಮ್ಮನ್ನು ಅಂತರಿಕವಾಗಿ ಬಲಿಷ್ಠಗೊಳ್ಳಲು ಸಹಾಯ ಮಾಡಿದವು. ನಮ್ಮಲ್ಲೊಂದು ಒಗ್ಗಟ್ಟು, ಹೋರಾಟದ ಕೆಚ್ಚು ಮತ್ತು ಸಮಾನತೆಯ ಅಗತ್ಯತೆಯನ್ನು ತೋರಿಸಿಕೊಟ್ಟಿತು. ಮೂಢನಂಬಿಕೆಗಳಿಂದ ಆಗುವ ಅನಾಹುತಗಳನ್ನು ತೆರೆದಿಟ್ಟಿತು. ತಕ್ಷಣ ಕಾರ್ಯಪ್ರವ್ರತ್ತವಾದ ಸಮಾಜ ಅದಕ್ಕೊಂದು ಮೂಲಿಕೆ ಕಂಡುಹಿಡಿಯಿತು. ಇದು ನಿಧಾನವಾಗಿ ಪರಿಣಾಮ ಬೀರುತ್ತಿರುವಾಗ ಬ್ರಿಟಿಷ್ ಆಕ್ರಮಣವಾಯಿತು. ಅವರು ಹಾಲಿಗೆ ಹುಳಿ ಹಿಂಡುವ ಕೆಲಸ ಮಾಡಿದರು. ಪುನ: ಸಮಾಜ ಅಂಧಕಾರದತ್ತ ನಡೆದಾಗ ಹತ್ತಾರು ಧಾರ್ಮಿಕ ಮುಖಂಡರು ಸಮಾಜಕ್ಕೆ ಬೆಳಕು ನೀಡುವ ಪ್ರಯತ್ನ ಮಾಡಿದರು.ಇದರಿಂದ ಹಿಂದೂ ಸಮಾಜ ಪುನಶ್ಚೇತನಗೊಂಡಿತು.
ಕೆಲವು ಧರ್ಮಗಳು ಬದಲಾವಣೆಗೆ ಒಳಗಾಗುವುದೇ ಇಲ್ಲ. ಕೆಲವು ಸಂದರ್ಭಗಳಲ್ಲಿ ಇದು ಸಕಾರಾತ್ಮಕ ಎಂದೆನಿಸಿಕೊಳ್ಳುತ್ತದೆ. ಆದರೆ ಹಿಂದೂ ಸಮಾಜದಲ್ಲಿ ಬದಲಾವಣೆ ಬಹಳ ನಿಧಾನ ಪ್ರಕ್ರಿಯೆ. ಈ ಬದಲಾವಣೆಗಳು ಮುಡಿಯಿಂದ ಅಡಿಗೆ ಬರುವಾಗ ಶತಶತಮಾನಗಳೇ ಉರುಳಿ ಹೋಗಿರುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡು ಹಿಂದೂ ಧರ್ಮದ ಮೇಲೆ ಅಂತರಿಕ ಆಕ್ರಮಣ ಅಥವಾ ಮತಾಂತರವಾಗುತ್ತಿದೆ.
ನಮ್ಮ ಸಂಸ್ಕ್ರತಿಯ ಆಶಯಗಳನ್ನು ಉಳಿಸಿಕೊಂಡು ಕಾಲದ ಹರಿವಿನಲ್ಲಿ ಹಿಂದೂ ಧರ್ಮದೊಂದಿಗೆ ಸೇರಿಕೊಂಡ ಕಲ್ಮಶಗಳನ್ನು ಹೊರಗಟ್ಟುವ ಕೆಲಸ ತೀವ್ರಗತಿಯಲ್ಲಿ ನಡೆಯಬೇಕು. ಆಗ ವ್ಯವಸ್ಥೆಯಲ್ಲಿ ಆತ್ಮವಿಶ್ವಾಸ ಲಾಸ್ಯವಾಡುತ್ತದೆ. ನಿದ್ರೆ ಮಾಡುವವರಂತೆ ನಟಿಸಬೇಕಾದ ಜರೂರತ್ತು ಇರುವುದಿಲ್ಲ, ’ವೋಟ್ ಬ್ಯಾಂಕ್’ ರಾಜಕೀಯ ತನ್ನಿಂದ ತಾನೆ ಕೊನೆಗೊಳ್ಳುತ್ತದೆ. ಹಿಂದೂ
ಸಮಾಜವನ್ನು ಎದುರು ಹಾಕಿಕೊಳ್ಳುವ ಧೈರ್ಯ ಯಾರಿಗೂ ಇ(ಬ)ರುವುದಿಲ್ಲ. ಆಗ ನೈಜಾರ್ಥದ ಸಮಾನತೆ ಒಡಮೂಡುತ್ತದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜ್ಯೆನ. ಬೌದ್ಧರು, ಪಾರ್ಸಿ. ಸಿಖ್ಖರು ಸೌಹಾರ್ದತೆಯಿಂದ ಬಾಳುತ್ತಾರೆ. ದೇಶದ ಉಳಿವಿಗಾಗಿ ಹೋರಾಡುತ್ತಾರೆ. ಅದು ’ಸಹಜ’ ಸಾಮರಸ್ಯ. ಮತಬ್ಯಾಂಕ್ ಗಳಾಗಿರುವ ಧರ್ಮಗಳನ್ನು ಓಲೈಕೆ ಮಾಡಿ ತಾವು ದೇಶದ ಜಾತ್ಯತೀತತೆ ಉಳಿಸುತ್ತಿದ್ದೇವೆ ಎನ್ನುವುದು ತೀರಾ ಅಸಹಜ ಮತ್ತು ಬಾಲಿಶ. ಇದು ಒಂದು ಧರ್ಮದ ಜನರಲ್ಲಿ ಭಯ ಮೂಡಿಸುತ್ತದೆ. ಭಯ ಇರುವಲ್ಲಿ ಅಪಾಯ, ದಂಗೆಯೇಳುವಿಕೆ, ಆಕ್ರಮಣಶೀಲತೆ ಮುಂತಾದ ಲಕ್ಷಣಗಳಿರುತ್ತವೆಯೇ ಹೊರತು ನಂಬಿಕೆ, ವಿಶ್ವಾಸ, ಪರಸ್ಪರ ಗೌರವ ಇರಲು ಸಾಧ್ಯನಾ? ಅದರಲ್ಲೂ ಬಹುಸಂಖ್ಯಾತರ ವಿರೋಧ ಕಟ್ಟಿಕೊಳ್ಳುವುದು ಪೆಟ್ರೋಲ್ ಸುರಿದು ಬೆಂಕಿ ಪೊಟ್ಟಣದಿಂದ ಬೆಂಕಿಕಡ್ಡಿ ಗೀಚುವುದು ಸಮ.

Wednesday, March 25, 2009

ನಾವು ನಗರದತ್ತ... ನಮ್ಮ ಮುಂದಿನ ಪೀಳಿಗೆ ಹಳ್ಳಿಯತ್ತ...!?

ಭಾರತ ಗ್ರಾಮಗಳ ದೇಶವೆಂದು ಹೇಳುತ್ತಾ ಗ್ರಾಮ ಜೀವನವೇ ಶ್ರೇಷ್ಠ ಅನ್ನುವ ಪರಿಭಾಷೆ ನೀಡುವುದು ರಾಜಕಾರಣಿಗಳ ಮತ್ತು ದೇಶದ ಆರ್ಥಿಕತೆಗೆ ಸಂಬಂಧಪಟ್ಟ ಸಮ್ಮೇಳನಗಳಲ್ಲಿ ಸ್ವಾಗತ, ಧನ್ಯವಾದಗಳಿರುವಷ್ಟೇ ಕಡ್ಡಾಯವಾಗಿ ನಡೆದು ಬಂದ ’ಸಮಾರಂಭ ಪಾರಂಪರ್ಯ’ ಸಂಗತಿ. ಹಾಗೇ ಇದೆಯೇ? ಇಲ್ಲವೇ? ಅನ್ನುವುದು ಪಿಯಚ್.ಡಿ ಪಡೆಯಲು ಸಂಶೋಧನೆ ನಡೆಸುವವರಿಗೆ ’ಆಹಾರ’ವಾಗುವ ವಿಷಯ. ಅಲ್ಲಿಗೆ ’ದಿ ಎಂಡ್’.
ನಗರಕ್ಕೆ ಅಥವಾ ಸೌಲಭ್ಯಗಳಿರುವ ಪ್ರದೇಶಗಳಿಗೆ ವಲಸೆ ಹೋಗುವುದು ಅಥವಾ ಉದ್ಯೋಗ ಹುಡುಕಿಕೊಂಡು ಹೋಗುವುದು ಜಗತ್ತಿನ ಪ್ರತಿಯೊಂದು ದೇಶ ಮತ್ತು ನಾಗರಿಕತೆಯಲ್ಲಿ ನಡೆದು ಬಂದ ಸಹಜ ಮತ್ತು ಅಷ್ಟೇ ಅನಿವಾರ್ಯ ಪ್ರಕ್ರೀಯೆ. ಈ ಚಟುವಟಿಕೆಯ ಲಾಭವನ್ನು ನಾವೆಲ್ಲರೂ ಸಮನಾಗಿ ಪಡೆದಿದ್ದೇವೆಯಾದರೂ ಈ ಪ್ರಕ್ರೀಯೆಯಲ್ಲಿ ನಗರಕ್ಕೂ ಹಳ್ಳಿಗೂ ’ಅವಶ್ಯಕತೆ’ಯೆಂಬ ಕೊಂಡಿಯಿತ್ತು.
ಆದರೆ ಇದೀಗ ಅಂದರೆ ಕಳೆದ ಶತಮಾನದ ಮಧ್ಯಭಾಗದಿಂದ ಲೋಕದಾದ್ಯಂತ ಹೊಸದೊಂದು ತೆವಲು ಜನಮನದೊಳಗೆ ಹರಿಯಲಾರಂಭಿಸಿದೆ. ಅದೇ, "ನಗರದಲ್ಲಿದ್ದರೆ ಮಾತ್ರ ಜೀವನ ಪಾವನ, ಹಳ್ಳಿಗನ ಬಾಳು ದಾರುಣ, ಹೇಗಾದರೂ ಮಾಡಿ ಪಟ್ಟಣ ಸೇರಿಕೋ" ಎಂಬುದು. ನಗರ ಬದುಕಿನ ವಾಸ್ತವ ಚಿತ್ರಣ ಪಡೆಯದ ಕಲ್ಪನೆಗಳ ಭ್ರಮಾಧೀನ ಮನಸ್ಸಿನ ಅಡಿಯಾಳದ ಗ್ರಾಮೀಣ ಯುವ ಜನಾಂಗವಂತೂ ನಗರಕ್ಕೆ ಎದ್ದೇನೋ, ಬಿದ್ದೇನೊ ಎಂಬಂತೆ ಗುಳೇ ಹೊರಟೇ ಬಿಟ್ಟಿದೆ. "ಹಸಿದವನ ಮುಂದೆ ಉಪದೇಶ ಸಲ್ಲದು" ಎನ್ನುತ್ತಾರೆ ಹಿರಿಯರು. ಈ ಕಾರಣಕ್ಕೆ ಸಾಂಸ್ಕ್ರತಿಕ ವಿಷಯಗಳನ್ನು ಬಿಟ್ಟು ಆರ್ಥಿಕ ವಿಷಯಗಳಿಗೆಯೇ ಬರೋಣ.
ನಗರಗಳು ಆರ್ಥಿಕತೆಯ ಕೇಂದ್ರಬಿಂದು ಒಪ್ಪೊಣ, ಉದ್ಯೋಗದ ಸೆಲೆಗಳು ಅದೆಲ್ಲಾ ಸರಿ. ಆದರೆ ನಮ್ಮ ಯುವಕರು ಅಲ್ಲಿನ ಉದ್ಯೋಗವನ್ನೇ ಅವಲಂಬಿಸಿ ಬದುಕುವ ಭಿಕಾರಿತನವನ್ನೇಕೆ ಪ್ರದರ್ಶಿಸುತ್ತಿದ್ದಾರೆ? ಇದಕ್ಕೆ ಆರ್ಥಿಕ ಕಾರಣಗಳೊಂದಿಗೆ ಅವರ ಅಭಿಲಾಷೆಗಳು ನಗರ ಜೀವನದ ಥಳಕು ಬಳುಕಿನ ಸಂಸ್ಕ್ರತಿಯೊಂದಿಗೆ ತಳಕು ಹಾಕಿಕೊಂಡಿರುವುದೇ ಪ್ರಮುಖ ಕಾರಣವಾಗಿರಬಹುದೆಂಬುದು ನನ್ನ ಅನಿಸಿಕೆ.ನಗರಗಳಲ್ಲಿ ಉದ್ಯೋಗದ ಮತ್ತು ಹಣ ಮಾಡುವ ತರಹೇವಾರಿ ದಾರಿಗಳಿರಬಹುದು ಆದರೆ ಅದೆಲ್ಲದಕ್ಕಿಂತ ಹೆಚ್ಚು ಮಾರ್ಗ ಹಣ ಕಳೆದುಕೊಳ್ಳಲಿಕ್ಕಿದೆ. ಹಾಗೆಯೇ ಅಲ್ಲಿನ ಜೇವನ ವೆಚ್ಚವೂ ಅಧಿಕ. ಅದರೆ ಈ ಸತ್ಯದ ಕಡೆಗೆ ಅವರದ್ದು ಜಾಣ ಕಿವುಡು.
ನಾನೇನು ನಗರ ಕೇಂದ್ರಿತ ಉದ್ಯೋಗದ ದ್ವೇಷಿಯೇನು ಅಲ್ಲ, ನಗರ ಪ್ರದೇಶದಲ್ಲಿ ದೊರೆಯುವ ಕೆಲವೊಂದು ಉದ್ಯೋಗಗಳು ಗ್ರಾಮೀಣ ಹಿನ್ನೆಲೆಯ ಆರೋಗ್ಯವಂತ ಯುವಕರ ದಾರಿ ತಪ್ಪಿಸುತ್ತಿದೆಯೇನೋ ಎಂಬ ಅಳಕು ನನ್ನನ್ನು ತೀವ್ರವಾಗಿ ಕಾಡುತ್ತಿದೆ.ಗ್ರಾಮೀಣ ಪ್ರದೇಶದಲ್ಲಿ ತಮ್ಮವರೊಂದಿಗೆ ಅತ್ಮೀಯ ವಾತವಾರಣದಲ್ಲಿ ಒಂದಿಷ್ಟು ಶಾರೀರಿಕ ಶ್ರಮ ಬಯಸುವ ನೂರಾರು ಕೆಲಸಗಳಿದ್ದರೂ ಪಟ್ಟಣದ ಕಲುಷಿತ ವಾತವರಣದಲ್ಲಿ ಕಡಿಮೆ ಸಂಬಳಕ್ಕೆ ಅವಿರತವಾಗಿ ದುಡಿಯಬೇಕಾದ ಹೋಟೆಲ್ ಗಳ ಸಪ್ಲ್ಯೆಯರ್‍, ಮನೆಕೆಲಸ, ಗ್ಯಾರೇಜ್ ಗಳಲ್ಲಿನ ದುಡಿತ, ವಸತಿಗ್ರಹಗಳಲ್ಲಿನ ರೂಂ ಬಾಯ್, ಕಾರ್ಖಾನೆಗಳಲ್ಲಿನ ಕಾರ್ಮಿಕ ಮುಂತಾದ ಕೆಲಸಕ್ಕಾಗಿ ಮನೆ ಬಿಟ್ಟು ಪಟ್ಟಣ ಸೇರುವುದು ಯಾತಕ್ಕಾಗಿ? ಇದರ ಬದಲು ಗ್ರಾಮೀಣ ಭಾಗದಲ್ಲಿ ಅಳಿವಿನಂಚಿಗೆ ಸರಿಯುತ್ತಿರುವ ಮ್ರಣ್ಮಯ ಕಲೆ, ಬೆತ್ತದ ವಸ್ತುಗಳ ತಯಾರಿ, ಮರದ ಕೆತ್ತನೆ ಮುಂತಾದ ಉದ್ಯೋಗಗಳನ್ನು ಪರಿಶ್ರಮದಿಂದ ತಮ್ಮದಾಗಿಸಿಕೊಂಡು ಅದಕ್ಕೆ ತಮ್ಮತನದ ಸ್ಪರ್ಶ ನೀಡಿದರೆ ಭವ್ಯ ಭವಿಷ್ಯ ಆ ಕಲೆಗೂ, ಕಲಾಕಾರನಿಗೂ ಕಾದು ಕುಳಿತಿದೆ.
’ನಗರಗಳಲ್ಲಿ ಬಿಳಿಕಾಲರ್‍ ಜಾಬ್ ಸಿಗದಿದ್ದರೂ ಪರವಾಗಿಲ್ಲ, ಅಲ್ಲಿ ಭಿಕ್ಷೆ ಬೇಡಿಯಾದರೂ ಬದುಕುತ್ತೇನೆ. ಹಳ್ಳಿಯಲ್ಲಿ ಮಣ್ಣು ಮುಟ್ಟವ ಕೆಲಸ ಬೇಡವೇ ಬೇಡ " ಎಂದು ಶಪಥ ಮಾಡಿರುವವರು ನಗರಗಳತ್ತ ಕೆಲಸಕ್ಕಾಗಿ ಗುಳೆ ಹೊರಟವರು ಒಂದು ಮಾತನ್ನು ನೆನಪಿಟ್ಟುಕೊಳ್ಳುವುದು ಒಳಿತು, ಇದೀಗ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸಗಾರರು ಮತ್ತು ಅಲ್ಲಿನ ಸೊಗಡನ್ನು ಸಾಂಸ್ಕ್ರತಿಕ ಸೊಗಡನ್ನು ಉಳಿಸಿ ಪಸರಿಸುವವರ ತೀವ್ರ ಕೊರತೆ ಉದ್ಭವಿಸಿದ್ದು ಇನ್ನು ಕೆಲವೇ ವರ್ಷಗಳಲ್ಲಿ ಮುಂದಿನ ಪೀಳಿಗೆ ಹಳ್ಳಿಗಳನ್ನೇ ಕೆಲಸಕ್ಕಾಗಿ ಅವಲಂಬಿಸ ಬೇಕಾದ ಸ್ಥಿತಿ ಬರಬಹುದು. ಇದಕ್ಕಿಂತ ಮುಂಚೆ ನಾವು ಎಚ್ಚೆತ್ತು ನಗರ ಮತ್ತು ಹಳ್ಳಿಗಳ ಮಧ್ಯೆ ಒಂದು ’ಸಮತೋಲನ’ ಸ್ಥಿತಿ ನಿರ್ಮಾಣ ಮಾಡೋಣ ಅಲ್ಲವೇ?

Friday, March 20, 2009

SECURITY TO ELECTION

India is one of the great follower of true democracy. From our Independence we have had a bit of confusions in implementing the values of democracy but our democratic intention is always high. Democracy gets its shape through elections, so election is considered as life blood of any kind of democratic set up.
Election commission of India has already declared election schedules and its related activities and the whole nation is in the election mood.
In India election is not at all an easy task where the major threat to the election related procedures is the problem of security. As India is suffering from internal and external anti democratic forces like naxals, terroristsand other groups. These beast forces are ready to do anything to spoil the elections and so India is badly in need of high level security.
But unfortunately 20-20 cricket matches of IPL are organised at the same time and both of this events require high security. And therefore government of India should provide more protection to what is more important in the viewof the nation.And it is naturally election.
supirior than than their nation. For them cricket and money is more important than the safety of our country. Now a day’s security is one of the major problem as the terrrorists use modern weapons and ways to reach their target. We have only limited well trained forces and we can’t expect same level of security everywhere. A common man can easily understands this truth but unfortunately president of IPL, Lalith Modi can’t!
But the Government should concentrate towards providing security to electorate or election procedure not to IPL. If government turns its mind towards IPL matches that clearly indicates the theory of ‘government for the rich’ and there are chances that people of the nation loose their confidence in the system and they might revolt.

Monday, March 16, 2009

ಆದರೆ ಇದೇ ನೈಜ ಭಾರತವಲ್ಲ!

'ಸ್ಲಂ ಡಾಗ್ ಮಿಲಿಯನೇರ್' ಎಂಬ ಭಾರತೀಯರಿಗೆ ಹತ್ತಿರವಾದ ಸಾಮಾನ್ಯ ಸಿನಿಮಾವೊಂದು ಅಸಾಮಾನ್ಯ ತಿರುವು ಪಡೆದುಕೊಂಡು ಸಿನಿಮಿಯ ರೀತಿಯಲ್ಲಿ ಸಿನಿಮಾ ಕ್ಷೇತ್ರ ದ ಅತ್ಯುನ್ನತ ಪುರಸ್ಕರವಾದ ಅಸ್ಕರ್ ಪಡೆದುಕೊಂಡದ್ದು ನಿಮಗೆಲ್ಲರಿಗೂ ತಿಳಿದಿರುವಂತದ್ದೆ. ಅದರ ಹೊಗಳಿಕೆ ಅಥವಾ ತೆಗಳಿಕೆಗೆ ಈ ಲೇಖನವನ್ನು ನಾನು ಬಳಸುತ್ತಿಲ್ಲ. ಅದರ ಬದಲು ಈ ಚಿತ್ರದ ಬಗೆಗೆ ಬಂದ ಕೆಲವು ಅಭಿಪ್ರಾಯಗಳ ಹಿಂದಿರುವ ಮನಸ್ಥಿತಿಯ ಬಗೆಗೆ ಹೆಚ್ಚು ಗಮನ ಹರಿಸುತ್ತಿದ್ದೇನೆ. 'ಸ್ಲಂ ಡಾಗ್...' ಭಾರತದ ಕೊಳಕಿನ ಮೇಲೆ ಸುಂದರ ನೋಟ ಬೀರಿ ಅದನ್ನೇ ಎತ್ತಿ ಹಿಡಿದಿದೆ ಎಂದು ಒಂದು ವರ್ಗ ಹೇಳಿದರೆ ಮತ್ತೊಂದು ವರ್ಗ ಇದೇ 'ನೈಜ ಭಾರತ' ಎಂದಿತ್ತು. ಈ 'ನೈಜ ಭಾರತ'ವನ್ನು ಜಗತ್ತಿಗೆ ಪ್ರದಶರ್ಸಿದ್ದು ಅವರಿಗೆ ಅಮಿತಾನಂದವನ್ನುಂಟು ಮಾಡಿತ್ತು. ಅದರಲ್ಲೂ ಪ್ರತಿಷ್ಟಿತ ಅಸ್ಕರ್ ಪ್ರಶಸ್ತಿ ಬಂದದ್ದು ಅವರಿಗೆ ಸ್ವರ್ಗವನ್ನೇ ಭೂಮಿಗೆ ತಂದಿಟ್ಟಷ್ಟೆ ಖುಷಿ ಕೊಟ್ಟಿತ್ತು.ನಾನಂತು ಒಂದು ಮಾತನ್ನು ಇಲ್ಲಿ ಸ್ಪಷ್ಟ ಪಡಿಸುತ್ತೇನೆ. ನೈಜ ಭಾರತದಲ್ಲಿ ಈ ಸ್ಥಿತಿಯಿದೆ ಒಪ್ಪಿಕೊಳ್ಳುತ್ತೇನೆ. ಆದರೆ ಇದೇ ನೈಜ ಭಾರತವಲ್ಲ!ಇದೇ 'ನೈಜ ಭಾರತ' ಎಂದು ಪ್ರತಿಪಾದಿಸಿವವರಿಗೆ ಯಾವುದೋ ಸಿದ್ದಾಂತದ ಅಮಲೇರಿ ಕಣ್ಣು ಮಂಜಾಗಿದೆ ಎಂದು ಹೇಳದೆ ವಿಧಿಯಿಲ್ಲ.ಇದನ್ನೇ 'ನೈಜ ಭಾರತ' ಎಂದು ಹೇಳುವವರು 'ನೈಜತೆ'ಯನ್ನು ಅಳೆಯಲು ಯಾವ ಮಾನದಂಡ ಬಳಸಿಕೊಂಡಿದ್ದಾರೆ ಎಂದು ಮೊದಲು ಸ್ಪಷ್ಟಪಡಿಸಬೇಕು. ಭಾರತವನ್ನು ಯಾವುದೇ ಒಂದು ಮಾನದಂಡ ಬಳಸಿ ಅಳೆಯಲು ಸಾಧ್ಯವಿಲ್ಲ. ಯಾಕೆಂದರೆ ಭಾರತವೇ ಹಾಗಿದೆ ಮತ್ತು ಹಾಗಿರುವುದರಿಂದಲೇ ಇದು ಭಾರತವಾಗಿದೆ.
ಸ್ಲಂಗಳಲ್ಲಿನ ಬಡತನ ನೋಡಿ, ಭಾರತ ಬಡ ರಾಷ್ಟ್ರ ಎಂದು ಹೇಳುವುದಾದರೆ, ಅದನ್ನೇ ಬಂಡವಾಳವಾಗಿಸಿಕೊಂಡು ಸಿನಿಮಾ ಮಾಡುವುದಾದರೆ ಪಾಕಿಸ್ತಾನ, ಬಾಂಗ್ಲಾದೇಶ, ಅಪಘಾನಿಸ್ತಾನ, ಸೂಡನ್, ಇಥಿಯೋಪಿಯಾಗಳಲ್ಲೂ ಬಡತನವಿದೆ. ಅಲ್ಲಿನ ಕಥಾಹಂದರವಿಟ್ಟುಕೊಂಡು ಹಾಲಿವುಡ್ನವರು ಯಾಕೆ ಚಿತ್ರ ನಿಮರ್ಿಸುವುದಿಲ್ಲ? ಅಥವಾ ನಿಮರ್ಿಸಿದರೂ ಅದಕ್ಯಾಕೆ ಅಸ್ಕರ್ ಸಿಗುವುದಿಲ್ಲ? ಭಾರತದಲ್ಲಿ ತಮ್ಮ ತಮ್ಮ ಬಡತನವನ್ನು ಹೊಗಲಾಡಿಸಿಕೊಳ್ಳುವ ಅವಕಾಶವಾದರೂ ಜನರ ಮುಂದೆ ಇದೆ, ಅದರೆ ನಾ ಮೇಲೆ ಹೇಳಿದ ದೇಶಗಳಲ್ಲಿ? ಉತ್ತರ ಬೇಕಾಗಿದೆ.
ಭಾರತದಲ್ಲಿ ಕೋಮುಗಲಭೆಗಳಾಗುತ್ತವೆ ಎಂದು ಸಾಧಿಸುವ ಪ್ರಯತ್ನವನ್ನೂ ಕೂಡ ಈ ಸಿನಿಮಾ ಮಾಡುತ್ತದೆ ಅಂದರೆ ಜಗತ್ತಿನ ಬೇರೆಲ್ಲೂ ಕೋಮುಗಲಭೆಗಳಾಗುವುದಿಲ್ಲ ಎಂದು ಸಾರುವ ಯತ್ನವನ್ನೂ ನಾವಿಲ್ಲಿ ಕಾಣಬಹುದು. ಕೋಮು ಬಿಡಿ, ಮುಸ್ಲಿಂ ರಾಷ್ಟ್ರಗಳಲ್ಲಿ ಶಿಯಾ, ಸುನ್ನಿಗಳೆ ತಮ್ಮೊಳಗೆ ಕಚ್ಚಾಡುತ್ತಿದ್ದಾರೆ ವರ್ಷಕ್ಕೆ ಸಾವಿರಾರು ಜನ ಇದರಲ್ಲಿ ಹತರಾಗುತ್ತಾರೆ. ಅಲ್ಲೂ ಮಕ್ಕಳು ಅನಾಥರಾಗುತ್ತಾರೆ. ಈ ಬಗ್ಗೆ ಯಾಕೆ ಯಾರೂ ಚಿತ್ರ ನಿರ್ಸುತ್ತಿಲ್ಲ. ನಿಮರ್ಿಸಿದರೂ ಅದಕ್ಕೆ 'ಸ್ಲಂ ಡಾಗ್..'ಗೆ ಸಿಕ್ಕಷ್ಟು ಸುಲಭವಾಗಿ ಅಸ್ಕರ್ ಸಿಗುತ್ತಾ? ಅಸ್ಕರ್ ಸಿಕ್ಕರೆ ಈಗ 'ನೈಜ ಭಾರತ' ತೋರಿಸಲಾಗಿದೆ ಅನ್ನುವವರು ಆಗ 'ನೈಜ ಧರ್ಾಂಧತೆ' ತೋರಿಸಲಾಗಿದೆ ಎಂದು ಈಗಿನಷ್ಟೇ ಜೋರಾಗಿ ಹೇಳುತ್ತಾರಾ? ಉತ್ತರ ಬೇಕಾಗಿದೆ.
'ದ ವ್ಯೆಟ್ ಟ್ಯೆಗರ್', 'ಸ್ಲಂ ಡಾಗ್ ಮಿಲಿಯನೇರ್', 'ಫೈನಲ್ ಸೊಲ್ಯಷನ್' ಮುಂತಾದ ಪುಸ್ತಕ, ಸಿನಿಮಾ, ಸಾಕ್ಷ್ಯಚಿತ್ರಗಳು 'ನೈಜ ಭಾರತ'ವನ್ನು ತೋರಿಸಿವೆ ಎಂಬುದೆ ಅದರೆ 'ಲಗಾನ್', 'ಶಂಕರಾಭರಣಂ' ಮುಂತಾದ ಸಿನಿಮಾಗಳು 'ದ ಸ್ಟೋರಿ ಅಫ್ ಇಂಡಿಯಾ' ಮುಂತಾದ ಸಾಕ್ಷ್ಯಚಿತ್ರಗಳು ತೋರಿಸಿರುವುದು ಕಾಲ್ಪನಿಕ ಭಾರತವನ್ನಾ?
ಇನ್ನು ಕಾರಿನ ಭಾಗಗಳನ್ನು ಕದ್ದ ಆರೋಪದಲ್ಲಿ ಅದರ ಚಾಲಕ ಗ್ಯೆಡ್ ಆಗಿರೋ ಬಾಲಕನಿಗೆ ಥಳಿಸುವಾಗ, ಆ ಬಾಲಕ ಅಮೆರಿಕನ್ ದಂಪತಿಗಳಲ್ಲಿ 'ರಿಯಲ್ ಇಂಡಿಯಾ, ಹಿಯರ್ ಇಟ್ ಇಸ್' ಅಂದಾಗ ಅವರು ಹಣ ಕೊಟ್ಟು ಅತನನ್ನು ತಬ್ಬಿಕೊಂಡು 'ಹಿಯರ್ ಯು ಫೀಲ್ ರಿಯಲ್ ಅಮೇರಿಕ' ಅನ್ನುತ್ತಾಳಲ್ಲಾ ಆದರ ಬಗ್ಗೆ ಏನನ್ನುತ್ತೀರಿ? ಈ ಸಂಭಾಷಣೆ ಬಗ್ಗೆ ಯಾಕೆ ಜಾಣ ಕಿವು(ಕುರು)ಡುತನ? 'ನಾನು ಕರಿಯ, ನೀನು ಬಿಳಿಯ' ಎಂದು ಹೊಡೆದಾಡಿಕೊಂಡವರು ಯಾರಂತೆ? ಕತ್ರೀನಾ, ರೀಟಾ ಮುಂತಾದ ಹೆಸರಿನ ಚಂಡಮಾರುತಗಳು ಎದ್ದಾಗ 'ಸಿಕ್ಕಿದ್ದೆ ಸೀರುಂಡೆ' ಎಂದು ದರೋಡೆ ಮಾಡಿದವರು ಯಾರಂತೆ? 'ನೈಜ ಭಾರತ'ವನ್ನು ತೋರಿಸಲಾಗಿದೆ ಎಂದು ತಮ್ಮ ಬೆನ್ನು ತಟ್ಟಿಕೊಳ್ಳವವರು 'ಅವಾಸ್ತವ ಅಮೇರಿಕ'ವನ್ನು ತೋರಿಸಿರುವುದನ್ನು ಅಥವಾ ಅ ಬಗ್ಗೆ ಜಂಭ ಕೊಚ್ಚಿಕೊಂಡಿರುವುದನ್ನು ಯಾಕೆ ಪ್ರಶ್ನಿಸುವುದಿಲ್ಲ?
ಪ್ರತಿಯೊಬ್ಬರ ಮನೆಯಲ್ಲೂ ಒಂದಲ್ಲ ಒಂದು ಸಮಸ್ಯೆಯಿದ್ದೆ ಇರುತ್ತದೆ. ಸ್ಲಂ ಡಾಗ್ನಲ್ಲಿ 'ನೈಜ ಭಾರತ'ವಿದೆ ಎಂದವರ ಮನೆಯಲ್ಲೂ ಕೂಡ ಸಮಸ್ಯೆಗಳಿರಬಹುದು. ಅವರ ಸಮಸ್ಯೆಗಳನ್ನು ಇದೇ ರೀತಿ ನಾನು ಚಿತ್ರಿಸಿ ತೋರಿಸಿದರೆ ಇವರು ನಮ್ಮ ಮನೆಯ ನೈಜ ಪರಿಸ್ಥಿತಿ ತೋರಿಸಿದ್ದಾನೆ ಎಂದು ಅಭಿನಂದನ ಬರಹಗಳನ್ನು ಇದೇ ರೀತಿ ಬರೆಯುತ್ತಾರಾ? ಉತ್ತರ ಬೇಕಾಗಿದೆ.
ಭಾರತ ನನ್ನದು, ನನ್ನ ತಾಯಿ, ನನ್ನ ಸೋದರಿಯೆಂದು ಭಾವಿಸುವ ಯಾರೂ ಕೂಡ ಪರಕೀಯರೊಬ್ಬರು ಇಡೀ ದೇಶವನ್ನು ಅವಹೇಳನಕಾರಿಯಾಗಿ ಚಿತ್ರಿಸಿದನ್ನು ಒಪ್ಪಿಕೊಳ್ಳಲಾರರು. ಯಾಕೆಂದರೆ ಸಮಸ್ಯೆಗಳನ್ನು ಎತ್ತಿ ತೋರಿಸಲು, ಪರಿಹರಿಸಲು ಅದರದ್ದೆ ಯಾದ ಮಾರ್ಗವಿದೆ. ಅದಕ್ಕಾಗಿ ದೇಶದ ಮಾನ ಹರಾಜು ಮಾಡಬೇಕಾಗಿಲ್ಲ. ಈ ರೀತಿ ಒಂದು ಸಿನಿಮಾದ ಮೂಲಕ ದೇಶದ ಮಾನ ಹರಾಜು ಮಾಡಿವುದನ್ನು ಅವರು ಒಪ್ಪುದಾದರೆ ಅವರ ಸೋದರಿ, ತಾಯಿಯ ಸಮಸ್ಯೆಗೆ ಅಥವಾ ಅವರ ಮನೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅವರು ಇದೇ ದಾರಿ ಹಿಡಿಯಬಹುದು ಅಲ್ಲವೇ? ಉತ್ತರ ಬೇಕಾಗಿದೆ.
ಭಾರತದಲ್ಲಿನ ಸ್ಲಂ ಸಮಸ್ಯೆಗೆ ಸ್ಲಂ ನಿವಾಸಿಗಳು ಮತ್ತು ನಗರದತ್ತ ಓಡುತ್ತಿರುವ ಜನರೇ ಕಾರಣವೇ ಹೊರತು ಯಾವುದೇ ಕಾಣದ ಕೈಗಳಲ್ಲ.ಇಂದು ದಕ್ಷಿಣ ಕನ್ನಡದಲ್ಲಿ ಕೂಲಿ ಕಾಮರ್ಿಕರ ತೀವ್ರ ಅಭಾವವಿದೆ. ಅದರೆ ಇಲ್ಲಿನ ಎಷ್ಟು ಮಂದಿ ನಗರಗಳಲ್ಲಿ ಹೋಟೆಲ್, ಬಾರ್ಗಳಲ್ಲಿ ಗ್ಲಾಸ್ ತೊಳೆದುಕೊಂಡು ಜೀವನ ಸಾಗಿಸುತ್ತಿಲ್ಲ. 'ಪೇಟೆಯಲ್ಲಿ ಗ್ಲಾಸ್ ತೊಳೆದರೂ ಚಿಂತೆಯಿಲ್ಲ, ಕೃಷಿಗಾಗಿ ಹಾರೆ ಪಿಕ್ಕಾಸು ಹಿಡಿಯುದಿಲ್ಲ'ಯೆಂಬ ಅವರ ನಿಧರ್ಾರದ ಹಿಂದೆ 'ಸಕರ್ಾರ' ಇದೆಯಾ? ಈ ಬಗ್ಗೆ ಚಚರ್ಿಸಲು ಇದು ವೇದಿಕೆಯಲ್ಲ ಬಿಡಿ.
ಇನ್ನು, ಸ್ಲಂ ಡಾಗ್ನಲ್ಲಿ 'ನೈಜ ಭಾರತ'ವನ್ನು ಕಂಡವರು ಬಂಡವಾಳಶಾಹಿತ್ವದ ದೃಷ್ಟಿಕೋನದಿಂದ ಭಾರತವನ್ನು ಅಳೆದಿದ್ದಾರೆ ಎಂದೆನಿಸುತ್ತದೆ. ಅದರೆ ಅವರಲ್ಲಿ ಹೆಚ್ಚಿನವರು ಬಂಡವಾಳಶಾಹಿತ್ವದ ವಿರೋಧಿಗಳು! ಇಲ್ಲದಿದ್ದಲ್ಲಿ ಅವರು ಅಲ್ಲಿ ತೋರಿಸಿದ ಬಡತನಕ್ಕೆ ಅಷ್ಟು ಮರುಗುತ್ತಿರಲಿಲ್ಲ. ಇದೆಂಥಾ ಎಡಬಿಡಂಗಿತನ!
ಜಗತ್ತಿನಲ್ಲಿ ಅತಿಹೆಚ್ಚು ಮಾನಸಿಕ ರೋಗಿಗಳು ಇರುವುದು ಅಮೇರಿಕದಲ್ಲಿ! ಆ ಕಾರಣದಿಂದ ಅಮೇರಿಕವನ್ನು ಮಾನಸಿಕವಾಗಿ ಬಡ ರಾಷ್ಟ್ರ ಅನ್ನಬಹುದು. ಜಪಾನ್ನಲ್ಲಿ ಅತಿ ಹೆಚ್ಚಿನ ವಯೋವೃದ್ಧರಿದ್ದಾರೆ ಅದನ್ನು ಚೈತನ್ಯರಹಿತ ಬಡ ದೇಶ ಅನ್ನಬಹುದು. ಚೀನಾದಲ್ಲಿ ವಾಕ್ ಸ್ವಾತಂತ್ರ್ಯವೇ ಇಲ್ಲ ಅದ್ದರಿಂದ ಅದನ್ನು ಸ್ವಾತಂತ್ರ್ಯಕ್ಕೆ ಬಡತನವಿರುವ ದೇಶ ಅನ್ನಬಹುದು. ಐರೋಪ್ಯ ರಾಷ್ಟ್ರಗಳಿಗೆ ಸ್ವಂತದ್ದೆಂದು ಹೇಳಿಕೊಳ್ಳಲು ಅವರದ್ದೇ ಆದ ಸಂಸ್ಕ್ರತಿಯಿಲ್ಲ. ಅದ್ದರಿಂದ ಆ ದೇಶಗಳನ್ನು ಸಾಂಸ್ಕ್ರತಿಕವಾಗಿ ಬಡ ದೇಶಗಳು ಅನ್ನಬಹುದು. ಇನ್ನು ಹೆಚ್ಚಿನೆಲ್ಲ ಮುಸ್ಲಿಂ ದೇಶಗಳಲ್ಲಿ ಶಾಂತಿ ಮರೀಚಿಕೆಯಾಗಿದೆ. ಅದ್ದರಿಂದ ಅವುಗಳನ್ನು ಸಾಮಾಜಿಕವಾಗಿ ಬಡ ರಾಷ್ಟ್ರಗಳು ಅನ್ನಬಹುದು. ಅದ್ದರಿಂದ ಇವುಗಳೆಲ್ಲದರ ಬಗ್ಗೆ ಚಿತ್ರ ಮಾಡಬಹುದು. ಅದರೆ ಅಸ್ಕರ್ ಮತ್ತು ನೈಜತೆ ಅದಕ್ಕೆ ದಕ್ಕಬಹುದೇ?ಈ ಎಲ್ಲ ಬಹುದುಗಳನ್ನಿಟ್ಟುಕೊಂಡು ಅಥವಾ ಮಾನದಂಡಗಳನ್ನಿಟ್ಟುಕೊಂಡು ನಾವ್ಯಾಕೆ ಅವರನ್ನು ಹಿಯಾಳಿಸುತ್ತಿಲ್ಲ? ಈ ವಿಷಯಗಳಲ್ಲಿ ನಾವು ಅವರಿಗಿಂತ ಶ್ರೀಮಂತರಿದ್ದೇವೆ ಅಲ್ವಾ?
ಇಲ್ಲಿ ನಮಗೆ ಕಾಡುತ್ತಿರುವುದು ಕೀಳರಿಮೆ, ಬಂಡವಾಳಶಾಹಿತ್ವದ ವ್ಯಾಖ್ಯೆಗೆ ಒಳಪಟ್ಟ ಅಭಿವೃದ್ಧಿಯೆಂಬ ಪದ ಮತ್ತು ನಮ್ಮ ಹಿರಿಮೆಯನ್ನು ಅರಿಯದ ಕೆಲವು ಬಾಲಬಡುಕರು!
ಭಾರತದಲ್ಲಿನ 'ಸ್ಲಂ' ಸಮಸ್ಯೆ ಒಂದಲ್ಲ ಒಂದು ದಿನ ಪರಿಹಾರವಾಗಬಹುದು. ಆದರೆ, ಭಾರತದ ನೈಜ ಶಕ್ತಿ ಯಾವುದು ಎಂದು ಅರಿಯಾದೆ ಸಿಕ್ಕ ಸಿಕ್ಕ ಕಡೆ ದೇಶದ ವಿರುದ್ಧ ಅರಚುವ 'ಡಾಗ್' ಮತ್ತು ಭಾರತದ ನ್ಯೂನತೆಯನ್ನು ತೆಗಳಿ ಅದನ್ನೇ ಬಂಡವಾಳವಾಗಿಸಿಕೊಂಡು ಮಿಲಿಯನೇರ್ಗಳಾಗುವವರಿಂದ ಭಾರತಕ್ಕೆ ಎಂದು ಮುಕ್ತಿ.
ಉತ್ತರ ಬೇಕಾಗಿದೆ.

ನಾನ್ಯಕೆ ಬರೆಯುತ್ತೇನೆ?

ಕಳೆದ ಮೂರು ವರ್ಷದಿಂದಲ್ಲೂ ಈ ಪ್ರಶ್ನೆಗೆ ನನ್ನಲ್ಲಿ ಉತ್ತರ ಸಿಕ್ಕಿಲ್ಲ. ಮುಂದಿನ ನೂರು ವರ್ಷಕ್ಕೂ ಬಹುಶ: ಉತ್ತರ ಸಿಗಲಿಕ್ಕಿಲ್ಲ! ಸಿಕ್ಕರೆ ...? ಒಡನೆಯೇ ನಾ ಬರೆಯುವುದನ್ನು ನಿಲ್ಲಿಸಿ ಬಿಡುತ್ತೇನೆ ಅಷ್ಟೇ!

ನನ್ನ ಬರಹದಿಂದ ಇಡೀ ಜಗತ್ತನ್ನೇ ಬದಲಾಯಿಸುತ್ತೇನೆ ಎಂಬ ಭ್ರಮೆ ನನಗಿಲ್ಲ. ಅಥವಾ ಯಾರದೋ ಜೀವನದಲ್ಲಿ ಬದಲಾವಣೆ ತರುತ್ತೇನೆ ಎಂಬ ಅಶಾವಾದವೂ ನನಗಿಲ್ಲ. ಅದರೂ ನಾನು ಬರೆಯುತ್ತೇನೆ ಯಾಕೆಂದರೆ "ಈ ಜಗತ್ತಿನಲ್ಲಿ ನಾನಿದ್ದೇನೆ" ಅದೂ ಜೀವಂತವಾಗಿ! ಅರಳುವ ಹೂವಿಗೂ ಸ್ಪಂದಿಸಬೇಕು, ನರಳುವ ಜೀವಕ್ಕೂ ದನಿಯಾಗಬೇಕು; ಬಾನೆತ್ತರದಿಂದ ಧುಮ್ಮಿಕ್ಕಿ ನೆಲ ಸೇರಿ ಮಾಯಾವಾಗೋ ನೀರ ಹನಿಯನ್ನು ಕೂಡ ಒಂದು ಕಡೆ ಕಡೆದಿಡಬೇಕು. ಬ್ರಹತ್ತಾದ ಸಾಗರದಲ್ಲೂ ಅಂತದ್ದೇ ಹನಿಯನ್ನು ಹುಡುಕಬೇಕು: ಮಗುವಿನ ಕಣ್ಣಲ್ಲಿನ ಮುಗ್ದತೆ, ಅಜ್ಜನ ಸುಕ್ಕುಗಟ್ಟಿದ ಮೊಗದಲ್ಲಿ ಹೆಪ್ಪುಗಟ್ಡಿರುವ ಅನುಭವ ಇವೆಲ್ಲವನ್ನೂ ನಾನು ಸಮಾನವಾಗಿ ಗುರುತಿಸಬಲ್ಲೆ ಎಂದು ಜಗತ್ತಿಗೆ ತೋರಿಸಬೇಕು; ಹಳ್ಳಿ, ದಿಲ್ಲಿ ನನಗೆ ಬೇರೆಯಲ್ಲ ಅರಡನ್ನೂ ನಾ ಬಲ್ಲೆ ಮತ್ತು ’ಎಷ್ಟು ಚೆನ್ನಾಗಿ’ ಅರಿತಿದ್ದೇನೆ ಎಂಬುದನ್ನು ಜಗತ್ತಿಗೆ ತೆರೆದಿಡಬೇಕು ..ಹೀಗೆ ನನ್ನ ಬರವಣಿಗೆಗೆ ಇರುವುದು ಇಂಥದೇ ಕೆಲಸಕ್ಕೆ ಬಾರದ ಹಂಬಲಗಳು.ಇವುಗಳೆಡೆಯಲ್ಲಿ ಮುಂದೆ ಇನ್ನೂ ಕೆಲವು ಸಂಗತಿಗಳು ಸೇರಿಕೊಳ್ಳಬಹುದು ಯಾಕೆಂದರೆ ನಾನು ನಿಂತ ನೀರಾಗಿರಲು ಇಷ್ಡಪಡುವುದಿಲ್ಲ ನನ್ನ ಈ ಗುಣ ನನ್ನ ಬರಹಕ್ಕೂ ಅನ್ವಯಿಸುತ್ತದೆ. ಚಲನಶೀಲತೆಯನ್ನು ಅಹ್ವಾನಿಸಿಕೊಂಡೆ ನಾ ಮುಂದುವರುಯುತ್ತೇನೆ ಅದುದರಿಂದ ಈ ಬ್ಲಾಗ್ ನ ಓದುಗರು ನನ್ನಿಂದ ಯಾವುದೇ ಸಿದ್ಧ ಮಾದರಿಯನ್ನು ಹುಡುಕಬೇಡಿ ಅಥವಾ ಯಾವುದೇ ಪಂಥಕ್ಕೆ ನನ್ನನ್ನು ಕಲ್ಲು ಕಟ್ಟಿ ಹಾಕಬೇಡಿ ಇದು ನಿಮ್ಮಲ್ಲಿ ನನ್ನ ವಿನಮ್ರ ವಿನಂತಿ.
ಚಲನಶೀಲತೆ ಎಂದರೆ ಸ್ವೀಕಾರ, ಅಳವಡಿಕೆ, ಸ್ಪಂದನೆ ಇವೆಲ್ಲಕ್ಕಿಂತ ಹೆಚ್ಚಾಗಿ ಮುಕ್ತತೆ. ಓದುಗ ದೊರೆಗಳ ಅನಿಸಿಕೆ, ಅಭಿಪ್ರಾಯಗಳಿಗೆ ತೆರೆದೆದೆಯ ಸ್ವಾಗತ ....