Sunday, January 24, 2010

ಕಾಲೇಜುಗಳಲ್ಲಿನ ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಅಮೂಲಾಗ್ರ ಬದಲಾವಣೆಯಾಗಲಿ

ಅದು ಬಾಲ್ಯ... ಅದು ಗಣರಾಜ್ಯೋತ್ಸವ ಅಥವಾ ಸ್ವಾತಂತ್ರ್ಯೋತ್ಸವೇ ಆಗಿರಲಿ ಅಂದು ಇಡೀ ಶಾಲೆಯೇ ಆ ದಿನದ ಆಚರಣೆಯ ಸಂಭ್ರಮದಲ್ಲಿ ಮಿಂದು ತೋಯುವುತ್ತಿತ್ತು. ಇದು ನನ್ನ ಬಾಲ್ಯದ ಅಥವಾ ಶಾಲಾದಿನಗಳ ಕಥೆ ಮಾತ್ರವಲ್ಲ, ಬಹುಪಾಲು ಎಲ್ಲರದ್ದು. ಈಗ ಶಾಲೆಗೆ ಹೋಗುತಿರುವವರದ್ದು ಕೂಡ!

ಬಹುಶ: ಹತ್ತನೇ ತರಗತಿ ತನಕ ಸ್ವಾತಂತ್ರ್ಯ ದಿನಾಚರಣೆಯಲ್ಲಿನ ಪಾಲ್ಗೊಳ್ಳುವಿಕೆಯ ಸಂಭ್ರಮ ಅನಂತರ ಎಂದಿಗೂ ನಮಗೆ ದಕ್ಕುವುದಿಲ್ಲ. ಕಾಲೇಜುಗಳಿಗೆ ಬಂದರೆ, ರಾಷ್ಟ್ರೀಯ ಹಬ್ಬಗಳೆಂಬುದು ಕ್ಯಾಲೆಂಡರಿನಲ್ಲಿ ಕೆಂಪು ಅಂಕಿಯಲ್ಲಿ ಬರೆದಿಟ್ಟ ರಜಾದಿನವಾಗಿ ಬಿಡುತ್ತದೆ.

ಇಲ್ಲಿ ಇಂತಹ ದಿನಾಚರಣೆಗಳ ನಿರ್ವಹಣೆಯ ಜವಾಬ್ದಾರಿ ಎನ್ಎಸ್ಎಸ್, ಎನ್ಸಿಸಿ ಮುಂತಾದವುಗಳ ಕರ್ತವ್ಯ ಎಂಬ ಭಾವನೆ. ಅಥವಾ ಇದಕ್ಕೆಂದೇ ರಚಿಸಲ್ಪಟ್ಟಿರುವ ಸಮಿತಿ ಈ ಕಾರ್ಯ ನಿರ್ವಹಿಸುತ್ತದೆ. ಅಂದರೆ ವಿದ್ಯಾರ್ಥಿಗಳ ಸಾಮೂಹಿಕ ಪಾಲ್ಗೋಳ್ಳುವಿಕೆಯೇ ಇರುವುದಿಲ್ಲ! ಆ ಕಾರಣದಿಂದ ಇದು ಹತ್ತರ ಜತೆ ಹನ್ನೊಂದನೇ ರಜಾ ದಿನವಾಗುತ್ತದೆ. ಅದ್ದರಿಂದ ಕಾಲೇಜುಗಳಲ್ಲಿನ ಈ ದಿನದ ಆಚರಣೆಯಲ್ಲಿ ಅಮೂಲಾಗ್ರ ಬದಲಾವಣೆಯಾಗಲೇಬೇಕು.

ಈ ದಿನಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸದಿದ್ದ ವಿದ್ಯಾರ್ಥಿಗಳಲ್ಲಿ ದೇಶಪ್ರೇಮವಿಲ್ಲ ಎಂದರ್ಥವಲ್ಲ. ಈ ದಿನದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅವರ ದೇಶಪ್ರೇಮವನ್ನು ಪ್ರಕಟಿಸುವ ಒಂದು ವಿಧಾನವಷ್ಟೇ. ಈ ಸತ್ಯವನ್ನು ಒಪ್ಪಿಕೊಂಡು ನಾವು ಮುಂದುವರಿಯೋಣ.

ಶಾಲೆಗಳಲ್ಲಿ ತುಂಬು ಉತ್ಸಾಹದಿಂದ ಭಾಗವಹಿಸುವ ವಿದ್ಯಾರ್ಥಿಯೊಬ್ಬ ಕಾಲೇಜು ಮೆಟ್ಟಿಲೇರಿದೊಡನೇ ಈ ಅಚರಣೆಯಿಂದ ಯಾಕೆ ವಿಮುಖನಾಗುತ್ತಾನೆ? ಶಾಲೆಗಳಲ್ಲಿ ಕಡ್ಡಾಯ ಭಾಗವಹಿಸುವಿಕೆಯ ಒತ್ತಡವಿರಬಹುದು, ನಾನದನ್ನು ನಿರಾಕರಿಸುವುದಿಲ್ಲ. ಆದರೆ ಅವರಲ್ಲಿ ಈ ಕಡ್ಡಾಯದ ಕಟ್ಟಪ್ಪಣೆಯನ್ನು ಮೀರಿದ ಸಂಭ್ರಮವಿದ್ದೇ ಇರುತ್ತದೆ. ಇಲ್ಲದಿದ್ದಲ್ಲಿ ಅವರಲ್ಲಿ ಆ ಉತ್ಸಾಹ ಕಂಡು ಬರಲು ಸಾಧ್ಯವೇ ಇಲ್ಲ. ಮತ್ತು ಈ ಉತ್ಸಾಹ ಹುಟ್ಟಲು ಕೂಡ ಅನೇಕ ಕಾರಣ ಮತ್ತು ವಿಷಯಗಳಿರುತ್ತವೆ.

ಇದು ನಾವೆಲ್ಲ ಯೋಚನೆ ಮಾಡುವ ಕಾರಣಗಳಿಗಿಂತ ಭಿನ್ನ. ಉದಾಹರಣೆಗೆ ಒಂದನೇ ತರಗತಿಯ ಮಗುವಿಗೆ ಸ್ವಾತಂತ್ರ್ಯವೆಂದರೇನು? ಅದನ್ನು ಯಾರು ಕೊಟ್ಟರು? ಯಾಕೆ ಕೊಟ್ಟರು? ಅದು ಅಲ್ಲಿವರೆಗೆ ಎಲ್ಲಿತ್ತು? ಹೇಗಿತ್ತು? ಈಗ ಹೇಗಿದೆ? ಅದಿಲ್ಲದಿದ್ದರೇ ಏನಾಗುತ್ತ್ತಿತ್ತು? ಅದನ್ನು ಪಡೆಯಲು ಏನು ಮಾಡಿದರು? ಹೋರಾಟವೆಂದರೇನು? ಬ್ರಿಟಿಷರು ಎಂದರೆ ಯಾರು? ಅವರ್ಯಾಕೆ ಕೆಟ್ಟವರಾಗಿದ್ದರು? ಮುಂತಾದ ಅದರ ಮುಗ್ದ ಮನಸ್ಸಿನ ಪ್ರಶ್ನೆಗಳಿಗೆ ಆ ದಿನ ಉತ್ತರ ಸಿಗುತ್ತದೆ. ಅಥವಾ ಆ ದಿನ ಅ ಮಗುವಿನ ನೃತ್ಯ, ಭಾಷಣ, ನಾಟಕ ಅಥವಾ ಇನ್ನೀತರ ಕಾರ್ಯಕ್ರಮಗಳಿರಬಹುದು. ಇಲ್ಲ, ಎಲ್ಲರೂ ಈ ದಿನವನ್ನು ಆಚರಿಸುತ್ತಾರೆ, ನಾನೂ ಆಚರಿಸುತ್ತೇನೆ ಅದ್ದರಿಂದ ನಾನೂ ’ಆ ಎಲ್ಲರೊಂದಿಗೆ’ ಗುರುತಿಸಿಕೊಂಡಂತಾಗುತ್ತದೆ ಎಂಬ ಕಾರಣಕ್ಕಾಗಿ ಆ ಸಂಭ್ರಮ ಹುಟ್ಟಿಕೊಂಡಿರಲುಬಹುದು.

ಆದೇನೇ ಆದರೂ ಅ ಮಗು, ಈ ದಿನದ ಆಚರಣೆಯಲ್ಲಿ ಭಾಗಿಯಾಗಿ ಒಂದು ರಜೆ ಕಳೆದುಕೊಂಡರು ಅದಕ್ಕಿಂತ ಮಿಗಿಲಾದ ಇನ್ನೇನಾನ್ನೋ ಪಡೆದುಕೊಂಡಿರುತ್ತದೆ. ಆದರೆ ಕಾಲೇಜಿಗಳಲ್ಲಿನ ಸ್ವಾತಂತ್ರ್ಯದಿನ ಆಚರಣೆ ಇಲ್ಲೇ ಎಡವಿದೆ ಎಂದೇ ನನಗನಿಸುತ್ತಿದೆ. ಕಾಲೇಜುಗಳಲ್ಲಿನ ಸ್ವಾತಂತ್ರ್ಯದಿನದ ಕಾರ್ಯಕ್ರಮಗಳು ತೀರಾ ನೀರಸ.

ಅದ್ದರಿಂದ ಕಾಲೇಜುಗಳಲ್ಲಿನ ರಾಷ್ಟ್ರೀಯ ಆಚರಣೆಗಳನ್ನು ಆಕರ್ಷಕಗೊಳಿಸುವ ನಿಟ್ಟಿನಲ್ಲಿ ಚಿಂತಿಸುವುದು ಅನಿವಾರ್ಯ. ಇಲ್ಲಿ ’ಅಕರ್ಷಕ’ ಅಂದರೆ ಮನರಂಜನಾ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಅಂದು ಆಯೋಜಿಸುವುದು ಎಂದಲ್ಲ.

ಇಂದು ಕಾಲೇಜುಗಳಲ್ಲಿ ಸ್ವಾತಂತ್ರ್ಯದಿನದ ಕಾರ್ಯಕ್ರಮವೆಂದರೆ ಧ್ವಜಾರೋಹಣ, ಜನಗಣಮಣ, ವಂದೇ ಮಾತರಂ, ಸಾರೇ ಜಹಾಂಸೇ ಅಚ್ಚಾ, ಮುಂತಾದ ರಾಷ್ಟ್ರಗೀತೆ ಅಥವಾ ದೇಶಭಕ್ತಿ ಗೀತೆಗಳ ಹಾಡುವಿಕೆ ಮತ್ತು ತದನಂತರ ಒಂದು ಸಭಾ ಕಾರ್ಯಕ್ರಮ ಅಮೇಲೆ ಸಿಹಿತಿಂಡಿ ಹಂಚುವಿಕೆ ಇಷ್ಟಕ್ಕೆಯೇ ಮುಗಿದು ಹೋಗುತ್ತಿದೆ.

ಇಲ್ಲಿ ಧ್ವಜಾರೋಹಣ ಮತ್ತದಕ್ಕೆ ಪೂರಕವಾಗಿರುವ ಕಾರ್ಯಕ್ರಮಗಳಲ್ಲಿ ನಮಗೆ ಒಂದಿನಿತೂ ಬದಲಾವಣೆ ಮಾಡಲು ಸಾಧ್ಯವಿಲ್ಲ ಮತ್ತು ದಲಾವಣೆ ಸಾಧೂವೂ ಅಲ್ಲ. ಆದರೆ ಉಳಿದ ಕಾರ್ಯಕ್ರಮಗಳನ್ನು ರಂಗೇರಿಸಬಹುದಲ್ಲವೇ?

ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ ದೇಶದಲ್ಲಿ ಹತ್ತಾರು ಸಮಸ್ಯೆಗಳಿದ್ದವು, ಇಂದೂ ಅವೇ ಸಮಸ್ಯೆಗಳಿವೆ ಅದರೊಂದಿಗೆ ಹೆಚ್ಚುವರಿಯಾಗಿ ಇನ್ನೂ ಕೆಲ ಸಮಸ್ಯೆಗಳು ಸೇರಿಕೊಂಡಿವೆ. ಅದರೆ ಈ ಎಲ್ಲ ಸಮಸ್ಯೆಗಳ ನಡುವೆ ಬ್ರಿಟಿಷ್ ಆಳ್ವಿಕೆಯೇ ದೊಡ್ಡ ಸಮಸ್ಯೆಯಾಗಿ ಕಂಡಿತು ಮತ್ತು ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ಜನರೆಲ್ಲ ಸಂಘಟಿತರಾದರು ಮತ್ತದರಲ್ಲಿ ಯಶ ಪಡೆದರು. ಇಂದು ನಮ್ಮ ಶಿಕ್ಷಣ ಮಟ್ಟ, ಜೀವನ ಮಟ್ಟ, ಆರೋಗ್ಯ ಮಟ್ಟ ಎಲ್ಲವೂ ಹೆಚ್ಚಾಗಿದೆ. ಆದರೆ, ನಾವು ಯಾವುದೇ ಒಂದು ಕಾರಣಕ್ಕೇ ಸಂಘಟಿತರಾಗಿಯೇ ಇಲ್ಲ. ಆದೂ ಒಟ್ಟಾಗಲೂ ಹತ್ತಾರು ಕಾರಣಗಳಿದ್ದರು!

ಸ್ವಾತಂತ್ರ್ಯದಿನದ ಆಚರಣೆಯ ಮೂಲಕ ನಾವು ಸಂಘಟಿತರಾಗುವ ಪ್ರಕ್ರಿಯೆ ಶುರು ಮಾಡಬಹುದು. ಅದು ಹೇಗೆಂದರೆ...

ಕರ್ನಾಟಕ ಸರಕಾರ ಯುವಜನರಲ್ಲಿ ಅದರಲ್ಲೂ ಕಾಲೇಜು ವಿದ್ಯಾರ್ಥಿಗಳಲ್ಲಿ ಭಯೋತ್ಪಾದನೆಯ ಬಗ್ಗೆ ಜಾಗೃತಿಯುಂಟು ಮಾಡಲು ಕಳೆದ ವರ್ಷ ಇದೇ ಸಮಯದಲ್ಲಿ ರಾಜ್ಯಾದ್ಯಂತ ’ಭಯೋತ್ಪಾದನಾ ವಿರೋಧಿ ಜಾಗೃತಿ ಅಭಿಯಾನ’ ಆಯೋಜಿಸಿದ್ದು ನಿಮಗೆ ನೆನಪಿರಬಹುದು. ಆ ಕಾರ್ಯಕ್ರಮ ಯಶ ಕಂಡಿತು. ಕೆಲ ಮಂದಿ ರಾಜಕೀಯ ಕಾರಣಕ್ಕಾಗಿ ಈ ಅಭಿಯಾನವನ್ನು ವಿರೋಧಿಸಿದರೂ ಕೂಡ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಸಂಘಟಿತರಾಗಿಯೇ ಭಾಗವಹಿಸಿದರು. ಅಂದರೆ ಭಯೋತ್ಪಾದನೆ ಎಂಬ ರಕ್ಕಸನಿಗೆ ನಮ್ಮೆಲ್ಲರನ್ನು ಒಗ್ಗೂಡಿಸುವ ಸಾಮರ್ಥ್ಯವಿದೆ ಎಂದಾಯಿತಲ್ಲವೇ? ಹಾಗೇ ಸರಕಾರ ಮನಸ್ಸು ಮಾಡಿದರೆ ಏನನ್ನೂ ಮಾಡಬಲ್ಲದು ಎಂದೂ ಕೂಡ ಅಲ್ಲೇ ಸಾಬೀತಾಗಿದೆ.

ವಾಸ್ತವವಾಗಿ ನಮ್ಮನ್ನು ಈಗ ಕಾಡುತ್ತಿರುವ ಭಯೋತ್ಪಾದನಾ ಸಮಸ್ಯೆ ಬಹಳ ದೊಡ್ಡ ಇತಿಹಾಸವನ್ನು ಹೊಂದಿಲ್ಲ. ಮತ್ತು ಈ ಸಮಸ್ಯೆಯಿಂದ ದೇಶದ ಸಮಸ್ತರು ತೊಂದರೆಗೀಡಾಗಿದ್ದಾರೆ ಎಂದು ಹೇಳುವುದು ಕೂಡ ಸರಿಯಲ್ಲ. ಇಂದು ದೇಶದಲ್ಲಿ ಭಯೋತ್ಪಾದನೆಯ ಕಾರಣದಿಂದ ಸಾಯುವುದಕ್ಕಿಂತ ಹೆಚ್ಚಾಗಿ ಆತ್ಮಹತ್ಯೆ, ಅಪಘಾತ, ಸೂಕ್ತ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ಸಿಗದಿರುವುದು, ಮೂಡನಂಬಿಕೆ ಮುಂತಾದ ಕಾರಣಗಳಿಂದ ಸಾಯುತ್ತಾರೆ. ಹಾಗೆಯೇ ಜಾತಿಯತೆ, ಭ್ರಷ್ಟಾಚಾರ, ಪ್ರಾದೇಶಿಕತೆ, ನಿರುದ್ಯೋಗ, ಬಡತನ, ರೈತರ ಸಮಸ್ಯೆ, ವಿದೇಶಿ ವಸ್ತುಗಳ ಮೇಲಿನ ಮೋಹ, ದೇಶದ ಬಗೆಗಿನ ಅಸಡ್ಡೆ ಮುಂತಾದ ಅಪಾಯಕಾರಿ ಸಮಸ್ಯೆಗಳಿವೆ.

ಹಿಂದೆ ಬ್ರಿಟಿಷರನ್ನು ಓಡಿಸಿ ಒಂದು ಸಮಸ್ಯೆಗೆ ಮಂಗಳ ಹಾಡಿದ ನಾವು ಉಳಿದ ಸಮಸ್ಯೆಗಳ ಜೊತೆಜೊತೆಗೆ ಬದುಕುವ ಜೀವನವನ್ನೂ ರೂಢಿಸಿಕೊಂಡೆವು. ಇಂದು ಭಯೋತ್ಪಾದನೆಯ ವಿರುದ್ದದ ಹೋರಾಟದಲ್ಲೂ ಇದೇ ಮರುಕಳಿಸುತ್ತದೆ ಎಂದು ನನಗನಿಸುತ್ತಿದೆ. ಭಯೋತ್ಪಾದನೆ ನಾಶವಾಗಬಹುದು ಮತ್ತು ಆಗುತ್ತದೆ. ಆದೇ ಉಳಿದ ಸಮಸ್ಯೆಗಳು ಆಳಿಯದೇ ಉಳಿದು ಬಿಡುತ್ತವೆ. ಆಗ?

ಪ್ರತಿ ವರ್ಷ ರಾಷ್ಟ್ರೀಯ ದಿನಗಳಿಗೆ ರಾಷ್ಟ್ರವ್ಯಾಪಿ ಒಂದು ಗುರಿ, ಉದ್ದೇಶ ಅಥವಾ ಅಭಿಯಾನವನ್ನು ಸರಕಾರ ಇಟ್ಟುಕೊಳ್ಳಬೇಕು. ಎಲ್ಲ ರಾಷ್ಟ್ರಿಯ ಹಬ್ಬಗಳಿಗೆ ಇದು ಸಾಧ್ಯವಾಗದೇ ಹೋದರು ಯಾವುದಾದರೂ ಒಂದು ಹಬ್ಬಕ್ಕೆ ಖಂಡಿತವಾಗಿ ಮಾಡಬಹುದು. ಉದಾಹರಣೆಗೆ ಈ ವರ್ಷದ ಗಣರಾಜ್ಯೋತ್ಸವವನ್ನು ಭ್ರಷ್ಟಾಚಾರ ವಿರೋಧಿ ಅಭಿಯಾನವನ್ನಾಗಿಸಿಕೊಂಡು ಆ ಮೂಲಕ ಭ್ರಷ್ಟಾಚಾರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ದೇಶಾದ್ಯಂತ ಮಾಡುತ್ತೇವೆ ಎಂದು ಕೇಂದ್ರ ಸರಕಾರವೇ ಘೋಷಿಸಬೇಕು. ಮತ್ತು ತಿಂಗಳ ಆರಂಭದಿಂದಲೇ ಆ ವರ್ಷದ ಗುರಿಗೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ದೇಶದ ಗಲ್ಲಿ ಗಲ್ಲಿಗೂ ಸಂದಿಗೊಂದಿಗೂ ಈ ಅಭಿಯಾನ ತಲುಪಬೇಕು. ಜನವರಿ ೨೬ಕ್ಕೇ ಈ ಅಭಿಯಾನದ ಸಮಾಪನಾ ಜರುಗುವಂತೆ ಯೋಜನೆ ಮಾಡಬೇಕು. ಇದಕ್ಕೆ ಕರ್ನಾಟಕ ಸರಕಾರದ ಭಯೋತ್ಪಾದನಾ ವಿರೋಧಿ ಅಭಿಯಾನದ ಮಾದರಿಯನ್ನೇ ತೆಗೆದುಕೊಳ್ಳಬಹುದು.

ಪ್ರತಿ ವರ್ಷ ಒಂದೊಂದು ಉದ್ದೇಶವಿಟ್ಟುಕೊಂಡಾಗ ಯುವ ಜನತೆಗೆ ದೇಶದ ಹಲವಾರು ಸಮಸ್ಯೆಗಳ ಪರಿಚಯವಾಗುತ್ತದೆ. ಅದಕ್ಕೇನು ಕಾರಣ? ಪರಿಹಾರವೇನು?ಆ ಸಮಸ್ಯೆಯಲ್ಲಿ ಮತ್ತದರ ಪರಿಹಾರದಲ್ಲಿ ತಮ್ಮ ಪಾತ್ರವೇನು ಮುಂತಾದ ಅಂಶಗಳು ಅವರಿಗೆ ತಿಳಿಯುತ್ತದೆ. ಇದರರ್ಥ ಅವರಿಗೆ ದೇಶದ ಜ್ವಲಂತ ಸಮಸ್ಯೆಗಳ ಆರಿವು ಇಲ್ಲವೆಂದಲ್ಲ. ಆರಿವಿದೆ, ಆದರೆ ಆ ಆರಿವು ಸಾಮೂಹಿಕವಾದಾಗ ಪ್ರಯತ್ನವೂ ಸಾರ್ವತ್ರಿಕವಾಗುತ್ತದೆ ಮತ್ತು ಕಣ್ಣಿಗೆ ಕಾಣಿಸುವ ಬದಲಾವಣೆ ಸಾಧ್ಯವಾಗುತ್ತದೆ. ಸಮಾನ ಮನಸ್ಕರು ಒಟ್ಟು ಸೇರಿ ಒಂದು ವ್ಯವಸ್ಥಿತ ಬದಲಾವಣೆ ಸಂಭವಿಸುತ್ತದೆ.

ಇದನ್ನು ಮನಗಂಡ ಬಾಲಗಂಗಾಧರ ತಿಲಕರು ಸ್ವಾತಂತ್ರ್ಯ ಪೂರ್ವದಲ್ಲಿ ಸಾರ್ವಜನಿಕ ಗಣೇಶೋತ್ಸವಗಳನ್ನು ಆಚರಿಸುವುದನ್ನೇ ಒಂದು ಸಾಧನವನ್ನಾಗಿಸಿಕೊಂಡು ಜನರನ್ನು ಸಂಘಟಿಸಿ ಬ್ರಿಟಿಷರ ವಿರುದ್ದದ ಹೋರಾಟಕ್ಕೇ ಅಣಿಗೊಳಿಸಿದ್ದು.

ನಾನು ಹೇಳುತ್ತಿರುವುದೂ ಅದೇ, ಈ ದಿನಾಚರಣೆಯ ನೆವದಲ್ಲಿ ನಾವೆಲ್ಲಾ ಒಂದಾಗಿ ನಮ್ಮನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳ ಬಗ್ಗೆ ಅರಿತು ಕೊಂಡು ಅದರ ವಿರುದ್ದ ಹೋರಾಡೋಣ. ಕನಿಷ್ಟ ಪಕ್ಷ ಈ ಸಮಸ್ಯೆಗಳು ಒಂದು ಸವಾಲಾಗಿಯಾದರೂ ಪರಿವರ್ತನೆಗೊಳ್ಳಬಹುದು.

ಉದಾಹರಣೆಗೆ ಬಹುಪಾಲು ರಸ್ತೆ ಅಪಘಾತಗಳು ಬೇಜವಾಬ್ದಾಯಿಂದಲೇ ಘಟಿಸುತ್ತವೇ ಎಂಬುದು ಸರ್ವವೇದ್ಯ. ಇದರ ಆರಿವು ಜನರಿಗೆ ತಮ್ಮ ಅನುಭವ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಗುವ ವರದಿಗಳಿಂದ ದಕ್ಕಿದೆ. ಆದರೆ ಅದನ್ನು ಓದಿದ ಬಹುಪಾಲು ಮಂದಿ ಹೆಚ್ಚೆಂದರೆ ಒಂದು ನಿಟ್ಟುಸಿರು ಬಿಟ್ಟು ಸುಮ್ಮನಾಗುತ್ತಾರೆ. ಆದರೆ ರಸ್ತೆ ನಿಯಮಗಳನ್ನು ಪಾಲಿಸುವುದು ಕೂಡ ದೇಶಪ್ರೇಮದ ಒಂದು ಭಾಗ ಅಥವಾ ಅಂಗವೆಂದಾದಾಗ ಜನರ ಚಿಂತನಕ್ರಮದಲ್ಲಿ ಬದಲಾವಣೆ ಸಾಧ್ಯವಾಗಬಹುದು.

ಯಾಕೆಂದರೆ ನಾವು ದೇಶಪ್ರೇಮವೆಂದರೆ ಪರಕೀಯರ ವಿರುದ್ಧ ಹೋರಾಡುವುದು, ಹೋರಾಡುವವರನ್ನು ಹುರಿದುಂಬಿಸುವುದು ಮತ್ತು ಅಗತ್ಯವಾದರೆ ತಾವೇ ಬಲಿದಾನ ಮಾಡುವುದು ಎಂಬುದಕ್ಕಷ್ಟೇ ಸೀಮಿತಗೊಳಿಸಿಕೊಂಡಿದ್ದೇವೆ. ಮತ್ತೋಬ್ಬರ ಜೀವವನ್ನು ಅಥವಾ ಜೀವನವನ್ನು ರಕ್ಷಿಸುವುದು ಅಥವಾ ಗೌರವಿಸುವುದಕ್ಕೂ ದೇಶಪ್ರೇಮಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ಮನೋಭಾವ ನಮ್ಮದು. ’ಇಲ್ಲ, ನೀನು ನಿನ್ನ ದೇಶಪ್ರೇಮವನ್ನು ಈ ಮೂಲಕ ಪ್ರಕಟಿಸಬಹುದು’ ಅಂದಾಗ ಮತು ಈ ಮನೋಭಾವ ಎಲ್ಲ ಕಡೆ ಒಮ್ಮೆಗೆ ಹಬ್ಬಿದಾಗ ಎಲ್ಲೋ ಒಂದು ಕಡೆ ರಸ್ತೆ ನಿಯಮಗಳನ್ನು ಪಾಲಿಸದಿರುವುದು ದೇಶದ್ರೋಹಕ್ಕೆ ಸಮಾನ ಎಂಬ ಭಾವ ನಮ್ಮ ಪ್ರಜ್ಞೆಯೊಳಗೆ ಸೇರಿಕೊಳ್ಳುತ್ತದೆ. ಅಷ್ಟಾದರೆ ಜನರಲ್ಲಿ ಜಾಗೃತಿ ಮೂಡಿದಂತೆಯೇ. ಇದಾಗಬೇಕಾದರೆ ಈ ಆರಿವು ಜನ ಮಾನಸಕ್ಕೇ ಸುನಾಮಿ ರೀತಿಯಲ್ಲಿ ಅಪ್ಪಳಿಸಬೇಕು. ಈ ಅಪ್ಪಳಿಸುವಿಕೆ ಸೃಷ್ಟಿಸಲು ಈ ರೀತಿ ಏಕಕಾಲದಲ್ಲಿ ದೇಶವ್ಯಾಪಿ ಜಾಗೃತಿ ಹುಟ್ಟಿಸುವ ಪ್ರಕ್ರಿಯೆ ಅನಿವಾರ್ಯ. ಆದಕ್ಕೇ ರಾಷ್ಟ್ರೀಯ ಹಬ್ಬಗಳಿಗಿಂತ ಮಜಬೂತಾದ ವೇದಿಕೆ ಮತ್ತು ಸಂದರ್ಭ ಬೇರ್ಯಾವುದಿದೆ?

ಇದೇ ಮಾತನ್ನು ಭ್ರಷ್ಟಾಚಾರಕ್ಕೂ ಅನ್ವಯಿಸಬಹುದು. ಭ್ರಷ್ಟ = ದೇಶದ್ರೋಹಿ ಎಂಬ ಸಮೀಕರಣ ಹುಟ್ಟಿಕೊಂಡದ್ದೇ ಆದರೆ ದೇಶಕ್ಕೇ ಬೇರೇನೂ ಬೇಕಾಗಿಲ್ಲ. ಇಲ್ಲಿ ಕೊಡುವವ ತೆಗೆದುಕೊಳ್ಳುವವ ಇಬ್ಬರೂ ಪರಮ ಪಾಪಿಗಳು ಎಂಬ ಮನೋಭಾವ ಸೃಷ್ಟಿಯಾದರೆ ಸಾಕು. ಭ್ರಷ್ಟರಿಗೆ ಸಾಮಾಜಿಕ ಬಹಿಷ್ಕಾರ ಕಟ್ಟಿಟ್ಟ ಬುತ್ತಿ. ಇದು ಖಂಡಿತ ತಿರುಕನ ಕನಸಲ್ಲ. ಸಮಾಜದ ಪಾಲ್ಗೊಳ್ಳುವಿಕೆ ಇದ್ದಲ್ಲಿ ಸುಲಭವಾಗಿ ನನಸಾಗಬಹುದಾದ ಕನಸು.

ನಾನ ಕಾರಣ, ಉದ್ದೇಶಗಳಿಂದ ನಾನ ಸ್ತರಗಳಲ್ಲಿ ಚದುರಿ ಹೋಗಿರುವ ದೇಶವಾಸಿಗಳನ್ನು ಕಂಗೆಡಿಸಿರುವ, ಕಂಗೆಡಿಸುತ್ತಿರುವ ಸಮಸ್ಯೆಗಳನ್ನೇ ದಾರವಾಗಿಸಿಕೊಂಡು ಅವರನ್ನು ಬೆಸೆಯುವ ಕೆಲಸ ಮಾಡಿದ್ದೆ ಆದಲ್ಲಿ ಈ ಸಮಸ್ಯೆಗಳು ನಮ್ಮ ನಿಯಂತ್ರಣಕ್ಕೆ ಬರುತ್ತವೆ. ಜನರಲ್ಲೂ ಪರಸ್ಪರ ವಿಶ್ವಾಸ ಮೂಡುತ್ತದೆ. ಅದೆಲ್ಲದಕ್ಕಿಂತ ಹೆಚ್ಚಾಗಿ ಯುವಜನತೆ ದೇಶದ ಮುಖ್ಯವಾಹಿನಿಗೆ ರಾಜಪಥದಲ್ಲೇ ತಲುಪಿದಂತಾಗುತ್ತದೆ.

ಇದರಿಂದ ಇಂತಹ ಮಹಾನ್ ದಿನಗಳ ಆಚರಣೆಗೂ ಒಂದು ಕಳೆ ಬರುತ್ತದೆ, ಸಾರ್ಥಕತೆ ಲಭಿಸುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಯೋಚಿವುದೇ?

Friday, January 1, 2010

ಎಲ್ಲ ಜವಾಬ್ದಾರಿಗಳು ಪತ್ರಕರ್ತನದ್ದೇಯಲ್ಲ !

ಹೀಗೊಂದು ನೈಜ ಮೆಸೆಜ್ ಸಂಭಾಷಣೆ.
ಇವತ್ತು ನೀವು ಸೂಪರ್ಬ್ ಆಗಿ ಕಾಣುತ್ತಿದ್ದೀರಿ...
ಥ್ಯಾಂಕ್ಯೂ, ಹು ಇಸ್ ದಿಸ್?
ನಾನು ನಿಮ್ಮ ಅಭಿಮಾನಿ...
ಅಭಿಮಾನಿಯಾ? ವೆರಿ ನೈಸ್. ನೀವ್ಯಾಕೆ ನನ್ನ ಅಭಿಮಾನಿ?
ನಿಮ್ಮ ಡ್ರೆಸ್ ಸೆನ್ಸ್, ಮಾತನಾಡೋ ಸ್ಟೈಲ್, ನಿಮ್ಮ ಕಣ್ಣು... ಅದ್ಬುತ ಅದಕ್ಕೆ...
ನೀವು ನನ್ನನ್ನು ಎಷ್ಟು ದಿನದಿಂದ ನೋಡುತ್ತಿದ್ದೀರಿ?
೧೫ ದಿನದಿಂದ...
ಹೌದಾ! ನಿಮ್ಮ ಹೆಸರು ಹೇಳಿ ಪ್ಲೀಸ್.
ಇಲ್ಲ, ನೀವೇ ಹುಡುಕಿ... ಹೀಗೆ ಮುಂದುವರಿದ ಈ ಮೆಸೆಜ್ ಅವಳು ತನ್ನ ಮನೆ ವಿಳಾಸ ಕೊಡುವ ತನಕ ತಲುಪಿತ್ತು. ನಂತರ ನಾವು ಭೇಟಿಯಾಗುವ ದಿನ, ಸ್ಥಳ ಎಲ್ಲ ನಿಗದಿಯಾಯಿತು ಕೂಡ.

ವಾಸ್ತವವಾಗಿ ಆ ಹುಡುಗಿ ನನಗೆ ಪರಿಚಿತಳು. ಅವಳಿಗೂ ನನ್ನ ಪರಿಚಯವಿದ್ದೆ ಇದೆ. ಆದರೆ ಇದು ನನ್ನ ನಂಬರ್ ಮತ್ತು ನಾನು ಈ ರೀತಿ ’ಆಟವಾಡಿಸುತ್ತಿದ್ದೇನೆ’ ಎಂದು ಅವಳಿಗೆ ಗೊತ್ತಿರಲಿಲ್ಲ.

ನೀವು ಅಂಗನವಾಡಿಯಲ್ಲಿ ಟೀಚರಾ? ಎಂಬ ಪ್ರಶ್ನೆಯೊಂದಿಗೆ ಮಾತು ಶುರುಮಾಡಿ, ಹುಡುಗಿಯರನ್ನು ಮರಳು ಮಾಡಿ ಬುಟ್ಟಿಗೆ ಹಾಕಿಕೊಂಡು ಮದುವೆಯಾಗುವುದಾಗಿ ನಂಬಿಸಿ ನಂತರ ಸೈನೈಡ್ ಕೊಟ್ಟು ಬರ್ಬರವಾಗಿ ಕೊಲೆ ಮಾಡುತ್ತಿದ್ದ ಮೋಹನ್ ಕುಮಾರ್‌ನ ವಿದ್ಯೆಗೂ, ಈ ತಂತ್ರಕ್ಕೂ ಏನಾದರೂ ವ್ಯತ್ಯಾಸವಿದೆಯಾ? ಅದರೂ ನಮ್ಮ ಹುಡುಗಿಯರು ಬುದ್ದಿ ಕಲಿತಿಲ್ಲ! ಸಮಾಜ, ಮಾಧ್ಯಮಗಳಿಗೆ ಮತ್ತು ಪೊಲೀಸರಿಗೆ ಶಾಪ ಹಾಕುವುದನ್ನು ಬಿಟ್ಟಿಲ್ಲ!

ಮೇಲೆ ನಾ ಹೇಳಿದ ರೀತಿಯ ಮೊಬೈಲ್ ಚ್ಯಾಟ್‌ಗಳು ಸಾಮಾನ್ಯವಾಗಿ ನಡೆಯುತ್ತದೆ. ಅದರೆ ಅದು ಒಂದು ಮಿತಿಯನ್ನು ದಾಟಿದರೆ ಮೋಹನ್ ಕುಮಾರ್ ನಂತವರು ಹುಟ್ಟಿಕೊಳ್ಳುತ್ತಾರೆ.

ಮೋಹನ್ ಕುಮಾರ್‌ನ ಪಾಶವೀ ಕೃತ್ಯ ಬೆಳಕಿಗೆ ಬರುತ್ತಲೇ ಆತನ ಪ್ರತಿ ಚಲನವಲನಗಳ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಿದವು. ಈ ನಡುವೆ ’ಲವ್ ಜಿಹಾದ್’ ಎಂಬ ಪಿಡುಗಿನ ಬಗೆಯೂ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ನೂರಾರು ಯುವತಿಯರು ’ಲವ್ ಜಿಹಾದ್’ಗೆ ಈಡಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರೀತಿಯ ನಾಟಕವಾಡಿ ಹುಡುಗಿಯರನ್ನು ವೇಶ್ಯಾವಟಿಕೆಗೆ ತಳ್ಳಿದ ಸಾಕಷ್ಟು ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾಗಿವೆ. ಇಷ್ಟೆಲ್ಲಾ ಅಗಬಾರದ ಅನಾಹುತಗಳಾಗುತ್ತಿದ್ದರೂ ಹುಡುಗಿಯರ ನಾಪತ್ತೆ ಮತ್ತು ಪರಾರಿ ಪ್ರಕರಣಗಳು ಮುಂದುವರಿಯುತ್ತಲೇ ಇದೆ.

ಎಲ್ಲರಿಗೂ ಗೊತ್ತಿರುವಂತೆ ಮಾಧ್ಯಮಗಳ ಮುಖ್ಯ ಜವಾಬ್ದಾರಿ ಜನರಿಗೆ ಮಾಹಿತಿ, ಶಿಕ್ಷಣ ಮತ್ತು ಮನರಂಜನೆ ನೀಡುವುದು. ಅದರಲ್ಲೂ ಮಾಧ್ಯಮಗಳು ಮಾಹಿತಿ ಮತ್ತು ಶಿಕ್ಷಣ ನೀಡಿದಾಗ ಜನರಲ್ಲಿ ’ಜಾಗ್ರತಿ’ ಮೂಡುತ್ತದೆ. ಈ ’ಜಾಗ್ರತಿ’ಯಿಂದ ಜನರು ಸಮಾಜದಲ್ಲಿ ಅಥವಾ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಶ್ರಮಿಸುತ್ತಾರೆ. ಅದ್ದರಿಂದ ಮಾಧ್ಯಮಗಳಿಗೆ ಸಮಾಜದಲ್ಲಿ ಅತ್ಯಂತ ಗೌರವಯುತ ಮತ್ತು ಜವಾಬ್ದಾರಿಯುತ ಸ್ಥಾನ.

ಮಾಧ್ಯಮಗಳು ಬಹುಪಾಲು ಸಂದರ್ಭದಲ್ಲಿ ಈ ಕೆಲಸವನ್ನು ನಿಷ್ಠೆಯಿಂದ ಮಾಡಿಕೊಂಡು ಬಂದಿವೆ. ಕೆಲ ಸಂದರ್ಭಗಳಲ್ಲಿ ಮತ್ತು ಕೆಲ ಮಾಧ್ಯಮಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆ, ವೈಭವೀಕರಣ, ನಿರ್ಲಕ್ಷ್ಯ ಮತ್ತು ತಮ್ಮ ’ಇಸಂ’ಗಳ ಮಿಶ್ರಣದಿಂದ ಪತ್ರಿಕಾಧರ್ಮಕ್ಕೆ ಚ್ಯುತಿಯಾಗಿರಬಹುದು. ಅದನ್ನು ಹೊರತು ಪಡಿಸಿ ಮತ್ತು ಕೆಲ ಬಾಲ ಬಡುಕ ಮತ್ತು ಪಕ್ಷ ನಿಷ್ಠ, ಮತ್ತು ವ್ಯಕ್ತಿ ನಿಷ್ಠ ಮಾಧ್ಯಮಗಳನ್ನು ಬದಿಗಿಟ್ಟು ನೋಡಿದರೆ ಇಂದಿಗೂ ಮಾಧ್ಯಮಗಳು ತಮ್ಮ ಮೂಲ ಆಶಯವನ್ನು ಮರೆಯದೆ ಜನರಲ್ಲಿ ಜಾಗ್ರತಿ ಮೂಡಿಸುವ ಕಾರ್ಯನಿರ್ವಹಿಸುತ್ತಿವೆ. ಆದರೆ ಸಮಾಜ ತಾನು ಜಾಗ್ರತ ಗೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಬಿದ್ದು ಕೊಂಡರೆ ಅದಕ್ಕೆ ಯಾರು ಹೊಣೆ?

ಮೋಹನ್ ಕುಮಾರ್‌ನ ಪ್ರಕರಣದ ಎಳೆ ಎಳೆಯನ್ನು ಜನರ ಮುಂದೆ ಬಿಚ್ಚಿಟ್ಟಿದ್ದರೂ ಕೂಡ ಓಡಿ ಸುಸ್ತಾಗುವವರ ಸಂಖ್ಯೆ ಕಡಿಮೆಯಾಗಿಲ್ಲ ಎಂದರೆ ಅದಕ್ಕೆ ಸಮಾಜವೇ ಕಾರಣ ಅಲ್ಲವೇ? ಈ ವಿಷಯದಲ್ಲಿ ಮಾಧ್ಯಮಗಳು ಜನರಲ್ಲಿ ಜಾಗ್ರತಿಯುಂಟು ಮಾಡುವ ಕೆಲಸವನ್ನು ಮಾಡಿದವು. ಅದ್ದರಿಂದ ಇಂದು ಈ ಜಿಲ್ಲೆಯ ಬಹುತೇಕ ಎಲ್ಲರಿಗೂ ಮೋಹನ್ ಕುಮಾರ್‌ನ ಕುಕೃತ್ಯಗಳ ಪರಿಚಯವಿದೆ ಆ ಮೂಲಕ ತಾವೂ ಕೂಡ ಯಾವ ರೀತಿ ಮೋಸದ ಜಾಲಕ್ಕೆ ಸಿಲುಕಬಹುದು ಎಂಬರಿವಿದೆ. ಹಾಗೆಯೇ ತಾವು ಅನೈತಿಕ ದಂಧೆಯ ಪಾಲಾಗಬಹುದು ಎಂಬುದು ಕೂಡ ತಿಳಿದಿದೆ. ಆದರೇನು ಪ್ರಯೋಜನ? ಓಡಿ ಹೋಗುವವರು ನಿಲ್ಲುತ್ತಲೇ ಇಲ್ಲ!

ಜಾಗತಿಕ ತಾಪಮಾನ ಏರಿಕೆಯ ದುಷ್ಪರಿಣಾಮದ ಬಗ್ಗೆ ಮಾಧ್ಯಮಗಳು ಕೆಲ ವರ್ಷಗಳ ಹಿಂದಿನಿಂದಿನಿಂದಲೇ ಜನರಲ್ಲಿ ಜಾಗ್ರತಿಯುಂಟು ಮಾಡುವ ಕೆಲಸ ಮಾಡಿದ್ದವು. ಆದರೆ, ಆ ಬಗ್ಗೆ ಯಾರೂ ಗಂಭೀರವಾಗಿ ಯೋಚಿಸಿರಲಿಲ್ಲ. ಯೋಚಿಸಿದ್ದರೂ ಕೂಡ ಅದನ್ನು ಸಂಘಟಿತರಾಗಿ ಆಡಳಿತರೂಡರ ಗಮನಕ್ಕೆ ತಂದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಾಡುವಲ್ಲಿ ವಿಫಲರಾಗಿದ್ದರು.

ಜಗತ್ತಿನ ತಾಪಮಾನ ಏರುತ್ತಿದೆ ಎಂಬುದಕ್ಕೆ ಸಾಕಷ್ಟು ಆಧಾರಗಳಿದ್ದವು ಮತ್ತು ಅದರಿಂದ ದುಷ್ಪರಿಣಾಮಗಳಾಗುತ್ತವೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳನ್ನು ವಿಜ್ಞಾನಿಗಳು ಇದೇ ಮಾಧ್ಯಮಗಳ ಮೂಲಕ ಜನರಿಗೆ ನೀಡಿದ್ದರು. ಆದರೆ ಸಮಾಜದ್ದು ಎಂದಿನ ’ಘನ’ ನಿದ್ದೆ. ಆದೇ ಯಾರೋ ಕಿಸಿಬಾಯಿ ದಾಸಯ್ಯ ಡಿಸೆಂಬರ್ ೨೧, ೨೦೧೨ಕ್ಕೆ ಪ್ರಳಯವಾಗುತ್ತದೆ ಎಂದದ್ದೇ ತಡ ಆ ಸುದ್ದಿ ಬೆಳಕಿನ ವೇಗದಲ್ಲಿ ಜನರ ನಡುವೆ ಓಡಾಡಿತ್ತು. ಟಿವಿಯಲ್ಲಿ ಬರುವ ಜ್ಯೋತಿಷಿಗಳು ನಾಯಿ ಮಲ ತಿಂದರೆ ನಿನ್ನ ಸಮಸ್ಯೆ ಪರಿಹಾರವಾಗುತ್ತದೆ ಎಂದರೆ ಅದನ್ನು ತಿನ್ನಲು ತಯಾರಾಗಿರುವವರಿದ್ದಾರೆ. ಆದೇ ಒಬ್ಬ ವಿಜ್ಞಾನಿ ಕುದಿಸಿದ ನೀರು ಕುಡಿಯಿರಿ ಎಂದರೆ ನಮಗೆ ಒಗ್ಗಿ ಬರುವುದಿಲ್ಲ. ಇಂದಿಗೂ ಮೂಢ ನಂಬಿಕೆಗಳಿಂದ ಹೊರಬರಲು ಸಾಧ್ಯವಾಗದ ಸಮಾಜದ ಮಧ್ಯೆ ವ್ಯೆಜ್ಞಾನಿಕ ಮನೋಭಾವ ಬಿತ್ತುವುದು ಅದೇಷ್ಟು ಕಷ್ಟ. ಈ ಮಿತಿಯಲ್ಲೂ ಮಾಧ್ಯಮಗಳು ವೈಜ್ಞಾನಿಕ ಮಾಹಿತಿ ಕೊಡುವಲ್ಲಿ ಶ್ರಮಿಸಿವೆ. ಆದರೆಡೆಯಲ್ಲಿ ಕೆಲವರು ಮೂಡನಂಬಿಕೆಗಳನ್ನು ಮಾರ್ಕೆಟ್ ಮಾಡುವ ಕೆಲಸ ಮಾಡಿರಬಹುದು. ಆದರೂ ಅವರು ಜಾಗತಿಕ ತಾಪಮಾನದ ಬಗ್ಗೆ ಈ ಮೊದಲು ಉಲ್ಲೇಖ ಮಾಡಿದ್ದರು.

ಮಾಧ್ಯಮಗಳಿಗೆ ರೈತರ ಅತ್ಮಹತ್ಯೆಗಳಿಗಿಂತ ಫ್ಯಾಶನ್ ಶೋಗಳು, ಸೆಲೆಬ್ರಿಟಿಗಳು ಮುಖ್ಯವಾಗಿದ್ದಾರೆ, ಮುಖ್ಯವಾಗುತ್ತಿದ್ದಾರೆ, ಈ ಮಾಧ್ಯಮಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಹುಯಿಲೆಬ್ಬಿಸುವ ಕೆಲಸ ಒಂದು ಕಡೆ ನಡೆಯುತ್ತಿದೆ. ಹೌದು, ಮಾಧ್ಯಮಗಳು ರೈತನ ಅತ್ಮಹತ್ಯೆಗೆ ಎಲ್ಲೋ ಒಂದು ಮೂಲೆಯಲ್ಲಿ ಸ್ಥಾನ ಕೊಟ್ಟಿರಬಹುದು. ಆದರೆ ಇಂದು ದೇಶದ ಬಹುತೇಕ ವಿದ್ಯಾವಂತ ಜನರಿಗೆ ರೈತರು ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬರಿವು ಮಾಧ್ಯಮಗಳಿಂದ ದಕ್ಕಿದೆ. ಆದರೆ, ಎಷ್ಟು ಮಂದಿ ರ‍್ಯೆತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ?

ಜನರಿಗೆ ವರ್ಷಕ್ಕೆ ಸಾವಿರಾರು ರೈತರು ಅತ್ಮಹತ್ಯೆ ಮಾಡಿಕೊಳ್ಳುವಂತದ್ದು ಒಂದು ಸಾಮಾನ್ಯ ಸುದ್ದಿಯಾಗಿಯೇ ಉಳಿಯುವುದಾದರೆ, ಅದಕ್ಕೆ ಸ್ಪಂದಿಸುವ ಮನಸ್ಸಿಲ್ಲ ಎಂದಾದರೆ ಆ ಜಾಗವನ್ನು ಸೆಲೆಬ್ರಿಟಿಗಳ ಸುದ್ದಿ ಅಲಂಕರಿಸುವುದರಲ್ಲಿ ತಪ್ಪೇನಿದೆ?

ಇವತ್ತು ರೈತರ ಸಮಸ್ಯೆಗಳ ಅರಿವು ಇರುವವರು ಎಂದೆನಿಸಿಕೊಂಡವರು ಕೂಡ ಸಂತೆಗೆ ಹೋಗಿ ೧ ರೂಪಾಯಿಗೆ ೨ ಕೆಜಿ ಟೊಮೆಟೊ ಕೊಡು ಅನ್ನುತ್ತಾರೆ. ಅದೇ ಮಾಲ್‌ಗಳಿಗೆ ಹೋಗಿ ಅದೇ ಟೊಮೆಟೊಕ್ಕೆ ಕೆಜಿಗೆ ೩೦ ರೂಪಾಯಿ ಅಂದರೂ ತುಟಿ ಬಿಚ್ಚದೇ ನೋಟು ಬಿಚ್ಚುತ್ತಾನೆ. ಈಗ ಹೇಳಿ, ತಮ್ಮ ಜವಾಬ್ದಾರಿ ಮರೆತಿರುವುದು ಮಾಧ್ಯಮಗಳಾ? ಅಥವಾ ಸಮಾಜವಾ?
ಇಂದು ದೇಶದ ಬಹುತೇಕ ಎಲ್ಲ ಕೃಷಿಕರು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ಮಾಧ್ಯಮಗಳು ವ್ಯವಸ್ಥೆಯ ಗಮನಕ್ಕೆ ತಂದಿವೆ. ಆದರೆ ಎಲ್ಲೂ ಎಲ್ಲ ಕೃಷಿಕರನ್ನು ಒಂದೇ ಸೂರಿನಡಿಗೆ ತಂದು ಒಂದು ಹೋರಾಟ ಸಂಘಟಿಸಲು ಸಾಧ್ಯವಾಗಿಲ್ಲ, ಯಾಕೆ? ಜನರನ್ನು ಧರ್ಮದ ಹೆಸರಲ್ಲಿ, ಜಾತಿಯ ಹೆಸರಲ್ಲಿ, ಭಾಷೆಯ ಹೆಸರಲ್ಲಿ ಸಂಘಟಿಸಿ ಆಧಿಕಾರದ ರುಚಿ ಸವಿದವರಿದ್ದಾರೆ, ರೈತರ ಹೆಸರು ಹೇಳಿ ಅಧಿಕಾರದ ದಿಬ್ಬಣ ಏರಿದ ಹೆಗ್ಗಣಗಳ ಸಂಖ್ಯೆಗೂ ಮಿತಿಯಿಲ್ಲ. ಅದರೂ ಇಂದಿಗೂ ರೈತ ಅನಾಥ. ಈ ಬಗ್ಗೆ ಮಾಧ್ಯಮಗಳು ’ಜಾಗೃತಿ’ಯುಂಟು ಮಾಡುವ ಕೆಲಸ ಮಾಡಿಲ್ಲವೇ?

ಶೋಷಣೆ, ಭ್ರಷ್ಟಾಚಾರ, ಲಂಚಕೋರತನ, ದುಷ್ಟ ರಾಜಕೀಯದ ಬಗ್ಗೆ ಸಿನಿಮಾ ಸೇರಿದಂತೆ ಎಲ್ಲ ಮಾಧ್ಯಮಗಳು ಜನರೇ ಜಾಗ್ರತರಾಗಿ, ಈ ದುಷ್ಟಕೂಟದಿಂದ ಯಾವ ರೀತಿ ಹೊರಬರಬಹುದು ಎಂದು ಬಾಯಿ ಬಾಯಿ ಬಡಿದುಕೊಂಡಿವೆ ಅದರೂ ಈ ಪಿಡುಗು ಕಿಂಚಿತ್ ಕಡಿಮೆಯಾಗಿಲ್ಲ. ಹೋಗಲಿ, ನಮ್ಮ ಲೋಕಾಯುಕ್ತವಂತೂ ಭ್ರಷ್ಟ ಖದೀಮರ ವಿರುದ್ದ ಸಾರಿರುವ ಸಮರಕ್ಕೆ ಎಲ್ಲ ಮಾಧ್ಯಮಗಳು ತುಂಬು ಪ್ರಚಾರ ನೀಡುತ್ತಿವೆ. ಆದರೂ ಜನ ತಮ್ಮ ಕೆಲಸ ಮಾಡಿ ಕೊಡಲು ಅಧಿಕಾರಿಗಳಿಗೆ ಹಣ ಕೊಡುವುದನ್ನು ನಿಲ್ಲಿಸಿಲ್ಲ. ಹಣ ಕೇಳುವ ಅಧಿಕಾರಿಗಳ ವಿರುದ್ದ ದೂರು ಕೂಡ ಕೊಡುತ್ತಿಲ್ಲ. ಕೊಟ್ಟರು ಅಂಥವರ ಪ್ರಮಾಣ ತೀರಾ ಕಡಿಮೆ. ಎಲ್ಲವನ್ನೂ ಮಾಧ್ಯಮಗಳ ತನಿಖಾ ವರದಿ ಅಥವಾ ಕುಟುಕು ಕಾರ್ಯಾಚರಣೆಯೇ ಮಾಡಲಿ, ಇಂತಹ ಪಿಡುಗುಗಳ ವಿರುದ್ದ ಹೋರಾಡುವುದು, ಸಮಾಜದಲ್ಲಿ ಬದಲಾವಣೆ ತರುವುದು ಮಾಧ್ಯಮಗಳಿಗೆ ಮಾತ್ರ ಸೀಮಿತವಾದ ಕರ್ತವ್ಯ ಮತ್ತು ಜವಾಬ್ದಾರಿ ಎಂಬ ಮನೋಭಾವ ಸಮಾಜದಲ್ಲಿ ಈಗಾಗಲೇ ಬಲವಾಗಿ ಬೇರುಬಿಟ್ಟಿದೆ.

ಇದು ಮಾಧ್ಯಮಗಳ ಮಹಿಮೆ, ಸಾಮರ್ಥ್ಯ, ಮತ್ತು ಶಕ್ತಿಯನ್ನು ಪರಿಗಣಿಸಿ ಸಮಾಜ ನೀಡಿದ ಗೌರವ ಎಂದು ಭಾವಿಸುವ ಸಂಗತಿಯಾಗಿ ಉಳಿದಿದ್ದರೆ ಖಂಡಿತವಾಗಿ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರೆಲ್ಲರೂ ಬಹು ಹೆಮ್ಮ ಪಡಬೇಕಾದ ವಿಷಯವಾಗಿರುತ್ತಿತ್ತು. ಅಥವಾ ಮಾಧ್ಯಮಗಳಲ್ಲಿ ಪ್ರಕಟವಾದರೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಹಾಗೂ ವ್ಯವಸ್ಥೆ ಮತ್ತು ಸಮಾಜ ಅದಕ್ಕೆ ಸ್ಪಂದಿಸುತ್ತದೆ ಎಂಬ ವಿಶ್ವಾಸ ಇದರ ಹಿಂದೆ ಇದ್ದಿದ್ದರೂ ಕೂಡ ಅದು ಮಾಧ್ಯಮಗಳ ಹಿರಿಮೆಯೆನಿಸುತ್ತಿತ್ತು. ಆದರೆ ದುರದೃಷ್ಟವಶಾತ್ ಇಂದಿನ ಮಾಧ್ಯಮಗಳ ಮೇಲಿನ ಸಮಾಜದ ನಿರೀಕ್ಷೆಯ ಹಿಂದಿರುವುದು ಅದರ ಪಲಾಯಾನವಾದ.
ಸ್ವಾತಂತ್ರ್ಯಪೂರ್ವದಲ್ಲಿ ಆದರ್ಶ ಪತ್ರಿಕೋದ್ಯಮವಿತ್ತು ಈಗ ಇಲ್ಲ ಎಂದು ಕನವರಿಸುವವರು ಆಗೀನ ಸಮಾಜ ಹೇಗಿತ್ತು? ಅದು ಸಮಸ್ಯೆಗಳಿಗೆ, ಹೋರಾಟಗಳಿಗೆ ಯಾವ ರೀತಿ ಸ್ಪಂದಿಸುತ್ತಿತ್ತು ಎಂಬುದನ್ನು ಮೊದಲು ಗಮನಿಸಬೇಕು. ಅಂದು ಒಂದು ಸಮಸ್ಯೆಯ ಬಗ್ಗೆ ಬರೆದರೆ ಅದರ ಬಗ್ಗೆ ಯೋಚಿಸುವ ಸಮಾಜವಿತ್ತು, ಅಗತ್ಯಬಿದ್ದರೆ ಮನೆ ಮಠ ಬಿಟ್ಟು ಕೂಡ ಹೋರಾಡುತ್ತಿದ್ದರು. ಅದ್ದರಿಂದ ಸಮಸ್ಯೆ ಪರಿಹಾರವಾಗುತ್ತಿತ್ತು.

ನೆನಪಿಡಿ, ಆಗ ಇದ್ದದ್ದು ಈಗೀನ ಅಕ್ಷರಸ್ಥರ ಪ್ರಮಾಣದ ಆರ್ಧಕ್ಕಿಂತಲೂ ಕಡಿಮೆ ಅಕ್ಷರಸ್ಥರು. ಮಾಧ್ಯಮ ಎಂದರೆ ಪತ್ರಿಕೆ ಮಾತ್ರ. ರೇಡಿಯೋ ತನ್ನ ಅಸ್ತಿತ್ವ ಕಂಡುಕೊಂಡದ್ದು ೧೯೩೫ರ ಬಳಿಕ. ಸಂಪರ್ಕ ಸಾಧನಗಳಾಗಲೀ, ರಸ್ತೆಗಳಾಗಲೀ ತೀರಾ ಬಾಲಾವಸ್ಥೆಯಲ್ಲಿತ್ತು. ಆದರೂ ಅವರು ಹೋರಾಡಿದರು ಮತ್ತು ಗೆದ್ದರು.

ಆದೇ ಈಗ? ಕ್ಷಣ ಮಾತ್ರದಲ್ಲಿ ಜಗತ್ತಿನ ಯಾವುದೇ ಪ್ರದೇಶಕ್ಕೆ ಸಂಪರ್ಕ ಸಾಧಿಸಬಲ್ಲೇವು, ಟಿವಿ, ಇಂಟರ್ನೆಟ್‌ಗಳು ರೇಡಿಯೋ ಮತ್ತು ಪತ್ರಿಕೆಗಳ ಜೊತೆ ಸೇರಿ ಮಾಧ್ಯಮ ಕ್ರಾಂತಿಯೇ ಆಗಿದೆ. ಈ ಕ್ರಾಂತಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಕೂಡ ತಲುಪಿದೆ. ಆದರೂ ಈ ಸಮಾಜಕ್ಕೆ ತನ್ನೋಳಗೊಂದು ವ್ಯವಸ್ಥಿತ ಬದಲಾವಣೆ ತರಲು ಸಾಧ್ಯವಾಗುತ್ತಿಲ್ಲ.

ಮಾಧ್ಯಮಗಳು ತಮ್ಮ ಮೂಲ ಉದ್ದೇಶಗಳಿಗೆ ನಿಷ್ಠವಾಗಿಯೇ ಇವೆ ಎಂದು ಹೇಳುವುದು ಕಷ್ಟ ಆದರೂ ತಮ್ಮ ಉದ್ದೇಶ ಮರೆತಿಲ್ಲ. ಆದರೆ ಸಮಾಜ ಮಾತ್ರ ಎಲ್ಲವನ್ನೂ ಮಾಧ್ಯಮಗಳ ಮೇಲೆ ಹೊರಿಸಿ ತಾನು ಮಾತ್ರ ನಿಶ್ಚಿಂತವಾಗಿದೆ.
ರಸ್ತೆ ಸರಿಯಿಲ್ಲ ಎಂದು ಪತ್ರಕರ್ತ ಬರೆಯಬಹುದು ಮತ್ತು ಬರೆಯುತ್ತಾನೆ, ಆದರೆ ಅದನ್ನು ಅವನೇ ರಿಪೇರಿ ಮಾಡಿಸಿಕೊಡಬೇಕು ಎಂದು ಬಯಸಲು ಸಾಧ್ಯವಿಲ್ಲ ಇದು ಎಲ್ಲ ವಿಷಯಗಳಿಗೂ ಅನ್ವಯಿಸುತ್ತದೆ. ಯಾಕೆಂದರೆ ಅವನಿಗೆ ಸಾಂವಿಧಾನಿಕವಾದ ಯಾವುದೇ ವಿಶೇಷ ಹಕ್ಕಿಲ್ಲ, ಒಬ್ಬ ಜನ ಸಾಮಾನ್ಯನಿಗೆ ಇರುವ ಎಲ್ಲ ನೀತಿ ನಿಯಮಗಳು ಅವನಿಗೂ ಅನ್ವಯಿಸುತ್ತದೆ ಹಾಗೂ ಅವನು ಅದಕ್ಕೆ ಬದ್ದನಾಗಿರಬೇಕು. ಹಾಗೆಯೇ ಸಮಾಜದ ಉಳಿದವರಿಗೆ ಇರುವಂತಹ ಎಲ್ಲ ಸಂಬಂಧಗಳು, ಇತಿ ಮಿತಿಗಳು ಅವನಿಗೂ ಇರುತ್ತದೆ ಎಂಬುದನ್ನು ಮರೆಯಬಾರದು ಅಲ್ಲವೇ?

ಇದು ಕನ್ನಡ ಸಾಹಿತ್ಯಕ್ಕೆ ಸಮನ್ವಯ ಸಂಧಿ ಕಾಲ

ಕನ್ನಡಿಗರ ಸಾಹಿತ್ಯದ ಹಸಿವು ಮತ್ತು ಸಾಮರ್ಥ್ಯಕ್ಕೆ ಕಳೆದ ಒಂದಿಡೀ ಸಹಸ್ರಮಾನವೇ ಸಾಕ್ಷಿಯಾಗಿ ನಿಂತಿದೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಿನಂತೆ ಕನ್ನಡಿಗರ ಕೈ ಹಿಡಿಯದ ಸಾಹಿತ್ಯ ಪ್ರಕಾರವೇ ಉಳಿದಿಲ್ಲ ಎಂಬಷ್ಟು ವಿಶಾಲವಾಗಿ ಮತ್ತು ಆಳವಾಗಿ ನಮ್ಮ ಸಾಹಿತ್ಯದ ಬೇರು ಹಬ್ಬಿದೆ.

ಇಲ್ಲಿ ನಾನು ಯಾವುದೇ ಸಾಹಿತಿಯ, ಸಾಹಿತ್ಯದ ಕಾಲಘಟ್ಟ ಅಥವಾ ಸಾಹಿತ್ಯ ಪ್ರಕಾರದ ಬಗ್ಗೆ ಉದ್ದೇಶಪೂರ್ವಕವಾಗಿ ಉಲ್ಲೇಖ ಮಾಡುತ್ತಿಲ್ಲ. ಯಾಕೆಂದರೆ ಕನ್ನಡದ ಲಭ್ಯವಿರುವ ಮೊದಲ ಲಿಖಿತ ಸಾಹಿತ್ಯ ಕೃತಿ ಕವಿರಾಜಮಾರ್ಗ ದಿಂದ ಹಿಡಿದು ಜನಪದವೂ ಸೇರಿದಂತೆ ಇಂದಿನ ಸಾಹಿತ್ಯದ ವರೆಗೂ ಪ್ರತಿಯೊಂದು ಸಾಹಿತ್ಯಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇದ್ದೆ ಇದೆ. ಎಲ್ಲ ಸಾಹಿತ್ಯ ಪ್ರಕಾರಗಳ ಸಮ್ಮೀಳನದಿಂದ, ಹಿರಿಮೆಯಿಂದ ಮತ್ತು ಕೊಡುಗೆಯಿಂದ ತಾನೇ ಕನ್ನಡ ಸಾಹಿತ್ಯಕ್ಕೆ ವೈವಿಧ್ಯತೆ ಮತ್ತು ಶ್ರೇಷ್ಟತೆ ದಕ್ಕಿದ್ದು. ಒಂದು ಒಳ್ಳೆಯ ಸಾಂಬಾರಿಗೆ ನಾನ ವಸ್ತುಗಳು ಬೇರೆ ಬೇರೆ ಪ್ರಮಾಣದಲ್ಲಿ ಹೇಗೆ ಸೇರಬೇಕೋ ಹಾಗೆ ಇದು ಕೂಡ. ಎಲ್ಲವೂ ಒಂದೇ ಪ್ರಮಾಣದಲ್ಲಿ ಸೇರಿದರೆ ಏನಾಗಬಹುದು? ಆಡುಗೆ ಮಾಡುವವ ಯಾವ ರೀತಿ ಆಡುಗೆ ಪದಾರ್ಥಗಳ ಮೇಲೆ ನಿಯಂತ್ರಣ ಹೊಂದಿರುತ್ತಾನೋ ಅದೇ ರೀತಿ ಕನ್ನಡದ ಮಟ್ಟಿಗೆ ಕಾಲ ಚಕ ಆ ಕೆಲಸ ಮಾಡಿತು ಎಂದು ನನಗನಿಸುತ್ತಿದೆ.

ಆದರೆ ಒಂದು ಮಾತನ್ನು ನಾನಿಲ್ಲಿ ಬರೆದೆ ಮುಂದುವರಿಯಬೇಕು. ಹಿಂದಿನ ಹೆಚ್ಚಿನೆಲ್ಲ ಸಾಹಿತಿಗಳು ವಿದ್ವಾಂಸರಾಗಿದ್ದರು ಇಲ್ಲವೇ ಅವರಲ್ಲಿ ಜೀವನಾನುಭವ ಪೊಗದಸ್ತಾಗಿತ್ತು . ಜನಪದ ಸಾಹಿತಿಗಳು ವಿದ್ವಾಂಸರು ಎಂಬ ಪರಿಧಿಯೊಳಗೆ ಬಾರದಿದ್ದರು ಅವರವರು ಬದುಕಿದ ರೀತಿ ಮತ್ತು ತಮ್ಮ ಪರಿಸರವನ್ನು ಕಟ್ಟಿ ಕೊಟ್ಟ ರೀತಿಯನ್ನು ಗಮನಿಸಿದಾಗ ಅವರನ್ನೂ ಕೂಡ ಪಂಡಿತರು ಎಂದು ಪರಿಗಣಿಸಬಹುದು.

ಆಗಿನ ಶಿಷ್ಟ ಸಾಹಿತಿಯೊಬ್ಬನಿಗೆ ತನ್ನ ಕೃತಿಯನ್ನು ಅಥವಾ ಬರಹವನ್ನು ಜನರ ಮುಂದೆ ತರುವುದು ಅಷ್ಟು ಸುಲಭವಾಗಿರಲಿಲ್ಲ. ಅದೇ ರೀತಿ ಒಬ್ಬ ಜನಪದ ಸಾಹಿತಿಗೆ ಕೂಡ ತನ್ನ ಸಾಹಿತ್ಯವನ್ನು ಇನ್ನೊಬ್ಬರಿಗೆ ದಾಟಿಸುವುದು ಅಷ್ಟು ಸುಲಭವಾಗಿರಲಿಲ್ಲ. ಅದ್ದರಿಂದ ನನಗನಿಸುವಂತೆ ಈ ಎರಡು ಸಾಹಿತ್ಯ ಪ್ರಕಾರದಲ್ಲೂ ಜೊಳ್ಳುಗಳು ಕಾಲಗರ್ಭ ಸೇರಿ ಗಟ್ಟಿಕಾಳುಗಳು ಮಾತ್ರ ಉಳಿದವು. ಆದರೆ ಇಂದು ಏನಾಗಿದೆ?

ನಾವು ಇಪ್ಪತ್ತನೆಯ ಶತಮಾನವನ್ನು ಸಾಹಿತ್ಯದ ದೃಷ್ಟಿಯಿಂದ ನವೋದಯ, ನವ್ಯ, ನವ್ಯೋತ್ತರ, ಬಂಡಾಯ ಹೀಗೆ ವಿಂಗಡಿಸುತ್ತೇವೆ. ಆದರೆ ಕಳೆದ ಶತಮಾನದ ಕೊನೆಯ ಒಂದುವರೆ ದಶಕ ಮತ್ತು ಈ ಶತಮಾನದ ಆದಿಯನ್ನು ಯಾವ ವೇದಿಕೆಯಡಿ ತರುವುದು ಎಂಬದೇ ದೊಡ್ಡ ಸಮಸ್ಯೆ. ಇಲ್ಲಿಂದಲೇ ಇಂದಿನ ಕನ್ನಡ ಸಾರಸ್ವತ ಲೋಕದ ಅಜಲುಗೊಜಲು ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತದೆ.

ಕಾಲಘಟ್ಟದ ಸಾಹಿತ್ಯವನ್ನು ಒಂದೇ ವೇದಿಕೆಯಡಿ ತಾರದಿದ್ದರೆ ಏನಾಗುತ್ತದೆ? ಎಂದು ನೀವು ಕೇಳಲೇ ಬೇಕಾದ ಪ್ರಶ್ನೆ. ನನ್ನ ಉತ್ತರವೂ ಸ್ಪಷ್ಟವಾಗಿದೆ. ಏನೂ ಆಗುವುದಿಲ್ಲ, ಒಂದು ರೀತಿಯಲ್ಲಿ ಒಳ್ಳೆಯದೇ ಆಗುತ್ತದೆ, ಸಾಹಿತ್ಯಕ್ಕೆ ಚೌಕಟ್ಟು ಹಾಕುವುದು, ಸಾಹಿತ್ಯವೆಂದರೆ ಇದೇ ರೀತಿ ಇರಬೇಕು ಎಂದು ಹೇಳುವುದು ಸರಿಯಲ್ಲ. ಆದರೆ ಇದನ್ನೇ ಸ್ಪಷ್ಟವಾಗಿ ಆಥವಾ ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಇಂದಿನ ಸಾಹಿತ್ಯಕ್ಕೆ ನಿರ್ದಿಷ್ಟ ಉದ್ದೇಶ, ಗುರಿ, ಅಥವಾ ಇಂದಿನ ಸಾಹಿತಿಗಳು ಯಾವುದೋ ಒಂದು ಉದ್ದೇಶಕ್ಕಾಗಿ ಅಥವಾ ಏಕ ಉದ್ದೇಶವಿಟ್ಟುಕೊಂಡು ಬರೆಯುತ್ತಿಲ್ಲ ಎಂಬುದಕ್ಕೆ ನಿದರ್ಶನ. ಅಂದರೆ ಬಿಡಿಯಾದ ಪ್ರಜ್ಞೆ ನಮ್ಮಲ್ಲಿ ಹುಟ್ಟಿಕೊಂಡಿದೆ. ಇದರೊಂದಿಗೆ ಈ ಕಾಲಘಟ್ಟದ ಆಗುಹೋಗುಗಳಿಗೆ ಅಕ್ಷರದ ಮೂಲಕ ಮೂರ್ತ ರೂಪ ನೀಡುವ ಸಾಮರ್ಥ್ಯವಿರುವ ಒಬ್ಬ ಮಹಾನ್ ಸಾಹಿತಿಯ ಕೊರತೆ ನಮ್ಮನ್ನು ಕಾಡುತ್ತಿದೆ. ಹಿಂದೆ ನಾನು ಹೇಳಿದ ನಾಲ್ಕು ವಿಂಗಡನೆಗಳ ಸಮಯದಲ್ಲಿ ಅದಕ್ಕೆ ಹೊರತಾದ ಸಾಹಿತ್ಯ ರಚನೆಗಳೂ ಕೂಡ ಬಂದಿದ್ದವು ಎಂಬುದನ್ನು ನಾನಿಲ್ಲಿ ನಿರಾಕರಿಸುತ್ತಿಲ್ಲ.
ಕನ್ನಡದಲ್ಲಿ ಇಂದಿಗೂ ಮಹಾನ್ ಸಾಹಿತಿಗಳಿದ್ದಾರೆ. ಆದರೆ, ಅದರಲ್ಲಿ ಎಷ್ಟು ಮಂದಿ ಸಾಹಿತ್ಯಿಕವಾಗಿ ಬದುಕಿದ್ದಾರೆ ಎಂಬುದು ಮುಖ್ಯ. ಹೆಚ್ಚಿನ ಸಾಹಿತಿಗಳು ಇತಿಹಾಸದ ಬೆನ್ನು ಹಿಡಿದಿದ್ದಾರೆ ಎಂದೆನಿಸುತ್ತದೆ. ಇದು ಅವರ ಪಲಾಯನವಾದ ಖಂಡಿತವಾಗಿಯೂ ಆಲ್ಲ, ಬದಲಾಗಿ ಅವರ ಮಿತಿ.

ಇಂದು ಪತ್ರಿಕೆಗಳು ಬರಹಗಾರರಿಗೆ ಸಾಕಷ್ಟು ಆವಕಾಶ ಕೊಡುತ್ತಿವೆ. ಹಿಂದೆ ಇಂತಹ ಅವಕಾಶಗಳು ಕಡಿಮೆ ಇತ್ತು. ಗುಣಮಟ್ಟದ ಬರಹಗಳು ಮಾತ್ರ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದವು. ಅದ್ದರಿಂದಲೇ ಇರಬೇಕು ಕಳೆದ ಶತಮಾನದ ಕೊನೆಯ ದಶಕದವರೆಗೂ ಗುಣಮಟ್ಟದ ಬರಹಗಳು ಮತ್ತು ಬರಹಗಾರರು ಮಾತ್ರ ನಿಯತಕಾಲಿಕಗಳಲ್ಲಿ ಮತ್ತು ದಿನ ಪತ್ರಿಕೆಗಳ ಸಾಪ್ತಾಹಿಕಗಳಲ್ಲಿ ಸ್ಥಾನ ಪಡೆಯುತ್ತಿದ್ದರು.

ಆದರೆ ಪತ್ರಿಕೆಗಳು ಕೊಟ್ಟಿರುವ, ಕೊಡುತ್ತಿರುವ ವೇದಿಕೆಯನ್ನು ಯುವ ಬರಹಗಾರರು ಯಾವ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂದು ಗಮನಿಸಿದರೆ ನಿರಾಶೆ ಕಟ್ಟಿಟ್ಟ ಬುತ್ತಿ.
ಇಂದಿನ ಯುವ ಸಾಹಿತಿಗಳು ಅದರಲ್ಲೂ ಕಾಲೇಜು ಸಾಹಿತ್ಯವೆಂಬುದು ಪ್ರೀತಿ, ಪ್ರೇಮ, ಪ್ರಣಯದ ಸುತ್ತಲೇ ಗಿರಕಿ ಹೊಡಿಯುತ್ತಿದೆ. ತಪ್ಪಿದರೆ ಮೊಬೈಲ್, ಕಾಲೇಜಿನಲ್ಲಿನ ಮೊದಲ ದಿ, ಬಾಲ್ಯದ ನೆನಪು, ಕಾಲೇಜ್ ಕಾರಿಡಾರ್, ಗೆಳೆತನ, ಅಥವಾ ಉಪದೇಶ ನೀಡುವುದಕ್ಕೇ ಸೀಮಿತವಾಗುತ್ತಿದೆ. ಅದು ಸುತ್ತಲಿನ ಪರಿಸರಕ್ಕೆ ಕುರುಡಾಗಿದೆ. ಕುರುಡಾಗಿದ್ರೂ ಪರ‍್ವಾಗಿರಲಿಲ್ಲ ತನ್ನ ಸ್ಪರ್ಶಜ್ಞಾನವನ್ನೇ ಕಳೆದುಕೊಂಡಿದೇಯೇನೋ ಎಂದೆನಿಸುತ್ತದೆ.

ಬರವಣಿಗೆಯ ಆರಂಭದ ದಿನಗಳಲ್ಲಿ ಇಂತಹ ಬರಹಗಳನ್ನು ಬರೆದರೆ ತಪ್ಪಿಲ್ಲ, ಇದು ಬರಹಗಾರನ ಅತ್ಮವಿಶ್ವಾಸ ಹೆಚ್ಚಿಸುತ್ತದೆ. ಯಾಕೆಂದರೆ ಆಗ ಬರಹ ಪ್ರಕಟಗೊಳ್ಳುವುದೇ ಮುಖ್ಯ. ಅದರೆ ಅದೇ ಅಭ್ಯಾಸವಾದರೇ?

ಪ್ರೀತಿ ಬಗ್ಗೆ ಒಂದೆರಡು ಸರಳ ಪದ್ಯ ಬರೆದರೆ ಒಂದಿಷ್ಟು ಹಣ, ಹೆಸರು ದಕ್ಕಿ ಬಿಡುತ್ತದೆ. ಅದರಾಚೆ, ಅಧ್ಯಯನ ಮಾಡಿ ಬರೆಯಬೇಕು, ಸಮಾಜದ ನೋವು ನಲಿವು ನನ್ನ ಬರಹದ ಮೂಲಕ ಧ್ವನಿ ಪಡೆದುಕೊಳ್ಳಬೇಕು ಎಂಬ ಆಶಯ ಇಂತಹ ಬರಹಗಳಲ್ಲಿ ಕಾಣುತ್ತಿಲ್ಲ. ಸಮಾಜದ ಬದಲು ವೈಯುಕ್ತಿಕ ವಿಷಯವನ್ನೇ ಅಥವಾ ಡೈರಿಯಲ್ಲಿ ಬರೆದು ಮುಚ್ಚಿಡಬೇಕಾದ ವಿಷಯಗಳನ್ನು ಬರೆದು ಪತ್ರಿಕೆಗಳಿಗೆ ಕಳುಹಿಸಿ ಬರಹಗಾರನೆಂದು ಕರೆಸಿಕೊಳ್ಳುವ ಜಾಯಮಾನ ಇವರದ್ದು. ಇಂತಹ ಅರೆಬೆಂದ ಸಾಹಿತಿಗಳಿಂದ ನಮ್ಮ ಸಾಹಿತ್ಯ ಪರಂಪರೆಯ ಮುಂದುವರಿಕೆ ಸಾಧ್ಯಾನಾ? ಸಾಧ್ಯವಾದರೂ ಕೂಡ ಅದಕ್ಕೆ ಶ್ರೀಮಂತಿಕೆ ತುಂಬಲು ಇವರಿಂದ ಸಾಧ್ಯವಾಗುತ್ತಾ?

ಇಂತಹ ಬರಹಗಾರರು ಎರಡು ರೀತಿಯಲ್ಲಿ ಸೋಲುತ್ತಿದ್ದಾರೆ. ಮೊದಲನೆಯದಾಗಿ ಅವರು ತಮ್ಮ ಹಿಂದಿನ ಪರಂಪರೆಯನ್ನು ಅರಿತು ಕೊಳ್ಳುತ್ತಿಲ್ಲ. ಅಂದರೆ, ಓದು ಕಡಿಮೆಯಾಗುತ್ತಿದೆ. ಎರಡನೆಯದಾಗಿ ಸಮಾಜವನ್ನು ಗಮನಿಸುತ್ತಿಲ್ಲ. ಜೊತೆಗೆ ಏನು ಬರೆದರೂ ಪತ್ರಿಕೆಗಳು ಪ್ರಕಟಿಸುತ್ತವೆ ಅದ್ದರಿಂದ ಯಾಕೆ ಸುಮ್ಮನೆ ಕಷ್ಟ ಪಡುವುದು ಎಂಬ ಮನೋಭಾವ.

ಇನ್ನೂ ಹಿರಿಯ ಸಾಹಿತಿಗಳನ್ನು ಗಮನಿಸಿದರೆ ಅವರು ಕಾರಣವಿ(ವ)ಲ್ಲದ ಕಾರಣಗಳಿಂದ ಒಡೆದು ಹಂಚಿ ಹೋಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಇದೊಂದು ದೊಡ್ಡ ಹೊಡೆತ. ಇದರಿಂದ ಮುಖ್ಯ ಬರಹಗಳಿಗೆ ಅಥವಾ ವಿಷಯಗಳಿಗೆ ಸಂಬಂಧಿಸಿದಂತೆ ವಸ್ತುನಿಷ್ಟ ವಿಮರ್ಶೆ ಮರೆಯಾಗಿ ವ್ಯಕ್ತಿ ನಿಷ್ಟ ಮತ್ತು ಸಿದ್ಧಾಂತ ನಿಷ್ಟ ವಿಮರ್ಶೆ ಮತ್ತು ಬರಹಗಳು ಅವರಿಂದ ಬರುತ್ತಿದೆ.
ಹಿಂದೆ ಗುರು ಇಲ್ಲ, ಮುಂದೆ ಗುರಿ ಇಲ್ಲದ ಈ ಸ್ಥಿತಿಯ ಪರಿಣಾಮವಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ನಿರ್ವಾತವೊಂದು ಸೃಷ್ಟಿಯಾಗುವಂತಾಗಿದೆ.

ಹಾಗಂತ ಕನ್ನಡ ಪುಸ್ತಕಗಳು ಪ್ರಕಟಗೊಳ್ಳುತ್ತಿಲ್ವಾ? ಖಂಡಿತವಾಗಿಯೂ ತರಹೇವಾರಿ ಪುಸ್ತಕಗಳು ಪ್ರಕಟಗೊಳ್ಳುತ್ತಿವೆ. ಅವುಗಳ ಮುದ್ರಣ ಮತ್ತು ವಿನ್ಯಾಸ ಚೇತೋಹಾರಿಯಾಗಿದೆ. ಭೌತಿಕವಾದ ಹೊಸತನ ತುಂಬುವುದರಲ್ಲಿ ನಮ್ಮ ಸಾಹಿತ್ಯ ಲೋಕ ಹಿಂದೆ ಬಿದ್ದಿಲ್ಲ ಆದರೆ ನಾವು ಸೋಲುತ್ತಿರುವುದು ಒಳಗಿನ ಹೂರಣ ತುಂಬುವುದರಲ್ಲಿ. ಅಂದರೆ ಯಂತ್ರ ಮಾಡುವ ಕೆಲಸಕ್ಕಿಂತ ಮನಸ್ಸು ಮಾಡಬೇಕಾದ ಕೆಲಸ ಕನ್ನಡದಲ್ಲಿ ಆಗಬೇಕಿದೆ.

ಇಂದಿನ ಕನ್ನಡ ಸಾಹಿತ್ಯದ ಧನಾತ್ಮಕ ಅಂಶವೆಂದರೆ ವಿವಿಧ ಬಗೆಯ ಸಾಹಿತ್ಯ ಹುಟ್ಟಿಕೊಳ್ಳುತ್ತಿದೆ, ಜೊತೆಗೆ ಹಿಂದೆ ಹುಟ್ಟಿದ ಕೆಲ ಸಾಹಿತ್ಯ ಪ್ರಕಾರಗಳು ಅಭಿವೃದ್ಧಿಕಾಣುತ್ತಿದೆ. ಇದರ ಜೊತೆ ಜೊತೆಗೆ ಜಾಗತೀಕರಣದ ಪ್ರಭಾವದಿಂದ ಹುಟ್ಟಿಕೊಂಡ ವೃತ್ತಿಗಳನ್ನು ಮಾಡುತ್ತಿರುವವರು ಕೂಡ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದಾರೆ.

ಒಟ್ಟಿನಲ್ಲಿ ಕನ್ನಡ ಸಾಹಿತ್ಯಕ್ಕೆ ಇದೊಂದು ಹೊಸ ಬಗೆಯ ಸಮನ್ವಯ ಸಂಧಿ ಕಾಲ. ಹಿರಿಕಿರಿಯರು ಒಟ್ಟಾಗಿ ಈ ಸ್ಥಿತಿಯನ್ನು ಎದುರಿಸಬೇಕು. ಹಿರಿಯರ ಅನುಭವ, ಕಿರಿಯರ ಉತ್ಸಾಹ ಸಮನ್ವಯಗೊಂಡರೆ ಮಾತ್ರ ಕನ್ನಡ ಸಾಹಿತ್ಯ ಉಳಿಯಬಹುದು, ಹಬ್ಬಬಹುದು, ಬೆಳೆಯಬಹುದು.

ಇಲ್ಲದಿದ್ದಲ್ಲಿ ಇಂದಿನ ಸಾಹಿತಿಗಳಲ್ಲಿ ಸಾಮಾನ್ಯವಾಗಿ ಕಾಣುವ ಜಾಗತೀಕರಣದ ವಿರುದ್ದದ ಬೈಗುಳ ನಿತ್ಯಮಂತ್ರವಾಗಿ ಬಿಡಬಹುದು. ಕನ್ನಡ ಸಾಹಿತ್ಯದ ಹರಿವು ಬತ್ತಿ ಹೋಗಬಹುದು!