Friday, August 2, 2013

ಕುಸಿದ ಅಥ್ಲೇಟಿಕ್ಸ್ ಗುಣಮಟ್ಟ, ಕಲಿಯಬಾರದೆ ಪಾಠ?

ಭಾರತ ಜಾಗತಿಕ ಕ್ರೀಡಾರಂಗದಲ್ಲಿ ಮಿಂಚಲಿದೆ, ಮುಂದಿನ ಒಲಿಂಪಿಕ್ಸ್‌ನಲ್ಲಿ ಪದಕಗಳು ಸೂರೆ ಹೊಡೆಯಲಿದೆ ಎಂದು ಪ್ರಮುಖ ಕ್ರೀಡಾಕೂಟಗಳಲ್ಲಿ ಒಂದೆರಡು ಪದಕ ಗೆದ್ದ ಬಳಿಕ ನಮ್ಮ ಮುಂದೆ ಹಾರಿ ಬಿಡುವ ಬೆಲೂನು. ಮಾಧ್ಯಮಗಳಲ್ಲಿಯೂ ಕೂಡ ಗೆದ್ದವರ ಗುಣಗಾನ, ಸಂದರ್ಶನ, ವ್ಯಕ್ತಿತ್ವದ ಅನಾವರಣದ ಪ್ರಯತ್ನ. ಗೆದ್ದವರು ಅಭಿನಂದನೆಗೆ, ಪ್ರೇರಣೆಗೆ ಪಾತ್ರರು. ಆದರೆ ದೇಶ ಕ್ರೀಡಾಶಕ್ತಿಯಾಗಿ ಮೆರೆಯಬೇಕಾದರೆ ಗೆಲುವಿನ ಗುಣಮಟ್ಟ ಅತ್ಯಗತ್ಯ. ಗೆದ್ದೆತ್ತಿನ ಬಾಲ ಹಿಡಿಯಲು ಎದ್ದು ಬಿದ್ದು ಓಡುವವರ ಕಣ್ಣಿಗೆ ಗುಣಮಟ್ಟದ ಮೌಲ್ಯ ಅಗೋಚರ.

ಜುಲೈ ಮೊದಲ ವಾರ ಪುಣೆಯಲ್ಲಿ ಏಷ್ಯನ್ ಅಥ್ಲೇಟಿಕ್ಸ್ ಚಾಂಪಿಯನ್‌ಶಿಪ್ ನಡೆದ ನೆನಪು ಮಸುಕುವ ಮುನ್ನ ಒಂದು ಕುತೂಹಲಕಾರಿ ಸಂಗತಿ ನಿಮ್ಮ ಮುಂದೆ. ಮಹಿಳೆಯರ ೪*೪೦೦ ಮೀ ರಿಲೇಯಲ್ಲಿ ಭಾರತಕ್ಕೆ ಚಿನ್ನ ಗೆದ್ದ ಸಂಭ್ರಮ. ರಿಲೇ ಓಟದ ಘಟಾನುಘಟಿಗಳ ಮೇಲೆ ನಿಷೇಧವಿದ್ದರಿಂದ ಭಾರತ ’ಬಿ’ ತಂಡವನ್ನು ಸ್ಪರ್ಧೆಗೆ ಇಳಿಸಿತ್ತು. ನಿರ್ಮಲಾ, ಅನು ಜೋಸ್, ಟಿಂಟು ಲುಕಾ ಮತ್ತು ಪೂವಮ್ಮರನ್ನು ಹೊಂದಿದ್ದ ಈ ತಂಡ ೩:೩೨:೨೬ ನಿಮಿಷಗಳಲ್ಲಿ ತಮ್ಮ ಗುರಿ ಮುಟ್ಟಿತ್ತು. ಇದರೊಂದಿಗೆ ರಷ್ಯಾದ ಮಾಸ್ಕೋದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ದಕ್ಕಿಸಿಕೊಂಡಿತು.

ಭಾರತೀಯರ ಗೆಲುವನ್ನು ಭಾರಿ ಸಡಗರದೊಂದಿಗೆ ಆಚರಿಸಲಾಯಿತು. ದೇಶದ ’ಬಿ’ ತಂಡಕ್ಕೂ  ಸರಿಸಾಟಿಯಾಗಿ ಏಷ್ಯಾದಲ್ಲಿ ಯಾರೂ ಇಲ್ಲ ಎಂಬುದು ಈ ಸಡಗರವನ್ನು ಇಮ್ಮಡಿಗೊಳಿಸಿತು! ಈ ಕ್ರೀಡಾಪಟುಗಳ ಬಗ್ಗೆ ಪ್ರತಿಭೆ ಬಗ್ಗೆ ಚಕಾರ ಎತ್ತುವ ಹಾಗಿಲ್ಲ. ಆದರೆ ಒಟ್ಟಾರೆ ದೇಶದ ಅತ್ಲೀಟ್‌ಗಳ ಗುಣಮಟ್ಟದ ಬಗ್ಗೆ ಯೋಚಿಸಿದರೆ ವಿಷಾದದ ಹೊದಿಕೆ ಮೈದಾನವೆಲ್ಲ.
ಭಾರತೀಯ ರಿಲೇ ತಂಡ ೩:೩೩:೦೦ ನಿಮಿಷಗಳೊಳಗೆ ಗುರಿ ಮುಟ್ಟಿ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆಯನ್ನೇನೋ ಪಡೆದುಕೊಂಡಿದೆ. ಆದರೆ ಮಾಸ್ಕೋದಲ್ಲಿ ಕತೆಯೇನು? ಈವರೆಗೆ ನಡೆದ ೨೦ ಏಷ್ಯನ್ ಅಥ್ಲೇಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಈ ವಿಭಾಗದಡಿ ಭಾರತಕ್ಕೆ ದಕ್ಕಿದ ೯ನೇ ಚಿನ್ನದ ಪದಕವಿದು. ಅದೇ ವಿಶ್ವ ಮಟ್ಟದಲ್ಲಿ?

ಚೀನಾದ ಗುಂಗುಜೌವ್‌ನಲ್ಲಿ ೨೦೧೦ರಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನ ೪*೪೦೦ ಮೀ ರಿಲೇ ವಿಭಾಗದಲ್ಲಿ ಭಾರತೀಯ ಹುಡುಗಿಯರು ಚಿನ್ನದ ಪದಕ ಜಯಿಸಿದ್ದರು. ಆ ಸ್ಪರ್ಧೆಯಲ್ಲಿ ಮಂಜಿತ್ ಕೌರ್, ಸಿನಿ ಜೋಸ್, ಅಶ್ವಿನಿ ಅಕ್ಕುಂಜಿ ಮತ್ತು ಮಂದೀಪ್ ಕೌರ್ ಅವರಿದ್ದ ರಿಲೇ ತಂಡ ೩:೨೯:೦೨ ನಿಮಿಷಗಳಲ್ಲಿ ಗುರಿ ಮುಟ್ಟಿತ್ತು. ಒಟ್ಟಾರೆ ಮೊದಲ ನಾಲ್ಕು ಸ್ಥಾನ ಪಡೆದ ತಂಡಗಳು ೩:೩೧:೮೧ ನಿಮಿಷಗಳಲ್ಲಿ ತಮ್ಮ ಓಟ ಮುಗಿಸಿದ್ದವು. ಅಂದರೆ ಪುಣೆಯಲ್ಲಿ ಗೆದ್ದು ಬೀಗಿದ ರಿಲೇ ತಂಡದ ಪ್ರದರ್ಶನ ಏಷ್ಯನ್ ಗೇಮ್ಸ್‌ನಲ್ಲಿ ಬಂದಿದ್ದರೆ ಭಾರತ ಪದಕ ತಪ್ಪಿಸಿಕೊಳ್ಳುತ್ತಿತ್ತು.

ಈಗ ಭಾರತೀಯರ ಮನಸ್ಥಿತಿಗೆ ಬರೋಣ, ರಿಲೇ ಸ್ಪರ್ಧೆಯಲ್ಲಿ ಪ್ರಸಿದ್ಧ ಆಟಗಾರರ ಅನುಪಸ್ಥಿತಿಯಲ್ಲಿಯೂ ಭಾರತ ಪದಕ ಗೆದ್ದಿತು ಎಂದು ಭಾರತೀಯ ಅಥ್ಲೇಟಿಕ್ಸ್ ಫೆಡರೇಶನ್ ಕುಣಿದು ಕುಪ್ಪಳಿಸಿದೆ. ಖ್ಯಾತನಾಮರಿಲ್ಲದೆ ೩:೩೦ ನಿಮಿಷಗಳೊಳಗೆ ರಿಲೇ ತಂಡ ಗುರಿ ತಲುಪಿದ್ದೇ ಆಗಿದ್ದರೆ ಅದು ಮೆಚ್ಚುಗೆಗೆ ಪಾತ್ರ. ಆದರೆ ಈ ತಂಡ ಗುರಿ ಮುಟ್ಟಿದ್ದು ೩:೩೨ ನಿಮಿಷಗಳ ಬಳಿಕ. ಗುಂಗುಜೌವ್‌ನಲ್ಲಿ ಪದಕ ಗೆದ್ದ ಸಮಯದಿಂದ ಹೆಚ್ಚು ಕಡಿಮೆ ೨ ನಿಮಿಷಗಳ ನಂತರ. ಈ ಸ್ಪರ್ಧೆಯ ವಿಶ್ವದಾಖಲೆ ೩:೧೫:೧೭ ನಿಮಿಷ. ಈಗ ಹೇಳಿ, ಭಾರತದ ಅತ್ಲೀಟ್‌ಗಳ ಗುಣಮಟ್ಟ ಎತ್ತ ಸಾಗುತ್ತಿದೆ? ಕ್ಷಣಿಕ ಗೆಲುವಿಗೆ ಕೇಕೆ ಹಾಕಿ ಕುಣಿದು ಕುಪ್ಪಳಿಸಬೇಕೆ? ಅಥವಾ ವಿಶ್ವ ಮಟ್ಟದಲ್ಲಿನ ಪದಕದ ಕನಸಿನಿಂದ ನಿಧಾನವಾಗಿ ದೂರವಾಗುತ್ತಿರುವ ಓಟಗಾರರ ಬಗ್ಗೆ ವಿಷಾದ ಪಡಬೇಕೆ?

ಭಾರತೀಯ ಅತ್ಲೇಟಿಕ್ಸ್ ಲೋಕದ ಮಟ್ಟಿಗೆ ಒಲ್ಡ್ ಈಸ್ ಗೋಲ್ಡ್ ಅನ್ನುವುದು ಅಕ್ಷರಶಃ ಸತ್ಯ. ೧೯೫೧ರಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳು ಗೆದ್ದ ಪದಕಗಳ ಸಂಖ್ಯೆ ೩೪. ೨೦೦೬ರಲ್ಲಿ ದೋಹಾದಲ್ಲಿ ನಡೆದ ಇದೇ ಕ್ರೀಡಾಕೂಟದಲ್ಲಿ ಕೇವಲ ೯ ಪದಕ ಗೆದ್ದಿದ್ದ ಅಥ್ಲೀಟ್‌ಗಳು ೨೦೧೦ರಲ್ಲಿ ೧೨ ಪದಕಗಳಿಗೆ ಕೊರಳೊಡ್ಡಿದ್ದರು. ಇನ್ನು ಒಲಿಂಪಿಕ್ಸ್‌ನಲ್ಲಿ ಪದಕ ಮಂಟಪದ ಹತ್ತಿರ ಸುಳಿಯುವ ಪ್ರದರ್ಶನ ಹೊಮ್ಮಿರುವುದೇ ಒಂದೆರಡು ಬಾರಿ. ಪೊಡಿಯಂ ಫಿನಿಶ್ ಇಲ್ಲವೇ ಇಲ್ಲ.

’ಹಾರುವ ಸಿಖ್’ ಬಿರುದಾಂಕಿತ ಮಿಲ್ಕಾ ಸಿಂಗ್ ರೋಮ್ ಒಲಿಂಪಿಕ್ಸ್‌ನಲ್ಲಿ ೪೫.೬ ಸೆಕೆಂಡ್‌ನಲ್ಲಿ ೪೦೦ ಮೀಟರ್ ಓಡಿ ಕೂದಲೆಳೆಯಲ್ಲಿ ಕಂಚಿನ ಪದಕ ವಂಚಿತರಾಗಿದ್ದರು. ಇದು ನಡೆದದ್ದು ೧೯೬೦ರಲ್ಲಿ. ಆ ಬಳಿಕದ ೫೩ ವರ್ಷಗಳ ಭಾರತೀಯ ಅತ್ಲೇಟಿಕ್ಸ್‌ನ ಇತಿಹಾಸದಲ್ಲಿ ಕೇವಲ ಇಬ್ಬರು ಮಾತ್ರ ೪೬ ಸೆಕೆಂಡ್‌ಗಳೊಳಗೆ ೪೦೦ ಮೀ. ಓಡಿದ್ದಾರೆ. ಅದೂ ೧೯೮೮ರಲ್ಲಿ ಪರಮ್ ಜಿತ್ ಸಿಂಗ್ ಮತ್ತು ೨೦೦೪ರಲ್ಲಿ ಕೆ ಎಮ್ ಬಿನು. ಬಿನು ೪೫.೪೮ ಸೆಕೆಂಡ್‌ನಲ್ಲಿ ಗುರಿ ಮುಟ್ಟಿದ್ದು ರಾಷ್ಟ್ರೀಯ ದಾಖಲೆ. ಪುಣೆ ಏಷ್ಯನ್ ಅಥ್ಲೇಟಿಕ್‌ನಲ್ಲಿ ೪೦೦ ಮೀ. ಓಡಿದ ಭಾರತದ ಪಿ ಕೆ ಮಹಮ್ಮದ್ ಗುರಿ ಮುಟ್ಟಿದ್ದು ೪೬.೭೧ ಸೆಕೆಂಡ್‌ನಲ್ಲಿ!
ವಿಶ್ವದ ಅತ್ಯಂತ ವೇಗದ ಓಟಗಾರ ಉಸೇನ್ ಬೋಲ್ಟ್ ೧೦೦ ಮೀಟರ್ ದೂರವನ್ನು ೯.೫೮ ಸೆಕೆಂಡ್‌ಗಳಲ್ಲೇ ಕ್ರಮಿಸಿದ್ದು ದಾಖಲೆ. ಈ ವರ್ಷ ಭಾರತ ಕಂಡ ಅತ್ಯಂತ ವೇಗದ ಓಟಗಾರ (ಅನಿರುದ್ಧ ಕೆ ಗುಜ್ಜರ್) ೧೦೦ ಮೀಟರ್ ಓಡಲು ತೆಗೆದುಕೊಂಡ ಸಮಯ ೧೦.೬೧ ಸೆಕೆಂಡ್. ಇತಿಹಾಸವನ್ನು ಗಮನಿಸಿದರೆ ಲೆವಿ ಪಿಂಟೋರ ಹೆಸರು ನಮ್ಮ ನಿರ್ಲಕ್ಷ್ಯದ ನಡುವೆಯೂ ಫಳಫಳನೆ ಹೊಳೆಯುತ್ತದೆ. ಲೆವಿ ಪಿಂಟೋ ೧೯೫೧ರ ಏಷ್ಯನ್ ಗೆಮ್ಸ್‌ನಲ್ಲಿ ೧೦೦ ಮೀ. ದೂರವನ್ನು ಕೇವಲ ೧೦.೮ ಸೆಕೆಂಡ್‌ನಲ್ಲಿಯೇ ಕ್ರಮಿಸಿ ಚಿನ್ನಕ್ಕೆ ಕೊರಳೊಡ್ಡಿದ್ದರು. ಆಗ ಇದ್ದ ವಿಶ್ವದಾಖಲೆ ೧೦.೨ ಸೆಕೆಂಡ್‌ಗಳು. ಇದೇ ಕೂಟದಲ್ಲಿ ಪಿಂಟೋ ೨೦೦ ಮೀ. ದೂರವನ್ನು ೨೨ ಸೆಕೆಂಡ್‌ಗಳಲ್ಲಿ ಚಿನ್ನದ ಪದಕ ಜಯಿಸಿದ್ದರು. ಒಂದು ಆಶಾದಾಯಕ ಬೆಳವಣಿಗೆಯೆಂದರೆ ಈ ವರ್ಷ ಪ್ರತೀಕ್ ನಿನ್ನಾವೆ ೨೧.೬೫ ಸೆಕೆಂಡ್‌ನಲ್ಲಿ ಈ ಅಂತರವನ್ನು ಕ್ರಮಿಸಿದ್ದಾರೆ. ೨೦೦ ಮೀ.ನ ವೇಗದ ಓಟದ ದಾಖಲೆಯ ಅಧಿಪತಿ ಬೋಲ್ಟ್. ಅವರು ೧೯.೧೯ ಸೆಕೆಂಡ್‌ನಲ್ಲೇ ಈ ದೂರವನ್ನು ಪೂರೈಸಿದ್ದಾರೆ. ಒಟ್ಟಿನಲ್ಲಿ ೨೦ ಸೆಕೆಂಡ್‌ನಲ್ಲಿ ೨೦೦ ಮೀ. ಓಡಿಲ್ಲ ಎಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗಗನ ಕುಸುಮ.

೮೦೦ ಮೀ. ಓಟದಲ್ಲಿ ಭಾರತ ಕಂಡ ವೇಗದ ಓಟಗಾರ ಶ್ರೀರಾಮ್ ಸಿಂಗ್. ಅವರು ೧೯೭೬ರಲ್ಲಿ ನಡೆದ ಮಾಂಟ್ರಿಯಲ್ ಒಲಿಂಪಿಕ್ಸ್‌ನಲ್ಲಿ ನಿಗದಿತ ದೂರವನ್ನು ೧:೪೫:೭೭ ಸೆಕೆಂಡ್‌ನಲ್ಲಿ ಕ್ರಮಿಸಿ ಫೈನಲ್‌ನಲ್ಲಿ ೭ನೇ ಸ್ಥಾನ ಪಡೆದಿದ್ದರು. ಇದು ಆ ಕಾಲದ ಏಷ್ಯನ್ ದಾಖಲೆ. ದುರಂತವೆಂದರೆ ಭಾರತಕ್ಕೆ ಅದು ಇನ್ನೂ ರಾಷ್ಟ್ರೀಯ ದಾಖಲೆಯೇ! ಈ ವರ್ಷ ೮೦೦ ಮೀ ಓಡಲು ಸಾಜೀಶ್ ಜೋಸೆಫ್ ತೆಗೆದುಕೊಂಡ ಸಮಯ ೧:೪೯:೦೪.

೩೦೦೦ ಮೀನ ಕಥೆ ಕೂಡ ಭಿನ್ನವಾಗಿಲ್ಲ. ಇದರಲ್ಲಿನ ರಾಷ್ಟ್ರೀಯ ದಾಖಲೆ ಗೋಪಾಲ್ ಸೈನಿ ಹೆಸರಲ್ಲಿದೆ. ಅವರು ೧೯೮೧ರಲ್ಲಿ ೮:೩೦:೮೮ ನಿಮಿಷದಲ್ಲಿ ಗುರಿ ತಲುಪಿದ್ದರು. ಇದೆ ದೂರ ಕ್ರಮಿಸಲು ೮:೫೪:೪೨ ಸೆಕೆಂಡ್‌ಗಳನ್ನು ತೆಗೆದುಕೊಂಡ ಜೈವೀರ್ ಸಿಂಗ್ ಈ ವರ್ಷದ ವೇಗದ ಓಟಗಾರ!

ಮಹಿಳೆಯರ ಸಾಧನೆಯು ಕೂಡ ಹೆಚ್ಚು ಕಮ್ಮಿ ಇದೇ ಟ್ರ್ಯಾಕ್‌ನಲ್ಲಿ ಸಾಗಿದೆ. ೧೦೦ ಮೀ ಓಟದ ರಾಷ್ಟ್ರೀಯ ದಾಖಲೆ ನಿರ್ಮಾಣವಾಗಿದ್ದು ೨೦೦೦ದಲ್ಲಿ. ಅಂದು ರಚಿತಾ ಮಿಸ್ತ್ರಿ ೧೧:೩೮ ಸೆಕೆಂಡ್‌ನಲ್ಲಿ ಗುರಿ ಮುಟ್ಟಿದ್ದರು. ಈ ವರ್ಷ ೧೦೦ ಮೀ. ದೂರವನ್ನು ಅತ್ಯಂತ ವೇಗವಾಗಿ ಓಡಿದ ದಾಖಲೆ ಆಶಾ ರಾಯ್ ಅವರ ಹೆಸರಲ್ಲಿದ್ದು ೧೧:೮೬ ಸೆಕೆಂಡ್‌ನಲ್ಲಿ ಅವರು ಗುರಿ ಮುಟ್ಟಿದ್ದರು.

ಕನ್ನಡತಿ ಎಂ. ಆರ್. ಪೂವಮ್ಮ ೫೨.೮೫ ನಿಮಿಷದಲ್ಲಿ ೪೦೦ ಮೀ. ಓಡಿದ್ದೆ ಈ ವರ್ಷದ ನಮ್ಮ ದೊಡ್ಡ ಸಾಧನೆ. ಈ ವಿಭಾಗದಲ್ಲಿ ಮಂಜೀತ್ ಕೌರ್ ೨೦೦೪ರಲ್ಲಿ ೫೧.೦೫ ಸೆಕೆಂಡ್‌ನಲ್ಲಿ ಗುರಿ ಮುಟ್ಟಿ ರಾಷ್ಟ್ರೀಯ ದಾಖಲೆ ಸೃಷ್ಟಿಸಿದ್ದರು. ವಿಶ್ವದ ಪ್ರಮುಖ ಕ್ರೀಡಾಕೂಟದಲ್ಲಿ ಗೌರವಾರ್ಹವಾಗಿ ಓಟ ಮುಗಿಸಲು ೫೦ ನಿಮಿಷದೊಳಗೆ ನಿಗದಿಯ ಗುರಿ ಮುಟ್ಟಲೇ ಬೇಕು.
೪೦೦ ಮೀ. ಹರ್ಡಲ್ಸ್ ಎಂದರೆ ತಕ್ಷಣ ನೆನಪಾಗುವ ಹೆಸರು ಪಿ. ಟಿ. ಉಷಾ. ಅವರು ೧೯೮೪ರ ಲಾಸ್ ಎಂಜಲೀಸ್ ಒಲಿಂಪಿಕ್ಸ್‌ನಲ್ಲಿ ನಿರ್ಮಿಸಿದ್ದ ದಾಖಲೆಯನ್ನು ಮುರಿಯದೆ ಅವರಿಗೆ ಗೌರವ ಕೊಡಬೇಕು ಎಂದು ನಮ್ಮ ಓಟಗಾರ್ತಿಯರು ನಿರ್ಧರಿಸಿರುವ ಹಾಗಿದೆ! ಅವರು ತಮ್ಮ ಗುರಿಯನ್ನು ೫೫.೪೨ ಸೆಕೆಂಡ್‌ನಲ್ಲಿ ತಲುಪಿದ್ದರು. ಈ ದಾಖಲೆಗೆ ೩೦ವರ್ಷ. ಈ ದಾಖಲೆಯ ಬಳಿ ಸುಳಿಯುವ ಮತ್ತೊಬ್ಬ ಆಟಗಾರ್ತಿಯನ್ನು ದೇಶ ಕಾಣಲೇ ಇಲ್ಲ. ಈ ವರ್ಷ ಗುರಿ ತಲುಪಲು ಇಲವರಸಿ ಅವರು ತೆಗೆದುಕೊಂಡಿದ್ದ ಸಮಯ ಬರೋಬ್ಬರಿ ೧:೦೦:೭೦ ನಿಮಿಷಗಳು!

ಲಾಂಗ್ ಜಂಪ್‌ನಲ್ಲಿಯೂ ಕೂಡ ಅಂಜು ಬಾಬಿ ಜಾರ್ಜ್ ೨೦೦೪ರಲ್ಲಿ ನಿರ್ಮಿಸಿದ್ದ ೬:೮೩ ಮೀಟರ್ ದೂರ ಜಿಗಿತದ ಸಾಧನೆಯ ಸಮೀಪ ಸುಳಿಯುವ ಜಿಗಿತವು ಮತ್ತೆ ಮೂಡಿ ಬಂದಿಲ್ಲ. ಮಯೂಖಾ ಜಾನಿ ೬:೪೯ ಮೀಟರ್ ದೂರ ಹಾರಿದ್ದೆ ಈ ವರ್ಷದ ಮಟ್ಟಿಗೆ ನಮ್ಮ ದೊಡ್ಡ ಜಿಗಿತ!

ಟೆನ್ನಿಸ್, ಬ್ಯಾಡ್ಮಿಂಟನ್, ಶೂಟಿಂಗ್, ಬಾಕ್ಸಿಂಗ್, ಕುಸ್ತಿ, ಬಿಲ್ಗಾರಿಕೆ ಸ್ಪರ್ಧೆಗಳಲ್ಲಿ ಭಾರತ ಪ್ರವರ್ಧಮಾನ ಶಕ್ತಿಯಾಗಿ ಬೆಳೆಯುತ್ತಿದೆ. ಆದರೆ ಟ್ರ್ಯಾಕ್ ಅಂಡ್ ಫಿಲ್ಡ್‌ನಲ್ಲಿ ನಮ್ಮದು ಹಿಮ್ಮುಖ ಓಟ. ಒಮ್ಮೆ ಮುಗಿಲೆತ್ತರ ಹಾರಿದ್ದ ನಮ್ಮ ಕೀರ್ತಿ ಪತಾಕೆ; ಈಗ ನೆಲಕ್ಕುರಳಿ ಬಿದ್ದ ಅವಸ್ಥೆ.

ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಮಾತಿಗಿಂತಲು ನಮ್ಮ ಓಟಗಾರರೇ ಹಾಕಿಕೊಟ್ಟಿರುವ ದಾಖಲೆಗಳ ಮೈಲಿಗಲ್ಲನ್ನು ದಶಕಗಳು ಉರಳಿದರು ಮುರಿಯಲಾಗದೆ, ಆ ದಾಖಲೆಗಳನ್ನು ಉತ್ತಮ ಪಡಿಸಲಾಗದೆ, ಜಾಗತಿಗ ಕ್ರೀಡಾಕೂಟಗಳಿಗೆ ಆರ್ಹತೆ ಪಡೆಯಲಾಗದಿದ್ದರು ಗೆದ್ದ ಭಾವದಿಂದ ಬೀಗುವ ಸರದಿ ಮುಂದುವರಿಯುತ್ತಲೇ ಇದೆ. ರಾಷ್ಟ್ರೀಯ ದಾಖಲೆಗಳನ್ನು ಮುರಿಯಲಾಗದೆ ಅದು ಮೈಲಿಗಲ್ಲಾಗಿಯೇ ಉಳಿಯುತ್ತಿದೆ.

Tuesday, June 11, 2013

ಸರ್ವ ರೋಗಕ್ಕೂ ಮೋದಿಯೇ ಮದ್ದಲ್ಲ

ಅಡಾಲ್ಫ್ ಹಿಟ್ಲರ್, ಆಧುನಿಕ ಜಗತ್ತು ಕಂಡ ಮಹಾನ್ ನರ ಹಂತಕ; ಆದರೂ ೧೯೩೦ರ ದಶಕದಲ್ಲಿ ಜರ್ಮನಿಗೆ ಹೊಸ ಚೈತನ್ಯ ತುಂಬಿದ್ದ. ಮಾವೋ ತ್ಸೆ ತುಂಗ್, ಲಕ್ಷ ಗಟ್ಟಲೆ ಹೆಣಗಳ ರಾಶಿ ಹಾಕಿ ಅದರ ಸಮಾಧಿಯ ಮೇಲೆ ಚೀನಾದ ಪ್ರಗತಿ ಪಥ ರೂಪಿಸಿದ್ದ. ಜೋಸೆಫ್ ಸ್ಟಾಲೀನ್, ಕೈಗಾರಿಕೀಕರಣದ ದೊಂದಿ ಹಿಡಿದು ರಷ್ಯಾ ಸಾಮ್ಯಾಜ್ಯದ ಕತ್ತಲನ್ನು ಒದ್ದೋಡಿಸುವುದಾಗಿ ಲೆಕ್ಕವಿಲ್ಲದಷ್ಟು ಪ್ರಜೆಗಳನ್ನು ಕಾಣದ ಲೋಕಕ್ಕೆ ಕಳುಹಿಸಿದ್ದ.

ಪ್ರಗತಿ, ಅಭಿವೃದ್ಧಿ, ವಿಕಾಸ, ರಕ್ಷಣೆ ಮುಂತಾದ ಪದ ಮತ್ತು ಇದರ ತಪ್ಪು ವ್ಯಾಖ್ಯಾನ ತೆಗೆದಷ್ಟು  ಜೀವ, ಮಾಡಿದಷ್ಟು ಉತ್ಪಾತಗಳನ್ನು ಬಡತನ, ದಾರಿದ್ರ್ಯಗಳು ಕೂಡ ತೆಗೆದಿಲ್ಲ, ಮಾಡಿಲ್ಲ. ವಿಶ್ವ ವಿಖ್ಯಾತ ಚಿಂತಕ ಲಿಯೋ ಟಾಲ್‌ಸ್ಟಾಯ್‌ನ ಪ್ರಸಿದ್ಧ ಕೃತಿ ಅನ್ನಾ ಕಾರ್ನಿನಾದ ಮೊದಲ  ಸಾಲಿನಲ್ಲೆ, ಸುಖಿ ಕುಟುಂಬಗಳೆಲ್ಲ ಒಂದೇ ರೀತಿ, ಆದರೆ ಪ್ರತಿ ದುಃಖಿ ಕುಟುಂಬ ಕೂಡ ತನ್ನ ದುಃಖಕ್ಕೆ ತನ್ನದೆ ಆದ ಸಂಗತಿಗಳನ್ನು ಹೊಂದಿರುತ್ತದೆ ಎಂದು ಹೇಳಿದ ಮಾತು ಅಭಿವೃದ್ಧಿಯ ವ್ಯಾಖ್ಯಾನ ಮತ್ತು ಲೆಕ್ಕಾಚಾರದ ಸಮಯದಲ್ಲಿ ನೆನಪು ಮಾಡಿಕೊಳ್ಳಲೇ ಬೇಕು.

ರೋಗಗ್ರಸ್ತ ದೇಶಗಳಾಗಿದ್ದ ಜರ್ಮನಿ, ಚೀನಾ, ರಷ್ಯಾಗಳಿಗೆ ಹೊಸ ಕಸುವು, ಕನಸು ಮತ್ತು ಹೊಸ ದಾರಿ ತೋರಿದ್ದ ಈ ಮಹಾನ್ ಸರ್ವಾಧಿಕಾರಿಗಳು ಇದಕ್ಕಾಗಿ ಜೀವಗಳ ಲೆಕ್ಕದಲ್ಲಿ ಕಟ್ಟಿದ್ದ ಕಂದಾಯವನ್ನು ಈ ಜಗತ್ತು ಮರೆಯಲು ಸಾಧ್ಯವೇ? ಈ ರಾಷ್ಟ್ರಗಳು ಒಂದೆರಡು ದಶಕಗಳ ಕಾಲ ಅಭಿವೃದ್ಧಿಯ ಅಲೆಯ ಮೇಲೆ ತೇಲಾಡಿದರೂ ಕೂಡ ದೇಶದ ಸರ್ವ ಸಮಸ್ಯೆಗಳಿಗೆ ಮದ್ದು ಅರೆಯಲು ಅವರಿಂದ ಸಾಧ್ಯವಾಯಿತೇ? ಇತ್ತ ಕಮ್ಯುನಿಸಂ, ಸಮಾಜವಾದಿ, ಪ್ರಜಾ ಪ್ರಭುತ್ವ ಮುಂತಾದ ತತ್ವ ಸಿದ್ದಾಂತಗಳ ಮೂಸೆಯಲ್ಲಿ ಅರಳಿದ ವಿಶ್ವದ ಬಹುತೇಕ ದೇಶಗಳು ಸಮಸ್ಯೆ ಮುಕ್ತವಾಗಿವೆಯೇ? ವಿನ್‌ಸ್ಟನ್ ಚರ್ಚಿಲ್, ಅಬ್ರ್ರಾಹಂ ಲಿಂಕನ್, ಜಾನ್ ಎಫ್ ಕೆನಡಿ, ಜವಹಾರ್ ಲಾಲ್ ನೆಹರೂ, ನೆಲ್ಸಾನ್ ಮಂಡೇಲಾ, ಫಿಡೆಲ್ ಕ್ಯಾಸ್ಟ್ರೋ ಮುಂತಾದ ವಿಭಿನ್ನ ಹಿನ್ನೆಲೆಯ ಸಾಲು ಸಾಲು ನಾಯಕರನ್ನು ಕಂಡ ಜಗತ್ತು ಇಂದಿಗೆ ಸಮಸ್ಯೆ ಮುಕ್ತವೇ ಆಗಿರಬೇಕಿತ್ತು, ಆದರೆ ಆಗಿಲ್ಲ. ಇನ್ನೂ ಕೂಡ ದೇಶಗಳು ತಮ್ಮ ’ನಿರ್ಮಾಣ ಕಾಮಗಾರಿ’ಯನ್ನು ಮುಂದುವರಿಸುತ್ತಲೇ ಇವೆ.

ಜಗತ್ತಿನ ಎಲ್ಲ ಸಮಸ್ಯೆಗಳು ಪರಿಹಾರ ಕಂಡಿದ್ದು ’ರಾಮರಾಜ್ಯ’ದ ಕಾಲದಲ್ಲಿ ಮಾತ್ರವೇ ಇರಬೇಕು!

ಕಾಲದ ಹರಿವಿನ ಜೊತೆಗೆ ತೇಲು ತೇಲುತ್ತಲೇ ಬರುವುದು ಬಡತನ, ನಿರುದ್ಯೋಗ, ಅಪೌಷ್ಠಿಕತೆ, ಸಂಪತ್ತಿನ ಅಸಮಾನ ಹಂಚಿಕೆ ಮುಂತಾದ ಸಮಸ್ಯೆಗಳು. ಈ ಸಮಸ್ಯೆಗಳಿಂದ ಮುಕ್ತವಾಗುವುದು ಎಲ್ಲ ಕಾಲದಲ್ಲಿಯೂ ಯಾವುದೇ ರೀತಿಯ, ಯಾರದ್ದೆ ಸರ್ಕಾರವಿದ್ದರೂ  ಅದಕ್ಕೊಂದು ಸವಾಲು. ಅದೇ ರೀತಿ ಸರ್ಕಾರಗಳು ಕೂಡ ಇದನ್ನು ನಿರ್ಮೂಲನೆ ಮಾಡುವ ತಮ್ಮ ಬದ್ಧತೆಯ ಬಗ್ಗೆ ನಿರಂತರವಾಗಿ ಹೇಳಿಕೆ ನೀಡುತ್ತಲೇ ಇರುತ್ತವೆ. ಆದರೆ ಸಮಸ್ಯೆಗಳೇ ರಾಜಕೀಯದ ಒಲೆ ಉರಿಯಲು ಬೇಕಾದ ಕಟ್ಟಿಗೆ ಆಗಿರುವುದರಿಂದ ಈ ಕಟ್ಟಿಗೆ ಸಿಗದಂತೆ ಮಾಡುವ ಪ್ರಯತ್ನಕ್ಕೆ ಬಹುತೇಕ ಸರ್ಕಾರಗಳು ಗಂಭೀರವಾಗಿ ಯತ್ನಿಸುವುದೇ ಇಲ್ಲ. ಸರ್ಕಾರಗಳಿಗೆ ಅಡುಗೆಗೂ ಈ ಕಟ್ಟಿಗೆ ಬೇಕು, ಚಳಿ ಕಾಯಿಸಲು ಕೂಡ ಆಗಬೇಕು ಅನ್ನುವ ದುಸ್ತರ ಕಾಲಬಿಂದುವಿನಲ್ಲಿ ನಾವು ನಿಂತಿದ್ದೇವೆ.

ಇದೆಲ್ಲವನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ದಾಮೋದರ್ ದಾಸ್ ಮೋದಿಯ ಭಕ್ತರಿಗೆ, ಆರಾಧಕರಿಗೆ ಹೇಳುವವರು ಯಾರು? ಇಂದು ದೇಶದ ಬಗಲಲ್ಲಿ ನಿಗಿನಿಗಿ ಕೆಂಡವಾಗಿರುವ ನೂರಾರು ಸಮಸ್ಯೆಗಳ ಹೆಸರು ಹೇಳಿ, ತಕ್ಷಣವೇ ನರೇಂದ್ರ ಮೋದಿ ದೇಶದ ಪ್ರಧಾನಿ ಯಾಗುತ್ತಲೇ ಇದೆಲ್ಲ ಮಂಗಮಾಯ ಅನ್ನುತ್ತಾರೆ ಈ ಭಕ್ತ ಮಹಾಶಯರು!

ನರೇಂದ್ರ ಮೋದಿ ದೇಶದ ಪ್ರಧಾನಿಯಾಗಲಿ ಎಂದು ದೇಶದ ಪ್ರಜೆಗಳು ನಿರ್ಧಾರ ಕೈಗೊಂಡಿದ್ದೇ ಆದರೆ ಅದು ತಪ್ಪು ಎಂದು ಹೇಳಲಾಗದು. ಕಾಂಗ್ರೆಸ್‌ನ ನಿಂತ ನೀರಿನಂತ ನಾಯಕತ್ವ ಕಂಡ ದೇಶಕ್ಕೆ ಮೋದಿ ಒಂದಿಷ್ಟು ಚಲನ ಶೀಲ ನಾಯಕತ್ವ ನೀಡಬಹುದು ಎಂಬುದರ ಸೂಚನೆಗಳೇನೋ ಇವೆ.

ದೇಶದ ಮತದಾರರ ವಿಶ್ವಾಸವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಎಂಬ ತಳ ಒಡೆದ ಪಕ್ಷಕ್ಕೆ ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಮೋದಿಗೆ ಪೂರಕ. ಆದರೆ ಇದು ಯಾವ ರಾಜ್ಯದಲ್ಲಿ ಬಿಜೆಪಿಗೆ ಹೇಗೆ ಲಾಭ ತರಲಿದೆ ಎಂದು ಕೇಳಿದರೆ ಮೇಲೆ ಕೆಳಗೆ ನೋಡುತ್ತಾರೆ ಈ ಮೋದಿವಾದಿಗಳು.

ದೇಶದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಹುಟ್ಟಿಕೊಂಡಿದೆ. ಆದರೆ ಬಿಜೆಪಿಗೆ ಕನಿಷ್ಠ ಪಕ್ಷ ೨೦೦ ಲೋಕಸಭಾ ಸ್ಥಾನದಲ್ಲಿ ಗೆಲುವಿನ ದಡ ತಲುಪಬೇಕಾದರೆ ಕಾಂಗ್ರೆಸ್ ವಿರೋಧಿ ಸುನಾಮಿಯೇ ಹುಟ್ಟಿಕೊಳ್ಳಬೇಕು. ಆದರೆ ಬಿಜೆಪಿ ತನ್ನ ಒಡಲಲ್ಲೆ ಹುಟ್ಟಿರುವ ಸುಳಿಗಳಿಂದ ಬಸವಳಿದು ಕುಳಿತಿದೆ.

ಯಾವುದೆ ಚಿಂತನೆ, ವ್ಯಕ್ತಿಯ ಸಮಯ ಬಂದಾಗ ಕಟ್ಟಿ ಹಾಕಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಹಿರಿಯರು. ಆ ಹಿನ್ನೆಲೆಯಲ್ಲಿ ಇದೀಗ ಮೋದಿಯ ಕಾಲ ಬಂದಿದೆ ಎಂಬುವುದು ಮೋದಿ ಭಕ್ತರ ನಂಬಿಕೆ. ಮೋದಿಯ ಕಾಲ ಬಂದಿರುವುದು ನಿಜ, ಆದರೆ ಇದು ನವಮಾಸ ತುಂಬಿಯಾದ ಸಹಜ ಹೆರಿಗೆಯೋ ಅಲ್ಲ ಸಿಜೇರಿಯನ್ ಹೆರಿಗೆಯೋ ಎಂದು ಹೇಳಲು ಇನ್ನು ಕಾಲ ಪಕ್ವವಾಗಿಲ್ಲ. ಈ ವರ್ಷದ ಅಂಚಿನ ಅಸುಪಾಸಿನಲ್ಲಿ ನಡೆಯುವ ನಾಲ್ಕು ರಾಜ್ಯಗಳ ವಿಧಾನ ಸಭಾ ಚುನಾವಣೆಯಲ್ಲಿ ಈ ಬಗ್ಗೆಗಿನ ಸುಳಿವು ಸಿಗಬಹುದು.

ಮೋದಿ ಮತ್ತು ಅವರ ಭಕ್ತರು ಪ್ರತಿಪಾದಿಸುವ ’ಗುಜರಾತ್ ಮಾದರಿ’ಯ ಆಡಳಿತದ ಘಮಘಮ ದೇಶದಾದ್ಯಂತ ಹರಡಬೇಕು. ಗುಜರಾತ್‌ನಂತೆಯೇ ದೇಶದ ಎಲ್ಲ ರಾಜ್ಯಗಳು, ಪ್ರದೇಶಗಳು ಅಭಿವೃದ್ಧಿಯಾಗಬೇಕು. ಆದರೆ ಸಂಪಿಗೆ, ಮಲ್ಲಿಗೆಯ ಪರಿಮಳ ಕೂಡ ಕೆಲವರಿಗೆ ತಲೆ ನೋವು ತರುತ್ತದೆ ಎಂಬ ಅರಿವನ್ನು ಕಳೆದುಕೊಳ್ಳಲಾಗದು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾರೇ ಗೆದ್ದರು, ಯಾರೇ ಪ್ರಧಾನಿಯಾದರೂ ದೇಶವಂತೂ ಸಮಸ್ಯೆ ರಹಿತವಾಗಲು ಸಾಧ್ಯವೇ ಇಲ್ಲ. ಏಕೆಂದರೆ ಈಗ ಮುನ್ನೆಲೆಯಲ್ಲಿರುವ ನಾಯಕರಲ್ಲಿ ದೇಶದ ಬಗೆಗಿನ ತಳಸ್ಪರ್ಶಿ ಅರಿವು, ದೂರದೃಷ್ಟಿಯ ನಿಲುವು ನಾಪತ್ತೆಯಾಗಿದೆ. ಗೆದ್ದಲ ಗೂಡಗಿರುವ ಕಾಂಗ್ರೆಸ್, ಗೊಂದಲಗಳ ಬುಟ್ಟಿಯಾಗಿರುವ ಬಿಜೆಪಿ ಎರಡೂ ದೇಶಕ್ಕೆ ಸಮರ್ಥ ದಿಕ್ಕು ದೆಸೆ ನೀಡಬಹುದು ಎಂದು ಭಾವಿಸುವ ಸ್ಥಿತಿಯಲ್ಲಿ ಪ್ರಜ್ಞಾವಂತ ನಾಗರಿಕರಿಲ್ಲ.

ಅದ್ದರಿಂದ ಮೋದಿಯ ಪೂಜಾರಿಗಳು ಇನ್ನಾದರೂ ಕಲ್ಪನಾ ಲೋಕದಲ್ಲಿ ವಿಹರಿಸುವುದನ್ನು ಬಿಟ್ಟು ವಾಸ್ತವದ ಕಣ್ಣಲ್ಲಿ ಮೋದಿಯನ್ನು ನೋಡುವ ಪ್ರಯತ್ನ ಮಾಡಿದ್ದೇ ಆದರೆ ದೇಶದ ಆರೋಗ್ಯಕ್ಕೆ ಒಳ್ಳೆಯದು.

ನರೇಂದ್ರ ಮೋದಿ ದೇಶದ ಸರ್ವ ರೋಗಕ್ಕೂ ಮದ್ದಾಗಲಾರರು, ಆದರೆ ಕಾಂಗ್ರೆಸ್ ಎಂಬ ಕಾಯಿಲೆಗೆ ಮದ್ದಾಗಲು ಬಹುದೇನೋ!

ಹೇಳಲೇ ಬೇಕಾಗಿದ್ದು: 

ಮೇ ೮: ಕರ್ನಾಟಕ ವಿಧಾನ ಸಭಾ ಫಲಿತಾಂಶ ಪ್ರಕಟವಾಗಿ ಬಿಜೆಪಿ ಸೋತಿದ್ದ ದಿನ. ಮುಸ್ಸಂಜೆಯ ಹೊತ್ತು. ಆಶೋಕ ರಸ್ತೆಯಲ್ಲಿರುವ ಬಿಜೆಪಿಯ ಪ್ರಧಾನ ಕಚೇರಿಯ ಆವರಣ. ವೆಂಕಯ್ಯ ನಾಯ್ಡು ಕರೆದಿದ್ದ ಪತ್ರಿಕಾಗೋಷ್ಠಿ. ಗೋಷ್ಠಿ ಮುಗಿದ ಬಳಿಕ ರಾಜ್ಯದಲ್ಲಿ ಬಿಜೆಪಿಯ ಆಗುಹೋಗುಗಳ ಬಗ್ಗೆ ಹತ್ತಿರದ ಅಂದಾಜಿದ್ದ ’ಪ್ರಧಾನ’ ನಾಯಕರೊಬ್ಬರು ಅಂಗ್ಲ-ಹಿಂದಿ ಮಾಧ್ಯಮಗಳ ಪತ್ರಕರ್ತರ ಜೊತೆ ಹೊಡೆಯುತ್ತಿದ್ದ ಹರಟೆಯಲ್ಲಿ ಆ ನಾಯಕ ಹೊರಡಿಸಿದ್ದ ಅಣಿಮುತ್ತು.

"ನಾವು ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳಿಸಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುತ್ತಿದ್ದೆವು. ಆದರೆ ಯಡಿಯೂರಪ್ಪರನ್ನು ಉಳಿಸಿಕೊಳ್ಳಲು ಅವರ ಜೊತೆ ರಾಜಿಯಾಗಲು ಮುದುಕ (ಎಲ್. ಕೆ. ಅಡ್ವಾಣಿ) ಒಪ್ಪಿಕೊಳ್ಳಲಿಲ್ಲ"

ಅಡ್ವಾಣಿಯ ಬಗೆಗಿನ ಅಸಹನೆ ಪಕ್ಷದ ಒಂದು ವಲಯದಲ್ಲಿ ಹೆಪ್ಪುಗಟ್ಟಿರುವುದು ಆ ನಾಯಕನ  ಮಾತುಗಳಲ್ಲಿ ಜಿನುಗುತ್ತಿತ್ತು. ಇದು ಬಿಜೆಪಿಯ ಅನೇಕ ನಾಯಕರ ಮನಸ್ಸಿಗೆ ಹಿಡಿದಿದ್ದ ಕನ್ನಡಿ ಎಂದೇ ಬಿಜೆಪಿಯನ್ನು ಹತ್ತಿರದಿಂದ ಬಲ್ಲವರ ಅಭಿಪ್ರಾಯ. ಇಂತಹ ಒಡೆದ ಮನಸ್ಸುಗಳ, ನಿರ್ಲಜ್ಜ ನಡೆಯ ನೇತಾರರ ಹೊಸ ದಂಡು ಕಟ್ಟಿ ಬಿಜೆಪಿ ಭವಿಷ್ಯದಲ್ಲಿ ಬರ್ಕತ್ ಆಗಬಹುದೇ?  

Monday, January 7, 2013

ಅವಸರವಿಲ್ಲ ನನಗೆ


ಅವಸರವಿಲ್ಲ ನನಗೆ
ಮೆಲ್ಲನೆ, ಮೆಲ್ಲ ಮೆಲ್ಲನೆ
ಮೆಲ್ಲುವ ಸವಿ ಉಂಡೆಯಲಿ
ಮೆಲ್ಲನೆ, ನರ ನರಳುವ
ವಿಷವಿಕ್ಕಿ ಕೊಲ್ಲಬಹುದು ನೀನು

ಇರುಳು ಸರಿದು ಹಗಲಾಗಿ
ಹಗಲು, ಕರಿ ಚಾದರ ಹೊದ್ದು ಮಲಗುವ ಮುನ್ನ
ನೀನು-ನಾನು ಒಂದಾಗಬೇಕು, ನಾನು-ನೀನು ಬೇರೆಯಾಗಬೇಕು
ಎಂಬೆಲ್ಲ ಅವಸರವಿಲ್ಲ ನನಗೆ
ಮೆಲ್ಲನೆ... ಮೆಲ್ಲನೆ, ಕ್ಷಣ, ದಿನ, ವರುಷ
ಕಾಯಿಸಿ, ಕಾಯಿಸಿಯೇ ನನ್ನ ಇಲ್ಲವಾಗಿಸಬಹುದು

ಅವಸರವಿಲ್ಲ ನನಗೆ
ಬಿಟ್ಟು ಹೋದ ನಿನ್ನ
ಬಿಡದ ನೆನಪುಗಳ ನನ್ನ
ಆ ಕ್ಷಣವೇ
ಸತ್ತೇ ಬಿಡೋಣ ಅನ್ನಲು
ಸರಿಯಬಹುದು ನೀನು, ಮೆಲ್ಲ...ಮೆಲ್ಲನೆ
ನಿಧಾನವಾಗಿ... ದೂರ... ದೂರ
ನಭದಲಿ ತಾರೆ ಸರಿದಂತೆ, ಮಣ್ಣೊಳಗೆ ಹೆಣ
ಲೀನವಾದಂತೆ

ಅವಸರವಿಲ್ಲ ನನಗೆ
ಒಮ್ಮೆಲೆ ಸತ್ತು ಹೋಗಲು...
ಸಿದ್ದ ನಾ
ಸಾಯಲು, ಬೇಯಲು
ಕಾದು, ಕಾದು, ಮೆಲ್ಲ ಮೆಲ್ಲನೆ
ದಿನ ದಿನ, ಕ್ಷಣ ಕ್ಷಣ ಸಾಯಲು

ಕೊಲಬಹುದು ನೀನು
ನನ್ನ ಕೊಂದೆ ಬಿಡಬಹುದು ನೀನು
ಈಟಿ, ಭರ್ಜಿ, ಚಾಕು, ಚೂರಿ ಹಾಕದೆ
ಗುಂಡು, ಪಾಶನ ಇಕ್ಕದೆ
ಬಲು ಸುಲಭ ನಿನಗೆ,
ಹುಡುಕೊಂದು ನೆವ, ಪ್ರೀತಿ ತುಂಡರಿಸಲು
ನಿಧಾನ ವಿಷವೇರಿ
ಅವಸರವವಿಲ್ಲದೆ ನನ್ನ ಸಾಯಿಸಲು...!