Thursday, January 27, 2011

ಚಿನ್ನದ ಹುಡುಗಿ ಅಶ್ವಿನಿ ಅಕ್ಕುಂಜಿ


ಕ್ರೀಡೆಯ ಕಡೆಗೆ ಮನ ಹೊರಳಿದ್ದು ಹೇಗೆ?
ಕ್ರೀಡೆಯತ್ತ ನನ್ನ ಮನ ಹೊರಳಲು ಈ ಹಿಂದಿನ ಅಥ್ಲೀಟ್‌ಗಳೇ ಕಾರಣ. ನಾನು ಚಿಕ್ಕಂದಿನಿಂದಲೇ ಪಿ.ಟಿ. ಉಷಾ, ರೋಸಾ ಕುಟ್ಟಿ ಮೊದಲಾದ ಅಥ್ಲೀಟ್‌ಗಳ ಸಾಧನೆಯನ್ನು ಗಮನಿಸುತ್ತಿದ್ದೆ. ಅವರೇ ನನಗೆ ಸ್ಫೂರ್ತಿ. ಅವರ ಸಾಧನೆ ನನ್ನನ್ನು ಅಥ್ಲೆಟಿಕ್ಸ್ ರಂಗದತ್ತ ಸೆಳೆಯಿತು.

ಓಟವನ್ನೇ ಆರಿಸಿಕೊಳ್ಳಲು ಕಾರಣ? ೪೦೦ ಮೀಟರ್ ಓಟ ನಿಮ್ಮದೇ ಆಯ್ಕೆಯೇ?
ಹಳ್ಳಿಯಲ್ಲಿ ಅದರಲ್ಲೂ ಶಾಲೆಗಳಲ್ಲಿ ಓಟದ ಸ್ಪರ್ಧೆಗಳನ್ನು ಹೆಚ್ಚು ಆಯೋಜಿಸುತ್ತಾರೆ. ಅದೇ ರೀತಿ ಹಳ್ಳಿ ಕಡೆ ಒಡಾಟ ಹೆಚ್ಚಿರುತ್ತಿತ್ತು. ನಾನೂ ಚೆನ್ನಾಗಿ ಓಡುತ್ತಿದ್ದೆ. ನನ್ನ ಮಟ್ಟಿಗೆ ನನ್ನ ಓಟದ ಜೀವನಕ್ಕೆ ನನ್ನ ಹಳ್ಳಿ ಬದುಕು ಒಳ್ಳೆ ಅಡಿಪಾಯ ಹಾಕಿದೆ.
ನಾನು ೨೦೦೧ರಲ್ಲಿ ೪೦೦ ಮೀ. ಓಡಲು ಶುರುಮಾಡಿದೆ. ನನಗೆ ೪೦೦ ಮೀ. ಓಡಲು ಆಸಕ್ತಿಯೇನೋ ಇತ್ತು. ಆದರೆ ನನಗಿಂತ ನನ್ನ ತರಬೇತುದಾರರು ನಾನು ೪೦೦ ಮೀ. ಓಡಬೇಕು ಎಂಬ ಆಸೆ ಹೊಂದಿದ್ದರು. ಅವರಿಗೆ ನನ್ನ ಮೇಲೆ ವಿಶ್ವಾಸವಿತ್ತು. ೨೦೦೪ರಲ್ಲಿ ನಾನು ೮೦೦ ಮೀ. ಓಡಲು ಶುರು ಮಾಡಿದೆ. ಆದರೆ ಅದರಲ್ಲಿ ಅಷ್ಟೊಂದು ಯಶಸ್ವಿಯಾಗಲಿಲ್ಲ. ನಂತರ ಪುನಃ ೪೦೦ ಮಿ. ಓಟದತ್ತ ಗಮನ ಕೇಂದ್ರೀಕರಿಸಿದೆ. ಇದು ನನಗೆ ಹರ್ಡಲ್ಸ್ ಮತ್ತು ರಿಲೇಗೂ ನೆರವಾಯಿತು.

ಕುಟುಂಬ ಹಾಗೂ ಸಮಾಜದಿಂದ ಪ್ರೋತ್ಸಾಹ ಸಿಕ್ಕಿತ್ತೇ?
ಮನೆಯವರು ತುಂಬ ಪ್ರೋತ್ಸಾಹ ನೀಡಿದ್ದಾರೆ. ತಂದೆಗೂ ನಾನು ಕ್ರೀಡಾಪಟು ಆಗಬೇಕೆಂದು ಆಸೆಯಿತ್ತು. ಅವರು ತುಂಬಾ ಪ್ರೋತ್ಸಾಹ ನೀಡಿದರು. ಅವರೇ ನನ್ನ ಈ ಸಾಧನೆಯ ಬೆನ್ನೆಲುಬು. ಹುಡುಗಿಯಾಗಿದ್ದರೂ ನನ್ನ ಮೇಲೆ ಅವರಿಗೆ ವಿಶ್ವಾಸವಿದೆ. ನನಗೆ ಸ್ವಾತಂತ್ರ್ಯ ನೀಡಿದ್ದಾರೆ. ನನ್ನ ಈ ಸಾಧನೆಗೆ ಅವರೇ ಮೂಲ ಕಾರಣ. ಇನ್ನು ಸಂಘಸಂಸ್ಥೆಗಳಲ್ಲಿ ಟಾಟಾ ಸಂಸ್ಥೆ, ಸಾಯ್, ವಿದ್ಯಾನಗರ ಕ್ರೀಡಾ ಶಾಲೆ ನೀಡಿದ ಪ್ರೋತ್ಸಾಹದಿಂದ ನನಗೆ ಇಷ್ಟು ಸಾಧನೆ ಮಾಡಲು ಸಾಧ್ಯವಾಯಿತು.

ಕ್ರಿಕೆಟ್‌ನ ಜನಪ್ರಿಯತೆ ದೇಶದಲ್ಲಿ ಉಳಿದ ಕ್ರೀಡೆಗಳ ಪಾಲಿಗೆ ಕಂಟಕವಾಗಿದೆ ಎಂದು ಹೇಳುತ್ತಾರೆ. ಇದು ನಿಜವೇ?
ಹೌದು, ಏಕೆಂದರೆ ನಮ್ಮಲ್ಲಿ ಕ್ರೀಡಾ ಸಂಸ್ಕೃತಿ ಇಲ್ಲ. ಅದು ಸಾಂಘಿಕ ಆಟವಾಗಿರುವುದರಿಂದ ಕ್ರಿಕೆಟ್‌ನ್ನು ಎಲ್ಲರೂ ಮೆಚ್ಚುತ್ತಾರೆ. ಮಕ್ಕಳೂ ಕೂಡ ಕ್ರಿಕೆಟ್ ಆಡಲು ಹೆಚ್ಚಿನ ಆದ್ಯತೆ ನೀಡುತ್ತಾರೆಯೇ ಹೊರತು ಹಾಕಿ, ಅಥ್ಲೆಟಿಕ್ಸ್ ಮುಂತಾದ ಕ್ರೀಡೆಗಳತ್ತ ಗಮನ ಕೊಡುವುದು ಕಡಿಮೆ. ಕ್ರಿಕೆಟ್ ಒಂದು ಮನೋರಂಜನಾ ಕ್ರೀಡೆ. ಅಲ್ಲಿ ಹೆಚ್ಚು ದೇಹಾಯಾಸ ಆಗುವ ಸಂಭವ ಕಡಿಮೆ. ಒಬ್ಬ ವ್ಯಕ್ತಿ ೪ ಸುತ್ತು ಓಡಿದ ನಂತರ ನನ್ನಿಂದ ಓಡಲು ಆಗುವುದಿಲ್ಲ ಎನ್ನುತ್ತಾನೆ. ಆದರೆ ಕ್ರಿಕೆಟ್‌ನಲ್ಲಿ ಬಾಲ್ ಬಂದಾಗ ಹಿಡಿಯಲು ಅಥವಾ ಬಾಲೆಸೆಯಲು ಆಥವಾ ಬ್ಯಾಟ್‌ನಿಂದ ಬಾಲ್‌ಗೆ ಹೊಡೆದಾಗ ಮಾತ್ರ ಓಟದ ಆವಶ್ಯಕತೆ ಇರುತ್ತದೆ. ಆ ಕಾರಣದಿಂದ ಜನರಿಗೂ ಇದು ಆರಾಮದಾಯಕ ಕ್ರೀಡೆಯಾಗಿದೆ. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್‌ನಲ್ಲಿ ಹೆಚ್ಚು ತಂಡಗಳಿಲ್ಲ. ಅದ್ದರಿಂದ ಅಲ್ಲಿ ಸ್ಪರ್ಧೆಯ ಮಟ್ಟ ಕಡಿಮೆ. ಭಾರತದ ಪ್ರದರ್ಶನ ಚೆನ್ನಾಗಿರುವುದರಿಂದ ಜನರು ಆ ಕಡೆ ವಾಲಿದ್ದಾರೆ.

ಕ್ರಿಕೆಟ್ ಹಿಂದೆ ಮಾರುಕಟ್ಟೆ ಲೋಕವೇ ಇದೆ. ಆದರೆ ಉಳಿದ ಕ್ರೀಡೆಗಳು ಮಾರುಕಟ್ಟೆಯನ್ನು ಇಷ್ಟೊಂದು ಸ್ವರೂಪದಲ್ಲಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಕಾರಣ?
ಕ್ರಿಕೆಟ್‌ಗೆ ಜನಪ್ರಿಯತೆ ಇದೆ. ಕ್ರಿಕೆಟ್‌ನ್ನು ಪ್ರೇಕ್ಷಕರು ಕ್ರೀಡಾಂಗಣ ಮತ್ತು ಮನೆಗಳಲ್ಲಿ ಟಿವಿ ಮೂಲಕ ನೋಡುತ್ತಾರೆ. ಆದರೆ ಬೇರೆ ಕ್ರೀಡೆಗಳಿಗೆ ಜನರಿಂದ ಇಂತಹ ಸ್ಪಂದನೆ ಸಿಗುತ್ತಿಲ್ಲ. ಅದ್ದರಿಂದ ಮಾರುಕಟ್ಟೆ ಲೋಕದ ಮಂದಿ ತಮಗೆ ಎಲ್ಲಿ ವ್ಯಾಪಾರ ಕಾಣುತ್ತದೆಯೋ ಅಲ್ಲಿಗೆ ಹೋಗುತ್ತಾರೆ. ಇದರಿಂದ ಉಳಿದ ಕ್ರೀಡೆಗಳ ಮೇಲೆ ದುಷ್ಪರಿಣಾಮವಾಗುತ್ತಿರುವುದು ನಿಜ.

ಕ್ರೀಡೆಯ ಅಭಿವೃದ್ಧಿ ಜಾಹೀರಾತು ಕಂಪನಿಗಳನ್ನು ಆಧರಿಸಿದೆ. ಶುದ್ಧ ಕ್ರೀಡೆಯಾಗಿ ಯಾವ ಆಟವೂ ಉಳಿದಿಲ್ಲ. ಕ್ರೀಡೆಗಳನ್ನು ಈ ಜಾಹೀರಾತು ಕಂಪನಿಗಳಿಂದ ಹೊರ ತರುವ ಬಗೆ ಹೇಗೆ?
ಜನರಲ್ಲಿ ಕ್ರಿಕೆಟ್ ಒಂದೇ ಕ್ರೀಡೆ ಎಂಬ ಮನೋಭಾವವಿದೆ. ಬೇರೆ ಕ್ರೀಡೆಗಳಲ್ಲಿ ಪದಕ ಗೆದ್ದರೂ ಅವರಿಗೆ ಗೊತ್ತಾಗುವುದಿಲ್ಲ. ಇದು ಎಲ್ಲೂ ಪ್ರಮುಖ ಅಂಶವಾಗಿ ಪರಿಗಣನೆಯಾಗುವುದಿಲ್ಲ. ಮೊನ್ನೆ ನಡೆದ ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್‌ಗಿಂತಲೂ ಹಿಂದೆ ಅನೇಕರು ಪದಕ ಪಡೆದಿದ್ದಾರೆ. ಆದರೆ ಅವರ ಬಗ್ಗೆ ಯಾರಿಗೂ ತಿಳಿದಿಲ್ಲ. ಈಗ ಕಾಮನ್‌ವೆಲ್ತ್ ಗೇಮ್ಸ್‌ನ ಬಳಿಕ ಮಾಧ್ಯಮ ಈ ಬಗ್ಗೆ ಹೆಚ್ಚು ಗಮನ ಹರಿಸಿದೆ. ಅದ್ದರಿಂದ ಜನರಿಗೂ ಈ ಬಗ್ಗೆ ಗೊತ್ತಾಗಿದೆ. ಹಿಂದೆಯೂ ಭಾರತ ಅನೇಕ ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆದರೆ ಈ ಸಾಧನೆ ಜನರನ್ನು ತಲುಪಿಲ್ಲ. ಏಕೆಂದರೆ ಇದಕ್ಕೆ ಪ್ರಚಾರ ಸಿಕ್ಕಿಲ್ಲ. ಅದ್ದರಿಂದ ಇಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಬೇಕಿದೆ. ಯಾವುದೇ ಕ್ರೀಡೆಯ ಉತ್ಕರ್ಷತೆಗೆ ಮಾಧ್ಯಮಗಳ ಪಾತ್ರ ಅತಿ ಮುಖ್ಯ. ಜನರಿಗೆ ಗೊತ್ತಾಗುವುದೇ ಮಾಧ್ಯಮಗಳಿಂದ. ಅದ್ದರಿಂದ ಜಾಹೀರಾತು ಕಂಪನಿಗಳ ಕಪಿ ಮುಷ್ಠಿಯಿಂದ ಕ್ರೀಡೆ ಹೊರ ಬರಬೇಕಾದರೆ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಬೇಕಿದೆ.

ಕೆಲವರು ಕ್ರೀಡೆಯನ್ನು ಸರ್ಕಾರಿ ಹುದ್ದೆ ಅಥವಾ ಕ್ರೀಡಾಖೋಟದಲ್ಲಿ ಇನ್ನಿತರ ಸವಲತ್ತುಗಳನ್ನು ಪಡೆಯಲು ಮಾತ್ರ ಬಳಸಿಕೊಳ್ಳುತ್ತಾರೆ ಎಂಬ ಆಪಾದನೆಯಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ?
ಇದು ನಿಜಕ್ಕೂ ತಪ್ಪು. ಕ್ರೀಡಾಖೋಟದ ಸವಲತ್ತುಗಳನ್ನು ಕ್ರೀಡೆಯಲ್ಲಿ ಮುಂದುವರಿಯುವ ಆಸಕ್ತಿ ಇರುವವರಿಗೆ ಮಾತ್ರ ನೀಡಬೇಕು. ಇಲ್ಲದೇ ಹೋದರೆ ದೇಶ ಒಳ್ಳೆ ಅಥ್ಲೀಟ್‌ನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ರೀತಿ ಆಗಬಾರದು. ಕ್ರೀಡೆಯಲ್ಲಿ ಮುಂದುವರಿಯುತ್ತೇವೆ ಎನ್ನುವವರಿಗೆ ಮಾತ್ರ ಸೀಟ್ ನೀಡಬೇಕು. ಇಲ್ಲ, ನಾನು ಅರ್ಧದಲ್ಲಿ ಬಿಡುತ್ತೇನೆ ಎನ್ನುವವರಿಗೆ ಸೀಟ್ ಕೊಡಬಾರದು. ಏಕೆಂದರೆ ಇದರಿಂದ ಮತ್ತೊಬ್ಬ ಅಥ್ಲೀಟ್‌ನ ದಾರಿ ಬಂದ್ ಆಗುತ್ತದೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಅಂಕ ಪಡೆಯುವ ಒತ್ತಡ ಕೂಡ ಕ್ರೀಡಾಪಟುಗಳು ಕ್ರೀಡೆಯನ್ನು ತ್ಯಜಿಸಲು ಕಾರಣವಾಗುತ್ತದೆ. ಅದ್ದರಿಂದ ಶಿಕ್ಷಣ ಸಂಸ್ಥೆಗಳು ಕೂಡ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕು.

ಕ್ರೀಡಾ ಪ್ರಾಧಿಕಾರಗಳ ಜವಾಬ್ದಾರಿಯನ್ನು ಕ್ರೀಡಾಪಟುಗಳೇ ಹೊರಬೇಕು ಎಂಬ ಅಭಿಪ್ರಾಯ ಇದೆ. ಈ ಬಗ್ಗೆ ನೀವು ಏನು ಹೇಳುತ್ತೀರಿ?
ಇಲ್ಲ, ಕ್ರೀಡಾ ಪ್ರಾಧಿಕಾರ ಅಥವಾ ಕ್ರೀಡಾ ಸಂಸ್ಥೆಗಳ ಜವಾಬ್ದಾರಿ ಹೊರುವವರಿಗೆ ಕ್ರೀಡೆಯ ಬಗ್ಗೆ ಒಳ್ಳೆ ಜ್ಞಾನವಿರಬೇಕು, ಆತ ಬರೀ ಕ್ರೀಡಾಪಟು ಆಗಿದ್ದರೆ ಸಾಲದು. ಕೆಲವು ಕಡೆ ಕ್ರೀಡಾಪಟುಗಳೇ ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ಸೋಲುತ್ತಿದ್ದಾರೆ. ಇನ್ನೂ ಕೆಲ ಸಂದರ್ಭಗಳಲ್ಲಿ ಆ ಕ್ರೀಡಾಪಟುಗಳಲ್ಲಿ ತಾವು ಮಾಡಿದ ಸಾಧನೆಯನ್ನು ಬೇರೆ ಯಾರೂ ಮಾಡಬಾರದು ಎಂಬ ಮನೋಭಾವ ಇರುತ್ತದೆ. ಅಂತಹ ಸಂದರ್ಭದಲ್ಲಿ ಅವರ ಅಸೂಯೆಗೆ ಉದಯೋನ್ಮುಖ ಕ್ರೀಡಾಪಟುಗಳು ಬಲಿಯಾಗಬೇಕಾಗುತ್ತದೆ. ಅದ್ದರಿಂದ ಕ್ರೀಡಾ ಪ್ರಾಧಿಕಾರಗಳ ಜವಾಬ್ದಾರಿಯನ್ನು ಯಾರು ಹೊತ್ತರೂ ಪರವಾಗಿಲ್ಲ. ಅವರಲ್ಲಿ ನಾಯಕತ್ವ ಗುಣ ಮತ್ತು ಜಗತ್ತಿನ ಕ್ರೀಡಾರಂಗದಲ್ಲಿನ ಅಗುಹೋಗುಗಳ ಬಗ್ಗೆ ಅರಿವು ಇರಬೇಕು.

ಭಾರತೀಯ ಅಥ್ಲೆಟಿಕ್ಸ್ ರಂಗದ ಪ್ರಸಕ್ತ ಸ್ಥಿತಿ ಹೇಗಿದೆ?
ಭಾರತದಲ್ಲಿ ಒಂದಷ್ಟು ಸಾಧನೆ ಮಾಡಿದ ಮೇಲೆ ಸಾಕಷ್ಟು ಸವಲತ್ತುಗಳು ಸಿಗುತ್ತದೆ. ಆದರೆ ಬೇರು ಮಟ್ಟದಲ್ಲಿ ಇಲ್ಲ. ದೇಶದಲ್ಲಿ ಕ್ರೀಡಾಕೇಂದ್ರಗಳ ಕೊರತೆ ಇದೆ. ದೈಹಿಕ ಶಿಕ್ಷಕರಿಗೆ ಕ್ರೀಡಾ ಚಟುವಟಿಕೆಗಳ ಬಗ್ಗೆ ತರಬೇತಿ, ಮಾಹಿತಿ ನೀಡಬೇಕು.

ಇಂದು ಶಾಲೆಗಳಲ್ಲಿ ದೈಹಿಕ ಶಿಕ್ಷಣದ ಅವಧಿಯಲ್ಲಿ ಶಿಕ್ಷಕರು ವಿಶೇಷ ತರಗತಿಗಳನ್ನು ನಡೆಸುತ್ತಾರೆ ಎಂದು ಮಕ್ಕಳು ಹೇಳುತ್ತಿರುತ್ತಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ?
ಇದು ತಪ್ಪು. ಶಾರೀರಿಕ ಫಿಟ್‌ನೆಸ್‌ಗೆ ನಾವು ಮಹತ್ವ ಕೊಡಲೇಬೇಕು. ಮಕ್ಕಳು ಶಾಲೆಗಳಲ್ಲಿ ೫- ೬ ಗಂಟೆ ಪಾಠ ಕೇಳುತ್ತಾರೆ. ಅಂತಹದರಲ್ಲಿ ಒಂದು ಗಂಟೆ ಆಡಿದರೆ ಏನೂ ಆಗುವುದಿಲ್ಲ. ಶಾರೀರಿಕವಾಗಿ ಚೆನ್ನಾಗಿದ್ದರೆ ನಾವು ಚೆನ್ನಾಗಿರುತ್ತೇವೆ.

ಗ್ರಾಮೀಣ ಮಟ್ಟದಲ್ಲಿ ಶಾಲಾ-ಕಾಲೇಜುಗಳಲ್ಲಿ ಇರುವ ಸವಲತ್ತುಗಳು ಎಲ್ಲಿಗೂ ಸಾಲದು. ಇದರ ಅಭಿವೃದ್ಧಿಗೆ ಏನು ಮಾಡಬೇಕಿದೆ?
ಎಲ್ಲ ಕ್ಷೇತ್ರಕ್ಕೂ ಪ್ರಾಮುಖ್ಯತೆ ಕೊಟ್ಟರೆ ಮಾತ್ರ ಒಂದು ಸಮಾಜ ಪ್ರಗತಿ ಹೊಂದಬಲ್ಲದು. ಗ್ರಾಮೀಣ ಪ್ರದೇಶ ಬಿಡಿ ನಗರ ಪ್ರದೇಶದಲ್ಲೂ ಕ್ರೀಡಾಪಟುಗಳಿಗೆ ಸೌಲಭ್ಯದ ಕೊರತೆ ಇದೆ. ಮಕ್ಕಳಿಗೆ ಆಟ ಆಡಲು ಜಾಗವೇ ಸಿಗುತ್ತಿಲ್ಲ. ಇಂದಿನ ಮಕ್ಕಳಿಗೆ ಆಟಗಳೇ ಗೊತ್ತಿಲ್ಲ. ಶಾಲೆಯಲ್ಲಿ ಆಡುತ್ತಾರೆ, ಹೈಸ್ಕೂಲಿನಲ್ಲಿ ಸ್ವಲ್ಪ ಆಡುತ್ತಾರೆ, ಅನಂತರ ಬಿಟ್ಟೇ ಬಿಡುತ್ತಾರೆ. ಮತ್ತೆ ಮನೆಯಲ್ಲೂ ಕೂಡ, ಆಟ ಆಡುವುದರಿಂದ ಏನೂ ಪ್ರಯೋಜನ ಎಂದು ಕೇಳಲು ಶುರು ಮಾಡುತ್ತಾರೆ. ಮಕ್ಕಲೂ ಸೋಮಾರಿಗಳಾಗಿದ್ದಾರೆ.

ನಿಮ್ಮ ಪ್ರಕಾರ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳ ಮುಂದಿರುವ ಸವಾಲುಗಳೇನು? ಇದರಿಂದ ಅವರು ಹೇಗೆ ಹೊರಬರಬಹುದು?
ನಮ್ಮಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ನನಗೆ ನ್ಯಾಷನಲ್ ಕ್ಯಾಂಪ್‌ನಲ್ಲಿರುವುದರಿಂದ ವೈದ್ಯರು, ಪಿಸಿಯೋ, ತರಬೇತುದಾರ ಲಭ್ಯರಿದ್ದಾರೆ. ಆದರೆ ಬೇರೆ ಕೇಂದ್ರಗಳಲ್ಲಿ ಈ ಕೊರತೆ ಇದೆ. ಒಬ್ಬ ಕ್ರೀಡಾಪಟು ಸಾಧನೆ ಮಾಡಬೇಕಾದರೆ ಇದೆಲ್ಲ ಬೇಕೇ ಬೇಕು. ಅದೇ ರೀತಿ ಕ್ರೀಡಾ ಕೇಂದ್ರಗಳ ಕೊರತೆ ಇದೆ. ನಮ್ಮಲ್ಲಿರುವ ತರಬೇತುದಾರರಿಗೆ ಇನ್ನೂ ಉನ್ನತ ಶಿಕ್ಷಣ ನೀಡಬೇಕು. ವಿದೇಶಿ ತರಬೇತುದಾರನ್ನು ಕರೆಸಬೇಕು. ಇನ್ನು ಮಕ್ಕಳಿಗೂ ಆಸಕ್ತಿ ಇರಬೇಕು. ಅವರು ಕಾಲ ಹರಣ ಮಾಡುವ ಮನೋಭಾವದವರಾಗಿದ್ದರೆ ಏನು ಪ್ರಯೋಜನ? ಸುಮ್ಮನೆ ಸ್ಟೇಡಿಯಂ, ಟ್ರ್ಯಾಕ್ ಮಾಡಿ ಅಲ್ಲಿ ವಾಕಿಂಗ್ ಮಾಡಿದರೆ ಪ್ರಯೋಜನ ಇಲ್ಲ. ಎಲ್ಲಿ ಅಗತ್ಯವಿದೆ ಅಲ್ಲಿ ಸ್ಟೇಡಿಯಂ ಮಾಡಿ ಅಂತರರಾಷ್ಟ್ರೀಯ ಮಟ್ಟದ ಸೌಲಭ್ಯ ಮತ್ತು ಕೋಚ್ ಇರುವಂತೆ ನೋಡಿಕೊಳ್ಳಬೇಕು. ನಾವಿಲ್ಲಿ ಚೀನಾ ಮಾದರಿಯನ್ನು ಅನುಸರಿಸಬೇಕು. ಎಲ್ಲವನ್ನು ಕ್ರಮಬದ್ಧವಾಗಿ ಮಾಡಬೇಕು. ಕ್ರೀಡೆಯಿಂದಲೇ ಬದುಕುವ ಸ್ಥಿತಿ ನಿರ್ಮಾಣವಾಗಬೇಕು. ಗ್ರಾಮೀಣ ಮಟ್ಟದಲ್ಲಿ ಮೈದಾನ, ತರಬೇತುದಾರ ಸಿಗಬೇಕು. ತರಬೇತುದಾರ ಸಿಗುವುದೇ ದೊಡ್ಡ ಸವಾಲು. ಹಾಗೆಯೇ ದೇಶ ಸುತ್ತಬೇಕು. ಅಂದರೆ ದೇಶದ ಬೇರೆ ಬೇರೆ ಕಡೆ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಆಗ ನಮ್ಮ ಕ್ರೀಡಾ ಕ್ಷೇತ್ರದಲ್ಲಿನ ಬೆಳವಣಿಗೆಗಳು ಗೊತ್ತಾಗುತ್ತದೆ ಇದು ಅತಿ ಮುಖ್ಯ.

ನಿಮ್ಮ ಪ್ರಕಾರ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರ ಯಾವ ರೀತಿಯ ಯೋಜನೆಗಳನ್ನು ಹಾಕಿಕೊಳ್ಳಬೇಕು?
ಕ್ರೀಡೆಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳು ಕ್ರಮಬದ್ಧವಾಗಿರುವಂತೆ ನೋಡಿಕೊಳ್ಳಬೇಕು. ಒಂದು ಕ್ರೀಡಾ ಕೇಂದ್ರ ಸ್ಥಾಪನೆ ಮಾಡುವಾಗ ಅಲ್ಲಿ ಶಾಲೆ, ಪ್ರೌಢ ಶಾಲೆ ಮತ್ತು ಕಾಲೇಜು ಮಟ್ಟದ ತನಕದ ಕ್ರೀಡಾ ಚಟುವಟಿಕೆಗಳು ಒಂದೇ ಸೂರಿನಡಿ ಸಿಗುವಂತೆ ಮಾಡಬೇಕು. ಅಲ್ಲಿ ಫಿಸಿಯೋ, ವೈದ್ಯರು ಮತ್ತು ತರಬೇತುದಾರರಿರಬೇಕು. ಕ್ರೀಡಾಪಟುಗಳಲ್ಲಿ ಆಹಾರ ಪದ್ದತಿ ಬಗ್ಗೆ ಅರಿವು ಮೂಡಿಸುವ ವ್ಯವಸ್ಥೆ ಇರಬೇಕು. ಈ ದುಬಾರಿ ಯುಗದಲ್ಲಿ ಕ್ರೀಡಾಪಟುಗಳಿಗೆ ಕುಟುಂಬ ನೋಡಿಕೊಳ್ಳುವ ಜವಾಬ್ದಾರಿಯೂ ಇದೆ ಇದು ಕೆಲವೊಮ್ಮೆ ನಮ್ಮ ಕ್ರೀಡಾ ಜೀವನಕ್ಕೆ ಅಡ್ಡಿಯಾಗುತ್ತದೆ.

ಮುಂದಿನ ಒಲಿಂಪಿಕ್ಸ್‌ನಲ್ಲಿ ನಾವು ಭಾರತೀಯ ಅಥ್ಲೀಟ್‌ಗಳಿಂದ ಪದಕ ನಿರೀಕ್ಷಿಸಬಹುದೇ?
ನಿರೀಕ್ಷಿಸಬಹುದು. ನಮಗೆ ಇನ್ನೂ ಹೆಚ್ಚಿನ ತರಬೇತಿ ಸಿಕ್ಕರೆ ಖಂಡಿತ ನಾವು ಪದಕ ಗೆಲ್ಲಲು ಸಾಧ್ಯ. ಒಲಿಂಪಿಕ್ಸ್‌ನಲ್ಲಿ ಫೈನಲ್‌ಗಂತೂ ತಲುಪಲಿದ್ದೇವೆ ಎಂಬ ವಿಶ್ವಾಸ ನಮ್ಮದು. ನಮಗೆ ಇನ್ನೂ ಹೆಚ್ಚಿನ ಅಂತರರಾಷ್ಟ್ರೀಯ ತರಬೇತಿ ಮತ್ತು ಸ್ಪರ್ಧೆಗಳು ಬೇಕು. ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆಗಳು ಕಠಿಣವಾಗಿರುತ್ತದೆ. ಒಳ್ಳೆಯ ಸಾಧನೆ ಮಾಡುವ ಭರವಸೆ ನನ್ನದು.

ಅಥ್ಲೆಟಿಕ್ಸ್‌ನ ಯಾವ ವಿಭಾಗದಲ್ಲಿ ನಾವು ಒಲಿಂಪಿಕ್ಸ್ ಪದಕ ನಿರೀಕ್ಷಿಸಬಹುದು?
ಇತ್ತೀಚೆಗೆ ನಾವು ಈ ಬಗ್ಗೆ ಮಾಜಿ ಒಲಿಂಪಿಕ್ ಚಾಂಪಿಯನ್ ಒಬ್ಬರಲ್ಲಿ ಮಾತನಾಡುತ್ತಿದ್ದಾಗ ಅವರು ಹೇಳಿದ ಪ್ರಕಾರ ನಮಗೆ ಒಲಿಂಪಿಕ್ಸ್‌ನಲ್ಲಿ ರಿಲೇ ಮತ್ತು ಹರ್ಡಲ್ಸ್‌ನಲ್ಲಿ ಪದಕ ಗೆಲ್ಲುವ ಅವಕಾಶ ಇದೆ. ನೋಡೋಣ, ಭವಿಷ್ಯದಲ್ಲಿ ಏನಾಗುತ್ತದೆ ಗೊತ್ತಿಲ್ಲ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ಎಲ್ಲರ ಕನಸು.

ಮುಂದೆ ಯಾವ ಕ್ರೀಡಾಕೂಟಗಳಲ್ಲಿ ಭಾಗವಹಿಸಲಿದ್ದೀರಿ?
ಮುಂದೆ ಏಷ್ಯನ್ ಚಾಂಪಿಯನ್ ಶಿಪ್, ವಿಶ್ವ ಚಾಂಪಿಯನ್‌ಶಿಪ್ ಇದೆ. ಯೂರೋಪಿಯನ್ ಸ್ಪರ್ಧೆಗಳಲ್ಲಿ ಓಡಬೇಕು ಎಂಬ ಅಸೆ ಇದೆ. ಸರ್ಕಾರ ಅನುಮತಿ ಕೊಡಬೇಕು. ಮತ್ತೆ ರಾಷ್ಟ್ರೀಯ ಕ್ರೀಡಾಕೂಟಗಳು ಇದ್ದೇ ಇವೆ.

ಅಕಾಡೆಮಿ ಸ್ಥಾಪಿಸುವ ಯೋಚನೆ ಇದೆಯೇ?
ಅಂತಹ ಉದ್ದೇಶ ಇಲ್ಲ. ನಾನು ಒಳ್ಳೆ ತರಬೇತು ಕೋಡುತ್ತೇನೆ ಎಂಬ ಭರವಸೆ ಇಲ್ಲ. ಒಳ್ಳೆಯ ಅಥ್ಲೀಟ್ ಒಳ್ಳೆಯ ತರಬೇತುದಾರ ಆಗುವ ಸಾಧ್ಯತೆ ತುಂಬಾ ಕಡಿಮೆ. ಒಬ್ಬ ಅಥ್ಲೀಟ್‌ನ್ನು ತಯಾರು ಮಾಡುವುದು ನಿಜಕ್ಕೂ ಕಠಿಣ ಕೆಲಸ. ಆದರೆ ಕ್ರೀಡೆಗೆ ಸಂಬಂಧಿಸಿದ ಆಡಳಿತಾತ್ಮಕ ಕೆಲಸ ಮಾಡಲು ಸಿದ್ಧಳಿದ್ದೇನೆ. ನಾನು ಈಗಾಗಲೇ ೧೦ ವರ್ಷದಿಂದ ಇದೇ ಕ್ಷೇತ್ರದಲ್ಲಿದ್ದೇನೆ. ಇನ್ನೂ ೪ ವರ್ಷ ಇರಬಹುದು.

ನಿಮ್ಮ ಜೀವನದ ಟರ್ನಿಂಗ್ ಪಾಯಿಂಟ್?
ನನ್ನ ಜೀವನ ಪೂರ್ತಿ ತಿರುವುಗಳೇ ಇದೆ ಎಂದರೆ ಸರಿಯೇನೋ. ನಾನು ೮೦೦ ಮೀ. ಓಟ ಬಿಟ್ಟು ಪುನಃ ೪೦೦ ಮೀ. ಓಡಲು ಶುರುಮಾಡಿದ್ದು, ಗಾಯಗಳು, ಸಮಸ್ಯೆಗಳು, ತರಬೇತುದಾರ ಇಲ್ಲದೆ ಇದ್ದದು ಹೀಗೆ. ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆಯ್ಕೆಯಾದದ್ದು ಅಲ್ಲಿ ಪದಕ ಗೆದ್ದದ್ದು ಕೂಡ ಒಂದು ತಿರುವು. ಅನಂತರ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಜಯಿಸಿದ್ದು ಕೂಡ ಒಂದು ಮಹಾನ್ ತಿರುವೇ ಅಗಿದೆ.

ನಿಮ್ಮ ದಿನಚರಿ ಹೇಗಿರುತ್ತದೆ?
ಬೆಳಗೆದ್ದು ಅಭ್ಯಾಸ, ಅನಂತರ ಬ್ರೇಕ್ ಫಾಸ್ಟ್, ಅನಂತರ ವಿಶ್ರಾಂತಿ ಪಡೆಯುತ್ತೇವೆ. ಹೊರಗಡೆ ನಾವು ಹೋಗೋದು ತುಂಬಾ ಕಡಿಮೆ. ಮಧ್ಯಾಹ್ನ ಊಟ, ಆನಂತರ ವಿಶ್ರಾಂತಿ ಅಮೇಲೆ ಪುನಃ ಅಭ್ಯಾಸ. ಭಾನುವಾರ ನಾವು ಸಂಪೂರ್ಣ ವಿಶ್ರಾಂತಿ ಪಡೆಯುತ್ತೇವೆ.

ನೀವು ಸ್ಪರ್ಧೆಗಳಿಗೆ ಹೇಗೆ ಮಾನಸಿಕವಾಗಿ ಸಿದ್ಧರಾಗುತ್ತೀರಿ?
ಮಾನಸಿಕ ಸಿದ್ಧತೆ ಅತ್ಯಗತ್ಯ. ಶಾರೀರಿಕವಾಗಿ ಶ್ರಮ ಪಟ್ಟರೂ ಮಾನಸಿಕ ದೃಢತೆ ಇಲ್ಲವೆಂದರೆ ಅದು ವ್ಯರ್ಥ. ಕ್ರೀಡಾಪಟುವಿಗೆ ಇಚ್ಚಾ ಶಕ್ತಿ ಬೇಕು. ಇಲ್ಲವೆಂದರೆ ಒತ್ತಡ, ಭಯ ಪಡುತ್ತಾರೆ.

ನಿಮಗೆ ಯಾರು ಆದರ್ಶ?
ಅಥ್ಲೆಟಿಕ್ಸ್‌ಗೆ ಸಂಬಂಧಿಸಿದಂತೆ ಪಿ.ಟಿ. ಉಷಾ, ಆಶ್ವಿನಿ ನಾಚಪ್ಪ. ಇನ್ನುಳಿದಂತೆ ನನಗೆ ಅನೇಕ ರೋಲ್ ಮಾಡೆಲ್‌ಗಳಿದ್ದಾರೆ. ಪ್ರತಿಯೊಬ್ಬರಲ್ಲೂ ಒಂದೊಂದು ಕಲಿಯಲು ಇರುತ್ತದೆ.

ಹಿಂದಿನ ಅಥ್ಲೀಟ್‌ಗಳು ತಾವು ಪಿ.ಟಿ. ಉಷಾ ರೀತಿ ಆಗಬೇಕು ಎಂದು ಕನಸು ಕಾಣುತ್ತಿದ್ದರೆ ಈಗ ಅಶ್ವಿನಿ ಅಕ್ಕುಂಜಿ ರೀತಿ ಆಗಬೇಕು ಎಂದು ಕನಸು ಕಾಣುತ್ತಿದ್ದಾರೆ. ಇದನ್ನು ನೀವು ಹೇಗೆ ಸ್ವೀಕರಿಸುತ್ತೀರಿ?
ಇದು ಒಂದು ರೀತಿ ಸಂತೋಷವನ್ನುಂಟು ಮಾಡಿದೆ. ನನಗೆ ಏನೋ ಸಾಧಿಸಿದ್ದೇನೆ ಎಂದೆನಿಸುತ್ತದೆ. ಈ ಕ್ಷಣದಲ್ಲಿ ನಾನಿರಬಹುದು ಭವಿಷ್ಯದಲ್ಲಿ ಈ ಸ್ಥಾನಕ್ಕೆ ಮತ್ತೊಬ್ಬರು ಬರುತ್ತಾರೆ. ಇದು ಒಳ್ಳೆಯ ಬೆಳವಣಿಗೆ.

ಯುವ ಕ್ರೀಡಾಪಟುಗಳಿಗೆ ನಿಮ್ಮ ಸಲಹೆ?
ಪ್ರಾಮಾಣಿಕತೆ, ಸಮರ್ಪಣಾ ಮನೋಭಾವ, ಸೋಲು-ಗೆಲುವನ್ನು ಸಮಾನವಾಗಿ ಸ್ವಿಕರಿಸಿ. ತಾಳ್ಮೆ ಇರಲಿ, ಕಠಿಣ ಪರಿಶ್ರಮ ಪಡಿ, ನಿಮ್ಮಲ್ಲಿ ನಿಮಗೆ ವಿಶ್ವಾಸ ಇರಲಿ. ದೇವರ ಮೇಲೆ ನಂಬಿಕೆ ಕಳೆದುಕೊಳ್ಳಬೇಡಿ.

ನಿಮ್ಮ ಇಷ್ಟದ ಆಹಾರ?
ದಕ್ಷಿಣ ಕನ್ನಡ ಶೈಲಿಯಲ್ಲಿ ಮಾಡಿದ ಮೀನಿನ ಪದಾರ್ಥ ಇಷ್ಟ. ಇನ್ನೂ ಐಸ್ ಕ್ರೀಮ್ ಅಂದರೂ ಇಷ್ಟ. ನನಗೆ ಎಲ್ಲಾ ರೀತಿಯ ಆಹಾರ ಪದಾರ್ಥಗಳು ಇಷ್ಟವಾಗುತ್ತದೆ. ಆದರೆ ತಯಾರಿ ಚೆನ್ನಾಗಿರಬೇಕು. ಜಂಕ್ ಫುಡ್ ಮತ್ತು ಎಣ್ಣೆಯ ಆಂಶವಿರುವ ಆಹಾರ ಎಂದರೆ ಒಂಚೂರು ದೂರ.

ಬೇರೆ ಏನಾದರೂ ಹವ್ಯಾಸಗಳು?
ಬೇರೆ ಹವ್ಯಾಸಗಳೇನು ನನಗಿಲ್ಲ. ಬೇರೆ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಸಮಯಾವಕಾಶ ಕೂಡ ಸಿಗುತ್ತಿಲ್ಲ.

ಸಿನಿಮಾ ನೋಡುತ್ತೀರಾ?
ತುಂಬಾ ಕಡಿಮೆ. ನ್ಯಾಷನಲ್ ಜಿಯೋಗ್ರಾಫಿ, ಡಿಸ್ಕವರಿ ಚಾನೆಲ್‌ಗಳನ್ನು ನೋಡುತ್ತೇನೆ. ವಾರ್ತೆಯ ಬಗ್ಗೆ ಆಸಕ್ತಿಯಿದೆ.

ರಾಜಕೀಯದಲ್ಲಿ ಆಸಕ್ತಿ ಇದೆಯಾ?
ಇಲ್ಲ.

ಮದುವೆಯ ಬಗ್ಗೆ ಏನಾದರೂ ಯೋಚನೆ?
ಸದ್ಯಕ್ಕೆ ಇಲ್ಲ. ಒಲಿಂಪಿಕ್ಸ್ ಬಳಿಕ ನೋಡಬೇಕು.

ನಿಮ್ಮ ಕನಸಿನ ರಾಜಕುಮಾರ ಹೇಗಿರಬೇಕು?
ಕ್ರೀಡೆಯಲ್ಲಿ ಆಸಕ್ತಿ ಇರಬೇಕು. ಆತ ಕ್ರೀಡಾಪಟುವಾಗಿದ್ದರೆ ಒಳ್ಳೆಯದು.

ಸಿನಿಮಾದಲ್ಲಿ ನಟಿಸುವ ಆಸೆ ಇದೆಯಾ? ಯಾವುದಾದರೂ ಅವಕಾಶ ಬಂದದ್ದಿದೆಯೆ?
ನಟಿ ಆಗಬೇಕು ಎನ್ನುವ ಆಸೆಯೇನೂ ಇಲ್ಲ. ಆದರೆ ಯಾವುದಾದರೂ ಸಿನಿಮಾದಲ್ಲಿ ಅತಿಥಿ ಪಾತ್ರ ಸಿಕ್ಕರೆ ನಟಿಸಲು ಅಡ್ಡಿಯೇನು ಇಲ್ಲ.

6 comments:

ಬಾನಾಡಿ said...

ನಿಮ್ಮ ಭಾರದ ಪ್ರಶ್ನೆಗಳನ್ನು ಅಶ್ವಿನಿಯವರು ಉತ್ತರಿಸಿದ್ದು ನಿಜಕ್ಕೂ ಉತ್ತಮವಾಗಿದೆ. ಉತ್ತಮ ಸಂದರ್ಶನ ಪ್ರಶ್ನೆ ಮತ್ತು ಉತ್ತರದ ದೃಷ್ಟಿಯಿಂದ.
ಒಲವಿನಿಂದ
ಬಾನಾಡಿ

SVG,UJIRE said...

madyama kanige kanalaradantha kreeda patugalu thumba jana namma karnataka dali avaranu hudki plz

SVG,UJIRE said...

nammali madyama kanige kanalaradantha kreeda patugalu thumbha jana idhare dayavitu hudiki plz nimma geleya jayanth

SVG,UJIRE said...

nammali madyama kanige kanalaradantha kreeda patugalu thumbha jana idhare dayavitu hudiki plz nimma geleya jayanth

SVG,UJIRE said...

nammali madyama kanige kanalaradantha kreeda patugalu thumbha jana idhare dayavitu hudiki plz nimma geleya jayanth

Unknown said...

ನಿಮ್ಮ ಸಲಹೆ ಚೆನ್ನಾಗಿದೆ. ಆದರೆ ನನ್ನ ಈ ಲೇಖನದ ಉದ್ದೇಶ ಸಾಧಕ ಕ್ರೀಡಾಪಟು ಒಬ್ಬಳ ಜೊತೆ ಮಾತನಾಡಿ ಅವಳ ಸಾಧನೆಯ ಹಾದಿಯ ಬಗ್ಗೆ ಈ 'ಮಾಧ್ಯಮದ ಕಣ್ಣಿಗೆ ಬೀಳದ ಕ್ರೀಡಾಪಟುಗಳಿಗೆ' ತಿಳಿಸುವುದು. ಆ ಮೂಲಕ ನೀವು ಕೂಡ ಅವಳಂತೆ ಸಾಧನೆ ಮಾಡಬಹುದು ಆ ಅವಕಾಶ ನಮ್ಮ ವ್ಯವಸ್ಥೆಯಲ್ಲಿದೆ ಎಂದು ತಿಳಿಸುವುದೇ ಆಗಿದೆ. ಅತ್ಯುತ್ತಮ ಸಾಧನೆ ಮಾಡಿ ಇನ್ನೂ 'ಮಾಧ್ಯಮದ ಕಣ್ಣಿಗೆ ಬಿದ್ದಿಲ್ಲ'ದ ಕ್ರೀಡಾಪಟುಗಳ ಬಗ್ಗೆ ನಿಮಗೆ ಗೊತ್ತಿದ್ದರೆ ನನಗೆ ತಿಳಿಸಿ. ಅವರನ್ನು ನಾನು ಖಂಡಿತವಾಗಿಯೂ ಸಂದಶಿ೵ಸಿಸುತ್ತೇನೆ.