Friday, June 22, 2012

ತುಂಬಿದೆ ಎಪ್ಪತ್ತು, ನಮಗೆಲ್ಲಿದೆ ನೆನಪಿಸಿಕೊಳ್ಳಲು ಪುರುಸೊತ್ತು?

ಭಾರತವನ್ನು ಅವರಿಸಿಕೊಂಡಿದ್ದ ಬ್ರಿಟೀಷ್ ಬಂದಣಿಕೆಯ ಬಂಧವನ್ನು ಕಡಿದು ಹಾಕಲು ಹೋರಾಡಿದ ಶಕ್ತಿಗಳು ಒಂದೇ, ಎರಡೇ. ಆದರೆ ಕೆಲವೇ ಕೆಲವು ಶಕ್ತಿಗಳಿಗೆ, ವ್ಯಕ್ತಿಗಳಿಗೆ ಇತಿಹಾಸದ ಪುಟದಲ್ಲಿ ದಾಖಲಾಗಿ, ನಿತ್ಯ ಆರಾಧನೆಯನ್ನು ಪಡೆಯುವ ಭಾಗ್ಯ. ಆದರೆ ಇತಿಹಾಸ ಪುಟ ಸೇರುವ, ಅಲ್ಲಿ ಮೆರೆಯುವ ಆಸೆಗಳನ್ನು ಇಟ್ಟುಕೊಳ್ಳದೆ ತಮ್ಮ ಚಟುವಟಿಕೆಯಿಂದಲೇ ಇತಿಹಾಸಕ್ಕೆ ಹೊಸ ದಿಸೆ ನೀಡಿದ, ಹೊಸ ಇತಿಹಾಸವನ್ನೆ ಬರೆದ ಮಹಾನ್ ಶಕ್ತಿಗಳಲ್ಲಿ ಒಂದು ಇಂಡಿಯನ್ ನ್ಯಾಷನಲ್ ಆರ್ಮಿ (ಐಎನ್‌ಎ)!
ಟೈಟಾನಿಕ್ ಮುಳುಗಿ ೧೦೦ ವರ್ಷವಾದ ನೋವಿನಲ್ಲಿ ಮುಳುಗಿರುವ ನಮಗೆ ಐಎನ್‌ಎಯ ಸ್ಥಾಪನೆಯಾಗಿ ೭೦ ವರ್ಷವಾದ ಸಂಭ್ರಮವನ್ನು ಆಚರಿಸಲು ಪುರುಸೊತ್ತೆಲ್ಲಿ? ಆ ನೆನಪೆಲ್ಲಿ? ಹೌದು, ಈ ವರ್ಷಕ್ಕೆ ಐಎನ್‌ಎಯ ವೀರ ಸೈನಿಕರ ಹೆಜ್ಜೆಗೆ ಚರಿತ್ರೆಯ ಧೂಳಿನ ಕಣಗಳ ಲೇಪನವಾಗಿ ೭೦ ತುಂಬಲಿದೆ. ನಮ್ಮಲ್ಲಿ ಬಹುತೇಕ ಮಂದಿ ಸುಭಾಷ್ ಚಂದ್ರ ಭೋಸ್ ಐಎನ್‌ಎಯನ್ನು ಕಟ್ಟಿದ್ದರು ಎಂದೇ ಭಾವಿಸಿದ್ದಾರೆ. ಆದರೆ ಐಎನ್‌ಎಯನ್ನು ಕಟ್ಟಿದ್ದು ಸುಭಾಷ್ ಅಲ್ಲ. ಸುಭಾಷ್ ಐಎನ್‌ಎಯನ್ನು ಯಶಸ್ವಿಯಾಗಿ ಮುನ್ನಡೆಸಿದರು.

ಪ್ರಥಮ ವಿಶ್ವ ಯುದ್ಧ (೧೯೧೪-೧೮) ನಡೆದ ಸಂದರ್ಭದಲ್ಲಿ ಭಾರತೀಯ ಸೈನಿಕರು ಬ್ರಿಟೀಷರ ಪರವಾಗಿ ಹೋರಾಡಿದ್ದರು. ಆದರೆ ಭಾರತೀಯ ಸೈನಿಕರಿಗೆ ಅವರ ಯೋಗ್ಯತೆಗೆ ತಕ್ಕ ಸ್ಥಾನಮಾನವನ್ನು ಬ್ರಿಟೀಷರು ಎಂದೂ ನೀಡಲೇ ಇಲ್ಲ. ಮೊದಲ ವಿಶ್ವ ಯುದ್ಧದಲ್ಲಿ ಅವರ ಪರವಾಗಿ ಹೋರಾಡಿ ಮಡಿದ ೯೦,೦೦೦ ಸೈನಿಕರ ಸ್ಮರಣಾರ್ಥ ದೆಹಲಿಯಲ್ಲಿ ಇಂಡಿಯಾ ಗೇಟ್ ಕಟ್ಟಿದೊಡನೆ ಅವರು ಭಾರತೀಯ ಸೈನಿಕರಿಗೆ ಮಾಡಿದ ಅಪಮಾನದ ಪಾಪವೇನು ತೊಳೆದುಹೋಗಲಾರದು.
ಮೊದಲ ವಿಶ್ವ ಯುದ್ಧದ ಆರಂಭದವರೆಗೆ ಭಾರತೀಯ ಸೈನಿಕನೊಬ್ಬ ಅದೇಷ್ಟೆ ಸಾಧನೆ ಮಾಡಿದರೂ ಕೂಡ ಹೆಚ್ಚೆಂದರೆ ಸುಬೇದರ್ ಅಥವಾ ಸುಬೇದರ್ ಮೇಜರ್ ಆಗಬಹುದಿತ್ತು ಅಷ್ಟೆ. ಆದರೆ ಆ ಹುದ್ದೆಗೊಂದು ಸುಂದರ ಹೆಸರು ಜೂನಿಯರ್ ಕಮೀಷನ್ಡ್ ಅಫೀಸರ್ ಎಂದು ದಯಪಾಲಿಸಿದ್ದರು. ಆದರೆ ಮೊದಲ ವಿಶ್ವ ಯುದ್ಧದ ಸಂದರ್ಭದಲ್ಲಿ ಭಾರತೀಯರಲ್ಲಿ ಕೆಲವರು ಕ್ಯಾಪ್ಟನ್ ಹುದ್ದೆಗೆ ಏರಿದ್ದರು.

ಆದರೆ ೧೯೨೦ರ ಬಳಿಕ ಭಾರತೀಯರಿಗೆ ಕೂಡ ಕಿಂಗ್ಸ್ ಕಮೀಷನ್ ನೀಡುವ ಉದಾರತೆಯನ್ನು ಬ್ರಿಟೀಷ್ ಮನಸ್ಸುಗಳು ಮಾಡಿದವು. ಇಂತಹ ಅವಕಾಶವನ್ನು ಪಡೆದವರಲ್ಲಿ ಮುಂದೆ ದೇಶದ ಸೇನಾ ಮುಖ್ಯಸ್ಥರಾದ ಕೆ ಎಂ ಕಾರಿಯಪ್ಪ ಅವರು ಒಬ್ಬರು. ಆದರೆ ೧೯೩೯ರಲ್ಲಿ ದ್ವಿತೀಯ ವಿಶ್ವ ಮಹಾಯುದ್ಧ ಶುರುವಾಗುವ ಒಪ್ಪೊತ್ತಿಗೆ ಭಾರತೀಯ ಸೈನ್ಯದಲ್ಲಿ ಭಾರತೀಯನೊಬ್ಬ ಹೊಂದಿದ್ದ ಅತ್ಯುನ್ನತ ಹುದ್ದೆ ಎಂದರೆ ಅದು ಮೇಜರ್ ಹುದ್ದೆ ಅಷ್ಟೆ.

ಆದರೆ ೧೯೪೧ರಲ್ಲಿ ಶುರುವಾದ ಮಲಯನ್ ಯುದ್ಧ ಐಎನ್‌ಎಯ ಪರಿಕಲ್ಪನೆ ಅಂಕುರಿಸಲು ಕಾರಣವಾಯಿತು. ಬ್ರಿಟೀಷ್ ಅಧಿಕಾರಿಗಳಿಂದ ಸತತವಾಗಿ ತಮ್ಮ ಸ್ವಾಭಿಮಾನಕ್ಕೆ ಪೆಟ್ಟು ತಿನ್ನುತ್ತಿದ್ದ ಮತ್ತು ಜನಾಂಗೀಯ ನಿಂದನೆಯಿಂದ ರೋಸಿ ಹೋಗಿದ್ದ ಭಾರತೀಯರು ಅವರಿಗೆ ಸೂಕ್ತ ಏದಿರೇಟು ನೀಡುವ ಒಂದು ಅವಕಾಶ ಮತ್ತು ಸಂದರ್ಭಕ್ಕೊಸ್ಕರ ಕಾಯುತ್ತಿದ್ದರು. ಸ್ವಾತಂತ್ರ್ಯ ಭಾರತದ ಸೇನಾ ಮುಖ್ಯಸ್ಥರಾಗಿದ್ದ ಕೆ ಎಸ್ ತಿಮ್ಮಯ್ಯ, ಎಸ್ ಎಮ್ ಶ್ರೀನಾಗೇಶ್ ಮತ್ತು ಪಾಕಿಸ್ಥಾನದ ಸೇನಾ ಮುಖ್ಯಸ್ಥರಾಗಿದ್ದ ಎಮ್ ಐ ಮಜೀದ್ ಮುಂತಾದ ಉನ್ನತ ಅಧಿಕಾರಿಗಳೇ ಬ್ರಿಟೀಷರಿಂದ ಅವಹೇಳನಕ್ಕೀಡಾಗಿದ್ದರು ಎಂದಾದ ಮೇಲೆ ಉಳಿದ ಸಾಮಾನ್ಯ ಸೈನಿಕರ ಪಾಡು ಏನಾಗಿದ್ದಿರಬಹುದು?

ಸೂರ್ಯ ಮುಳುಗದ ನಾಡಿನ ಎಲ್ಲ ಲೆಕ್ಕಾಚಾರಗಳು ಬೋರಾಲಾಗಿ ಬಿದ್ದು ಸಿಂಗಾಪುರ ೧೯೪೨ರ ಫೆಬ್ರುವರಿ ೧೫ರಂದು ಜಪಾನ್‌ನ ವಶವಾಯಿತು. ಅದೇ ದಿನ ಬ್ರಿಟೀಷರು ಜಪಾನ್‌ನ ಮುಂದೆ ಮಂಡಿಯೂರಿದ್ದರು.

ಆದರೆ ಈ ಯುದ್ಧದ ಸಂದರ್ಭದಲ್ಲಿ ಆಯಕಟ್ಟಿನ ಪ್ರದೇಶವಾಗಿದ್ದ ಜಿತ್ರಾ ರಕ್ಷಣಾ ರೇಖೆ (ಈಗ ಮಲೇಷ್ಯಾದ ಭಾಗವಾಗಿದೆ) ಪ್ರದೇಶದಲ್ಲಿ ಬ್ರಿಟೀಷ್‌ರು ಜಪಾನಿಯರನ್ನು ಎದುರಿಸದಿದ್ದದ್ದು ಅವರ ಸೋಲಿನ ಮುನ್ನುಡಿ ಯಾಗಿತ್ತು. ಬ್ರಿಟೀಷರು ಕೊನೆ ಕ್ಷಣದಲ್ಲಿ ಅಲ್ಲಿ ಕಾವಲು ಕಾಯುತ್ತಿದ್ದ ೧/೧೪ ಪಂಜಾಬ್ ರೆಜಿಮೆಂಟ್‌ಗೆ ಅಲ್ಲಿಂದ ಮುಂದೆ ಹೋಗುವಂತೆ ಆದೇಶಿಸಿದ್ದರು. ಅದೇ ರೆಜಿಮೆಂಟ್‌ನಲ್ಲಿ ಐಎನ್‌ಎಯ ರೂವಾರಿಗಳಾದ ಕ್ಯಾಪ್ಟನ್ ಮೋಹನ್ ಸಿಂಗ್ ಮತ್ತು ಮೊಹಮ್ಮದ್ ಅಕ್ರಮ್ ಖಾನ್ ಇದ್ದರು!
ಜಪಾನ್‌ನ ತೀವೃ ದಾಳಿಗೆ ಸುಲಭ ತುತ್ತಾಗುವುದರಿಂದ ಪಾರಾಗಲು ಮೋಹನ್ ಸಿಂಗ್ ಮತ್ತು ಖಾನ್ ಇಬ್ಬರು ರಸ್ತೆ ಬಿಟ್ಟು ಅಲ್ಲೇ ಇದ್ದ ಕಾಡೊಳಗೆ ನುಗ್ಗಿದ್ದರು. ಇದೇ ಸಂದರ್ಭದಲ್ಲಿ ಜಪಾನ್ ಸೈನ್ಯದೊಡನೆ ಕೆಲ ಸಿಖ್ಖರು ಬರುವುದು ಅವರಿಗೆ ಕಂಡಿತ್ತು. ಆ ಸಿಖ್ಖರ ನಾಯಕನಾಗಿದ್ದ ಪ್ರೀತಂ ಸಿಂಗ್. ಆತ ಮೋಹನ್ ಸಿಂಗ್‌ಗೆ ಜಪಾನಿಯರ ಸಂದೇಶವನ್ನು ಮುಟ್ಟಿಸಿದ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಜಪಾನ್‌ನ ಬೆಂಬಲದ ಒತ್ತಾಸೆ ಸಿಕ್ಕಿತ್ತು. ಅವರಿಬ್ಬರ ಆ ಭೇಟಿ ಐಎನ್‌ಎಯ ಹುಟ್ಟಿಗೆ ನಾಂದಿ ಹಾಡಿತ್ತು. ಬಳಿಕ ಮೋಹನ್ ಸಿಂಗ್ ಮೇಜರ್ ಜನರಲ್ ಯಮಶಿಟರನ್ನು ಭೇಟಿಯಾಗಿ ಈ ಬಗೆಗಿನ ಮಾತುಕತೆ ನಡೆಸಿದರು.
ಈ ಮಲಯನ್ ಯುದ್ಧ ಶುರುವಾಗಿ ಕೇವಲ ೧೦ ದಿನಗಳಲ್ಲೇ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಬಲ್ಲ ದಳವೊಂದನ್ನು ಈ ಸೈನ್ಯದೊಳಗಿನಿಂದಲೇ ರಚಿಸಲು ಬೇಕಾದ ಎಲ್ಲಾ ಏರ್ಪಾಟು ಕೂಡ ನಡೆಯಿತು.

ಸಿಂಗಾಪುರದ ಪತನದ ಎರಡು ದಿನದ ಬಳಿಕ ಅಂದರೆ ಫೇಬ್ರವರಿ ೧೭ರಂದು ಭಾರತೀಯ ಮೂಲದ ಎಲ್ಲ ಖೈದಿಗಳನ್ನು ಫರೇರ್ ಪಾರ್ಕ್‌ನಲ್ಲಿ ಕಳೆ ಹಾಕಲಾಯಿತು. ಅಂದು ಜಪಾನಿನ ಸೇನಾನಾಯಕ ಮೇಜರ್ ಫ್ಯುಜಿವೆರಾನ ಕೈಗೇ ಬ್ರಿಟೀಷ್ ಕರ್ನಲ್ ಹಂಟ್ ಭಾರತೀಯರನ್ನು ಒಪ್ಪಿಸಿದ್ದ. ಅಂದು ಹಂಟ್ ಮಾಡಿದ ಘೋಷಣೆ, ಇಂದು, ನಾನು ಬ್ರಿಟೀಷ್ ಸರ್ಕಾರದ ಪರವಾಗಿ ನಿಮ್ಮನ್ನು ಜಪಾನ್ ಸರ್ಕಾರಕ್ಕೆ ಹಸ್ತಾಂತರಿಸುತ್ತೇನೆ. ನೀವು ಈವರೆಗೆ ಹೇಗೆ ನಮ್ಮ ಆದೇಶವನ್ನು ಪಾಲಿಸುತ್ತಿದ್ದೀರೋ ಹಾಗೇ ಇನ್ನು ಮುಂದೆ ಅವರ ಆದೇಶವನ್ನು ಪಾಲಿಸಿ ಎಂದಿದ್ದ. ಈ ಘೋಷಣೆ ಬ್ರಿಟೀಷ್ ಅಧಿಪತ್ಯಕ್ಕೆ ಕಪ್ಪು ಮಸಿ ಬಳೆದಿತ್ತು ಜೊತೆಗೆ ಮುಂದೆ ನಡೆದ ಕೆಂಪು ಕೋಟೆ ವಿಚಾರಣೆ (೧೯೪೫-೪೬) ಸಂದರ್ಭದಲ್ಲಿ ಭಾರತೀಯರಿಗೆ ಭಾರಿ ಲಾಭ ತಂದಿತ್ತು.

ಮಾರ್ಚ್‌ನಲ್ಲಿ ಟೋಕಿಯೋ ಕಾನ್ಫರೆನ್ಸ್ ನಡೆಸುವುದು ಮತ್ತು ಅಲ್ಲಿ ನಾಗರಿಕ ಸಮಾಜದ ಪ್ರತಿನಿಧಿಗಳ ಜೊತೆಗೆ ಐಎನ್‌ಎಯ ಪ್ರತಿನಿಧಿಗಳು ಕೂಡ ಸಭೆ ಸೇರಿ ಮಾತುಕತೆ ನಡೆಸುವುದು ಎಂದು ನಿಶ್ಚಯಿಸಲಾಯಿತು. ಆದರೆ ವಿಧಿ ಬೇರೆಯದ್ದೆ ಬಗೆದಿದ್ದ. ಅ ಸಮ್ಮೇಳನದಲ್ಲಿ ಭಾಗವಹಿಸಲೆಂದು ಸಿಂಗಾಪುರದಿಂದ ಹೊರಟಿದ್ದ ವಿಮಾನವೊಂದು ಜಪಾನಿನ ದಕ್ಷಿಣ ಭಾಗದ ಕಡಲ ಗರ್ಭ ಸೇರಿತು. ಅದರಲ್ಲಿದ್ದ ಪ್ರೀತಮ್ ಸಿಂಗ್, ಸ್ವಾಮಿ ಸತ್ಯಾನಂದ ಪುರಿ, ಎನ್. ಕೆ ಆಯ್ಯರ್ ಮತ್ತು ಕ್ಯಾ. ಅಕ್ರಂ ಖಾನ್ ವಿಧಿವಶರಾದರು. ಆ ಮೂಲಕ ಐಎನ್‌ಎಯ ಮೊದಲ ಹುತಾತ್ಮರ ಪಡೆ ಸೃಷ್ಟಿಯಾಯಿತು!

ಇದೇ ಸಂದರ್ಭದಲ್ಲಿ ಪೂರ್ವದಲ್ಲಿನ ಎಲ್ಲ ಭಾರತೀಯರ ಹೊಣೆ ಹೊತ್ತಿಕೊಳ್ಳಲು ೧೯೨೮ರಲ್ಲಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ (ಐಐಎಲ್)ನ ಸ್ಥಾಪನೆಯಾಗಿತ್ತು. ಆ ಸಮಯದಲ್ಲಿ ರಾಜಾ ಮಹೇಂದ್ರ ಪ್ರತಾಪ ಇದರ ಅಧ್ಯಕ್ಷರಾಗಿದ್ದರೆ ರಾಸ್ ಬಿಹಾರಿ ಬೋಸ್ ಉಪಾಧ್ಯಕ್ಷರಾಗಿದ್ದರು. ಆದರೆ ಸೈನ್ಯದ ಪ್ರತಿನಿಧಿಗಳು ಅಲ್ಲಿಗೆ ತಲುಪುತ್ತಲೇ ರಾಜಾ ಮಹೇಂದ್ರ ಪ್ರತಾಪ್ ಪದಚ್ಯುತರಾಗಿ ರಾಸ್ ಬಿಹಾರಿ ಬೋಸ್ ಅಧ್ಯಕ್ಷರಾಗಿದ್ದರು! ಅಷ್ಟೇ ಅಲ್ಲ ರಾಜಾ ಮಹೇಂದ್ರರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು. ಕಾರಣ, ರಾಜಾ ಮಹೇಂದ್ರ ಜಪಾನಿಯರು ಹೇಳಿದ್ದಕ್ಕೆಲ್ಲ ತಲೆಯಾಡಿಸುವ ಜಾಯಮಾನದವರಾಗಿರಲಿಲ್ಲ.

ಮಾರ್ಚ್ ೨೮ರಿಂದ ಮಾರ್ಚ್ ೩೧ರವರೆಗೆ ಬೋಸ್‌ರ ನೇತೃತ್ವದಲ್ಲಿ ನಡೆದ ಈ ಸಮಾವೇಶದಲ್ಲಿ ಐಐಎಲ್‌ನ್ನು ಪೂರ್ವ ದೇಶಗಳಲ್ಲಿ ವಿಸ್ತರಿಸುವುದು, ಐಎನ್‌ಎಯ ರಚನೆ ಮತ್ತು ಈ ಚಳವಳಿಯನ್ನು ಮುನ್ನಡೆಸಲು ಯೂರೋಪ್‌ನಿಂದ ಸುಭಾಶ್ ಚಂದ್ರ ಬೋಸ್‌ರನ್ನು ಕರೆಸುವುದು ಮುಂತಾದ ನಿರ್ಣಯ ಕೈಗೊಳ್ಳಲಾಯಿತು.

ಸಿಂಗಾಪುರದಲ್ಲಿ ಜಪಾನಿಯರಿಗೆ ಶರಣಾದ ೯೦,೦೦೦ದಷ್ಟು ಸೈನಿಕರಲ್ಲಿ ಸುಮಾರು ಅರ್ಧದಷ್ಟು ಭಾರತೀಯ ಮೂಲದ ಸೈನಿಕರಿದ್ದರು. ಅವರಲ್ಲಿ ಕೆಲವರು ಯುದ್ಧದ ಮಧ್ಯೆಯೇ ಮೋಹನ್ ಸಿಂಗ್‌ರನ್ನು ಸೇರಿಕೊಂಡಿದ್ದರು. ಮತ್ತೆ ಉಳಿದವರನ್ನು ಬಳಸಿಕೊಂಡು ಐಎನ್‌ಎ ಕಟ್ಟುವ ಕೆಲಸ ಏಪ್ರಿಲ್ ತಿಂಗಳಲ್ಲೇ ಪ್ರಾರಂಭಿಸಲಾಯಿತು.

ಮೊದಲ ಹಂತದಲ್ಲಿ ಮೂರು ಬ್ರಿಗೇಡ್ ಮತ್ತು ಸಹಾಯಕ ಪಡೆಗಳಿರುವ ಒಂದು ಡಿವಿಷನ್‌ನ್ನು ರಚಿಸಲಾಯಿತು. ಮೋಹನ್ ಸಿಂಗ್ ಮೇಜರ್ ಜನರಲ್ ಆಗಿ ಆಯ್ಕೆಯಾದರು. ಜೂನಿಯರ್ ಕಮೀಷನ್ಡ್ ಆಫೀಸರ್ ಹುದ್ದೆಯನ್ನು ಕಿತ್ತು ಹಾಕಲಾಯಿತು. ಹಿಂದೂ, ಮುಸ್ಲಿಂ ಮತ್ತು ಸಿಖ್ಖರು ಒಂದೇ ಕಡೆ ಊಟ ಮಾಡಬೇಕಿತ್ತು. ಈ ರೀತಿ ಸಮಾನತೆ ಮತ್ತು ಜಾತ್ಯತೀತತೆಯ ಅಂಶವನ್ನು ಐಎನ್‌ಎ ತನ್ನ ಬೇರಿನಲ್ಲೇ ಅಳವಡಿಸಿಕೊಂಡಿತ್ತು. ಕಮಾಂಡ್ ನೀಡಲು ಹಿಂದಿ ಪದಗಳನ್ನು ಪರಿಚಯಿಸಲಾಯಿತು. ಬ್ರಿಗೇಡ್‌ಗಳಿಗೆ ಗಾಂಧಿ, ನೆಹರು ಮತ್ತು ಅಜಾದ್‌ರ ಹೆಸರು ಇಡಲಾಯಿತು.

ಆ ಬಳಿಕ ೧೯೪೨ರ ಜೂನ್ ೧೫ ರಿಂದ ೨೩ರವರೆಗೆ ಬ್ಯಾಂಕಾಕ್ ಕಾನ್ಫರೆನ್ಸ್ ನಡೆಯಿತು. ಈ ಸಮ್ಮೇಳನದಲ್ಲಿ ಈ ಚಳವಳಿಯ ಮುಖ್ಯ ಉದ್ದೇಶ ಭಾರತದ ಸಂಪೂರ್ಣ ಸ್ವರಾಜ್ಯ ಎಂಬ ನಿರ್ಣಯ ಕೈಗೊಳ್ಳುವುದರ ಜೊತೆಗೆ ಕಾಂಗ್ರೆಸ್‌ನ ಹೋರಾಟದ ಆಶಯಗಳ ಬಗ್ಗೆ ಸಮ್ಮತಿ ಮುಂತಾದ ನಿರ್ಣಯ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ರಾಸ್ ಬಿಹಾರಿ ಬೋಸ್‌ರ ನೇತೃತ್ವದಲ್ಲಿ ಕ್ರಿಯಾ ಸಮಿತಿವೊಂದನ್ನು ರಚಿಸಲಾಯಿತು. ಇದರಲ್ಲಿ ಸೇನೆಯ ಕಡೆಯಿಂದ ಮೋಹನ್ ಸಿಂಗ್, ಎ ಕ್ಯೂ ಗಿಲಾನಿ ಮತ್ತು ನಾಗರಿಕರ ಕಡೆಯಿಂದ ಕೆ ಪಿ ಕೆ ಮೆನನ್ ಮತ್ತು ಎನ್ ರಾಘವನ್ ಇದ್ದರು. ಇಡೀ ಚಳವಳಿಯ ನಿಯಂತ್ರಣ ಮತ್ತು ಮಾರ್ಗದರ್ಶನ ಈ ಸಮಿತಿಯ ಜವಾಬ್ಧಾರಿಯಾಗಿತ್ತು.

ಐಎನ್‌ಎಯ ಮೊದಲ ಡಿವಿಷನ್‌ನಲ್ಲಿ ಕಮಾಂಡರ್ ಆಗಿ ಮೋಹನ್ ಸಿಂಗ್ ಮತ್ತು ದ್ವಿತೀಯ ಕಮಾಂಡರ್ ಮತ್ತು ಮುಖ್ಯ ಸಲಹೆಗಾರರಾಗಿ ನರಂಜನ್ ಸಿಂಗ್ ಗಿಲ್ (ಇವರಿಗೂ ಜಪಾನಿಯರಿಗೂ ಅಷ್ಟೊಂದು ಅಗಿ ಬರುತ್ತಿರಲಿಲ್ಲವಂತೆ)ಇದ್ದರು. ಗಾಂಧಿ ಬ್ರಿಗೇಡ್‌ಗೆ ಐ ಕೆ ಕಿಯಾನಿ, ನೆಹರು ಬ್ರಿಗೇಡ್‌ಗೆ ಅಜೀಜ್ ಅಹಮ್ಮದ್ ಖಾನ್ ಮತ್ತು ಅಜಾದ್ ಬ್ರಿಗೇಡ್‌ಗೆ ಪ್ರಕಾಶ್ ಚಾಂದ್ ನೇತೃತ್ವ ವಹಿಸಿಕೊಂಡರು. 

ಈ ಪಡೆ ಅದೇ ವರ್ಷ ಅಕ್ಟೋಬರ್‌ನಲ್ಲಿ ಬರ್ಮಾದತ್ತ ದಾಪುಗಾಲಿಡಲು ಸಿದ್ಧವಾಗಿತ್ತು. ಆದರೆ ದುರದೃಷ್ಟವಶಾತ್ ಹಾಗೇ ಆಗಲಿಲ್ಲ. ಭಾರತೀಯರನ್ನು ಮತ್ತು ಭಾರತೀಯ ಸೈನ್ಯವನ್ನು ತನ್ನ ಮೂಗಿನ ನೇರಕ್ಕೆ ನಿರ್ದೇಶಿಸುವ ಹಾಗೂ ಭಾರತೀಯ ಸೇನೆಯನ್ನು ತನ್ನ ಅಧೀನದಲ್ಲೆ ಇಟ್ಟುಕೊಳ್ಳಬೇಕೆಂಬ ಜಪಾನಿಯರ ಹವಣಿಕೆ ಮತ್ತು ವರ್ತನೆ ಮೋಹನ್ ಸಿಂಗ್‌ರಿಗೆ ಭಾರಿ ನೋವು ತಂದಿತ್ತು. ಕ್ರಿಯಾ ಸಮಿತಿ ಒಡೆದು ಹೋಯಿತು. ಬ್ಯಾಂಕಾಕ್ ಸಮ್ಮೇಳನದ ನಿರ್ಣಯವನ್ನು ಜಪಾನ್ ಬಹಿರಂಗವಾಗಿ ಒಪ್ಪಿಕೊಳ್ಳದಿದ್ದದ್ದು ಅಸಮಾಧಾನದ ಹೊಗೆ ಕವಿಯುವಂತೆ ಮಾಡಿತ್ತು. ಇದರಿಂದ ಬೇಸತ್ತ ಮೋಹನ್ ಸಿಂಗ್ ಜಪಾನಿಯರ ಜೊತೆ ಅಸಹಕಾರ ಮತ್ತು ಐಎನ್‌ಎಯ ವಿಸರ್ಜನೆಯ ನಿರ್ಧಾರಕ್ಕೆ ಬಂದರು.

೧೯೪೨ನೇ ಇಸವಿಯ ಡಿಸೆಂಬರ್ ೨೧ಕ್ಕೆ ಐಎನ್‌ಎ ವಿಸರ್ಜನೆಯಾಯಿತು. ನರಂಜನ್ ಸಿಂಗ್‌ರನ್ನು ಮೊದಲೇ ಬಂದಿಸಿಟ್ಟಿದ್ದ ಜಪಾನಿಯರು ಆ ಬಳಿಕ ಡಿಸೆಂಬರ್ ೨೯ಕ್ಕೆ ಮೋಹನ್ ಸಿಂಗ್‌ರನ್ನು ಕೂಡ ಬಂಧಿಸಿದರು. ಅದ್ದರಿಂದ ೧೯೪೨ರ ಫೇಬ್ರುವರಿ ೧೫ರಿಂದ ಅದೇ ವರ್ಷದ ಡಿಸೆಂಬರ್ ೨೧ರವರೆಗೆ ಅಸ್ತಿತ್ವದಲ್ಲಿದ್ದ ಐಎನ್‌ಎಯ ಮೊದಲ ಅಧ್ಯಾಯ ಮುಕ್ತಾಯಗೊಂಡಿತು.
ಆ ಚಳಿಗಾಲದಲ್ಲಿ ಬರ್ಮಾದ ಮೂಲಕ ಭಾರತದ ಮೇಲೆ ದಾಳಿ ಮಾಡಬೇಕು ಎಂಬ ಭಾರತೀಯರ ರಣತಂತ್ರಕ್ಕೆ ಮಣೆ ಹಾಕದ್ದು ಜಪಾನಿಗೆ ಭಾರಿ ನಷ್ಟ ಉಂಟು ಮಾಡಿತು ಎಂದು ಆ ಬಳಿಕ ಜಪಾನ್ ಸೈನ್ಯದ ಜನರಲ್ ಅದ ಫುಜಿವಾರ ಕೂಡ ಒಪ್ಪಿಕೊಳ್ಳುತ್ತಾರೆ.

ಐಎನ್‌ಎಯ ಮೊದಲ ಪರ್ವದ ಬಗ್ಗೆ ನರಂಜನ್ ಸಿಂಗ್ ಹೇಳುವುದನ್ನು ಕೇಳಿ, "ಐಎನ್‌ಎಯ ಎರಡು ಭಾಗಗಳು ಪರಸ್ಪರ ಪೂರಕವಾಗಿದ್ದವು. ಇದನ್ನು ಒಂದೇ ಕಥೆಯ ಎರಡು ಭಾಗಗಳೆಂದು ಪರಿಗಣಿಸಬಹುದು. ಮೊದಲನೆ ಭಾಗ ಇಲ್ಲದೇ ಇದ್ದಲ್ಲಿ ಐಎನ್‌ಎಯ ಎರಡನೇ ಯಶಸ್ಸಿನ ಪರ್ವ ಸೃಷ್ಟಿಯಾಗುತ್ತಿರಲಿಲ್ಲ ಮತ್ತು ಎರಡನೇ ಭಾಗ ಇಲ್ಲದೆ ಹೋಗಿದ್ದರೆ ಐಎನ್‌ಎ ಸಾಧಿಸಿದ್ದು ಏನು ಇರುತ್ತಿರಲಿಲ್ಲ".

ಅ ಬಳಿಕ ೧೯೪೩ರ ಜುಲೈ ೨ರಂದು ಸಿಂಗಾಪುರಕ್ಕೆ ನೇತಾಜಿಯ ಆಗಮನ, ಬಂದ ಎರಡೇ ದಿನದಲ್ಲಿ ಅವರು ಐಐಎಲ್‌ನ ಜವಾಬ್ಧಾರಿ ವಹಿಸಿಕೊಂಡ ತದನಂತರ ಆಗಸ್ಟ್‌ನಲ್ಲಿ ಐಎನ್‌ಎಯ ದಂಡನಾಯಕರಾಗಿ ನಿಯುಕ್ತರಾಗುತ್ತಾರೆ. ಆ ಬಳಿಕದ ರೋಚಕ ಕತೆ ಚಿರಪರಿಚಿತ.

ನಾವು ವ್ಯಕ್ತಿ ಪೂಜೆ ಮಾಡುತ್ತ ಆ ವ್ಯಕ್ತಿಯ ಹಿಂದಿರುವ ಶಕ್ತಿಗಳನ್ನು ಮರೆಯುವುದರಲ್ಲಿ ಮತ್ತು ಮುಚ್ಚಿಡುವುದರಲ್ಲಿ ನಿಸ್ಸಿಮರು. ಇಂದು ಐಎನ್‌ಎಗೆ ಅಡಿಪಾಯ ಹಾಕಿದವರನ್ನು ಕೇಳುವವರಿಲ್ಲ, ನೇತಾಜಿಗೆ ಸಲ್ಲಲೇ ಬೇಕಾದ ಮಾನ್ಯತೆ ಸಲ್ಲಲಿಲ್ಲ.
ಇಂದು ೧೨ ಲಕ್ಷ ಭೂ ಸೈನಿಕರ ರಕ್ಷಣೆಯಲ್ಲಿರುವ, ಸುಮಾರು ಒಂದೂವರೆ ಲಕ್ಷ ಕೋಟಿ ರೂ ಸುರಿದು ನಮ್ಮ ರಕ್ಷಣೆ ಮಾಡಿಸಿಕೊಳ್ಳುತ್ತಿರುವ, ಬಗೆ ಬಗೆಯ ಕ್ಷಿಪಣಿಗಳನ್ನು ಉಡಾಯಿಸಿ ನೆರೆಯ ದೇಶಗಳಿಗೆಗೆ ಬಿಸಿ ಮುಟ್ಟಿಸಿದ್ದೇವೆ ಎಂದು ಬೀಗುತ್ತಿರುವ ನಮಗೆ ಈ ಮಣ್ಣಿನ ಪರಾಧೀನತೆಯನ್ನು ಕಡಿದು ಹಾಕಿ ೩೮ ಕೋಟಿ ಭಾರತೀಯರ ರಕ್ಷಣೆಗೆ ಪರದೇಶಗಳ ಕಾಡುಮೇಡುಗಳಲ್ಲಿ ಪಡಬಾರದ ಪಾಡು ಪಟ್ಟ ಆ ೪೫,೦೦೦ ಕದನ ಕಲಿಗಳನ್ನು ನೆನಪಿಸಿಕೊಳ್ಳುವಷ್ಟು ವ್ಯವಧಾನವಿಲ್ಲದೆ ಹೋಯಿತೇ?

Thursday, May 24, 2012

ಚುಟುಕು ಕ್ರಿಕೆಟ್ ನೈತಿಕತೆಯ ಕೊನೆಗುಟುಕು

ಭಾರತ ೨೦೦೭ರಲ್ಲಿ ವಿಶ್ವ ಟೆಂಟಿ ಟ್ವೆಂಟಿ ಚಾಂಪಿಯನ್ ಆದ ಕುರುಹಾಗಿ ಮತ್ತು ಜೀ ಸಮೂಹದ ಇಂಡಿಯನ್ ಕ್ರಿಕೆಟ್ ಲೀಗ್‌ಗೆ ಸಡ್ಡು ಹೊಡೆಯಲಿಕ್ಕಾಗಿ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಅಕಾಲದಲ್ಲಿ ಜನ್ಮ ತಾಳಿ ಐದು ವರ್ಷ ಸಂದಿದೆ. ’ಶುದ್ಧ ಕ್ರಿಕೆಟ್’ ಎಂಬುದು ಐಪಿಎಲ್‌ನ ಜಾತಕದಲ್ಲೇ ಬರೆದಿಲ್ಲ ಎಂಬುದು ಈ ಪಂಚ ವರ್ಷದಲ್ಲೆ ಸಾಬೀತಾಗಿದೆ.
ಭಾರತ ಟ್ವೆಂಟಿ-ಟ್ವೆಂಟಿ ವಿಶ್ವ ಚಾಂಪಿಯನ್ ಆದದ್ದು ಒಂದೇ ಐಪಿಎಲ್‌ನ ಉಗಮಕ್ಕೆ ಕಾರಣವಾಗಿರಲಿಲ್ಲ. ಭಾರತದಲ್ಲಿ ಕ್ರಿಕೆಟ್‌ನ ಏಕಸ್ವಾಮ್ಯ ಹೊಂದಿರುವ ಬಿಸಿಸಿಐಯ ಅಧಿಪತ್ಯಕ್ಕೆ ಜೀ ಸಮೂಹದ ಸುಭಾಶ್ ಚಂದ್ರ ಐಸಿಎಲ್‌ನ ಮೂಲಕ ಕೊಡಲಿಯೇಟು ನೀಡಿದಾಗ ತನ್ನ ಕ್ರಿಕೆಟ್ ಕೊಪ್ಪರಿಗೆ ಇನ್ನೊಬ್ಬರ ಪಾಲಾಗುವುದನ್ನು ಯಾವುದೇ ಬೆಲೆ ತೆತ್ತು ತಪ್ಪಿಸಬೇಕು ಎಂಬ ಬಿಸಿಸಿಐ ಯೋಚನೆಯೇ ಐಪಿಎಲ್‌ನ ತಳಪಾಯ. ಉಳಿದಂತೆ ಕ್ರಿಕೆಟಿಗರ ಉದ್ಧಾರ, ಮನರಂಜನೆ ಮುಂತಾದ ಬಿಸಿಸಿಐ ಹೇಳಿಕೆಗಳು ಸುಮ್ಮನೆ ತೋರಿಕೆಯದ್ದು ಅಷ್ಟೆ.
ಟ್ವೆಂಟಿ-ಟ್ವೆಂಟಿ ನಿಂತಿರುವುದೇ ಹೊಡಿ ಬಡಿ ಸಿದ್ಧಾಂತದ ಮೇಲೆ. ಕ್ರಿಕೆಟ್‌ನ ಮೂಲ ಧರ್ಮಕ್ಕೆ ಇದು ವಿರುದ್ಧವಾದರೂ ಕಾಲ ಧರ್ಮಕ್ಕನುಗುಣವಾಗಿ ಈ ಸಂಸ್ಕ್ರತಿಯನ್ನು ಒಪ್ಪಿಕೊಂಡರೆ ಅದರಲ್ಲಿ ತಪ್ಪೇನಿಸಲಾಗದು. ಆದರೆ ಕ್ರಿಕೆಟ್ ಎಂಬ ಆಟ ಉದ್ದಿಮೆಗಳ ತೆಕ್ಕೆಗೆ ಸೇರಿಕೊಂಡಾಗ ಉಂಟಾಗುವ ಉತ್ಪಾತಗಳು ಮಾತ್ರ ಸಹ್ಯವಾಗಿಲ್ಲ.
ಮನರಂಜನೆ ಮತ್ತು ವ್ಯಾಯಾಮ ಕ್ರೀಡೆಯ ಎರಡು ಕಣ್ಣುಗಳಿದ್ದಂತೆ. ಮನರಂಜನೆ ಆಡುವವನಿಗೆ ಮತ್ತು ನೋಡುವವನಿಗೆ ಹಾಗೆ ವ್ಯಾಯಾಮ ಆಡುವವನಿಗೆ ಸಿಗುತ್ತದೆ. ಆದರೆ ವೃತ್ತಿಪರ ಆಟಗಾರರಿಗೆ ಪ್ರತ್ಯೇಕವಾದ ವ್ಯಾಯಾಮವೇ ಇರುತ್ತದೆ. ನಮ್ಮಂತವರಿಗೆ ಮಾತ್ರ ಆಡುವುದೇ ವ್ಯಾಯಾಮ! ಅದ್ದರಿಂದ ಯಾವುದೇ ವೃತ್ತಿಪರ ಆಟಗಾರನಿಗೆ ಆತ ನಮ್ಮ ಮುಂದೆ ನೀಡುವ ಪ್ರದರ್ಶನ ಆತನಿಗೆ ವ್ಯಾಯಾಮ ಮತ್ತು ಮನರಂಜನೆಯಾಗಿ ಮುಖ್ಯವಾಗುವುದಕ್ಕಿಂತ ನೋಡುಗನಿಗೆ ಅದು ನೀಡುವ ಮನರಂಜನೆಯಷ್ಟೆ ಪ್ರಮುಖವಾಗುತ್ತದೆ. ಐಪಿಎಲ್ ನಂತಹ ಕ್ರೀಡಾಕೂಟದಲ್ಲಿ ಒಬ್ಬ ಆಟಗಾರ ಎಷ್ಟು ಮನರಂಜನೆ ನೀಡಬಲ್ಲ ಎಂಬುದರ ಮೇಲೆ ಅತನ ಹಣದ ಜೋಳಿಗೆ ತುಂಬುತ್ತದೆ. ಅದ್ದರಿಂದ ಇಲ್ಲಿ ಒಬ್ಬ ಆಟಗಾರ ಪ್ರದರ್ಶಕನಾಗಿ ಮುಖ್ಯನಾಗುತ್ತಾನೆಯೇ ಹೊರತು ಆತನ ಕೌಶಲ್ಯಗಳಿಂದಾಗಿ ಅಲ್ಲ.
ಒಂದು ಕ್ರೀಡಾ ತಂಡಕ್ಕೆ ಅಥವಾ ಕ್ರಿಡಾಳುವಿಗೆ ಮನರಂಜನೆ ನೀಡುವ ಸಾಮರ್ಥ್ಯವಿದ್ದರೆ ಅದು ಹೆಚ್ಚುಗಾರಿಕೆಯ ವಿಷಯ. ಒಂದು ಸಿನೆಮಾ, ನಾಟಕ ಕೂಡ ಮಾಡುವುದು ಅದೇ ಕೆಲಸವನ್ನು. ಆದರೆ ಸಿನೆಮಾ, ನಾಟಕಕ್ಕೆ ಒಂದು ಸ್ಕ್ರೀಪ್ಟ್ ಇರುತ್ತದೆ, ಕ್ರೀಡೆಗೆ ನೀತಿ ನಿಯಮದ ಚೌಕಟ್ಟು ಇರುತ್ತದೆ. ಆದರೆ ಇದು ಅದಲು ಬದಲಾದರೆ ಮಾತ್ರ ಶುದ್ಧ ಮನರಂಜನೆಯ ಆಶಯ ನೆಲಕಚ್ಚುತ್ತದೆ. ಕ್ರೀಡೆಯ ಸೋಲು, ಗೆಲುವು ಸ್ಕ್ರೀಪ್ಟ್ ರೂಪ ಪಡೆದರೆ ಮ್ಯಾಚ್ ಫಿಕ್ಸಿಂಗ್‌ನ ಭೂತ ಕಣ್ಣ ಮುಂದೆ ಬಂದು ನಿಂತಂತೆ.
ಮ್ಯಾಚ್ ಫಿಕ್ಸಿಂಗ್ ದಶಕಗಳ ಹಿಂದೆಯೇ ಅಧಿಕೃತವಾಗಿ ಕ್ರಿಕೆಟ್‌ನೊಂದಿಗೆ ಸಂಬಂಧ ಕುದುರಿಸಿಕೊಂಡಿತ್ತು. ಭಾರತ ಮತ್ತು ದಕ್ಷಿಣ ಆಫ್ರಿಕಾದ ತಲಾ ಒರ್ವ ಯಶಸ್ವಿ ಕ್ರಿಕೆಟ್ ಕಪ್ತಾನರ ಮತ್ತು ಕೆಲ ಆಟಗಾರರ ಕ್ರಿಕೆಟ್ ಬದುಕಿಗೆ ಎಳ್ಳುನೀರು ನೀಡಿತ್ತು. ಆ ಬಳಿಕ ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್‌ನ ಆನೇಕ ಆರೋಪಗಳು ಕೇಳಿಬಂದವು. ಕೆಲ ಪ್ರಕರಣಗಳು ಸಾಬೀತಾದವು ಕೂಡ. ಇನ್ನು ಅನೇಕ ಆರೋಪಗಳು ಸಾಕ್ಷ್ಯಾಧಾರಗಳ ಕೊರತೆ ಮುಂತಾದ ಅಂಶಗಳಿಂದ ಅಲ್ಲಿಗೆ ಕಣ್ಣು ಮುಚ್ಚಿದ್ದವು. ಆದರೆ ಈಗ ಮತ್ತೆ ಐವರು ಕ್ರಿಕೆಟಿಗರು ಮ್ಯಾಚ್ ಫಿಕ್ಸಿಂಗ್‌ನ ಆರೋಪಕ್ಕೆ ತುತ್ತಾಗಿ ಕ್ರಿಕೆಟ್‌ನಿಂದ ಅಮಾನತುಗೊಳ್ಳುವುದರೊಂದಿಗೆ ಐಪಿಎಲ್‌ನ ಆಶಯದ ಮೇಲೆ ಕರಿ ನೆರಳು ಮೂಡಿದೆ.
ಉದ್ದಿಮೆದಾರರು ಐಪಿಎಲ್‌ನ ಪ್ರಮುಖ ಪಾಲುದಾರರು. ಅವರಿಗೆ ಬ್ಯುಸಿನೆಸ್ ಎಂದರೆ ಒಂದು ರೂ ಚೆಲ್ಲಿ ಎಷ್ಟು ಆಗುತ್ತೋ ಅಷ್ಟನ್ನು ಬಾಚಿಕೊಳ್ಳುವುದು. ಹೆಚ್ಚು ಆದಾಯ ಬಂದಷ್ಟು ಅವರಿಗೆ ಖುಷಿಯೂ ಜಾಸ್ತಿ. ಇದು ವ್ಯವಹಾರ ಧರ್ಮ. ಐಪಿಎಲ್‌ನಿಂದ ಅವರಿಗೆ ಅದಾಯಗಳಿಸುವ ಹೊಸ ದಾರಿಯ ಗೋಚಾರವಾಗುವುದೇನೋ ಸರಿ ಆದರೆ ಅವರು ಈಗಾಗಲೇ ತಾವು ಗಳಿಸಿದ ಕರಿ ಹಣವನ್ನು ಬಿಳಿ ಹಣವನ್ನಾಗಿ ಮಾಡಲು ಐಪಿಎಲ್‌ನ ದಾರಿಯನ್ನು ಹಿಡಿದಿದ್ದಾರೆ ಎಂಬುದು ಹಲವು ಕಡೆಗಳಿಂದ ಕೇಳಿ ಬರುತ್ತಿರುವ ಗಟ್ಟಿ ಆರೋಪ. ಈ ಬಗ್ಗೆ ೨೦೧೧ರ ಆಗಸ್ಟ್ ೨ರಂದು ಆರ್ಥಿಕ ಸ್ಥಾಯಿ ಸಮಿತಿಯು ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು.
ಐಪಿಎಲ್ ಸ್ಪಾಟ್ ಫಿಕ್ಸಿಂಗ್‌ನ ಕಳಂಕಿತ ಕ್ರಿಕೆಟಿಗರಲ್ಲಿ ಮೋನಿಶ್ ಶರ್ಮಾ ಕೂಡ ಒಬ್ಬ. ಆತ ಅಂತರಾಷ್ಟ್ರೀಯ ಕ್ರಿಕೆಟ್ ಆಡದ ಕಾರಣ ಆತನಿಗೆ ಯಾವುದೇ ಐಪಿಎಲ್ ಪ್ರಾಂಚೈಸಿ ಕೊಡಬಹುದಾದ ಗರಿಷ್ಠ ಹಣ ೩೦ ಲಕ್ಷ. ಆದರೆ ಅವನಿಗೆ ಪುಣೆ ವಾರಿಯರ‍್ಸ್ ತಂಡದ ಪರ ಆಡಲು ೧.೫ ಕೋಟಿ ಸಿಕ್ಕಿದೆಯಂತೆ. ಅಂದರೆ ೧.೨ ಕೋಟಿ ರೂವನ್ನು ಪುಣೆ ತಂಡ ಅಕ್ರಮವಾಗಿ ಅವನಿಗೆ ನೀಡಿದೆ. ಆದರೆ ಅಮಾನತಿನ ಶಿಕ್ಷೆ ಮಿಶ್ರಾನಿಗೆ ಮಾತ್ರ ಸೀಮಿತ! ಇಲ್ಲಿ ನಿಜ ತಪ್ಪಿತಸ್ಥರಾದ ಪುಣೆ ತಂಡದ ಮಾಲೀಕರಿಗೆ ಯಾವುದೇ ಬೇಲಿಯ ಬಂಧನ ಇನ್ನೂ ಬಿದ್ದಿಲ್ಲ.
ಐಪಿಎಲ್‌ನ ಮೊದಲ ಮುಖ್ಯಸ್ಥ ಲಲಿತ್ ಮೋದಿಯನ್ನು ಕಿತ್ತೆಸೆದು, ಕೊಚ್ಚಿ ಟಸ್ಕರ‍್ಸ್ ತಂಡವನ್ನು ರದ್ದುಗೊಳಿಸಿ ಈಗ ಐವರು ಕ್ರಿಕೆಟಿಗರನ್ನು ಅಮಾನತುಗೊಳಿಸುವುದರ ಮೂಲಕ ತಮ್ಮ ಶುಭ್ರತೆಯ ಹಲ್ಲನ್ನು ಐಪಿಎಲ್ ಬೋರ್ಡ್ ತೋರಿಸುತ್ತಿದೆ. ಆದರೆ ಇದೇ ಐಪಿಎಲ್‌ನ ಸಂಘಟಕರು ಕಳೆದ ವರ್ಷ ತಮ್ಮ ಸಂವಿಧಾನಕ್ಕೆ ತಿಲಾಂಜಲಿ ನೀಡಿ ಮುಂಬೈ ತಂಡ ಐವರು ವಿದೇಶಿ ಕ್ರಿಕೆಟಿಗರನ್ನು ಆಡಿಸಲು ಅನುಮತಿ ನೀಡಿತ್ತು, ಈ ವರ್ಷ ಕ್ರಿಸ್ ಗೈಲ್‌ರನ್ನು ಬೆಂಗಳೂರು ತಂಡ ಉಳಿಸಿಕೊಳ್ಳುವಂತೆ ಮಾಡಿತ್ತು, ಪುಣೆ ತಂಡದ ತಕರಾರುಗಳ ಜೊತೆ ರಾಜಿ ಮಾಡಿಕೊಂಡಿತ್ತು ಹೀಗೆ ತಂಡಗಳ ಮಾಲೀಕರ ಹಿತಾಸಕ್ತಿಗಳಿಗೆ ಐಪಿಎಲ್ ಸದಾ ಸ್ಪಂದಿಸುತ್ತಿದೆ.
ಪಂದ್ಯಗಳ ನಡುವೆ ಟಿವಿ ವಾಹಿನಿಗಳ ಜಾಹೀರಾತು ದಾಹ ತೀರಿಸಲು ಟೈಮ್ ಔಟ್ ಜಾರಿಗೆ ತಂದದ್ದು ಪಂದ್ಯ ಮುಗಿದ ಬಳಿಕ ಅಧಿಕೃತ ಪಾರ್ಟಿಗಳನ್ನು ನಡೆಸುತ್ತಿರುವುದೆಲ್ಲ ಹಣದಾಸೆಗೆಯೇ ಹೊರತು ಮತ್ತೆನಕ್ಕೂ ಅಲ್ಲ. ಒಂದು ಕ್ರೀಡೆ ಕೆಲವೇ ಕೆಲವರ ಧನಪಿಶಾಚಿಯನ್ನು ಬಿಡಿಸಲು ಬಳಕೆಯಾದಾಗ, ದೊಡ್ಡವರ  ಅವ್ಯವಹಾರವನ್ನು ಮುಚ್ಚಿಡಲು ಸಾಧನವಾದಗ ಮತ್ತು ಈ ಆವಾಂತರಗಳಿಗೆ ಮನರಂಜನೆಯ ಲೇಪ ಸಿಕ್ಕಾಗ ಈಗ ನಡೆಯುತ್ತಿರುವ, ಬಯಲಾಗುತ್ತಿರುವ ಭಾನಗಡಿಗಳು ಸಂಭವಿಸುತ್ತವೆ!
ಅತ್ಯಾಚಾರ ಯತ್ನ, ರೇವ್ ಪಾರ್ಟಿ ಪ್ರಕರಣಗಳನ್ನು ಮೈದಾನದಾಚೆಗಿನ ಪ್ರಕರಣ ಎಂದು ಹೇಳಿ ಐಪಿಎಲ್ ಸಂಘಟಕರು ಬಚಾವಾಗಬಹುದು. ಆದರೆ ಯುವ ಕ್ರಿಕೆಟಿಗರಿಗೆ ಹಣ, ಮದ್ಯ, ಮಾನಿನಿ ಪೂರೈಕೆಯಾಗುವ ಸಂದರ್ಭದಲ್ಲಿ ಅವರು ದಾರಿ ತಪ್ಪದಂತೆ ನೋಡಿಕೊಳ್ಳುವ ಜವಾಬ್ದಾರಿ ಸಂಘಟಕರದ್ದೆ ಆಗಿರುತ್ತದೆ. ಏಕೆಂದರೆ ಪಂದ್ಯದ ಬಳಿಕ ಪಾರ್ಟಿ ಕಲ್ಚರ್‌ನ್ನು ಜಾರಿಗೆ ತಂದದ್ದು ಐಪಿಎಲ್ ಸಂಘಟಕರೆ. ಐಪಿಎಲ್ ಸಂಘಟಕರು ಪಾರ್ಟಿ ಮಾಡಬೇಡಿ ಎಂದು ಸ್ಪಷ್ಟವಾಗಿ ಹೇಳಿದ್ದೆ ಆದರೆ ಅಲ್ಲಿ ಸಮಸ್ಯೆಗಳು ಇರುವುದಿಲ್ಲ.
ಭಾರತೀಯ ಕ್ರೀಡಾಪ್ರೇಮಿಗಳಿಗೆ ಶ್ರೀಮಂತ ಕ್ರಿಕೆಟಿಗರು ಬೇಕಾಗಿಲ್ಲ, ಸಂಸ್ಕಾರವಂತ ಕ್ರಿಕೆಟಿಗರು ಬೇಕು. ಅದಕ್ಕಾಗಿಯೆ ಇಂದಿಗೂ ಸಚಿನ್, ದ್ರಾವಿಡ್, ಕುಂಬ್ಳೆ, ಶ್ರೀನಾಥ್ ಎಂದರೆ ಎದೆಯಲ್ಲಿ ಗೌರವದ ಅಲೆ ತನ್ನಿಂದ ತಾನೆ ಎದ್ದಿರುತ್ತದೆ. ಅವರನ್ನು ಯಾವುದೇ ಅಭಿಮಾನಿ ಮೈದಾನ, ಮೈದಾನದಾಚೆಗಿನ ವ್ಯಕ್ತಿತ್ವ ಎಂದು ವಿಂಗಡಿಸುವ ಗೋಜಿಗೆ ಹೋಗುವುದಿಲ್ಲ. ಅದೇ ಯುವ ಕ್ರಿಕೆಟಿಗರಿಗೆ ಸಂಬಂಧಿಸಿದಂತೆ ಮಾತನಾಡುವಾಗ ಅವನು ಚೆನ್ನಾಗಿ ಆಡುತ್ತಾನೆ ಅಷ್ಟೆ ಎಂದು ಹೇಳಿ ಅಲ್ಲಿಗೆ ಮಾತು ನಿಲ್ಲಿಸುವುದು ಇದೇ ಕಾರಣಕ್ಕಾಗಿ. ಅವರಿಗೆ ಫ್ರಾಂಚೈಸಿಗಳ ಮಾಲೀಕರು ಕೋಟಿ ಕೋಟಿ ಸುರಿದರು ಕೂಡ ಅವರ‍್ಯಾರು ಜನರ ಹೃದಯದಲ್ಲಿ ನೆಲೆ ನಿಲ್ಲಲಾರರು.
ಈ ಬಾರಿ ಐಪಿಎಲ್‌ನ ಅನೇಕ ಪಂದ್ಯಗಳ ನಿರ್ಣಾಯಕ ಸಂದರ್ಭಗಳಲ್ಲಿ ಬೌಲರ್‌ಗಳು ಪುಲ್ಟಾಸ್ ಎಸೆದು ಸಿಕ್ಸ್ ಹೊಡೆಸಿಕೊಂಡಿರುವುದನ್ನು ಈಗ ಅನುಮಾನದ ದೃಷ್ಟಿಯಿಂದ ನೋಡದೆ ವಿಧಿಯಿಲ್ಲ.
ಈ ಐದು ವರ್ಷದಲ್ಲಿ ಬಯಲಾದ ಎಲ್ಲಾ ಹಗರಣಗಳು ಏನೇನೂ ಅಲ್ಲ. ಐಪಿಎಲ್ ಎಂಬ ಹುತ್ತದಲ್ಲಿ ಲೆಕ್ಕವಿಲ್ಲದಷ್ಟು ಅಕ್ರಮ, ಅವ್ಯವಹಾರ, ಅನೈತಿಕ ಸಂಗತಿಗಳ ಘಟಸರ್ಪಗಳು ಅವಿತು ಕೂತಿವೆ. ಅದಕ್ಕಾಗಿಯೇ ಫಿಕ್ಸಿಂಗ್ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಬಿಸಿಸಿಐ ನೆಲದ ಕಾನೂನಿನಡಿ ಕೆಲಸ ನಿರ್ವಹಿಸುವ ಸಂಸ್ಥೆಗಳಿಗೆ ಕೊಟ್ಟಿಲ್ಲ.
ಐಪಿಎಲ್‌ಗೆ ಬಾಲಗ್ರಹ ಪೀಡೆಯಿದೆ. ಯಾವುದೆ ಕ್ರೀಡಾಕೂಟ ೫ ವರ್ಷ ಪೂರೈಸಿದೆ ಎನ್ನುವುದು ಇತಿಹಾಸದಲ್ಲಿನ ಚಿಕ್ಕ ತುಣುಕು ಅಷ್ಟೆ. ಅದು ಮುಂದೆ ದಶಕ, ಶತಮಾನಗಳ ಕಾಲ ಬದುಕುವ ಆಯುಷ್ಯ ಹೊಂದಿರುತ್ತದೆ. ಈ ದೀರ್ಘಾವಧಿಯ ಪಯಣದಲ್ಲಿ ತೊಡಕು, ತೊಡರುಗಳು ವಿವಾದಗಳು ಸರ್ವೇ ಸಾಮಾನ್ಯ. ಒಲಿಂಪಿಕ್ಸ್ ಕ್ರೀಡಾಕೂಟ ಕೂಡ ಇದಕ್ಕೆ ಹೊರತಲ್ಲ. ಆದರೆ ಪಂಚ ವರ್ಷದಲ್ಲೇ ಸಾಕಷ್ಟು ಪಂಚ್ ತಿಂದಿರುವ ಐಪಿಎಲ್‌ನ ಬುಡವೇ ಸರಿಯಿಲ್ಲ ಎಂದಾದ ಮೇಲೆ ಅದಕ್ಕೆ ಅಕಾಲ ಮರಣ ಬರುವುದು ನಿಶ್ಚಿತ.
ಕೆಲವೊಮ್ಮೆ ಗುರಿ ಸರಿ ಇದ್ದರೆ ಯಾವುದೇ ದಾರಿ ಹಿಡಿದಾದರೂ ಅದನ್ನು ಸಾಧಿಸಬೇಕು ಅಥವಾ ಗುರಿ ಸಾಧನೆ ತಡವಾದರು ತೊಂದರೆಯಿಲ್ಲ ಆದರ್ಶದ ದಾರಿಯಲ್ಲೆ ಸಾಗಬೇಕು ಇದರಲ್ಲಿ ಎರಡನೇ ಅಂಶ ಅತ್ಯುತ್ತಮವಾಗಿದ್ದರೂ ಕೂಡ ಮೊದಲನೇಯ ಅಂಶವನ್ನು ಕೆಲವು ಸಂದರ್ಭಗಳಲ್ಲಿ ಸಮರ್ಥಿಸಿಕೊಳ್ಳಬಹುದೇನೋ. ಆದರೆ ಐಪಿಎಲ್‌ನ ಗುರಿಯೇ ಸರಿಯಿಲ್ಲ ಎಂದ ಮೇಲೆ ಅದು ಸಾಗುವ, ಸಾಗುತ್ತಿರುವ ದಾರಿ ಹೇಗೆ ತಾನೆ ಸರಿ ಇರಲು ಸಾಧ್ಯ?

Friday, March 23, 2012

ಅವನಿಗೆ ಬಿಟ್ಟದ್ದು

ಇರುಳಿರುಳು
ಉರುಳುರುಳಿ
ಇರುವಲ್ಲಿ,
ಸರಸರನೆ ಉರಿಉರಿಯ ಹೊರಟ
ಬೆಳ್-ಬೆಳಕ ದೀಪ
ಬುಡದ ಜೀವ ಬರಿಬರಿದಾಗಿ
ಸೊರಸೊರಗಿ, ಕರಕರಗಿ
ಅತ್-ಅತ್ತಿಂದಿತ್ತ, ಇತ್-ಇತ್ತಿಂದತ್ತ
ಗಿರಗಿರನೇ ಓಲಾಡಿ ಹೊರಳಾಡುವ
ಕರಿ ಕರಾಳ ಶಾಪ

ಬೆಳ್-ಬೆಳಕಿನ ಮೇಲೆ
ಗುಂಯ್ ಗಾಳಿಯ ದಾಳಿ
ಬೆಳ್-ಬೆಳಕಿಗೆ
ಸುಳ್-ಸುಳಿದ ಪತಂಗದ ಸುಳಿ

ಮೋಹನ ಮುರುಳಿ
ಮರಮರಳಿ ತೆರತೆರಳಿ
ಹೊರಹೊರಳಿ ಈ ಕಟ್ಟಿರುಳಲ್ಲಿ
ಕಾಣುವನೇ ಬೆಳ್-ಬೆಳಕ?
ಬೇಕು ಅವ ಕಾಣಬೇಕು
ಒಳಗೋ ಹೊರಗೋ
ಇಟ್ಟು ಬಾ ಹೊಸಿಲಲ್ಲಿ
ಅವನದನ್ನು ಇಟ್ಟುಕೊಳ್ಳಲಿ
ಒಳಗೋ ಹೊರಗೋ

Thursday, February 16, 2012

" ಯಹ್ ದಿಲ್ಲಿ ಹೇ ದಿಲ್‌ವಾಲೊಂಕಿ" ಎಂಬುದನ್ನು ಆತ ನನಗೆ ತೋರಿಸಿಕೊಟ್ಟಿದ್ದ

ಸುಪ್ರೀಂ ಕೋರ್ಟ್‌ನ ಮುಂದೆ ಇಂದು ನಮ್ಮ ರಾಜ್ಯಕ್ಕೆ ಸಂಬಂಧಪಟ್ಟ ಯಾವುದೇ ಪ್ರಕರಣಗಳು ಇಲ್ಲ ಮತ್ತು ಎಂದು ಖಾತ್ರಿ ಮಾಡಿಕೊಂಡ ಬಳಿಕ ಕಚೇರಿಗೆ ಆರಾಮವಾಗಿಯೇ ಹೊರಟಿದ್ದೆ. ಅಪಾರ್ಟ್‌ಮೆಂಟ್‌ನಿಂದ ಹೊರ ಬರುತ್ತಲೆ ರಿಕ್ಷಾವೊಂದು ಬಂತು. ಅದನ್ನು ಏರಿ ಆತ್ಮೀಯರಿಗೆ ಮೆಸೇಜ್ ಕಳಿಸುವ ನನ್ನ ನಿತ್ಯ ಪೂಜೆಯನ್ನು ಶುರು ಮಾಡಿಕೊಂಡೆ. ನಮ್ಮಲ್ಲಿಂದ ಕೌಶಂಬಿ ಮೆಟ್ರೋ ಸ್ಟೇಶನ್‌ಗೆ ೧೫ ನಿಮಿಷಗಳ ಪ್ರಯಾಣ (ಟ್ರಾಫಿಕ್ ಇಲ್ಲದೇ ಹೋದರೆ). ಮೆಟ್ರೋ ಸ್ಟೇಶನ್‌ನ ಬಳಿ ರಿಕ್ಷಾ ಇಳಿದು ಹಣ ಕೊಡೋಣ ಎಂದು ಕಿಸೆಗೆ ಕೈ ಹಾಕಿದರೆ ಪರ್ಸ್ ಇಲ್ಲ. ತಕ್ಷಣವೇ ಶಾಕ್ ಹೊಡೆದಂತೆ ಆಯಿತು. ಇದೀಗ ಕೆಲಸ ಕೆಟ್ಟಿತ್ತು ಅಂತ ಅಂದು ಕೊಂಡರು ವಿಚಲಿತನಾಗಲಿಲ್ಲ. ಪರ್ಸ್ ಮನೆಯಲ್ಲೆ ಬಿಟ್ಟಿದ್ದೇನಾ ಅಥವಾ ಪಿಕ್ ಪಾಕೆಟ್ ಅಯಿತಾ ಅಥವಾ ಎಲ್ಲದರೂ ಬಿತ್ತಾ ಎಂಬ ಗೊಂದಲ ತಲೆಯಲ್ಲಿ ಫ್ಯಾನ್‌ನಂತೆ ತಿರುಗುತ್ತಿತ್ತು. ಹಾಗಂತ ಮೊದಲ ಕಾರಣವನ್ನು ಈ ರಿಕ್ಷಾ ಡ್ರೈವರ್ ಜೊತೆ ಹೇಳುವ ಹಾಗಿಲ್ಲ. ಹೇಳಿದ್ದೆ ಆದರೆ ಅವನು ಯಾವ ಭಾಷೆ ಪ್ರಯೋಗ ಮಾಡುತ್ತಾನೆ ಅನ್ನುವುದು ತಕ್ಷಣವೆ ಫ್ಲಾಶ್ ಆಗಿ ಹೋಗಿತ್ತು. ಇನ್ನು ಯಾರಾದರೂ ಪಿಕ್ ಪಾಕೆಟ್ ಮಾಡಿದ್ದಾರೆ ಎಂದು ಸುಮ್ಮನೆ ಹೇಳುವುದು ಸರಿಯಲ್ಲ. ಏನು ಮಾಡುವುದು ಅಂದು ಕೊಂಡು ತಕ್ಷಣವೇ ಪರ್ಸ್ ಹುಡುಕುವ ರೀತಿ ಮಾಡಿದೆ. ಪರ್ಸ್ ಸಿಗಲೇ ಇಲ್ಲ. ನಾನು ಸಾಮಾನ್ಯವಾಗಿ ನನ್ನ ಪ್ಯಾಂಟ್‌ನ ಮುಂದಿನ ಕಿಸೆಯಲ್ಲಿ ನೂರಿನ್ನೂರು ರೂಪಾಯಿ ಇಟ್ಟುಕೊಂಡಿರುತ್ತೇನೆ. ಆದರೆ ಇಂದು ಆ ರೀತಿಯೂ ಮಾಡಿಲ್ಲ ಎಂಬುದನ್ನು ಕಿಸೆಗೆ ಕೈ ಹಾಕಿ ಖಾತ್ರಿ ಪಡಿಸಿಕೊಂಡೆ. ಸರಿ, ರಿಕ್ಷಾದವನಿಗೆ ನನ್ನ ಸ್ಥಿತಿ ಅರ್ಥವಾಯಿತು. ಅವನು ಏನೂ ಹೇಳಲಿಲ್ಲ. ನನ್ನ ಪುಣ್ಯ. ನನ್ನನ್ನು ಅಲ್ಲೇ ಬಿಟ್ಟು ಮುಂದೆ ಹೋದ. ನನ್ನ ಪ್ರಕಾರ ಅವನು ಮಾಡಿದ ದೊಡ್ಡ ಪುಣ್ಯದ ಕೆಲಸ ಅದೇ.

ನಿಂತಿದ್ದೇನೆ ರಸ್ತೆ ಬದಿಯಲ್ಲಿ. ಮೆಟ್ರೋದಲ್ಲಿ ಕಚೇರಿಗೆ ಹೋಗಲು ಕೂಡ ಸಾಧ್ಯವಿರಲಿಲ್ಲ ಏಕೆಂದರೆ ನನ್ನ ಮೆಟ್ರೋ ಕಾರ್ಡ್ ಪರ್ಸ್‌ನಲ್ಲೆ ಇತ್ತು. ಅದರ ಜೊತೆಗೆ ಡೆಬಿಟ್ ಕಾರ್ಡ್, ವಿಸಿಟಿಂಗ್ ಕಾರ್ಡ್, ವೋಟರ್ ಕಾರ್ಡ್, ಪಾನ್ ಕಾರ್ಡ್, ಪೆನ್ ಡ್ರೈವ್, ಒಂದಷ್ಟು ಹಣ ಎಲ್ಲವೂ ಇತ್ತು. ಸರಿ, ಈಗ ಏನು ಮಾಡೋಣ ಅಂತ ಯೋಚಿಸಿದೆ. ನಾನು ಆ ಕ್ಷಣ ಎದೆ ಗುಂದಿಯೂ ಇರಲಿಲ್ಲ, ಆತಂಕಿತನೂ ಆಗಿರಲಿಲ್ಲ. ಅಗತ್ಯಬಿದ್ದರೆ ನಡೆದುಕೊಂಡು ಹೋಗಲು ಕೂಡ ಸಿದ್ಧನೇ ಆಗಿದ್ದೆ. ಏಕೆಂದರೆ ದೆಹಲಿಯಲ್ಲಿ ಒಂದು ಸಲ ಮಧ್ಯ ರಾತ್ರಿಯಲ್ಲಿ ನಾನು ಪ್ರಕಾಶ್, ಮೇಲ್ವಿನ್ ಅಪರಾತ್ರಿಯ ಹೊತ್ತು ಸುಮಾರು ೭-೮ ಕಿಮೀ ನಡೆದಿದ್ದೇವು.
ಈಗ ಸಾವಧಾನವಾಗಿ ನನ್ನ ಮುಂದಿದ್ದ ಆಯ್ಕೆಗಳ ಬಗ್ಗೆ ಯೋಚಿಸಿದ್ದೆ. ೧) ಯಾರಲ್ಲದರೂ ಕಾಡಿ ಬೇಡಿ ಹಣ ಪಡೆದು ಕಚೇರಿಗೆ ಹೋಗಿ ಅಲ್ಲಿ ಮತ್ತೇ ಗೆಳೆಯರಿಂದ ಹಣ ಪಡೆದು ಇವರಿಗೆ ವಾಪಾಸ್ ಕೊಡುವುದು. ಆದರೆ ಆ ಸಾಧ್ಯತೆ ವರ್ಕ್‌ಔಟ್ ಆಗುತ್ತೆ ಅನ್ನುವ ನಂಬಿಕೆ ನನಗಿರಲಿಲ್ಲ. ಏಕೆಂದರೆ ಅ ಹೊತ್ತಿನಲ್ಲಿ ನನಗೆ ೨೦ ರೂಪಾಯಿ ಸಾಕಿದ್ದರೂ ಕೂಡ ಅದನ್ನು ಕೇಳಬೇಕು, ಕೊಡಬೇಕು ಅದೆಲ್ಲ ಆಗುವಂತದ್ದಲ್ಲ ಎಂದು ಕೊಂಡೆ.

೨) ಯಾರನ್ನದರೂ ಗೆಳೆಯ ಅಥವಾ ಗೆಳತಿಯನ್ನು ಇಲ್ಲಿಗೆ ಬರ ಹೇಳಿ ನಂತರ ಅವರ ಜೊತೆ ಹೋಗುವುದು ಅಥವಾ ಅವರಿಂದ ಹಣ ಪಡೆದು ನನ್ನ ಕೆಲಸ ಮುಂದುವರಿಸುವುದು. ದೆಹಲಿಯಲ್ಲಿ ನನಗೆ ಸ್ನೇಹಿತರು ಸಾಕಷ್ಟಿದ್ದರು ಕೂಡ ಅವರು ನನ್ನಿದ್ದ ಸ್ಥಳಕ್ಕೆ ಬರಲು ಕನಿಷ್ಠ ಪಕ್ಷ ೧ ಗಂಟೆಯಾದರೂ ಬೇಕಿತ್ತು. ಇರಲಿ ಈ ಆಯ್ಕೆ ಎಂದು ಕೊಂಡೆ.

೩) ಇನ್ನು ಪ್ರಕಾಶ್ ನೈಟ್ ಶಿಫ್ಟ್ ಮಾಡಿ ಬಂದು ಮಲಗಿದ್ದಾರೆ ಅದ್ದರಿಂದ ಅವರಿಗೆ ಕಾಲ್ ಮಾಡಿದರೆ ಸಮಸ್ಯೆ ಸುಲಭವಾಗಿ ಪರಿಹಾರವಾಗುತ್ತೆ ಆದರೆ ಅವರು ಕಾಲ್ ರಿಸೀವ್ ಮಾಡುವುದೇ ಸಂಶಯ. ಏಕೆಂದರೆ ನಾನು ರೂಮ್‌ಲ್ಲಿದ್ದಾಗಲೇ ಅವರಿಗೆ ಒಂದು ಕರೆ ಬಂದಿತ್ತು. ಮೊಬೈಲ್ ಟೇಬಲ್‌ನ ಮೇಲಿತ್ತು. ನಾನು ಆ ಕರೆ ಅನ್‌ನೋನ್ ನಂಬರ್‌ನಿಂದ ಬಂದಿದ್ದ ಕಾರಣಕ್ಕೆ ಅದನ್ನು ರಿಸೀವ್ ಮಾಡದೆ ಟೇಬಲ್ ಮೇಲೆಯೇ ಇಟ್ಟಿದ್ದೆ. ಆದ ಕಾರಣ ಅವರಿಗೆ ಕಾಲ್ ಮಾಡಿದರೂ ಅವರು ರಿಸೀವ್ ಮಾಡೋದಿಲ್ಲ ಅನ್ನುವುದು ಗೊತ್ತಿತ್ತು. ಇರಲಿ ಕೆಲವೊಮ್ಮೆ ಮಂತ್ರಕ್ಕೂ ಮಾವಿನ ಕಾಯಿ ಉದುರುತ್ತದೆ ಎಂದು ಕೊಂಡು ಕಾಲ್ ಮಾಡಿದೆ. ಯಾವ ಮಂತ್ರವೂ ನಡೆಯಲಿಲ್ಲ. ಇನ್ನು ಗುಡಿ ಕೂಡ ಮಲಗಿದ್ದಾನೆ. ಆದರೆ ಅವನು ನಾನು ಹೊರಡುವಾಗ ಇನ್ನು ಮೊಬೈಲ್ ಸ್ವಿಚ್ ಆಫ್ ಮಾಡಿ ಮಲಕ್ಕೋಬೇಕು ಎಂದು ಹೇಳಿದ್ದ. ಅದ್ದರಿಂದ ಅವನು ಕಾಲ್ ರಿಸಿವ್ ಮಾಡಲಾರ ಎಂದು ಕೊಳ್ಳುತ್ತಲೇ ಕಾಲ್ ಮಾಡಿದೆ. ಸ್ವಿಚ್ ಆಫ್ ಬಂತು. ಅವರು ಕಾಲ್ ರಿಸೀವ್ ಮಾಡಿದ್ರೆ ಅವರನ್ನು ಆದಿತ್ಯ ಮಾಲ್‌ನ ಮುಂದೆ ಬರ ಹೇಳಿ ಅವರಿಂದ ಹಣ ಪಡೆದುಕೊಂಡು ರಿಕ್ಷಾದವನಿಗೆ ಕೊಡಬಹುದಿತ್ತು ಅಥವಾ ಅವರನ್ನೇ ಇಲ್ಲಿಗೆ ಬರ ಹೇಳಬಹುದಿತ್ತು. ಹೀಗೆ ಚಿಟಿಕೆ ಹೊಡೆಯುವಷ್ಟರಲ್ಲಿ ಸಮಸ್ಯೆ ಪರಿಹಾರವಾಗುತ್ತಿತ್ತು.

೪) ಇನ್ನು ಯಾವುದಾದರೂ ಗಾಡಿಯವರಲ್ಲಿ ಡ್ರಾಪ್ ಕೇಳುವ ಆಯ್ಕೆ ನನ್ನ ಮುಂದಿತ್ತು. ಆದರೆ ಅದೆಲ್ಲ ಬೇಡ ಎಂದು ಕೊಂಡೆ.
ಏನೇ ಆಗಲಿ, ನಾನು ಇಲ್ಲಿ ನಿಂತು ಏನು ಮಾಡಲಾಗದು. ರಸ್ತೆ ದಾಟಲೇ ಬೇಕು. ಇಲ್ಲಿ ಸೀದಾ ರಸ್ತೆ ದಾಟುವ ಹಾಗಿಲ್ಲ. ಮೆಟ್ರೋದವರು ಮಾಡಿರುವ ಸೇತುವೆಯ ಮೂಲಕ ಸಾಗಬೇಕು. ಆ ಕೆಲಸ ಮೊದಲು ಮಾಡೋಣ ಎಂದು ಅನಿಸಿತು.

ಅದರೆಡೆಯಲ್ಲಿ ಪರ್ಸ್ ಮತ್ತದರ ಒಳಗಿರುವುದು ಏನಾಯಿತು ಎಂಬ ಚಿಂತೆ. ಏಕೆಂದರೆ ಕೆಲವು ತಿಂಗಳ ಹಿಂದೆ ನನ್ನ ಮೊಬೈಲ್ ಪಿಕ್ ಪಾಕೆಟ್ ಆಗಿತ್ತು. ಒಂದೂವರೆ ತಿಂಗಳ ಹಿಂದೆಯಷ್ಟೆ ಪ್ರಕಾಶ್ ದಾರುಣವಾಗಿ ತನ್ನ ಮೊಬೈಲ್ ಕಳೆದುಕೊಂಡಿದ್ದರು. ಆದರೂ ಈ ಬಾರಿ ನನ್ನಲ್ಲಿ ಅದೇನೋ ಅತ್ಮವಿಶ್ವಾಸವಿತ್ತು. ಈಗ ಈ  ಸಮಸ್ಯೆಯನ್ನು ಮೊದಲು ಪರಿಹರಿಸಿಕೋ ಮತ್ತು ಉಳಿದದ್ದೆಲ್ಲ ಯೋಚನೆಗಳು ಎಂದು ಅಂದು ಕೊಂಡೆ. ಇಲ್ಲ, ನನ್ನ ಪರ್ಸ್ ಮನೆಯಲ್ಲೇ ಇದೆ ಎಂದು ಒಳ ಮನಸ್ಸು ಹೇಳುತ್ತಿತ್ತು.

ಈಗ ರಿಕ್ಷಾದಲ್ಲಿ ಹೋಗುವುದಾದರೆ ಎರಡು ಆಯ್ಕೆಗಳು. ಒಂದೋ ಅತ್ತ ಹೋಗುವ ಸವಾರಿ ರಿಕ್ಷಾದಲ್ಲಿ ಹೋಗಬೇಕು. ಇಲ್ಲವಾದರೆ ರಿಕ್ಷಾವನ್ನು ಬಾಡಿಗೆ ಮಾಡಿಕೊಂಡು ಹೋಗಬೇಕು. ಸವಾರಿ ರಿಕ್ಷಾದಲ್ಲಿ ಹೋದರೆ ೧೦ ರೂಪಾಯಿಯಲ್ಲಿ ರೂಮ್ ಸೇರಿಕೊಳ್ಳಬಹುದು. ಆದರೆ ಅವನನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ರೂಮ್‌ಗೆ ಹೋಗಿ ಹಣ ತರುವುದು ಕಷ್ಟ ಕಷ್ಟ. ಅವ ಪಿರಿಪಿರಿ ಮಾಡಿಯೇ ಮಾಡುತ್ತಾನೆ. ನಮ್ಮ ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿಯವರ ಪರಿಚಯ ನನಗಿದೆ. ಅವರ ಕೈಯಿಂದ ಹಣ ತೆಗೆದುಕೊಡಬಹುದು. ಅದರೆ ಅದಕ್ಕೂ ೨ ನಿಮಿಷ ತೆಗೆದುಕೊಳ್ಳುತ್ತದೆ. ರಸ್ತೆ ದಾಟಬೇಕಾಗುತ್ತದೆ. ನಂತರ ನನ್ನ ಪರಿಚಯದ ಸೆಕ್ಯೂರಿಟಿಯವರೇ ಇದ್ದಾರೆ ಎಂದು ಹೇಳಲಾಗದು. ಬೇಡ, ಬೇಡ ಅದು ಸಾಧ್ಯವೇ ಇಲ್ಲ. ಇನ್ನೂ ಏನೇ ಆಗಲಿ ರಿಕ್ಷಾ ಮಾಡಿಕೊಂಡೆ ಹೋಗೋಣ. ೫೦ ರೂಪಾಯಿ ಕೇಳಬಹುದು. ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂನೂ ಕಳ್ಳನೇ. ಈಗ ಆನೆಗೆಯೇ ಕೈ ಹಾಕೋಣ ಎಂದು ಕೊಂಡೆ! ರಿಕ್ಷಾ ಮಾಡಿದರೆ ಅವನನ್ನು ೩-೪ ನಿಮಿಷ ನಿಲ್ಲಿಸಿ ರೂಮ್‌ಗೆ ಹೋಗಿ ಪರ್ಸ್ ತರಬಹುದು ಅನ್ನುವುದು ನನ್ನ ಲೆಕ್ಕಾಚಾರವಾಗಿತ್ತು.

ಸೇತುವೆಯ ಮೆಟ್ಟಿಲುಗಳನ್ನು ಇಳಿಯುತ್ತಲೇ ಹತ್ತಾರು ರಿಕ್ಷಾದವರು ಗಾಜಿಪುರ, ಇಂದಿರಾಪುರ, ಬಾಸಠ್, ರೈಲ್ವೇ ವಿಹಾರ್, ಕಾಳ ಪತ್ಥರ್ ಎಂದು ಬೊಬ್ಬಿರಿದು, ಕೈ ಬೀಸಿ, ಕೈ ಅಡ್ಡ ಹಿಡಿದು ಕರೆಯುತ್ತಿದ್ದರು. ಇನ್ನು ೭-೮ ಮೆಟ್ಟಿಲುಗಳ ಬಾಕಿ ಇರುವಾಗಲೇ ಅವರನ್ನೆಲ್ಲ ಅರೆ ಕ್ಷಣ ನಿಂತು ನೋಡಿದೆ. ಇವರು ಯಾರೂ ಕೂಡ ಒಬ್ಬ ಮನುಷ್ಯನನ್ನು ಕರೆಯುತ್ತಿಲ್ಲ, ನನ್ನ ಕಿಸೆಯೊಳಗಿರುವ ಪರ್ಸ್‌ನಲ್ಲಿರುವ ಆ ೧೦ ರೂಪಾಯಿಯನ್ನು ಕರೆಯುತ್ತಿದ್ದಾರೆ ಎಂದು ಅನಿಸಿತ್ತು. ನನಗಿಂತ ನನ್ನಲ್ಲಿರಬಹುದಾದ ೧೦ ರೂಪಾಯಿಯೇ ಅವರಿಗೆ ಅಗತ್ಯ ಮತ್ತು ಬೇಕಾಗಿರುವುದು ಎಂದು ಮನಸ್ಸು ಹೇಳುತ್ತಿತ್ತು.

ಅಷ್ಟರಲ್ಲೇ ನನ್ನ ಆಪ್ತ ಸ್ನೇಹಿತ ನನ್ನ ಸಹಾಯಕ್ಕೆ ಬಂದೇ ಬಿಟ್ಟ. ನಾನು ಮೆಟ್ಟಿಲು ಇಳಿದು ಹತ್ತಾರು ರಿಕ್ಷಾಗಳನ್ನು ನೋಡುತ್ತಿದ್ದಾಂತೆ ಈ ಎಲ್ಲ ರಿಕ್ಷಾಗಳ ಸಂತೆಯಿಂದ ದೂರ ಇದ್ದ ಒಂದು ರಿಕ್ಷಾ ನನ್ನ ಗಮನ ಸೆಳೆಯಿತು. ಅದು ಹೇಗೋ, ಏನೋ ಗೊತ್ತಿಲ್ಲ ಆ ರಿಕ್ಷಾದತ್ತ ದೌಡಾಯಿಸಿದೆ. ಬೇರೆ ಅನೇಕ ರಿಕ್ಷಾದವರು ಬಂದರು, ಕರೆದರು ನಾನು ಅವರಿಗೆ ಕ್ಯಾರೇ ಮಾಡದೆ ಆ ರಿಕ್ಷಾದತ್ತ ಸಾಗಿದೆ.

ಆ ರಿಕ್ಷಾದವನಲ್ಲಿ ಭೈಯ್ಯಾ, ಇಂದಿರಾಪುರಂಗೆ ಹೋಗಬೇಕಿತ್ತು ಎಂದು ಹೇಳಿದೆ. ಸರಿ, ಬಾ ಕೂತುಕೋ ಎಂದು ಅವನು ಹೇಳಿದ. ಎಷ್ಟಾಗುತ್ತದೆ? ಎಂದೆ. ’೬೦’ ಅಂದ. ಇಲ್ಲ, ಜಾಸ್ತಿಯಾಯಿತು ಎಂದೆ ಮತ್ತೆ ಎಷ್ಟು ಕೊಡುತ್ತಿ? ಎಂದಾಗ ೫೦ ಅಂದೆ. ಕೆಟ್ಟು ಬೀದಿಯಲ್ಲಿ ನಿಂತರೂ ಇದಕ್ಕೇನು ಕಮ್ಮಿ ಇಲ್ಲ ಎಂದು ಅದ್ಕೊಂಡು ೬೦ ರೂಪಾಯಿ ಎಂದು ಸರಿಯಾಗಿಯೇ ಹೇಳಿದ್ದಾನೆ ನನ್ನದೇ ಅಧಿಕ ಪ್ರಸಂಗ ಎಂದು ಕೊಂಡು ಆಯಿತು ಎಂದೆ. 

ಆಮೇಲೆ ನನ್ನ ಪ್ರವರ ಬಿಚ್ಚಿಟ್ಟೆ. ನೀನು ಮತ್ತೆ ಅಲ್ಲಿ ಬಂದು ಕಾಯಿಸಿದ್ದಕ್ಕೆ ಹಣ ಕೇಳಬಾರದು ಮತ್ತು ಹಣಕ್ಕಾಗಿ ೫ ನಿಮಿಷ ಕಾಯಬೇಕಾಗಬಹುದು ಎಂದೆ. ಅವನು ಹೇಳಿದ ಮಾತು ಹೀಗಿದೆ ಕೇಳಿ... ನಿಮ್ಮ ಕಾಫಿ, ತಿಂಡಿ ಆಗಿದೆಯಾ? ಬನ್ನಿ, ತಿಂದುಕೊಂಡು ಬರೋಣ, ನೀವು ನಾಚಿಕೆ ಪಡಬೇಡಿ. ಇಲ್ಲ, ಅಂದರೆ ಹೇಳಿ ಹಣ ನಾನು ಕೊಡುತ್ತೇನೆ, ನಿಮ್ಮನ್ನು ಉಚಿತವಾಗಿಯೇ ಮನೆ ತಲುಪಿಸುತ್ತೇನೆ ಎಂದ. ನನ್ನ ಬಾಯಿಂದ ಮಾತೇ ಹೊರಡಲಿಲ್ಲ. ಮೂಕವಿಸ್ಮಿತನಾಗುವುದು ಅಂತಾರಲ್ಲ ಹಾಗೇ ಆಗಿದ್ದೆ. ನಂತರ ಇಲ್ಲ, ಬೇಡ, ನಾವು ಹೋಗೋಣ ಎಂದೆ. ಸರಿ ಎಂದು ಅವ ಹೇಳಿದ.

ನಂತರ ಮಾತು ಮುಂದುವರಿಸುತ್ತ ಆತ, ಹಂ ಗರೀಬ್ ಹೇ ಲೇಕಿನ್ ಹಮಾರಾ ದಿಲ್ ಗರೀಬ್ ನಹಿ ಹೇ ಎಂದು ಆತ ಹೇಳಿದ ಮತ್ತು ಅದನ್ನು ಸಾಬೀತು ಪಡಿಸಿದ ಕೂಡ. ನಂತರ ಅಪಾರ್ಟ್‌ಮೆಂಟ್ ಬಳಿ ಕರೆದುಕೊಂಡು ಬಂದ. ಸೆಕ್ಯೂರಿಟಿ ಗಾರ್ಡ್‌ನವರು ನನ್ನ ಪರಿಚಯದವರೇ ಆಗಿದ್ದರು. ಅವರ ಕೈಯಿಂದ ೧೦೦ ರೂಪಾಯಿ ತೆಗೆದುಕೊಂಡು ಕೊಟ್ಟೆ. ಬಲವಂತವಾಗಿ ಚಿಲ್ಲರೆಯನ್ನು ನೀನೇ ಇಟ್ಟು ಕೋ ಎಂದೆ. ಮನಸ್ಸಿಲ್ಲದ ಮನಸ್ಸಿನಿಂದ ಆಯಿತು ಎಂದು ಹೇಳಿದ.

"ಯಹ್  ದಿಲ್ಲಿ ಹೇ ದಿಲ್‌ವಾಲೋಂಕಿ" ಎಂಬುದನ್ನು ಆತ ನನಗೆ ತೋರಿಸಿಕೊಟ್ಟಿದ್ದ. ಕಾಂಕ್ರಿಟ್ ಕಾಡಿನ ಜಟಿಲ ಬಲೆಗಳೊಳಗೆ, ಪೊದೆಗಳೊಳಗೆ ನಾವು ಬಿದ್ದು ತತ್ತರಿಸಿ ಸಿನಿಕರಾಗುತ್ತ ಸಾಗುತ್ತಿರುವಾಗ ಮಾನವೀಯತೆಯ ಅಚಲ ಮೂರ್ತಿಗಳಂತೆ ಕಾಣಿಸುವ ಇಂತಹವರು ಜೀವನಕ್ಕೆ ಸೌಂದರ್ಯ ತಂದುಕೊಡುತ್ತಾರೆ. ಇದೇ ಜೀವನದ ಸೌಂದರ್ಯ ಎಂಬುದುನ್ನು ಸಾಬೀತು ಪಡಿಸುತ್ತ ಅದರ ದರ್ಶನ ಮಾಡಿಸುತ್ತಾರೆ.

ಅಟೋಚಾಲಕರನ್ನು ಹಳದಿ ಭಯೋತ್ಪಾದಕರು ಎಂದೆ ಭಾವಿಸಿದ್ದ ನನ್ನ ಕಾಮಾಲೆ ಕಣ್ಣಿಗೆ ಮತ್ತು ಆ ರೀತಿ ಭಾವಿಸುವಂತೆ ಮಾಡಿದ್ದವರಿಗೆ ನನ್ನ ದಿಕ್ಕಾರವಿರಲಿ.

Thursday, February 9, 2012

ರಾಜಕೀಯಕ್ಕೆ ಮಹಿಳೆಯರು ಬರಲಿ ರಾಜಕಾರಣಿಗಳ ಪಲ್ಲಂಗಕ್ಕಲ

ಭಾರತದ ರಾಷ್ಟ್ರಪತಿ ಹುದ್ದೆ, ಮುಖ್ಯ ನ್ಯಾಯಾಧೀಶ ಸ್ಥಾನ ಹೀಗೆ ಬಹುತೇಕ ಎಲ್ಲ ಪ್ರಮುಖ ಹುದ್ದೆಗಳನ್ನು ದಲಿತರು ಒಂದಿಲ್ಲ ಒಂದು ಕಾಲಘಟ್ಟದಲ್ಲಿ ಅಲಂಕರಿಸಿದ್ದಾರೆ. ಆದರೆ ಪ್ರಧಾನ ಮಂತ್ರಿ ಹುದ್ದೆ ಮಾತ್ರ ಅವರಿಗೆ ಇಂದಿಗೂ ಮರೀಚಿಕೆಯಾಗಿಯೇ ಉಳಿದಿದೆ. ಎಲ್ಲವೂ ಲೆಕ್ಕಾಚಾರ, ಸಾಮರ್ಥ್ಯ ಮತ್ತು ಪ್ರತಿಭೆಗನುಗುಣವಾಗಿ ನಡೆದಿದ್ದರೆ ಇಂದು ಲೋಕಸಭೆಯ ಸ್ಪೀಕರ್ ಆಗಿರುವ ಮೀರಾಕುಮಾರ್‌ರವರ ತಂದೆ, ದೇಶದ ಮಾಜಿ ಉಪ ಪ್ರಧಾನಿ ಬಾಬು ಜಗ ಜೀವನ್ ರಾಮ್ ೮೦ರ ದಶಕದ ಅಸುಪಾಸಿನಲ್ಲೇ ಈ ದೇಶದ ಮೊದಲ ದಲಿತ ಪ್ರಧಾನಿಯಾಗಬೇಕಿತ್ತು. ಆದರೆ ಆಗಲಿಲ್ಲ, ಆಗಲೂ ಬಿಡಲಿಲ್ಲ! ಕಾರಣ ಅವರ ಮಗ, ಮೀರಕುಮಾರ್‌ರ ಸೋದರ ಸುರೇಶ್ ರಾಮ್‌ನ ಚಿತ್ರ ೧೯೭೮ರಲ್ಲಿ ಮಾಸಿಕ ಪತ್ರಿಕೆಯೊಂದರಲ್ಲಿ ಒಬ್ಬಳು ಮಹಿಳೆಯ ಜೊತೆ ಪ್ರಕಟಗೊಂಡು ಲೈಂಗಿಕ ಹಗರಣದ ಕಿಡಿ ಹೊತ್ತಿಸಿದ್ದು. ಈ ರೀತಿ ಭಾರತ ಕಂಡ ಒಬ್ಬ ಧೀಮಂತ ನಾಯಕನ ರಾಜಕೀಯ ಅಧಃಪತನಕ್ಕೆ ಆತನ ಮಗನೇ ಮುನ್ನುಡಿಯಾದ.

ಇಂದು ಭಾರತೀಯ ರಾಜಕಾರಣದಲ್ಲಿ ಜಗ ಜೀವನ್ ರಾಮ್‌ರ ಪರಂಪೆಯನ್ನು ಬಳವಳಿಯಾಗಿ ಪಡೆದವರು ದುರ್ಬಿನಿಟ್ಟು ಹುಡುಕಿದರು ಸಿಗುವುದು ಅನುಮಾನ. ಆದರೆ ಅವರ ಮಗನಂತವರ ಸಂತತಿ ಸಾವಿರ ಸಾವಿರವಾಗಿ ದೇಶದ ಬಹುತೇಕ ಎಲ್ಲ ಶಾಸನ ಸಭೆಗಳೊಳಗೆ ನುಸುಳಿ ಬಿಟ್ಟಿವೆ. ಕರ್ನಾಟಕ, ಉತ್ತರ ಪ್ರದೇಶ, ಕೇರಳ, ಉತ್ತರಖಂಡ, ಜಾರ್ಖಂಡ್, ರಾಜಸ್ತಾನ ಹೀಗೆ ದೇಶದ ಬಹುತೇಕ ಎಲ್ಲ ರಾಜ್ಯಗಳ ಶಾಸನ ಸಭೆಗಳಲ್ಲಿ ದುಶ್ಯಾಸನರು ಆಸೀನರಾಗಿದ್ದಾರೆ. ಮತ್ತೊಂದು ಸಂಗತಿಯೆಂದರೆ ಈ ದುಶ್ಯಾಸನರು ಉತ್ತರದ ಜಮ್ಮು ಮತ್ತು ಕಾಶ್ಮೀರದಿಂದ ಹಿಡಿದು ದಕ್ಷಿಣದ ಕೇರಳದವರೆಗೆ ಹೆಚ್ಚಿನೆಲ್ಲ ರಾಜಕೀಯ ಪಕ್ಷಗಳಲ್ಲಿದ್ದು ಪಕ್ಷಾತೀತ ರಾಜ(ಕಾಮ)ಕಾರಣ ಮಾಡುತ್ತಿದ್ದಾರೆ.

ಜಮ್ಮು & ಕಾಶ್ಮೀರದ ಶ್ರೀನಗರದಲ್ಲಿ ೨೦೦೬ರಲ್ಲಿ ನಡೆದ ಲೈಂಗಿಕ ಹಗರಣವೊಂದು ೨೦೦೯ರಲ್ಲಿ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ಓಮರ್ ಅಬ್ದುಲ್ಲಾರ ಸ್ಥಾನಕ್ಕೆ ಕುತ್ತು ತಂದಿತ್ತು. ಅವರು ತಮ್ಮ ರಾಜೀನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸಿಯೂ ಇದ್ದರು ಆದರೆ ರಾಜ್ಯಪಾಲರು ಅದನ್ನು ಅಂಗೀಕರಿಸದ ಕಾರಣ ಬಚಾವ್ ಆಗಿದ್ದರು. ಆದರೆ ಪ್ರತಿಪಕ್ಷಗಳ ಕೈಯಲ್ಲಿ ಅವರು ಸಾಕಷ್ಟು ಅವಮಾನ ಎದುರಿಸಬೇಕಾಯಿತು. ಅವರು ಅದೇಷ್ಟು ಎದೆಗುಂದಿದ್ದರು ಎಂದರೆ ರಾಜೀನಾಮೆ ಸಲ್ಲಿಸಲು ರಾಜಭವನಕ್ಕೆ ಹೋಗುವ ಮೊದಲು ಸದನದಲ್ಲಿ ನಾನು ಈ ರೀತಿಯ ಅವಮಾನವನ್ನು ತಾಳಿಕೊಳ್ಳಲಾರೆ ಎಂದು ಭಾವುಕರಾಗಿ ನುಡಿದಿದ್ದರು. ಆವರು ಇಂದಿಗೂ ಅಲ್ಲಿನ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದರೂ ಕೂಡ ಆ ಘಟನೆಯ ಬಳಿಕ ಅವರ ಚರಿಷ್ಮಾ ಮಾತ್ರ ಕಳೆಗುಂದಿದೆ.

ಇತ್ತ ದಕ್ಷಿಣದ ಕೇರಳದಲ್ಲಿ ನಡೆದ ಐಸ್‌ಕ್ರೀಮ್ ಲೈಂಗಿಕ ಹಗರಣವಂತೂ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಅಲ್ಲಿನ ಕೈಗಾರಿಕ ಸಚಿವರಾಗಿರುವ ಪಿ ಕೆ ಕುಙ್ಹಲಿಕುಟ್ಟಿ ಇದರಲ್ಲಿ ಭಾಗಿಯಾಗಿರುವ ಆರೋಪವಿದ್ದು ಈ ಬಗ್ಗೆ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ ತನ್ನ ಅಂತಿಮ ವರದಿಯನ್ನು ಕೇರಳ ಹೈಕೋರ್ಟಿಗೆ ಸಲ್ಲಿಸಿದೆ. ಮುಸ್ಲಿಂ ಲೀಗ್‌ನ ಪ್ರಬಲ ನಾಯಕರಾಗಿರುವ ಕುಙ್ಹಲಿಕುಟ್ಟಿ ತನ್ನನ್ನು ೯೦ರ ದಶಕದಲ್ಲಿ ಲೈಂಗಿಕವಾಗಿ ಶೋಷಿಸಿದ್ದರು ಎಂದು ರೆಜಿನಾ ಎಂಬ ಮಹಿಳೆ ಅಲವತ್ತುಕೊಂಡಿದ್ದರು. ಇದರಿಂದಾಗಿ ೨೦೦೫ರಲ್ಲಿ ಕುಙ್ಹಲಿಕುಟ್ಟಿ ತನ್ನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿತ್ತು. ಈ ಪ್ರಕರಣ ೧೯೯೭ರಲ್ಲಿ ಬೆಳಕಿಗೆ ಬಂದಿತ್ತು. ಕೇರಳ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಈ ಪ್ರಕರಣ ಮುಸ್ಲೀಂ ಲೀಗ್‌ನ ಇಮೇಜ್‌ಗೆ ಭಾರಿ ಹಾನಿಯುಂಟು ಮಾಡಿತ್ತು.

ಸದ್ಯ ದೇಶದ ಸೆಕ್ಸ್ ಮತ್ತು ಪೊಲಿಟಿಕ್ಸ್‌ನ ಕೊಂಡಿಯ ಕುಪ್ರಸ್ಸಿದ್ದ ಘಟನೆ ನಡೆದಿರುವುದು ರಾಜಸ್ತಾನದಲ್ಲಿ. ಅಲ್ಲಿನ ಜಲ ಸಂಪನ್ಮೂಲ ಸಚಿವ ಮಹಿಪಾಲ್ ಮಧರ್ನಾ ಮತ್ತು ನರ್ಸ್ ಭನ್ವಾರಿ ದೇವಿ ನಡೆಸಿದ ಲೈಂಗಿಕ ಕ್ರಿಯೆಯ ದೃಶ್ಯಾವಳಿಗಳು ಬಹಿರಂಗವಾಗಿದ್ದು, ಈ ಪ್ರಕರಣದ ದೆಸೆಯಿಂದ ಭನ್ವಾರಿ ದೇವಿಯ ಕೊಲೆಯಾಗಿದೆ ಎಂದು ನಂಬಲಾಗಿದೆ. ಮಧಾರ್ನಾ ’ಮಾಜಿ’ ಸಚಿವರಾಗಿ ಹಾಲಿ ಕಂಬಿ ಎಣಿಸುವ ಕಾಯಕ ಮಾಡುವಂತಾಗಿದೆ. ಈ ಪ್ರಕರಣದಲ್ಲಿ ಸಹಕಾರ ನೀಡಿದ ಆರೋಪಕ್ಕೆ ತುತ್ತಾಗಿರುವ ಶಾಸಕ ಮಲ್ಕಾನ್ ಸಿಂಗ್‌ರನ್ನು ಕೂಡ ಬಂಧಿಸಲಾಗಿದೆ. ಈ ಪ್ರಕರಣದ ತನಿಖೆಯ ಜವಾಬ್ಧಾರಿಯನ್ನು ಸಿಬಿಐ ವಹಿಸಿಕೊಂಡಿದೆ.

ಇನ್ನು ಆಂಧ್ರ ಪ್ರದೇಶದಲ್ಲಿ ರಾಜ್ಯಪಾಲರಾಗಿದ್ದ, ಉತ್ತರ ಪ್ರದೇಶ ಮತ್ತು ಉತ್ತರಖಂಡದ ಮಾಜಿ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಆಗ (೨೦೦೯ರಲ್ಲಿ) ೮೬ರ ಹರೆಯದವರಾಗಿದ್ದ ನಾರಾಯಣ ದತ್ತ ತಿವಾರಿ ರಾಜಭವನವನ್ನೇ ತನ್ನ ರತಿ ವಿಲಾಸದ ಕೇಂದ್ರವನ್ನಾಗಿಸಿಕೊಂಡು ಮೂವರು ಬೆತ್ತಲೆ ಮಹಿಳೆಯರೊಂದಿಗೆ ಮಾಧ್ಯಮಗಳ ಕ್ಯಾಮೆರಾ ಕಣ್ಣಿಗೆ ಸಿಕ್ಕಿ ಬಿದ್ದು sಸಾರ್ವಜನಿಕರ ಮುಂದೆ ತನ್ನ ಮಾನ ಮಾರ್ಯಾದೆಯ್ನ ಬೆತ್ತಲಾಗಿಸಿಕೊಂಡರು. ಈ ಪ್ರಕರಣ ಹೊರಬೀಳುವ ಕೆಲವೇ ದಿನಗಳ ಹಿಂದೆ ಯವಕನೋರ್ವ ತಿವಾರಿ ತನ್ನ ತಂದೆ ಎಂದು ಕೋರ್ಟ್ ಮೆಟ್ಟಿಲೇರಿದ್ದ. ಅಂದರೆ ಸೆಕ್ಸ್ ಅನ್ನುವುದು ತಿವಾರಿಯವರ ಜೀವನದ ಥಿಯರಿಯೇ ಆಗಿತ್ತು ಎಂದು ಹೇಳಬಹುದೇನೋ?

ಕವಯಿತ್ರಿ ಮಧುಮಿತಾ ಶುಕ್ಲಾಳ ಜೀವನಗಾಥೆಯಲ್ಲಿ ಖಳನಾಯಕನಾಗಿ ಬಂದು ಆಕೆಯನ್ನು ಕೊಲೆ ಮಾಡಿದ ಆರೋಪದಲ್ಲಿ ಉತ್ತರ ಪ್ರದೇಶದ ಮಾಜಿ ಸಚಿವ ಅಮರಮಣಿ ತ್ರಿಪಾಠಿ ಮತ್ತು ಆತನಿಗೆ ಸಹಕರಿಸಿದ ಆರೋಪದಲ್ಲಿ ಆತನ ಪತ್ನಿ ಬಂದಿಖಾನೆ ಸೇರಿದ್ದಾರೆ. ಶುಕ್ಲಾಳಿಗೂ ತ್ರಿಪಾಠಿಗೂ ದೈಹಿಕ ಸಂಪರ್ಕವಿತ್ತು ಮತ್ತು ಆಕೆ ಸಾಯುವ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದಳು. ಈ ಪ್ರಕರಣ ೨೦೦೩ರಲ್ಲಿ ಜರುಗಿತ್ತು.

೧೯೮೮ರಲ್ಲಿ ನಡೆದ ಬ್ಯಾಡ್ಮಿಟನ್ ಆಟಗಾರ ಸೈಯ್ಯದ್ ಮೋದಿಯ ಹತ್ಯೆಗೂ ರಾಜಕಾರಣಿ ಸಂಜಯ್ ಸಿಂಗ್‌ಗೂ ಸಂಬಂಧವಿತ್ತು ಇದಕ್ಕೆ ಮೋದಿಯ ಹೆಂಡತಿ ಅಮಿತಾಳಿಗೂ ಸಂಜಯ್‌ಗೂ ಇದ್ದ ಅನೈತಿಕ ಸಂಬಂಧವೇ ಕಾರಣ ಎಂದು ಭಾವಿಸಲಾಗಿತ್ತು. ಆದರೆ ಈ ಪ್ರಕರಣ ನ್ಯಾಯಾಲಯದಲ್ಲಿ ನಿಲ್ಲಲಿಲ್ಲ.

ಉತ್ತರ ಪ್ರದೇಶದ ರಾಜಕೀಯದಲ್ಲಿ ಕಲ್ಲೋಲ ಉಂಟು ಮಾಡಿದ್ದ ಮತ್ತೊಂದು ಪ್ರಕರಣ ಕವಿತಾ ಚೌಧರಿಯ ಹತ್ಯೆ. ಆಕೆಗೂ ಅಲ್ಲಿನ ನೀರಾವರಿ ಸಚಿವರಾಗಿದ್ದ ಮೇರಾಜುದ್ದೀನ್ ಅಹ್ಮದ್‌ಗೂ ನಿಕಟ ಸಂಪರ್ಕವಿತ್ತು. ಇದನ್ನು ಬಳಸಿಕೊಂಡ ಕವಿತಾ ತಾವಿಬ್ಬರು ರಾಸಲೀಲೆಯಲ್ಲಿ ತೊಡಗಿದ್ದ ಕ್ಷಣಗಳನ್ನು ಚಿತ್ರಿಕರಿಸಿಕೊಂಡು ಅಹ್ಮದ್‌ರಿಂದ ಹಣ ಪೀಕುವ ಯೋಚನೆ ಮಾಡಿದ್ದಳು. ಈ ಎಲ್ಲಾ ಚಿತಾವಣೆಗೆ ಆಕೆಗೆ ಸಾಥ್ ನೀಡಿದ್ದು ರವೀಂದರ್ ಪ್ರಧಾನ್. ಆದರೆ ಹಣ ಹಂಚಿಕೊಳ್ಳುವ ಸಂದರ್ಭದಲ್ಲಾದ ’ಹೆಚ್ಚು ಕಡಿಮೆ’ ಕವಿತಾಳ ಪ್ರಾಣಕ್ಕೆ ಕುತ್ತು ತಂದಿತ್ತು. ಪ್ರಧಾನ್ ಜೈಲಿನಲ್ಲಿ ನಿಗೂಢವಾಗಿ ಸತ್ತ. ಕವಿತಾಳ ಅಪಹರಣ ಮತ್ತು ಕೊಲೆ ೨೦೦೬ರಲ್ಲಿ ಘಟಿಸಿತ್ತು.

ಓಡಿಶಾದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ನ ನಾಯಕ ಜೆ ಬಿ ಪಾಟ್ನಾಯಕ್‌ರ ಹೆಸರು ಕೂಡ ಅಂಜನಾ ಮಿಶ್ರಾ ಅತ್ಯಾಚಾರ ಪ್ರಕರಣದಲ್ಲಿ ತಳಕು ಹಾಕಿಕೊಂಡಿತ್ತು. ಇದು ೧೯೯೮ರಲ್ಲಿ ನಡೆದಿದ್ದ ಪ್ರಕರಣ.

ಅಸ್ಸಾಂನ ಮಾಜಿ ಮುಖ್ಯಮಂತ್ರಿ, ಅಸ್ಸಾಂ ಗಣ ಪರಿಷತ್‌ನ ವರಿಷ್ಠ ನಾಯಕರಾಗಿದ್ದ ಪ್ರಫುಲ್ಲ ಕುಮಾರ್ ಮಹಾಂತರ ರಾಜಕೀಯ ಭವಿಷ್ಯಕ್ಕೆ ಅವರು ಸಂಘಮಿತ್ರ ಎಂಬಾಕೆಯೊಂದಿಗೆ ಹೊಂದಿದ್ದ ವಿವಾಹೇತರ ಸಂಬಂಧವೆ ಮುಳುವಾಯಿತು.
ದೇಶದ ಗೃಹ ಖಾತೆಯ ಮಾಜಿ ರಾಜ್ಯ ಸಚಿವ ಮೊಹಮ್ಮದ್ ತಸ್ಲಿಮುದ್ದೀನ್ ೧೯೮೩ರಲ್ಲಿ ಅತ್ಯಾಚಾರ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದರು ಎಂಬ ಆರೋಪ, ಉತ್ತರಖಂಡದ ಮಾಜಿ ಸಚಿವ ಕಾಂಗ್ರೆಸ್‌ನ ಹರಕ್ ಸಿಂಗ್ ರಾವತ್‌ಗೂ ಅಸ್ಸಾಮಿ ಮಹಿಳೆಯೊಬ್ಬಳಿಗೂ ಇದ್ದ ಸಂಬಂಧ, ಒರಿಸ್ಸಾದ ಮಾಜಿ ಸಚಿವ ಮನಮೋಹನ್ ಸನಾಲ್ ೨೦೦೮ರಲ್ಲಿ ಲೈಂಗಿಕ ಪ್ರಕರಣವೊಂದರಲ್ಲಿ ಭಾಗಿಯಾದ ಆರೋಪದಿಂದ ತಮ್ಮ ಸಾರ್ವಜನಿಕ ಜೀವನಕ್ಕೆ ಎಳ್ಳುನೀರು ಬಿಡಬೇಕಾಯಿತು.
೧೯೮೨ರಲ್ಲಿ ಬಿಹಾರದಲ್ಲಿ ಘಟಿಸಿದ್ದ ಬಾಬಿ ಕೊಲೆ ಪ್ರಕರಣ ಆಗ ಅಲ್ಲಿ ಆಡಳಿತ ನಡೆಸುತ್ತಿದ್ದ ಜಗನ್ನಾಥ ಮಿಶ್ರಾ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ತೀವೃ ಇಕ್ಕಟ್ಟಿಕೆ ಸಿಳುಕಿಸಿತ್ತು. ಈ ಪ್ರಕರಣದಲ್ಲಿ ಅನೇಕ ಸಚಿವರು ಭಾಗಿಯಾದ ಆರೋಪ ಹುಟ್ಟಿಕೊಂಡಿತ್ತು. ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ೧೯೯೪ರಲ್ಲಿ ಒಂದು ಕಾಮಕಾಂಡ ಬಯಲಾಗಿತ್ತು. ಅಲ್ಲಿ ಸುಮಾರು ೫೦೦ರಷ್ಟು ಹುಡುಗಿಯರನ್ನು ಬಲವಂತವಾಗಿ ಇಟ್ಟುಕೊಂಡು ಕಾಮದಂಧೆ ನಡೆಸುತ್ತಿದ್ದ ಪ್ರಕರಣವದು. ಇವರಲ್ಲಿ ಬಹುತೇಕ ಹುಡುಗಿಯರು ಅಪ್ರಾಪ್ತರಾಗಿದ್ದರು. ಈ ದಂಧೆಯಲ್ಲಿ ಅನೇಕ ರಾಜಕಾರಣಿಗಳು ಭಾಗಿಯಾಗಿದ್ದರು.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಮತ್ತು ಕುಸುಮ ರೈಗೂ ಇದ್ದ ಭಾವನಾತ್ಮಕ ಸಂಬಂಧ ಹಾಗೂ ಅಮರ್ ಸಿಂಗ್ ಮತ್ತು ಬಹುಭಾಷಾ ನಟಿ ಜಯಪ್ರದಾರ ಒಡನಾಟವೂ ಅನೇಕ ಜನರ ಕಣ್ಣು ಕೆಂಪಾಗಿಸಿತ್ತು. 
ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡೀಸ್ ಮತ್ತು ಜಯಾ ಜೇತ್ಲಿ, ಉಮಾ ಭಾರತಿ ಹಾಗೂ ಗೋವಿಂದಾಚಾರ್ಯರ ನಡುವೆ ಇದೆ ಎಂದು ಭಾವಿಸಲಾಗಿರುವ ಸಂಬಂಧಗಳನ್ನು ’ಸಾಮಾನ್ಯ ಸಂಬಂಧ’ದ ಚೌಕಟ್ಟಿನಲ್ಲಿ ಕಾಣುವುದಕ್ಕೆ ಒಂಚೂರು ಕಷ್ಟವಾಗಬಹುದು.

ಇವೆಲ್ಲವೂ ಸ್ಯಾಂಪಲ್‌ಗೆ ಇರಲಿ ಎಂದು ಉದಾಹರಿಸಬಹುದಾದ ಕೆಲವೇ ಕೆಲವು ಪ್ರೇಮ, ಕಾಮ ಮತ್ತು ರಾಜಕೀಯದ ಆಯಾಮಗಳು ಬೆಸೆದು ಕೊಂಡಿರುವ ಪ್ರಕರಣಗಳಷ್ಟೆ. ಇನ್ನು ಅನೇಕ ಇಂತಹ ಪ್ರಕರಣಗಳು ಬೀದಿಗೆ ಬಿದ್ದಿವೆ. ಅದೇ ರೀತಿ ’ಸಾಕ್ಷ್ಯಾಧಾರಗಳ ಕೊರತೆ ಇರುವ ಆದರೆ ’ನಂಬಲು ಕಾರಣಗಳಿರುವ’ ಅನೇಕ ಪ್ರಕರಣಗಳು ಹಿಂದೆಯೂ ಇದ್ದವು ಈಗಲು ಇವೆ.

ನಮ್ಮ ವಿಧಾನ ಸಭೆಯಲ್ಲಿ ಇಬ್ಬರು ಮಂತ್ರಿಗಳು ಆಶ್ಲೀಲ ಚಿತ್ರ ವೀಕ್ಷಿಸಿ ಸಿಕ್ಕಿ ಬಿದ್ದಿರಬಹುದು. ಹಾಲಪ್ಪರ ಅತ್ಯಾಚಾರ ಪ್ರಕರಣ, ರೇಣುಕಾಚಾರ್ಯ ಕಿಸ್ ಪುರಾಣ ಈಗ ಹಳತಾಗಿರಬಹುದು. ಆದರೆ ’ವರ್ಣ ರಂಜಿತ ವ್ಯಕ್ತಿತ್ವ’ದ ಅನೇಕ ಮುಖ್ಯಮಂತಿಗಳು, ಮಂತ್ರಿಗಳು, ಶಾಸಕರು ನಮ್ಮನ್ನು ಆಳಿದ್ದಾರೆ, ಈಗಲೂ ಆಳುತ್ತಿರಬಹುದು. ಸಿಕ್ಕಿ ಬಿದ್ದಿಲ್ಲ ಅಷ್ಟೆ!

ಅದ್ದರಿಂದ ಈ ಪೋರ್ನೋ ಪುರಾಣದ ಬಗ್ಗೆ ಹೇಳಿಕೆಗಳ ಪಾರಾಯಣ ಮಾಡುತ್ತ ಕಾಲಹರಣ ಮಾಡುವುದರ ಬದಲು ಸಾರ್ವಜನಿಕ ಜೀವನದಲ್ಲಿರುವವರು ಈ ಪ್ರಕರಣವನ್ನು ತಮಗೂ ಒಂದು ಪಾಠ ಎಂದು ಭಾವಿಸಿದರೆ ತಮ್ಮ ರಾಜಕೀಯ ಭವಿಷ್ಯ ಮತ್ತು ಮಾರ್ಯಾದೆ ಎರಡನ್ನು ಕೂಡ ಸುಭದ್ರವಾಗಿಡಟ್ಟು ಕೊಳ್ಳಬಹುದು. ಏಕೆಂದರೆ ಭಾರತೀಯರೂ ಇಂದಿಗೂ ಮುಕ್ತ ಕಾಮದ ಮನಸ್ಥಿತಿ ಹೊಂದಿಲ್ಲ ಅಥವಾ ಮುಕ್ತ ಕಾಮದ ಸಂಸ್ಕೃತಿ ಹೊಂದಿರುವ ಅಮೆರಿಕಾದಲ್ಲಿ ಕೂಡ ಅಲ್ಲಿನ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್‌ರಿಗೆ ತಾನು ಮೋನಿಕಾ ಲುವಿನುಸ್ಕಿ ಜೊತೆಗೆ ಹೊಂದಿದ್ದ ಲೈಂಗಿಕ ಸಂಬಂಧವನ್ನು ಸಮರ್ಥಿಸಿಕೊಳ್ಳಲಾಗದೆ ಪಡಿಪಾಟಲು ಪಟ್ಟ ನಿದರ್ಶನವೇ ನಮ್ಮ ಮುಂದಿದೆ.

ನಮ್ಮ ರಾಜಕೀಯ ರಂಗಕ್ಕೆ ಮಹಿಳೆಯರು ಬರಲಿ ಮತ್ತು ಬರಬೇಕು ಆದರೆ ರಾಜಕಾರಣಿಗಳ ಪಲ್ಲಂಗಕ್ಕಲ್ಲ.

Friday, February 3, 2012

ನಮ್ಮ ಸಿದ್ಧಾಂತಕ್ಕೆ ಇದು ವಿರುದ್ಧ....!

(ಇದು ನನ್ನ ’ಅಟೋ’ಬಯೋಗ್ರಾಫಿಯ ಐದನೇ ಭಾಗ)

ಅಲ್ಲಾ.... ಈ ರಸ್ತೆ ಮಧ್ಯೆ ಡಿವೈಡರ್‌ನಲ್ಲಿ ಹೂವಿನ ಗಿಡ... ಎಷ್ಟು ಚಂದದ ಹೂವುಗಳು... ಸೂಪರ್... ನೋಯ್ಡಾ ಉದ್ಯಾನ ನಗರಿಯೂ ಹೌದು... ಇಲ್ಲಿ ಗಾಜಿಯಾಬಾದ್ ವಿಕಾಸ್ ಪರಿಷತ್ ಮತ್ತು ನೋಯ್ಡಾ ಅಭಿವೃದ್ಧಿ ಪ್ರಾಧಿಕಾರದ ಮಧ್ಯೆ ಕಾಂಪಿಟೇಷನ್... ಇವೆರಡು ಸೇರಿ ದೆಹಲಿಗೆ ಕೊಕ್ ಕೊಡುತ್ತಿವೆ... ಹುಂ ನಮಗೂ ಅಷ್ಟೆ... ದೆಹಲಿ ಬಿಟ್ಟರೆ ನೋಯ್ಡಾವೇ ಕಾಣುವುದು... ಈ ಗಾಜಿಯಾಬಾದ್‌ನ್ನು ಹಾರಿಸಿ ಬಿಡುತ್ತೇವೆ... ನಮ್ಮ ಮನೆ ಪಕ್ಕ ವಿಕಾಸ್ ಪರಿಷತ್‌ನವರು ಮಾಡಿರೋ ಸ್ವರ್ಣ ಜಯಂತಿ ಪಾರ್ಕ್... ವಾಹ್... ನಾನು ದೆಹಲಿ, ನೋಯ್ಡಾ ಹಾಗೇ ಇದೆ, ಹೀಗೆ ಇದೆ ಎಂದರೆ ಯಾರೂ ನಂಬುವುದಿಲ್ಲ... ಎಲ್ಲ ಎಕ್ಸಜ್ಯುರೇಷನ್ ಮಾಡುತ್ತಿದ್ದಾನೆ ಅಂತ ಅಂದ್ಕೊಳ್ಳುತ್ತಾರೆ... ಅವರ ಮನಸ್ಸಿನಲ್ಲಿ ಇಲ್ಲಿನ ಕ್ರೈಂ ಬಗ್ಗೆ ಕೆಟ್ಟ ಒಪಿನಿಯನ್ ಇದೆ... ಈ ಊರಲ್ಲಿ ಎಷ್ಟು ಚೆಲುವಿದೆ, ಸುಖವಿದೆ ಎಂಬುದನ್ನು ಅವರು ನಂಬೋದೆ ಇಲ್ಲ... ಅದ್ರಲ್ಲೂ ಅಂಕಿತಾಳಂತೂ ಅಸೂಯೆಯಲ್ಲಿ ಸಾಯುತ್ತಾಳೆ... ಗಮ್ಮತ್ತು ನಾನು ಲಾಸ್ಟ್ ಟೈಂ ಊರಿಗೆ ಹೋಗಿ ವಾಪಾಸ್ ದೆಹಲಿಗೆ ಹಿಂತಿರುಗುವಾಗ ನಾನು ಸದ್ದಾನು ಒಂದು ಹುಡುಗಿಯನ್ನು ಫಾಲೋ ಮಾಡಿಕೊಂಡು ಹೋಗಿದ್ದು... ಪಾಪ... ಮಂಗಳೂರಿನಲ್ಲಿ ಆ ದುರ್ಗಮ ಬೆಟ್ಟದಲ್ಲಿ ಕಡಿದಾದ ರಸ್ತೆಯಲ್ಲಿ ಸದ್ದಾ ಹೇಳಿದ್ದ ಅಲ್ವಾ... ಮಂಗಳೂರಿನೊಳಗೆ ಇಂತಹ ಒಂದು ಪ್ರದೇಶ ಇದೆ ಎಂಬುದೇ ನಂಬಲು ಸಾಧ್ಯವಿಲ್ಲ ಎಂದು... ಆಕೆಯ ಪ್ಲೇಷರ್ ಮುಂದೆ ಮುಂದೆ... ಸದ್ದಾನ ಪಲ್ಸರ್ ಹಿಂದೆ ಹಿಂದೆ... ಅವಳ ಪ್ಲೇಷರ್ ಹಾಳಾಗಿದ್ದು... ಹೌದು ನಾವ್ಯಾಕೆ ಅವತ್ತು ಅವಳಿಗೆ ಹೆಲ್ಪ್ ಮಾಡಲು ಹೋಗಲಿಲ್ಲ...? ಸದ್ದಾ ಹೇಳಿದ ಮಾಡೋಣ ಅಂತ... ಆದ್ರೆ ನಾನೇ ಬೇಡ ಎಂದೆ...ಏಕೆ ಹಾಗೇ ಹೇಳಿದೆ... ಏನೋ ಲೆಕ್ಕ ಹಾಕಿರಬಹುದು... ಹುಂ ಈಗ ನೆನಪಾಗುತ್ತಿಲ್ಲ... ಹೇ... ಈ ಹುಡುಗಿಯನ್ನು ಎಲ್ಲೋ ನೋಡಿದ ಹಾಗೆ ಇದೆ... ಎಲ್ಲಿ... ಎಲ್ಲಿ.... ಗೊತ್ತಾಗುತ್ತಿಲ್ಲವೆ...? ಇವತ್ತೇನು ನನ್ನ ಮೆಮೋರಿ ನನಗೆ ಕೈ ಕೊಡುತ್ತಿದೆ...

ಹೋ ಈ ಅಜ್ಜ... ಈ ರೀತಿಯ ರಿಕ್ಷಾ ಪಯಣಕ್ಕೆ ಹೊಸಬರು ಎಂದು ಅನಿಸುತ್ತೆ... ಈತ ಮಾತ್ರ ಈ ದಾರಿಯಲ್ಲಿ ಮೊದಲ ಸಲ ಬರುತ್ತಿದ್ದಾನೆ... ನೋಡುವಾಗ ಗೊತ್ತಾಗುತ್ತೆ...ಹುಂ ಈ ನೋಯ್ಡಾಕ್ಕೆ ಮೊದಲ ಸಲ ಬರುವವರಿಗೆ ಸ್ವಲ್ಪ ಕಷ್ಟ... ಸ್ವಲ್ಪ ಎಂತ ತುಂಬಾನೇ ಕಷ್ಟ... ಕೇವಲ ಮೊದಲ ಸಲ ಮಾತ್ರವಲ್ಲ ಒಂದು ದಾರಿ ನಮಗೆ ಪಕ್ಕ ಆಗುವವರೆಗೆ ಕಷ್ಟವೇ... ಅದರಲ್ಲಿ ನೋಯ್ಡಾದ ವಿಶೇಷತೆ ಏನಿದೆ... ಎಲ್ಲ ಹೊಸ ಪ್ರದೇಶಗಳು ಇಷ್ಟೆ ತಾನೇ? ಇಲ್ಲ, ಇಲ್ಲ, ನೋಯ್ಡಾ ಒಂದು ಪ್ಲಾನ್ಡ್ ಸಿಟಿ ... ಸೋ ಇಲ್ಲಿ ಬಹುತೇಕ ಎಲ್ಲವು ಒಂದೇ ರೀತಿ ಕಾಣುತ್ತೆ.. ಲ್ಯಾಂಡ್ ಮಾರ್ಕ್ ಗುರುತಿಸುವುದು ಅದನ್ನು ನೆನಪಿಟ್ಟುಕೊಳ್ಳುವುದು... ಅದೇ ಸಮಸ್ಯೆ... ನನಗೆ ಈ ದಾರಿ ಸರಿ ಹಿಡಿಬೇಕಾದರೆ ಕನಿಷ್ಠ ೧೫ ದಿನವಾದರೂ ಆಗಿತ್ತು. ಆದರೆ ಬೆಂಗಳೂರಲ್ಲಿ ಒಂದೇ ದಿನದಲ್ಲಿ ನನಗೆ ಅರ್ಥವಾಗಿತ್ತು... ಬಹುಶಃ ನಾನು ಅಲ್ಲಿ ದಾರಿಯೇ ತಪ್ಪಿಲ್ಲ... ಹುಂ ಒಂದು ಸಲ ಇಂಟರ್ನ್‌ಶಿಪ್‌ನಲ್ಲಿದ್ದಾಗ ಒಬ್ಬ ರಿಕ್ಷಾ ಡ್ರೈವರ್ ಮೋಸ ಮಾಡಲು ನೋಡಿದ್ದ... ಆದ್ರೆ ನನಗೆ ಅದು ಗೊತ್ತಾಗಿ... ನಾನು ಈ ವಿಷಯದಲ್ಲಿ ನನ್ನ ಸಿಕ್ತ್ ಸೆನ್ಸ್‌ಗೆ ಥಾಂಕ್ಸ್ ಹೇಳಬೇಕು... ಎಷ್ಟೋ ಸಲ ಸರಿಯಾದ ಸ್ಥಳದಲ್ಲೇ.... ಅದಕ್ಕೆ ತಾನೇ ನಾನು ಈಗಲೂ ಅಷ್ಟೆ ಯಾರು ದಾರಿ ಕೇಳಿದರೂ ಅವರಿಗೆ ಸ್ಪಷ್ಟವಾಗಿ ದಾರಿ ತೋರಿಸುವುದು... ದಾರಿ ಗೊತ್ತಿಲ್ಲವೆಂದರೆ ಇಲ್ಲ ಎಂದು... ಅಲ್ಲ ನನಗೆ ಸಾಕಷ್ಟು ಇಂಜಿನಿಯರ್ ಫ್ರೆಂಡ್ಸ್ ಇದ್ದಾರೆ... ಈ ಕೆಲ ಸಾಹಿತಿಗಳು, ಬುದ್ಧಿಜೀವಿಗಳು ಈ ಇಂಜಿನಿಯರ್‌ಗಳನ್ನು ಏಕೆ ಬೈಯ್ಯುತ್ತಾರೆ? ಅವರ ಸಂಪಾದನೆ ಜಾಸ್ತಿ ಇದೆ ಅನ್ನುವ ಕಾರಣಕ್ಕಿರಬಹುದು... ಅವರನ್ನು ನೋಡುವಾಗ ನನಗೆ ಅವರೇನು ನಮಗಿಂತ ಭಿನ್ನ ಅನ್ನಿಸುವುದಿಲ್ಲ... ಹೇ ಹುಡುಗಿ... ನನ್ನ ಮುಖನೇ ನೋಡುತ್ತಿದ್ದಾಳೆ... ಇಲ್ಲ, ಇವಳಿಗೆ ನನ್ನ ಮುಖ ನೋಡುವಾಗ ಬೇರೆ ಯಾರದೋ ನೆನಪಾಗುತ್ತಿದೆ... ಖಂಡಿತ... ಅಣ್ಣನಾ? ತಮ್ಮನಾ... ಇಲ್ಲ ಲವರ್, ಫ್ರೇಂಡ್... ಹುಂ ಹೇಳುವುದು ಕಷ್ಟ... ಬಟ್ ನೆನಪಾಗುತ್ತಿದೆ ಅನ್ನುವುದು ನಿಜ... ಮೋಸ್ಟ್‌ಲೀ ಅದು ಯಾರೇ ಆಗಿದ್ದರು ಕೂಡ ಆತ ಅವಳ ಜೊತೆ ಈಗ ಇಲ್ಲ... ಹುಂ... ಮಾತನಾಡಿಸೋಣವೇ... ಬೇಡ... ಬೇಡ... ನಮ್ಮ ಸಿದ್ಧಾಂತಕ್ಕೆ ಇದು ವಿರುದ್ಧ.... ಆದ್ರಿಂದ... ಇರಲಿ ಅವಳು ಅವಳ ಪಾಡಿಗೆ... ಅವಳ ನೆನಪುಗಳೊಂದಿಗೆ... ಹುಂ... ಇಲ್ಲ ಅವಳ ಕಣ್ಣುಗಳನ್ನು ನೋಡಲಾಗುತ್ತಿಲ್ಲ... ಓ... ಮೈ ಗಾಡ್ ನನಗೆ ಸ್ಟೇರ್ ಕೊಡಲು ಆಗುತ್ತಿಲ್ಲ!

ಅಬ್ಬಾ.... ಮಥುರೆಯ ಆ ಹುಡುಗಿಯ ಐ ಮೀನ್ ರಾಧೆಯ ಮಾಯಾವಿ ಕಣ್ಣಿನ ಬಲೆಯೆಂದ ನಾನು ಇನ್ನೂ ಹೊರಬಂದಿಲ್ಲ... ನಿಜಕ್ಕೂ ಆ ಕಣ್ಣುಗಳನ್ನು ನಾನು ಈಗ ಲ್ಯಾಪ್‌ಟಾಪ್‌ನಲ್ಲಿ ನೋಡಿದರು ಬೆಚ್ಚಿ ಬೀಳುತ್ತೇನೆ...  ಆ ಹೆದರಿಕೆ ಆದರು ಎಂಥದ್ದು... ಛೇ... ಅದು ನನ್ನೆದೆಯಲ್ಲಿ ಹುಟ್ಟಿಸುವ ಅತಂಕ, ಕಳವಳ.... ಅದೇಷ್ಟು ಕಷ್ಟ ಪಟ್ಟರು ಆಕೆಯನ್ನು ಅರೆ ನಿಮಿಷಕ್ಕಿಂತ ಹೆಚ್ಚು ನೋಡಲಾಗುವುದಿಲ್ಲ... ಇನ್ನು ಈಕೆಯೂ ಹಾಗೆ ಅಟಕಾಯಿಸಿಕೊಳ್ಳುತ್ತಾಳಾ? ಈ ಟ್ರಾಫಿಕ್ ಮತ್ತು ಕಳೆದು ಕೊಂಡ ಹುಡುಗಿಯ ನೆನಪು ಒಂದೆ... ಒಮ್ಮೆ ನಿಲ್ಲುತ್ತೆ... ಒಮ್ಮೆ ಸಾಗುತ್ತೆ... ಆ ನೆನಪಲ್ಲಿ ಮತ್ತು ಈ ರಸ್ತೆಯಲ್ಲಿ  ನಿಲ್ಲಲು ಯಾರೂ ಬಯಸೋದಿಲ್ಲ... ಆದ್ರೂ ನಿಲ್ಲಲೇ ಬೇಕಾಗುತ್ತೆ... ಗಾಡಿ ಸಾಗುವಾಗ ಅದೇನೋ ರಿಲೀಫ್ ಸಿಗುತ್ತೆ ಅಲ್ವಾ.... ಹುಂ... ಆ ನೆನಪಿನಿಂದ ಹೊರ ಬರುವಾಗಲು ಅದೇ ರಿಲೀಫ್...

Saturday, January 21, 2012

ಏನಿದು?


ವಿಷಾದದ ಕರಿನೆರಳಲ್ಲಿ
ಕರಿ ನಾಗರದ ಮರಿ
ಪ್ರೀತಿಸಿದ ಹೆಬ್ಬುಲಿಗೆ
ಬೇಕಂತೆ ನನ್ನ ಬಲಿ

ದೇವರು ದಿಂಡರು
ಹೊದ್ದು ಮಲಗಿರುವರು ಕಂಬಳಿ
ಗಂಟೆ, ಜಾಗಟೆ
ನಮಾಜು, ಪ್ರಾರ್ಥನೆಗಳ ಕರಾಮತ್ತು
ಇನ್ನು ನಡೆಯದು
ಅವರ ಬಳಿ

ಹಸಿ ನೋಟುಗಳ ದಾಹಕ್ಕೆ
ಮಿಡಿ ಮಿಡಿಯುವ ಹೃದಯಗಳ ಬಲಿ
ಹಸಿ ತೊಡೆಗಳ ಕಾದಾಟಕ್ಕೆ
ಕೋಟಿ ಕೋಟಿ ಜೀವ ಬಲಿ

ಪ್ರೀತಿ ಪ್ರೇಮ
ಹೋಗಿದೆ ಬೇರೆ ಲೋಕಕ್ಕೆ
ದ್ವೇಷ ಅಸೂಯೆ
ಬಂದು ಕುಳಿತಿದೆ ನಮ್ಮ ಪಕ್ಕಕ್ಕೆ