Friday, September 18, 2009

ಬಾಲ್ಯದ ನೆನಪುಗಳವು!

ನೆನಪಿನ ರಾಶಿಯನ್ನು ಕೆದಕಿದಾಗ ದೊಡ್ಡ ಪೆಟ್ಟಿಗೆಯಲ್ಲಿ ಕಟ್ಟಿಟ್ಟ ಪೊಗದಸ್ತಾದ ನೆನಪೊಂದು ಸಿಕ್ಕಿತ್ತು. ಬಿಚ್ಚಿ ನೋಡುತ್ತೇನೆ... ಇಂದಿಗೂ ಘಮಘಮಿಸುವ ಬಾಲ್ಯದ ನೆನಪುಗಳವು! ಅದರಲ್ಲೂ ಚಿಕ್ಕ ರಜೆ ಸಿಗಲೆಂದು ಕಾತರಿಸಿ ಸಿಕ್ಕಾಗ ಕುಣಿದು ಕುಪ್ಪಳಿಸಿ ಸಿಕ್ಕ ನಂತರ ಪ್ರತಿಕ್ಷಣವನ್ನು ಅಸ್ವಾದಿಸಿದ ಸುಮಧುರ ನೆನಪದು.
ಆಡೋದು, ಓಡೋದು, ನೆಂಟರ ಮನೆಗೆ ಹೋಗೋದು, ಚಿಕ್ಕ ತೊರೆಯಲ್ಲಿ ಮೀನು ಹಿಡಿಯೋದು ಇವೆಲ್ಲ ಪ್ರತಿ ರಜೆಯ ಸಹಜ ದಿನಚರಿ. ಅಂದು ಚಿಕ್ಕ ಚಿಕ್ಕ ಸಂತೋಷಗಳನ್ನು ಬೃಹತ್ತಾಗಿ ಕಂಡು ಅನುಭವಿಸುವ ಮುಗ್ದ ಮನಸ್ಸಿತ್ತು. ಆ ಮನಸ್ಸಿಗೋ ತನಗನಿಸಿದ ಕೀಟಲೆ ಮಾಡುವ ಸ್ವಾತಂತ್ರ್ಯವಿತ್ತು. ಆ ಸ್ವಾತಂತ್ರ್ಯ ಸ್ವೇಚ್ಚೆಯಾದಗ ನಿಯಂತ್ರಿಸಲು ಅಪ್ಪನ ಗದರಿಕೆ, ಬೆತ್ತ ಅಥವಾ ಅಮ್ಮನ ಬುದ್ದಿಮಾತಿನ ಕಡಿವಾಣವಿತ್ತು. ನೋವಾದಾಗ ಆಳುವ ಅವಕಾಶವಿತ್ತು. ಖುಷಿಯಾದಾಗ ನಮ್ಮ ಅಭಿವ್ಯಕ್ತಿಯನ್ನು ಕಂಡೇ ಸಂತೋಷಪಡುವ ಬಂಧುಬಳಗವಿತ್ತು. ಆಡಿದ, ಆಡುವ ಪ್ರತಿ ಮಾತಲ್ಲೂ ಮುಗ್ದತೆಯನ್ನು ಕಂಡು ಅದಕ್ಯಾವುದೇ ಅರ್ಥ ಆರೋಪಿಸದೆ ಅದರ ಸ್ನಿಗ್ದ ಸೌಂದರ್ಯವನ್ನು ಅನುಭವಿಸುವ ನೆಂಟರಿಷ್ಟರಿದ್ದರು. ನಮ್ಮ ಬಗ್ಗೆ ನಮಗಿಂತ ಹೆಚ್ಚು ಕಾಳಜಿ ವಹಿಸುವ ಮನೆಯವರಿದ್ದರು.
ಅವರೇ ಈಗಲೂ ಇದ್ದಾರೆ. ರಜೆಯೀಗಲೂ ಬರುತ್ತದೆ. ಆದರೆ ಅವರಿಗೂ ನಮಗೂ ಪ್ರಬುದ್ಧತೆ ಎಂಬ ಬೇಡಿ ಹಾಕಲಾಗಿದೆ. ಇವತ್ತೇನಿದ್ದರೂ ಆಟವೆಂದರೆ, ಕ್ರಿಕೆಟ್, ಕಬಡ್ಡಿ, ವಾಲಿಬಾಲ್ ಗಳೆಂಬ ಆಟಗಳನ್ನೇ ಆಡಬೇಕಾಗಿದೆ. ಮನಸ್ಸಿಗನಿಸಿದ ಕೀಟಲೆ ಮಾಡ ಹತ್ತಿದರೆ ಸಾರ್ವಜನಿಕರಿಂದ ಧರ್ಮದೇಟು ತಿನ್ನಬೇಕು!. ಅದರೊಂದಿಗೆ ಅನಾಮತ್ತಾಗಿ ಹುಚ್ಚನ ಸ್ಥಾನ ಸಿಗುತ್ತದೆ. ಬೇಸರವೆನಿಸಿ ಅತ್ತರೆ ಧಮಿಲ್ಲದವನೆಂಬ ಪಟ್ಟ ಕಾದಿರುತ್ತದೆ. ಖುಷಿಯಾದರೆ ನಗಬೇಕು ಅಥವಾ ಪಾರ್ಟಿ ಕೊಡಬೇಕು. ಅದು ಬಿಟ್ಟು ಬೇರೇನೋ ಮಾಡ ಹತ್ತಿದರೆ ಅದಕ್ಕೆ ನೂರಾರು ಅರ್ಥ. ಆಡುವ ಪ್ರತಿ ಮಾತು ಕೂಡ ಜಾಗರೂಕವಾಗಿರಬೇಕು. ಇಲ್ಲದೇ ಹೋದಲ್ಲಿ ಆಡಿದವನ ಯೋಚನೆಗೆ ನಿಲುಕದ ಭಾವಗಳು ಮಾತಿನ ಹಿಂದೆ ಇದೆ ಎಂಬ ಗುಮಾನಿ. ನಮ್ಮ ಬಗ್ಗೆ ಯಾರಾದರೂ ಹೆಚ್ಚಿನ ಕಾಳಜಿ ವಹಿಸಿದರೆ 'ಏನೋ ಇದೆ' ಎಂಬ ಶಂಕೆ ಅದರಲ್ಲೂ ಅವರು ನಮ್ಮ ವಿರುಧ್ಧ ಲಿಂಗಿಯಾಗಿದ್ದಾರೆ ಕತೆ ಮುಗಿಯಿತು. ನೋಡು ನೋಡುತ್ತಲೇ ಅದೇಷ್ಟು ಬದಲಾವಣೆ!
ಬಾಲ್ಯ, ಈ ಯವ್ವನ ಎರಡು ಬೇರೆ ಬೇರೆ ತುಂಡುಗಳು ಎಂದು ಅನಿಸುತ್ತಿಲ್ಲವೇ?

Friday, September 11, 2009

ಗುರು

ಅಂದು ಗುರು ಸಾಕ್ಷತ್ ಪರಬ್ರಹ್ಮ ಸ್ವರೂಪ. ಇದ್ದದ್ದು, ಇ(ಬ)ರುತ್ತಿದ್ದದ್ದು ಪೂಜ್ಯ ಭಾವನೆಯೊಂದೇ. ಅವರು ಏನು ಹೇಳಿದರು, ಮಾಡಿದರು ಅದರಲ್ಲಿ ಜಿನುಗುತ್ತಿದ್ದದ್ದು ಸದಾಶಯ. ಆ ಗುರುವಿನ ಶಿಷ್ಯನಾಗುವುದು ಅಷ್ಟು ಸುಲಭವಾಗಿರಲಿಲ್ಲ. ಸಾಕಷ್ಟು ಸತ್ವ ಪರೀಕ್ಷೆಗಳಿಗೆ ಈಡಾಗಬೇಕಿತ್ತು, ಅದರಲ್ಲಿ ಯಶ ಪಡೆಯಬೇಕಿತ್ತು. ಅಷ್ಟರಲ್ಲೇ ವಿದ್ಯಾಕಾಂಕ್ಷಿ ಹಣ್ಣುಗಾಯಿ ನೀರುಗಾಯಿಯಾಗುತ್ತಿದ್ದ. ಮತ್ತೂ ಗುರುಮುಖೇನ ಕಲಿಯುವ ತುಡಿತ ಉಳಿದಿದ್ದೇ ಆದರೆ ಅನಂತರ 'ಮಾಗುವ' ಪ್ರಕ್ರಿಯೆ ಶುರು.
ಕಲಿಕೆ ಅಂದರೆ ಅದೊಂದು ತಪಸ್ಸು. ಕಲಿಯುವಿಕೆಯ ಹಂತಗಳಲ್ಲಿ ಗುರು ಶಿಷ್ಯರು ಪರಸ್ಪರ ವಶ ಮತ್ತು ವಿವಶ. ಗುರು ಕೊಡುವ ಶಿಕ್ಷೆ ಅಂದರೆ ಆದು ಆಶಿರ್ವಾದ ಸ್ವರೂಪ. ಅದರಲ್ಲೂ ಕಲಿಯುವಿಕೆಯ ಆನಂದ. ಗುರುವಿನ ಶಿಕ್ಷೆ ಆತನ ಮನಸ್ಸಿನ ಅಸಹನೆ, ದ್ವೇಷ, ಅಹಂ ಅಥವಾ ಹೆಂಡತಿ ಜೊತೆ ಜಗಳವಾಡಿದ ಕಾರಣದಿಂದ ಬರುತ್ತಿದ್ದಲ್ಲ. ಅದು ಸಹಜ, ಅನಿವಾರ್ಯ ಮತ್ತು ಶಿಷ್ಯನಲ್ಲಿ ಕಲಿಯುವಿಕೆಯ ಹಪಾಹಪಿ ಹುಟ್ಟಿಸುವಂತದ್ದು ಮತ್ತು ಆ ಕಲಿಕೆಗೆ ಸಮಗ್ರತೆಗೆ ತುಂಬುತ್ತಿತ್ತು. ಇದು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲ, ಬದಲು ಗುರು ಪರಂಪರೆ. ಗುರುಕುಲವೇ ಅಂದಿನ ಜ್ಞಾನದೇಗುಲ.
ಅನಂತರ
ಗುರು ಪರಂಪರೆಯನ್ನು ಆವರಿಸಿಕೊಂಡದ್ದು ಶಿಕ್ಷಣ ವ್ಯವಸ್ಥೆ. ಇದು ಮೊಳಕೆಯೊಡೆದದ್ದು 1835ರಲ್ಲಿ. ಈ ವ್ಯವಸ್ಥೆಯ ಓಘ 1990ರ ತನಕ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿತ್ತು. ಇದೇ ಸಂದರ್ಭ ಭಾರತದ ಸ್ವಾತಂತ್ರ್ಯ ಹೋರಾಟ, ಅದರಲ್ಲಿನ ಗೆಲುವು ಮತ್ತು ಎಲ್ಲಾ ರೀತಿಯ ಐರೋಪ್ಯ ಮತ್ತು ಪೌರತ್ಯ ಪ್ರಣೀತ ಚಿಂತನೆಗಳು ಮತ್ತು ಸಾಧನಗಳು ನಮ್ಮ ನೆಲವನ್ನು ಪ್ರವೇಶಿಸಿದ್ದು. ಮತ್ತು ನಾವು ಕೂಡ ಆ ಸಂಗತಿಗಳಲ್ಲಿ ಸಾಧನೆ ಮಾಡಿದ್ದು. ಇದಕ್ಕೆಲ್ಲ ಕಲಶವಿಟ್ಟಂತೆ ಪ್ರಜಾಪ್ರಭುತ್ವವನ್ನು ನಮ್ಮ ಆಡಳಿತ ವಿಧಾನವಾಗಿ ಸ್ವೀಕರಿಸಿದ್ದು. ಈ ವ್ಯವಸ್ಥೆಯ ಸಮರ್ಪಕತೆಯ ಬಗ್ಗೆ ಪ್ರಶ್ನೆಗಳಿದ್ದರೂ ವಿದ್ಯೆಯನ್ನು ಸಾರ್ವತ್ರಿಕ ಮಾಡಿತು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಉಳಿದಂತೆ ಇದರ ಒಳಿತು ಕೆಡುಕುಗಳು ಮತ್ತು ಈ ವ್ಯವಸ್ಥೆ ಹುಟ್ಟಿಕೊಳ್ಳಲು ಕಾರಣವಾದ ಸಂಗತಿಗಳು ಒತ್ತಟ್ಟಿಗಿರಲಿ. ಇಲ್ಲಿ 'ಗುರು' 'ಶಿಕ್ಷಕ'ನಾದ. ಆದರೆ ಆಶಯ ಬದಲಾಗಲಿಲ್ಲ, ಬರಡಾಗಲಿಲ್ಲ. ಕಾರಣವಿಷ್ಟೇ ಈ ವ್ಯವಸ್ಥೆ ಹೀರಿಕೊಂಡದ್ದು ಆ ಪರಂಪರೆಯಿಂದ!
ಶಿಕ್ಷಕ, ಮೇಷ್ಟ್ರು, ಟೀಚರ್, ಲೆಕ್ಚರರ್ ಅಂದರೆ ತುಂಬು ಗೌರವ ಅ ಗುರುವಿಗೆ ಸಂದಂತೆ ಇವರಿಗೂ ಸಲ್ಲುತ್ತಿತ್ತು. ಇಲ್ಲಿ ಅವರಿಗೆ ದೈವಂಶ ಸಂಭೂತರೆಂಬ ಪಟ್ಟವಿರದಿದ್ದರು ಬೀದಿಯಲ್ಲಿ ಅವರ ತಲೆ ಕಂಡರೆ ಸಾಕು ಹಿರಿಕಿರಿಯರೆನ್ನದೇ ಎಲ್ಲರಿಂದಲೂ ನಮಸ್ತೆಗಳ ಸುರಿಮಳೆ. ಅದೇನೂ ಒತ್ತಾಯಪೂರ್ವಕವಾಗಿ ಬರುತ್ತಿದ್ದದ್ದಲ್ಲ. ಅದು ಸಹಜ ಮತ್ತು ಭಕ್ತಿ ಪೂರ್ವಕ. ನಮ್ಮ ಹಳ್ಳಿಗಳಲ್ಲಿ ಈ ಟೀಚರ್ ಕೈಗೇ ಮಕ್ಕಳನ್ನು ಒಪ್ಪಿಸಿ ಅಂದರೆ ಶಾಲೆಗೆ ಕಳುಹಿಸಿದರೆ ಮನೆಮಂದಿಯಲ್ಲಿ ಅದೇನೋ ಒಂದು ಸಂತೃಪ್ತ ಭಾವ ಮತ್ತೊಂದು ಸುಂದರ ಕನಸು.
ಈ ವ್ಯವಸ್ಥೆಯಲ್ಲಿ ಪ್ರೀತಿಯಿಂದ ತೀಡುವ ವಿಠಲ ಮೇಷ್ಟ್ರು ಇದ್ದರು, ಕೋಲಿನಿಂದ ಬಡಿಯುವ ರುದ್ರಪ್ಪ ಮೇಷ್ಟ್ರು ಇದ್ದರು. ಅವೆಲ್ಲವನ್ನು, ಅವರೆಲ್ಲರನ್ನೂ ಮಕ್ಕಳು ಜೀರ್ಣಿಸಿಕೊಳ್ಳುತ್ತಿದ್ದರು ಅದಕ್ಕಿಂತ ಹೆಚ್ಚಾಗಿ ಹೆತ್ತವರು ಕೂಡ! ಆ ಪೆಟ್ಟಿನ ಭಯದಿಂದ ಕಲಿತು ಮಹನೀಯರಾದವರು ಬಹಳಷ್ಟು ಮಂದಿ. ನಮ್ಮ ನಮ್ಮ ಅಪ್ಪ ಅಮ್ಮಂದಿರೂ ಕೂಡ!
ಈಗ
ಹೊಡೆತಕ್ಕೆ ಬಿದ್ದಿದೆ ಫುಲ್ ಸ್ಟಾಪ್. ಸ್ವತಃ ಸರಕಾರವೇ ಈ ನಿರ್ದೆಶನವಿತ್ತಿದೆ. ಶಿಕ್ಷಣ ವ್ಯವಸ್ಥೆ, ಶಿಕ್ಷಣ ಕ್ಷೇತ್ರವಾಗಿದೆ. ಶಿಕ್ಷಕನದ್ದು ಒಂದು ವೃತ್ತಿ ಅಷ್ಟೆ. ಅದಕ್ಕಿಂತ ಆಚೆ ಅವನು ವಿಸ್ತರಿಸಲಾರ. ವಿಸ್ತರಿಸಿದರೂ ಕತ್ತರಿಸುವ ಕೈಗಳು ಸಮಾಜದಲ್ಲೇ ಇದೆ. ಒಬ್ಬ ವಿಧ್ಯಾರ್ಥಿಯ ಮೇಲಿರುವ ತನ್ನ ಜವಾಬ್ದಾರಿಗಳನ್ನು ಆತ ಸಂಕುಚಿತಗೊಳಿಸಿಕೊಂಡಿದ್ದಾನೆ ಅಥವಾ ಹಾಗೇ ಮಾಡುವಂತೆ ನಿರ್ಬಂಧಿಸಲಾಗುತ್ತಿದೆ. ಈ ಶಿಕ್ಷಕನಿಗೆ ವೃತ್ತಿ ಪರತೆ ತುಂಬುವ ಪ್ರಯತ್ನ ನಡೆಯುತ್ತದೆಯೇ ಹೊರತು ಸಮಗ್ರತೆ ಮತ್ತು ಸಂಸ್ಕಾರವನಲ್ಲ. ಅವನಿಗೆ ಸಿಗದ ಸಂಸ್ಕಾರವನ್ನು ಅವ ಹೇಗೆ ತಾನೇ ತನ್ನ ವಿಧ್ಯಾರ್ಥಿಗಳಿಗೆ ಅಂದರೆ ಮುಂದಿನ ಪೀಳಿಗೆಗೆ ದಾಟಿಸಬಲ್ಲ?
ಈಗ ಮಕ್ಕಳಿಗೆ ಹೊಡೆಯುವಂತಿಲ್ಲ. ನಿಜ, ಯಾವ ರೀತಿಯ ಹೊಡೆತವೂ ಅಕ್ಷಮ್ಯವೇ. ಆದರೆ ಕೆಲ ಮಕ್ಕಳು ಪೆಟ್ಟು ತಿನ್ನದೇ ಸರಿಯಾಗುವುದಿಲ್ಲ. ಕಲ್ಲು ಮೂರ್ತಿಯಾಗುವುದು ಉಳಿ ಪೆಟ್ಟಿನಿಂದಾಗಿಯೇ ಹೊರತು ಪ್ರಾರ್ಥನೆಯಿಂದ ಅಲ್ಲ! ನಾ ಆಗಲೇ ಬರೆದಂತೆ ನಮ್ಮಲ್ಲಿ ಅಥವಾ ನಮ್ಮ ಹಿಂದಿನ ಪೀಳಿಗೆಯ ಬಹಳಷ್ಟು ಮಂದಿ ಮೇಷ್ಟ್ರ ಕೈಯಿಂದ ಪೆಟ್ಟು ತಿಂದೆ ಗಟ್ಟಿಯಾದವರು.
ಈಗ ಶಿಕ್ಷಕನ ಜ್ಞಾನಕ್ಕೂ ಅಷ್ಟೊಂದು ಮಹತ್ವವಿಲ್ಲ. ಅದು ಎಲ್ಲ ಕಡೆಯೂ ಸಿಗುವ ಸಂಗತಿಯಾಗಿ ಬಿಟ್ಟಿದೆ. ಮಕ್ಕಳನ್ನು ಬೇಕಾಬಿಟ್ಟಿ ಪಾಸ್ ಮಾಡಿಸಬೇಕೆಂಬ ಸರಕಾರದ ಹವಣಿಕೆಗೆ ಈ ಮೇಷ್ಟ್ರುಗಳು ಬಲಿಪಶುಗಳು. ಈ ಕ್ಷೇತ್ರದ ಮೇಲೆ ಮತ್ತು ಇಲ್ಲಿ ದುಡಿಯುವವರ ಮೇಲೆ ಇಡಬಹುದಾದ ನಂಬಿಕೆ ಧರಾಶಾಯಿಯಾಗುತ್ತಿದೆ. ಇದು ಜಾಗತಿಕರಣದ ಕೊಡುಗೆ. ಇಲ್ಲಿ ಶಿಕ್ಷಕನ ಮಾದರಿತನಕ್ಕೆ ಕುರುಹು ಆತ ವಿಧ್ಯಾರ್ಥಿಗಳಿಗೆ ತುಂಬಿರುವ ಆದರ್ಶವಲ್ಲ ಬದಲು ಆವರಿಗೆ ಉದ್ಯೋಗ ಲೋಕದಲ್ಲಿ ಐದಂಕಿ ಸಂಬಳ ಗಳಿಸುವ ಆರ್ಹತೆ ಇದೆಯಾ? ಎಂಬುದು. ಈಗ ಗುರುವಿಗೂ ಗುರಿ ಇಲ್ಲ ಇದ್ದರೂ ಆದಕ್ಕೇ ಬೆಲೆ ಇಲ್ಲ!
ನಾಳೆ
ಮಾನವ ಪಾಠ ಮಾಡುವುದು ಅನುಮಾನ. ಯಂತ್ರ ಮಾನವನಿಗೆ ಸಿಗಬಹುದು ಈ ಸ್ಥಾನಮಾನ. ಮಾನವ ಪಾಠ ಮಾಡಿದರೂ ಮಕ್ಕಳು ಮತ್ತು ಮೇಷ್ಟ್ರ ಮಧ್ಯೆ ಭಾವನಾ ಶೂನ್ಯತೆ ಆಥವಾ ನಿರ್ವಾತ ನೆಲೆ ಮಾಡಿರಬಹುದು. ಬಿಳಿ ಚಾಕ್, ಕರಿ ಬೋರ್ಡ್ ನಮ್ಮ ನೆನಪಿನ ಕೋಶ ಸೇರಿರಬಹುದು. ಸಮಾಜದ ದೃಷ್ಟಿಯಲ್ಲಿ ಮೇಷ್ಟ್ರು ಕೆಲಸಕ್ಕೂ ಕಾರಕೂನನ ಕೆಲಸಕ್ಕೂ ಒಂದಿನಿತೂ ವ್ಯತ್ಯಾಸ ಉಳಿದಿರಲಾರದು. ಈ ಮೇಷ್ಟ್ರುಗಳು ಮತ್ತವರು ಕಲಿಸಿದ ಪಾಠ ಎರಡು ವರ್ಷವೂ ವಿಧ್ಯಾರ್ಥಿಗಳ ಮನದಲ್ಲಿ ಬಾಳದೇ ಹೋಗಬಹುದು. ಮಗುವಿನ ಅಗತ್ಯಕ್ಕೂ ಮಿಗಿಲಾದ ಕಂಪ್ಯೂಟರ್ ಬಳಕೆ ಸೇರಿಕೊಳ್ಳಬಹುದು. ಶಿಸ್ತಿನ ಹೆಸರಲ್ಲಿ ಅನೇಕ ಸರ್ಕಸ್ ಗಳು ನಡೆಯಬಹುದು.
ಶಿಕ್ಷಕರ ದಿನಾಚರಣೆ ಮಾತ್ರ ಅದ್ದೂರಿಯಾಗಿ ಜರುಗಬಹುದು!

Saturday, September 5, 2009

ನ್ಯಾನೋಗೆ ಉತ್ತರವಾಗಬಲ್ಲದೇ ರೈನೋ?



ನ್ಯಾನೋ ಕಾರು ಆರ್ಥಿಕವಾಗಿ ಎಷ್ಟು ಮುಖ್ಯವಾಗಿದೆಯೋ ಅಷ್ಟೇ ಮುಖ್ಯವಾಗಿ ಅದು ನಮ್ಮ ಚಿಂತನಕ್ರಮದಲ್ಲೊಂದು ಬದಲಾವಣೆ ತಂದಿದೆ. ಇಂದು ಬಹುತೇಕ ಕಾರು ಉತ್ಪಾದಕರು ಚಿಕ್ಕ ಕಾರು ತಯಾರಿಸುವತ್ತ ಗಮನಹರಿಸುತ್ತಿರುವಾಗಲೇ ಬೆಂಗಳೂರಿನ ಮೆಕ್ಯಾನಿಕಲ್ ಇಂಜಿನಿಯರೊಬ್ಬರು ಅದನ್ನು ಸಾಧಿಸಿ ತೋರಿಸಿದ್ದಾರೆ.
'ರೈನೋ' ಎಂಬ ನಾಮಧೇಯದ ಈ ಕಾರು ನೋಡಲು ರೈನೋಸಾರಸ್ ನಂತೆಯೆ ಇದೆ.ಅಚ್ಚರಿಯೆಂದರೇ ರೈನೋ ಬರೀ 150 ಕೆಜಿ ತೂಗುತ್ತದೆ. ಆದರೆ 30 ರಿಂದ 35 ಕಿ.ಮೀ ಮೈಲೇಜ್ ಕೊಡುತ್ತದೆ. ಗಂಟೆಗೆ 60 ಕಿ.ಮೀ ವೇಗದಲ್ಲಿ ಸರಾಗವಾಗಿ ಚಲಿಸಬಲ್ಲದು.ನಾಲ್ಕು ಫೀಟ್ ಅಗಲ, ನಾಲ್ಕು ಫೀಟ್ ಎತ್ತರ ಮತ್ತು ಎಂಟು ಫೀಟ್ ಉದ್ದವಿರುವ ಈ ಕಾರಲ್ಲಿ ಡ್ರೈವರ್ ಸೇರಿ ಇಬ್ಬರು ಕೂರಬಹುದು. 25 ಕೆ.ಜಿ ಲಗೇಜ್ ಇಟ್ಟುಕೊಳ್ಳಬಹುದು.ಮಡಚಬಹುದಾದ ಸ್ಟೇರಿಂಗ್ ಮತ್ತು ಒಂದೇ ಬಾಗಿಲು ಈ ಕಾರಿನ ವೈಶಿಷ್ಟ್ಯ. ಯಾವುದೇ ಇಂಜಿನ್ ಕೂಡ ಬಳಸಬಹುದು.ಗೇರ್ ವ್ಯವಸ್ಥೆ ಇರುವ ಕಾರು ಇದಾಗಿರುವುದರಿಂದ ಎತ್ತರ ಪ್ರದೇಶಕ್ಕೂ ನಿರಾಯಾಸವಾಗಿ ಚಲಿಸಬಲ್ಲದು ಆದರೆ ಚಕ್ರ ಚಿಕ್ಕದಾಗಿರುವುದರಿಂದ ಗುಂಡಿಗಳಿರುವ ರಸ್ತೆಯಾದ್ರೆ ಸ್ವಲ್ಪ ಕಷ್ಟ, ಆದರೆ
ದೊಡ್ಡ ಚಕ್ರವನ್ನು ಬೇಕಾದರೆ ಆಳವಡಿಸಿಕೊಳ್ಳಬಹುದು ಎಂಬುದು ನಿರ್ಮಾತೃವಿನ ಅಭಿಪ್ರಾಯ.
ಬೆಂಗಳೂರಿನ ಪಾರ್ಕಿಂಗ್ ಸಮಸ್ಯೆಯಿಂದ ಬೇಸತ್ತು ಅದಕ್ಕೆ ಪರಿಹಾರವಾಗಿ ನಾನು ಈ ಕಾರು ತಯಾರಿಸುವ ನಿಟ್ಟಿನಲ್ಲಿ ಯೋಚಿಸಿದೆ ಎನ್ನುತ್ತಾರೆ ಇದರ ರೂವಾರಿ ನರಸಿಂಹರಾಜು. ಇಂಜಿನ್ ಮತ್ತು ಚಕ್ರಗಳನ್ನು ಹೊರತು ಪಡಿಸಿದರೆ ಉಳಿದೆಲ್ಲವನ್ನು ನಾನೇ ವಿನ್ಯಾಸ ಮಾಡಿಕೊಂಡೆ ಎನ್ನುತ್ತಾರವರು. ಅಂಗವಿಕಲರಿಂದ ಈ ಕಾರಿಗೆ ಹೆಚ್ಚಿನ ಬೇಡಿಕೆ ಇದೆ ಆದರೆ ಕ್ಲಚ್ ಮತ್ತು ಬ್ರೇಕ್ ಕಾಲಲ್ಲೇ ಉಪಯೋಗಿಸುವ ರೀತಿಯಲ್ಲಿ ವಿನ್ಯಾಸವಿರುವುದರಿಂದ ಅದರ ಬಳಕೆಗೆ ಕಷ್ಟವಾಗಬಹುದು ಅದ್ದರಿಂದ ಅವನ್ನು ಕೈಯಿಂದ ಬಳಸುವಂತೆ ರೂಪಿಸುವ ದಿಸೆಯಲ್ಲಿ ಅವರು ಗಂಭೀರವಾಗಿ ಚಿಂತಿಸುತ್ತಿದ್ದಾರೆ.ನನ್ನಿಂದ ಇದರ ಬೃಹತ್ ಪ್ರಮಾಣದ ಉತ್ಪಾದನೆ ಸಾಧ್ಯವಿಲ್ಲ, ದೊಡ್ಡ ಕಂಪೆನಿಗಳು ಮುಂದೆ ಬಂದರೆ ನಾನು ಇದರ ತಂತ್ರಜ್ಙಾನ ಕೊಡುತ್ತೇನೆ ಎನ್ನುವ ಇವರು ಹೀಗಾದರೆ ಈ ಕಾರು ರೂ. 80,000ಕ್ಕೆ ಗ್ರಾಹಕರ ಕೈಸೇರಬಹುದು ಎಂದು ಅಭಿಪ್ರಾಯ ಪಡುತ್ತಾರೆ. ಕಿಸೆಗೂ, ರಸ್ತೆಗೂ ಹಗುರವಾಗಿರುವ ಈ ಕಾರು ಅದಷ್ಟೂ ಬೇಗ ನಮ್ಮ ರಸ್ತೆಗಳಲ್ಲಿ ಓಡುವಂತಾದರೆ ಅನೇಕರ ಕಾರು ಕೊಳ್ಳುವ ಕನಸು ನನಸಾಗಬಹುದು. ಹಾಗೆಯೇ ನಗರಗಳ ಪಾರ್ಕಿಂಗ್ ಸಮಸ್ಯೆ ಕೂಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು.
ಇವರ ಪ್ರಯೋಗಶೀಲತೆ ಇಷ್ಟಕ್ಕೆ ಸೀಮಿತವಾಗಿಲ್ಲ. ಗ್ರಾಮೀಣ ಜನತೆಯನ್ನು ಗಮನವಿಟ್ಟುಕೊಂಡು ಸೈಕಲ್ ಗೆ ಶಾಕ್ ಅಬ್ಸರ್ವರ್ ಅಳವಡಿಸುವ ಪ್ರಯತ್ನ ಮಾಡಿ ಅದರಲ್ಲೂ ಯಶ ಕಂಡಿದ್ದಾರೆ. ಇದು ಬೆನ್ನು ನೋವಿನಿಂದ ನರಳುತ್ತಿರುವವರಿಗೆ ಉಪಯುಕ್ತ ಎಂಬುದು ಅವರ ಅನಿಸಿಕೆ. ರಕ್ಷಣಾ ಉದ್ದೇಶಕ್ಕೆ ಬಳಸಬಹುದಾದ ರೊಬೊಟ್ ಕೂಡ ಇವರ ಕೈಯಲ್ಲಿ ರೂಪುಗೊಂಡಿದೆ. ಇದನ್ನು ರಿಮೋಟ್ ಕಂಟ್ರೋಲ್ ಬಳಸಿ ನಿಯಂತ್ರಸಬಹುದಾಗಿದ್ದು ತನ್ನ ಕೈಯಲ್ಲಿ ಮೂರು ಕೆಜಿ ಭಾರ
ಎತ್ತಿ ಅದನ್ನು ಅತ್ತಿತ್ತ ಕೊಂಡೊಯ್ಯಬಲ್ಲದು ಅಲ್ಲದೆ ಅದನ್ನು ನಾಶಮಾಡಬಲ್ಲದು. ಇದು ಬಾಂಬ್ ನಿಷ್ಕ್ರೀಯಗೊಳಿಸಲು ಸಹಕಾರಿ. ತಲೆ ಮೇಲೆ ಗನ್ ಇಟ್ಟುಕೊಳ್ಳುವ ವ್ಯವಸ್ಥೆಯಿದ್ದು ಅದನ್ನು 360 ಡಿಗ್ರಿಯಷ್ಟು ತಿರುಗಿಸಬಹುದಾಗಿದೆ. ಮೇಲೆ ಕೆಳಗೆ ಚಲಿಸುವಂತೆಯೂ ಮಾಡಬಹುದು. ಇದು ಶತ್ರುಗಳ ಮೇಲೆ ಗುಂಡಿನ ದಾಳಿ ನಡೆಸಲು ಉಪಯುಕ್ತ. ಇದು ಚಕ್ರದ ಸಹಾಯದಿಂದ ಚಲಿಸುತ್ತದೆ ಅದುದರಿಂದ ಸಮತಟ್ಟಾದ ಜಾಗಗಳಲ್ಲಿ ಮಾತ್ರ ಇದರ ಬಳಕೆ ಸಾಧ್ಯ. ಅದರೆ ಚಕ್ರದ ಬದಲು ಟ್ರ್ಯಾಕ್ ಬಳಸಿ ಗುಡ್ಡಗಾಡು ಪ್ರದೇಶಗಳಲ್ಲೂ ಇದನ್ನು ಬಳಸುವಂತೆ ಮಾಡಬಹುದಾಗಿದೆ.
ಇದರೊಂದಿಗೆ ರೋಟಿ ಮೇಕರ್ ಎಂಬ ಅಡುಗೆ ಮನೆಯಲ್ಲಿ ಬಳಸುವ ಉಪಕರಣವೊಂದನ್ನು ಅವರು ತಯಾರಿಸಿದ್ದು ಇದರ ಸಹಾಯದಿಂದ ಅರೆ ನಿಮಿಷದಲ್ಲಿ ಎಣ್ಣೆ ರಹಿತ ಚಪಾತಿ ಮಾಡಲು ಸಾಧ್ಯ. ಇನ್ನು ಬೆಂಗಳೂರಿನ ಚರಂಡಿ, ಮೋರಿಗಳಲ್ಲಿ ಹರಿದ ವ್ಯರ್ಥವಾಗುತ್ತಿರುವ ಕೊಳಚೆ ನೀರನ್ನು ಬಳಸಿ ವಿದ್ಯುತ್‌ ತಯಾರಿಸುವ ಹಂಬಲ ಇವರದ್ದು. ಆಸಕ್ತರು ನರಸಿಂಹರಾಜು ಅವರನ್ನು (9845115142) ಸಂಪರ್ಕಿಸಬಹುದು.