Friday, November 23, 2012

'ನವೀನ’ರೂಪಿ ಬ್ರಹ್ಮಾಂಡ ಭ್ರಷ್ಟಾಚಾರ


೨೦೦೧ರ ಜುಲೈ. ಹೊಸ ಸರ್ಕಾರಕ್ಕೆ ವರ್ಷ ತುಂಬುವ ಸಂಭ್ರಮ. ಅದೇ ಸಂದರ್ಭದಲ್ಲಿ ಮೂವರು ಘಟಾನುಘಟಿ ಸಚಿವರ ಮೇಲೆ ಭ್ರಷ್ಟಾಚಾರದ ಆರೋಪ. ಕ್ಷಣಾರ್ಧದಲ್ಲೇ ಆ ಸಚಿವರಿಗೆ ರಾಜೀನಾಮೆ ನೀಡುವಂತೆ ಸೂಚನೆ. ತಮ್ಮ ಎರಡನೇ ಅಧಿಕಾರ ಅವಧಿಯಲ್ಲಿ ಅದಕ್ಷತೆ, ಭ್ರಷ್ಟಾಚಾರದ ಆರೋಪಕ್ಕೆ ತುತ್ತಾದ ೧೨ ಸಚಿವರಿಗೆ ಗೇಟ್‌ಪಾಸ್. ತನ್ನ ಸಹೋದ್ಯೋಗಿಯೇ ಆಗಲಿ ಆಧಿಕಾರಶಾಹಿಯೇ ಆಗಲಿ ಯಾವುದೆ ಹಗರಣದ ಆರೋಪ ಕೇಳಿ ಬಂದದ್ದೆ ಆದರೆ ಆತನನ್ನು ಮನೆಗೆ ಕಳುಹಿಸಲು ಹಿಂದೆ ಮುಂದೆ ನೋಡದ ಒಬ್ಬ ವ್ಯಕ್ತಿ ಇಂದಿನ ರಾಜಕೀಯ ಕ್ಷೇತ್ರವನ್ನು ಆಳುತ್ತಿದ್ದಾನೆ, ಆತ ೧೨ ವರ್ಷದಿಂದ ಮುಖ್ಯಮಂತ್ರಿಯಾಗಿದ್ದಾನೆ ಎಂದು ಹೇಳಿದರೆ ನಂಬುವವರು ಯಾರು? ಅಂತಹ ಒಂದು ಆಶಾಕಿರಣವನ್ನು ಕೂಡ ಭ್ರಷ್ಟ್ಟಾಚಾರದ ಪ್ರಖರ ಪ್ರಭೆ ಇದೀಗ ಮಂಕಾಗಿಸಿದೆ.

ಒಡಿಶಾದ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರಿಗಿದ್ದ ಕ್ಲೀನ್ ಇಮೇಜ್‌ನ ದಂತ ಗೋಪುರ ಕುಸಿದು ಬಿದ್ದಿದೆ. ದೇಶದ ಅತ್ಯಂತ ಭ್ರಷ್ಟ ರಾಜ್ಯಗಳ ಸಾಲಿಗೆ ಒಡಿಶಾ ಭರ್ಜರಿಯಾಗಿ ಎಂಟ್ರಿ ಮಾಡಿದ್ದು ಅಷ್ಟರಮಟ್ಟಿಗೆ ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ನವೀನ್ ಕಳೆದ ೧೨ ವರ್ಷಗಳಲ್ಲಿ ತನ್ನವರನ್ನು ಬಲಿಕೊಟ್ಟು ಕಾಪಾಡಿಕೊಂಡು ಬಂದಿದ್ದ ’ಭ್ರಷ್ಟತೆಯ ಅಸಹಿಷ್ಣು’ ಎಂಬ ಬಿರುದಿನ ಗುಳ್ಳೆ ಒಡೆದು ಕೀವುಗಳು ಹೊರಬರುತ್ತಿದೆ.
ಜೂನಿಯರ್ ಪಾಟ್ನಯಕ್ ೨೦೦೦ನೇ ಇಸವಿಯಿಂದಲೂ ಒಡಿಶಾದ ಮುಖ್ಯಮಂತ್ರಿ. ಈ ಬಾರಿಯದ್ದು ಅವರದ್ದು ಮೂರನೆ ಸರದಿ. ಕಳೆದ ಚುನಾವಣೆ (೨೦೦೯) ಅವರಿಗೆ ಅತ್ಯಂತ ಮಹತ್ವದಾಗಿತ್ತು. ಕಾರಣ ಅಂದು ಅವರ ಬಿಜು ಜನತಾದಳ ವಿಧಾನಸಭೆ ಚುನಾವಣೆಗೆ ತಿಂಗಳು ಬಾಕಿ ಇರುವಾಗಲಷ್ಟೆ ತನ್ನ ಬಹುಕಾಲದ ಗೆಳೆಯ ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಡಿದುಕೊಂಡಿತ್ತು. ಆದರೂ ಚುನಾವಣೆಯಲ್ಲಿ ನಿರಾಯಾಸ (೧೪೭ರಲ್ಲಿ ೧೦೩ ಸ್ಥಾನ ಗೆದ್ದು) ವಾಗಿ ಬಹುಮತ ಪಡೆದು ಮೂರನೇ ಬಾರಿಗೆ ಸಿಎಂ ಆಗಿದ್ದರು.

ಬಿಜೆಪಿ - ಬಿಜೆಡಿಯ ಮೈತ್ರಿ ಮುರಿದುಬೀಳಲು ಪ್ರಮುಖ ಕಾರಣ ಬಿಜೆಪಿಯೂ ಸರ್ಕಾರದ ಮೇಲೆ ಗಣಿ ಅಕ್ರಮ ಮತ್ತು ಭ್ರಷ್ಟಾಚಾರದ ಗಂಭೀರ ಆರೋಪ ಹೊರಿಸಿದ್ದು ಎಂದು ಹೇಳಲಾಗುತ್ತದೆ. ಆದರೆ ನವೀನ್ ಪಾಟ್ನಾಯಕ್ ತನಗೆ ಮೋಸ ಮಾಡಿದರು ಎಂಬುದು ಬಿಜೆಪಿಯ ಅಧಿಕೃತ ಹೇಳಿಕೆ. ಇದೀಗ ಕೇಂದ್ರ ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಶ್ರೀಕಾಂತ್ ಜೆನಾ ನವೀನ್‌ರ ಮೇಲೆ ಆರೋಪ ಹೊರಿಸಿದ್ದು ಮಾತ್ರವಲ್ಲದೆ  ಅವರ ರಾಜೀನಾಮೆ ಕೇಳಿದ್ದಾರೆ. ನವೀನ್‌ರ ತಪ್ಪು ನೀತಿಗಳಿಂದಾಗಿ ಬೊಕ್ಕಸಕ್ಕೆ ೪ ಲಕ್ಷ ಕೋಟಿ ನಷ್ಟವಾಗಿದೆ, ಒಡಿಶಾ ಗಣಿ ಅಕ್ರಮಕ್ಕೆ ಕುಪ್ರಸಿದ್ಧವಾಗಿರುವ ಕರ್ನಾಟಕ ಮತ್ತು ಗೋವಾವನ್ನು ಮೀರಿಸಿದೆ ಎಂಬುದು ಅವರ ಆರೋಪ. ಕೇಂದ್ರದ ಸಚಿವರೊಬ್ಬರು ಈ ರೀತಿಯ ಆರೋಪ ಮಾಡಿರುವುದರಿಂದ ನವೀನ್ ಫಜೀತಿಗೆ ಸಿಲುಕಿಕೊಂಡಿದ್ದಾರೆ.

ನವೀನ್ ಗಣಿ ಅಕ್ರಮದಲ್ಲಿ ಭಾಗಿಯಾಗಿ ದೇಶದ ಬೊಕ್ಕಸಕ್ಕೆ ೭,೦೦೦ ಕೋಟಿ ರೂ ನಷ್ಟ ತಂದಿದ್ದಾರೆ ಎಂದು ಸರ್ಕಾರೇತರ ಸಂಸ್ಥೆಯೊಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆದ ಆಕ್ರಮದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಹೇಳಿತ್ತು. ಬೇಳೆ ಹಗರಣಕ್ಕೆ ನವೀನ್ ತನ್ನ ಸಚಿವ ಸಂಪುಟದಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಪ್ರಮೀಳಾ ಮಲ್ಲಿಕ್‌ರಿಂದ ರಾಜೀನಾಮೆ ಪಡೆಯಬೇಕಾಯಿತು.

ಕಲ್ಲಿದ್ದಲು ಹಗರಣದ ಕೋಲಾಹಲ ಮೊದಲು ಕೇಳಿಸಿದ್ದೆ ಒಡಿಶಾದಿಂದ. ಈ ಹಗರಣದಿಂದ ಉನ್ನತ ಶಿಕ್ಷಣ ಸಚಿವರಾಗಿದ್ದ ಬದ್ರಿ ನಾರಯಣ ಪಾತ್ರ ಮತ್ತು ಸಾರ್ವಜನಿಕ ಶಿಕ್ಷಣ ಸಚಿವ ಪ್ರತಾಪ್ ಜೆನಾ ಸಚಿವ ಸಂಪುಟದಿಂದ ಹೊರ ನಡೆಯಬೇಕಾಯಿತು. ಕಳೆದ ೯ ವರ್ಷಗಳಲ್ಲಿ ನವೀನ್ ಸರ್ಕಾರ ೫,೦೦೦ ಹೆಕ್ಟೇರ್ ಗಣಿ ಗುತ್ತಿಗೆ ನೀಡಿದೆ. ಕಲ್ಲಿದ್ದಲು ಹಗರಣದಿಂದ ಬೊಕ್ಕಸಕ್ಕೆ ೧೨೫ ಬಿಲಿಯನ್ ನಷ್ಟ ಎಂದು ಅಂದಾಜಿಸಲಾಗಿದೆ.  

ನಿಯಮಗಿರಿಯಲ್ಲಿ ಬಾಕ್ಸೈಟ್ ಗಣಿಗಾರಿಕೆ ನಡೆಸಲು ವೇದಾಂತಕ್ಕೆ ಅವಕಾಶ ನೀಡಬೇಕು ಎಂಬುದು ರಾಜ್ಯ ಸರ್ಕಾರದ ಒತ್ತಾಸೆ. ಆದರೆ ಕೇಂದ್ರ ಪರಿಸರ ಇಲಾಖೆಯಿಂದ ಅಸಮ್ಮತಿ. ಆ ಬಳಿಕ ವೇದಾಂತ ವಿಶ್ವವಿದ್ಯಾಲಯದ ರಾದ್ಧಾಂತ! ಪೋಸ್ಕೋ ಎಂಬ ಮತ್ತೊಂದು ದೈತ್ಯ ಉಕ್ಕು ಕಂಪೆನಿಗೆ ತನ್ನ ಉದ್ದಿಮೆ ಸ್ಥಾಪಿಸಲು ಅನುವು ಮಾಡಿಕೊಡಲು ಪ್ರಯತ್ನಿಸಿದ ನವೀನ್‌ಗೆ ಜನರಿಂದ ತೀವ್ರ ವಿರೋಧ. ಕಳೆದ ವರ್ಷದ ಜೂನ್‌ನಲ್ಲಿ ನಡೆದ ರಾಜ್ಯ ಸಭೆ ಚುನಾವಣೆ ಸಂದರ್ಭದಲ್ಲಿ ಸಚಿವರಿಬ್ಬರು ಕಾಂಗ್ರೆಸ್ ಶಾಸಕನೊಬ್ಬನ ಜೊತೆ ಕುದುರೆ ವ್ಯಾಪಾರಕ್ಕೆ ಇಳಿದದ್ದು ಜಗ ಜಾಹೀರಾಗುತ್ತಲೆ ನವೀನ್‌ಗೆ ಮತ್ತೊಂದು ಸಂಕಟ. ಹೀಗೆ ನವೀನ್‌ರ ಮೂರನೆ ಪಾಳಿ ಅನೇಕ ಗೊಂದಲಗಳ ಗೂಡು.

ಆದರೆ ಇಂತಹದ್ದೆಲ್ಲ ಕಠಿಣ ಸಮಯದಲ್ಲಿ ನವೀನ್ ’ಹರಕೆಯ ಕುರಿ’ ಹುಡುಕಿ ಬಚಾವ್ ಆಗುತ್ತಿದ್ದರು. ತಮ್ಮ ಕ್ಲೀನ್ ಇಮೇಜ್‌ನ್ನು ಮತ್ತಷ್ಟು ಎತ್ತರಕ್ಕೆ ಏರಿಸಿಕೊಳ್ಳುತ್ತಿದ್ದರು. ಆದರೆ ರಾಜ್ಯದಲ್ಲಿ ಇಷ್ಟೆಲ್ಲ ಅಕ್ರಮಗಳು ಮುಖ್ಯಮಂತ್ರಿಯ ಅರಿವಿಗೆ ನಿಲುಕದೆ ನಡೆದಿತ್ತು ಎಂಬುದನ್ನು ನಂಬುವುದು ಪರಮ ಕಷ್ಟ. ತನ್ನ ರಾಜಕೀಯ ಮಾರ್ಗದರ್ಶಕ ಪ್ಯಾರಿಲಾಲ್ ಮಹಾಪಾತ್ರ ತನ್ನ ವಿರುದ್ಧವೇ ದಂಗೆ ಎದ್ದು ತನ್ನ ಪದಚ್ಯುತಿಯ ಎಣಿಕೆ ಹಾಕಿದ್ದಾರೆ ಎಂಬ ವರದಿ ವಿದೇಶ ಪ್ರವಾಸದಲ್ಲಿದ್ದ ನವೀನ್‌ಗೆ ಸುಲಭವಾಗಿ ದಕ್ಕುತ್ತದೆ. ಆದರೆ ತನ್ನ ಕೈಗೆಳಗೆಯೇ ಒರಿಸ್ಸಾದ ದಟ್ಟ ಕಾಡುಗಳು ಅಕ್ರಮ ಗಣಿಗಾರಿಕೆಯ ಅಟ್ಟಹಾಸಕ್ಕೆ ನಲುಗುತ್ತಿರುವುದು ಗೊತ್ತಾಗಿಲ್ಲ ಎಂಬುದನ್ನು ಹೇಗೆ ತಾನೇ ನಂಬುವುದು?

ಗೋವಾದಲ್ಲಿ ನಡೆದಿದ್ದ ಗಣಿ ಅಕ್ರಮದ ಮೇಲೆ ಬೆಳಕು ಚೆಲ್ಲಿ ಅಲ್ಲಿ ಗಣಿಗಾರಿಕೆ ನಿಷೇಧಕ್ಕೆ ಕಾರಣವಾಗಿದ್ದ ನ್ಯಾ. ಎಮ್ ಬಿ ಷಾ ನೇತೃತ್ವದ ಆಯೋಗ ಇದೀಗ ಒರಿಸ್ಸಾದ ಗಣಿ ಹುಳುಕು, ಕೊಳಕುಗಳ ಬಗ್ಗೆ ವರದಿ ತಯಾರಿಸುತ್ತಿದ್ದಾರೆ. ಈ ತಂಡದಲ್ಲಿ ಕರ್ನಾಟಕದ ಗಣಿ ಲೂಟಿಕೋರರಿಗೆ ದುಃಸ್ವಪ್ನವಾಗಿದ್ದ ಅರಣ್ಯಾಧಿಕಾರಿ ಯು. ವಿ. ಸಿಂಗ್ ಕೂಡ ಇದ್ದಾರೆ.

ಗಣಿ ಲೂಟಿಯ ಸುಗ್ಗಿ ಪ್ರಾರಂಭವಾದ ಅನೇಕ ವರ್ಷಗಳ ಬಳಿಕ ಇತ್ತೀಚೆಗಷ್ಟೆ ನವೀನ್ ತನ್ನ ಇಮೇಜ್ ರಕ್ಷಣೆಗಾಗಿ ಗಣಿ ಅಕ್ರಮದಲ್ಲಿ ಭಾಗಿಯಾಗಿರುವ ೨೭ ಗಣಿ ಕಂಪೆನಿಗಳಿಗೆ ೫೮ ಸಾವಿರ ಕೋಟಿ ದಂಡ ವಿಧಿಸಿದ್ದಾರೆ. ಯಾಕೋ ಗಣಿ ಅಕ್ರಮ ತನ್ನೆಲ್ಲ ಸೀಮೆಯನ್ನು ಮೀರಿದ ಬಳಿಕ ಕರ್ನಾಟಕದ ಆಗಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ೨೦೧೦ರಲ್ಲಿ ಅದಿರು ರಫ್ತಿಗೆ ನಿಷೇಧ ಹೇರಿ ’ಕುರ್ಚಿ ಮತ್ತು ಇಮೇಜ್’ನ್ನು ರಕ್ಷಣೆ ಮಾಡಿಕೊಳ್ಳುವ ಅಂತಿಮ ಪ್ರಯತ್ನ ನಡೆಸಿದ್ದರು. ಇದೀಗ ಎಮ್ ಬಿ ಷಾ ಆಯೋಗ ತನ್ನ ವರದಿ ನೀಡುವ ಮುಂಚಿತವಾಗಿ ದಂಡ ವಿಧಿಸಿ ತನ್ನನ್ನು ಬಚಾವ್ ಮಾಡಿಕೊಳ್ಳುವ ಪ್ರಯತ್ನವನ್ನು ನವೀನ್ ಮಾಡಿಕೊಳ್ಳುತ್ತಿದ್ದಾರೆ ಎಂಬುದಾಗಿ ಅವರ ಕ್ರಮವನ್ನು ಬಣ್ಣಿಸಲಾಗುತ್ತಿದೆ. ಆದರೆ ಯಡಿಯೂರಪ್ಪ ಗಣಿ ಉರುಳಿಗೆ ಕೊರಳು ಕೊಡಲೇ ಬೇಕಾಯಿತು. ನವೀನ್‌ರ ಕೊರಳಿಗೆ ಗಣಿ ಉರುಳಾಗಬಹುದೇ ಅಥವಾ ಹರಕೆಯ ಕುರಿಗಳ ಕೊರಳಿಗೆ ಈ ಉರುಳು ಬೀಳಬಹುದೇ ಎಂಬ ಕುತೂಹಲ ಈಗಾಗಲೇ ಗರಿಗೆದರಿದೆ.

ನವೀನ್‌ರ ತಂದೆ ಬಿಜು ಪಾಟ್ನಾಯಕ್ ದೇಶದ ಜನಪ್ರಿಯ ಮತ್ತು ದೂರದರ್ಶಿತ್ವ ಹೊಂದಿದ್ದ ಅಪರೂಪದ ಮುಖ್ಯಮಂತ್ರಿಗಳಲ್ಲಿ ಒಬ್ಬರು. ’ಭ್ರಷ್ಟರನ್ನು ಹಿಡಿದು ಥಳಿಸಿ’ ಎಂದು ಹೇಳುವಷ್ಟು ಭ್ರಷ್ಟತೆಯನ್ನು ವಿರೋಧಿಸಿದ್ದ ವ್ಯಕ್ತಿ ಅವರು. ಅವರ ಸುಪುತ್ರ ನವೀನ್‌ರ ಸನಿಹದಲ್ಲೆ ಕಳಂಕದ ಸುಳಿ ಸುತ್ತುತ್ತಿದೆ. ಇದು ಅವರ ಕ್ಲೀನ್ ಇಮೇಜ್‌ಗೆ ಧಕ್ಕೆ ತಂದಿರುವುದು ನಿಜ, ಆದರೆ ಅವರ ರಾಜಕೀಯ ಭವಿಷ್ಯವನ್ನು ಆಹುತಿ ತೆಗೆದುಕೊಳ್ಳಲಿದೆಯೇ ಎಂಬುದು ಸ್ಪಷ್ಟವಾಗುವ ದಿನ ಸನಿಹದಲ್ಲೇ ಇದೆ.

Monday, November 19, 2012

ಚೀನಾಕ್ಕೆ ಹೊಸ ನೇತಾರ, ಸವಾಲುಗಳ ಮಹಾಪೂರ


ನವೆಂಬರ ತಿಂಗಳಿನ ಮೊದಲ ಅಷ್ಟ ದಿನಗಳು ನಾನಾ ಸಂಕಷ್ಟದೊಳಗೆ ಸಿಳುಕಿರುವ ಜಗತ್ತಿನ ಮುಂದಿನ ರೂಪುರೇಷೆಗಳ ದಿಕ್ಸೂಚಕ. ವಿಶ್ವದ ನಂಬರ್ ೧ ಆರ್ಥಿಕತೆ ಎಂದು ಕರೆಸಿಕೊಳ್ಳುವ ಅಮೆರಿಕಕ್ಕೆ ಮತ್ತೆ ನಾಲ್ಕು ವರ್ಷಗಳ ಕಾಲ ಬರಾಕ್ ಒಬಾಮಾರೇ ಅಧ್ಯಕ್ಷರು ಎಂಬುದು ಅಖೈರಾಗಿದೆ. ಇದೀಗ ವಿಶ್ವದ ನಂಬರ್ ೨ ಅರ್ಥ ವ್ಯವಸ್ಥೆ ಎಂದು ಕರೆಸಿಕೊಳ್ಳುವ ಚೀನಾವನ್ನು ಮುಂದಿನ ದಶ ವರ್ಷಗಳ ಕಾಲ ನೂತನ ಅಧ್ಯಕ್ಷ ಕ್ಷಿ ಜಿಂಪಿಂಗ್ ಮುನ್ನಡೆಸುವುದು ಸ್ಪಷ್ಟ. ಅವರಿಗೆ ಪ್ರಧಾನಮಂತ್ರಿಯಾಗಿ ಲೀ ಕ್ವಿಗಿಂಗ್ ಸಾಥ್ ನೀಡಲಿದ್ದಾರೆ.

ಇಳಿಜಾರಿನ ಹಾದಿಯಲ್ಲಿ ಪಾತಾಳ ಮುಖಿಯಾಗಿ ಸಾಗುತ್ತಿರುವ ಈ ಎರಡು ’ದೈತ್ಯ ಶಕ್ತಿಗಳು’ ತಾವು ಮುಳುಗುವುದರೊಂದಿಗೆ ಇಡೀ ಜಗತ್ತಿನ ಅರ್ಥ ವ್ಯವಸ್ಥೆಯನ್ನೇ ವಿಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿರುವುದರಿಂದ ಈ ದೇಶಗಳಲ್ಲಿ ನಡೆಯುವ ರಾಜಕೀಯ ಬೆಳವಣಿಗೆಗಳು ವಿಶ್ವ ಅರ್ಥಿಕತೆಯನ್ನೆ ಪಲ್ಲಟ ಮಾಡುವ ಪ್ರಚ್ಛನ್ನ ಶಕ್ತಿ ಹೊಂದಿದೆ.

ಅಮೆರಿಕ ಪ್ರಜಾಪ್ರಭುತ್ವ ರಾಷ್ಟ್ರ. ಅಲ್ಲಿ ಮುಕ್ತತೆ ಸೀಮಾತೀತ. ಅದ್ದರಿಂದ ಅಮೆರಿಕದ ತಪ್ಪು ಒಪ್ಪುಗಳ  ವಿಮರ್ಶೆ, ಟೀಕೆ ಟಿಪ್ಪಣಿ ನಡೆಸುವುದು ಸುಲಭ ಮತ್ತು ಸರಳ. ಆದರೆ ಚೀನಾ ಆಗಲ್ಲ. ಅಲ್ಲಿನ ಪ್ರಜೆಗಳು ಬಾಯಿಗೆ ಬೀಗ, ಲೇಖನಿಗೆ ನಿರ್ಬಂಧ ಹಾಕಿಕೊಂಡೆ ಬದುಕಬೇಕು. ಅದು ಅಪ್ಪಟ ಕಮ್ಯುನಿಷ್ಟ್ ಮಾದರಿಯ ಆಡಳಿತ ಹೊಂದಿರುವ ಬಂಡವಾಳಶಾಹಿ ಆರ್ಥಿಕತೆಯನ್ನು ಒಪ್ಪಿಕೊಂಡಿರುವ ರಾಷ್ಟ್ರ. ಇಂತಹ ರಾಷ್ಟ್ರವೊಂದು ಕಳೆದ ಇಪ್ಪತ್ತು ವರ್ಷಗಳಲ್ಲಿ ಸಾಧಿಸಿದೆ ಎಂದು ಹೇಳಿಕೊಳ್ಳುತ್ತಿರುವ ಅಭಿವೃದ್ಧಿಗೆ, ವ್ಯವಸ್ಥೆಗೆ ಇದೀಗ ಆಪತ್ತು ಎದುರಾಗಿದೆ. ಇಂತಹ ಇಳಿ ಸಮಯದಲ್ಲಿ ಚೀನಾದ ಚುಕ್ಕಾಣಿಯನ್ನು ಕ್ಷಿ ಜಿಂಪಿಂಗ್ ವಹಿಸಿಕೊಳ್ಳಲಿದ್ದಾರೆ.

ಗುಪ್ತತೆಯ ಮೈವೆತ್ತ ರೂಪವಾಗಿರುವ ಚೀನಾದ ಆಡಳಿತ ವ್ಯವಸ್ಥೆಯಲ್ಲಿ ಕ್ಷಿ ಜಿಂಪಿಂಗ್ ಅವರ ಹೆಜ್ಜೆ ಗುರುತುಗಳನ್ನು ಕಂಡು ಹಿಡಿಯುವುದು ಮೀನಿನ ಹೆಜ್ಜೆಯನ್ನು ಪತ್ತೆ ಹಚ್ಚಿದಂತಹ ಸಾಹಸ.

ಆದರೂ ಕ್ಷಿ ಜಿಂಪಿಂಗ್ ಅವರನ್ನು ಕಮ್ಯುನಿಷ್ಟ್ ಚೀನಾದ ೫ನೇ ಪೀಳಿಗೆ ನಾಯಕ. ಅವರಿಗೆ ಈಗ ೫೯ರ ಹರೆಯ. ಅವರು ಹಿರಿಯ ಕಮ್ಯುನಿಷ್ಟ್ ನಾಯಕ ಕ್ಷಿ ಝಾಕ್ಷನ್ ಅವರ ಪುತ್ರ. ಕೆಮಿಕಲ್ ಇಂಜಿನಿಯರಿಂಗ್ ಮತ್ತು ರಾಜಕೀಯ ಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದುಕೊಂಡಿದ್ದಾರೆ. ಅವರು ೨೦೦೭ರಲ್ಲಿ ಶಾಂಘೈಯಲ್ಲಿ ಪಕ್ಷದ ಮುಖ್ಯಸ್ಥರಾಗಿ ನೇಮಕಗೊಳ್ಳುತ್ತಲೆ ಚೀನಾದ ಅಧ್ಯಕ್ಷರಾಗಿ ಆಯ್ಕೆಗೊಳ್ಳುವ ಸಂಕೇತ ರವಾನೆಯಾಗಿತ್ತು.

ಆ ಬಳಿಕ ನವ ಸದಸ್ಯರ ಪಾಲಿಟ್‌ಬ್ಯೂರೋ ಸ್ಥಾಯಿ ಸಮಿತಿಯ ಸದಸ್ಯರಾಗಿ ಅವರನ್ನು ನೇಮಿಸಲಾಗುತ್ತದೆ.  ಬಳಿಕ ಕೇಂದ್ರ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಾರೆ. ನಂತರ ಚೀನಾದ ಉಪ ಅಧ್ಯಕ್ಷರಾಗಿ ಪದೋನ್ನತಿ ಹೊಂದುತ್ತಾರೆ.
ಯಾವುದೆ ಹಗರಣಗಳ ಸುಳಿಗೆ ಸಿಲುಕಿಕೊಳ್ಳದಿರುವುದು ಮತ್ತು ಅಜಾತ ಶತ್ರು ಎಂಬ ಇಮೇಜ್‌ಗಳು ಕ್ಷಿ ಜಿಂಪಿಂಗ್‌ರ ಯಶಸ್ಸಿನ ಹಾದಿಗೆ ಉರುಗೋಲಾಗಿದೆ. ಆದರೆ ೨೦೦೮ರಲ್ಲಿ ಬೀಜಿಂಗ್‌ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದ ಅಭೂತಪೂರ್ವ ಯಶಸ್ಸು ಕ್ಷಿ ಜಿಂಪಿಂಗ್‌ರ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ. ಅವರು ಈ ಕ್ರೀಡಾಕೂಟದ ಉಸ್ತುವಾರಿ ವಹಿಸಿಕೊಂಡಿದ್ದರು.

ಆದರೆ ಕ್ಷಿ ಜಿಂಪಿಂಗ್‌ರ ಸವಾಲಿನ ದಿನಗಳು ಇನ್ನಷ್ಟೆ ಶುರುವಾಗಲಿದೆ. ಏಕೆಂದರೆ ಕಳೆದ ಇಪ್ಪತ್ತು ವರ್ಷಗಳಲ್ಲಿ ಪ್ರಗತಿ ಪಥದಲ್ಲಿ ಶರವೇಗದಲ್ಲಿ ದೌಡಾಯಿಸುತ್ತಿದ್ದ ಚೀನಾ ಕಳೆದೊಂದು ವರ್ಷದಿಂದ ಬಸವಳಿದಿದೆ. ಇಂತಹ ಸಂಕ್ರಾಂತಿ ಸಮಯದಲ್ಲಿ ಚೀನಾದ ಹೊಣೆ ಹೊರುವ ಜವಾಬ್ದಾರಿ ಜಿಂಪಿಂಗ್‌ರದ್ದು. ಚೀನಾದ ಅಭಿವೃದ್ಧಿಯ ವ್ಯಾಖ್ಯೆಗೆ ಹೊಸ ಭಾಷ್ಯ ಬರೆಯುವುದೇ ಅಥವಾ ಚೀನಾಕ್ಕೆ ಹೊಸ ಅಭಿವೃದ್ಧಿ ಮಂತ್ರವನ್ನು ನೀಡಬೇಕೆ ಎಂಬ ಸಂದಿಗ್ಧತೆಯನ್ನು ಹೊತ್ತುಕೊಂಡೆ ಅವರು ಪಟ್ಟವೇರುತ್ತಿದ್ದಾರೆ.
ವಿಶ್ವದ ಅತ್ಯಂತ ದೊಡ್ಡ ಕಮ್ಯುನಿಷ್ಟ್ ರಾಷ್ಟ್ರ ಚೀನಾ. ಇಲ್ಲಿ ಏಕಪಕ್ಷೀಯ ಆಡಳಿತ ವ್ಯವಸ್ಥೆ ಇರುವುದರಿಂದ ಪ್ರತಿಪಕ್ಷಗಳ ಕಾಟ ಇಲ್ಲ. ಅಲ್ಲಿ ಒಮ್ಮೆ ಬಂದ ಅಧಿಕಾರ ಕಳೆದುಕೊಳ್ಳಬೇಕಾದರೆ ಸ್ವಯಂಕೃತ ಅಪರಾಧ ಅಥವಾ ಅಂತರಿಕ ಕಚ್ಚಾಟಗಳೇ ಕಾರಣವಾಗಬೇಕು. ಹೊಸ ಪೀಳಿಗೆಯ ಕಮ್ಯುನಿಷ್ಟ್ ನಾಯಕರಲ್ಲಿ ಹುಟ್ಟಿಕೊಂಡಿರುವ ಅಧಿಕಾರ ಮೋಹ ಕ್ಷಿ ಜಿಂಪಿಂಗ್‌ರಿಗೆ ಕಿರಿಕಿರಿ ತರುವ ಸಾಧ್ಯತೆ ಇದೆ. ಕ್ಷಿ ಜಿಂಪಿಂಗ್ ಸದ್ಯ ಕ್ಲೀನ್ ಇಮೇಜ್ ಹೊಂದಿರುವುದು ನಿಜ. ಆದರೆ ಅವರ ಕುಟುಂಬ ಸದಸ್ಯರು ಅನೇಕ ಪ್ರಸಿದ್ಧ ಉದ್ಯಮಿಗಳ ಮತ್ತು ಉದ್ದಿಮೆಗಳ ಜೊತೆ ಸಂಪರ್ಕ ಹೊಂದಿರುವುದು ಈಗಾಗಲೇ ಅನೇಕರ ಕಣ್ಣು ಕೆಂಪಾಗಿಸಿದೆ.

ಸದ್ಯ ಚೀನಾದ ಮುಂದಿರುವ ಅತ್ಯಂತ ದೊಡ್ಡ ಸವಾಲೆಂದರೆ ಅಸಮಾನತೆ. ಒಂದು ಕಡೆ ಕೋಟಿ ಕೋಟಿ ಕೊಪ್ಪರಿಗೆ ಮೇಲೆ ಉಂಡಾಡುವ ಕೋಟ್ಯಾಧೀಶರಿದ್ದರೆ ಮತ್ತೊಂದು ಕಡೆ ತುತ್ತು ಅನ್ನಕ್ಕಾಗಿ ಪರದಾಡುವ ಗತಿ ಹೀನರು, ನಿರ್ಗತಿಕರು. ಈ ಸಮಸ್ಯೆ ವಿಶ್ವದಾದ್ಯಂತ ಇದ್ದರು ಕೂಡ ಚೀನಾದಲ್ಲಿ ಮಾತ್ರ ಮಿತಿ ಮೀರಿದೆ. ವಿಶ್ವದ ಅತ್ಯಂತ ದೊಡ್ಡ ರಫ್ತುದಾರ, ವಾರ್ಷಿಕ ೯.೩೧ ಜಿಡಿಪಿ ಬೆಳವಣಿಗೆ ದರ ದಾಖಲಿಸುವ ಚೀನಾದಲ್ಲಿ ಸುಮಾರು ೨ ಕೋಟಿಯಷ್ಟು ಜನ ಬಡತನ ರೇಖೆಗಿಂತ ಕೆಳಗಿದ್ದಾರೆ. ಇಷ್ಟೆ ಅಲ್ಲದೆ ನಗರ ಮತ್ತು ಹಳ್ಳಿಗಳ ಜನರ ನಡುವಿನ ತಲಾ ಅದಾಯ ಪ್ರಮಾಣದಲ್ಲಿ ಭಾರಿ ಅಂತರ ಸೃಷ್ಟಿಯಾಗಿದೆ.
ಭಾರತದಂತೆ ಚೀನಾದಲ್ಲಿಯೂ ಈಗ ಭ್ರಷ್ಟಾಚಾರ ಭಾರಿ ದೊಡ್ಡ ಸದ್ದು ಮಾಡುತ್ತಿದೆ. ರಾಜಕಾರಣಿಗಳು, ಅಧಿಕಾರಿಗಳು ನಡೆಸಿದ ಭ್ರಷ್ಟ ಚಟುವಟಿಕೆಗಳು ಒಂದೊಂದಾಗಿ ಹೊರ ಬರುತ್ತಿರುವಂತೆ ಚೀನಾದ ಆಡಳಿತ ವ್ಯವಸ್ಥೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಕಳೆದ ವಾರವಷ್ಟೆ ಚೀನಾದ ಅಧಿಕಾರಿಯೊಬ್ಬ ಇಡೀ ಚೀನಾದ ಇತಿಹಾಸದಲ್ಲೆ ಮೊತ್ತ ಮೊದಲ ಬಾರಿಗೆ ತನ್ನ ಆಸ್ತಿ ವಿವರವನ್ನು ಅಂತರ್ಜಾಲದಲ್ಲಿ ಸ್ವಘೋಷಿಸಿಕೊಂಡು ಉಳಿದವರಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾನೆ. ಆತನ ಮಾದರಿಯ ಅನುಕರಣೆಯಾಗಬೇಕು ಎಂದು ಪ್ರತಿಭಟನೆಗಳ ಕಿಡಿ ಹುಟ್ಟಿಕೊಂಡಿದೆ. ಪಕ್ಷ ಮತ್ತು ಸರ್ಕಾರದ ಅಧಿಕಾರಿಗಳ ಆಸ್ತಿ, ಆದಾಯ ವಿವರವನ್ನು ಬಹಿರಂಗ ಪಡಿಸುವ ಕಾಯ್ದೆಯೊಂದು ೧೯೯೪ರಿಂದಲೂ ಚೀನಾದಲ್ಲಿ ಧೂಳು ತಿನ್ನುತ್ತಿದೆ. ಈ ಕಾಯ್ದೆ ಬೆಳಕು ಕಾಣವುದೇ ಅನ್ನುವ ಪ್ರಶ್ನೆ ಕ್ಷಿ ಜಿಂಪಿಂಗ್‌ರ ಅಧಿಕಾರರೋಹಣ ದೊಂದಿಗೆ ಮತ್ತೆ ತಲೆ ಎತ್ತಿದೆ.

ಕಳೆದ ಕೆಲ ವರ್ಷಗಳಲ್ಲಿ ಭ್ರಷ್ಟಾಚಾರದ ಅನೇಕ ಪ್ರಕರಣಗಳು ಸಾಲು ಸಾಲಾಗಿ ಹೊರ ಬರುತ್ತಿವೆ. ಹಿರಿಯ ಕಮ್ಯುನಿಷ್ಟ್ ನಾಯಕ ಬೋ ಕ್ಷಿಲಾಯಿ ಲಂಚ ಸ್ವೀಕರಿಸುತ್ತಿರುವುದನ್ನು ಅಮೆರಿಕದ ನ್ಯೂಯಾರ್ಕ್ ಅಫ್ ಟೈಮ್ಸ್ ಪತ್ರಿಕೆ ವರದಿ ಮಾಡಿತ್ತು. ಆದೇ ರೀತಿ ಚೀನಾದ ಪ್ರಧಾನಿ ವೆನ್ ಜಿಬಾಬೊ ಅವರ ಕುಟುಂಬ ಅಪಾರ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವುದು ಕೂಡ ಇದೀಗ ಬಯಲಾಗಿರುವ ಸತ್ಯ. ಅದ್ದರಿಂದ ಚೀನಾದ ಜನರು ತಮ್ಮ ಆಡಳಿತ ವ್ಯವಸ್ಥೆ ಬಗ್ಗೆ ಭ್ರಮನಿರಶನ ಹೊಂದಿದ್ದಾರೆ. ಈ ಹುಳುಕುಗಳನ್ನು ಮರೆಮಾಡಿ ಚೀನಿಯರಿಗೆ ’ಹೊಸ ಬೆಳಕು’ ತೋರಿಸುವ ಹೊಣೆಯನ್ನು ಕ್ಷಿ ಜಿಂಪಿಂಗ್ ಹೊರಬೇಕಾಗಿದೆ.
ಚೀನಾ ಅಕಾಡೆಮಿ ಅಫ್ ಸೋಷಿಯಲ್ ಸೈನ್ಸ್‌ನ ಒಂದು ವರದಿ ಪ್ರಕಾರ ೨೦೧೦ರಲ್ಲಿ ಚೀನಾದದ್ಯಂತ ೧,೮೦,೦೦ ಭ್ರಷ್ಟಾಚಾರ ವಿರೋಧಿ ಹೋರಾಟಗಳು ನಡೆದಿದ್ದವಂತೆ. ಈ ಕಾರಣಕ್ಕಾಗಿಯೇ ನಿಕಟಪೂರ್ವ ಅಧ್ಯಕ್ಷ ಹೂ ಜಿಂಟಾವೋ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಚೀನಾದ ಅಳಿವು ಉಳಿವಿನ ಪ್ರಶ್ನೆ ಅಡಗಿದೆ ಎಂದು ಹೇಳುತ್ತಲೇ ಇದ್ದಾರೆ. ’ಭಾರತೀಯ ಮಾದರಿ ಭ್ರಷ್ಟಾಚಾರ’ (ರಾಜಕಾರಣಿಗಳ ಕುಟುಂಬ ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗುವುದು) ಚೀನಾದಲ್ಲಿ ಮುಗಿಲಿಗಿಂತಲು ಮಿಗಿಲಾಗಿ ಬೆಳೆದಿದೆ.

ಅವೈಜ್ಞಾನಿಕ ರೀತಿಯಲ್ಲಿ ಸರ್ಕಾರ ಜನರ ಭೂಮಿಯನ್ನು ಕಿತ್ತುಕೊಳ್ಳುತ್ತಿರುವುದರಿಂದ ಜನರು ಸರ್ಕಾರದ ವಿರುದ್ಧ ಕ್ರುದ್ಧರಾಗಿದ್ದಾರೆ. ಇದು ಅನೇಕ ಸಂಘರ್ಷಗಳಿಗೆ ಕಾರಣವಾಗಿದೆ. ಪ್ರತಿವರ್ಷ ಸುಮಾರು ೪೦ ಲಕ್ಷ ಜನ ತಮ್ಮ ಕೃಷಿ ಭೂಮಿಯನ್ನು ಕಾರ್ಖಾನೆ, ರಿಯಲ್ ಎಸ್ಟೇಟ್ ಮುಂತಾದ ಚಟುವಟಿಕೆಗಳಿಗೆ ಕಳೆದುಕೊಳ್ಳುತ್ತಿದ್ದಾರೆ. ಇವರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲೇ ಬೇಕಾದ ಜವಾಬ್ದಾರಿ ಜಿಂಪಿಂಗ್‌ರದ್ದು.

ಈ ಹಿಂದೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸಿ ಹೊರ ಜಗತ್ತಿನ ಮುಂದೆ ರಹಸ್ಯ ಕಾಪಾಡುವ ಹಾದಿ ಬಹು ಸುಲಭವಿತ್ತು. ಆದರೆ ಇದೀಗ ಸಾಮಾಜಿಕ ತಾಣಗಳ ಕ್ರಾಂತಿಯಿಂದಾಗಿ ಪ್ರತಿಯೊಂದು ಸಂಗತಿಯೂ ಕೂಡ ಒಂದಿಲ್ಲೊಂದು ರೀತಿಯಲ್ಲಿ ಹೊರ ಜಗತ್ತಿಗೆ ಗೊತ್ತಾಗುತ್ತಿದೆ. ಚೀನಾ ತನ್ನ ನೋವು ತನಗಿರಲಿ, ಅದು ಬಹಿರಂಗಗೊಳ್ಳದಿರಲಿ ಎಂದು ಅಸಂಖ್ಯಾತ ವೆಬ್ ತಾಣಗಳಿಗೆ ನಿರ್ಬಂಧ ಹಾಕಿದೆ, ತನ್ನದೇ ಶೋಧನಾ ಇಂಜಿನ್ ಸ್ಥಾಪಿಸಿದೆ. ಆದರೆ ಚೀನಾದಲ್ಲಿನ ಹೊಸ ಪ್ರತಿಭಟನೆಗಳು ಅಂತರ್ಜಾಲದ ನೆರವಿನಿಂದಲೆ ಚಿಗಿತುಕೊಳ್ಳುತ್ತಿರುವುದು ಗಮನಿಸತಕ್ಕ ಅಂಶ. ಅದ್ದರಿಂದ ಕ್ಷಿ ಜಿಂಪಿಂಗ್ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯದಲ್ಲಿ ತೆಗೆದುಕೊಳ್ಳುವ ನಿಲುವಿನ ಬಗ್ಗೆ ಇಡೀ ಜಗತ್ತೆ ಕಾತರಿಸುತ್ತಿದೆ.

ಕ್ಷಿ ಜಿಂಪಿಂಗ್ ಉದ್ಯಮ ಕೇಂದ್ರಿತ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಸಾಧ್ಯತೆ ಇದೆ. ಅಮೆರಿಕದ ಪಾರುಪತ್ಯವನ್ನು ಮುರಿಯವ ದಿಕ್ಕಿನಲ್ಲಿ ಅವರು ಸಾಗಬಹುದು, ಆದರೆ ಅಮೆರಿಕದ ಜೊತೆ ತಿಕ್ಕಾಟ ನಡೆಸುವ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಿಸಲಾಗುತ್ತಿದೆ. ಇತ್ತ ನೆರೆಯ ಭಾರತದ ಜೊತೆಗೂ ಸ್ನೇಹ ಸಂಬಂಧವನ್ನು ಕಾದು ಕೊಂಡು ಹೋಗಲು ಅವರು ಉತ್ಸುಕರಾಗಿದ್ದಾರೆ. ಭಾರತ ಮತ್ತು ಚೀನಾದ ಮಧ್ಯೆ ಇರುವ ಗಡಿ ವಿವಾದ ಮತ್ತು ವ್ಯಾಪಾರ ವಹಿವಾಟಿನ ಪ್ರಮಾಣದಲ್ಲಿರುವ ಅಗಾಧ ಅಂತರ ಉಭಯ ದೇಶಗಳ ತಕ್ಷಣದ ಕಾಳಜಿಯ ವಿಷಯಗಳು.

ಅಸಮತೋಲಿತ, ಅಸಂಘಟಿತ ಅಭಿವೃದ್ಧಿಯ ಸವಾಲನ್ನು ನಿಭಾಯಿಸಿಕೊಂಡು ಕಳೆದ ೯ ತಿಂಗಳಿನಿಂದ ದಾಖಲಿಸಿರುವ ಶೇ ೭.೭ರ ಜಿಡಿಪಿ ಅಭಿವೃದ್ಧಿ ದರವನ್ನು ಉಳಿಸಿಕೊಂಡು ಹೋಗುವ ಅನಿವಾರ್ಯತೆ ಜಿಂಪಿಂಗ್‌ಗಿದೆ.

ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿನ ಸವಾಲಿನ ಪರ್ವತವನ್ನು ಜಿಂಪಿಂಗ್ ಯಾವ ರೀತಿ ’ಜಂಪ್’ ಮಾಡುತ್ತಾರೆ ಎಂಬ ಕುತೂಹಲ ಚೀನಾಕ್ಕೆ ಮಾತ್ರ ಸೀಮಿತವಾದುದಲ್ಲ. ಜಿಂಪಿಂಗ್ ತನ್ನ ಕೈಂಕರ್ಯದಲ್ಲಿ ಗೆದ್ದರೆ ಜಗತ್ತಿನ ಬಹುದೊಡ್ಡ ರಾಷ್ಟವೊಂದರಲ್ಲಿ ಕಮ್ಯುನಿಸಂ ಉಳಿಯಬಹುದು, ಒಂದು ವೇಳೆ ವಿಫಲರಾದರೆ ವಿಶ್ವ ಭೂಪಟದಲ್ಲಿ ಕಮ್ಯುನಿಸಂ ಕಳೆದೇ ಹೋಗಬಹುದೇನೋ...!?

ಕಾದು ನೋಡೋಣ, ಫಲಿತಾಂಶದ ಹಾದಿ ದೂರವಿಲ್ಲ.

Monday, November 5, 2012

ಒಂದು ಸೋಲಿನ ವೃತ್ತಾಂತ; ಪಾಠ ಕಲಿಯದ ದುರಂತ


ಸೋಲು... ಸೋಲು... ಸೋಲು
ಸೋಲು ಅಕ್ಷ್ಯಮ್ಯ, ಅದರಲ್ಲಿಯೂ ಯುದ್ಧಭೂಮಿಯಲ್ಲಿನ ಅಪಜಯಕ್ಕೆ ಕ್ಷಮೆಯೇ ಇಲ್ಲ ಎಂದು ಕೊಂಡಿರುವ ಪರಂಪರೆ ನಮ್ಮದು. ಸೋತವ ಎಂಬ ಹಣೆಪಟ್ಟಿ ಯಾರಿಗೂ ಬೇಡ, ಸೋಲು ಎಂದಿಗೂ ತಬ್ಬಲಿ.
 
ಸರಿಯಾಗಿ ೫೦ ವರ್ಷಗಳ ಹಿಂದೆ, ಇದೇ ಸಮಯದಲ್ಲಿ ಹಿಮಾಲಯದ ಧವಳಗಿರಿಗಳ ಮಧ್ಯೆ ಭಾರತೀಯರನ್ನು ಅಪ್ಪಿಕೊಳ್ಳಲು ಇಂತಹದ್ದೆ ಒಂದು ಸೋಲು ಹೊಂಚು ಹಾಕಿ ಕುಳಿತಿತ್ತು. ಚೀನಾದ ಕೆಂಪು ಪಡೆ ಹೆದ್ದೆರೆಯೋಪಾದಿಯಲ್ಲಿ ನಡೆಸಿದ ದಾಳಿಗೆ ಗಣತಂತ್ರ ಸ್ವತಂತ್ರ ಭಾರತ ಬೆರಗಾಗಿತ್ತು, ಬೆನ್ನು ಬಾಗಿಸಿ ವಂದಿಸಿ ಸೋತು ಹೋಗಿತ್ತು.

ಭಾರತ ಮತ್ತು ಚೀನಾ ಪ್ರಾಚೀನ ನಾಗರಿಕತೆಗಳ ತವರೂರು. ಹಾಗೆಯೆ ಜಾಗತಿಕರಣಗೊಂಡ ಜಗತ್ತನ್ನು ಹೊತ್ತು ಸಾಗಿಸುವ ಗಾಲಿಗಳು. ಈ ಎರಡು ದೇಶಗಳಿಗೆ ಭೂತ ಮತ್ತು ಭವಿಷ್ಯದಲ್ಲಿರುವ ಪ್ರಾಮುಖ್ಯತೆ ಆಪಾರ. ಆದರೆ ಭಾರತ ಮತ್ತು ಚೀನಾದ ಮಧ್ಯೆ ಹುಟ್ಟಿಕೊಂಡ ಸಂಘರ್ಷದ ಕಾಲಘಟ್ಟ ಬಹಳ ವಿಚಿತ್ರವಾದದ್ದು.

೧೯೫೦ರ ದಶಕದಲ್ಲಿ ಚೀನಾವು ಮಾವೋ ತ್ಸೆತುಂಗ್‌ನ ತೆಕ್ಕೆಯಲ್ಲಿ ಅಪರಿಮಿತ ವೇಗದ ಅಭಿವೃದ್ಧಿಯ ಕನಸನ್ನು ಹೊಸೆಯುತ್ತಿದ್ದರೆ, ಭಾರತ ಬ್ರಿಟಿಷರಿಂದ ಮುಕ್ತವಾಗಿ ಪ್ರಜಾರಾಜ್ಯದ ಹೊಸ ವ್ಯವಸ್ಥೆಗೆ ಒಗ್ಗಿಕೊಳ್ಳುತ್ತಿದ್ದ ಸಮಯ, ಸಂದರ್ಭವದು. ಆಗ ಈ ಎರಡು ದೇಶಗಳಿಗೆ ಯುದ್ಧವೆಂಬ ಹೊರೆ ಬೇಕಾಗಿರಲಿಲ್ಲ.

ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ’ಹಿಂದಿ ಚೀನಿ ಭಾಯಿ ಭಾಯಿ’ ಎಂಬ ಉದ್ಘೋಷವನ್ನು ೧೯೫೦ರ ದಶಕದಲ್ಲಿ ಮುನ್ನೆಲೆಗೆ ತಂದಿದ್ದರು. ತೈವಾನ್ ವಿವಾದದಿಂದಾಗಿ ವಿಶ್ವ ಗುಂಪಿನಲ್ಲಿ ಚೀನಾ ಮೂಲೆಗುಂಪಾದ ಸಂದರ್ಭದಲ್ಲಿ ಅದನ್ನು ಒಂದು ದೇಶವೆಂದು ಪರಿಭಾವಿಸಿ ಅದರೊಂದಿಗೆ ಸ್ನೇಹ ಸಂಬಂಧ ಬೆಳೆಸಿದ ದೇಶಗಳಲ್ಲಿ ಭಾರತವು ಒಂದು. ಇಂತಹ ಮಧುರ ಸಂಬಂಧ ಉತ್ತುಂಗಕ್ಕೇರುತ್ತಲೇ ಪರಸ್ಪರ ಅನುಮಾನದ ಪಾತಳಕ್ಕೆ ಕುಸಿದದ್ದು ಚರಿತ್ರೆಯ ವೈಚಿತ್ರ.
ಕಮ್ಯುನಿಷ್ಟ್ ನಾಯಕ ಮಾವೋ ಚೀನಾದ ಮೇಲೆ ಹಿಡಿತ ಸಂಪಾದಿಸಿದ್ದು ೧೯೪೯ರಲ್ಲಿ. ಬ್ರಿಟೀಷ್‌ರಿಂದ ಭಾರತ ಸ್ವಾತಂತ್ರ್ಯ ಪಡೆದದ್ದು ೧೯೪೭ರಲ್ಲಿ. ಮಾವೋ ಚೀನಾದ ಚುಕ್ಕಾಣಿ ಹಿಡಿಯಲು ಶೀತಲ ಸಮರದ ಮೂಲಕ ಅಲ್ಲಿನ ರಾಷ್ಟ್ರೀಯ ಪಕ್ಷವನ್ನು ಸೋಲಿಸಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ರೂವಾರಿಯಾದ. ಚೀನಾ ಕಮ್ಯುನಿಷ್ಟ್ ಮಾದರಿಯ ಆಡಳಿತವನ್ನು ಅಪ್ಪಿಕೊಂಡರೆ ಭಾರತ ಪ್ರಜಾತಂತ್ರ ರಾಷ್ಟ್ರವಾಗಿ ರೂಪುಗೊಂಡಿತು. ಈ ಎರಡು ರಾಷ್ಟ್ರಗಳು ಹೊಸ ವ್ಯವಸ್ಥೆಯೊಂದಿಗೆ, ಆಶಯದೊಂದಿಗೆ ಪ್ರಜಾ ಕಲ್ಯಾಣದ ಕಂಕಣವನ್ನು ಒಂದೆ ಕಾಲದಲ್ಲಿ ಹೊತ್ತಿದ್ದವು.

ಜಮ್ಮು ರಾಜರ ತೆಕ್ಕೆಯಲ್ಲಿದ್ದ ಲಡಾಖ್‌ನ್ನು ಭಾರತೀಯ ಸಿಖ್ ಪಡೆ ೧೮೩೪ರಲ್ಲಿ ವಶಪಡಿಸಿಕೊಂಡಿತು. ಆ ಬಳಿಕ ಟಿಬೆಟ್‌ನ ಮೇಲೆ ದಾಳಿ ನಡೆಸಿದ ಈ ಪಡೆ ಪಶ್ಚಿಮ ಟಿಬೆಟ್‌ನ್ನು ವಶ ಪಡಿಸಿಕೊಳ್ಳುವ ಪ್ರಯತ್ನ ನಡೆಸಿತು. ಆದರೆ ಚೀನಿಯರು ಈ ಪ್ರಯತ್ನವನ್ನು ಹಿಮ್ಟೆಟ್ಟಿಸಿದರು. ಆದರೆ ಲಡಾಖ್ ಪ್ರಾಂತ್ಯವನ್ನು ಉಳಿಸಿಕೊಳ್ಳುವಲ್ಲಿ ಸಿಖ್‌ರು ಯಶ ಪಡೆದರು. ಇದೇ ಸಂದರ್ಭದಲ್ಲಿ ಭಾರತದಲ್ಲಿ ಮೊದಲ ಆಂಗ್ಲೋ-ಸಿಖ್ ಯುದ್ಧ ಪ್ರಾರಂಭವಾಗಿದ್ದರೆ, ಅತ್ತ ಚೀನಾದಲ್ಲಿ ಮೊದಲ ಅಪಿಮ್ ಯುದ್ಧ ನಡೆಯುತ್ತಿತ್ತು. ಇಲ್ಲೂ ಸಾಮ್ಯತೆ! ಸದ್ಯ ನಾವು ನಮ್ಮೊಳಗೆ ಕಾದಾಡುವುದು ಬೇಡ ಎಂದು ಭಾವಿಸಿದ ಉಭಯ ದೇಶಗಳು ಪರಸ್ಪರ ಆಕ್ರಮಣ ಮಾಡಿಕೊಳ್ಳದ ಒಪ್ಪಂದಕ್ಕೆ ಸಹಿ ಹಾಕಿದವು.

ಮಾವೋ ಮುಂದಾಳತ್ವದ ಚೀನಾಕ್ಕೆ ಟಿಬೆಟ್ ಅದರ ಅವಿಭಾಜ್ಯ ಅಂಗ ಎಂಬ ಭಾವನೆ. ಭಾರತಕ್ಕೆ ಇದು ಒಪ್ಪತಕ್ಕ ಮಾತಲ್ಲ. ಆದರೂ ಉಭಯ ದೇಶಗಳಿಂದ ಶಾಂತಿ ಮಂತ್ರ ಪಠಣದ ಮುಂದುವರಿಕೆ. ಈ ಮಧ್ಯೆ ಭಾರತ ಆಕ್ರಮಣಕಾರಿ ಮನೋಭಾವ ತೋರುತ್ತಿರುವ ಸಂಶಯ ಚೀನಾಕ್ಕೆ.

ಅಭಿವೃದ್ಧಿಯ ಮಾನದಂಡಗಳ ಆಧಾರದಲ್ಲಿ ೧೫ ವರ್ಷಗಳಲ್ಲಿ ಬ್ರಿಟನ್‌ನನ್ನು ಹಿಂದಿಕ್ಕಬೇಕು ಎಂಬ ಮಾವೋನ ಮಹಾತ್ವಕಾಂಕ್ಷೆಯ ಈಡೇರಿಕೆಗಾಗಿ ೧೯೫೮ರಲ್ಲಿ ಚೀನಾ ಮುನ್ನಡೆಯ ಮಹಾ ಹೆಜ್ಜೆಯನ್ನು ಇಟ್ಟಿತು. ಶೀತಲ ಸಮರದ ಕಾಲದಲ್ಲಿ ಕಮ್ಯುನಿಷ್ಟ್ ರಾಷ್ಟ್ರಗಳ ನಾಯಕನಾಗಿದ್ದ ರಷ್ಯಾ ಮತ್ತು ಆ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಚೀನಾದ ಮಧ್ಯೆ ೧೯೫೮-೫೯ರ ಮಧ್ಯೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಹಿವಾಟು ನಡೆಯುತ್ತದೆ. ಈ ವಹಿವಾಟಿನ ಹಣಕಾಸು ಪ್ರಮಾಣ ಮತ್ತು ಒಳಗೊಂಡಿದ್ದ ಶಸ್ತ್ರಾಸ್ತ್ರಗಳ ಬಗೆಗಿನ ಸಂಪೂರ್ಣ ಮಾಹಿತಿ ಇಂದಿಗೂ ಲಭ್ಯವಾಗಿಲ್ಲ. ಅದೇ ರೀತಿ ಈ ವಹಿವಾಟು ನಡೆಯುವ ಸಂದರ್ಭದಲ್ಲಿ ಮಾವೋನ ಲಕ್ಷ್ಯದಲ್ಲಿ ಭಾರತವಿತ್ತೇ ಅನ್ನುವುದು ಕೂಡ ನಿಗೂಢ ಸಂಗತಿ. ಏಕೆಂದರೆ ಆ ಸಂದರ್ಭದಲ್ಲಿ ಚೀನಾಕ್ಕೆ ಬೇರೆಯೇ ಶತ್ರುಗಳಿದ್ದರು. ಅದು ರಷ್ಯಾದ ಸ್ಥಾನಕ್ಕೆ ಕೊಕ್ ಕೊಡುವ ಒಳ ಉದ್ದೇಶದಿಂದ ಕಾರ್ಯತತ್ಪರವಾಗಿತ್ತು.
ಭಾರತ ೧೯೫೪ ಬಿಡುಗಡೆ ಮಾಡಿದ ನಕಾಶೆಯೊಂದರಲ್ಲಿ ಅಕ್ಷಯ್ ಚೀನಾವನ್ನು ತನ್ನ ಸೀಮೆಯ ಪರಿಧಿಯೊಳಗೆ ತಂದಿತ್ತು. ಹಾಗೆಯೆ ಚೀನಾದ ವಿಶ್ವಾಸರ್ಹತೆಯ ಬಗ್ಗೆ ನೆಹರುವಿಗೆ ಸಂಶಯವಿದೆ ಎಂಬ ಅಂಶ ಕೂಡ ಬಹಿರಂಗವಾಗಿತ್ತು. ಇದೆಲ್ಲವು ಚೀನಾದ ಕಣ್ಣು ಕೆಂಪಾಗಲು ಕಾರಣವಾಯಿತು. ಆದರೆ ೧೯೫೦ರ ದಶಕದಲ್ಲಿ ನಡೆದಿತ್ತು ಎಂಬ ಈ ಘಟನೆ ಈ ವಾದಕ್ಕೆ ತದ್ವಿರುದ್ಧವಾಗಿದೆ. ಆಗ ಭೂದಳದ ಜನರಲ್ ಆಗಿದ್ದ ಕಾರಿಯಪ್ಪ ಅವರು ಭಾರತ-ಚೀನಾದ ಗಡಿ ರೇಖೆಯ ಸುರಕ್ಷತೆಯ ಬಗ್ಗೆ ಅದರಲ್ಲಿಯೂ ಅರುಣಾಚಲ ಪ್ರದೇಶದಲ್ಲಿನ ಆತಂಕದ ಬಗ್ಗೆ ನೆಹರುರವರ ಗಮನಕ್ಕೆ ತಂದಿದ್ದರು. ಆಗ ನೆಹರು ನಮ್ಮ ಮೇಲೆ ಯಾರು ದಾಳಿ ಮಾಡಬಹುದು ಎಂದು ಪ್ರಧಾನಮಂತ್ರಿಗೆ ಹೇಳುವುದು ಜನರಲ್‌ನ ಕೆಲಸವಲ್ಲ. ವಾಸ್ತವವಾಗಿ ಚೀನಿಯರು ನಮ್ಮ ಈಶಾನ್ಯ ಗಡಿಯನ್ನು ಕಾಯುತ್ತಿದ್ದಾರೆ. ಕಾಶ್ಮೀರ ಮತ್ತು ಪಾಕಿಸ್ತಾನ ಮಾತ್ರ ನಿಮ್ಮ ಗಮನದಲ್ಲಿರಲಿ ಎಂದು ಹೇಳಿದ್ದರಂತೆ.

ಚೀನಾದ ವಿರುದ್ಧ ನಡೆಸಿದ ಟಿಬೆಟ್ ದಂಗೆ ವಿಫಲವಾದ ಬಳಿಕ ಟಿಬೆಟಿಯನ್ನರ ಧರ್ಮಗುರು ದಲಾಯಿ ಲಾಮಾ ತನ್ನ ಸಾವಿರಾರು ಅನುಯಾಯಿಗಳ ಜೊತೆ ಭಾರತದಲ್ಲಿ ನೆಲೆಸಲು ಅವಕಾಶ ಮಾಡಿಕೊಟ್ಟದ್ದು ಚೀನಾವನ್ನು ಕೆರಳಿಸಿತು. ಈ ಘಟನೆ ಉಭಯ ದೇಶಗಳ ಸಂಬಂಧವನ್ನು ಅಧಿಕೃತವಾಗಿ ದುರ್ಗಮ ಗೊಳಿಸಿತು. ಇದೇ ಸಂದರ್ಭದಲ್ಲಿ ಟಿಬೆಟ್ ಬಗ್ಗೆ ಭಾರತದ ನಿಲುವನ್ನು ರಷ್ಯಾ ಬೆಂಬಲಿಸುತ್ತದೆ. ಇದು ಮಾವೋನಲ್ಲಿ ತಳಮಳ ಹುಟ್ಟಿಸುತ್ತದೆ. ರಷ್ಯಾ, ಅಮೆರಿಕ ಮತ್ತು ಭಾರತ ಒಂದೇ, ಇವುಗಳು ಒಟ್ಟು ಸೇರಿ ಯಾವುದೇ ಕ್ಷಣದಲ್ಲಿ ತನ್ನ ಮೇಲೆ ದಾಳಿ ನಡೆಸಬಹುದು ಎಂಬ ಭಯ ಚೀನಾಕ್ಕೆ ಶುರುವಾಗುತ್ತದೆ.
ಈ ಮಧ್ಯೆ ಅರುಣಾಚಲ ಪ್ರದೇಶವನ್ನು ತೆಗೆದುಕೊಳ್ಳಿ ಆದರೆ ಅಕ್ಷಯ್ ಚಿನ್‌ದ ತಂಟೆಗೆ ಬರಬೇಡಿ ಎಂಬ ಪ್ರಸ್ತಾಪವನ್ನು ಚೀನಾ ಭಾರತದ ಮುಂದಿಡುತ್ತದೆ. ಆದರೆ ಇದಕ್ಕೆ ಭಾರತ ತನ್ನ ಒಪ್ಪಿಗೆ ನೀಡುವುದಿಲ್ಲ.

ಸೈನ್ಯದ ಆಯಕಟ್ಟಿನ ಹುದ್ದೆಗಳಲ್ಲಿ ಆಗಿನ ರಕ್ಷಣಾ ಮಂತ್ರಿ ಕೃಷ್ಣ ಮೆನನ್ (ಈಗ ರಾಜಧಾನಿಯಲ್ಲಿರುವ ಸೇನಾ ಭವನಕ್ಕೆ ಹೋಗುವ ರಸ್ತೆಗೆ ಅವರದ್ದೆ ಹೆಸರಿದೆ!) ಅವರ ಪರಮಾಪ್ತರೇ ತುಂಬಿದ್ದರು. ಈ ಬಗ್ಗೆ ಜನರಲ್ ತಿಮ್ಮಯ್ಯ ತಮ್ಮ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆಗೆ ಮುಂದಾಗಿದ್ದು ಆ ಬಳಿಕ ಜವಾಹರ್ ಲಾಲ್ ನೆಹರು ಮಧ್ಯಪ್ರವೇಶದಿಂದಾಗಿ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದದ್ದು ಇತಿಹಾಸ. ಇದು ಯುದ್ಧ ಆರಂಭದಲ್ಲೆ ಭಾರತೀಯ ಸೈನ್ಯದಲ್ಲಿ ಗೊಂದಲಕ್ಕೆ ಕಾರಣವಾಗುತ್ತದೆ.

ಅರುಣಾಚಲ ಪ್ರದೇಶದ ಝಿಮ್ತಾಂಗ್ ಕಣಿವೆಯ ಥಾಗ್ಲಾ ಬೆಟ್ಟದ ಅಂಚಿನ ನಾಮ್ ಕಾ ಚು ನದಿ ದಂಡೆಯಲ್ಲಿ  ಭಾರತೀಯ ಸೈನಿಕರ ಮೇಲೆ ಚೀನಿಯರು ದಾಳಿ ನಡೆಸುವುದರೊಂದಿಗೆ ಇಂಡೋ-ಚೀನಾ ಯುದ್ಧ ಸ್ಪೋಟಗೊಳ್ಳುತ್ತದೆ.

ಪರಸ್ಪರ ಅಪನಂಬಿಕೆ, ಅಸಮಾಧಾನಗಳ ಲಾವಾರಸ ೧೯೬೨ರ ಅಕ್ಟೋಬರ್ ೧೯ರ ಕತ್ತಲಲ್ಲಿ ಜ್ವಾಲಾಮುಖಿಯಾಗಿ ಹಿಮ ಕಣಿವೆಯ ದಿವ್ಯ ಮೌನವನ್ನು ಬಂದೂಕು, ಫಿರಂಗಿಗಳ ಭೊರ್ಗರೆತ ನುಂಗಿ ಹಾಕುತ್ತದೆ. ಬಳಿಕದ ಸುಮಾರು ಒಂದು ತಿಂಗಳ ಕಾಲ ಉತ್ತುಂಗ ಹಿಮ ಶಿಖರಗಳ ಅಪಾದ ಮಸ್ತಕಕ್ಕೆ ಕೆಂಪು ರಕುತದ ನಿರಂತರ ಅಭಿಷೇಕ.

’ಅಭೇದ್ಯ ಹಿಮಾಲಯ’ ಎಂದು ಭಾವಿಸಿದ್ದ ಭಾರತೀಯ ಮನಸ್ಥಿತಿ ಅಂದು ಚೆಲ್ಲಾಪಿಲ್ಲಿಯಾಗಿ ಹೋಗಿತ್ತು. ಅನೇಕ ಸೈನಿಕರು ಅಪ್ರತಿಮ ಸಾಹಸ ಪ್ರದರ್ಶಿಸಿದರು ಕೂಡ ಅದು ವಿಜಯದ ಲೆಕ್ಕಕ್ಕೆ ಸಾಕಾಗಲೇ ಇಲ್ಲ. ಗಡಿ ರೇಖೆಗೆ ಎದೆ ಕೊಟ್ಟು ನಿಂತಿದ್ದ ಸೈನಿಕರನ್ನು ಹಿಂದೆ ಕರೆಸಿಕೊಳ್ಳಲಾಯಿತು. ಹಿಮ್ಮೆಟಲು ಒಪ್ಪದ ಸೈನಿಕರು ತಮ್ಮಲ್ಲಿ ಸೀಮಿತ ಪ್ರಮಾಣದಲ್ಲಿ ದಾಸ್ತಾನಿದ್ದ ಮದ್ದುಗುಂಡು ಖಾಲಿಯಾದ ಬಳಿಕ ಚೀನಿ ಸೈನಿಕರ ಜೊತೆ ಕೈ ಕೈ ಮಿಲಾಯಿಸಿ ಹುತಾತ್ಮರಾದ ಅನೇಕ ಪ್ರಸಂಗಗಳು ನಡೆದವು. ಸಿಪಾಯಿ ಕೇವಲ್ ಸಿಂಗ್, ಸಿಪಾಯ್ ಪ್ಯಾರಾ ಸಿಂಗ್, ಲೆಪ್ಟೆನೆಂಟ್ ಸುಭಾಶ್ ಚಂದೇರ್, ಮೇಜರ್ ಬಿ. ಕೆ. ಪಂತ್ ಮುಂತಾದ ವೀರ ಸೈನಿಕರು ತಮ್ಮ ಸಾಹಸಗಳಿಂದ ಅಜರಾಮರರಾದರು.

೧೯೬೨ರ ನವೆಂಬರ್ ೨೦ರಂದು ಚೀನಾ ಯುದ್ಧ ವಿರಾಮ ಘೋಷಿಸುವುದರೊಂದಿಗೆ ಈ ಯುದ್ಧ ಕೊನೆಗೊಳ್ಳುತ್ತದೆ. ಆದರೆ ಈ ಯುದ್ಧ ಕಲಿಸಿದ ಪಾಠವು ಅಲ್ಲಿಗೆ ಕೊನೆಯಾಗಿರುವುದು ಮುಂದೊಂದು ದಿನ ಮತ್ತೇ ಇಂತಹದ್ದೆ ಯುದ್ಧ ನಡೆದದ್ದೆ ಆದರೆ ಇತಿಹಾಸದ ಪುನರಾವರ್ತನೆಯಾಗಲಿರುವ ಮುನ್ಸೂಚನೆ.

ಭಾರತೀಯ ಮನಸ್ಸುಗಳು ತಮಗೆ ಪಾಕಿಸ್ತಾನವನ್ನು ಹೊರತಾಗಿ ಬೇರೆಯೂ ಬಲಿಷ್ಠ ಶತ್ರುಗಳಿದ್ದರೆ ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋತಿವೆ. ವಾಸ್ತವವಾಗಿ ಪಾಕಿಸ್ತಾನವು ಭಾರತಕ್ಕೆ ಶತ್ರು ರಾಷ್ಟ್ರವೇ ಅಲ್ಲ. ಇದಕ್ಕೆ ಪಾಕ್ ಜೊತೆ ನಡೆದ ನಾಲ್ಕು ಯುದ್ಧಗಳಲ್ಲಿ ಅದು ಮಣ್ಣು ಮುಕ್ಕಿದ ರೀತಿಯೇ ಸಾಕ್ಷಿ. ಆದರೆ ಪಾಕ್ ಏನು ಮಾಡಿದೆ, ಮಾಡುತ್ತಿದೆ, ಅದನ್ನು ಹೇಗೆ ಹಣಿಯುವುದು ಎಂಬುದಷ್ಟೆ ನಮ್ಮ ಚಿಂತೆ. ನಮ್ಮ ರಾಜಕೀಯ ಮುತ್ಸದಿಗಳಿಗೂ ಕೂಡ ಪಾಕ್ ವಿರುದ್ಧದ ದ್ವೇಷ ಕಾರಿ ಮತ ಕೊಯ್ಲು ಮಾಡುವ ವಿದ್ಯೆ ಚೆನ್ನಾಗಿ ಕರಗತವಾಗಿದೆ.

ಚೀನಾವನ್ನು ಭಾರತದ ಶತ್ರು ರಾಷ್ಟ್ರವೆಂದು ಒಪ್ಪುವುದು, ಬಿಡುವುದು ವ್ಯಕ್ತಿಯೊಬ್ಬನ ವಿವೇಚನೆಗೆ ಬಿಟ್ಟಿರುವುದು. ಆದರೆ ಇಂದು ಭಾರತಕ್ಕೆ ಮಿಲಿಟರಿ ಆತಂಕವಿರುವುದೇ ಆಗಿದ್ದರೆ ಅದು ಚೀನಾದಿಂದ ಮಾತ್ರ.

ಚೀನಾ ಎಲ್ಲ ರಂಗದಲ್ಲಿಯೂ ಭಾರತವನ್ನು ಹಿಂದಿಕ್ಕಿ ಸಾಗಿದೆ, ಸಾಗುತ್ತಿದೆ. ಭಾರತಕ್ಕಿಂತ ಮೂರು ಪಟ್ಟು ದೊಡ್ಡದಿರುವ ಚೀನಾದಲ್ಲಿ ನಮಗಿಂತ ೩ ಪಟ್ಟು ಕಡಿಮೆ ಜನಸಾಂದ್ರತೆ ಇದೆ. ನಮ್ಮಲ್ಲಿ ತಲಾ ಜಿಡಿಪಿ ೧,೩೮೯ ಅಮೆರಿಕನ್ ಡಾಲರ್ ಇದ್ದರೆ, ಚೀನಾದ್ದು ೫೫,೪೧೩ ಅಮೆರಿಕನ್ ಡಾಲರ್ ಇದೆ. ನಮ್ಮ ವಿದೇಶಿ ವಿನಿಮಯ ಮೀಸಲು ೨೯ ಮಿಲಿಯನ್ ಅಮೆರಿಕನ್ ಡಾಲರ್ ಇದ್ದರೆ ಚೀನಾದ್ದು ೩೧ ಕೋಟಿ ಅಮೆರಿಕನ್ ಡಾಲರ್ ಇದೆ. ನಾವು ನಮ್ಮ ರಕ್ಷಣೆಗಾಗಿ ೪೬.೮ ಬಿಲಿಯನ್ ಅಮೆರಿಕನ್ ಡಾಲರ್ ಖರ್ಚು ಮಾಡಿದರೆ ಚೀನಾ ೧.೪ ಟ್ರಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಖರ್ಚು ಮಾಡುತ್ತದೆ. ನಮ್ಮಲ್ಲಿ ೧೫ ಲಕ್ಷದಷ್ಟು ಸೈನಿಕರಿದ್ದರೆ ಚೀನಾದ ಬಳಿ ಒಂದು ಕೋಟಿ ಸೈನಿಕರಿದ್ದಾರೆ. ಒಂದು ವೇಳೆ ಭಾರತವನ್ನು ಪಾಕಿಸ್ತಾನದ ಜೊತೆ ಹೋಲಿಸಿದ್ದೇ ಆದರೆ ಮೇಲಿನ ಹೋಲಿಕೆಯಲ್ಲಿ ಚೀನಾ ಪಡೆದಿರುವ ಸ್ಥಾನವನ್ನು ಭಾರತ ಹೊಂದಿದೆ. ಪಾಕಿಸ್ತಾನ ಭಾರತದ ಸ್ಥಾನವನ್ನು ಪಡೆದಿದೆ. ಅಂದರೆ ಭಾರತಕ್ಕೆ ಪಾಕ್ ಹೇಗೆಯೋ ಹಾಗೆಯೇ ಚೀನಾಕ್ಕೆ ಭಾರತ!

ಅಭಿವೃದ್ಧಿ ಅಂಕಿಅಂಶಗಳ ವ್ಯಾಖ್ಯಾನದಲ್ಲಿ ಭಾರತ ಸೋತಿರುವುದು ನಿಜ. ಹಾಗೆಂದು ಚೀನಾ ಎಂದರೆ ಸ್ವರ್ಗ ಎಂದು ಭಾವಿಸಬೇಕಿಲ್ಲ. ಭಾರತ ಮಾನವ ಹಕ್ಕುಗಳಿಗೆ ಮಾರ್ಯಾದೆ ಕೊಟ್ಟು ಬೆಳೆಯುತ್ತಿದ್ದರೆ, ಚೀನಾ ಮಾನವಿಯತೆಯ ಸಮಾಧಿಯ ಮೇಲೆ ಅಭಿವೃದ್ಧಿಯ ಲಾಂಗ್ ಮಾರ್ಚ್ ಮಾಡುತ್ತಿದೆ, ತನ್ನ ಕೆಂಬಾವುಟವನ್ನು ಪಟಪಟಿಸುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ತುಣುಕು ಸಿಗದ, ೪೫ ಮಿಲಿಯನ್ ಜನರ ಹೆಣದ ಮೇಲೆ ಇಟ್ಟ ಮಹಾ ಹೆಜ್ಜೆಯಿಂದ, ಹಸಿವಿನಿಂದ ದೇಶದ ಅರ್ಧ ಜನರು ಸತ್ತರೆ, ಉಳಿದರ್ಧ ಜನರ ಹೊಟ್ಟೆ ತುಂಬಬಹುದು ಎಂಬ ಮಾವೋ ಪ್ರಣೀತ ಚಿಂತನೆಯಿಂದ ಕಟ್ಟಿದ ಮಹಾನ್ ಚೀನಾಕ್ಕಿಂತ ಮೇರಾ ಭಾರತ ಅದೇಷ್ಟೋ ವಾಸಿ.

ಚೀನಾದ ಮಧ್ಯೆ ಸ್ನೇಹ ಸಂಬಂಧವನ್ನು ಶಾಶ್ವತವಾಗಿಡಲು ಹೆಚ್ಚಿನ ಸಾಧ್ಯತೆಗಳನ್ನು ಹುಡುಕಬೇಕು ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. ನಿಜ. ಆದರೆ ಆಧುನಿಕ ಚೀನಾ ನಂಬಿಕೆಗೆ ಅದೇಷ್ಟು ಅರ್ಹ ಎಂಬುದೇ ಈಗಿನ ಪ್ರಶ್ನೆ. ಏಕೆಂದರೆ ೧೯೫೦ರ ದಶಕದಲ್ಲಿ ಚೀನಾವು ಭಾರತದ ಜೊತೆ ಯಾವುದೆ ಗಡಿ ತಕರಾರಿಲ್ಲ ಎದು ಪದೇ ಪದೇ ಹೇಳುತ್ತಿದ್ದ ಸಂದರ್ಭದಲ್ಲಿ ಈ ಹೇಳಿಕೆಗಳ ಬಗ್ಗೆ ಜಾಗೃತೆ ವಹಿಸುವಂತೆ ಬರ್ಮಾದ ಆಗಿನ ಆಧ್ಯಕ್ಷರಾಗಿದ್ದ ಬಾ ಸ್ವೇ ನೆಹರುರಲ್ಲಿ ಹೇಳಿದ್ದರು ಎಂಬ ಗುಟ್ಟು ಇದೀಗ ಬಹಿರಂಗವಾಗಿದೆ. ಅದ್ದರಿಂದ ಸ್ನೇಹಕ್ಕೂ ಸಿದ್ಧ, ಸಮರಕ್ಕೂ ಬದ್ಧ ಎಂಬ ರೀತಿಯಲ್ಲಿಯೇ ಭಾರತ ಮತ್ತು ಚೀನಾದ ಸಂಬಂಧ ಆರಳಬೇಕಿದೆ.

ಇಂಡೋ-ಚೀನಾ ಯುದ್ಧ ಸಂಭವಿಸಿ ೫೦ ವರ್ಷಗಳು ಉರುಳಿದರು ಕೂಡ ಭಾರತ ಅದರಿಂದ ಕಲಿತ ಪಾಠವೇನು? ಇಂದಿಗೂ ದೇಶದಲ್ಲಿ ಅತ್ಯಂತ ಹೆಚ್ಚು ಭ್ರಷ್ಟಾಚಾರ ನಡಯುತ್ತಿರುವುದು ಸೇನೆಯಲ್ಲೇ ಎಂಬ ಮಾತು ಚಾಲ್ತಿಯಲ್ಲಿದೆ, ಈಗಾಲೇ ಅನೇಕ ಆರೋಪಗಳ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ. ದೇಶದ ಗಡಿಯಂಚಿನಲ್ಲಿರುವ ಸೈನಿಕನಲ್ಲಿ ಆಧುನಿಕ ಯುದ್ಧೋಪಕರಣವೇ ಇಲ್ಲ ಎಂಬ ಸಾಕಷ್ಟು ವರದಿಗಳಿವೆ. ಪ್ರತಿ ಬಜೆಟ್‌ನಲ್ಲಿಯೂ ಸೈನ್ಯದ ಆಧುನೀಕರಣಕ್ಕೆ ಎಂದು ನೀಡುವ ಹಣ ಎತ್ತ ಹೋಗುತ್ತಿದ್ದೆ, ಎಷ್ಟು ಆಧುನಿಕರಣ ಗೊಂಡಿದೆ ಎಂಬ ಸುಳಿವು ಕೂಡ ಸಿಗುತ್ತಿಲ್ಲ. ಮೇಲಾಧಿಕಾರಿಗಳ ದೌರ್ಜನ್ಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವ, ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸುತ್ತಿರುವ, ಸೈನಿಕರು ದಂಗೆ ಏಳುತ್ತಿರುವ ಸಾಕಷ್ಟು ನಿದರ್ಶನಗಳು ಕಾಣುತ್ತಿದ್ದೇವೆ.

ಅತ್ತ ಚೀನಾ ತನ್ನ ಗಡಿ ಪ್ರದೇಶಗಳಿಗೆ ರಸ್ತೆ, ರೈಲು ಸಂಪರ್ಕವನ್ನು ಲೀಲಾಜಾಲವಾಗಿ ನಿರ್ಮಿಸಿ, ಗಡಿಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದರೆ, ಭಾರತ ಮಾತ್ರ ತಾನು ಅಂತಹ ಕ್ರಮ ಕೈಗೊಂಡರೆ ಚೀನಾ ಏನು ಹೇಳಬಹುದು ಎಂಬ ಆತಂಕದಲ್ಲಿಯೇ ದಿನ ದೂಡುತ್ತಿದೆ.

೧೯೬೨ರ ಯುದ್ಧದ ಬಗ್ಗೆ ಸಿದ್ಧಪಡಿಸಲಾದ ಇಂದಿಗೂ ಅತ್ಯಂತ ರಹಸ್ಯವಾಗಿರುವ ಹೆಂಡರ್ಸನ್ ಬ್ರೂಕ್ಸ್-ಭಗತ್ ವರದಿಯಲ್ಲಿ ಭಾರತ ಈ ಯುದ್ಧದಲ್ಲಿ ಸೊಲೊಪ್ಪಲು ಶಸ್ತ್ರಾಸ್ತ್ರಗಳ ಕೊರತೆ ಪ್ರಮುಖ ಕಾರಣವಲ್ಲ ಬದಲಾಗಿ ಕೆಟ್ಟ ನಾಯಕತ್ವವೇ ಕಾರಣ ಎಂದು ಹೇಳಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು.

ಇರಬಹುದು, ಅಂದು ಒಬ್ಬರು ಕೃಷ್ಣ ಮೆನನ್ ಇದ್ದರು. ಅವರು ಆಗ ದೇಶದ ರಕ್ಷಣಾ ಸಚಿವರಾಗಿದ್ದರು. ದೇಶದ ಸೈನ್ಯದ ಪ್ರಧಾನ ಕಚೇರಿ ಸೇನಾ ಭವನಕ್ಕೆ ಹೋಗುವ ರಸ್ತೆಗೆ ಅವರ ಹೆಸರನ್ನಿಟ್ಟು ೧೯೬೨ರಲ್ಲಿ ದೇಶವನ್ನು ಸೋಲಿಸಿದಕ್ಕಾಗಿ ಅವರಿಗೆ ಗೌರವ ಸಲ್ಲಿಸಲಾಗಿದೆ! ಆದರೆ ಇಂದು ಎಲ್ಲೆಲ್ಲೂ ಅಂತಹವರೇ ತುಂಬಿ ತುಳುಕುತ್ತಿದ್ದಾರೆ. ಹಾಗಿರುವಾಗ ಮತ್ತೆ ಚೀನಾ ನಮ್ಮ ಮೇಲೆ ದಂಡೆತ್ತಿ ಬಂದದ್ದೆ ಆದರೆ...

ಬಹುಶಃ ಇತಿಹಾಸದಿಂದ ಮತ್ತು ತನ್ನ ತಪ್ಪುಗಳಿಂದ ಪಾಠ ಕಲಿಯದಿರುವುದಕ್ಕಿಂತ ನಾಚಿಕೆಗೇಡು ಬೇರೆನು ಇರಲಾರದು.

Monday, October 15, 2012

ದೆಹಲಿಗೂ ಹರಿಯಲಿ ಕಾವೇರಿ; ಇಲ್ಲದೇ ಹೋದರೆ ಸೋಲುವಿರಿ


ಗಂಗಾ, ಯಮುನಾ ನದಿಗಳ ಹೆಸರು ಕೇಳಿದರೆ ನಿಮಗೆ ಯಾವುದಾದರೂ ರಾಜ್ಯದ ನೆನಪು ಆಗುತ್ತದೆಯೇ ಎಂದು ಹಿರಿಯ ಪತ್ರಕರ್ತರೊಬ್ಬರು ಕೇಳಿದರು. ನಾನು ಅವಾಕ್ಕಾದೆ. ಗಂಗಾ ನದಿಯೂ ಉತ್ತರಾ ಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಗಳಲ್ಲಿ ಜೀವ ನದಿಯಾಗಿ ಹರಿಯುತ್ತದೆ. ಉತ್ತರಾ ಖಂಡ, ಉತ್ತರ ಪ್ರದೇಶ, ಹರಿಯಾಣ, ದೆಹಲಿಗಳಿಗೆ ಯಮುನೆಯ ಜೀವದಾಯಿ. ಮಾತು ಮುಂದುವರಿಸಿದ ಅವರು ನನಗೆ ಕಾವೇರಿ ಅಂದರೆ ತಮಿಳುನಾಡಿನ ನೆನಪಾಗುತ್ತದೆ ಎಂದರು. ಹೌದು, ಕಾವೇರಿ ನದಿ ಸಂಪೂರ್ಣವಾಗಿ ತಮಿಳುನಾಡಿಗೆ ಸೇರಿದಾಗಿದ್ದು, ಕರ್ನಾಟಕ ಸುಮ್ಮನೆ ಕಿರಿಕ್ ಮಾಡುತ್ತಿದೆ ಎಂಬ ಭಾವನೆ ಕರ್ನಾಟಕದ ಹೊರಗೆ ಮಡುಗಟ್ಟಿದೆ ಎಂಬುದನ್ನು ಅವರು ನನಗೆ ಸೂಚ್ಯವಾಗಿ ಮನದಟ್ಟು ಮಾಡಿಕೊಟ್ಟಿದ್ದರು.

ಈ ಹಿಂದೆ ಕಾವೇರಿ ವಿವಾದ ೨೦೦೨-೦೩ರಲ್ಲಿ ಉಚ್ಚ್ರಾಯ ಹಂತದಲ್ಲಿದ್ದಾಗ ದೆಹಲಿಯ ಪ್ರಗತಿ ಮೈದಾನದಲ್ಲಿ ತಮಿಳುನಾಡು ಸರ್ಕಾರ ಕಾವೇರಿ ನದಿ ಬಗ್ಗೆ ಒಂದು ಪ್ರದರ್ಶನ ಕಾರ್ಯಕ್ರಮ ಇಟ್ಟುಕೊಂಡಿತ್ತಂತೆ. ಅದರಲ್ಲಿ ಕಾವೇರಿ ನದಿ ತಮಿಳುನಾಡಿನ ಸಂಸ್ಕೃತಿ, ಪರಂಪರೆಯ ಮೇಲೆ ಬೀರಿದ ಪರಿಣಾಮಗಳ ಬಗ್ಗೆ, ತಮಿಳು ಜೀವನದಲ್ಲಿ ಕಾವೇರಿಯ ಪಾತ್ರದ ಬಗ್ಗೆ, ತಮಿಳಿನ ಕಾವ್ಯ, ಕೃತಿಗಳಲ್ಲಿ ಕಾವೇರಿಯ ಬಣ್ಣನೆ ಸೇರಿದಂತೆ, ಕಾವೇರಿ ಸೀಮೆಯ ಕೃಷಿ ಚಟುವಟಿಕೆಗಳ ಬಗ್ಗೆ ಛಾಯಾಚಿತ್ರ ಸಹಿತ ವಿವರಣೆಗಳಿದ್ದವು. ಕಾವೇರಿ ನದಿ ಪೂಂಪ್‌ಹಾರ್‌ನಲ್ಲಿ ಬಂಗಾಳ ಕೊಲ್ಲಿಯಲ್ಲಿ ಲೀನವಾಗುವ ಮೊದಲು ಅದು ಹೇಗೆ ಅಲ್ಲಿನ ಜನಜೀವನದ ಮೇಲೆ ಪರಿಣಾಮ ಉಂಟು ಮಾಡಿದೆ ಎಂಬುದನ್ನು ದೇಶದ ಜನರಿಗೆ ತಿಳಿಯಪಡಿಸಲು ಅಲ್ಲಿನ ಸರ್ಕಾರ ಕೈಗೊಂಡ ಕ್ರಮವಾದು.

ಆದರೆ ನಾವು ಕಾವೇರಿ ನಮ್ಮ ತಾಯಿ ಎಂದು ಭಾವನಾತ್ಮಕವಾಗಿ ಬೊಬ್ಬಿರಿಯುತ್ತೇವೆ, ಆ ತಾಯಿಯನ್ನು ಬಳಸಿಕೊಂಡು ಅದೇಷ್ಟು ರಾಜಕೀಯ ಲಾಭ ಪಡೆಯಬಹುದೋ ಅಷ್ಟನ್ನೂ ಬಾಚಿಕೊಳ್ಳಲು ಬಯಸುತ್ತೇವೆ. ಕಾವೇರಿ ಹೆಸರಲ್ಲಿ ಅದೇಷ್ಟು ಸಾಧ್ಯವೋ ಅಷ್ಟು ಸಂಘಟನೆಗಳನ್ನು ಕಟ್ಟಿ ದೊಣ್ಣೆ ನಾಯಕರಾಗಲು ಹೊರಡುತ್ತೇವೆ. ಆದರೆ ಕಾವೇರಿ ನಮ್ಮ ರಾಜ್ಯಕ್ಕೆ ನೀಡಿದ ಸಾಂಸ್ಕೃತಿಕ, ಸಾಹಿತ್ಯಿಕ, ಚಾರಿತ್ರಿಕ, ಆರ್ಥಿಕ ಕೊಡುಗೆಗಳನ್ನು ರಾಷ್ಟ್ರ ಮಟ್ಟದಲ್ಲಿ ಬಿಂಬಿಸುವ ಪ್ರಯತ್ನವನ್ನು ಮಾಡುವುದೇ ಇಲ್ಲ. ಅದ್ದರಿಂದ ಕಾವೇರಿ ವಿವಾದ ಭುಗಿಲೆದ್ದ ಸಂದರ್ಭಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ರಾಜ್ಯಕ್ಕೆ ಸಿಗಬೇಕಾದ ನೈತಿಕ ಬೆಂಬಲ ಸಿಗದೇ ಅದು ತಮಿಳುನಾಡಿನ ಪಾಲಾಗುತ್ತಿದೆ.

ಕಾವೇರಿ ತಟದಲ್ಲಿ ನೆಲೆನಿಂತಿರುವ ತಲಕಾವೇರಿ, ಭಾಗಮಂಡಲ, ಶ್ರೀರಂಗಪಟ್ಣಣ, ಶಿವನ ಸಮುದ್ರ ತಳಕಾಡಿನಂತಹ ಅಸಂಖ್ಯಾತ ಪವಿತ್ರ ಯಾತ್ರ ಸ್ಥಳಗಳು, ಕಾವೇರಿ ಮಡಿಲಲ್ಲಿ ಸಾಮ್ರಾಜ್ಯ ಕಟ್ಟಿ ಮೆರೆದ ಗಂಗರು, ಮೈಸೂರಿನ ಮಹಾರಾಜರು, ಹೈದರಾಲಿ ಮುಂತಾದ ಚಾರಿತ್ರಿಕ ಸತ್ಯಗಳನ್ನು ನಮ್ಮ ನೆರವಿಗೆ ಬಳಸಿಕೊಳ್ಳಲು ನಾವು ಸಂಪೂರ್ಣವಾಗಿ ವಿಫಲರಾಗುತ್ತಿದ್ದೇವೆ. ಕರ್ನಾಟಕದ ಪರಂಪರೆಯಲ್ಲಿ ಹಾಸುಹೊಕ್ಕಾಗಿರುವ ಕಾವೇರಿ ಸಂಸ್ಕೃತಿ ನಮ್ಮ ಹಾರಾಟದ ಹೋರಾಟದಲ್ಲಿ ಲೋಕಕ್ಕೆ ಕಾಣುವುದೇ ಇಲ್ಲ.

ಕಾವೇರಿ ವಿವಾದ ಭುಗಿಲೆದ್ದ ಸಂದರ್ಭದಲ್ಲಿ ಕೃಷಿ ಮತ್ತು ಕುಡಿಯುವ ನೀರಿಗಾಗಿ ಕಾವೇರಿ ನದಿಯ ಮೇಲೆ ರಾಜ್ಯದ ಅವಲಂಬನೆಯನ್ನು ಅಂಕಿ ಅಂಶಗಳ ಅಧಾರದಲ್ಲಿ ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಇದನ್ನೇ ಬಳಸಿಕೊಂಡು ಕೇಂದ್ರದ ನೆರವು ಯಾಚಿಸುತ್ತೇವೆ, ನ್ಯಾಯಾಲಯಗಳಲ್ಲಿ ಕಾನೂನು ಹೋರಾಟ ಮಾಡುತ್ತೇವೆ. ಕಾನೂನು ಗೆಲುವು ಪಡೆಯುವ ದೃಷ್ಟಿಯಲ್ಲಿ ಇದು ಸಮರ್ಥನೀಯ. ಆದರೆ ಸರ್ಕಾರ ಒಂದು ಕಡೆ ಕಾನೂನು ಹೋರಾಟ ಚಾಲ್ತಿಯಲ್ಲಿಟ್ಟು ಕೊಂಡಿರುವಾಗಲೆ ಕಾವೇರಿ ಲಾಬಿಯನ್ನು ಮತ್ತೊಂದು ಮಜಲಿಗೆ ಕೊಂಡು ಹೋಗುವ ಕೆಲಸ ಮಾಡಬೇಕಾಗಿರುವುದು ಈ ಕಾಲಮಾನದ ಜರೂರತ್ತು.

ರಾಷ್ಟ್ರೀಯ ಮಾಧ್ಯಮಗಳಿಗೆ ಕಾವೇರಿ ವಿಷಯದಲ್ಲಿ ತಮಿಳುನಾಡಿನ ನಡೆಯೇ ಆದ್ಯತೆಯ ಸಂಗತಿ. ಸೆಪ್ಟೆಂಬರ್ ೧೯ರಂದು ನಡೆದಿದ್ದ ಕಾವೇರಿ ನದಿ ಪ್ರಾಧಿಕಾರದ ಸಭೆ ಮುಗಿದ ಬಳಿಕ ಇತ್ತ ಕರ್ನಾಟಕ ಭವನದಲ್ಲಿ ರಾಜ್ಯದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪತ್ರಿಕಾಗೋಷ್ಠಿ ಕರೆದಿದ್ದರೆ ಅತ್ತ ತಮಿಳುನಾಡು ಭವನದಲ್ಲಿ ಜಯಲಲಿತಾ ಪತ್ರಿಕಾಗೋಷ್ಠಿ ಕರೆದಿದ್ದರು. ’ಕುರ್ಚಿ ಕದನ’ವಿದ್ದ ಸಂದರ್ಭದಲ್ಲಿ ಸೋ ಕಾಲ್ಡ್ ರಾಷ್ಟ್ರೀಯ ಮಾಧ್ಯಮಗಳ ೩೦-೪೦ ಪತ್ರಕರ್ತರು ಕರ್ನಾಟಕ ಭವನಕ್ಕೆ ಮುತ್ತಿಗೆ ಹಾಕಿದ್ದರೆ ಅಂದು ಹಾಜರಾಗಿದ್ದು ಒಂದೋ ಎರಡೋ ಪತ್ರಕರ್ತರು. ಆದರೆ ತಮಿಳುನಾಡಿನ ಮುಖ್ಯಮಂತ್ರಿಗಳ ಪತ್ರಿಕಾಗೋಷ್ಟಿಯಲ್ಲಿ ೩೦-೪೦ ಪತ್ರಕರ್ತರಿದ್ದರು. ಮರುದಿನ ಪತ್ರಿಕೆಗಳಲ್ಲಿಯೂ ತಮಿಳುನಾಡಿನ ಮುಖ್ಯಮಂತ್ರಿಗಳ ಪ್ರತಿಕ್ರಿಯೆ ಮೊದಲ ಸಾಲುಗಳನ್ನು ಅಲಂಕರಿಸಿದ್ದವು. ಟಿವಿಯಲ್ಲಿಯೂ ಜಯಾರಿಗೆಯೇ ಆದ್ಯತೆ. ಇದಕ್ಕೆ ರಾಜಕೀಯ ಕಾರಣಗಳಿದ್ದರು ಕೂಡ ಪ್ರಾಧಿಕಾರದ ಸಭೆಯಲ್ಲಿ ತನಗಾದ ಅನ್ಯಾಯ ಮತ್ತು ಕಾವೇರಿ ಕಣಿವೆಯ ವಾಸ್ತವ ಸ್ಥಿತಿಯನ್ನು ದೇಶದ ಮುಂದಿಡಲು ರಾಜ್ಯಕ್ಕೆ ಸಾಧ್ಯವೇ ಆಗಲಿಲ್ಲ.

ದಕ್ಷಿಣ ಭಾರತದ ಸುಮಾರು ಪಂಚಕೋಟಿ ಜನತೆ ಮತ್ತು ಅಪಾರ ಪ್ರಮಾಣದ ಪಶು ಪಕ್ಷಿಗಳ ಸಾವು ಬದುಕಿನ ಪ್ರಶ್ನೆ ಕಾವೇರಿಯಲ್ಲಿ ಅಡಗಿದೆ. ಆದರೂ ಕಾವೇರಿ ನೀರಿನಿಂದ ಉಪಕೃತವಾದ ರಾಜ್ಯಗಳ ಹೊರಗಿನ  ಮಾಧ್ಯಮಗಳಿಗೆ ಕಾವೇರಿ ವಿವಾದ ಸುದ್ದಿಯೇ ಆಗಲಿಲ್ಲ. ಅವರಿಗೆ ಇದರಲ್ಲಿ ಯಾವುದೇ ಸೇಲೆಬಲ್ ಅಂಶ ಕಾಣಿಸಲೇ ಇಲ್ಲ! ಪ್ರತಿಭಟನೆಗಳು ಜೋರಾದಾಗ, ಬೆಂಗಳೂರು ಬಂದ್ ಆದಾಗ ಒಮ್ಮೆ ಅವು ಮೈಕೊಡವಿಕೊಂಡವು ಅಷ್ಟೆ. ಈ ಪ್ರತಿಭಟನೆಯ ಹಿಂದಿರುವ ವಾಸ್ತವ ಸ್ಥಿತಿ ಬಗ್ಗೆ ಅವುಗಳದ್ದು ದಿವ್ಯ ನಿರ್ಲಕ್ಷ್ಯ.

ಕೇಂದ್ರದಲ್ಲಿರುವ ಮಂತ್ರಿಗಳು ಮತ್ತು ಕಾಂಗ್ರೆಸ್ ಸಂಸದರು ಪಕ್ಷಕ್ಕೆ ತಮ್ಮ ’ಅತಿ ನಿಷ್ಠೆ’ ತೋರಿಸುವ ಭರದಲ್ಲಿ ರಾಜ್ಯದ ಹಿತವನ್ನು ಬಲಿಗೊಡುತ್ತಿದ್ದಾರೆ ಎಂದೆನಿಸುತ್ತದೆ. ಅವರಿಗೆ ಪಕ್ಷದ ಚೌಕಟ್ಟಿನಲ್ಲೇ ಕಾವೇರಿಗಾಗಿ ಹೊರಡುವ ಸಾಕಷ್ಟು ಅವಕಾಶಗಳಿದ್ದವು. ಕಾವೇರಿ ವಿವಾದದ ಸುಳಿವು ಸಿಕ್ಕ ಕೂಡಲೆ ಪ್ರಧಾನಿಯನ್ನು ಭೇಟಿಯಾಗಿ ಅವರಿಗೆ ರಾಜ್ಯದ ವಾಸ್ತವ ಸ್ಥಿತಿಯನ್ನು ವಿವರಿಸುವ ಕೆಲಸ ಮಾಡಬಹುದಿತ್ತು. ಪತ್ರ ಬರೆದು ರಾಜ್ಯದ ಸ್ಥಿತಿ ವಿವರಿಸಬಹುದಿತ್ತು. ವಿದೇಶಾಂಗ ಸಚಿವ ಎಸ್. ಎಂ ಕೃಷ್ಣ ಒಂದು ಓಲೆ ಬರೆದರೂ ಕೂಡ ಅಷ್ಟರ ಹೊತ್ತಿಗೆ ಕಾವೇರಿ ನದಿಯಲ್ಲಿ ಸಾಕಷ್ಟು ನೀರು ಹರಿದು ತಮಿಳುನಾಡು ಸೇರಿತ್ತು. ಆ ಬಳಿಕ ಮುನಿಯಪ್ಪ, ಖರ್ಗೆ ಅವರ ಜೊತೆ ಸೇರಿ ಪ್ರಧಾನಿ ಭೇಟಿ ಮಾಡುವ ಸಾಹಸ ಮಾಡಿದರು. ಮತ್ತೆ ಮೊಯಿಲಿ ನಾನು ಪ್ರತ್ಯೇಕವಾಗಿ ಪ್ರಧಾನಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ ಎಂದರು. ಆದರೆ ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಕಾಂಗ್ರೆಸ್‌ನ ನಾಯಕರಿಗೆ ’ಅತಿ ವಿನಯ’ ಪ್ರದರ್ಶಿಸುವ ಭರದಲ್ಲಿ ರಾಜ್ಯಕ್ಕಾದ ಅನ್ಯಾಯ ನಗಣ್ಯವಾಗಿ ಹೋಯಿತು.

ಇನ್ನು ಬಿಜೆಪಿ ನೇತೃತ್ವದ ಸರ್ಕಾರ ಮತ್ತು ಪಕ್ಷ ಎರಡೂ ಕೂಡ ಕಾವೇರಿ ವಿಷಯವನ್ನು ನಿರ್ವಹಿಸುವಲ್ಲಿ ಕಿಂಚಿತ್ ಜಾಣ್ಮೆ, ದೃಢತೆ ತೋರಲೇ ಇಲ್ಲ. ಕುರ್ಚಿ ಉಳಿಸಲು, ಉರಳಿಸಲು ಉದುರಿಸುವ ದಾಳಗಳ ಲೆಕ್ಕಾಚಾರಕ್ಕೆ ನೀಡುವ ಗಮನದ ಕನಿಷ್ಠ ಪ್ರಮಾಣವನ್ನು ಕಾವೇರಿ ಉಳಿಸಲು ನೀಡುತ್ತಿದ್ದರು ಕೂಡ ಸುಪ್ರೀಂ ಕೋರ್ಟ್‌ನ ಛೀಮಾರಿ ಮತ್ತು ಪ್ರಾಧಿಕಾರದ ಸಭಾ ತ್ಯಾಗದಂತಹ ಮೂರ್ಖ ನಡೆಗಳಿಂದ ಪಾರಾಗಬಹುದಿತ್ತು.

ರಾಜ್ಯದ ಸಂಸದರು ಒಗ್ಗಟ್ಟಾಗಿ ದೆಹಲಿಗೆ ಬಂದು ಒಂದು ಪ್ರತಿಭಟನೆ ನಡೆಸುತ್ತಿದ್ದರೆ ಅದೊಂದು ಸಂಚಲನ ಸೃಷ್ಟಿಸುತ್ತಿತ್ತು. ಆ ಮೂಲಕ ದೇಶದ ಮುಂದೆ ಕಾವೇರಿ ಮತ್ತು ಕರ್ನಾಟಕದ ಮಧ್ಯೆ ಇರುವ ಅವಿನಾನುಭವ ಸಂಬಂಧವನ್ನು ಪರಿಚಯಿಸುವ ವೇದಿಕೆ ನಿರ್ಮಾಣವಾಗುತ್ತಿದ್ದು. ಆದರೆ ಅವರು ಇದೆಲ್ಲವನ್ನು ಬಿಟ್ಟ ಯಾವ ಒಲೆಯಲ್ಲಿ ನನ್ನ ’ಮತ ಬೇಳೆ’ ಬೇಗ ಬೇಯುತ್ತದೆ ಎಂದು ರಾಜ್ಯದಲ್ಲೇ ಘೋಷಣೆ ಕೂಗುತ್ತ ಅವರೆಲ್ಲ ಇದ್ದಾರೆ. ಕಾವೇರಿ ಸಮಸ್ಯೆ ರಾಜ್ಯದೊಳಗೆ ಪರಿಹಾರ ಕಾಣುವಂತಹದ್ದಲ್ಲ. ಕಾವೇರಿ ವಿಷಯದಲ್ಲಿ ರಾಜ್ಯದ ಪರ ಅಭಿಪ್ರಾಯ ಸೃಷ್ಟಿಸುವ ಮಹತ್ತರ ಕೆಲಸ ದೆಹಲಿಯಲ್ಲಿ ನಡೆಯಬೇಕಿದೆ ಎಂಬ ಸರಳ ಸತ್ಯ ಅವರಿಗೆ ಹೊಳೆಯಲೇ ಇಲ್ಲ.

ದೆಹಲಿಯ ಜಂತರ್ ಮಂತರ್ ಪ್ರತಿಭಟನೆಗಳ ಕೇಂದ್ರ. ಅಲ್ಲಿ ದಿನಕ್ಕೆ ೪-೫ ಪ್ರತಿಭಟನಾ ಸಭೆಗಳು ನಡೆಯುವುದು ಸಾಮಾನ್ಯ. ಅಲ್ಲಿ ನಡೆಯುವ ಪ್ರತಿಭಟನೆಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುವುದು ಅಪರೂಪ. ಅದೇ ಜಾಗದಲ್ಲಿ ಕಬಿನಿ ಹಿತ ರಕ್ಷಣಾ ಸಮಿತಿ ಅವರು ಕಾವೇರಿಗಾಗಿ ಪ್ರತಿಭಟನೆ ನಡೆಸಿದರು. ಇದು ಕನ್ನಡ ಮಾಧ್ಯಮಗಳಲ್ಲಿ ಪ್ರಸಾರ ಮತ್ತು ಪ್ರಕಟವಾಯಿತು ಅಷ್ಟೆ. ಇದರಿಂದ ಏನು ಪ್ರಯೋಜನ? ಒಂದು ವೇಳೆ ರಾಜ್ಯದ ಸಂಸದರೆಲ್ಲ ಒಟ್ಟಾಗಿ ಇಂತಹ ಪ್ರತಿಭಟನೆ ನಡೆಸುತ್ತಿದ್ದಾರೆ ಅದು ಸೃಷ್ಟಿಸುತ್ತಿದ್ದ ಒತ್ತಡ ಅಪರಿಮಿತವಾಗಿರುತ್ತಿತ್ತು.

ರಾಜ್ಯ ಸರ್ಕಾರದ ಮನವಿಯ ಮೇರೆಗೆ ಕೇಂದ್ರ ಜಲ ಸಂಪನ್ಮೂಲ ತಂಡ ಕಾವೇರಿ ಜಲಾನಯನ ಪ್ರದೇಶಕ್ಕೆ ಭೇಟಿ ನೀಡಲು ಪ್ರಮುಖ ಕಾರಣ ಮಾಜಿ ಪ್ರಧಾನಿ ದೇವೇ ಗೌಡರು ದೆಹಲಿ ಮಟ್ಟದಲ್ಲಿ ನಡೆಸಿದ ಪ್ರಯತ್ನ. ಇದೇ ಕೆಲಸವನ್ನು ಬಿಜೆಪಿಯ ಅತಿರಥ ನಾಯಕ ಆನಂತ್ ಕುಮಾರ್, ಕಾಂಗ್ರೆಸಿನ ಮಹಾರಥಿಗಳಾದ ಎಸ್. ಎಂ. ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯಿಲಿ, ಮುನಿಯಪ್ಪ ಮುಂತಾದವರೆಲ್ಲ ಮಾಡಿದ್ದರೆ ಪ್ರಧಾನಿಗಳ ಸುತ್ತ ರಾಜ್ಯದ ಒಂದು ಒತ್ತಡ ವಲಯ ಸೃಷ್ಟಿಯಾಗಿರುತ್ತಿತ್ತು. ಮುಂದಿನ ದಿನಗಳಲ್ಲಾದರೂ ಇದು ರಾಜ್ಯದ ಸಹಾಯಕ್ಕೆ ಬರುತ್ತಿತ್ತು.

ಯಾವುದೆ ಸಮಸ್ಯೆಗೆ ರಾಜಕೀಯ ಹೋರಾಟ ಪರಿಹಾರವಾಗಲಾರದು. ಏಕೆಂದರೆ ಸಮಸ್ಯೆಯನ್ನು ಜೀವಂತವಾಗಿಡುವುದು ತಾನೇ ರಾಜಕೀಯದ ಒಳ ಸುಳಿ! ಅದ್ದರಿಂದ ಕಾವೇರಿ ಹೋರಾಟ ರಾಜಕೀಯದ ಸುಳಿಗೆ ಸಿಳುಕಿಕೊಂಡದ್ದೆ ಆದರೆ ಅದಕ್ಕಂತೂ ಶಾಶ್ವತ ಮೋಕ್ಷ ಪ್ರಾಪ್ತವಾಗಲು ಸಾಧ್ಯವಿಲ್ಲ. ಕಾವೇರಿ ಸಮಸ್ಯೆಗೆ ಪರಿಹಾರ ದೊರಕುವುದು ದೆಹಲಿಯಿಂದಲೇ ಅನ್ನುವುದು ನಿಚ್ಚಳ ಸತ್ಯ.

ಈಗ ಎದ್ದಿರುವ ಕಾವೇರಿ ಕಿಚ್ಚು ಶಮನಗೊಳ್ಳುತ್ತಲೇ ರಾಜ್ಯ ಸರ್ಕಾರ ದೆಹಲಿಯಲ್ಲಿ ಕಾವೇರಿ ಸೇರಿದಂತೆ ಎಲ್ಲ ಜಲ ವಿವಾದಗಳ ಪರಿಹಾರಕ್ಕೆ ಪೂರಕ ವಾಗುವಂತೆ ಮತ್ತು ಆ ನದಿಗಳ ಜೊತೆ ರಾಜ್ಯದ ಜನಜೀವನದ ಮಿಳಿತ-ತುಡಿತಗಳನ್ನು ಬಿಂಬಿಸುವ ಪ್ರಯತ್ನ ಮಾಡಿದರೆ ಚೆನ್ನ.

ರಾಜ್ಯದ ಬಗ್ಗೆ ದೆಹಲಿ ಆಳುವವರಲ್ಲಿ ಮತ್ತು ಜನರಲ್ಲಿ ಅಭಿಪ್ರಾಯ ಹುಟ್ಟಿಸುವ ನಾಯಕರಲ್ಲಿ ಒಂದು ಮೃದು ಅಭಿಪ್ರಾಯವಿದ್ದದ್ದೆ ಆದರೆ ಅದು ಆಣೆಕಟ್ಟೆಯಲ್ಲಿ ಸಂಗೃಹಿಸಿಟ್ಟ ನೀರಿನಂತೆ ಎಂಬುದನ್ನು ರಾಜ್ಯ ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ. ಈಗ ಅಲ್ಲದೆ ಹೋದರೂ ಮುಂದೊಂದು ದಿನ ಅಗತ್ಯ ಬಿದ್ದ ಸಂದರ್ಭದಲ್ಲಿ ಈ ಸಂಗ್ರಹಿಸಿದ ನೀರನ್ನು ಬಳಸಿಕೊಳ್ಳಬಹುದು. ಆದರೆ ನಮ್ಮನಾಳುವವರಿಗೆ ಇಷ್ಟೆಲ್ಲ ದೂರದೃಷ್ಟಿ ಇದೆಯೇ? ಇದ್ದರೂ ಅವರಿಗೆ ಮುಂದಿನ ಚುನಾವಣೆಯ ಸಮೀಪ ದೃಷ್ಟಿಯನ್ನು ಮೀರಿ ನಡೆಯುವ ಬದ್ಧತೆ ಇರುವುದು ಕಷ್ಟ.

Monday, July 23, 2012

ಯಾವಾಗ ಪಂದ್ಯ ಮುಗಿಯುತ್ತದೆ ಅನ್ನುವುದನ್ನು ವಿಧಿಯೇ ನಿರ್ಧರಿಸಲಿ ಅನ್ನುವುದು ನನ್ನ ಆಸೆ, ನಿನ್ನದು?


. . . ಎಚ್ . . . .
ಇಷ್ಟೇ ಬರೆದು ಪತ್ರ ವ್ಯವಹಾರ ಶುರು ಮಾಡುವುದು ಪತ್ರ ಸಂಪ್ರದಾಯದ ಉಲ್ಲಂಘನೆ ಅನ್ನುವುದೇನೋ ನಿಜ. ಆದರೆ ನಾನು ಏನು ಮಾಡಲಿ? ಯಾವ ಪ್ರಿಫಿಕ್ಸ್, ಸಫಿಕ್ಸ್ ಬಳಸೋದು ಅಂತ ಗೊತ್ತೇ ಆಗುತ್ತಿಲ್ಲ ಮಾರಾಯ್ತಿ. ಕಲ್ಲನ್ನು ಕಲ್ಲು ಎಂದು ಕರೆಯುವುದನ್ನು ಬಿಟ್ಟು ಅದಕ್ಕೆ ಯಾವುದೇ ಪ್ರಿಫಿಕ್ಸ್ ಆಥವಾ ಸಫಿಕ್ಸ್ ಸೇರಿಸಿದರೂ ಅದು ತನ್ನ ಗುಣ, ಗುಣಮಟ್ಟ, ಆಕಾರ, ಆಕೃತಿ, ದೃವ್ಯರಾಶಿಗಳಲ್ಲಿ ಕಿಂಚಿತ್ತು ಬದಲಾವಣೆ ತಂದು ಕೊಳ್ಳಲಾರದು ಎಂಬುದು ಕಲ್ಲು ಹೃದಯದವಳಾದ (ನೀನೇ ಕರೆದುಕೊಂಡಂತೆ) ನಿನಗೆ ಚೆನ್ನಾಗಿಯೇ ಗೊತ್ತಿದೆ. ನಾನು ನಿನ್ನನ್ನು ಏಕೆ ಗೌರವಿಸುತ್ತಿದ್ದೆ ಎಂದು ಕಾರಣ ಕೊಟ್ಟು ಹೇಳಬಹುದಾದ ಕೆಲವೇ ಕೆಲವು ಕಾರಣಗಳಲ್ಲಿ ಒಂದು ನೀನು stone hearted ಆಗಿದ್ದರೂ ಅದಕ್ಕಿಂತ ಹೆಚ್ಚು strong hearted ಆಗಿದ್ದದ್ದು. ಕಲ್ಲು ಹೃದಯಕ್ಕು ಗಟ್ಟಿ ಹೃದಯಕ್ಕೂ ಅಂಗ್ಲ ಭಾಷೆಯಲ್ಲಿ ಎರಡೇ ಎರಡು ಸ್ಪೆಲ್ಲಿಂಗ್ ವ್ಯತ್ಯಾಸವಷ್ಟೇ ಇದ್ದರೂ ಕೂಡ ಎರಡು ಸ್ಪೆಲ್ಲಿಂಗ್ಗಳು ನಮ್ಮ ವ್ಯಕ್ತಿತ್ವ, ವ್ಯವಹಾರ, ನಡೆ ನುಡಿಗಳಲ್ಲಿ ತರುವ ವ್ಯತ್ಯಯ ಅಪಾರವಾದದ್ದು. ಸ್ಪೆಲ್ಲಿಂಗ್ ವಿಷಯ ಬಿಟ್ಟು ಬಿಡೋಣ. ಏಕೆಂದರೆ ಎರಡು ಭಾಷೆಗಳಲ್ಲೂಅಪಾರ ಪಾಂಡಿತ್ಯಸಂಪಾದಿಸಿರುವ ನಿನಗೆ ನಾನಂತೂ ಏನೂ ಹೇಳಲಾಗದು. "ನನ್ನದು ಏನೇ ಇದ್ದರೂ ಹೇಳಿ ಕೇಳಿ ಮೊದಲೇ ಚೂರು... ಪಾಪಿ ನಾನು"...

ಆದರೂ ನನಗೆ ನನ್ನ ಭಾವ ಮತ್ತು ಜ್ಞಾನ ಪರಿಧಿಯಲ್ಲಿ ಹೊಳೆದ ಒಂದು ಅಂಶವನ್ನು ನಿನ್ನ ಮುಂದೆ ಇಡುತ್ತೇನೆ. ಒಪ್ಪಿಕೊ ಎಂದು ಒತ್ತಾಯಿಸಲಾರೆ... ಒಪ್ಪದಿದ್ದರೂ ನಾನೇನು ಕಳೆದುಕೊಳ್ಳಲಾರೆ. ನನ್ನ ಪ್ರಕಾರ ಕಲ್ಲು ಹೃದಯ ಎಂದರೆ ಪಲಾಯನವಾದ. ಯಾವುದೇ ಸ್ಥಿತಿ, ಪರಿಸ್ಥಿತಿ ಎದುರಾದಗಲೂ ಅದಕ್ಕೆ ಬೆನ್ನು ಹಾಕಿ ಓಡುವುದು. ಉದಾಹರಣೆಗೆ ನಾನು ನಿನಗೆ ಬೈದದ್ದೆ ಆದರೆ ಆಮೇಲೆ ಫೋನ್ ರಿಸೀವ್ ಮಾಡದಿರುವುದು, ಮೆಸೆಜ್ಗೆ ರಿಪ್ಲೈ ಮಾಡದಿರುವುದು ಇತ್ಯಾದಿ. ಅದೇ ಗಟ್ಟಿ ಹೃದಯ ಎಂದರೆ ನಾನು ನಿನ್ನಲ್ಲಿ ಅದೇಷ್ಟೆ ಪರಿ ಪರಿಯಾಗಿ ಪಪ್ಪಿ ಕೇಳಿದ್ದರೂ ಕೂಡ ಅದನ್ನು ಕೊಡದೆ ಆದರೆ ನನ್ನನ್ನು ಕಳೆದುಕೊಳ್ಳದೆ ವ್ಯವಹರಿಸುತ್ತಿದ್ದಿ ಅಲ್ವಾ ಅದು. ಇದರಿಂದ ನಿನ್ನ ಬಗ್ಗೆ ನನಗಿದ್ದ ಪ್ರೀತಿ ಹೆಚ್ಚೇನು ಆಗಿಲ್ಲ. ಅದು ಆಗಲೂ, ಈಗಲೂ, ಕ್ಷಣವೂ, ಕ್ಷಣವೂ ಹಾಗೇ ಇದೆ ಸಾಗರದಂತೆ. ಅದರ ಸಾಂದ್ರತೆ, ತೀವೃತೆಯಲ್ಲಿ ಹೆಚ್ಚು ಕಡಿಮೆಯಾಗಿಲ್ಲ. ಅದ್ದರಿಂದ ನಾನು ನಿನ್ನಿಂದ ಏನು ನಿರೀಕ್ಷಿಸುತ್ತಿದ್ದೇನೆ ಎಂಬುದನ್ನು ನೀನು ಅರ್ಥ ಮಾಡಿಕೊಳ್ಳುವಲ್ಲೆ ಸಂಪೂರ್ಣ ಎಡವಿದ್ದಿ ಎಂದು ನನಗನಿಸುತ್ತೆ. ಅದ್ದರಿಂದಲೇ ಎಲ್ಲ ಸಮಸ್ಯೆ.

ನನ್ನ ನಿನ್ನ ಪರಿಚಯಕ್ಕೆ ೯ರ ಹರೆಯ. ನಿನ್ನ ನನ್ನ ಸಂಬಂಧಕ್ಕ್ಕೆ ೬ರ ಪ್ರಾಯ. ನಿನ್ನನ್ನು ನಾನು ಪಿಯು ದಿನದಲ್ಲಿ ಕಂಡಾಗ ನನಗೆ ಅನ್ನಿಸಿದ್ದು ನೀನೊಬ್ಬಳು ವಿಶಿಷ್ಟ ಹುಡುಗಿ ಎಂದು. ಆದರೆ ಈಗ ಅನಿಸುತ್ತದೆ ನಿನ್ನದು ವಿಶಿಷ್ಟತೆ ಅಲ್ಲ ವಿಲಕ್ಷಣತೆ ಅಂತ! 
ಮೊನ್ನೆ ನನಗೆ ಅಪಘಾತವಾಗಿತ್ತು. ನನ್ನ ಅಕ್ಕ ಪಕ್ಕನೇ ಕೂತಿದ್ದ ಇಬ್ಬರು ಇನ್ನಿಲ್ಲವಾದರು. ನಾನು ಆಸ್ಪತ್ರೆ ಪಾಲಾದೆ. ಬದುಕುತ್ತೇನೋ, ಇಲ್ಲವೋ ಎಂಬುದೆಲ್ಲವೂ ಅನಿಶ್ಚಿತ. ಅದು ಹೇಗೋ ಬದುಕಿಕೊಂಡೆ. ಪವಾಡ ಸದೃಶವಾಗಿ ಚೇತರಿಸಿಕೊಳ್ಳುತ್ತಿದ್ದೇನೆ. ನಾನು ಅರೆಪ್ರಜ್ಞಾವಸ್ಥೆಯಲ್ಲೂ ನಿನ್ನ ಹೆಸರು ಬಡ ಬಡಿಸುತ್ತಿದ್ದೆ ಅಂತೆ. ನನ್ನ ಜನ್ಮಕ್ಕಿಷ್ಟು! ನನಗೆ ನನ್ನ ಬಗ್ಗೆನೇ ಅಸಹ್ಯವಾಗುತ್ತಿದೆ ಮಾರಾಯ್ತಿ.

ನಿನಗೆ ಈಗ ನನ್ನ ಮೇಲೆ ಕೋಪಕ್ಕೆ ಕಾರಣ ನಿರಂತರವಾಗಿ ನಾನು ಫೋನ್ ಮಾಡುತ್ತಿರುವುದು ಮತ್ತು ನಿನ್ನ ಮಾತಿನ ಪ್ರಕಾರ ಹೇಳುವುದಾದರೆ ಬಾಯಿಗೆ ಬಂದಂತೆ ಮೆಸೇಜ್ ಮಾಡುತ್ತಿರುವುದು

ಅಕ್ಸಿಡೆಂಟ್ ಕತೆ ಮೊದಲು ಹೇಳಿ ಮುಗಿಸುತ್ತೇನೆ. ನಿಜ ಹೇಳಿದರೇ ನೀನು ನಂಬೋದಿಲ್ಲ ಅಂತ ಗೊತ್ತು. ಆದರೆ ನಿಜ ಹೇಳದಿದ್ದರೆ ನಮ್ಮ ಸಂಬಂಧಕ್ಕಿದ್ದ ಪ್ರಾಮಾಣಿಕತೆ ಮತ್ತು ವಿಶ್ವಾಸರ್ಹತೆಯ ಲೇಪಕ್ಕೆ ಕುತ್ತು. ಏನೇ ಆಗಲಿ, ನಿಜ ಹೇಳುವೆ. ಏಕೆಂದರೆ ಇನ್ನು ನಿನ್ನನ್ನು ಕಳ ಕೊಳ್ಳುವ ಭಯ, ಪಡ ಕೊಳ್ಳವ ತವಕ ಎರಡೂ ನನಗಿಲ್ಲ. ಕಳೆದುಕೊಂಡರೆ ಒಂದು ಕಲ್ಲು, ಪಡೆದುಕೊಂಡರೂ ಒಂದು ಕಲ್ಲು ಅಷ್ಟೆ ಅನ್ನುವಷ್ಟು ನಿನ್ನ (ನಮ್ಮ ಸಂಬಂಧದ) ಬಗ್ಗೆ ನಿರಾಶನಾಗಿದ್ದೇನೆ ಅಥವಾ ವೈರಾಗ್ಯ ಪಡೆದಿದ್ದೆನೆ ಎಂದು ನೀನು ತಿಳಿದುಕೊಂಡರೂ ಅಡ್ಡಿಯಿಲ್ಲ

ನನಗೆ ಅಕ್ಸಿಡೆಂಟ್ ಆದವತ್ತು ನಾನು ನಿನಗೆ ಒಂದು ಮೆಸೆಜ್ ಮಾಡಿದ್ದೆ. ನಾನು ಸಾಯೋ ತನಕವೂ ನಿನಗೆ ಕಾಲ್ ಮಾಡುತ್ತಿರುವೆ ಅಂತ. ಕಾಕತಾಳೀಯವೆಂದರೆ ಹಾಗೇ ಕಾಲ್ ಮಾಡುತ್ತಿರುವಾಗಲೇ ಅಕ್ಸಿಡೆಂಡ್ ಆಗಿತ್ತು. ದುರದೃಷ್ಟವಶಾತ್ ನಾನು ಸಾಯಲಿಲ್ಲ. ನಿನಗೆ ಕೊಟ್ಟ ಮಾತು ನನಗೆ ಉಳಿಸಿಕೊಳ್ಳಲಾಗಲಿಲ್ಲ. ವೆರಿ ವೆರಿ ಸ್ಸಾರಿ. ಸಾಯುವ ಒಂದು ಅವಕಾಶ ಮತ್ತು ನಿನಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬಹುದಾಗಿದ್ದ ಪ್ರಥಮ ಅವಕಾಶ ನನ್ನ ಕೈಯಿಂದ ತಪ್ಪಿತು. ಹಾಗೇಯೇ ನಿನಗೆ ಕಿರಿಕಿರಿ ಮಾಡುತ್ತಿದ್ದ, ರೇಜಿಗೆ ಹುಟ್ಟಿಸಿದ್ದ ಅಸಭ್ಯ, ಅಸಹ್ಯ ಪ್ರಾಣಿಯೊಂದರ ಕಾಟದಿಂದ ತಪ್ಪಿಸಿಕೊಳ್ಳುವಂತಹ ನಿನ್ನ ಅವಕಾಶ ಕೂಡ ಮುಂದೂಡಲ್ಪಟ್ಟಿತ್ತು. ಇಬ್ಬರದ್ದು ಕೂಡ ದುರದೃಷ್ಟವೇ ಸರಿ

ಸರಿ, ಈಗ ಚೇತರಿಸಿಕೊಳ್ಳುತ್ತಿದ್ದೇನೆ, ಖಂಡಿತವಾಗಿಯೂ ಮೊದಲಿನಂತೆಯೆ ಆಗುತ್ತೇನೆ. ನೊ ಡೌಟ್. ನನ್ನ ಮೈಮೇಲಿನ ಎಲ್ಲಾ ಗಾಯಗಳು ಮಾಯವಾಗುತ್ತದೆ. ಆದರೆ, ಮನಸ್ಸಿಗಾದ ಗಾಯ ಅದರಲ್ಲೂ ನೀನು ಮಾಡಿದ ಗಾಯವಿದೆಯಲ್ಲ ಅದು ಯಾವತ್ತೂ ಮಾಸಲಾರದು. ನಾನು ಸಾಯುವವರೆಗೂ ಹಸಿ ಹಸಿಯಾಗಿಯೇ ಇರುತ್ತದೆ. ನೀನು ನನ್ನ ಮನಸ್ಸನ್ನು ಗೀರಿ ಗೀರಿ ಹಾಕಿದ್ದಿ, ಪುಡಿ ಪುಡಿ ಮಾಡಿದ್ದಿ, ಚಿಂದಿ ಚಿತ್ರಾನ್ನ ಮಾಡಿದ್ದಿ. ನಿನ್ನ ಜೊತೆ ಒಮ್ಮೆ ಮಾತಾಡಬೇಕು ಎಂದು ಅದೇಷ್ಟೋ ಬಾರಿ ತವಕಿಸುತ್ತಿದ್ದೆ, ಗಾಯದ ನೋವಿನಲ್ಲೂ, ರಕ್ತದ ಸೋರುವಿಕೆಯಲ್ಲೂ, ಔಷಧ, ನಿದೆರೆಯ ಅಮಲಿನಲ್ಲೂ, ಸಾಯುವ, ಬದುಕುವ ಒದ್ದಾಟದಲ್ಲೂ. ಒಮ್ಮೆ ನಿನ್ನ ಜೊತೆ ಮಾತನಾಡಬೇಕು, ಒಮ್ಮೆ, ಒಮ್ಮೆ, ಒಮ್ಮೆ, ಒಂದೇ ಒಂದು ಸಾರಿ... ಇಲ್ಲ ನಿನ್ನ ಕಲ್ಲು ಮನಸ್ಸು ಕರಗಲೇ ಇಲ್ಲ. ಅದು ಮತ್ತಷ್ಟು ಕಲ್ಲಾಯಿತು, ಕರಿ ಕಲ್ಲಾಯಿತು, ಕಲ್ಲಿದ್ದಲ್ಲಾಯಿತು.

ನೋಡು, ನನಗೆ ನೂರಾರು ಗೆಳೆಯರಿದ್ದಾರೆ ಅನ್ನುವುದು ನಿನಗೆ ಸೇರಿದಂತೆ ಎಲ್ಲರಿಗೂ ಗೊತ್ತು. ಆದರೆ ನನಗೆ ಅಪಘಾತವಾದ ಸುದ್ದಿ ಕೇಳಿ ನನ್ನ ಕೆಲ ಸ್ನೇಹಿತರನ್ನು ಬಿಟ್ಟು ಯಾರೊಬ್ಬರೂ ಸ್ಪಂದಿಸಲಿಲ್ಲ. ದಿನ ಮೆಸೇಜ್ ಮಾಡುವವರದ್ದು, ದಿನಕ್ಕೆರಡು ಬಾರಿ ಕಾಲ್ ಮಾಡುತ್ತಿದ್ದವರದ್ದು ಸುದ್ದಿನೇ ಇಲ್ಲ. ನನಗೆ ಡೌಟ್... ನನಗೆ ಅಕ್ಸಿಡೆಂಟ್ ಆದದ್ದೋ ಅಲ್ಲಾ ಅವರಿಗೋ ಅಂತ! ಅವರನ್ನು ಬಿಟ್ಟು ಬಿಡು.. ಅವರಿಗೂ ನನಗೂ ಹೆಚ್ಚೇನು ಕೊಡು ಕೊಳ್ಳುವಿಕೆಯೂ ಇಲ್ಲ. ಅಥವಾ ಅವರಿಂದ ಇಂತಹದ್ದನ್ನು ನಿರೀಕ್ಷೆ ಮಾಡುವಷ್ಟು ಮೂರ್ಖನೂ ನಾನಲ್ಲ. ಇದರರ್ಥ ನಿನ್ನಿಂದ ನಾನು ನಿರೀಕ್ಷೆ ಮಾಡುತ್ತಿದ್ದೆ ಎಂದು ತೀರಾ ಬಾಲಿಶವಾಗಿ ನೀನು ನಿರ್ಧರಿಸಬೇಡ

ನಾನು ನನ್ನ ಚಿಕ್ಕ ವಯೋಮಾನದಲ್ಲೆ ಒಂದಿಷ್ಟು ಸಾಧನೆ ಮಾಡಿದ್ದರೂ ಕೂಡ ಒಂದೇ ಒಂದು ಅಭಿನಂದನೆ ಮೆಸೆಜ್ ಮಾಡದ, ಮಾತಿನಲ್ಲಿ ಮೆಚ್ಚುಗೆ ಸೂಚಿಸದ, ನಾನು ಅದೇನೋ ಬರೆದು ತಂದು ನಿನ್ನ ಮುಂದಿಟ್ಟಾಗ ಅದನ್ನು ತೀಡಾದ, ನನ್ನ ಸರಿ ತಪ್ಪುಗಳ ಬಗ್ಗೆ ಒಮ್ಮೆಯೂ, ಒಂಚೂರು ವಿಮರ್ಶೆ ಮಾಡದ ಎಲ್ಲವನ್ನೂ ಲೆಕ್ಕಾಚಾರದ ಮೂಸೆಯಲ್ಲೇ ನೋಡುತ್ತಿದ್ದ ನಿನ್ನತ್ತ ಒಂದು ಹಿಡಿ ಗಾಳಿಗೋಸ್ಕರ, ಬದುಕಿಗೋಸ್ಕರ  ಒದ್ದಾಡುತ್ತಿದ್ದಾಗ ಮಾನಸಿಕ ಬೆಂಬಲಕ್ಕಾಗಿ ನೋಡುವಷ್ಟು ಮುಠ್ಠಾಳ ನಾನಲ್ಲ. ಅದಕ್ಕಿಂತ ಹೆಚ್ಚಾಗಿ ನಾನು ನಿನ್ನ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದೇನೆ ಮಾರಾಯ್ತಿ! ನಿನ್ನ ದನಿ ಕೇಳಿದರೆ ನಾನು ಬದುಕುತ್ತೇನೆ ಎಂದು ಗೊತ್ತಾದದ್ದೇ ಆದರೆ ನಿನ್ನ ಸಿಮ್ನ್ನೆ ಬದಲಾಯಿಸಿ ಬಿಡುವಷ್ಟು ನಿಷ್ಕರುಣಿ, ನಿರ್ದಯಿ ಮತ್ತು ಕಠೋರ ಹೃದಯದವಳು ನೀನು.

ಆದರೂ ನಾನು ನಿನಗೆ ಮೆಸೇಜ್ ಮಾಡಿದ್ದೆ. ಬೈದು ಮೆಸೇಜ್ ಮಾಡಿದ್ದೆ, ಮತ್ತೊಮ್ಮೆ ನಿನ್ನ ಮಾತಲ್ಲೇ ಹೇಳುವುದಾದರೆ ಬಾಯಿಗೆ ಬಂದಂತೆ ಮೆಸೆಜ್ ಮಾಡಿದ್ದೆ. ಒಂದರ ಮೇಲೊಂದರಂತೆ ಕಾಲ್ ಕೊಟ್ಟೆ. ಏಕೆ?  ನಿನಗೆ ನಾನು ಇಲ್ಲಿ ಮತ್ತೊಂದು ವಿಷಯ ಸ್ಪಷ್ಟ ಪಡಿಸಬೇಕು. ನೀನು ನನ್ನನ್ನು ಅದೇಷ್ಟೆ ಕಾಡಿಸಿದ್ದರು, ಪೀಡಿಸಿದ್ದರು ಕೂಡ ನಿನ್ನ ಮೇಲಿನ ಪ್ರ್ರೀತಿ ಮಾತ್ರ ಈಗಲೂ ಕ್ಷಣವೂ ನನ್ನಲ್ಲಿ ಚಿಮ್ಮುತ್ತಲೇ ಇದೆ. ಇದೇ ವಿಧಿ ವಿಪರ್ಯಾಸ! ವಿಧಿಯೇ ನನ್ನನ್ನು ನೀನು ಏನು ಮಾಡಬೇಕೆಂದಿದ್ದಿಯಾ?
ನನ್ನ ನಿನ್ನ ಸಂಬಂಧದ ಮೂಲಭೂತ ಅಂಶಗಳತ್ತ ಒಮ್ಮೆ ಗಮನ ಹರಿಸೋಣ. ನನಗೆ ನಿನ್ನ ಮೇಲೆ ವಿಶೇಷ ಪ್ರೀತಿ (ಇನ್ನು ಲವ್ ಎಂದಷ್ಟೇ ತಿಳಿದುಕೊಳ್ಳಬೇಡ) ಹುಟ್ಟಿಕೊಂಡದ್ದು. ಒಂದು ಸಂಜೆ. ಅವತ್ತು ನನ್ನ ನಿನ್ನ ಮಧ್ಯೆ ಏನು ನಡೆದಿತ್ತು ಎಂಬುದು ನಿನಗೆ ನೆನಪಿರಬಹುದು, ಅದೇ ನೆನಪಿಲ್ಲ ಎಂದಾದರೆ ನಾನೇನು ಮಾಡಲು ಸಾಧ್ಯವಿಲ್ಲ. ಆದರೆ ನಿನ್ನ ಬಗ್ಗೆ ನನಗೆ ಸಿಕ್ಕಾಪಟ್ಟೆ ಕೋಪ ಬಂದಿದ್ದದ್ದು ಘಟನೆ ನಡೆಯುವುದಕ್ಕಿಂತ ಎಷ್ಟೋ ಹಿಂದೆ. ಅದು ಕೂಡ ಯಾವಾಗ ಎಂದು ನಿನಗೆ ಗೊತ್ತಿರಬಹುದು. ಗೊತ್ತಿಲ್ಲ ಎಂದರೆ ಮತ್ತೊಮ್ಮೆ ಹೇಳುತ್ತಿದ್ದೇನೆ ನಾನೇನು ಮಾಡಲು ಸಾಧ್ಯವಿಲ್ಲ. ಆದರೆ ನಮ್ಮಿಬ್ಬರಿಗೆ ಗೊತ್ತಿದ್ದ ಪಕ್ಕಾ ಸತ್ಯವೆಂದರೆ ನಾವಿಬ್ಬರು ಲವ್ (ಲೋಕದ ಕಣ್ಣೆವೆಯ ವ್ಯಾಖ್ಯಾನದಲ್ಲಿ) ಮಾಡುತ್ತಿರಲಿಲ್ಲ. ಆಫ್ಕೋರ್ಸ್, ನಾನಂತು ಯಾವ ಆಂಗಲ್ನಿಂದಲೂ ನಿನ್ನನ್ನು ಲವ್ ಮಾಡಲು ಸಾಧ್ಯವೇ ಇರಲಿಲ್ಲ!

ಬಳಿಕ ನಮ್ಮ ನಡುವೆ ಸಾಕಷ್ಟು ವಿದ್ಯಮಾನಗಳು ನಡೆದಿವೆ. ಯಾವಾಗ, ಏನೆಲ್ಲ ನಡೆದಿದೆ, ನಡೆದಿಲ್ಲ ಅನ್ನುವುದು ನಮ್ಮಿಬ್ಬರ ಮನದಲ್ಲಿ ಕಲ್ಲಿನ ಮೇಲಿನ ಬರಹದಂತೆ ಇದೆ. ಇರಲಿ ಬಿಡು, ನೀನು ನನ್ನುನ್ನು ನಾಟಕದವ ಅಂದದ್ದು ಅಥವಾ ಕಳೆದ ಏಪ್ರಿಲ್ನಲ್ಲಿ ನಾನು ಊರಿಗೆ ಬಂದಿದ್ದಾಗ ನೀನು ಸಿಗುವೆ ಎಂದು ಹೇಳಿ ಕೈಕೊಟ್ಟದ್ದು ನನಗೆ ಅತ್ಯಂತ ನೋವು ಕೊಟ್ಟ ಸಂಗತಿ ಅಂತ ನಾನು ನಿನಗೆ ಹೇಳಿದ್ದೆ. ಹಾಗೇ ನಾಟಕದವ ಅಂದ ವಿಷಯವನ್ನು ನಾವಿಬ್ಬರು ಅಲ್ಲೇ ಬಿಟ್ಟು ಬಹಳಷ್ಟು ದೂರ ಒಂದಾಗಿಯೇ ಬಂದಿದ್ದೇವೆ.

ಆದರೆ ನೀನು ಸಿಗುತ್ತೇನೆ ಎಂದು ಹೇಳಿ ಮೋಸ ಮಾಡಿದ ಘಟನೆ ಮತ್ತು ಮೋಸ ಮಾಡಿದ ರೀತಿಯ ಬಳಿಕ ನಿನ್ನ ಜೊತೆ ಮಾತನಾಡುವುದನ್ನು ನಾನು ಬಹಳಷ್ಟು ಕಡಿಮೆ ಮಾಡಿದ್ದೆ. ನನಗೆ ಕಳೆದ ವರ್ಷ ಬರ್ತ್ ಡೇ ವಿಶ್ ಕೂಡ ಮಾಡದೇ ನೀನು ಅದೇಷ್ಟು ಹಠವಾದಿ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದೆ. ’ಮುಯ್ಯಿಗೆ ಮುಯ್ಯಿಎಂಬಂತೆ ನಿನ್ನ ಬರ್ತ್ ಡೇಗೂ ನಾನು ವಿಶ್ ಮಾಡಿರಲಿಲ್ಲ. ಮೇಲೆ ನಾನು ನಿನಗೆ ಕಾಲ್ ಮಾಡಿದ್ದು ನಿನ್ನ ಲವರ್ಗಳಲ್ಲಿ ಒಬ್ಬ ನನಗೆ ನಿನ್ನ ನಂಬರ್ ಕೊಡು ಎಂದು ದುಂಬಾಲು ಬಿದ್ದ ಬಳಿಕವೇ. ಅಂದರೆ ಸುಮಾರು ಆರು ತಿಂಗಳ ಬಳಿಕ. ಅನಂತರ ಕಳೆದ ವರ್ಷಾಂತ್ಯಕ್ಕೆ ಊರಿಗೆ ಬರುತ್ತೇನೆ ಎಂದಾಗ ಗೆಳತಿಯೊಬ್ಬಳ ಮದುವೆಯ ದಿನ ನಾವು ಭೇಟಿಯಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿರಲಿಲ್ಲ. ಅಂದು ನಮ್ಮ ಭೇಟಿ ಕೂಡ ಆಯಿತು. ಅಂದು ನನಗೆ ನಿನ್ನ ವರ್ತನೆ ನೋಡಿ ತುಂಬ ಖುಷಿಯಾಗಿತ್ತು. ನಿನ್ನ ಮೋಸದ ಕೊಳೆ ಮದುವೆಯಲ್ಲಿ ನಿನ್ನ ಅಟಿಟ್ಯೂಡ್ ನೋಡಿ ತೊಳೆದು ಹೋಗಿತ್ತು

ಸೋ ನಾನು ಅವತ್ತು ಒಂದು ನಿರ್ಧಾರಕ್ಕೆ ಬಂದೆ. ಕಳೆದ ವರ್ಷದಲ್ಲಿ ಅಂದರೆ ೨೦೧೧ರ ಏಪ್ರಿಲ್ನಿಂದ ಡಿಸೆಂಬರ್ ತನಕ ನನ್ನ - ನಿನ್ನ ಮಧ್ಯೆ ಇದ್ದ ನಿರ್ವಾತವನ್ನು ಇಲ್ಲವಾಗಿಸಿ ಮತ್ತೆ ನಮ್ಮ ಸಂಬಂಧವನ್ನು ಸರಿ ಪಡಿಸಿಕೊಳ್ಳಬೇಕು ಎಂಬುದೇ ನನ್ನ ನಿರ್ಧಾರವಾಗಿತ್ತು. ಅದೇ ರೀತಿ ನನ್ನ ಜೀವನದಲ್ಲಿ ಅವಧಿ ಬಹಳ ಮಹತ್ವಪೂರ್ಣವಾಗಿದ್ದು ಬಗ್ಗೆ ನಿನಗೆ ಗೊತ್ತೆ ಇರಲಿಲ್ಲ. ನಿನ್ನ ಜೊತೆ ಒಮ್ಮೆ ಬಗ್ಗೆ ಮಾತಾಡಬೇಕು ಎಂಬುದೇ ನನ್ನ ಆಸೆಯಾಗಿತ್ತು. ಆದರಂತೆ ವರ್ಷದ ಮೊದಲ ವಾರ ನಾನು ನಿನಗೆ ಕಾಲ್ ಮಾಡಿದ್ದೆ. ಮೆಸೇಜ್ ಮಾಡಿದ್ದೆ. ಆದರೆ ವಾರ ಬೇಡ ಮುಂದಿನ ವಾರ ಕಾಲ್ ಮಾಡು ಅಂದಿದ್ದೆ. ಅದರಂತೆ ನಾನು ಮಾಡಿದರೆ, ನಿನ್ನ ರೆಸ್ಪಾನ್ಸ್ ಇರಲಿಲ್ಲ. ನಂತರ ಒಂದಷ್ಟು ಬಾರಿ ಮಾಡಿದರೆ ಬೇರೆ ಸಮಯದಲ್ಲಿ ನಾನೇ ಮಾಡುವೆ ಎಂಬ ನಿನ್ನ ಉತ್ತರ, ಬೇರೆ ಸಮಯ ಬೇಗ ಬಾರದಿರುವುದನ್ನ ಕಂಡಾಗ ನಾನೇ ಮತ್ತೇ ಮತ್ತೇ ಮೆಸೆಜ್ ಮಾಡಿದರೆ ನಾನು ಪ್ರ್ಯಾಕ್ಟೀಸ್ ನಲ್ಲಿದ್ದೆ, ಅರ್ಜೆಂಟ್, ಏನೋ ಬರಿಲಿಕ್ಕೆ ಇದೆ, ಓದಲಿಕ್ಕೆ ಇದೆ ಎಂಬ ನಿನ್ನ ಸಿದ್ಧ ಉತ್ತರಗಳು. ಒಬ್ಬ ಹೊಣೆಗೇಡಿ ವ್ಯಕ್ತಿ ಮಾತ್ರ ಇಂತಹ ಉತ್ತರ ನೀಡಲು ಸಾಧ್ಯ ಎಂಬುದು ನನ್ನ ಭಾವನೆ. ಸರಿ ಹಾಗೇ ೪೦ ದಿನಗಳು ಉರುಳಿದ ಮೇಲೆ ನಿನಗೆ ನಾನು ಖಾರವಾಗಿಯೇ ಮೆಸೇಜ್ ಮಾಡಿದ್ದೆ. ನೀನು ಕೂಡ ಅಷ್ಟೆ ಖಾರವಾಗಿ ಪ್ರತಿಕ್ರಿಯಿಸಿದ್ದಿ.  

ಮತ್ತೆ, ಮೆಸೇಜ್ನಲ್ಲೇ ತೇಪೆ ಎಲ್ಲ ಹಾಕಿ ಒಂದು ಹಂತಕ್ಕೆ ನಿನಗೂ ಸಮಾಧಾನವಾಯಿತು. ನೀನು ಹಗಲು ಕಾಲ್ ಮಾಡಬೇಡ, ರಾತ್ರಿ ೯ರ ಬಳಿಕ ಮಾಡು ಎಂದು ಹೇಳಿದ್ದು, ನಾನು ಅದಕ್ಕೆ ಒಪ್ಪಿಕೊಂಡದ್ದು ಎಲ್ಲಾ ನಡೆಯಿತು. ಆಗನೌ ಅಲ್ ಈಸ್ ವೆಲ್ಅಂತ ಅಂದ್ಕೊಂಡೆ. ಮತ್ತೆ ನಮ್ಮ ಸಂಬಂಧ ಸುಗಮವಾಗುತ್ತದೆ ಎಂದು ಕೊಂಡೆ. ಆದರೆ ನಿನ್ನಲ್ಲಿದ್ದ ಕೆಟ್ಟತನದ ಕಾಳ ಸರ್ಪ ಮತ್ತೇ ಹುತ್ತದೊಳಗಿನಿಂದ ಬುಸ್ ಗುಟ್ಟಿದ್ದ. ಮತ್ತೇ ೨೦ ದಿನಗಳ ಕಾಲ ರಾತ್ರಿ ಗಂಟೆ ಬಳಿಕ ಕಾಲ್ ಮಾಡಿದ್ದರೆ ನೀನು ಅದನ್ನು ರಿಸೀವ್ ಮಾಡುತ್ತಲೇ ಇರಲಿಲ್ಲ. ಮೆಸೆಜ್ ಮಾಡಿದರೆ ಅದಕ್ಕೂ ರಿಪ್ಲೈ ಇಲ್ಲ

ವಾಸ್ತವವಾಗಿ ನನಗೂ ಯಾರಾದರೂ ಜಾಸ್ತಿ ಫೋನ್ ಮಾಡಿದ್ದೆ ಆದರೆ ಕಿರಿಕಿರಿ ಆಗುತ್ತದೆ. ಹಾಗಂತ ಹೇಳಿ ಫೋನ್ ರಿಸೀವ್ ಮಾಡದೆ ಅವರನ್ನು ಸತಾಯಿಸುವಷ್ಟು ನೀಚತನವನ್ನು ನಾನು ಮೈಗೂಡಿಸಿಕೊಂಡಿಲ್ಲ. ಒಂದು ವೇಳೆ ನನಗೆ ಆಗ ಕಾಲ್ ರಿಸೀವ್ ಮಾಡಲು ಆಗದಿದ್ದರು ಕೂಡ ಬಳಿಕ ಮತ್ತೇ ಅವರಿಗೆ ಕಾಲ್ ಮಾಡುವ ಅಥವಾ ಮೆಸೇಜ್ ಮಾಡುವ ಪ್ರಯತ್ನವನ್ನೂ ನಾನು ಮಾಡಿಯೇ ಮಾಡುತ್ತೇನೆ. ಇದು ನನ್ನ ಒಬ್ಬನ ಮಹಾತ್ಸಾಧನೆ ಮಾತ್ರವಲ್ಲ. ಬಹುತೇಕ ಎಲ್ಲರು ರೂಢಿಸಿಕೊಂಡಿರುವ, ಅನುಸರಿಸುತ್ತಿರುವ ಒಂದು ಸಣ್ಣ ಸತ್ಸಂಪ್ರದಾಯವಷ್ಟೆ. ಆದರೆ ನೀನು ಬರೋಬ್ಬರಿ ೬೦ ದಿನಗಳ ಕಾಲ ವಿನಾ ಕಾರಣ ಕಾಲ್ ರಿಸೀವ್ ಮಾಡದೆ, ಮಾತನಾಡದೇ ಸತಾಯಿಸಿ ಸಾಯಿಸ ಹೊರಟೇ ಅಲ್ಲಾ... ನಾನು ಏನು ತಪ್ಪು ಮಾಡಿದ್ದೆ? ನಿನಗೆ ಏನು ಅನ್ಯಾಯ ಮಾಡಿದ್ದೆ?. ಇಷ್ಟೆಲ್ಲವೂ ಆದ ಬಳಿಕವೂ ನಿನಗೆ ಅದು ಹೇಗೆ ಸೌಮ್ಯವಾಗಿ ನಾನು ಮೆಸೇಜ್ ಮಾಡಲಿ? ನೀನು ನನ್ನ ಮೆಸೇಜ್ಗಳಿಗೆ ರಿಪ್ಲೈ ಮಾಡಿದಾಗ, ಕಾಲ್ ರಿಸೀವ್ ಮಾಡುತ್ತಿದ್ದಾಗ ಯಾವತ್ತಾದರೂ ನಿನ್ನ ಮಾತನ್ನು ನಾನು ಮೀರಿದ್ದು ಉಂಟಾ? ಅದೇ ರೀತಿ ನಿನಗೂ ಯಾವುದೇ ತೊಂದರೆಯಾಗಬಾರದು ಎಂದು ಅನೇಕ ವಿಷಯಗಳಲ್ಲಿ ನಾನೇ ಸ್ವ ನಿಯಂತ್ರಣ ಹಾಕಿಕೊಂಡಿರಲಿಲ್ಲವೇ?

ಮಾರ್ಚ್ ಆರಂಭಕ್ಕೆ ನನ್ನ ತಾಳ್ಮೆಯ ಕಟ್ಟೆ ಒಡೆಯಿತು. ಘರ್ಷಣೆ ಜಾಸ್ತಿಯಾದಂತೆ ಒಂದು ಹಂತದ ಬಳಿಕ ಒಡೆದು ಒಳಗಿದ್ದದ್ದು ಹೊರ ಬರಬೇಕಾದದ್ದು ಪೃಕೃತಿಯ ನಿಯಮ ತಾನೇ

ನೋಡು ಮಾರಾಯ್ತಿ, ನಿನಗೆ ಗೊತ್ತಿರುವಂತೆ ನಾನು ಬರೆಯುವುದನ್ನು ಮತ್ತು ನಿನ್ನ ಜೊತೆ ಮಾತಾನಾಡುವುದನ್ನು ಮಾತ್ರ ತುಂಬಾ ತುಂಬಾ ಇಷ್ಟ ಪಡುತ್ತಿದ್ದೆ. ಈಗ ನೀನು ನನ್ನ ಜೊತೆ ಮಾತನಾಡುವುದಿಲ್ಲ ಎಂದು ಸ್ವ ನಿರ್ಬಂಧ ಹಾಕಿಕೊಂಡಿರುವ ಕಾರಣ ನಾನು ಬಗ್ಗೆ ಏನೂ ಮಾಡಲು ಸಾಧ್ಯವಿಲ್ಲ. ಅಂದರೆ ನನ್ನ ಮುಂದೆ ಈಗ ಉಳಿದಿರುವ ಏಕೈಕ ನಾನು ಇಷ್ಟ ಪಡುವ ಆಯ್ಕೆ ಎಂದರೆ ಬರವಣಿಗೆ. ಅದನ್ನು ನನ್ನಿಂದ ಯಾರು ಎಂದರೆ ಯಾರು, ನೀನು ಸಹಿತ ಇನ್ಯಾರು ಕೂಡ ಕಿತ್ತು ಕೊಳ್ಳಲಾರರು. ಬೇಕಾದರೆ ವೇದಿಕೆಯನ್ನು ನಿರಾಕರಿಸಬಹುದು ಅಷ್ಟೆ.

ಕಳೆದ ವರ್ಷಗಳಲ್ಲಿ ನನಗೆ ಯಾವುದು ಇಷ್ಟವೋ ಅದಕ್ಕೆ ಉಲ್ಟಾ ಅದದ್ದನ್ನೇ ಮಾಡುತ್ತ ಬಂದಿದ್ದಿ. ಆದರೆ ನಾನು ಅದರ ಬಗ್ಗೆ ಯಾವತ್ತೂ ಕ್ಯಾತೆ ತೆಗೆದಿರಲಿಲ್ಲ. ಅದು ನಿನ್ನ ಗುಣ. ಅದನ್ನು ನಾನು ತುಂಬು ಹೃದಯದಿಂದಲೇ ಗೌರವಿಸುತ್ತಿದ್ದೆ. ಆದರೆ ನೀನು ನನ್ನ ಜೊತೆ ಮಾತು ಬಿಟ್ಟಾಗ ನನಗೆ ಸುಮ್ಮನಿರಲಾಗಲಿಲ್ಲ. ಆದೂ ಕೂಡ ಯಾವುದೇ ಕಾರಣ ನೀಡದೆ, ಕಾರಣ ಕೊಡದೆ, ಕಾರಣವಿಲ್ಲದೆ ಮತ್ತು ಕೊನೆ ಪಕ್ಷ ಒಂದು ಗಲಾಟೆ ಕೂಡ ಮಾಡದೆ!

ನಮ್ಮ ಮಧ್ಯೆ ಇದ್ದದ್ದು ಸೋ ಕಾಲ್ಡ್ ಲವ್ ಅಲ್ಲ... ಹಾಗೇನೆ ಜಸ್ಟ್ ಫ್ರೇಂಡ್ ಶಿಪ್ ಕೂಡ ಅಲ್ಲ ಅನ್ನುವುದು ನಿನಗೆ ಗೊತ್ತೆ ಇದೆ. ಲವ್ ಮತ್ತು ಫ್ರೇಂಡ್ಶಿಪ್ ಮಧ್ಯೆ ನಮ್ಮ ಸಂಬಂಧ ಓಲಾಡುತ್ತಿತ್ತು ಅಥವಾ ಅದನ್ನೆಲ್ಲ ಮೀರಿ ಬೆಳೆದಿತ್ತು ಎಂಬುದು ನನ್ನ ನಂಬುಗೆ ಅಥವಾ ಲೆಕ್ಕಾಚಾರ.

ಸರಿ, ನೀನು ನನಗೆ ಕೊಡಬಹುದಾಗಿದ್ದ ಅತ್ಯಂತ ಬೆಲೆಬಾಳುವ ಬಹುಮಾನ ಏನೆಂದರೆ ನನ್ನ ಮಾತಿಗೆ ಕಿವಿ ಆಗುವಂತಾದ್ದು ಅನ್ನುವುದು ಕೂಡ ನಿನಗೆ ವೇದ್ಯ. ನನಗೆ ನಿನ್ನ ಜೊತೆ ಮಾತನಾಡುತ್ತಿರಬೇಕು ಅಷ್ಟೆ. ಹಾಗಂತ ಹೇಳಿ ೨೪* ಕಾಲ್ ಮಾಡಿ ನಿನಗೆ ಉಪದ್ರವ ಕೊಟ್ಟಿದ್ದೆ ಆಗಿದ್ದರೆ ಕೇಳು. ಪ್ರತಿ ಸಲ ನಿನಗೆ ಮೆಸೇಜ್ ಮಾಡಿ, ಕಾಲ್ ಮಾಡೋದಾ ಎಂದು ಕೇಳಿ ನೀನು ಅನುಮತಿ ನೀಡಿದ್ದೆ ಆದರೆ ಕಾಲ್ ಮಾಡುತ್ತಿದ್ದೆ. ಅದೇ ನೀನು ತಲೆ ನೋವು, ಹೊಟ್ಟೆ ನೋವು, ಮನೆಯಲ್ಲಿದ್ದೇನೆ, ಅವರಿದ್ದಾರೆ, ಇವರಿದ್ದಾರೆ, ಬ್ಯುಸಿ ಇದ್ದೇನೆ ಎಂದೆಲ್ಲ ಹೇಳಿದಾಗ ನಾನು ನಿನಗೆ ಒತ್ತಾಯ ಪಡಿಸಿದ್ದು ಕಡಿಮೆ ಅನ್ನುವುದು ಒಂಚೂರು ಮುಕ್ತ ಮನಸ್ಸಿನಿಂದ (ಅದು ನಿನಗೆ ಇರುವುದೇ ಡೌಟು) ನೀನು ಯೋಚಿಸಿದ್ದೇ ಆದರೆ ನಿನಗೆ ಹೊಳೆಯಲೂ ಬಹುದು. ಆದರೂ ನೀನು ಸುಮಾರು ೯೦ ದಿನ ನನ್ನ ಕಾಲ್ ರಿಸೀವ್ ಮಾಡಲೇ ಇಲ್ಲ. ಏಕೆ? ನಿನ್ನ ಅಹಂಕಾರಕ್ಕೆ ನನ್ನ ಧಿಕ್ಕಾರ.

ಇವತ್ತಿಗೂ ನಿನ್ನ ಸಣ್ಣತನಗಳ ಬಗ್ಗೆ ನನ್ನ ಯಾವುದೇ ಅಕ್ಷೇಪಣೆಗಳು ಇಲ್ಲ. ಇದನ್ನು ನಾನು ನಿನ್ನ ಜೊತೆ ಮಾತನಾಡುತ್ತಿರುವಾಗಲೇ ಹೇಳುತ್ತಿದ್ದೆ ಕೂಡ. ನನಗೆ ಸರಿ ಕಾಣದ್ದನ್ನು ನಿನಗೆ ಹೇಳುತ್ತಿದ್ದೆ ಅಷ್ಟೆ. ಆದರೆ ನನ್ನ ಕಾಲ್ ರಿಸೀವ್ ಮಾಡದ ನಿನ್ನ ಕುಬ್ಜತನವನ್ನು ನನಗೆ ಸ್ವೀಕರಿಸಲೇ ಆಗುತ್ತಿಲ್ಲ ಮಾರಾಯ್ತಿ.

ಪತ್ರ ಓದಿದ ತಕ್ಷಣ ನೀನು ನನಗೆ ಕಾಲ್ ಮಾಡುತ್ತೀಯಾ, ಮೆಸೇಜ್ ಮಾಡುತ್ತಿಯಾ, ನಮ್ಮ ಸಂಬಂಧ ಮತ್ತೆ ಸರಿ ಆಗುತ್ತದೆ ಎಂಬ ಯಾವುದೆ ಭ್ರಮೆ ನನ್ನಲಿಲ್ಲ ಎಂಬುದನ್ನು ನಾನು ಇಲ್ಲೇ ಸ್ಪಷ್ಟ ಪಡಿಸುತ್ತೇನೆ. ಇನ್ನು ನೀನು ಬೇರೆಲೆಕ್ಕಾಚಾರಹಾಕುವ ಶ್ರಮ ತೆಗೆದುಕೊಳ್ಳಬೇಡ

ಪತ್ರ ಓದಿ ನಿನಗೆ ಬೇಸರ, ದುಃಖ, ಖೇದ, ವಿಷಾದ, ನಿರಾಶೆ ಮುಂತಾದದ್ದು ಆದದ್ದೆ ಆದರೆ ನಿನಗೆ ಅದು ಎಷ್ಟು ಆಗುತ್ತೋ ಅದಕ್ಕಿಂತ ಒಂದು ಹಿಡಿ ಹೆಚ್ಚು ನನಗೆ ಆಗುತ್ತದೆ.

ಈಗ ನಿನ್ನ ನೆನಪಾದಾಗ ನನ್ನ ಮುಷ್ಠಿ ಬಿಗಿಯಾಗುತ್ತದೆ. ಆದರೆ ನಿನಗೆ ಹೊಡೆಯಲಲ್ಲ, ನನಗೆ ನಾನೇ ಹೊಡೆದುಕೊಳ್ಳಲು!
ನಿನ್ನೊಂದಿಗೆ ಮಾತನಾಡಬೇಕು ಎಂದು ಅನಿಸುವುದನ್ನು ನನ್ನ ದೌರ್ಬಲ್ಯ ಎಂದು ಭಾವಿಸಿ ನೀನು ನನ್ನ ಮೇಲೆ ಸಾಕಷ್ಟು ದೌರ್ಜನ್ಯ ಎಸಗಿದ್ದಿ. ಇನ್ನೊಬ್ಬರ ದೌರ್ಬಲ್ಯವನ್ನು ಬಳಸಿ ಅವರನ್ನು ಶೋಷಣೆ ಮಾಡುವುದು ನನ್ನ ಪ್ರಕಾರ ನೀಚತನ. ನೋಡು, ನನಗೂ ಕೆಲವರ ಜೊತೆ ಮಾತನಾಡಲು ಇಷ್ಟವಾಗುದುದಿಲ್ಲ, ಕಿರಿಕಿರಿ ಆಗುತ್ತದೆ ಆದರೆ ಅವರು ನನ್ನ ಜೊತೆ ಮಾತನಾಡ ಬಯಸಿದಾಗ ನಿನ್ನ ರೀತಿಯಲ್ಲಿ ಅವರನ್ನು ಹೀಯಾಳಿಸುವುದಿಲ್ಲ. ನಿನ್ನ ವರ್ತನೆ ಯಾವ ರೀತಿ ಇತ್ತು ಎಂದರೆ ನನ್ನನ್ನು ಹಾಳು ಮಾಡಲು ನನ್ನ ಶತ್ರುಗಳೇ ನಿನ್ನನ್ನು ಕಳುಹಿಸಿದಂತೆ ಇದೆ

ಸಂಬಂಧಗಳು ಸಾಯೋದಿಲ್ಲ, ಕೊಲೆ ಮಾಡಲ್ಪಡುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅದು ನಿಜ, ನನ್ನ ನಿನ್ನ ಸಂಬಂಧ ಖಂಡಿತವಾಗಿಯೂ ಸಾಯುವಂತದ್ದಾಗಿರಲಿಲ್ಲ. ಆದು ಕೊಲೆಯಾಗಲ್ಪಟ್ಟಿತ್ತು. ಕೊಲೆ ಮಾಡಲ್ಪಟ್ಟಿತ್ತು. ಅದರ ಕೊಲೆಗಡುಕಿ ನೀನೆ... ನೀನೆ... ನೀನೆ... ದಯಮಾಡಿ ನನ್ನ ಮೇಲೆ ನೀನು ದೋಷಾರೋಪಣೆ ಮಾಡಬೇಡ. ಜಗತ್ತಿನ ಯಾವ ಆಪಾದನೆಯನ್ನು ಬೇಕಾದರೂ ನಾನು ಎದುರಿಸಬಲ್ಲೆ. ಆದರೆ ನಮ್ಮ ಮಧ್ಯೆ ಇದ್ದ ನಿಷ್ಕಪಟ, ಅಮೂಲ್ಯ, ಸಾವಯವ, ಸಹಜ, ಬೆಲಕಟ್ಟಲಾಗದ ಒಂದು ಸಂಬಂಧವನ್ನು ಕೊಂದ ಆಪಾದನೆಯನ್ನಲ್ಲ. ಪಾಪ ನಿನಗೆಯೇ ಇರಲಿ, ನಿನಗೆಯೇ ಸೇರಲಿ, ನೀನು ಏಳು ಜನ್ಮವೆತ್ತಿ ಬಂದರೂ ನಿನ್ನನ್ನೇ ಸುತ್ತಿಕೊಳ್ಳಲಿ.

ನಿನಗೆ ಗೊತ್ತೋ ಇಲ್ಲವೋ ನನಗೆ ಗೊತ್ತಿಲ್ಲ... ಇಳಿ ಕತ್ತಲಲ್ಲಿ, ಮೋಡದ ಕರಿ ನೆರಳಲ್ಲಿ, ಮೂಲೆಯಲ್ಲಿ ಹುಟ್ಟಿ ಕೊಂಡ ಸಂಬಂಧವದು. ಇಬ್ಬರು ಹುಟ್ಟಿಸಿದ್ದ ಸಂಬಂಧದ ಲಾಲನೆ, ಪಾಲನೆ, ಪೋಷಣೆ ನೀನು ಮಾಡಲೇ ಇಲ್ಲ. ಅದು ನನ್ನ ಜವಾಬ್ದಾರಿಯಾಯಿತು. ಚಿಂತೆಯಿಲ್ಲದೆ, ವ್ಯಥೆಪಡದೆ ನಾನದನ್ನು ಸಲಹಿದ್ದೆ. ನೀನು ಏನು ಮಾಡಲೇ ಇಲ್ಲ ಎಂದು ನಾನು ಹೇಳಿದ್ದೆ ಆದರೆ ಅದು ಘೋರ ಅಪರಾಧವಾಗುತ್ತದೆ. ಆದರೆ ಮಗು ಸಂಕಷ್ಟಕ್ಕೆ ಸಿಕ್ಕಾಗ ನಾನು ಅದನ್ನು ಕೈ ಹಿಡಿದು ನಡೆಸಿ ಅದು ಹೇಗೋ ನಿನ್ನನ್ನು ಸಮಾಧಾನಿಸಿ ನಮ್ಮ ಮಧ್ಯೆ ತಂದು ಅದನ್ನು ಬಿಡುತ್ತಿದ್ದೆ. ಬಳಿಕ ಅದು ನಮ್ಮ ಮಧ್ಯೆ ತಿಳಿ ಗಾಳಿ, ಅಲೆ ನೀರಿನಂತೆ ಚಿಮ್ಮುತ್ತಿತ್ತು, ಪುಟಿದೇಳುತ್ತಿತ್ತು. ಅಂತಹ ಸಂಬಂಧವೊಂದನ್ನು ಯಾವ ರಾಕ್ಷಸ ಕೂಡ ಕಳೆದುಕೊಳ್ಳಲಾರ. ಆದರೆ ನೀನು ಮಾತ್ರ ರಾಕ್ಷಸರಿಗೆಯೇ ಸಡ್ಡು ಹೊಡೆದು ಬಿಟ್ಟೆ ಮಾರಾಯ್ತಿ

ನಾನು ನಿನ್ನಲ್ಲಿರುವ ಕೆಟ್ಟತನದ ಬಗ್ಗೆ ಮಾತ್ರ ಏಕೆ ಬರೆದೆ? ನನ್ನಲ್ಲಿ ಒಂದೇ ಒಂದು ಒಳ್ಳೆಯತನವಿಲ್ಲವೇ ಎಂದು ನೀನು ಕೇಳಿ ಕೊಳ್ಳುವ ಸಾಧ್ಯತೆಯಿದೆ. ನಿನ್ನಲ್ಲಿಭರಪೂರಒಳ್ಳೆಯತನಗಳೂ ಇವೆ ಅನ್ನುವುದು ಅಲ್ಲಲ್ಲಿ ತೋರಿಕೆಯಾಗಿದೆ ಅಥವಾ ಸೋರಿಕೆಯಾಗಿದೆ. ನಿನಗೆ ನೆನಪಿರಬಹುದು, ೨೦೦೩ರ ವರ್ಲ್ಡ್ ಕಪ್ ಫೈನಲ್ ಪಂದ್ಯ. ಇಡೀ ಸರಣಿಯಲ್ಲಿ ಸಚಿನ್ ಅದ್ಭುತ ಆಟ ಆಡಿದ್ದರೂ ಕೂಡ ಫೈನಲ್ನಲ್ಲಿ ವಿಫಲವಾದದ್ದೆ ನಮಗೆ ಹೆಚ್ಚು ನೆನಪಿರುವುದು. ಅದೇ ರೀತಿ ೧೯೯೭ರಲ್ಲಿ ಢಾಕದಲ್ಲಿ ನಡೆದ ಇಂಡಿಪೇಡೆನ್ಸ್ ಕಪ್ನಲ್ಲಿನ ಪಾಕ್ ವಿರುದ್ಧದ ಪಂದ್ಯದಲ್ಲಿ ಹೃಷಿಕೇಶ್ ಕಾನಿಟ್ಕರ್ ಹೊಡೆದ ಏಕೈಕ ಬೌಂಡರಿ ನಮ್ಮ ಮನಸ್ಸಿನಲ್ಲಿ ಇಂದಿಗೂ ಹಚ್ಚ ಹಸಿರಾಗಿದೆ. ಉಳಿದಂತೆ ಆತ ವಿಫಲ ಕ್ರಿಕೆಟಿಗನಾದರೂ ಕೂಡ! ಅಂದರೆ ಇದರರ್ಥ ಕೊನೆಗೆ ಯಾವುದೇ ವಿಷಯದ ಪ್ರಕ್ರಿಯೆಗಳೂ ನಮ್ಮಲ್ಲಿ ನೆನಪುಳಿಯುವುದಿಲ್ಲ, ಅದರ ಫಲಿತಾಂಶ ಆಥವಾ ಕೊನೆಗೆ ಏನು ಉಳಿದ್ದಿತ್ತು ಎನ್ನುವುದೇ ನಮ್ಮ ನೆನಪಲ್ಲಿ ಉಳಿಯುವುದು.

ಅಂದರೆ ನಮ್ಮ ಸುಮಧುರ ಸಂಬಂಧದ ಆರು ವರ್ಷಗಳು ಮರೆಯಾಗಿ ಈಗೀನ ನಮ್ಮಿಬ್ಬರ ರಾಕ್ಷಸಿತನವೇ ನನ್ನ ಮತ್ತು ನಿನ್ನ ಮನಸ್ಸಿನಲ್ಲಿ ಕೊಟ್ಟ ಕೊನೆಯದಾಗಿ ಉಳಿಯುತ್ತದೆ. ನೀನು ಇದನ್ನು ಬಯಸುತ್ತೀಯಾ ಹೇಳು?

ನೀನು ಮೂರು ತಿಂಗಳ ಅವಧಿಯಲ್ಲಿ ಒಂದೆ ಒಂದು ಸಲ ಕಾಲ್ ಮಾಡಿ ಮಾತನಾಡುತ್ತಿದ್ದರು ನನ್ನ ನಿನ್ನ ಸಂಬಂಧ ಇಂದಿಗೂ ಜೀವ ತಾಳಿಯೇ ನಿಂತಿರುತ್ತಿತ್ತು. ಆದರೆ ನಿನ್ನಲ್ಲಿನ ದುಷ್ಟ ಹಠ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಹಾಗಂತ ಹೇಳಿ ನನ್ನ-ನಿನ್ನದು ಎಲ್ಲವೂ ನೀನು ಕಾಲ್ ರಿಸೀವ್ ಮಾಡದೇ ಇದ್ದ ಕ್ಷಣಕ್ಕೆಯೇ ಮುಗಿಯುತ್ತದೆ ಎಂಬ ಭ್ರಮೆಯಲ್ಲಿ ನೀನು ಇರಬೇಡ. ಒಂದು ನೆನಪಿಡು ಒಳ್ಳೆಯತನಕ್ಕಿಂತ ಕೆಟ್ಟತನಕ್ಕೆ ಬಾಳಿಕೆ ಹೆಚ್ಚು.

ನೀನು ಒಮ್ಮೆ ನನ್ನ ಜೊತೆ ಮಾತನಾಡಿದ್ದೇ ಆದರೆ ನಮ್ಮ ನಡುವಿರುವ ಎಲ್ಲ ಗೊಂದಲಗಳು ಇಲ್ಲವಾಗುತ್ತದೆ ಎಂಬ ಅರಿವು ನಿನಗಿದೆ. ನಾನು ನೀನು ಅದೇಷ್ಟೆ ಗಲಾಟೆ ಮಾಡಿಕೊಂಡರು, ಕಿತ್ತಾಡಿಕೊಂಡರು, ಕಿಚಾಯಿಸಿಕೊಂಡರು, ಸರಸವಾಡಿದರೂ, ಸಲ್ಲಾಪ ಮಾಡಿದರೂ ಕೂಡ ನಮ್ಮನ್ನು ಅದು ಬೇರೆ ಮಾಡದು ಅನ್ನುವುದು ಕೂಡ ನಿನಗೆ ಗೊತ್ತಿದೆ. ಅದಕ್ಕಾಗಿ ನೀನು ರೀತಿಯ ಮೌನ ಧಾರಣೆ ಮಾಡುವ ಧೋರಣೆ ಅನುಸರಿಸಿ ನನ್ನನ್ನು ದೂರ ಮಾಡುವ ಪ್ರಯತ್ನ ಮಾಡುತ್ತಿರಲೂಬಹುದು, ನಿನ್ನನ್ನು ನಂಬಲಾಗುವುದಿಲ್ಲ

ನೋಡು, ವ್ಯಾಖ್ಯೆಯ ಚಿಪ್ಪಿನೊಳಗೆ ಸಿಳುಕದ, ನಿಲುಕದ ಅದ್ಭುತ ಸಂಬಂಧ ನಮ್ಮದು. ಯಾವುದೋ ಕಹಿ ಘಳಿಗೆಯಲ್ಲಿ ಏನೇನೋ ನಮ್ಮ ನಡುವೆ ನಡೆದಿರಬಹುದು. ಆದರೆ ಅದು ಮುಂದುವರಿಯಬಾರದು ಅನ್ನುವುದು ನನ್ನ ಕಳಕಳಿ. ನನ್ನದು ನಿನ್ನದು ಪ್ರೇಮ ಸಂಬಂಧವಲ್ಲ, ಅದು ಮದುವೆಯಲ್ಲಿ ಕೊನೆಯಾಗುವಂತದ್ದೂ ಕೂಡ ಅಲ್ಲ ಅನ್ನುವುದು ಇನ್ನೂ ಮುಖ್ಯವಾದ ಸಂಗತಿ

ನೀನಿಲ್ಲದ ನನ್ನ ಜೀವನ ಕೂಡ ಅದ್ಭುತವಾಗಿಯೇ ಇದೆ, ಇರುತ್ತದೆ. ಅದೇ ರೀತಿ ನಾನಿಲ್ಲದ ನಿನ್ನ ಜೀವನ ಕೂಡ ಹಾಗೇಯೆ ಇರಬಹುದು ಮತ್ತು ಇರಲಿ. ಅದ್ದರಿಂದ ನಮಗಿಬ್ಬರಿಗೂ ಜೀವನದ ಸುಂದರತೆಯನ್ನು ಅಸ್ವಾದಿಸಲು ಪರಸ್ಪರರ ಯಾವುದೇ ಅನಿವಾರ್ಯತೆ ಹಾಗೂ ಅವಶ್ಯಕತೆ ಇಲ್ಲ. ಆದರೆ ನಮ್ಮ ಸಂಬಂಧ ಯಾವುದೋ ಅನಿವಾರ್ಯತೆ ಅಥವಾ ಅವಶ್ಯಕತೆಗೋ ಕಟ್ಟು ಬಿದ್ದು ಬೆಳೆದದ್ದು ಅಲ್ಲ ತಾನೇ?

ಈಗ ಚೆಂಡು ನಿನ್ನ ಅಂಕಣದಲ್ಲಿ ಇದೆ. ಹೇಗೆ ಬೇಕಾದರೂ ನೀನು ಆಡಬಹುದು. ಆದರೆ ಚೆಂಡನ್ನು ಮೈದಾನದಾಚೆ ತಳ್ಳಿ ಇನ್ನು ಚೆಂಡೆ ಇಲ್ಲ, ಆಡಲಾಗದು ಎಂದು ನೀನು ಭಾವಿಸಿದ್ದೆ ಆದರೆ ನಿನ್ನಷ್ಟು ಎಡಬಿಡಂಗಿ, ಮೂರ್ಖ, ಪೆದ್ದ, ಅಹಂಕಾರಿ ಮನುಷ್ಯರು ಬೇರೆ ಯಾರೂ ಕೂಡ ಇರಲಾರರು. ಅದ್ದರಿಂದ ಮೈದಾನದಾಚೆ ಚೆಂಡು ಕಳಿಸುವ ಪ್ರಯತ್ನವನ್ನು ಮಾಡದೆ ನಮ್ಮ ಸಂಬಂಧದ ಆಟವನ್ನು ಮುಂದುವರಿಸುವ ಪ್ರಯತ್ನ ಮಾಡೋಣ. ಪ್ರತಿ ಅಟದಲ್ಲೂ ಸೋಲು, ಗೆಲುವು ಇದ್ದದ್ದೆ. ಪಂದ್ಯ ಮುಕ್ತಾಯಗೊಳ್ಳಬೇಕಾದದ್ದೆ. ಅದರೆ ಯಾರು ಗೆಲ್ಲುತ್ತಾರೆ, ಯಾವಾಗ ಪಂದ್ಯ ಮುಗಿಯುತ್ತದೆ ಅನ್ನುವುದನ್ನು ವಿಧಿಯೇ ನಿರ್ಧರಿಸಲಿ ಅನ್ನುವುದು ನನ್ನ ಆಸೆ, ನಿನ್ನದು?

ನೋಡು, ಕೆಟ್ಟದ್ದು ಮಾಡಬೇಕು, ಕೆಟ್ಟದಾಗಲಿ ಅನ್ನುವ ಯಾವ ಆಶಯವು ಒಂದು ಒಳ್ಳೆಯ ಸಂಬಂಧದ ಕೊನೆಯಲ್ಲಿ ಇರದು. ಹಾಗೆಯೇ ಒಳ್ಳೆಯದಾಗಲಿ ಅನ್ನುವ ಆಶಯವು ಕೂಡ ಒಳ್ಳೆ ಸಂಬಂಧದ ಕೆಟ್ಟ ಮುಕ್ತಾಯದಾಚೆ ಇರದು. ತಪ್ಪುಗಳು ಇಬ್ಬರಿಂದಲೂ ನಡೆದಿದೆ, ಆದರೆ ತಪ್ಪುಗಳೇ ಜೀವನವನ್ನು ಸಾಗಿಸದು ಮತ್ತು ತಪ್ಪುಗಳ ಸಮರ್ಥನೆಯೇ ನಮ್ಮ ಜೀವನವಾಗಬಾರದು ಅನ್ನುವುದು ನನ್ನ ಬಯಕೆ

ಪತ್ರ ಓದಿದೊಡನೆ ನನ್ನ ಜೊತೆ ಮಾತನಾಡು, ಮಾತನಾಡುತ್ತೀಯಾ ಅನ್ನುವುದು ನನ್ನ ನಂಬಿಕೆ. ನಂಬಿಕೆ ಕುರುಡಾಗದಿರಲಿ, ಕುರುಡು ಪ್ರೀತಿ ರೀತಿ! ಸರಿ, ಮುಗಿಸುತ್ತೇನೆ, ಓದಿ ಫೋನ್ ಮಾಡಲು ಮರೆಯದಿರು ಸಮಸ್ಯೆಯ ಉಲ್ಪಣಕ್ಕೆ ಅವಕಾಶ ನೀಡದಿರು.                                                                                                                                                                                                                                                                                                                         ಇಂತೀ...