Friday, April 2, 2010

ಈ ಪತ್ರ ಓದಿ ಏನಾದರು ಮಾಡಿ, ಇಲ್ಲ, ನಾ ಸಾಯುತ್ತೇನೆ ಬಿಡಿ

ದೊಡ್ಡ ದೊಡ್ಡ ಉದ್ಯಮಿಗಳಿಗೆ, ರಾಜಕಾರಣಿಗಳಿಗೆ, ಸರಕಾರಿ ಅಧಿಕಾರಿಗಳಿಗೆ, ಮಧ್ಯವರ್ತಿಗಳಿಗೆ, ವ್ಯಾಪಾರಿಗಳಿಗೆ ಮತ್ತು ವ್ಯವಸ್ಥೆ ರೂಪಿಸಿ ಅದನ್ನು ತಮಗನುಕೂಲಕರವಾಗಿ ಬಳಸಿಕೊಳ್ಳಲು ಶಕ್ತರಾಗಿರೋ ಎಲ್ಲರಿಗೂ ನನ್ನ ಶಿರ ಸಾಷ್ಟಂಗ ಪ್ರಣಾಮಗಳನ್ನು ಸಲ್ಲಿಸುತ್ತಿದ್ದೇನೆ.
ನೀವು, ನಿಮ್ಮ ಮನೆಯವರು ಕ್ಷೇಮವಾಗಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿರುವಂತದ್ದೆ, ಅದನ್ನೇ ಪುನಃ ಪುನಃ ಕೇಳಿ ನಿಮಗೆ ಕಸಿನಿಸಿ ಉಂಟು ಮಾಡುವುದಿಲ್ಲ. ಅಕಸ್ಮಿಕವಾಗಿ ನಿಮ್ಮ ಮನೆಯಲ್ಲಿ ಯಾರಾದರೂ ಕ್ಷೇಮವಾಗಿಲ್ಲ ಎಂದರೆ ಏನು ಮಾಡಲಾಗದ ಹತಭಾಗ್ಯ ನಾನು. ಇನ್ನು ನನ್ನ ಸ್ಥಿತಿ ನಿಮಗೆ ಗೊತ್ತಿರುವಂತದ್ದೇ. ಗೊತ್ತಿದ್ದು ಗೊತ್ತಿಲ್ಲದವರಂತೆ ನಟಿಸುತ್ತಿರುವ ಅಥವಾ ನನ್ನ ನೋವಿಗೆ ಸ್ಪರ್ಶ ಜ್ಙಾನವನ್ನೇ ಕಳೆದುಕೊಂಡವರಂತಿರುವ ನಿಮ್ಮ ಮುಂದೆ ಮಗದೊಮ್ಮೆ ವ್ಯರ್ಥಾಲಾಪ ಮಾಡುವುದು ನನಗೆ ಸುತಾರಾಂ ಇಷ್ಟವಿಲ್ಲ. ಅದರೂ ಕರಿ ಮುಗಿಲ ಅಂಚಿನಲ್ಲಿನ ಮೂಡೋ ಬೆಳ್ಳಿರೇಖೆಯಂತೆ ಯಾರೋ ಒಂದಿಷ್ಟು ಸಹೃದಯರು ನನ್ನ ಕಷ್ಟಕ್ಕೇ ಮರುಗಬಹುದು, ಕೊರಗಬಹುದು ಮತ್ತು ಪರಿಹಾರದ ದಾರಿ ತೋರಿಸಬಹುದು ಎಂಬ ದೂರದ ಆಸೆಯಿಂದ ನನ್ನ ಬೇಗುದಿಯನ್ನು ಈ ಪತ್ರದ ಮೂಲಕ ಮಗದೊಮ್ಮೆ ಕಾರುತ್ತಿದ್ದೇನೆ. ಎಷ್ಟಾದರೂ ನಾನು ಮನುಷ್ಯನೇ ತಾನೇ!

ನೀವೆಲ್ಲ ನನ್ನನ್ನು ಅನ್ನದಾತ, ನೇಗಿಲ ಯೋಗಿ, ದೇಶದ ಬೆನ್ನೆಲುಬು ಹೀಗೆ ನಾನ ಉಪಮಾನ, ಉಪಮೇಯ, ರೂಪಕಗಳಿಂದ ಕರೆದ್ರಿ. ಈಗಲೂ ಆಗಾಗ ಅಥವಾ ಹಿಂದಿನದಕ್ಕಿಂತ ಹೆಚ್ಚು ಬಾರಿ ಹೀಗೆ ಕರೆಯುತ್ತಿದ್ದೀರಿ. ನನ್ನ ಶ್ರಮದ ಮಹತ್ವ, ಉಪಯುಕ್ತತೆ ಮತ್ತು ದೇಶದ ಅಥವಾ ನಿಮ್ಮ ಅಭಿವೃದ್ಧಿಯಲ್ಲಿ ನನ್ನ ಅಗತ್ಯತೆಯ ಬಗ್ಗೆ ನೀವೆಲ್ಲ ಅದೆಷ್ಟು ಚೆನ್ನಾಗಿ ಮಾತನಾಡುತ್ತೀರಿ? ನಾನು ಅದನ್ನು ಕೇಳಿ, ನೋಡಿ ಮೂಕವಿಸ್ಮಿತನಾಗಿದ್ದು ಇದೆ, ಅದೇಷ್ಟೋ ಬಾರಿ ಕಣ್ಣಾಲಿಗಳು ತೊರೆಯಾದದ್ದೂ ಇದೆ. ಯಾಕ್ ಅಂತೀರಾ? ನನಗೆ ನಿಮ್ಮ ಮಾತಿನ ಪರದೆಯ ಹಿಂದಿನ ಸತ್ಯ ಗೊತ್ತು. ನಿಮ್ಮ ಮಾತಿನ ಗತ್ತು ತೂತಾದ ಗೆರಾಟೆಯಲ್ಲಿ ನೀರು ತುಂಬಿಸುವ ಸಾಹಸದಂತಾದ್ದು ಎಂಬುದೂ ನನಗೆ ಗೊತ್ತು. ಅದೆಲ್ಲದಕ್ಕಿಂತ ಹೆಚ್ಚಾಗಿ ಇಂತಹ ಮಾತು ಆಡಿ ಆಡಿ ನೀವು ಅದೇಷ್ಟು ಬಾರಿ ನನ್ನ ಕತ್ತು ಕೊಯ್ದಿಲ್ಲ? ಬೆನ್ನಿಗೆ ಚೂರಿ ಹಾಕಿಲ್ಲ? ಆದರೂ ನೀವು ಅದೇ ಮಂತ್ರವನ್ನು ಮತ್ತೇ ಮತ್ತೇ ಪಠಿಸುತ್ತಿದ್ದೀರಲ್ಲಾ ಇದೆಲ್ಲ ಪರಿಶುದ್ಧ ಬೊಗಸ್ ಅಂತ ಗೊತ್ತಿದ್ರು ನಾನು ಏನೂ ಮಾಡಲಾಗದನಾಗಿ ಹೋಗುವಂತಾಗುತ್ತಿದೆಯಲ್ಲ ಎಂಬ ಅಸಹಾಯಕತೆಯ ಪರಾಕಾಷ್ಟೇಯ ಕಣ್ಣೀರಿದು.

ನನ್ನದು ಬಹಳ ಬಹಳ ದೊಡ್ಡ ಕುಟುಂಬ. ದೇಶದ ೧೧೬ ಕೋಟಿ ಜನರಲ್ಲಿ ನನ್ನ ವೃತ್ತಿ ಬಾಂಧವರದ್ದೇ ಬಹುದೊಡ್ಡ ಪಾಲು. ಸುಮಾರು ೬೦ ಕೋಟಿ ಜನ ನನ್ನ ಸಹವರ್ತಿಗಳು ಎಂದು ಹೇಳಿಕೊಳಬಲ್ಲೆ. ಈ ಅಂಕಿ ಸಂಖ್ಯೆಗಳ ಜೊತೆಗೆ ನನ್ನ ಚಟುವಟಿಕೆಗಳಿಗೆ ಪೂರಕವಾದ ವೃತ್ತಿಯಲ್ಲಿ ಅದೇಷ್ಟೋ ಕೋಟಿ ಕೋಟಿ ಜನರಿದ್ದಾರೆ. ನಾನೀಗ ಅದೇಷ್ಟೋ ದೊಡ್ಡ ಪಾತಾಳಕ್ಕೆ ಬಿದ್ದು ತೆವಳುತ್ತಿದ್ದರೂ ಕೂಡ ದೇಶಕ್ಕೆ ಶಕ್ತಿ, ಸಮೃದ್ದಿ ಮತ್ತು ಸ್ವಾಭಿಮಾನ ತುಂಬುವವನು, ತರುವವನು ನಾನೇ. ಅದ್ದರಿಂದ ನನ್ನ ಬಗ್ಗೆ ನೀವೆಲ್ಲ ತೋರಿಕೆಯ ಕಾಳಜಿಯನ್ನಾದರೂ ತೋರಿಸಲೇ ಬೇಕು. ಅದನ್ನಂತು ನೀವೆಲ್ಲ ನಿಷ್ಟೆಯಿಂದ ಮಾಡಿಕೊಂಡು ಬರುತ್ತಿದ್ದೀರಿ, ನಿಮ್ಮ ವಂಶಸ್ಥರಿಗೂ ಅದನ್ನೂ ಮುಂದುವರಿಸಿಕೊಂಡು ಹೋಗಲು ಹೇಳುತ್ತಿದ್ದೀರಿ. ನನ್ನ ಬಗ್ಗೆ ನಿಮಗಿರುವ ಕಪಟ ಗೌರವಕ್ಕೆ ನಾನು ಅಭಾರಿ. ನಿಮ್ಮ ಈ ಋಣವನ್ನು ನಾನು ಆಗಾಗ ತೀರಿಸುತ್ತಿದ್ದೇನೆ. ನಾನು ಇದನ್ನು ವ್ಯಂಗ್ಯವಾಗಿ ಹೇಳುತ್ತಿಲ್ಲ ಸ್ವಾಮಿ, ನಿಮಗೆ ಪ್ರತಿ ಚುನಾವಣೆ ಸಂದರ್ಭ ವೋಟು ಹಾಕುತ್ತೇನೆ, ನೀವು ಹೇಳಿದ ಎಲ್ಲ ತೆರಿಗೆಗಳನ್ನು ಚಾಚೂ ತಪ್ಪದೆ ಕಟ್ಟುತ್ಥೇನೆ, ನಿಮಗೆ ರಸ್ತೆ ಮಾಡಲು, ಪೈಪ್‌ಲೈನ್ ಹಾಕಲು, ಕಾರ್ಖಾನೆಗಳನ್ನು ಸ್ಥಾಪಿಸಲು ಎಕರೆಗಟ್ಟಲೆ ಜಾಗವನ್ನು ಕೊಡುತ್ತೇನೆ. ನನ್ನ ಕ್ಯೆಯಿಂದ ಒಂದಂಕಿ ಬೆಲೆಗೆ ಕೊಳ್ಳುವ ಉತ್ಪನ್ನಗಳನ್ನು ನೀವು ಮೂರಂಕಿ ಬೆಲೆಗೆ ಮಾರಿದ್ರೂ ನಾನು ಸೊಲ್ಲೆತ್ತುವುದಿಲ್ಲ, ನಿಮ್ಮ ಕೈಯಿಂದ ಪಡೆದ ಸಾಲವನ್ನು ಕ್ಲಪ್ತ ಸಮಯದಲ್ಲಿ ತೀರಿಸಲಾಗದಿದ್ದಾಗ ನನ್ನ ಪ್ರಾಣವನ್ನೇ ನಿಮ್ಮ ಹೆಸರು ಹೇಳಿ ತ್ಯಾಗ ಮಾಡಿದ್ದೇನೆ. ಈಗಲಾದರೂ ನನಗಿರುವ ಕೃತಜ್ಞತೆ ಅರ್ಪಿಸುವ ಸಾಮರ್ಥ್ಯದ ಮೇಲೆ ನಿಮಗೆ ನಂಬಿಕೆ ಬಂದಿರಬಹುದು ಎಂದು ನಂಬಿದ್ದೇನೆ.

ನನ್ನ ವೃತ್ತಿ ಬಗ್ಗೆ ನಿಮಗೆ ಒಂಚೂರು ಹೇಳುತ್ತೇನೆ. ನನ್ನನ್ನು ಕೃಷಿಕ, ರೈತ ಎಂದೇ ಎಲ್ಲರು ಕರೆಯುತ್ತಾರೆ. ಕೃಷಿ ಮಾಡುವುದರ ಮೂಲಕ ನಾನು ನನ್ನ ಮತ್ತು ನಿಮ್ಮ ಹೊಟ್ಟೆ ತುಂಬಿಸುತ್ತೇನೆ. ನನ್ನ ವೃತ್ತಿಯಲ್ಲಿರುವಷ್ಟು ವೈವಿಧ್ಯತೆ ಬೇರೆ ಯಾವುದೇ ಉದ್ಯೋಗದಲ್ಲಿರಲಿಕ್ಕಿಲ್ಲ. ನಿಜ ಹೇಳಬೇಕೆಂದರೆ ನನ್ನ ವೃತ್ತಿಯನ್ನು ಹಿಂದಿನವರು ಒಂದು ವೃತ್ತಿ ಅಥವಾ ಉದ್ಯೋಗ ಎಂದು ಪರಿಗಣಿಸದೇ ಒಂದು ಜೀವನ ವಿಧಾನ ಎಂದೇ ಹೇಳುತ್ತಿದ್ದರು. ಅದ್ದರಿಂದ ನನ್ನ ವೃತ್ತಿಯನ್ನು ದೂರವಿಟ್ಟು ಯಾವುದೇ ಸಂಸ್ಕ್ರತಿಯನ್ನು ವ್ಯಾಖ್ಯಾನಿಸಲು ಸಾಧ್ಯವೇ ಇಲ್ಲ. ಅಷ್ಟರಮಟ್ಟಿಗೆ ನನ್ನ ವೃತ್ತಿ ಸರ್ವವ್ಯಾಪಿ ಮತ್ತು ಚಲನಶೀಲ. ಭಾರತದ ಮಟ್ಟಿಗೆ ವೇದಗಳ ಕಾಲದಿಂದ ಕಳೆದ ಸಹಸ್ರಮಾನದ ಕೊನೆಯ ಶತಮಾನದಾದಿಯವರೆಗಿನ ಬಹಳ ವಿಸ್ತಾರವಾದ ಸುವರ್ಣ ಯುಗವನ್ನು ನಾನು ಕಂಡಿದ್ದೇನೆ. ಈ ನಡುವೆ ಬರ, ಪ್ರವಾಹ, ಕ್ಷಾಮ ಮುಂತಾದ ಪ್ರಕೃತಿ ವಿಕೋಪಗಳು, ಕೆಲ ರಾಜರುಗಳ ತೆರಿಗೆ ನೀತಿ, ದಬ್ಬಾಳಿಕೆಗಳು ನನ್ನ ವ್ವತ್ತಿಯಲ್ಲಿದ್ದವರ ಪಾಲಿಗೆ ಕಂಟಕ ತಂದಿರಬಹುದು. ಅದರೆ ಅದನ್ನೇಲ್ಲ ಮೀರಿ ನನ್ನ ವೃತ್ತಿ ಉಳಿದುಕೊಂಡಿತು, ಚಿಗಿತುಕೊಂಡಿತು.

ದೇಶದಲ್ಲಿ ದುರ್ಭಿಕ್ಷ ಇದ್ದಾಗ, ಹಸಿವಿನಿಂದ ಸತ್ತಾಗ, ಒಂದು ಹೊತ್ತಿನ ಊಟವೇ ಗತಿಯಾದಾಗಲೂ ಕೂಡ ನನ್ನ ಕ್ಷೇತ್ರ ಜೀವಂತಿಕೆ ಅಥವಾ ಯವ್ವನವನ್ನು ಉಳಿಸಿಕೊಂಡೇ ಬಂದಿತ್ತು. ಯಾರೂ ನನ್ನ ವೃತ್ತಿ ಬಗ್ಗೆ ಜಿಗುಪ್ಸೆ ತಾಳಿರಲಿಲ್ಲ. ಎಲ್ಲರು ದೇವರ ಮೇಲೆ ಭಾರ ಹಾಕಿ ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಲೇ ಬಂದರು. ಅದ್ದರಿಂದ ಬಡತನ ಮತ್ತು ಸಮೃದ್ದಿ ಕತ್ತಲು ಹಗಲಿನಂತೆ ಒಂದಾಕ್ಕೊಂದು ಅಂಟಿಕೊಂಡೇ ಬಂದವು. ಈ ಮಾತೂ ಕೇವಲ ನನ್ನ ವೃತ್ತಿಗೆ ಮಾತ್ರ ಅನ್ವಯವಾಗದೇ ನನ್ನ ವೃತ್ತಿ ಜತೆಗೆ ಪೂರಕವಾಗಿದ್ದ ಎಲ್ಲ ವೃತ್ತಿಗಳಿಗೂ ಅನ್ವಯಿಸುತ್ತದೆ. ಉದಾಹರಣೆಗೆ ಅಕ್ಕಸಾಲಿಗ ಅಂದರೆ ಜನರ ಆಸೆಗಳನ್ನು ಪೂರೈಸುವ, ಕಮ್ಮಾರ ಕೃಷಿ ಉಪಕರಣ ಒದಗಿಸಿವುವವ ಇಬ್ಬರೂ ನೆಮ್ಮದಿಯಿಂದ ಮೂರು ಹೊತ್ತು ಉಣ್ಣಬೇಕು ಎಂದರೆ ನಾನೂ ಮೂರು ಹೊತ್ತು ಉಣ್ಣುವ ಸ್ಥಿತಿಯಲ್ಲಿರಬೇಕಿತ್ತು.

ನಾನು ಪೂರ್ವಜರ ಸುಖಕ್ಕೆ ಹಲುಬದೆ ನನ್ನ ಈಗೀನ ಸ್ಥಿತಿಯನ್ನು ನಿಮ್ಮ ಮುಂದೆ ಬೆತ್ತಲು ಮಾಡುತ್ತೇನೆ. ನನ್ನ ಈ ಪತ್ರದ ಉದ್ದೇಶ ಕೂಡ ಅದೇ. ಆದರೆ ನನ್ನ ಈಗೀನ ದುರ್ಗತಿ ಬಗ್ಗೆ ಮಾತನಾಡಬೇಕಾದರೆ ಕಳೆದ ಶತಮಾನದತ್ತ ಒಮ್ಮೆ ಇಣುಕಿ ನೋಡುವುದು ಅನಿವಾರ್ಯ. ನನ್ನ ದೇಶದ ಮಟ್ಟಿಗೆ ೧೯೦೦ ರಿಂದ ೨೦೦೦ದ ವರೆಗಿನ ಅವಧಿ ಅನೇಕ ಸ್ಥಿತ್ಯಂತರಗಳನ್ನು ತಂದಂತದ್ದು. ಇಲ್ಲಿ ಬಹುತೇಕ ಸಂದರ್ಭಗಳಲ್ಲಿ ನಗುವಿನ ಬಾಗಿಲಲ್ಲಿ ನೋವು, ಅಥವಾ ನೋವಿನ ಬಾಗಿಲಲ್ಲಿ ನಗು ಹೊಂಚು ಹಾಕಿ ಭಾರತೀಯರನ್ನು ಗಬಕ್ಕನೆ ಹಿಡಿದುಕೊಳ್ಳುತ್ತಿತ್ತು. ಆ ಕಾರಣಕ್ಕೆ ಅವನು ಅದೇಷ್ಟೋ ಬಾರಿ ತಬ್ಬಿಬ್ಬಾಗಿ ಹೋಗುತ್ತಿದ್ದ. ಇನ್ನು ಅನೇಕ ಬಾರಿ ಆರಂಭದಲ್ಲಿ ಸಿಹಿ ಎನಿಸಿದ ಸಂಗತಿ, ಘಟನೆ, ಯೋಜನೆ (ಸಿಹಿಯೆಂದು ತೋರಿಸಲ್ಪಟ್ಟದ್ದು ಎಂದು ಓದಿಕೊಂಡರು ಸರಿಯೇ) ಕಾಲಾನುಕ್ರಮದಲ್ಲಿ ಪರಮ ಕಹಿಯಾಗಿ ಅದರ ಫಲಾನುಭವಿಗಳಿಗೆ ಹಾಲಾಹಲವಾದ ಸಂದರ್ಭವೂ ಇದೆ. ನನ್ನ ವೃತ್ತಿ ಎರಡನೇ ರೀತಿಯ ಅಪಸವ್ಯಗಳ ನೇರ ಫಲಾನುಭವಿ. ಇಂತಹ ಎಡಬಿಡಂಗಿತನಗಳ ಜೊತೆಗೆ ಇನ್ನೂ ಅನೇಕ ತಪ್ಪು ನಿರ್ಧಾರಗಳು ನನ್ನ ಚೈತನ್ಯವನ್ನೇ ಉಡುಗಿಸಿತ್ತು.

ಕಳೆದ ಶತಮಾನದ ಅರಂಭದಲ್ಲಿದ್ದ ಬ್ರಿಟೀಷ್ ಆಡಳಿತಕ್ಕೆ ನನ್ನ ಬಗ್ಗೆ ಏನೇನೂ ಕಾಳಜಿ ಇರಲಿಲ್ಲ, ನಾನು ಅವರಿಂದ ಅದನ್ನು ನಿರೀಕ್ಷಿಸಿಯೂ ಇರಲಿಲ್ಲ. ನನ್ನ ವೃತ್ತಿಯೆಂದರೆ ಅವರಿಗೆ ಶತ್ರು ಪಾಳಯದಂತಿತ್ತು.

ಬ್ರಿಟೀಷರ ಕಾಲದಲ್ಲಿ ಕೈಗಾರಿಕೆಗಳ ಸ್ಥಾಪನೆ ಯಥೇಚ್ಚವಾಗಿ ಆಯಿತು. ಅದರ ಜೊತೆಗೆ ಸೇವಾವಲಯ ಕೂಡ ಕಣ್ಣು ಬಿಡಲು ಶುರುಮಾಡಿತ್ತು. ಹೊಸ ಹೊಸ ಕೆಲಸಗಳು ಸೇವಾವಲಯದಲ್ಲಿ ನಿರ್ಮಾಣಗೊಂಡವು. ಭಾರತೀಯರಿಗೆ ಮತ್ತೆರಡು ವಲಯಗಳಲ್ಲಿ ದುಡಿಯುವ ಅವಕಾಶ ಸಿಕ್ಕಿತು. ಇದು ಖಂಡಿತವಾಗಿಯೂ ನನ್ನ ವೃತ್ತಿಗೆ ಯಾವುದೇ ಹಾನಿ ತರಲಿಲ್ಲ. ನನ್ನ ವೃತ್ತಿಗೆ ದೇಶದ ಎಲ್ಲ ಜನರಿಗೆ ಉದ್ಯೋಗ ಕೊಡುವ ಸಾಮರ್ಥ್ಯ ಇಲ್ಲ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಯಾಕೆಂದರೆ ಆಗ ಜನಸಂಖ್ಯೆ ಪ್ರಮಾಣ ಒಂದೇ ಸಮನೆ ಏರಲು ಶುರುವಾಗಿತ್ತು. ಆದೇ ಪ್ರಮಾಣದಲ್ಲಿ ಕೃಷಿ ರಂಗದಲ್ಲಿ ಉದ್ಯೋಗ ಪ್ರಮಾಣವನ್ನು ಏರಿಸಲು ಸಾಧ್ಯವಿರಲಿಲ್ಲ. ಹಾಗೆಯೇ ಎಲ್ಲರೂ ಕೃಷಿ ಮಾಡಲು ಯೋಗ್ಯರು ಅಥವಾ ಮಾಡಬೇಕು ಎಂದು ಬಯಸುವಷ್ಟು ಕಠಿಣ ಹೃದಯಿ ನಾನಲ್ಲ. ಒಟ್ಟಿನಲ್ಲಿ ಅಧುನಿಕತೆಯನ್ನು ನನ್ನ ವೃತ್ತಿಯೊಳಗೆ ಬಿಟ್ಟುಕೊಳ್ಳಲು ಕಾಲ ಪಕ್ವವಾಗುತ್ತ ಬಂದಿತ್ತು. ಆದರೆ ಯಾವುದು ಅಧುನಿಕತೆ? ಅದರಲ್ಲಿ ನನಗೆ ಯಾವುದು ಒಳ್ಳೆಯದು ಮಾಡುತ್ತದೆ? ಯಾವುದು ಕೆಟ್ಟದು ಎಂದು ನಿರ್ಧರಿಸುವಲ್ಲಿ ನಾನು ಎಡವಿದೆ.

ಸರಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕೆ ಬಿಟ್ಟಿತ್ತು. ದೇಶವಾಸಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ನಾನೂ ಕುಣಿದು ಕುಪ್ಪಳಿಸಿದೆ. ಇನ್ನು ನಮ್ಮದೇ ಆಡಳಿತ, ನಮ್ಮವರೇ ನಮ್ಮನ್ನು ಪಾಲಿಸುವವರು ಅಂದಾಗ ನಮಗೆ ಕಾಣಿಸಿದ್ದು ಉಜ್ವಲ ಭವಿಷ್ಯ ಮಾತ್ರ. ಬಹುಪಾಲು ಆಡಳಿತಗಾರರು ನನ್ನ ವೃತ್ತಿಯ ಹಿನ್ನೆಲೆ ಇದ್ದವರು ಅಥವಾ ಆಗಿದ್ದ ನಾಯಕರುಗಳಿಗೆ ನನ್ನ ಕ್ಷೇತ್ರ ಎದುರಿಸುತ್ತಿದ್ದ ಸಮಸ್ಯೆಗಳ ಪೂರ್ಣ ಅರಿವಿತ್ತು. ಇನ್ನೇನೂ ಎಲ್ಲ ಸಮಸ್ಯೆಗಳು ಪರಿಹಾರವಾಗಿ ಸ್ವರ್ಗವೇ ಬಾಳಾಗುತ್ತದೆ ಎಂದು ಭಾವಿಸಿದ್ದೆ. ಆದರೆ ಬರುವ ಸ್ವರ್ಗ ಬಿಡಿ ಇದ್ದ ಬಾಳು ಹಾಳಾಗಿ, ಸುಂದರ ಕನಸುಗಳೆಲ್ಲ ಹೋಳಾಗಿ ನರಕ ಸದೃಶ ಭವಿಷ್ಯ ಹೆಗಲೇರಿ ಕುಳಿತುಕೊಂಡು ಬಿಟ್ಟಿತು. ಆರವತ್ತರ ದಶಕದಲ್ಲೇ ನನ್ನ ಹೆಗಲ ಮೇಲೆ ಬಂದು ಕುಳಿತಿರುವ ಸಮಸ್ಯೆಗಳ ಮೂಟೆ ೫೦ ವರ್ಷವಾದರೂ ಇನ್ನೂ ಕೆಳಗಿಳಿದಿಲ್ಲ, ಪಕ್ಕ ಕೆಳಗಿಳಿಯುವ ಲಕ್ಷಣಗಳು ಇಲ್ಲ. ನನ್ನನ್ನು ಈ ಸಮಸ್ಯೆಗಳಿಂದ ಮುಕ್ತ ಮಾಡಬೇಕಿರುವ ನೀವುಗಳು ನನ್ನನ್ನು ಮತ್ತಷ್ಟು ಸಮಸ್ಯೆ ಹೊರುವಂತೆ ಮಾಡುತ್ತಿದ್ದೀರಿ. ನಕ್ಷತ್ರಿಕನ ಕೆಲಸ ನಿಮ್ಮದು!

ಸರಿ, ಅರವತ್ತರ ದಶಕದಲ್ಲಿ ಏನಾಯ್ತು ನೋಡೋಣ. ಜನಸಂಖ್ಯೆ ಅತಿ ವೇಗವಾಗಿ ಬೆಳೆಯಿತು. ಅವರ ಹಸಿವು ನೀಗಿಸುವುದು ಹೇಗೆ ಎಂಬ ಪ್ರಶ್ನೆ ಹುಟ್ಟಿಕೊಂಡೇ ಬಿಟ್ಟಿತು. ಅಷ್ಟರಲ್ಲಿ ಎಲ್ಲೆಲ್ಲೂ ಅಹಾರಕ್ಕಾಗಿ ಹಾಹಾಕಾರ ಶುರುವಿಟ್ಟುಕೊಂಡಿತ್ತು. ಈ ಸಮಸ್ಯೆಯನ್ನು ಸರಕಾರ ಪರಿಹರಿಸಲೇ ಬೇಕಿತ್ತು. ಈ ಬಗ್ಗೆ ನನ್ನದೇನು ತಕರಾರಿಲ್ಲ. ನಾನಂತು ಕನಸು ಮನಸ್ಸಿನಲ್ಲೂ ಯಾರೊಬ್ಬರು ಹಸಿವಿನಿಂದ ಸಾಯೋದನ್ನು ಬಯಸಿಲ್ಲ, ಬಯೋಸೋದು ಇಲ್ಲ. ಆದರೆ ಅದಕ್ಕಾಗಿ ತೆಗೆದುಕೊಂಡ ಕ್ರಮಗಳಿವೆಯಲ್ಲ ಅದು ಮಾತ್ರ ನನ್ನ ಸಮಾಧಿಗೆ ಮಾಡಿದ ಶಂಕುಸ್ಥಾಪನೆ. ಅಲ್ಲಿಂದ ಹೊಡೆತ ತಿನ್ನಲು ಶುರು ಮಾಡಿದ ನಾನು ಇನ್ನೂ ಹೊಡೆತ ತಿನ್ನುತ್ತಲೇ ಇದ್ದೇನೆ. ಯಾವಾಗ ಅಂತಿಮ ಹೊಡೆತ ಬೀಳುತ್ತದೆಯೋ ಎಂದು ಕಾಯುತ್ತಿದ್ದೇನೆ. ಸರಿ, ಸರಕಾರ ಹಸಿರು ಕ್ರಾಂತಿ ಮಾಡ ಹೊರಟಿತು. ಅದರಿಂದ ಅನ್ನದ ಬಟ್ಟಲಿಗೆ ಸಿಕ್ಕಾಪಟ್ಟೆ ವಿಷ, ರಸಗೊಬ್ಬರ ಬಿಸಾಡಿದೆ, ಅಧುನಿಕ ಉಪಕರಣಗಳನ್ನು ಬಳಸಲಾರಂಭಿಸಿದೆ. ನಿಮ್ಮ ಹೊಟ್ಟೆ ತುಂಬಿಸಬೇಕಿತಲ್ಲಾ! ನೀವೆಲ್ಲ ಹೇಳುವ ಮತ್ತು ನಿರೀಕ್ಷಿಸಿದ್ದ ಅಧುನಿಕ ಕೃಷಿಕನಾದೆ. ಹಸಿರು ಕ್ರಾಂತಿಯಿಂದ ನನ್ನ ಮತ್ತು ದೇಶದ ಬಾಳು ಹಸನಾಯಿತು ಎಂಬ ಭ್ರಾಂತಿಯ ಖೆಡ್ಡಾಕ್ಕೆ ಬಿದ್ದೆ ಅಥವಾ ನೀವು ಬೀಳಿಸಿದ್ರಿ.

ಹಸಿರು ಕ್ರಾಂತಿಯ ದೆಸೆಯಿಂದ ನನ್ನೆಲ್ಲ ದೇಶವಾಸಿಗಳು ಹೊಟ್ಟೆ ತುಂಬ ಉಂಡರು. ತದನಂತರ ಬೇರೆ ದೇಶದ ಜನರಿಗೂ ಉಣಿಸಿದೇವು. ೧೯೫೧ರಲ್ಲಿ ೩,೦೦೦ ರೂಪಾಯಿಗಳಾಷ್ಟಿದ್ದ ತಲಾ ಆದಾಯ ೧೯೮೦ಕ್ಕೆ ಬಂದಾಗ ೭,೦೦೦ ರೂ. ಗಳಾಯಿತು. ಎಂಥಾ ಸಾಧನೆ ಅಲ್ವಾ? ಅದರೆ ಆ ಹೊತ್ತಿನಲ್ಲೂ ನನ್ನ ವೇದನೆ ಬೆಲೆ ಪಡೆದುಕೊಳ್ಳಲಿಲ್ಲ. ನೀವು ನನ್ನನ್ನು ಜನರ ಹೊಟ್ಟೆ ತಣಿಸುವ ಯಂತ್ರ ಎಂದು ಪರಿಗಣಿಸಿದ್ರಿ ಹೊರತು ನನ್ನ ಹೊಟ್ಟೆಯನ್ನು ತಣ್ಣಗೆ ಇಡುವ ಯಾವ ಕ್ರಮಗಳನ್ನು ಕೈಗೊಳ್ಳಲಿಲ್ಲ, ಕೈಗೊಂಡರು ಅದಕ್ಕೆ ತುದಿ ಬುಡವಿರಲಿಲ್ಲ. ಆದರೆ ನನ್ನ ಕೈಕಾಲ ಕತ್ತರಿಸಿ ತಣ್ಣನೆ ಕೊಲ್ಲವ ಅನೇಕ ಕ್ರಮಗಳನ್ನು ಕೈಗೊಂಡಿರಿ.

ಕೈಗಾರಿಕೀಕರಣಕ್ಕೆ ಇನ್ನಿಲ್ಲದ ಮಹತ್ವ ಕೊಟ್ರಿ. ಬೇಸರವಿಲ್ಲ. ಸೇವಾವಲಯವನ್ನು ತಲೆ ಮೇಲಿರಿಸಿಕೊಂಡ್ರಿ. ನನಗೆ ಅಸೂಯೆ ಇಲ್ಲ. ನನ್ನನ್ನು ಮಾತ್ರ ಜಾಡಿಸಿ ಒದ್ರಿ ಅದರ ನೋವು ಕೂಡ ಮಾಸಿ ಹೋಗುತ್ತಿತ್ತೋ ಏನೋ. ಆದರೆ ನನಗೆ ನೀವು ಯಾವುದೇ ಹೊಸ ಯೋಜನೆಯಲ್ಲೂ ಪಾಲು ಕೊಡದೇ ಹೋದ್ರಿ, ನನ್ನ ಹೆಸರು ಹೇಳಿ ಆಡಳಿತ ನಡೆಸಿದ್ರಿ, ಶಿಕ್ಷಣ ನೀತಿ, ಉದ್ಯೋಗ ನೀತಿ, ಆರ್ಥಿಕ ನೀತಿ ಎಲ್ಲ ನನಗೆ ಶತ್ರುವಾಗುವಂತೆ ರೂಪಿಸಿದಿ. ಅದರೊಟ್ಟಿಗೆ ನನ್ನ ಹೊಗಳಿ ಹೊಗಳಿ ಹೊನ್ನ ಶೂಲಕ್ಕೇರಿಸಿದ್ರಿ.

ಅಂದು ಹಸಿರು ಕ್ರಾಂತಿಯೆಂದು ಅತ್ಯಧಿಕ ಇಳುವರಿ ನೀಡೋ ಬೆಳೆ ಬೆಳೆದ ನಾನು ಇಂದು ಅದರ ಪಾರ್ಶ್ವ ಪರಿಣಾಮದಿಂದ ತುತ್ತು ಅನ್ನಕ್ಕೂ ಪರದಾಡುತ್ತಿದ್ದೇನೆ. ನನ್ನ ಭೂತಾಯಿ ರಸಹೀನಳಾಗಿದ್ದಾಳೆ. ಹಿಂದೆ ಅದೇಷ್ಟು ರಸಗೊಬ್ಬರ ಹಾಕುತ್ತಿದ್ದೇನೋ ಅದರ ಮೂರು ಪಟ್ಟು ರಸಗೊಬ್ಬರ ಹಾಕಿದರೆ ಬೆಳೆ ಕೈ ತಲುಪೀತು. ಹಿಂದೆ ಗುಂಡಿ ತೋಡಿದರೆ ನೀರ ಸೆಲೆ ಇಂದು ೨೦೦ ಆಡಿ ಆಳ ಕೊರೆದು ಬೋರ್‌ವೆಲ್ ಹಾಕಿದರೂ ನೀರ ಪಸೆಯಿಲ್ಲ. ನೀವು ಸರಕಾರಿ ಉದ್ಯೋಗಿಯೊಬ್ಬ ಕರ್ತವ್ಯ ಸಂದರ್ಭದಲ್ಲಿ ಅಸುನೀಗಿದರೆ ಅವನಿಗೆ ಲಕ್ಷಗಳಲ್ಲಿ ಪರಿಹಾರ ಕೊಡುತ್ತೀರಿ, ಅವನಿಗೆ ಹತ್ತಿರದ ಸಂಬಂಧಿಯೊಬ್ಬರಿಗೆ ಸರಕಾರಿ ಕೆಲಸವನ್ನೇ ದಯಪಾಲಿಸುತ್ತೀರಿ. ಆದರೆ ನಿಮ್ಮ ಯೋಜನೆಗೆ ಕಿವಿಕೊಟ್ಟು ನೀವು ಹೇಳಿದಂತೆ ಕೇಳಿ ಇಂದು ಒಂದು ಹುಲ್ಲುಕಡ್ಡಿಯೂ ಬೆಳೆಯದಂತ ಮಣ್ಣಿಗೆ ಧಣಿಯಾಗಿರೋ ನನಗೇನು ಕೋಟ್ಟಿದ್ದೀರಿ? ನಾನೇನು ನಿಮ್ಮಿಂದ ಕೊಡಲಾಗದನ್ನು ಕೇಳುತ್ತಿಲ್ಲ. ನನಗೆ ನನ್ನ ಭೂಮಿ ಮತ್ತೇ ಫಲವತ್ತಾಗಬೇಕು. ನೀವು ಚಂದ್ರಯಾಣ ಎಂದು ಸಾವಿರಗಟ್ಟಲೆ ಕೋಟಿ ಸುರಿದ್ರಿ, ಚಂದ್ರನಲ್ಲಿ ನೀರು ಇದೆ ಅದನ್ನು ಕಂಡು ಹಿಡಿದ್ವಿ ಅಂತ ಕುಣಿದು ಕುಪ್ಪಳಿಸಿದ್ರಿ. ಅಲ್ಲಿ ನೀರು ಇದ್ರೆ ನೀವಲ್ಲಿ ಕೃಷಿ ಮಾಡುತ್ತೀರಾ? ಕೃಷಿ ಮಾಡಬೇಕಾದರೆ ಭೂತಾಯಿಯೇ ಆಗಬೇಕಲ್ವಾ? ಈಗ ನಿಮ್ಮಲ್ಲಿ ನಾನು ಕೇಳುತ್ತಿರೋದು ನನ್ನ ಭೂಮಿಯ ಆಳದಲ್ಲಿ ಅಲ್ಲೆಲ್ಲೋ ಅಡಗಿ ಕೂತಿರುವ ಸಲಿಲ ಸೆಲೆಯನ್ನು ಮತ್ತೆ ಮೇಲೆ ಬರುವ ಹಾಗೆ ಮಾಡಿ, ಬರಡಗಿರೋ ಭೂಮಾತೆಯನ್ನು ಮತ್ತೆ ನಳನಳಿಸುವಂತೆ ಮಾಡಿ ಅಷ್ಟು ಸಾಕು. ಇದು ನಿಮ್ಮಿಂದ ಸಾಧ್ಯವಿಲ್ಲವೆಂದರೆ ನೀವು ಸಾಧಿಸಿದ್ದೀರಿ ಎಂದು ಹೇಳುವ ವೈಜ್ಞಾನಿಕ ಪ್ರಗತಿಗೆ ನನ್ನ ಧಿಕ್ಕಾರ. ಯಾರದೋ ಮನೆಗೆ ಬೆಂಕಿ ಹಾಕಿ ಅದರಲ್ಲಿ ಬೇಡಿ ಸೇದೋ ನಿಮ್ಮ ಚಾಳಿಗೆ ನನ್ನ ಧಿಕ್ಕಾರ! ಧಿಕ್ಕಾರ!!

ಹಸಿರುಕ್ರಾಂತಿಯ ಅರಂಭದಿಂದ ಅಂದರೆ ೧೯೬೦ ರಿಂದ ಜಾಗತಿಕರಣ ಇನ್ನೇನು ದೇಶವನ್ನು ಪ್ರವೇಶಿಸಿತು ಎಂಬ ಸ್ಥಿತಿಯ ೧೯೯೦ರವರೆಗಿನದ್ದು ನಿಮ್ಮ ಲೆಕ್ಕದಲ್ಲಿ ನನ್ನ ವೃತ್ತಿಯ ಉಚ್ಚ್ರಾಯ ದಿನಗಳಿರಬಹುದು, ಆದರೆ ೯೦ರ ನಂತರದ್ದು ನನ್ನ ವೃತ್ತಿ ರಂಗ ಹಿಂದೆಂದೂ ಕಂಡು ಕೇಳರಿಯದ ನಿಕೃಷ್ಟ ದಿನಗಳು. ಇದನ್ನು ರಾಮನ ಲೆಕ್ಕವೂ ಅಲ್ಲಗಳೆಯಲಿಕ್ಕಿಲ್ಲ, ಕೃಷ್ಣನ ಲೆಕ್ಕವೂ ಅಲ್ಲಗಳೆಯಲಿಕ್ಕಿಲ್ಲ. ಈ ಕೇಡಿನ ಕಾಲದಲ್ಲೂ ನಾನು ಬದುಕಿ ಇದ್ದೇನಲ್ಲಾ ಎಂಬುದರ ಬಗ್ಗೆ ನನಗೆ ಹೆಮ್ಮೆ ಮತ್ತು ಅದಕ್ಕಿಂತ ಒಂದು ಹಿಡಿ ಹೆಚ್ಚೇ ಎಂದೆನಿಸುಷ್ಟು ನಾಚಿಕೆ ಇದೆ.

ಕಳೆದ ಶತಮಾನದ ಅಂತ್ಯ ಮತ್ತು ಈ ಶತಮಾನದ ಆರಂಭದ ನನ್ನ ಸ್ಥಿತಿ ಯಾರಿಗೂ ಬರಬಾರದು. ಅಭಿವೃದ್ಧಿಯ ಹೆಸರಲ್ಲಿ ನನ್ನ ಜೀವನವೇ ಬರ್ಬಾದ್ ಆದದ್ದು ಈ ಜೋಡಿ ದಶಕದಲ್ಲೇ. ಇಲ್ಲಿ ನನಗೆ ಪೂರಕವಾದದ್ದು ಎಂದು ಸರಕಾರದಿಂದ ಏನು ಬರಲಿಲ್ಲ. ಬಂದರೂ ಅದೆಲ್ಲವನ್ನು ನುಂಗಿ ಹಾಕಲು ಮತ್ತೇನೋ ಕಾದಿರುತ್ತಿತ್ತು. ಇದರಿಂದ ಬೇಸತ್ತು, ತೊಂದರೆಗಳ ಚಕ್ರವ್ಯೂಹದಿಂದ ಹೊರಬರಲಾಗದೆ ನನ್ನ ವೃತ್ತಿಯನ್ನೇ ಸರ್ವಸ್ವ ಎಂದು ಕೊಂಡಿದ್ದ ೧,೮೦,೦೦೦ ಜನ ೧೯೯೭ ರಿಂದ ೨೦೦೭ರ ಅವಧಿಯಲ್ಲಿ ಇಹ ಲೋಕಕ್ಕೆ ಅನಿವಾರ್ಯವಾಗಿ ಶರಣು ಎಂದರು. ಕಳೆದ ೬ ವರ್ಷಗಳಿಂದ ವರ್ಷಕ್ಕೆ ೧೭,೦೦೦ ಸಹವರ್ತಿಗಳನ್ನು ನಾನು ಕಳೆದುಕೊಳ್ಳುತ್ತಿದ್ದೇನೆ. ಅಂದರೆ ದೇಶದಲ್ಲಿ ಅತ್ಮಹತ್ಯೆ ಮಾಡಿಕೊಳ್ಳುತ್ತಿರುವವಲ್ಲಿ ಶೇ. ೧೨ರಷ್ಟು ಮಂದಿ ನನ್ನವರೆ. ಇದೆಲ್ಲವೂ ಸರಕಾರದ್ದೇ ಲೆಕ್ಕ.

ಇದೆಲ್ಲಕ್ಕಿಂತ ಹೆಚ್ಚಾಗಿ ಅದೇಷ್ಟೋ ಲಕ್ಷ ಲಕ್ಷ ಜನ ಪ್ರತಿ ವರ್ಷ ನನ್ನ ವೃತ್ತಿ ಬಿಟ್ಟು ಬೇರೆ ವೃತ್ತಿಯತ್ತ ವಲಸೆ ಹೋಗುತ್ತಿದ್ದಾರೆ. ಅವರೆಂದು ಮತ್ತೇ ತಿರುಗಿ ಈತ್ತ ಬರುವುದಿಲ್ಲ. ಅವರು ಬೇರೆ ಕೆಲಸ ಮಾಡಿ ನೆಮ್ಮದಿಯ ಜೀವನ ಸಾಗಿಸಿದರೆ ಸಂತೋಷ. ಆದರೆ ನನ್ನ ವೃತ್ತಿಯಲ್ಲಿ ವೃದ್ದರೇ ಉಳಿಯುವಂತಾಗಿದೆ. ಅಂದರೆ ಇಲ್ಲಿ ಅನುಭವ ಇದೆ ಉತ್ಸಾಹ ಅಂದರೆ ಯುವಕರು ಇಲ್ಲ. ಇದು ತೀರಾ ತೀರಾ ಅಪಾಯಕಾರಿ ಬೆಳವಣಿಗೆ. ಅವರೆಲ್ಲರು ಪಟ್ಟಣ ಸೇರಿ ಯಾವುದೋ ಕೆಲಸ ಮಾಡುತ್ತಿದ್ದಾರೆ. ಅವರ ಒಂದೇ ಒಂದು ಅಜೆಂಡಾ ಅಥವಾ ಗುರಿ ಎಂದರೆ ಕೃಷಿ ಮಾಡಬಾರದು. ಮಾಡಿದರೆ ಅದು ಅವಮಾನ.

ನೋಡಿ, ನನ್ನ ಮಗ ಯಾವ ಕಾರಣಕ್ಕೂ ಮುಂದೆ ಕೃಷಿ ಮಾಡುವುದಿಲ್ಲ ಯಾಕೆಂದರೆ ಅವನಿಗೆ ಅವನು ಹೋಗುವ ಶಾಲೆಯಲ್ಲಿ ಕೃಷಿ ಎಂದರೆ ನೇಗಿಲ ಯೋಗಿ ಪದ್ಯ ಮತ್ತು ಸಮಾಜ ವಿಜ್ಞಾನ ಅಥವಾ ಅರ್ಥಶಾಸ್ತ್ರದಲ್ಲಿ ಬರುವ ಭಾರತ ಕೃಷಿ ಪ್ರಧಾನ ದೇಶ, ಕೃಷಿ ದೇಶದ ಶೇ. ೬೫ ಜನರಿಗೆ ಉದ್ಯೋಗ ಕೊಡುತ್ತದೆ ಎಂಬ ಸಾಲುಗಳಷ್ಟೇ.

ನನ್ನ ವೃತ್ತಿಯ ದುರಂತವೆಂದರೆ ದೇಶದ ಶೇ. ೩ ಜನರಿಗೆ ಉದ್ಯೋಗ ಕೊಡಬಹುದಾದ ವೈದ್ಯಕೀಯ, ಇಂಜಿನಿಯರಿಂಗ್, ಮ್ಯಾನೇಜ್‌ಮೆಂಟ್ ಶಿಕ್ಷಣ ಕೊಡುವ ಶಿಕ್ಷಣ ಸಂಸ್ಥೆಗಳು ಇಲ್ಲಿ ದಂಡಿಯಾಗಿವೆ ಮತ್ತು ಪೈಪೋಟಿಗೆ ಬಿದ್ದು ಇಂತಹ ಹೊಸ ಹೊಸ ಸಂಸ್ಥೆಗಳ ಸ್ಥಾಪನೆ ಕೂಡ ಮಾಡಲಾಗುತ್ತಿದೆ. ಆದರೆ ನನ್ನ ವ್ಥತ್ತಿಯ ಬಗ್ಗೆ ಹೇಳಿ ಕೊಡಲು ಎಷ್ಟು ಸಂಸ್ಥೆಗಳಿವೆ? ಆಥವಾ ಶಾಲೆಯಲ್ಲಿ ಎಷ್ಟು ಗಂಟೆ ಸಮಯವನ್ನು ನನ್ನ ವೃತ್ತಿಯ ಕಲಿಕೆಗಾಗಿ ಮೀಸಲಿಟ್ಟಿದ್ದೀರಿ?

ನನ್ನ ಮಗ, ಡಿಗ್ರಿ ಮುಗಿಸಿಕೊಂಡು ಹೊರ ಬಂದಾಗ ಅವನಿಗೆ ೨೧ ವರ್ಷ ವಯಸ್ಸಾಗಿರುತ್ತದೆ. ಆಗ ಆತನಿಗೆ ತಾನು ಆಯ್ದಕೊಂಡ ವಿಷಯಗಳ ಪ್ರಾಥಮಿಕ ಜ್ಞಾನವಿರುತ್ತದೆ. ಆತ ನನ್ನ ವೃತ್ತಿಯನ್ನೆ ಮಾಡಬೇಕು ಎಂದು ಆಸೆ ಪಟ್ಟದ್ದೇ ಆದರೆ ಆತನಿಗೆ ಇದರ ಬಗ್ಗೆ ಶುರುವಿನಿಂದಲೇ ಕಲಿತುಕೊಳ್ಳಬೇಕು. ಇಲ್ಲಿ ಛಿಟಚಿss ಡಿoom ಅಥವಾ ಣheoಡಿಥಿ bಚಿseಜ ಪಾಠ ಪ್ರಯೋಜನಕ್ಕೆ ಬಾರದು. ಏನಿದ್ದರೂ ಠಿಡಿಚಿಛಿಣiಛಿಚಿಟ ಜ್ಞಾನ ಬೇಕು. ಅದಕ್ಕಾಗಿ ಮತ್ತೇ ಒದ್ದಾಡಬೇಕಾಗುತ್ತದೆ. ನಾನು ಶಾಲೆಗೆ ಹೋಗುವಾಗ ನನಗೆ ಸಂಜೆ, ಬೆಳಿಗ್ಗೆ ಮತ್ತು ರಜಾ ದಿನಗಳಲ್ಲದರೂ ಕೃಷಿ ಚಟುವಟಿಕೆಗಳ ಪರಿಚಯವಾಗುತ್ತಿತ್ತು. ಈಗ ಆ ಹೊತ್ತಲ್ಲಿ ಟ್ಯೂಷನ್! ಇದ್ರ ಜೊತೆಗೆ ಅವನಿಗೆ ನಾನು ಪಡುತಿರುವ ಪಡಿಪಾಟಲಿನ ಅರಿವಿದೆ, ನನ್ನ ಶ್ರಮಕ್ಕೆ ಮಾರ್ಯಾದಿ, ಕಾಸೂ ಎರಡೂ ಇಲ್ಲ ಎಂಬುದು ಅವನಿಗೂ ಗೊತ್ತಾಗಿದೆ, ಇಂಜಿನಿಯರೋ, ಡಾಕ್ಟ್ರೋ ಆದರೆ ಸಿಗುವ ಎಲ್ಲಗಳು ಅವನಿಗೂ ಬೇಕಿದೆ. ಇದಕ್ಕಿಂತ ಹೆಚ್ಚಾಗಿ ಯಾವ ತಂದೆನೂ ತನ್ನ ಮಗ ಹಾಳಾಗಿ ಹೋಗಲಿ ಎಂದು ಬಯಸೋದಿಲ್ಲ, ಅದ್ದರಿಂದ ನಾನು ಅವನನ್ನು ನನ್ನ ವೃತ್ತಿಗೆ ಇಳಿಯಬಿಡೋದಿಲ್ಲ. ಈ ವೃತ್ತಿಯ ಚಿಂತೆಗಳು ನನ್ನೊಂದಿಗೆಯೇ ಚಿತೆ ಏರಲಿ, ಮಗನ ಬೆನ್ನೇರದಿರಲಿ!

ನನ್ನ ಮಗನ ಪೀಳಿಗೆಯವರು ಈ ರಂಗದತ್ತ ಆಕರ್ಷಿಸಲ್ಪಟ್ಟರೆ ದೇಶದ ನಿರುದ್ಯೋಗ, ಬಡತನ ಎಲ್ಲವೂ ಒಂದೇ ಏಟಿಗೆ ಪರಿಹಾರವಾಗುತ್ತದೆ. ಆದರೆ ಸರಕಾರ ಕೃಷಿ ರಂಗವನ್ನು ಲಾಭದಾಯಕ ವಾಗಿಸುವ ನಿಟ್ಟಿನ ಯೋಜನೆಗಳನ್ನು ರೂಪಿಸುವುದು ಮಾತ್ರ ಅನಿವಾರ್ಯ. ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ ೫೦೦ ರೂ. ಕೊಡುತ್ತೇವೆ ಎಂಬ ಎಡಬಿಡಂಗಿ ಭರವಸೆ ನೀಡಿದ ರಾಜಕೀಯ ಪಕ್ಷ ಇಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದು ಕೊಟ್ಯಾಂತರ ನಿರುದ್ಯೋಗಿಗಳಿಗೆ ನೀಡಬಹುದಾಗಿರುವ ಈ ಹಣವನ್ನು ಈ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶಿಕ್ಷಿತ ಜನರಿಗೆ ನೀಡಿದ್ದೇ ಆದಲ್ಲಿ ಈ ರಂಗದತ್ತ ಯುವ ಪ್ರವಾಹ ಇತ್ತ ಹರಿಯಬಹುದೇನೋ.

ಇನ್ನು ನನ್ನಲ್ಲೂ ಕೆಲ ಸಮಸ್ಯೆಗಳಿವೆ. ದೇಶದ ಬಹುತೇಕ ಕೃಷಿಕರು ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಲೇ ಇದ್ದಾರೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಆದರೆ ನಾವೆಲ್ಲ ಒಗ್ಗಟ್ಟಾಗಿ ನಿಂತು ನಮ್ಮ ಮೇಲಾಗುತ್ತಿರುವ ದೌರ್ಜನ್ಯವನ್ನು ಪ್ರತಿಭಟಿಸಿಯೇ ಇಲ್ಲ. ನಮ್ಮ ಸಂಖ್ಯಾಬಲಕ್ಕೇ ಸರಕಾರ ಉರುಳಿಸೋದು ಬಿಡಿ ಇಡೀ ವ್ಯವಸ್ಥೆಯನ್ನೇ ಕಿತ್ತೆಸೆಯೋ ಸಾಮರ್ಥ್ಯವಿದೆ. ನಿಮ್ ಪುಣ್ಯ! ನಾವ್ಯಾವತ್ತು ಆ ಮಟ್ಟದ ಐಕ್ಯತೆ ತೋರಿಸಲೇ ಇಲ್ಲ. ನಮ್ ಆಕ್ರೋಶ, ಹತಾಶೆ ಬರಿ ನಿಟ್ಟುಸಿರು, ಗೊಣಗಾಟಗಳಲ್ಲೇ ತಳ ಕಂಡಿತು. ಇನ್ನು ನಾವು ಮಾಡಿದ ಹೋರಾಟಗಳ ಹೆಸರು ಹೇಳಿಕೊಂಡು, ಮೆರವಣಿಗೆ ಸಾಲಲ್ಲಿ ಮುಂದಿದ್ದವರು ನಮ್ಮ ಹೋರಾಟಕ್ಕೆ ಎಲ್ಲಿಂದಲೋ ಬಂದು ಸೇರಿಕೊಂಡವರು ಯಾರ‍್ದೊ ದುಡ್ಡು ಮಾತ್ರವಲ್ಲ ಶ್ರಮ, ಹೆಸರು, ನೋವು, ಸಂಕಷ್ಟದಲ್ಲಿ ತಮ್ಮ ತಮ್ಮ ಜಾತ್ರೆ ಮಾಡಿ, ಬೇಳೆ ಬೇಯಿಸಿ ಅಧಿಕಾರದ ಸವಿ ಅನುಭವಿಸಿದ್ದಾರೆ, ಅನುಭವಿಸುತ್ತಿದ್ದಾರೆ. ನಾವು ಅವರನ್ನು ಇನ್ನು ಹಾಗೇ ಬಿಟ್ಟಿದ್ದೇವೆ. ನಮ್ಮ ಕಾಲ ಮೇಲೆಯೇ ನಿಂತುಕೊಳ್ಳುವ ಚಳವಳಿಯನ್ನೂ ನಮಗಿನ್ನೂ ರೂಪಿಸಿಕೊಳ್ಳಲಾಗಿಲ್ಲ. ಮಗು ಆಳದೇ ತಾಯಿನೂ ಹಾಲು ಕುಡಿಸೋದಿಲ್ಲ ಎಂಬ ಸತ್ಯ ಗೊತ್ತಿದ್ದರೂ ನಾವೆಲ್ಲ ಒಟ್ಟಾಗಿ ಅಳುವ ಪ್ರಯತ್ನ ಮಾಡಿ ಆಳುವವರನ್ನು ಇನ್ನು ನಮ್ಮ ಸಮಸ್ಯೆಯನ್ನು ಪರಿಹಾರಿಸದೇ ಮುಂದೇ ಹೋಗುವಂತಿಲ್ಲ ಎಂಬ ಸ್ಥಿತಿಗೆ ನೂಕಲೇ ಇಲ್ಲ. ಬದಲಾಗಿ ಅಲ್ಲೇಲ್ಲೋ ಅಂತ ಪ್ರತಿಭಟನೆಯ ಪ್ರಯತ್ನಗಳಾದ ಸಂದರ್ಭದಲ್ಲಿ ನಾವೇ ಅವರ ಕಾಲೆಳೆದ ನಿದರ್ಶನಗಳಿವೆ.

ಇನ್ನು ನನ್ನನ್ನು ಆಳುವವರು ಎಷ್ಟು ನಿಷ್ಕರುಣಿಗಳು ಎಂಬುದಕ್ಕೆ ನಾನೊಂದು ಉದಾಹರಣೆ ಕೊಡುತ್ತೇನೆ. ನಿಮಗೆ ನಮ್ಮ ದೇಶದ ಕೃಷಿ ಮಂತ್ರಿ ಶರದ್ ಪವಾರ್ ಅಂತ ನೆನಪಿರಬಹುದು. ಯಾಕೆಂದರೆ ಅವರನ್ನು ಕೃಷಿ ಮಂತ್ರಿಯಾಗಿ ಕಂಡವರು ಭಾರಿ ಕಡಿಮೆ. ಅವರು ಹೆಚ್ಚಾಗಿ ಕ್ರಿಕೇಟ್ ಆಡಿಸೋದ್ರಲ್ಲಿ ಶಾಣೆ ಬ್ಯುಸಿಯಾಗಿರ‍್ತಾರೆ. ಅದ್ರೂ ಕೆಲವೊಮ್ಮೆ ಮೈಮೇಲೆ ದೆವ್ವ ಬಂದ ಹಾಗೆ ತಾನು ಕೃಷಿ ಸಚಿವ ಅಂತ ಅವರಿಗೆ ನೆನಪಾಗೋದು ಅಥವಾ ನೆನಪುಮಾಡೋದು ಇದೆ. ಆಗ ಅವರು ಕೆಲವು ಅಣಿಮುತ್ತುಗಳನ್ನು ಉದುರಿಸೋದಿದೆ. ಅಂತಹ ಅಣಿಮುತ್ತೊಂದನ್ನು ನಾನು ಇಲ್ಲಿ ಯಥಾವತ್ತಾಗಿ ಬಳಸಿಕೊಳ್ಳುತ್ತೇನೆ ನಾನು ಪಂಜಾಬ್, ಹರಿಯಾಣಗಳಿಂದ ಗೋಧಿ ಖರೀದಿಸಿ ದಕ್ಷಿಣ ಭಾರತಕ್ಕೆ ಅದನ್ನು ಮಾರೋದಾದರೆ ನನಗೆ ವಾರ್ಷಿಕ ದಾಸ್ತಾನು ಮತ್ತು ಸಾರಿಗೆ ಖರ್ಚು ಎಂದು ಕ್ವಿಂಟಾಲ್‌ಗೆ ೧,೧೫೦ ರಿಂದ ೧,೧೬೦ ರೂ ನಷ್ಟು ಖರ್ಚಾಗುತ್ತದೆ. ಅದೇ ಗೋಧಿಯನ್ನು ಅಸ್ಟ್ರೇಲಿಯಾದಿಂದ ಖರೀದಿಸೋದಾದ್ರೆ ನನ್ನ ಆಮದಿನ ಬಾಬತ್ತು ಕ್ವಿಂಟಾಲ್‌ಗೆ ಕೇವಲ ೯೫೦ ರೂ. ಗಳಾಗುತ್ತದೆ. ನನಗೆ ನನ್ನ ಗ್ರಾಹಕರ ಹಿತಾಸಕ್ತಿ ಕಾಯೋದು ಮುಖ್ಯ ಈಗ ಹೇಳಿ ನಾನು ಅದೆಂಥಾ ದೊಡ್ಡ ಅಬ್ಬೆಪಾರಿ ಅಂತ. ನನ್ನ ಯೋಗಕ್ಷೇಮ ನೋಡಿಕೋ ಎಂದು ಮಂತ್ರಿ ಮಾಡಿದರೆ ಇನ್ಯಾರದೋ ಪರ ವಕಾಲತ್ತು ವಹಿಸಿಕೊಳ್ಳಲು ಶುರಮಾಡುತ್ತೀರಿ.

ನೀವು ನಮ್ಮತ್ತ ತೋರಿರುವ ನಿರ್ಲಕ್ಷ್ಯಕ್ಕೆ ಮತ್ತೊಂದು ಉದಾಹರಣೆ ಕೊಡುತ್ತಿದ್ದೇನೆ. ೧೯೮೫- ೯೦ರ ಮಧ್ಯೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆಂದು ದೇಶದ ಉಆP ಯ ಶೇ. ೧೪.೫ರಷ್ಟನ್ನು ಮೀಸಲಿಟ್ಟದ್ರಿ. ಅದನ್ನೇ ೨೦೦೧ರಲ್ಲಿ ಶೇ. ೫.೯ಕ್ಕೆ ಇಳಿಸಿದ್ರಿ.. ಕೃಷಿ ಸಂಶೋಧನೆಗೆಂದು ನೀವು ನೀಡೋದು ಉಆPಯ ಶೇ. ೦.೩ರಷ್ಟನ್ನು ಮಾತ್ರ.

ಇಂತ ಅಂಕಿ ಅಂಶಗಳಿರುವಾಗ ನಮ್ಮ ಉದ್ದಾರಕ್ಕೆ ನೀವು ನಾವು ಅದು ಮಾಡಿದ್ದೇವೆ, ಇದು ಮಾಡಿದ್ದೇವೆ ಎಂಬುದಕ್ಕೆ ಏನಾದರೂ ಅರ್ಥವಿದೆಯಾ? ದೇಶದಲ್ಲಿ ಹತ್ತಾರು ಬಗೆಯ ಕೃಷಿ ಮಾಡುವ ರೈತರಿದ್ದಾರೆ. ನೀವು ನಿಜವಾಗಿ ನಮಗೆ ಒಳ್ಳೆಯದಾಗಲಿ ಎಂದು ಏನಾದರೂ ಮಾಡಿದ್ದೇ ಆಗಿದ್ದರೆ ಅವರಲ್ಲಿ ಒಂದಷ್ಟು ಮಂದಿಯಾದರೂ ನಗುಮುಖದಿಂದ ಇರಬೇಕಿತಲ್ವಾ? ಆದರೆ ಎಲ್ಲರೂ ತಲೆ ಕೆಳಗೆ ಹಾಕಿರುವವರೇ. ನೀವು ರಸಗೊಬ್ಬರಕ್ಕೆ ಸಬ್ಸಿಡಿ, ಬೆಂಬಲ ಬೆಲೆ, ಬಡ್ಡಿ ಮನ್ನಾ ಹೀಗೆ ಅನುತ್ಪದಾಕ, ಉಪದ್ರಕಾರಿ ಕೊಡುಗೆಗಳನ್ನು ಕೊಡುತ್ತೀರಿ. ನಮಗೆ ಬೇಕಾಗಿರೋದು ಕೊಡುಗೆಗಳಲ್ಲ ಬೆಂಬಲ. ಅಂದರೆ ನೀವು ರಸಗೊಬ್ಬರಕ್ಕೆ ಸಬ್ಸಿಡಿ ಕೊಡುವ ಬದಲು ನನಗೆ ಮನೆಯಲ್ಲೆ ಅಥವಾ ನನ್ನ ಸಮುದಾಯದವರೊಂದಿಗೆ ಸೇರಿ ಸಾವಯವ ಗೊಬ್ಬರ ಘಟಕ ಸ್ಥಾಪಿಸಲು ಸಾಲ ಮತ್ತು ಅ ಬಗ್ಗೆ ಸೂಕ್ತ ತರಬೇತಿ, ಮಾಹಿತಿ ಕೊಟ್ಟದ್ದೇ ಆದರೆ ಮುಂದೆ ನಾನೆಂದೂ ನಿಮ್ಮ ಮುಂದೆ ಸಬ್ಸಿಡಿ ಕೊಡಿ ಎಂದು ಗೋಗರೆಯುವುದಿಲ್ಲ ಅದರೆ ನಿಮಗೆ ಅದು ಬೇಕಾಗಿಲ್ಲ.

ಇನ್ನು ನನ್ನ ಉಳಿವಿಗಾಗಿ ನೀವು ಕೈಗೊಳ್ಳಲೇ ಬೇಕಾದ ಕೆಲವು ಕ್ರಮಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ನೀವು ಕೃಷಿ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಮಾಡಿ ಮಧ್ಯವರ್ತಿಗಳ ಕಾಟ ತಪ್ಪಿಸಬೇಕು. ಇದರಿಂದ ಬೆಂಬಲ ಬೆಲೆ ಕೊಡಿ ಎಂದು ಬಾವುಟ ಹಿಡಿಯುವ ಪರಿಸ್ಥಿತಿ ಬರುವುದಿಲ್ಲ. ವೈರುದ್ಯವೆಂದರೆ ಇಂದು ಆಹಾರೋತ್ಪನ್ನಗಳ ಬೆಲೆ ಗಗನಮುಖಿಯಾಗಿದೆ ಆದರೆ ನನ್ನ ಗತಿ ನರಕ ಮುಖಿಯಾಗಿದೆ. ಆ ಹೆಚ್ಚಾಗಿರುವ ಬೆಲೆಯಿಂದ ಬರುವ ಹಣ ರೈತನ ಕಿಸೆ ಸೇರಿಲ್ಲ ಎಂದರೆ ಎಲ್ಲಿಗೆ ಹೋಗುತ್ತಿದೆ? ಇದಕ್ಕಾಗಿ ಲಾಭದ ಸರಿಯಾದ ಹಂಚುವಿಕೆ ಆಗಲೇ ಬೇಕು. ಆಗ ಬೆಂಬಲ ಬೆಲೆಯ ಪ್ರಶ್ನೆ ಬರುವುದಿಲ್ಲ.

ಇನ್ನು ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಕೊಡದಿದ್ದರೂ ಪರವಾಗಿಲ್ಲ ದಿನವಿಡಿ ವಿದ್ಯುತ್ ಕೊಡಲೇಬೇಕು. ನಂತರ ಕೆಲ ಲಾಭದಾಯಕವೆನಿಸದ ಅಥವಾ ಸೀಮಿತ ಮಾರುಕಟ್ಟೆ ಇರುವ ಬೆಳೆಗಳನ್ನು ನಿಯಂತ್ರಿತ ಪ್ರಮಾಣದಲ್ಲಿ ನನ್ನ ಸಹವರ್ತಿಗಳು ಬೆಳೆಯುವ ಹಾಗೇ ವ್ಯವಸ್ಥಿತವಾದ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಹಾಗಾಂತ ಅದು ಮಾರುಕಟ್ಟೆಯಲ್ಲಿ ಕೊರತೆಯಾಗಬಾರದು.

ಇನ್ನು ನನ್ನನ್ನು ಕೃಷಿಗೆ ಮಾತ್ರ ಬಳಸಿಕೊಳ್ಳುವ ಬದಲು ಬೇರೆ ಕೆಲವು ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಲು ತಯಾರಾಗುವಂತೆ ಉಪಕ್ರಮಗಳನ್ನು ಕೈಗೊಳ್ಳಬೇಕು. ಯಾಕೆಂದರೆ ನನ್ನ ವೃತ್ತಿಯವರಿಗೆ ವಿಶ್ರಾಂತಿ ಸಮಯ ಉಳಿದೆಲ್ಲ ಕ್ಷೇತ್ರಗಳಲ್ಲಿ ಇರುವವರಿಗಿಂತ ಹೆಚ್ಚಾಗಿ ಇರುತ್ತದೆ. ಅದನ್ನು ನಾನು ಈ ಚಟುವಟಿಕೆಗಳಲ್ಲಿ ಭಾಗಿಯಾಗುವುದರ ಮೂಕ ಸದುಪಯೋಗ ಪಡಿಸಿಕೊಳ್ಳುತ್ತೇನೆ.

ಮತ್ತೇ ಬೀಜ ಮಸೂದೆ, ಬಿಟಿ ಬೆಳೆಗಳು ಎಂದು ನನ್ನನ್ನು ಯಾರ‍್ಯಾರದ್ದೋ ಅದರಲ್ಲೂ ಪರದೇಶಿಗಳ ಕೈಗೊಂಬೆ ಮಾಡ ಹೊರಟಿರಿ ಎಂದರೆ ನಿಮಗಿದೆ ಮಾರಿ ಹಬ್ಬ.

ನಿಮ್ಮ ಜಾರಿಗೆ ತಂದ ಬೆಲೆ ವಿಮೆ ನಿಜವಾಗಿಯೂ ಒಂದು ಒಳ್ಳೆಯ ಯೋಜನೆ. ಆದರೆ ಅದನ್ನು ನೀವು ಎಷ್ಟು ಮಂದಿ ರೈತರಿಗೆ ವಿಸ್ತರಿಸಿದ್ದೀರಿ. ಹೆಚ್ಚೆಂದರೆ ಶೇ. ೧೦ ರೈತರು ಬೆಳೆ ವಿಮೆ ಹೊದಿದ್ದಾರೆ. ಉಳಿದವರ ಕಥೆಯೇನು?

ಇನ್ನು ಕೆಲ ದೀರ್ಘಾವಧಿ ಬೆಳೆಗಳಿರುತ್ತವೆ ಉದಾಹರಣೆಗೆ ಅಡಿಕೆ, ತೆಂಗು ಇತ್ಯಾದಿ. ಅವುಗಳನ್ನು ಬೆಳೆದ ಮೇಲೆ ನಾನು ಫಸಲಿಗಾಗಿ ತುಂಬ ಸಮಯ ಕಾಯಬೇಕಾಗುತ್ತದೆ ಜೊತೆಗೆ ಎಲ್ಲಾದರೂ ಕೆಲ ವರ್ಷಗಳ ಕಾಲ ಅದರ ಬೆಲೆ ಪಾತಳದಲ್ಲೇ ತೆವಳುತ್ತ ನಿಂತರೆ ನನಗೆ ಅತ್ಮಹತ್ಯೆ ಅಥವಾ ಉಪವಾಸವೇ ಗತಿ. ಅದ್ದರಿಂದ ನನ್ನ ಈ ಉತ್ಪನ್ನಗಳ ಪರ್ಯಾಯ ಉಪಯೋಗಗಳ ಬಗ್ಗೆ ಸಂಶೋಧನೆ ಮಾಡಿ ಅದರ ಬಳಕೆ ಮತ್ತಷ್ಟು ಹೆಚ್ಚುವ ಹಾಗೇ ನೋಡಿಕೊಳ್ಳಬೇಕು. ಇಲ್ಲ ಪರ್ಯಾಯ ಬಳಕೆ ಸಾಧ್ಯವೇ ಇಲ್ಲ ಈ ಮಿತಿಗಿಂತ ಹೆಚ್ಚು ನೀವು ಬೆಳೆದರೆ ಸೂಕ್ತ ಬೆಲೆಯಲ್ಲಿ ನಿಮ್ಮ ಉತ್ಪನ್ನಕ್ಕೆ ಮಾರುಕಟ್ಟೆ ಮಾಡಲು ಸಾಧ್ಯವೇ ಇಲ್ಲ ಎಂದಾದರೆ ಅನಂತರ ಹೊಸದಾಗಿ ಆ ಬೆಳೆ ಬೆಳೆಯುವುದಕ್ಕೆ ನಿಷೇಧ ಹೇರಿ. ಇದರಿಂದ ಈಗಾಗಲೇ ಬೆಳೆದ ರೈತರಿಗೆ ತನ್ನ ಉತ್ಪನ್ನಕ್ಕೆ ಯೋಗ್ಯ ಬೆಲೆ ದಕ್ಕುತ್ತದೆ. ಹಾಗೇ ಆ ಬೆಳೆಯನ್ನು ಬೆಳೆಯಲಾಗದ ನನ್ನ ಸೋದರನಿಗೆ ಒಮ್ಮೆ ವ್ಯವಸ್ಥೆಯ ಮೇಲೆ ಕೋಪ ಬಂದರು ಕೂಡ ಮಂದೆ ಆತ ಪಡುವ ಪಡಿಪಾಟಲಿನಿಂದ ತಪ್ಪಿಸಿಕೊಳ್ಳುತ್ತಾನೆ. ಹಾಗೇ ಅವನ ಭೂಮಿ ಹಾಳಾಗುವುದು ತಪ್ಪುವುದಲ್ಲದೇ ಅವನಿಗೆ ಬೇರೆ ಬೆಳೆ ಬೆಳೆಯಬಹುದು. ಹಾಗೆಯೇ ಆ ಬೆಳೆ ಬೆಳೆದವನಿಗೆ ತನ್ನ ಉತ್ಪನ್ನಕ್ಕೇ ಯೋಗ್ಯ ಬೆಲೆ ಸಿಗುವ ಸಂಭವನೀಯತೆ ಹೆಚ್ಚಿರುತ್ತದೆ.

ಇದರೊಂದಿಗೆ ಕೃಷಿ ಕೆಲಸಕ್ಕೆ ಮತ್ತು ಕೃಷಿಗೆ ಸಾಮಾಜಿಕ ಗೌರವ, ಮಾನ್ಯತೆ ಮತ್ತು ಹಳ್ಳಿಗಳ ಸಂಪರ್ಕ ವ್ಯವಸ್ಥೆ ಮತ್ತು ಜೀವನ ಮಟ್ಟ ಸುಧಾರಿಸುವ ಕ್ರಮಗಳನ್ನು ಸರಕಾರ ಕೈಗೊಳ್ಳುವುದು ಅನಿವಾರ್ಯ.

ಸರಕಾರದೆದುರು ಮತ್ತೇ ಮತ್ತೆ ಹೀಗೆ ಬೇಡಲು ನಿನಗೆ ನಾಚಿಕೆ ಆಗುವುದಿಲ್ವಾ? ಎಂದು ನೀವು ಕೇಳಬಹುದು. ಅದನ್ನು ಬಿಟ್ಟೆ ನಾನು ಕೇಳುತ್ತಿರುವುದು. ಯಾಕೆಂದರೆ ಇಲ್ಲಿ ನನ್ನ ಕೈಮೀರಿದ ಸಂಗತಿಗಳು ಅನೇಕ ಇದೆ. ಅದನ್ನೆಲ್ಲ ನನ್ನ ನಿಯಂತ್ರಣಕ್ಕೆ ತರಲು ಸಾಧ್ಯವಿಲ್ಲ. ಅದಕ್ಕೆ ಸರಕಾರ ಅನಿವಾರ್ಯ. ಯಾಕೆಂದರೆ ನನಗೆ ಇನ್ನೊಬ್ಬರ ಹಕ್ಕುಗಳನ್ನು ಮೊಟಕುಗೊಳಿಸುವುದು ಅಥವಾ ಕಾನೂನನ್ನು ಕೈಗೆತ್ತಿಕೊಳ್ಳವುದು ಮನಸ್ಸಿಗೆ ಒಪ್ಪದ ಸಂಗತಿ. ಸರಕಾರ ಮನಸ್ಸು ಮಾಡಿದರೆ ನಾಜೂಕಾಗಿ ನನ್ನ ಸಮಸ್ಯೆಗಳನ್ನು ಪರಿಹರಿಸಬಲ್ಲದು ಎಂಬ ಆಸೆ.

ನಿಮ್ಮೆಲ್ಲರ ಹೊಟ್ಟೆ ತಣಿಸೋ ನಾನು ಅಲ್ಯುಮಿನಿಯಂ ತಟ್ಟೆ ಹಿಡಿದು ತುತ್ತು ಅನ್ನಕ್ಕಾಗಿ (ಹಿಂದೆ ಹಸಿವಾದಾಗ ಹೊಟ್ಟೆ ಮೇಲೆ ತಣ್ಣೀರ ಬಟ್ಟೆ ಹಾಕಿಕೊಳ್ಳುತ್ತಿದ್ದರಂತೆ ಈಗ ನೀರಿಗೂ ತತ್ವಾರ) ಹಪಾಗಪಿಸೋ ಕರಾಳ ವರ್ತಮಾನದ ಹಸಿಹಸಿ ಸಾಕ್ಷಿಯನ್ನಾಗಿ ಮತ್ತು ಅನುಭವಿಯನ್ನಾಗಿ ನೀವು ಮಾಡಿದ್ದೀರಿ. ಆದರೂ ಅದನ್ನೆಲ್ಲ ಮನಸ್ಸಿನಿಂದ ತೆಗೆದು ಪಕ್ಕಕ್ಕಿಟ್ಟು ಈ ಪತ್ರ ಬರೆದಿದ್ದೇನೆ. ನೀವು ನನ್ನತ್ತ ಒಂಚೂರಾದರೂ ಜವಾಬ್ದಾರಿಯ ಕಣ್ಣುಗಳಿಂದ ನೋಡಿದರೆ ನೀವು ನನ್ನಿಂದ ಮತ್ತೊಂದು ಶುಭವಾರ್ತೆಯ ಪತ್ರ ನಿರೀಕ್ಷಿಸಬಹುದು. ಇಲ್ಲ, ನೀನು ರೈತ, ನಿನ್ನಿಂದ ಏನೂ ಕಿಸಿಯಲಿಕ್ಕಾಗುವುದಿಲ್ಲ, ನೀನಿರುವುದೇ ನೋವುಣ್ಣಲು ಎಂದ್ಕೊಂಡು ಬಿಟ್ರೆ ಇದನ್ನೇ ನನ್ನ ಅತ್ಮಹತ್ಯಾ ಪತ್ರ ಎಂದು ಪರಿಗಣಿಸಿ.

ಇಂತಿ ನಿಮ್ಮ

ಅನ್ನದಾತ

No comments: