Saturday, February 20, 2010
ಮೂರ್ತಿಯೆಂಬ 'ನೆರಳು ಬೆಳಕ' ಸಾರಥಿ
ಆಸೆಯೊಂದು ಕತ್ತಲಾಟ
ಸಾಗಿದೆ ಇದರೊಡನೆ ಬೆಳಕು ಕತ್ತಲೋಟ..." ಇದು ಪ್ರಸಿದ್ಧ ಕವಿ ಸಾಲು. ಈ ಸಾಲ ನೂಲು ಹಿಡಿದು ಸಿನಿಮಾದತ್ತ ಇಣುಕಿದರೆ ಸಿನಿಮಾ ಮತ್ತೇನೂ ಅಲ್ಲ, ಅದೂ ನೆರಳು ಬೆಳಕಿನದ್ದೇ ಆಟ ಎಂಬುದು ನಮ್ಮ ಅನುಭವದ ತೆಕ್ಕೆಗೆ ಸಂದಿರುತ್ತದೆ.
ಬಾಳೆಂಬ ಸಿನಿಮಾದಲ್ಲಿ ಎಲ್ಲರೂ ಪಾತ್ರಧಾರಿಗಳೇ! ಸಿನಿಮಾವೆಂಬ ಬಾಳಲ್ಲಿ ಹಾಗಿಲ್ಲ! ಅಲ್ಲಿರೋದು ಕೆಲವೇ ಕೆಲವು ಪಾತ್ರಾಧಾರಿಗಳು. ಆ ಪಾತ್ರಗಳನ್ನು ಆಡಿಸಿ, ಬೀಳಿಸಿ ನೋಡೋ ಸೂತ್ರ(ಧಾರಿ)ಗಳ ಸಂಖ್ಯೆ ಹತ್ತಾರು. ಆ ಹತ್ತಾರು ಸೂತ್ರ(ಧಾರಿ)ಗಳನ್ನು ಒಟ್ಟಿಗೆ ಹೆಣೆದು ತನ್ನ ಆಣತಿಯಂತೆ ಕುಣಿಸುವವ ನಿರ್ದೇಶಕ. ಆದರೆ ನಿರ್ದೇಶಕನಿಗೆ ಎಲ್ಲವನ್ನೂ ತನಗೆ ಇಷ್ಟಬಂದ ಹಾಗೆ ಮಾಡಲಾಗುವುದಿಲ್ಲ. ಯಾಕೆಂದರೆ, ಅವನ ಇಷ್ಟ, ಕನಸು, ಚಿಂತನೆ, ಧೋರಣೆ ಹೀಗೆ ಅದೇನೇ ಹೇಳಿ ಅದು ಇರುವುದು ಅಮೂರ್ತ ರೂಪದಲ್ಲಿ. ಅದು ಜನರನ್ನು ತಲುಪಬೇಕಾದರೆ ಮೂರ್ತ ಆಥವಾ ಸಾಂಕೇತಿಕ ರೂಪ ಪಡೆಯಲೇಬೇಕು. ಅದಕ್ಕಾಗಿಯೇ ಅನೇಕ ತಂತ್ರಜ್ಞರು ಒಂದು ಸಿನಿಮಾ ರೂಪುಗೊಳ್ಳುವ ಪಕ್ರ್ರಿಯೆಯಲ್ಲಿ ಪಾಲುಪಡೆಯುತ್ತಾರೆ. ಅಂತಹ ತಂತ್ರಜ್ಞರಲ್ಲಿ ಅತ್ಯಂತ ಪ್ರಮುಖನಾದವನೇ ಸಿನಿಛಾಯಾಗ್ರಾಹಕ. ಅಂತಹ ಸಿನಿಛಾಯಾಗ್ರಾಹ(ಸಾಧ)ಕರಲ್ಲಿ ಭಾರತದ ಮಟ್ಟಿಗೆ ಮೇರು ಪ್ರತಿಭೆ ಎಂದು ಪರಿಗಣಿಸಬಹುದಾದ ವ್ಯಕ್ತಿ ೨೦೦೮ರ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕ್ರತ ವಿ. ಕೆ. ಮೂರ್ತಿ!
ವಿ. ಕೆ. ಮೂರ್ತಿ ೧೯೨೩ರಲ್ಲಿ ಮೈಸೂರಿನಲ್ಲಿ ಜನಿಸಿ, ಚಿತ್ರ ನಗರಿ, ಮಾಯಾ ನಗರಿ ಮುಂಬೈಯಲ್ಲಿ ಕಾಗದದ ಹೂವು ಅರಳಿಸಿದವರು! ಹೌದು, ಮೂರ್ತಿಯವರ ಕಾಯಕ ಜೀವನ ನೆಲೆ ಕಂಡುಕೊಂಡದ್ದು ದೂರದ ಮುಂಬೈಯಲ್ಲಿ. ಅದರಲ್ಲೂ ಭಾರತದ ಚಲನಚಿತ್ರ ರಂಗ ಕಂಡ ಅದ್ವಿತೀಯ ನಿರ್ದೇಶಕ ಗುರುದತ್ತ್ರ ಜೊತೆಯಲ್ಲಿ.
ಒಳ್ಳೆಯ ನಿರ್ದೇಶಕ ಮತ್ತು ದಕ್ಷ ಸಿನಿಛಾಯಾಗ್ರಾಹಕರ ನಡುವೆ ಆದ್ಭುತವೆನಿಸುವ ಒಂದು ಕೆಮೆಸ್ಟ್ರಿ ಇರುತ್ತದೆ. ಅವರಿಬ್ಬರು ಒಂದು ರೀತಿಯಲ್ಲಿ ಆದರ್ಶ ಗಂಡಹೆಂಡತಿಯರಿದ್ದಂತೆ! ಉದಾಹರಣೆಗೆ ನಿರ್ದೇಶಕ ಸೆರ್ಗಿ ಐನ್ಸ್ಟೀನ್ ಮತ್ತು ಸಿನಿಮಾಟೊಗ್ರಾಫರ್ ಎಡ್ವರ್ಡ್ ಟಿಸ್, ಆರ್ಸನ್ ವೆಲ್ಸ್ ಮತ್ತು ಗ್ರೇಗ್ ಟೋಲೆಂಡ್, ಇಂಗ್ಮರ್ ಬರ್ಗ್ಮನ್ ಮತ್ತು ಸ್ಪೆನ್ ನಿಕ್ವಿಸ್ಟ್, ಸತ್ಯಜಿತ್ ರಾಯ್ ಮತ್ತು ಸುಬ್ರೊತೋ ಮಿತ್ರಾ ಹೀಗೇ. ಇಂತಹದ್ದೆ ಸಾಲಿಗೆ ಸೇರಿದ ಮತ್ತೊಂದು ಮೋಡಿ ಮಾಡಿದ ಜೋಡಿಯೆಂದರೆ ಅದು ಗುರುದತ್ತ್ ಮತ್ತು ವಿ. ಕೆ. ಮೂರ್ತಿಯದ್ದು.
ಯಾವ ಗುಟ್ಟನ್ನು ತೆರೆಯ ಮೇಲೆ ಹೇಳಬೇಕು, ಯಾವುದನ್ನು ಉಳಿಸಬೇಕು, ಎಲ್ಲಿ ಸಂಶಯ ಹುಟ್ಟಿಸಬೇಕು, ಎಲ್ಲಿ ಅದನ್ನು ಪರಿಹರಿಸಬೇಕು, ನಾವೀಗ ಏನನ್ನೂ ಹೇಳ್ತಾ ಇದ್ದೇವೆ, ಅದು ಯಾವ ಅರ್ಥ ನೀಡಬೇಕು, ಎಲ್ಲಿ, ಹೇಗೆ, ಎಷ್ಟು ಬೆಳಕಿರಲಿ ಅಥವಾ ನೆರಳಿರಲಿ ಹೀಗೆ ಇದ್ದರೆ ಅದು ಏನನ್ನು ಹೇಳುತ್ತದೆ, ಇದನ್ನೇ ಇನ್ನೊಂದು ರೀತಿಯಲ್ಲಿ ಹೇಗೆ ತೋರಿಸಬಹುದು ಯಾವುದು ಹೆಚ್ಚು ಪರಿಣಾಮಕಾರಿ ಹೀಗೆ ಎಲ್ಲವನ್ನು ಯೋಚಿಸಿ, ಚಿಂತಿಸಿ, ಮಥಿಸಿ ಅದನ್ನು ತನ್ನ ಕ್ಯಾಮೆರದಲ್ಲಿ ಸೆರೆ ಹಿಡಿದು, ನಿರ್ದೇಶಕನ ಆಶಯಗಳಿಗೆ ಚ್ಯುತಿ ತರದೆ ತೆರೆಯ ಮೇಲೆ ಮೆರೆಸುವುದು ಅಂದರೆ ಸಾಮಾನ್ಯ ಕೆಲಸವೇ? ಇಲ್ಲಿ ಕ್ಯಾಮೆರಾ ಮನುಷ್ಯನ ಕಣ್ಣಿನಂತೆ ಕೆಲಸ ಮಾಡಿದರೆ ಸಿನಿಛಾಯಾಗ್ರಾಹಕ ಪರಕಾಯ ಪ್ರವೇಶ ಮಾಡಬೇಕಾಗುತ್ತದೆ, ಅದೂ ಎರಡು ಕಾಯಗಳದ್ದು! ಮೊದಲನೆಯದ್ದು ನಿರ್ದೇಶಕನದ್ದಾದರೆ ಎರಡನೇಯದ್ದು ಪ್ರೇಕ್ಷಕನದ್ದು.
ವಿ. ಕೆ ಮೂರ್ತಿಯವರಿಗೆ ಈ ಎರಡೂ ಕಲೆಗಳು ಸಿದ್ದಿಸಿತ್ತು. ಅದರಲ್ಲೂ ಗುರುದತ್ತ್ರ ಸಿನಿಮಾವೆಂದರೆ ಗುರುದತ್ತ್ರೇ ಇವರ ದೇಹ ಪ್ರವೇಶಿಸಿ ಕ್ಯಾಮೆರಾ ಕೆಲಸ ಮಾಡುತ್ತಿದ್ದರೇನೋ ಎಂಬಷ್ಟು ಪರಿಪಕ್ವತೆ. ಗುರುದತ್ತ್ರ ಜತೆ ಭಾರತದ ಮೊತ್ತಮೊದಲ ಸಿನಿಮಾಸ್ಕೋಪ್ ಚಿತ್ರ ಕಾಗಜ್ ಕಿ ಫೂಲ್, ಪ್ಯಾಸಾ, ಬಾಝಿ, ಸಾಹಿಬ್ ಬೀಬಿ ಔರ್ ಗುಲಾಮ್, ಆರ್ ಪಾರ್ ಮುಂತಾದ ದೇಶದ ಚಲನಚಿತ್ರ ರಂಗದ ಮೈಲುಗಲ್ಲು ಎಂದೆನಿಸುವ ಚಿತ್ರಗಳಿಗೆ ನೆರಳು ಬೆಳಕು ತುಂಬಿದರು. ಕಾಗಜ್ ಕಿ ಫೂಲ್ಗೆ ೧೯೫೯ರಲ್ಲಿ ಮತ್ತು ಸಾಹಿಬ್ ಬೀಬಿ ಔರ್ ಗುಲಾಮ್ಗೆ ೧೯೬೨ರಲ್ಲಿ ಫಿಲಂಫೇರ್ ಅವಾರ್ಡ್ ಜಯಿಸಿದ್ದರು.
ಮೂರ್ತಿ, ಗುರುದತ್ತ್ ಬದುಕಿರುವವರೆಗೂ ಬೇರೊಬ್ಬ ನಿರ್ದೇಶಕನ ಕೈಕೆಳಗೆ ಮುಖ್ಯ ಕ್ಯಾಮೆರಾಮೆನ್ ಆಗಿ ದುಡಿದಿರಲಿಲ್ಲ. ಆದರೆ ೧೯೬೪ರಲ್ಲಿ ಗುರುದತ್ತ್ರ ಆಕಸ್ಮಿಕ ಅಗಲುವಿಕೆ ನಂತರ ಕಮಲ್ ಅಮ್ರೋಹಿಯ ಶ್ರೇಷ್ಟ ಚಿತ್ರ ಕೀಜಾ ಮತ್ತು ರಝೀಯಾ ಸುಲ್ತಾನ್ಗೆ ಕ್ಯಾಮೆರಾ ಹಿಡಿದರು. ಅನಂತರ ಪ್ರಮೋದ್ ಚಕ್ರವರ್ತಿ,ಗೋವಿಂದ ನಿಹಲಾನಿ, ಶ್ಯಾಮ್ ಬೆನಗಲ್ ಮುಂತಾದವರ ಚಿತ್ರಗಳನ್ನು ತಮ್ಮ ಕ್ಯಾಮರದಲ್ಲಿ ಸೆರೆ ಹಿಡಿದರು.
ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಹೂವುಹಣ್ಣು ಇವರ ಕ್ಯಾಮರ ಕೈಚಳಕಕ್ಕೆ ಸಾಕ್ಷಿಯಾದ ಏಕಮಾತ್ರ ಕನ್ನಡ ಚಲನಚಿತ್ರ. ಏನ್ಸಾರ್, ಒಂದೇ ಕನ್ನಡ ಚಿತ್ರಕ್ಕೆ ಕೆಲಸ ಮಾಡಿದ್ದೀರಲ್ಲ ಬೇರೆ ಕನ್ನಡ ಚಿತ್ರಗಳಿಗೆ ಯಾಕೆ ಕೆಲಸ ಮಾಡಿಲ್ಲ? ಎಂದು ಕೇಳಿದರೆ, ನಿಮ್ಮ ನಿರ್ಮಾಪಕರನ್ನೇ ಕೇಳಿ ಅನ್ನುವುದು ಮೂರ್ತಿಯವರ ಉವಾಚ. ಅದರರ್ಥ ಅವರ ಸಾಮರ್ಥ್ಯವನ್ನು ತವರ ಚಲನಚಿತ್ರ ರಂಗ ಸರಿಯಾಗಿ ಬಳಸಿಕೊಂಡಿಲ್ಲ ಎಂಬ ನೋವು ಅವರಲ್ಲಿ ಇದೆ ಎಂದಾಯಿತು. ಅಷ್ಟರ ಮಟ್ಟಿಗೆ ನಮ್ಮದು ದುರದೃಷ್ಟ! ನಮ್ಮಲ್ಲಿ ಬೆಳೆಯದಿದ್ದರೂ ಪರವಾಗಿಲ್ಲ ಅಲ್ಲೆಲ್ಲೋ ಬೆಳೆದು ಜಗತ್ತಿನ ಗಮನ ಸೆಳೆದರಲ್ಲ ಅದು ಕನ್ನಡಾಂಬೆಯ ಅದೃಷ್ಟ!
ಮೂರ್ತಿ ಸಾಬ್, ಒಬ್ಬ ಶ್ರೇಷ್ಟ ಸಿನಿಛಾಯಾಚಿತ್ರಗಾರನಾಗುವ ಮುಂಚೆ ಒಬ್ಬ ಸ್ವಾತಂತ್ರ್ಯ ಸೇನಾನಿಯಾಗಿದ್ದರು, ಪ್ರತಿಫಲವಾಗಿ ಜೈಲುವಾಸ ಅನುಭವಿಸಿದರು. ಅವರ ನೆನಪಿನ ಕೋಶದಲ್ಲಿರುವ ಅವರ ಹೋರಾಟಕ್ಕೆ ನಿದರ್ಶನವಾಗಿರುವ ಘಟನೆಯೊಂದು ಹೀಗಿದೆ. ಆಗ ಅವರು ಕಾಲೇಜಿನಲ್ಲಿ ಓದುತ್ತಿದ್ದರಂತೆ, ಗಾಂಧಿಜಿಯ ಭಾಷಣ ಕೇಳಿ ಸುಮಾರು ೧೫೦ ಮಂದಿ ಉತ್ಸಾಹಿ ವಿದ್ಯಾರ್ಥಿಗಳು ಬ್ರಿಟಿಷ್ರ ಅಳ್ವಿಕೆಯ ವಿರುದ್ಧ ಪ್ರತಿಭಟಿಸಲು ಸೈಕಲ್ ರ್ಯಾಲಿ ನಡೆಸ ಹೊರಟರಂತೆ. ಇವರಿಗೆಲ್ಲ ವಿ. ಕೆ ಮೂರ್ತಿಯೇ ಸಾರಥಿ. ಪ್ರತಿಭಟನೆ ಮೈಸೂರುನಗರದಿಂದ ಹೊರಟು ಪೊಲಿಸ್ ಚೌಕಿಯಲ್ಲಿ ಕೊನೆಗೊಳಿಸುವುದು ಎಂದು ನಿರ್ಧರಿಸಲಾಗಿತ್ತಂತೆ. ಅದರಂತೆ ಪ್ರತಿಭಟನೆ ಶುರುವಾಯಿತು, ಜೋರಾಯಿತು. ಪ್ರತಿಭಟನೆ ಚೌಕಿ ಬಳಿ ತಲುಪುತ್ತಲೇ ಪೊಲಿಸರು ಇವರನ್ನು ಬಂಧಿಸಲು ತಯಾರಾಗಿದ್ದರಂತೆ. ಮೂರ್ತಿಯವರು ಹಿಂತಿರುಗಿ ಒಮ್ಮೆ ತಮ್ಮ ಹಿಂಬಾಲಕರನ್ನು ನೊಡಲು ಅಲ್ಲಿದದ್ದು ಬರೀ ಏಳು ಮಂದಿಯಂತೆ!
ಮೂರ್ತಿಯವರಿಗೆ ನಟನಾಗುವ ಆಸೆಯೇ ಹೆಚ್ಚಿತಂತೆ. ಅದಕ್ಕಾಗಿ ಮುಂಬೈಗೆ ಓಡಿ ಹೋಗಿ ಅರೆ ಪ್ಯಾಂಟ್ನಲ್ಲೇ ಸ್ಟುಡಿಯೋದಿಂದ ಸ್ಟುಡಿಯೋಗೆ ಅಲೆದಾಡಿದರಂತೆ, ಅಲ್ಲಿ ಅವರ ಸಂಬಂಧಿಕರು ಆಶ್ರಯ ನೀಡಿದರಂತೆ ಅದರು ಅವಕಾಶ ದಕ್ಕಲಿಲ್ಲ ಇನ್ನು ಇಲ್ಲಿದ್ದು ಸಮಯ ಕೊಲ್ಲುವುದಕ್ಕಿಂತ ಊರಿಗೆ ಹಿಂತಿರುಗಿ ಶಿಕ್ಷಣವನ್ನು ಪೂರೈಸುವುದೇ ಒಳಿತು ಎಂದು ಭಾವಿಸಿ ಶಿಕ್ಷಣ ಪೂರೈಸಿದರಂತೆ.
ಇವರಿಗೆ ವಯಲಿನ್ ನುಡಿಸುವುದು ಕೂಡ ಕರಗತವಾಗಿತ್ತಂತೆ ತದನಂತರ ಇವರು ಸಿನಿಮಾಟೋಗ್ರಾಫಿಯನ್ನು ಕಲಿತದ್ದು.
ಜಯಂತ ದೇಸಾಯಿಯವರ ಮಹಾರಾಣ ಪ್ರತಾಪ್ ಇವರಿಗೆ ಬ್ರೇಕ್ ನೀಡಿತ್ತು. ಅದರಲ್ಲಿ ಅವರು ಸಿನಿಮಾಟೊಗ್ರಾಫರ್ ದ್ರೋಣಾಚಾರ್ಯರಿಗೆ ಸಹಾಯಕರಾಗಿ ದುಡಿದಿದ್ದರು. ಅನಂತರ ಇವರು ಅಮ್ರಪಾಲಿ ಎಂಬ ಸಿನಿಮಾ ನೋಡಿದಾಗ ಅದರಲ್ಲಿ ಸಿನಿಮಾಟೊಗ್ರಾಫರ್ ಫಾಲಿ ಮಿಸ್ತ್ರಿಯ ಚಮತ್ಕಾರಗಳನ್ನು ಕಂಡು ಮೂಕವಿಸ್ಮಿತರಾದರು. ಆಗ ಇವರು ಕೆಲ ಚಿತ್ರಗಳಲ್ಲಿ ವಯಲಿನ್ ವಾದಕರಾಗಿ ದುಡಿದಿದ್ದರು. ಮಿಸ್ತ್ರಿಯವರಿಗೆ ಸಹಾಯಕರಾಗಿ ದುಡಿದರು ಆ ಕಾಲದಲ್ಲಿ ಇವರು ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಸಹಾಯಕ ಸಿನಿಮಾಟೊಗ್ರಾಫರ್ ಆಗಿದ್ದರು. ಅನಂತರದ್ದು ಇತಿಹಾಸ. ಅವರು ಸ್ವತಂತ್ರ ಸಿನಿಮಾಟೊಗ್ರಾಫರ್ ಆಗಿ ತೆರೆಯ ಮೇಲೆ ದೃಶ್ಯ ಕಾವ್ಯವನ್ನೇ ಬರೆದರು. ನೆರಳು ಬೆಳಕಿಗೂ ಭಾವ ತುಂಬಿ ಅದೂ ಏನನ್ನೋ ಹೇಳುವಂತೆ ಮಾಡಿದರು. ಅದನ್ನು ಅಭಿವ್ಯಕ್ತಿಯ ಮಾಧ್ಯಮವನ್ನಾಗಿಸಿದರು. ಅದು ಒಂದು ಪಾತ್ರವಾಗುವಂತೆ ನೋಡಿಕೊಂಡರು.
ಅವರು ಸಿನಿಮಾಟೊಗ್ರಾಪರ್ ಆಗಿದ್ದ ಬಾಝಿ(೧೯೫೧), ಜಾಲ್(೧೯೫೨), ಮಿಸ್ಟರ್ & ಮಿಸಸ್(೧೯೫೫), ಸಿಐಡಿ(೧೯೫೬), ೧೨ ಓ ಕ್ಲಾಕ್(೧೯೫೮), ಚೌದಿನ್ ಕ ಚಾಂದ್(೧೯೬೦), ಜಿದ್ದಿ(೧೯೬೪), ಲವ್ ಇನ್ ಟೋಕಿಯೊ(೧೯೬೬), ಸೂರಾಜ್(೧೯೬೬), ನವ್ ಜವಾನ್(೧೯೭೧), ಜುಗ್ನು(೧೯೭೩), ನಸ್ತಿಕ್(೧೯೮೩), ಕಲಿಯುಗ್ ಔರ್ ರಾಮಾಯಣ್(೧೯೮೭), ಖುಲೆ ಅಮ್(೧೯೯೨), ದೀದಾರ್(೧೯೯೨) ಮುಂತಾದ ಚಿತ್ರಗಳು ಅವರಿಗೆ ಹೆಸರು ತಂದುಕೊಟ್ಟವು.
ಮೂರ್ತಿಯವರಿಗೆ ೨೦೦೫ರ ಅಮ್ಸ್ಟ್ಯಾರ್ಡ್ಯಾಮ್ IIಈಂ ಜೀವಮಾನದ ಸಾಧಕ ಪ್ರಶಸ್ತಿಗೂ ಭಾಜನರಾಗಿದ್ದರು. ಇದೀಗ ಬೆಂಗಳೂರಿನಲ್ಲಿ ತಮ್ಮ ಬಾಳ ಸಂಜೆ ಕಳೆಯುತ್ತಿರುವ ಮೂರ್ತಿಯವರನ್ನು ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ಅರ್ಹವಾಗಿಯೇ ಹುಡುಕಿಕೊಂಡು ಬಂದಿದೆ.
Saturday, February 13, 2010
ಕತ್ತಲ ಕೋಣೆ ಸೇರಿದ ಛಾಯಾಚಿತ್ರ ಮಾರಾಟಗಾರರು!
ಇನ್ನು ಕೆಲ ಉದ್ಯೋಗಗಳು ಅಧುನಿಕತೆಯ ಕೊಡುಗೆ ಎಂದು ಪರಿಗಣಿಸುವ ರೀತಿಯದ್ದು. ಈ ಕೆಲಸಗಳಿಗೆ ಹೆಚ್ಚು ಸಾಮಾಜಿಕ ಗೌರವ ಮತ್ತು ಅದಾಯ ಇರುತ್ತದೆ. ಆದರೆ ಈ ಎರಡರ ಮಧ್ಯೆ ಕೆಲ ಉದ್ಯೋಗಗಳಿರುತ್ತವೆ. ಅವುಗಳು ಅಧುನಿಕತೆಯ ಕೊಡುಗೆಗಳಾದರೂ ಅವಕ್ಕೆ ಸಮಾಜದಲ್ಲಿ ಗೌರವ ಮತ್ತು ನಿಶ್ಚಿತ ಅದಾಯ ಇರುವುದಿಲ್ಲ. ಇಂತಹ ಉದ್ಯೋಗಗಳಲ್ಲಿ ನಿರತರಾಗಿರುವವರಿಗೆ ಯಾವುದೇ ಭದ್ರತೆಗಳಿರುವುದಿಲ್ಲ. ಯಾಕೆಂದರೆ ಅಧುನಿಕತೆ ಎಂಬುದು ತುಂಬ ತುಂಬ ಚಲನಶೀಲ. ಅಲ್ಲಿ ನಿನ್ನೆಯ ಹೊಸತು ಇಂದಿನ ಹಳತು ಎಂಬ ಸ್ಥಿತಿ. ಅದಕ್ಕಿಂತ ಹೆಚ್ಚಾಗಿ ಇಂದು ಅಧುನಿಕತೆ ಎಂಬುದು ಒಬ್ಬ ವ್ಯಕ್ತಿಯನ್ನು ಸ್ವಾವಲಂಬಿಯನ್ನಾಗಿಸುವ ಆಥವಾ ಅವಲಂಬಿಸುವುದಾದರೆ ದೊಡ್ಡ ದೊಡ್ಡ ಕಂಪೆನಿಗಳನ್ನೇ ಅವಲಂಬಿಸುವಂತೆ ಮಾಡುವ ಗುಪ್ತ ಅಜೆಂಡಾ ಹೊಂದಿದೆ. ಅದ್ದರಿಂದ ಈ ಅಧುನಿಕತೆ ಕೊಡುಗೆಗಳನ್ನೇ ನಂಬಿ ಬದುಕು ಕಟ್ಟ ಹೊರಟ್ಟಿದ್ದ ಬಹಳಷ್ಟು ಜನ ಬೀದಿಗೆ ಬಿದ್ದಿದ್ದಾರೆ, ಬೀಳುತ್ತಿದ್ದಾರೆ.
ಇದಕ್ಕೆ ತಾಜಾ ಉದಾಹರಣೆ ಎಂದರೆ ಪ್ರವಾಸಿ ತಾಣಗಳಲ್ಲಿ ಅಲ್ಲಿನ ಛಾಯಾಚಿತ್ರ ಮಾರಿ ಬದುಕ ಬಂಡಿ ಎಳೆಯುತ್ತಿದ್ದವರ ಕಥೆ.
ಕೆಲ ವರ್ಷಗಳ ಹಿಂದೆ ನೀವು ರಾಜ್ಯದ ಯಾವುದೇ ಪ್ರವಾಸಿ ತಾಣಗಳಿಗೆ ಹೋದರೂ ಇಂತವರು ದಂಡಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ’ಇಪ್ಪತ್ತು ರೂಪಾಯಿಗೆ ೧೦ ಪೋಟೋ’ ಎಂದು ಬೊಬ್ಬೆ ಹಾಕುತ್ತ, ’ನಿಮ್ಮ ಭೇಟಿಯ ನೆನಪಿಗೆ ಇರಲಿ’ ಎಂದು ಹೇಳುತ್ತ ಪೋಟೋ ಕೊಟ್ಟು ನಮ್ಮ ನೆನಪಿನ ಮತ್ತು ಅವರ ಅನ್ನದ ಬುತ್ತಿ ತುಂಬಿಸಿ ಕೊಳ್ಳುತ್ತಿದ್ದರು.
ಅದರಲ್ಲೂ ಮೈಸೂರು, ನಂಜನ ಗೂಡು, ಬೆಂಗಳೂರಿನ ಲಾಲ್ಭಾಗ್, ಕಬ್ಬನ್ ಪಾರ್ಕ್, ಬೇಲೂರು, ಹಳೆಬೀಡು, ಬಾದಾಮಿ, ಹಂಪಿಗಳಲ್ಲಿ ಇಂತಹವರ ಸಂಖ್ಯೆ ಬಹಳಷ್ಟಿತ್ತು.
ಈಗ ಆ ನೆನಪಿನ ಪಳೆಯುಳಿಕೆಯೆಂಬಂತೆ ಕೆಲ ಮಂದಿ ಮಾತ್ರ ಈ ಕೆಲಸ ನಿರತರಾಗಿದ್ದಾರೆ. ಅದೂ ಒಲ್ಲದ ಮನಸ್ಸಿನಿಂದ!
ಇದಕ್ಕೆಲ್ಲ ಕಾರಣ ಡಿಜಿಟಲ್ ಕ್ಯಾಮರಾ ತಂದಿಟ್ಟ ಪೋಟೊ ಕ್ರಾಂತಿ!
ಮ್ಯೆಸೂರಿನ ಜಗದ್ವಿಖ್ಯಾತ ಚಾಮುಂಡೇಶ್ವರಿ ದೇಗುಲದ ಮುಂದೆ ಕಳೆದ ೧೫ ವರ್ಷಗಳಿಂದ ಇದನ್ನೇ ವೃತ್ತಿಯಾಗಿಸಿಕೊಂಡಿರುವ ಮಣಿಕಂಠರನ್ನು ಮಾತನಾಡಿಸಿದಾಗ ಅವರು ಹೇಳಿದ್ದು, ಹಿಂದೆ ನಮಗೆ ದಿನಕ್ಕೆ ೩೦೦ ರೂಪಾಯಿಗಳಷ್ಟು ವ್ಯಾಪಾರವಾಗುತ್ತಿತ್ತು, ಈಗ ೧೦೦ ರೂ ಆದರೆ ಅದೇ ಹೆಚ್ಚು. ಈಗ ಜನರು ತಮಗೆ ಬೇಕಾದ ಚಿತ್ರಗಳನ್ನು ತಾವೇ ತೆಗೆದುಕೊಂಡು ಹೋಗುತ್ತಿದ್ದಾರೆ, ಇದರಿಂದ ನಮ್ಮ ಹೊಟ್ಟೆಗೆ ತಣ್ಣೀರೇ ಗತಿ ಎಂಬಂತಾಗಿದೆ
ಇಂದು ಮೂರರ ಹರೆಯದ ಮಗುವಿನಿಂದ ಹಿಡಿದು ೯೦ರ ಮುದುಕನ ವರೆಗೆ ಎಲ್ಲರೂ ಡಿಜಿಟಲ್ ಕ್ಯಾಮೆರ ಬಳಸುತ್ತಿದ್ದಾರೆ. ಅಲ್ಲಿ ತಮಗೆ ಬೇಕಾದ ಪೋಟೋ ತೆಗೆದುಕೊಳ್ಳುವ ಸ್ವಾತಂತ್ರ್ಯವಿರುತ್ತದೆ ಹಾಗೆಯೇ ಬೇಡದ ಪೋಟೋಗಳನ್ನು ನಿವಾಳಿಸಿಕೊಳ್ಳಬಹುದು. ಇದರಿಂದ ನಮಗೆ ವೈಯುಕ್ತಿಕವಾಗಿ ತುಂಬ ಲಾಭವಿದೆ. ಆದರೆ ಸಾಮಾಜಿಕವಾಗಿ ನೋಡಿದಾಗ ನೂರಾರು ಕುಟುಂಬಗಳು ಬೇರೊಂದು ಉದ್ಯೋಗವನ್ನರಸ ಬೇಕಾಗಿ ಬಂದಿದೆ. ಅಲ್ಲೊಂದು ಸ್ಥಿತ್ಯಂತರವೇ ನಡೆದು ಹೋಗಿದೆ.
ಇದೇ ವೃತ್ತಿ ನಿರತ ಗೋವಿಂದ ರಾಜುವನ್ನು ಮಾತನಾಡಿಸಿದಾಗ, ನಮಗೆ ಬೇರೊಂದು ವೃತ್ತಿ ಮಾಡೋಣ ಎಂದರೆ ಅದು ಗೊತ್ತಿಲ್ಲ, ಈ ಕೆಲಸ ನಂಬಿದರೆ ಬದುಕು ಸಾಗೋದಿಲ್ಲ, ಒಟ್ಟಿನಲ್ಲಿ ನಮಗೆ ಏನೂ ಮಾಡಬೇಕೆಂದೇ ಗೊತ್ತಾಗುತ್ತಿಲ್ಲ.
ಈ ಪೋಟೋ ಮಾರುತ್ತಿದ್ದ ಪರಂಪರೆ ಒಳ್ಳೆದು ಅಂತ ನಾನು ಹೇಳುತ್ತಿಲ್ಲ, ಇವರಿಂದ ಮೋಸ ಹೋದವರು ಮತ್ತು ಬೈಗುಳ ತಿನ್ನಬೇಕಾದ ಪ್ರಸಂಗ ಎದುರಿಸಿದ ಅನೇಕ ಸಂದರ್ಭಗಳು ಎದುರಾದದ್ದು ಇದೆ. ಆದೇನೇ ಆಗಿದ್ದರೂ ಕೂಡ ನಮ್ಮ ಹಿಂದಿನ ಎರಡು ಪೀಳಿಗೆಯ ಪ್ರವಾಸಕ್ಕೆ ಮತ್ತದರ ನೆನಪಿಗೆ ತಮ್ಮದೆ ಕೊಡುಗೆ ನೀಡಿದ್ದ ವೃತ್ತಿಯೊಂದು ನಮ್ಮ ಕಣ್ಣೇದುರೇ ಕಾಲಗರ್ಭ ಸೇರುತ್ತಿರುವುದು ಮಾತ್ರ ದಿಟ.
Sunday, January 24, 2010
ಕಾಲೇಜುಗಳಲ್ಲಿನ ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಅಮೂಲಾಗ್ರ ಬದಲಾವಣೆಯಾಗಲಿ
ಬಹುಶ: ಹತ್ತನೇ ತರಗತಿ ತನಕ ಸ್ವಾತಂತ್ರ್ಯ ದಿನಾಚರಣೆಯಲ್ಲಿನ ಪಾಲ್ಗೊಳ್ಳುವಿಕೆಯ ಸಂಭ್ರಮ ಅನಂತರ ಎಂದಿಗೂ ನಮಗೆ ದಕ್ಕುವುದಿಲ್ಲ. ಕಾಲೇಜುಗಳಿಗೆ ಬಂದರೆ, ರಾಷ್ಟ್ರೀಯ ಹಬ್ಬಗಳೆಂಬುದು ಕ್ಯಾಲೆಂಡರಿನಲ್ಲಿ ಕೆಂಪು ಅಂಕಿಯಲ್ಲಿ ಬರೆದಿಟ್ಟ ರಜಾದಿನವಾಗಿ ಬಿಡುತ್ತದೆ.
ಇಲ್ಲಿ ಇಂತಹ ದಿನಾಚರಣೆಗಳ ನಿರ್ವಹಣೆಯ ಜವಾಬ್ದಾರಿ ಎನ್ಎಸ್ಎಸ್, ಎನ್ಸಿಸಿ ಮುಂತಾದವುಗಳ ಕರ್ತವ್ಯ ಎಂಬ ಭಾವನೆ. ಅಥವಾ ಇದಕ್ಕೆಂದೇ ರಚಿಸಲ್ಪಟ್ಟಿರುವ ಸಮಿತಿ ಈ ಕಾರ್ಯ ನಿರ್ವಹಿಸುತ್ತದೆ. ಅಂದರೆ ವಿದ್ಯಾರ್ಥಿಗಳ ಸಾಮೂಹಿಕ ಪಾಲ್ಗೋಳ್ಳುವಿಕೆಯೇ ಇರುವುದಿಲ್ಲ! ಆ ಕಾರಣದಿಂದ ಇದು ಹತ್ತರ ಜತೆ ಹನ್ನೊಂದನೇ ರಜಾ ದಿನವಾಗುತ್ತದೆ. ಅದ್ದರಿಂದ ಕಾಲೇಜುಗಳಲ್ಲಿನ ಈ ದಿನದ ಆಚರಣೆಯಲ್ಲಿ ಅಮೂಲಾಗ್ರ ಬದಲಾವಣೆಯಾಗಲೇಬೇಕು.
ಈ ದಿನಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸದಿದ್ದ ವಿದ್ಯಾರ್ಥಿಗಳಲ್ಲಿ ದೇಶಪ್ರೇಮವಿಲ್ಲ ಎಂದರ್ಥವಲ್ಲ. ಈ ದಿನದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅವರ ದೇಶಪ್ರೇಮವನ್ನು ಪ್ರಕಟಿಸುವ ಒಂದು ವಿಧಾನವಷ್ಟೇ. ಈ ಸತ್ಯವನ್ನು ಒಪ್ಪಿಕೊಂಡು ನಾವು ಮುಂದುವರಿಯೋಣ.
ಶಾಲೆಗಳಲ್ಲಿ ತುಂಬು ಉತ್ಸಾಹದಿಂದ ಭಾಗವಹಿಸುವ ವಿದ್ಯಾರ್ಥಿಯೊಬ್ಬ ಕಾಲೇಜು ಮೆಟ್ಟಿಲೇರಿದೊಡನೇ ಈ ಅಚರಣೆಯಿಂದ ಯಾಕೆ ವಿಮುಖನಾಗುತ್ತಾನೆ? ಶಾಲೆಗಳಲ್ಲಿ ಕಡ್ಡಾಯ ಭಾಗವಹಿಸುವಿಕೆಯ ಒತ್ತಡವಿರಬಹುದು, ನಾನದನ್ನು ನಿರಾಕರಿಸುವುದಿಲ್ಲ. ಆದರೆ ಅವರಲ್ಲಿ ಈ ಕಡ್ಡಾಯದ ಕಟ್ಟಪ್ಪಣೆಯನ್ನು ಮೀರಿದ ಸಂಭ್ರಮವಿದ್ದೇ ಇರುತ್ತದೆ. ಇಲ್ಲದಿದ್ದಲ್ಲಿ ಅವರಲ್ಲಿ ಆ ಉತ್ಸಾಹ ಕಂಡು ಬರಲು ಸಾಧ್ಯವೇ ಇಲ್ಲ. ಮತ್ತು ಈ ಉತ್ಸಾಹ ಹುಟ್ಟಲು ಕೂಡ ಅನೇಕ ಕಾರಣ ಮತ್ತು ವಿಷಯಗಳಿರುತ್ತವೆ.
ಇದು ನಾವೆಲ್ಲ ಯೋಚನೆ ಮಾಡುವ ಕಾರಣಗಳಿಗಿಂತ ಭಿನ್ನ. ಉದಾಹರಣೆಗೆ ಒಂದನೇ ತರಗತಿಯ ಮಗುವಿಗೆ ಸ್ವಾತಂತ್ರ್ಯವೆಂದರೇನು? ಅದನ್ನು ಯಾರು ಕೊಟ್ಟರು? ಯಾಕೆ ಕೊಟ್ಟರು? ಅದು ಅಲ್ಲಿವರೆಗೆ ಎಲ್ಲಿತ್ತು? ಹೇಗಿತ್ತು? ಈಗ ಹೇಗಿದೆ? ಅದಿಲ್ಲದಿದ್ದರೇ ಏನಾಗುತ್ತ್ತಿತ್ತು? ಅದನ್ನು ಪಡೆಯಲು ಏನು ಮಾಡಿದರು? ಹೋರಾಟವೆಂದರೇನು? ಬ್ರಿಟಿಷರು ಎಂದರೆ ಯಾರು? ಅವರ್ಯಾಕೆ ಕೆಟ್ಟವರಾಗಿದ್ದರು? ಮುಂತಾದ ಅದರ ಮುಗ್ದ ಮನಸ್ಸಿನ ಪ್ರಶ್ನೆಗಳಿಗೆ ಆ ದಿನ ಉತ್ತರ ಸಿಗುತ್ತದೆ. ಅಥವಾ ಆ ದಿನ ಅ ಮಗುವಿನ ನೃತ್ಯ, ಭಾಷಣ, ನಾಟಕ ಅಥವಾ ಇನ್ನೀತರ ಕಾರ್ಯಕ್ರಮಗಳಿರಬಹುದು. ಇಲ್ಲ, ಎಲ್ಲರೂ ಈ ದಿನವನ್ನು ಆಚರಿಸುತ್ತಾರೆ, ನಾನೂ ಆಚರಿಸುತ್ತೇನೆ ಅದ್ದರಿಂದ ನಾನೂ ’ಆ ಎಲ್ಲರೊಂದಿಗೆ’ ಗುರುತಿಸಿಕೊಂಡಂತಾಗುತ್ತದೆ ಎಂಬ ಕಾರಣಕ್ಕಾಗಿ ಆ ಸಂಭ್ರಮ ಹುಟ್ಟಿಕೊಂಡಿರಲುಬಹುದು.
ಆದೇನೇ ಆದರೂ ಅ ಮಗು, ಈ ದಿನದ ಆಚರಣೆಯಲ್ಲಿ ಭಾಗಿಯಾಗಿ ಒಂದು ರಜೆ ಕಳೆದುಕೊಂಡರು ಅದಕ್ಕಿಂತ ಮಿಗಿಲಾದ ಇನ್ನೇನಾನ್ನೋ ಪಡೆದುಕೊಂಡಿರುತ್ತದೆ. ಆದರೆ ಕಾಲೇಜಿಗಳಲ್ಲಿನ ಸ್ವಾತಂತ್ರ್ಯದಿನ ಆಚರಣೆ ಇಲ್ಲೇ ಎಡವಿದೆ ಎಂದೇ ನನಗನಿಸುತ್ತಿದೆ. ಕಾಲೇಜುಗಳಲ್ಲಿನ ಸ್ವಾತಂತ್ರ್ಯದಿನದ ಕಾರ್ಯಕ್ರಮಗಳು ತೀರಾ ನೀರಸ.
ಅದ್ದರಿಂದ ಕಾಲೇಜುಗಳಲ್ಲಿನ ರಾಷ್ಟ್ರೀಯ ಆಚರಣೆಗಳನ್ನು ಆಕರ್ಷಕಗೊಳಿಸುವ ನಿಟ್ಟಿನಲ್ಲಿ ಚಿಂತಿಸುವುದು ಅನಿವಾರ್ಯ. ಇಲ್ಲಿ ’ಅಕರ್ಷಕ’ ಅಂದರೆ ಮನರಂಜನಾ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಅಂದು ಆಯೋಜಿಸುವುದು ಎಂದಲ್ಲ.
ಇಂದು ಕಾಲೇಜುಗಳಲ್ಲಿ ಸ್ವಾತಂತ್ರ್ಯದಿನದ ಕಾರ್ಯಕ್ರಮವೆಂದರೆ ಧ್ವಜಾರೋಹಣ, ಜನಗಣಮಣ, ವಂದೇ ಮಾತರಂ, ಸಾರೇ ಜಹಾಂಸೇ ಅಚ್ಚಾ, ಮುಂತಾದ ರಾಷ್ಟ್ರಗೀತೆ ಅಥವಾ ದೇಶಭಕ್ತಿ ಗೀತೆಗಳ ಹಾಡುವಿಕೆ ಮತ್ತು ತದನಂತರ ಒಂದು ಸಭಾ ಕಾರ್ಯಕ್ರಮ ಅಮೇಲೆ ಸಿಹಿತಿಂಡಿ ಹಂಚುವಿಕೆ ಇಷ್ಟಕ್ಕೆಯೇ ಮುಗಿದು ಹೋಗುತ್ತಿದೆ.
ಇಲ್ಲಿ ಧ್ವಜಾರೋಹಣ ಮತ್ತದಕ್ಕೆ ಪೂರಕವಾಗಿರುವ ಕಾರ್ಯಕ್ರಮಗಳಲ್ಲಿ ನಮಗೆ ಒಂದಿನಿತೂ ಬದಲಾವಣೆ ಮಾಡಲು ಸಾಧ್ಯವಿಲ್ಲ ಮತ್ತು ದಲಾವಣೆ ಸಾಧೂವೂ ಅಲ್ಲ. ಆದರೆ ಉಳಿದ ಕಾರ್ಯಕ್ರಮಗಳನ್ನು ರಂಗೇರಿಸಬಹುದಲ್ಲವೇ?
ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ ದೇಶದಲ್ಲಿ ಹತ್ತಾರು ಸಮಸ್ಯೆಗಳಿದ್ದವು, ಇಂದೂ ಅವೇ ಸಮಸ್ಯೆಗಳಿವೆ ಅದರೊಂದಿಗೆ ಹೆಚ್ಚುವರಿಯಾಗಿ ಇನ್ನೂ ಕೆಲ ಸಮಸ್ಯೆಗಳು ಸೇರಿಕೊಂಡಿವೆ. ಅದರೆ ಈ ಎಲ್ಲ ಸಮಸ್ಯೆಗಳ ನಡುವೆ ಬ್ರಿಟಿಷ್ ಆಳ್ವಿಕೆಯೇ ದೊಡ್ಡ ಸಮಸ್ಯೆಯಾಗಿ ಕಂಡಿತು ಮತ್ತು ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ಜನರೆಲ್ಲ ಸಂಘಟಿತರಾದರು ಮತ್ತದರಲ್ಲಿ ಯಶ ಪಡೆದರು. ಇಂದು ನಮ್ಮ ಶಿಕ್ಷಣ ಮಟ್ಟ, ಜೀವನ ಮಟ್ಟ, ಆರೋಗ್ಯ ಮಟ್ಟ ಎಲ್ಲವೂ ಹೆಚ್ಚಾಗಿದೆ. ಆದರೆ, ನಾವು ಯಾವುದೇ ಒಂದು ಕಾರಣಕ್ಕೇ ಸಂಘಟಿತರಾಗಿಯೇ ಇಲ್ಲ. ಆದೂ ಒಟ್ಟಾಗಲೂ ಹತ್ತಾರು ಕಾರಣಗಳಿದ್ದರು!
ಸ್ವಾತಂತ್ರ್ಯದಿನದ ಆಚರಣೆಯ ಮೂಲಕ ನಾವು ಸಂಘಟಿತರಾಗುವ ಪ್ರಕ್ರಿಯೆ ಶುರು ಮಾಡಬಹುದು. ಅದು ಹೇಗೆಂದರೆ...
ಕರ್ನಾಟಕ ಸರಕಾರ ಯುವಜನರಲ್ಲಿ ಅದರಲ್ಲೂ ಕಾಲೇಜು ವಿದ್ಯಾರ್ಥಿಗಳಲ್ಲಿ ಭಯೋತ್ಪಾದನೆಯ ಬಗ್ಗೆ ಜಾಗೃತಿಯುಂಟು ಮಾಡಲು ಕಳೆದ ವರ್ಷ ಇದೇ ಸಮಯದಲ್ಲಿ ರಾಜ್ಯಾದ್ಯಂತ ’ಭಯೋತ್ಪಾದನಾ ವಿರೋಧಿ ಜಾಗೃತಿ ಅಭಿಯಾನ’ ಆಯೋಜಿಸಿದ್ದು ನಿಮಗೆ ನೆನಪಿರಬಹುದು. ಆ ಕಾರ್ಯಕ್ರಮ ಯಶ ಕಂಡಿತು. ಕೆಲ ಮಂದಿ ರಾಜಕೀಯ ಕಾರಣಕ್ಕಾಗಿ ಈ ಅಭಿಯಾನವನ್ನು ವಿರೋಧಿಸಿದರೂ ಕೂಡ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಸಂಘಟಿತರಾಗಿಯೇ ಭಾಗವಹಿಸಿದರು. ಅಂದರೆ ಭಯೋತ್ಪಾದನೆ ಎಂಬ ರಕ್ಕಸನಿಗೆ ನಮ್ಮೆಲ್ಲರನ್ನು ಒಗ್ಗೂಡಿಸುವ ಸಾಮರ್ಥ್ಯವಿದೆ ಎಂದಾಯಿತಲ್ಲವೇ? ಹಾಗೇ ಸರಕಾರ ಮನಸ್ಸು ಮಾಡಿದರೆ ಏನನ್ನೂ ಮಾಡಬಲ್ಲದು ಎಂದೂ ಕೂಡ ಅಲ್ಲೇ ಸಾಬೀತಾಗಿದೆ.
ವಾಸ್ತವವಾಗಿ ನಮ್ಮನ್ನು ಈಗ ಕಾಡುತ್ತಿರುವ ಭಯೋತ್ಪಾದನಾ ಸಮಸ್ಯೆ ಬಹಳ ದೊಡ್ಡ ಇತಿಹಾಸವನ್ನು ಹೊಂದಿಲ್ಲ. ಮತ್ತು ಈ ಸಮಸ್ಯೆಯಿಂದ ದೇಶದ ಸಮಸ್ತರು ತೊಂದರೆಗೀಡಾಗಿದ್ದಾರೆ ಎಂದು ಹೇಳುವುದು ಕೂಡ ಸರಿಯಲ್ಲ. ಇಂದು ದೇಶದಲ್ಲಿ ಭಯೋತ್ಪಾದನೆಯ ಕಾರಣದಿಂದ ಸಾಯುವುದಕ್ಕಿಂತ ಹೆಚ್ಚಾಗಿ ಆತ್ಮಹತ್ಯೆ, ಅಪಘಾತ, ಸೂಕ್ತ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ಸಿಗದಿರುವುದು, ಮೂಡನಂಬಿಕೆ ಮುಂತಾದ ಕಾರಣಗಳಿಂದ ಸಾಯುತ್ತಾರೆ. ಹಾಗೆಯೇ ಜಾತಿಯತೆ, ಭ್ರಷ್ಟಾಚಾರ, ಪ್ರಾದೇಶಿಕತೆ, ನಿರುದ್ಯೋಗ, ಬಡತನ, ರೈತರ ಸಮಸ್ಯೆ, ವಿದೇಶಿ ವಸ್ತುಗಳ ಮೇಲಿನ ಮೋಹ, ದೇಶದ ಬಗೆಗಿನ ಅಸಡ್ಡೆ ಮುಂತಾದ ಅಪಾಯಕಾರಿ ಸಮಸ್ಯೆಗಳಿವೆ.
ಹಿಂದೆ ಬ್ರಿಟಿಷರನ್ನು ಓಡಿಸಿ ಒಂದು ಸಮಸ್ಯೆಗೆ ಮಂಗಳ ಹಾಡಿದ ನಾವು ಉಳಿದ ಸಮಸ್ಯೆಗಳ ಜೊತೆಜೊತೆಗೆ ಬದುಕುವ ಜೀವನವನ್ನೂ ರೂಢಿಸಿಕೊಂಡೆವು. ಇಂದು ಭಯೋತ್ಪಾದನೆಯ ವಿರುದ್ದದ ಹೋರಾಟದಲ್ಲೂ ಇದೇ ಮರುಕಳಿಸುತ್ತದೆ ಎಂದು ನನಗನಿಸುತ್ತಿದೆ. ಭಯೋತ್ಪಾದನೆ ನಾಶವಾಗಬಹುದು ಮತ್ತು ಆಗುತ್ತದೆ. ಆದೇ ಉಳಿದ ಸಮಸ್ಯೆಗಳು ಆಳಿಯದೇ ಉಳಿದು ಬಿಡುತ್ತವೆ. ಆಗ?
ಪ್ರತಿ ವರ್ಷ ರಾಷ್ಟ್ರೀಯ ದಿನಗಳಿಗೆ ರಾಷ್ಟ್ರವ್ಯಾಪಿ ಒಂದು ಗುರಿ, ಉದ್ದೇಶ ಅಥವಾ ಅಭಿಯಾನವನ್ನು ಸರಕಾರ ಇಟ್ಟುಕೊಳ್ಳಬೇಕು. ಎಲ್ಲ ರಾಷ್ಟ್ರಿಯ ಹಬ್ಬಗಳಿಗೆ ಇದು ಸಾಧ್ಯವಾಗದೇ ಹೋದರು ಯಾವುದಾದರೂ ಒಂದು ಹಬ್ಬಕ್ಕೆ ಖಂಡಿತವಾಗಿ ಮಾಡಬಹುದು. ಉದಾಹರಣೆಗೆ ಈ ವರ್ಷದ ಗಣರಾಜ್ಯೋತ್ಸವವನ್ನು ಭ್ರಷ್ಟಾಚಾರ ವಿರೋಧಿ ಅಭಿಯಾನವನ್ನಾಗಿಸಿಕೊಂಡು ಆ ಮೂಲಕ ಭ್ರಷ್ಟಾಚಾರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ದೇಶಾದ್ಯಂತ ಮಾಡುತ್ತೇವೆ ಎಂದು ಕೇಂದ್ರ ಸರಕಾರವೇ ಘೋಷಿಸಬೇಕು. ಮತ್ತು ತಿಂಗಳ ಆರಂಭದಿಂದಲೇ ಆ ವರ್ಷದ ಗುರಿಗೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ದೇಶದ ಗಲ್ಲಿ ಗಲ್ಲಿಗೂ ಸಂದಿಗೊಂದಿಗೂ ಈ ಅಭಿಯಾನ ತಲುಪಬೇಕು. ಜನವರಿ ೨೬ಕ್ಕೇ ಈ ಅಭಿಯಾನದ ಸಮಾಪನಾ ಜರುಗುವಂತೆ ಯೋಜನೆ ಮಾಡಬೇಕು. ಇದಕ್ಕೆ ಕರ್ನಾಟಕ ಸರಕಾರದ ಭಯೋತ್ಪಾದನಾ ವಿರೋಧಿ ಅಭಿಯಾನದ ಮಾದರಿಯನ್ನೇ ತೆಗೆದುಕೊಳ್ಳಬಹುದು.
ಪ್ರತಿ ವರ್ಷ ಒಂದೊಂದು ಉದ್ದೇಶವಿಟ್ಟುಕೊಂಡಾಗ ಯುವ ಜನತೆಗೆ ದೇಶದ ಹಲವಾರು ಸಮಸ್ಯೆಗಳ ಪರಿಚಯವಾಗುತ್ತದೆ. ಅದಕ್ಕೇನು ಕಾರಣ? ಪರಿಹಾರವೇನು?ಆ ಸಮಸ್ಯೆಯಲ್ಲಿ ಮತ್ತದರ ಪರಿಹಾರದಲ್ಲಿ ತಮ್ಮ ಪಾತ್ರವೇನು ಮುಂತಾದ ಅಂಶಗಳು ಅವರಿಗೆ ತಿಳಿಯುತ್ತದೆ. ಇದರರ್ಥ ಅವರಿಗೆ ದೇಶದ ಜ್ವಲಂತ ಸಮಸ್ಯೆಗಳ ಆರಿವು ಇಲ್ಲವೆಂದಲ್ಲ. ಆರಿವಿದೆ, ಆದರೆ ಆ ಆರಿವು ಸಾಮೂಹಿಕವಾದಾಗ ಪ್ರಯತ್ನವೂ ಸಾರ್ವತ್ರಿಕವಾಗುತ್ತದೆ ಮತ್ತು ಕಣ್ಣಿಗೆ ಕಾಣಿಸುವ ಬದಲಾವಣೆ ಸಾಧ್ಯವಾಗುತ್ತದೆ. ಸಮಾನ ಮನಸ್ಕರು ಒಟ್ಟು ಸೇರಿ ಒಂದು ವ್ಯವಸ್ಥಿತ ಬದಲಾವಣೆ ಸಂಭವಿಸುತ್ತದೆ.
ಇದನ್ನು ಮನಗಂಡ ಬಾಲಗಂಗಾಧರ ತಿಲಕರು ಸ್ವಾತಂತ್ರ್ಯ ಪೂರ್ವದಲ್ಲಿ ಸಾರ್ವಜನಿಕ ಗಣೇಶೋತ್ಸವಗಳನ್ನು ಆಚರಿಸುವುದನ್ನೇ ಒಂದು ಸಾಧನವನ್ನಾಗಿಸಿಕೊಂಡು ಜನರನ್ನು ಸಂಘಟಿಸಿ ಬ್ರಿಟಿಷರ ವಿರುದ್ದದ ಹೋರಾಟಕ್ಕೇ ಅಣಿಗೊಳಿಸಿದ್ದು.
ನಾನು ಹೇಳುತ್ತಿರುವುದೂ ಅದೇ, ಈ ದಿನಾಚರಣೆಯ ನೆವದಲ್ಲಿ ನಾವೆಲ್ಲಾ ಒಂದಾಗಿ ನಮ್ಮನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳ ಬಗ್ಗೆ ಅರಿತು ಕೊಂಡು ಅದರ ವಿರುದ್ದ ಹೋರಾಡೋಣ. ಕನಿಷ್ಟ ಪಕ್ಷ ಈ ಸಮಸ್ಯೆಗಳು ಒಂದು ಸವಾಲಾಗಿಯಾದರೂ ಪರಿವರ್ತನೆಗೊಳ್ಳಬಹುದು.
ಉದಾಹರಣೆಗೆ ಬಹುಪಾಲು ರಸ್ತೆ ಅಪಘಾತಗಳು ಬೇಜವಾಬ್ದಾಯಿಂದಲೇ ಘಟಿಸುತ್ತವೇ ಎಂಬುದು ಸರ್ವವೇದ್ಯ. ಇದರ ಆರಿವು ಜನರಿಗೆ ತಮ್ಮ ಅನುಭವ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಗುವ ವರದಿಗಳಿಂದ ದಕ್ಕಿದೆ. ಆದರೆ ಅದನ್ನು ಓದಿದ ಬಹುಪಾಲು ಮಂದಿ ಹೆಚ್ಚೆಂದರೆ ಒಂದು ನಿಟ್ಟುಸಿರು ಬಿಟ್ಟು ಸುಮ್ಮನಾಗುತ್ತಾರೆ. ಆದರೆ ರಸ್ತೆ ನಿಯಮಗಳನ್ನು ಪಾಲಿಸುವುದು ಕೂಡ ದೇಶಪ್ರೇಮದ ಒಂದು ಭಾಗ ಅಥವಾ ಅಂಗವೆಂದಾದಾಗ ಜನರ ಚಿಂತನಕ್ರಮದಲ್ಲಿ ಬದಲಾವಣೆ ಸಾಧ್ಯವಾಗಬಹುದು.
ಯಾಕೆಂದರೆ ನಾವು ದೇಶಪ್ರೇಮವೆಂದರೆ ಪರಕೀಯರ ವಿರುದ್ಧ ಹೋರಾಡುವುದು, ಹೋರಾಡುವವರನ್ನು ಹುರಿದುಂಬಿಸುವುದು ಮತ್ತು ಅಗತ್ಯವಾದರೆ ತಾವೇ ಬಲಿದಾನ ಮಾಡುವುದು ಎಂಬುದಕ್ಕಷ್ಟೇ ಸೀಮಿತಗೊಳಿಸಿಕೊಂಡಿದ್ದೇವೆ. ಮತ್ತೋಬ್ಬರ ಜೀವವನ್ನು ಅಥವಾ ಜೀವನವನ್ನು ರಕ್ಷಿಸುವುದು ಅಥವಾ ಗೌರವಿಸುವುದಕ್ಕೂ ದೇಶಪ್ರೇಮಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ಮನೋಭಾವ ನಮ್ಮದು. ’ಇಲ್ಲ, ನೀನು ನಿನ್ನ ದೇಶಪ್ರೇಮವನ್ನು ಈ ಮೂಲಕ ಪ್ರಕಟಿಸಬಹುದು’ ಅಂದಾಗ ಮತು ಈ ಮನೋಭಾವ ಎಲ್ಲ ಕಡೆ ಒಮ್ಮೆಗೆ ಹಬ್ಬಿದಾಗ ಎಲ್ಲೋ ಒಂದು ಕಡೆ ರಸ್ತೆ ನಿಯಮಗಳನ್ನು ಪಾಲಿಸದಿರುವುದು ದೇಶದ್ರೋಹಕ್ಕೆ ಸಮಾನ ಎಂಬ ಭಾವ ನಮ್ಮ ಪ್ರಜ್ಞೆಯೊಳಗೆ ಸೇರಿಕೊಳ್ಳುತ್ತದೆ. ಅಷ್ಟಾದರೆ ಜನರಲ್ಲಿ ಜಾಗೃತಿ ಮೂಡಿದಂತೆಯೇ. ಇದಾಗಬೇಕಾದರೆ ಈ ಆರಿವು ಜನ ಮಾನಸಕ್ಕೇ ಸುನಾಮಿ ರೀತಿಯಲ್ಲಿ ಅಪ್ಪಳಿಸಬೇಕು. ಈ ಅಪ್ಪಳಿಸುವಿಕೆ ಸೃಷ್ಟಿಸಲು ಈ ರೀತಿ ಏಕಕಾಲದಲ್ಲಿ ದೇಶವ್ಯಾಪಿ ಜಾಗೃತಿ ಹುಟ್ಟಿಸುವ ಪ್ರಕ್ರಿಯೆ ಅನಿವಾರ್ಯ. ಆದಕ್ಕೇ ರಾಷ್ಟ್ರೀಯ ಹಬ್ಬಗಳಿಗಿಂತ ಮಜಬೂತಾದ ವೇದಿಕೆ ಮತ್ತು ಸಂದರ್ಭ ಬೇರ್ಯಾವುದಿದೆ?
ಇದೇ ಮಾತನ್ನು ಭ್ರಷ್ಟಾಚಾರಕ್ಕೂ ಅನ್ವಯಿಸಬಹುದು. ಭ್ರಷ್ಟ = ದೇಶದ್ರೋಹಿ ಎಂಬ ಸಮೀಕರಣ ಹುಟ್ಟಿಕೊಂಡದ್ದೇ ಆದರೆ ದೇಶಕ್ಕೇ ಬೇರೇನೂ ಬೇಕಾಗಿಲ್ಲ. ಇಲ್ಲಿ ಕೊಡುವವ ತೆಗೆದುಕೊಳ್ಳುವವ ಇಬ್ಬರೂ ಪರಮ ಪಾಪಿಗಳು ಎಂಬ ಮನೋಭಾವ ಸೃಷ್ಟಿಯಾದರೆ ಸಾಕು. ಭ್ರಷ್ಟರಿಗೆ ಸಾಮಾಜಿಕ ಬಹಿಷ್ಕಾರ ಕಟ್ಟಿಟ್ಟ ಬುತ್ತಿ. ಇದು ಖಂಡಿತ ತಿರುಕನ ಕನಸಲ್ಲ. ಸಮಾಜದ ಪಾಲ್ಗೊಳ್ಳುವಿಕೆ ಇದ್ದಲ್ಲಿ ಸುಲಭವಾಗಿ ನನಸಾಗಬಹುದಾದ ಕನಸು.
ನಾನ ಕಾರಣ, ಉದ್ದೇಶಗಳಿಂದ ನಾನ ಸ್ತರಗಳಲ್ಲಿ ಚದುರಿ ಹೋಗಿರುವ ದೇಶವಾಸಿಗಳನ್ನು ಕಂಗೆಡಿಸಿರುವ, ಕಂಗೆಡಿಸುತ್ತಿರುವ ಸಮಸ್ಯೆಗಳನ್ನೇ ದಾರವಾಗಿಸಿಕೊಂಡು ಅವರನ್ನು ಬೆಸೆಯುವ ಕೆಲಸ ಮಾಡಿದ್ದೆ ಆದಲ್ಲಿ ಈ ಸಮಸ್ಯೆಗಳು ನಮ್ಮ ನಿಯಂತ್ರಣಕ್ಕೆ ಬರುತ್ತವೆ. ಜನರಲ್ಲೂ ಪರಸ್ಪರ ವಿಶ್ವಾಸ ಮೂಡುತ್ತದೆ. ಅದೆಲ್ಲದಕ್ಕಿಂತ ಹೆಚ್ಚಾಗಿ ಯುವಜನತೆ ದೇಶದ ಮುಖ್ಯವಾಹಿನಿಗೆ ರಾಜಪಥದಲ್ಲೇ ತಲುಪಿದಂತಾಗುತ್ತದೆ.
ಇದರಿಂದ ಇಂತಹ ಮಹಾನ್ ದಿನಗಳ ಆಚರಣೆಗೂ ಒಂದು ಕಳೆ ಬರುತ್ತದೆ, ಸಾರ್ಥಕತೆ ಲಭಿಸುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಯೋಚಿವುದೇ?
Friday, January 1, 2010
ಎಲ್ಲ ಜವಾಬ್ದಾರಿಗಳು ಪತ್ರಕರ್ತನದ್ದೇಯಲ್ಲ !
ಹೀಗೊಂದು ನೈಜ ಮೆಸೆಜ್ ಸಂಭಾಷಣೆ.
ಇವತ್ತು ನೀವು ಸೂಪರ್ಬ್ ಆಗಿ ಕಾಣುತ್ತಿದ್ದೀರಿ...
ಥ್ಯಾಂಕ್ಯೂ, ಹು ಇಸ್ ದಿಸ್?
ನಾನು ನಿಮ್ಮ ಅಭಿಮಾನಿ...
ಅಭಿಮಾನಿಯಾ? ವೆರಿ ನೈಸ್. ನೀವ್ಯಾಕೆ ನನ್ನ ಅಭಿಮಾನಿ?
ನಿಮ್ಮ ಡ್ರೆಸ್ ಸೆನ್ಸ್, ಮಾತನಾಡೋ ಸ್ಟೈಲ್, ನಿಮ್ಮ ಕಣ್ಣು... ಅದ್ಬುತ ಅದಕ್ಕೆ...
ನೀವು ನನ್ನನ್ನು ಎಷ್ಟು ದಿನದಿಂದ ನೋಡುತ್ತಿದ್ದೀರಿ?
೧೫ ದಿನದಿಂದ...
ಹೌದಾ! ನಿಮ್ಮ ಹೆಸರು ಹೇಳಿ ಪ್ಲೀಸ್.
ಇಲ್ಲ, ನೀವೇ ಹುಡುಕಿ... ಹೀಗೆ ಮುಂದುವರಿದ ಈ ಮೆಸೆಜ್ ಅವಳು ತನ್ನ ಮನೆ ವಿಳಾಸ ಕೊಡುವ ತನಕ ತಲುಪಿತ್ತು. ನಂತರ ನಾವು ಭೇಟಿಯಾಗುವ ದಿನ, ಸ್ಥಳ ಎಲ್ಲ ನಿಗದಿಯಾಯಿತು ಕೂಡ.
ವಾಸ್ತವವಾಗಿ ಆ ಹುಡುಗಿ ನನಗೆ ಪರಿಚಿತಳು. ಅವಳಿಗೂ ನನ್ನ ಪರಿಚಯವಿದ್ದೆ ಇದೆ. ಆದರೆ ಇದು ನನ್ನ ನಂಬರ್ ಮತ್ತು ನಾನು ಈ ರೀತಿ ’ಆಟವಾಡಿಸುತ್ತಿದ್ದೇನೆ’ ಎಂದು ಅವಳಿಗೆ ಗೊತ್ತಿರಲಿಲ್ಲ.
ನೀವು ಅಂಗನವಾಡಿಯಲ್ಲಿ ಟೀಚರಾ? ಎಂಬ ಪ್ರಶ್ನೆಯೊಂದಿಗೆ ಮಾತು ಶುರುಮಾಡಿ, ಹುಡುಗಿಯರನ್ನು ಮರಳು ಮಾಡಿ ಬುಟ್ಟಿಗೆ ಹಾಕಿಕೊಂಡು ಮದುವೆಯಾಗುವುದಾಗಿ ನಂಬಿಸಿ ನಂತರ ಸೈನೈಡ್ ಕೊಟ್ಟು ಬರ್ಬರವಾಗಿ ಕೊಲೆ ಮಾಡುತ್ತಿದ್ದ ಮೋಹನ್ ಕುಮಾರ್ನ ವಿದ್ಯೆಗೂ, ಈ ತಂತ್ರಕ್ಕೂ ಏನಾದರೂ ವ್ಯತ್ಯಾಸವಿದೆಯಾ? ಅದರೂ ನಮ್ಮ ಹುಡುಗಿಯರು ಬುದ್ದಿ ಕಲಿತಿಲ್ಲ! ಸಮಾಜ, ಮಾಧ್ಯಮಗಳಿಗೆ ಮತ್ತು ಪೊಲೀಸರಿಗೆ ಶಾಪ ಹಾಕುವುದನ್ನು ಬಿಟ್ಟಿಲ್ಲ!
ಮೇಲೆ ನಾ ಹೇಳಿದ ರೀತಿಯ ಮೊಬೈಲ್ ಚ್ಯಾಟ್ಗಳು ಸಾಮಾನ್ಯವಾಗಿ ನಡೆಯುತ್ತದೆ. ಅದರೆ ಅದು ಒಂದು ಮಿತಿಯನ್ನು ದಾಟಿದರೆ ಮೋಹನ್ ಕುಮಾರ್ ನಂತವರು ಹುಟ್ಟಿಕೊಳ್ಳುತ್ತಾರೆ.
ಮೋಹನ್ ಕುಮಾರ್ನ ಪಾಶವೀ ಕೃತ್ಯ ಬೆಳಕಿಗೆ ಬರುತ್ತಲೇ ಆತನ ಪ್ರತಿ ಚಲನವಲನಗಳ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಿದವು. ಈ ನಡುವೆ ’ಲವ್ ಜಿಹಾದ್’ ಎಂಬ ಪಿಡುಗಿನ ಬಗೆಯೂ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ನೂರಾರು ಯುವತಿಯರು ’ಲವ್ ಜಿಹಾದ್’ಗೆ ಈಡಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರೀತಿಯ ನಾಟಕವಾಡಿ ಹುಡುಗಿಯರನ್ನು ವೇಶ್ಯಾವಟಿಕೆಗೆ ತಳ್ಳಿದ ಸಾಕಷ್ಟು ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾಗಿವೆ. ಇಷ್ಟೆಲ್ಲಾ ಅಗಬಾರದ ಅನಾಹುತಗಳಾಗುತ್ತಿದ್ದರೂ ಹುಡುಗಿಯರ ನಾಪತ್ತೆ ಮತ್ತು ಪರಾರಿ ಪ್ರಕರಣಗಳು ಮುಂದುವರಿಯುತ್ತಲೇ ಇದೆ.
ಎಲ್ಲರಿಗೂ ಗೊತ್ತಿರುವಂತೆ ಮಾಧ್ಯಮಗಳ ಮುಖ್ಯ ಜವಾಬ್ದಾರಿ ಜನರಿಗೆ ಮಾಹಿತಿ, ಶಿಕ್ಷಣ ಮತ್ತು ಮನರಂಜನೆ ನೀಡುವುದು. ಅದರಲ್ಲೂ ಮಾಧ್ಯಮಗಳು ಮಾಹಿತಿ ಮತ್ತು ಶಿಕ್ಷಣ ನೀಡಿದಾಗ ಜನರಲ್ಲಿ ’ಜಾಗ್ರತಿ’ ಮೂಡುತ್ತದೆ. ಈ ’ಜಾಗ್ರತಿ’ಯಿಂದ ಜನರು ಸಮಾಜದಲ್ಲಿ ಅಥವಾ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಶ್ರಮಿಸುತ್ತಾರೆ. ಅದ್ದರಿಂದ ಮಾಧ್ಯಮಗಳಿಗೆ ಸಮಾಜದಲ್ಲಿ ಅತ್ಯಂತ ಗೌರವಯುತ ಮತ್ತು ಜವಾಬ್ದಾರಿಯುತ ಸ್ಥಾನ.
ಮಾಧ್ಯಮಗಳು ಬಹುಪಾಲು ಸಂದರ್ಭದಲ್ಲಿ ಈ ಕೆಲಸವನ್ನು ನಿಷ್ಠೆಯಿಂದ ಮಾಡಿಕೊಂಡು ಬಂದಿವೆ. ಕೆಲ ಸಂದರ್ಭಗಳಲ್ಲಿ ಮತ್ತು ಕೆಲ ಮಾಧ್ಯಮಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆ, ವೈಭವೀಕರಣ, ನಿರ್ಲಕ್ಷ್ಯ ಮತ್ತು ತಮ್ಮ ’ಇಸಂ’ಗಳ ಮಿಶ್ರಣದಿಂದ ಪತ್ರಿಕಾಧರ್ಮಕ್ಕೆ ಚ್ಯುತಿಯಾಗಿರಬಹುದು. ಅದನ್ನು ಹೊರತು ಪಡಿಸಿ ಮತ್ತು ಕೆಲ ಬಾಲ ಬಡುಕ ಮತ್ತು ಪಕ್ಷ ನಿಷ್ಠ, ಮತ್ತು ವ್ಯಕ್ತಿ ನಿಷ್ಠ ಮಾಧ್ಯಮಗಳನ್ನು ಬದಿಗಿಟ್ಟು ನೋಡಿದರೆ ಇಂದಿಗೂ ಮಾಧ್ಯಮಗಳು ತಮ್ಮ ಮೂಲ ಆಶಯವನ್ನು ಮರೆಯದೆ ಜನರಲ್ಲಿ ಜಾಗ್ರತಿ ಮೂಡಿಸುವ ಕಾರ್ಯನಿರ್ವಹಿಸುತ್ತಿವೆ. ಆದರೆ ಸಮಾಜ ತಾನು ಜಾಗ್ರತ ಗೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಬಿದ್ದು ಕೊಂಡರೆ ಅದಕ್ಕೆ ಯಾರು ಹೊಣೆ?
ಮೋಹನ್ ಕುಮಾರ್ನ ಪ್ರಕರಣದ ಎಳೆ ಎಳೆಯನ್ನು ಜನರ ಮುಂದೆ ಬಿಚ್ಚಿಟ್ಟಿದ್ದರೂ ಕೂಡ ಓಡಿ ಸುಸ್ತಾಗುವವರ ಸಂಖ್ಯೆ ಕಡಿಮೆಯಾಗಿಲ್ಲ ಎಂದರೆ ಅದಕ್ಕೆ ಸಮಾಜವೇ ಕಾರಣ ಅಲ್ಲವೇ? ಈ ವಿಷಯದಲ್ಲಿ ಮಾಧ್ಯಮಗಳು ಜನರಲ್ಲಿ ಜಾಗ್ರತಿಯುಂಟು ಮಾಡುವ ಕೆಲಸವನ್ನು ಮಾಡಿದವು. ಅದ್ದರಿಂದ ಇಂದು ಈ ಜಿಲ್ಲೆಯ ಬಹುತೇಕ ಎಲ್ಲರಿಗೂ ಮೋಹನ್ ಕುಮಾರ್ನ ಕುಕೃತ್ಯಗಳ ಪರಿಚಯವಿದೆ ಆ ಮೂಲಕ ತಾವೂ ಕೂಡ ಯಾವ ರೀತಿ ಮೋಸದ ಜಾಲಕ್ಕೆ ಸಿಲುಕಬಹುದು ಎಂಬರಿವಿದೆ. ಹಾಗೆಯೇ ತಾವು ಅನೈತಿಕ ದಂಧೆಯ ಪಾಲಾಗಬಹುದು ಎಂಬುದು ಕೂಡ ತಿಳಿದಿದೆ. ಆದರೇನು ಪ್ರಯೋಜನ? ಓಡಿ ಹೋಗುವವರು ನಿಲ್ಲುತ್ತಲೇ ಇಲ್ಲ!
ಜಾಗತಿಕ ತಾಪಮಾನ ಏರಿಕೆಯ ದುಷ್ಪರಿಣಾಮದ ಬಗ್ಗೆ ಮಾಧ್ಯಮಗಳು ಕೆಲ ವರ್ಷಗಳ ಹಿಂದಿನಿಂದಿನಿಂದಲೇ ಜನರಲ್ಲಿ ಜಾಗ್ರತಿಯುಂಟು ಮಾಡುವ ಕೆಲಸ ಮಾಡಿದ್ದವು. ಆದರೆ, ಆ ಬಗ್ಗೆ ಯಾರೂ ಗಂಭೀರವಾಗಿ ಯೋಚಿಸಿರಲಿಲ್ಲ. ಯೋಚಿಸಿದ್ದರೂ ಕೂಡ ಅದನ್ನು ಸಂಘಟಿತರಾಗಿ ಆಡಳಿತರೂಡರ ಗಮನಕ್ಕೆ ತಂದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಾಡುವಲ್ಲಿ ವಿಫಲರಾಗಿದ್ದರು.
ಜಗತ್ತಿನ ತಾಪಮಾನ ಏರುತ್ತಿದೆ ಎಂಬುದಕ್ಕೆ ಸಾಕಷ್ಟು ಆಧಾರಗಳಿದ್ದವು ಮತ್ತು ಅದರಿಂದ ದುಷ್ಪರಿಣಾಮಗಳಾಗುತ್ತವೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳನ್ನು ವಿಜ್ಞಾನಿಗಳು ಇದೇ ಮಾಧ್ಯಮಗಳ ಮೂಲಕ ಜನರಿಗೆ ನೀಡಿದ್ದರು. ಆದರೆ ಸಮಾಜದ್ದು ಎಂದಿನ ’ಘನ’ ನಿದ್ದೆ. ಆದೇ ಯಾರೋ ಕಿಸಿಬಾಯಿ ದಾಸಯ್ಯ ಡಿಸೆಂಬರ್ ೨೧, ೨೦೧೨ಕ್ಕೆ ಪ್ರಳಯವಾಗುತ್ತದೆ ಎಂದದ್ದೇ ತಡ ಆ ಸುದ್ದಿ ಬೆಳಕಿನ ವೇಗದಲ್ಲಿ ಜನರ ನಡುವೆ ಓಡಾಡಿತ್ತು. ಟಿವಿಯಲ್ಲಿ ಬರುವ ಜ್ಯೋತಿಷಿಗಳು ನಾಯಿ ಮಲ ತಿಂದರೆ ನಿನ್ನ ಸಮಸ್ಯೆ ಪರಿಹಾರವಾಗುತ್ತದೆ ಎಂದರೆ ಅದನ್ನು ತಿನ್ನಲು ತಯಾರಾಗಿರುವವರಿದ್ದಾರೆ. ಆದೇ ಒಬ್ಬ ವಿಜ್ಞಾನಿ ಕುದಿಸಿದ ನೀರು ಕುಡಿಯಿರಿ ಎಂದರೆ ನಮಗೆ ಒಗ್ಗಿ ಬರುವುದಿಲ್ಲ. ಇಂದಿಗೂ ಮೂಢ ನಂಬಿಕೆಗಳಿಂದ ಹೊರಬರಲು ಸಾಧ್ಯವಾಗದ ಸಮಾಜದ ಮಧ್ಯೆ ವ್ಯೆಜ್ಞಾನಿಕ ಮನೋಭಾವ ಬಿತ್ತುವುದು ಅದೇಷ್ಟು ಕಷ್ಟ. ಈ ಮಿತಿಯಲ್ಲೂ ಮಾಧ್ಯಮಗಳು ವೈಜ್ಞಾನಿಕ ಮಾಹಿತಿ ಕೊಡುವಲ್ಲಿ ಶ್ರಮಿಸಿವೆ. ಆದರೆಡೆಯಲ್ಲಿ ಕೆಲವರು ಮೂಡನಂಬಿಕೆಗಳನ್ನು ಮಾರ್ಕೆಟ್ ಮಾಡುವ ಕೆಲಸ ಮಾಡಿರಬಹುದು. ಆದರೂ ಅವರು ಜಾಗತಿಕ ತಾಪಮಾನದ ಬಗ್ಗೆ ಈ ಮೊದಲು ಉಲ್ಲೇಖ ಮಾಡಿದ್ದರು.
ಮಾಧ್ಯಮಗಳಿಗೆ ರೈತರ ಅತ್ಮಹತ್ಯೆಗಳಿಗಿಂತ ಫ್ಯಾಶನ್ ಶೋಗಳು, ಸೆಲೆಬ್ರಿಟಿಗಳು ಮುಖ್ಯವಾಗಿದ್ದಾರೆ, ಮುಖ್ಯವಾಗುತ್ತಿದ್ದಾರೆ, ಈ ಮಾಧ್ಯಮಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಹುಯಿಲೆಬ್ಬಿಸುವ ಕೆಲಸ ಒಂದು ಕಡೆ ನಡೆಯುತ್ತಿದೆ. ಹೌದು, ಮಾಧ್ಯಮಗಳು ರೈತನ ಅತ್ಮಹತ್ಯೆಗೆ ಎಲ್ಲೋ ಒಂದು ಮೂಲೆಯಲ್ಲಿ ಸ್ಥಾನ ಕೊಟ್ಟಿರಬಹುದು. ಆದರೆ ಇಂದು ದೇಶದ ಬಹುತೇಕ ವಿದ್ಯಾವಂತ ಜನರಿಗೆ ರೈತರು ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬರಿವು ಮಾಧ್ಯಮಗಳಿಂದ ದಕ್ಕಿದೆ. ಆದರೆ, ಎಷ್ಟು ಮಂದಿ ರ್ಯೆತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ?
ಜನರಿಗೆ ವರ್ಷಕ್ಕೆ ಸಾವಿರಾರು ರೈತರು ಅತ್ಮಹತ್ಯೆ ಮಾಡಿಕೊಳ್ಳುವಂತದ್ದು ಒಂದು ಸಾಮಾನ್ಯ ಸುದ್ದಿಯಾಗಿಯೇ ಉಳಿಯುವುದಾದರೆ, ಅದಕ್ಕೆ ಸ್ಪಂದಿಸುವ ಮನಸ್ಸಿಲ್ಲ ಎಂದಾದರೆ ಆ ಜಾಗವನ್ನು ಸೆಲೆಬ್ರಿಟಿಗಳ ಸುದ್ದಿ ಅಲಂಕರಿಸುವುದರಲ್ಲಿ ತಪ್ಪೇನಿದೆ?
ಇವತ್ತು ರೈತರ ಸಮಸ್ಯೆಗಳ ಅರಿವು ಇರುವವರು ಎಂದೆನಿಸಿಕೊಂಡವರು ಕೂಡ ಸಂತೆಗೆ ಹೋಗಿ ೧ ರೂಪಾಯಿಗೆ ೨ ಕೆಜಿ ಟೊಮೆಟೊ ಕೊಡು ಅನ್ನುತ್ತಾರೆ. ಅದೇ ಮಾಲ್ಗಳಿಗೆ ಹೋಗಿ ಅದೇ ಟೊಮೆಟೊಕ್ಕೆ ಕೆಜಿಗೆ ೩೦ ರೂಪಾಯಿ ಅಂದರೂ ತುಟಿ ಬಿಚ್ಚದೇ ನೋಟು ಬಿಚ್ಚುತ್ತಾನೆ. ಈಗ ಹೇಳಿ, ತಮ್ಮ ಜವಾಬ್ದಾರಿ ಮರೆತಿರುವುದು ಮಾಧ್ಯಮಗಳಾ? ಅಥವಾ ಸಮಾಜವಾ?
ಇಂದು ದೇಶದ ಬಹುತೇಕ ಎಲ್ಲ ಕೃಷಿಕರು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ಮಾಧ್ಯಮಗಳು ವ್ಯವಸ್ಥೆಯ ಗಮನಕ್ಕೆ ತಂದಿವೆ. ಆದರೆ ಎಲ್ಲೂ ಎಲ್ಲ ಕೃಷಿಕರನ್ನು ಒಂದೇ ಸೂರಿನಡಿಗೆ ತಂದು ಒಂದು ಹೋರಾಟ ಸಂಘಟಿಸಲು ಸಾಧ್ಯವಾಗಿಲ್ಲ, ಯಾಕೆ? ಜನರನ್ನು ಧರ್ಮದ ಹೆಸರಲ್ಲಿ, ಜಾತಿಯ ಹೆಸರಲ್ಲಿ, ಭಾಷೆಯ ಹೆಸರಲ್ಲಿ ಸಂಘಟಿಸಿ ಆಧಿಕಾರದ ರುಚಿ ಸವಿದವರಿದ್ದಾರೆ, ರೈತರ ಹೆಸರು ಹೇಳಿ ಅಧಿಕಾರದ ದಿಬ್ಬಣ ಏರಿದ ಹೆಗ್ಗಣಗಳ ಸಂಖ್ಯೆಗೂ ಮಿತಿಯಿಲ್ಲ. ಅದರೂ ಇಂದಿಗೂ ರೈತ ಅನಾಥ. ಈ ಬಗ್ಗೆ ಮಾಧ್ಯಮಗಳು ’ಜಾಗೃತಿ’ಯುಂಟು ಮಾಡುವ ಕೆಲಸ ಮಾಡಿಲ್ಲವೇ?
ಶೋಷಣೆ, ಭ್ರಷ್ಟಾಚಾರ, ಲಂಚಕೋರತನ, ದುಷ್ಟ ರಾಜಕೀಯದ ಬಗ್ಗೆ ಸಿನಿಮಾ ಸೇರಿದಂತೆ ಎಲ್ಲ ಮಾಧ್ಯಮಗಳು ಜನರೇ ಜಾಗ್ರತರಾಗಿ, ಈ ದುಷ್ಟಕೂಟದಿಂದ ಯಾವ ರೀತಿ ಹೊರಬರಬಹುದು ಎಂದು ಬಾಯಿ ಬಾಯಿ ಬಡಿದುಕೊಂಡಿವೆ ಅದರೂ ಈ ಪಿಡುಗು ಕಿಂಚಿತ್ ಕಡಿಮೆಯಾಗಿಲ್ಲ. ಹೋಗಲಿ, ನಮ್ಮ ಲೋಕಾಯುಕ್ತವಂತೂ ಭ್ರಷ್ಟ ಖದೀಮರ ವಿರುದ್ದ ಸಾರಿರುವ ಸಮರಕ್ಕೆ ಎಲ್ಲ ಮಾಧ್ಯಮಗಳು ತುಂಬು ಪ್ರಚಾರ ನೀಡುತ್ತಿವೆ. ಆದರೂ ಜನ ತಮ್ಮ ಕೆಲಸ ಮಾಡಿ ಕೊಡಲು ಅಧಿಕಾರಿಗಳಿಗೆ ಹಣ ಕೊಡುವುದನ್ನು ನಿಲ್ಲಿಸಿಲ್ಲ. ಹಣ ಕೇಳುವ ಅಧಿಕಾರಿಗಳ ವಿರುದ್ದ ದೂರು ಕೂಡ ಕೊಡುತ್ತಿಲ್ಲ. ಕೊಟ್ಟರು ಅಂಥವರ ಪ್ರಮಾಣ ತೀರಾ ಕಡಿಮೆ. ಎಲ್ಲವನ್ನೂ ಮಾಧ್ಯಮಗಳ ತನಿಖಾ ವರದಿ ಅಥವಾ ಕುಟುಕು ಕಾರ್ಯಾಚರಣೆಯೇ ಮಾಡಲಿ, ಇಂತಹ ಪಿಡುಗುಗಳ ವಿರುದ್ದ ಹೋರಾಡುವುದು, ಸಮಾಜದಲ್ಲಿ ಬದಲಾವಣೆ ತರುವುದು ಮಾಧ್ಯಮಗಳಿಗೆ ಮಾತ್ರ ಸೀಮಿತವಾದ ಕರ್ತವ್ಯ ಮತ್ತು ಜವಾಬ್ದಾರಿ ಎಂಬ ಮನೋಭಾವ ಸಮಾಜದಲ್ಲಿ ಈಗಾಗಲೇ ಬಲವಾಗಿ ಬೇರುಬಿಟ್ಟಿದೆ.
ಇದು ಮಾಧ್ಯಮಗಳ ಮಹಿಮೆ, ಸಾಮರ್ಥ್ಯ, ಮತ್ತು ಶಕ್ತಿಯನ್ನು ಪರಿಗಣಿಸಿ ಸಮಾಜ ನೀಡಿದ ಗೌರವ ಎಂದು ಭಾವಿಸುವ ಸಂಗತಿಯಾಗಿ ಉಳಿದಿದ್ದರೆ ಖಂಡಿತವಾಗಿ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರೆಲ್ಲರೂ ಬಹು ಹೆಮ್ಮ ಪಡಬೇಕಾದ ವಿಷಯವಾಗಿರುತ್ತಿತ್ತು. ಅಥವಾ ಮಾಧ್ಯಮಗಳಲ್ಲಿ ಪ್ರಕಟವಾದರೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಹಾಗೂ ವ್ಯವಸ್ಥೆ ಮತ್ತು ಸಮಾಜ ಅದಕ್ಕೆ ಸ್ಪಂದಿಸುತ್ತದೆ ಎಂಬ ವಿಶ್ವಾಸ ಇದರ ಹಿಂದೆ ಇದ್ದಿದ್ದರೂ ಕೂಡ ಅದು ಮಾಧ್ಯಮಗಳ ಹಿರಿಮೆಯೆನಿಸುತ್ತಿತ್ತು. ಆದರೆ ದುರದೃಷ್ಟವಶಾತ್ ಇಂದಿನ ಮಾಧ್ಯಮಗಳ ಮೇಲಿನ ಸಮಾಜದ ನಿರೀಕ್ಷೆಯ ಹಿಂದಿರುವುದು ಅದರ ಪಲಾಯಾನವಾದ.
ಸ್ವಾತಂತ್ರ್ಯಪೂರ್ವದಲ್ಲಿ ಆದರ್ಶ ಪತ್ರಿಕೋದ್ಯಮವಿತ್ತು ಈಗ ಇಲ್ಲ ಎಂದು ಕನವರಿಸುವವರು ಆಗೀನ ಸಮಾಜ ಹೇಗಿತ್ತು? ಅದು ಸಮಸ್ಯೆಗಳಿಗೆ, ಹೋರಾಟಗಳಿಗೆ ಯಾವ ರೀತಿ ಸ್ಪಂದಿಸುತ್ತಿತ್ತು ಎಂಬುದನ್ನು ಮೊದಲು ಗಮನಿಸಬೇಕು. ಅಂದು ಒಂದು ಸಮಸ್ಯೆಯ ಬಗ್ಗೆ ಬರೆದರೆ ಅದರ ಬಗ್ಗೆ ಯೋಚಿಸುವ ಸಮಾಜವಿತ್ತು, ಅಗತ್ಯಬಿದ್ದರೆ ಮನೆ ಮಠ ಬಿಟ್ಟು ಕೂಡ ಹೋರಾಡುತ್ತಿದ್ದರು. ಅದ್ದರಿಂದ ಸಮಸ್ಯೆ ಪರಿಹಾರವಾಗುತ್ತಿತ್ತು.
ನೆನಪಿಡಿ, ಆಗ ಇದ್ದದ್ದು ಈಗೀನ ಅಕ್ಷರಸ್ಥರ ಪ್ರಮಾಣದ ಆರ್ಧಕ್ಕಿಂತಲೂ ಕಡಿಮೆ ಅಕ್ಷರಸ್ಥರು. ಮಾಧ್ಯಮ ಎಂದರೆ ಪತ್ರಿಕೆ ಮಾತ್ರ. ರೇಡಿಯೋ ತನ್ನ ಅಸ್ತಿತ್ವ ಕಂಡುಕೊಂಡದ್ದು ೧೯೩೫ರ ಬಳಿಕ. ಸಂಪರ್ಕ ಸಾಧನಗಳಾಗಲೀ, ರಸ್ತೆಗಳಾಗಲೀ ತೀರಾ ಬಾಲಾವಸ್ಥೆಯಲ್ಲಿತ್ತು. ಆದರೂ ಅವರು ಹೋರಾಡಿದರು ಮತ್ತು ಗೆದ್ದರು.
ಆದೇ ಈಗ? ಕ್ಷಣ ಮಾತ್ರದಲ್ಲಿ ಜಗತ್ತಿನ ಯಾವುದೇ ಪ್ರದೇಶಕ್ಕೆ ಸಂಪರ್ಕ ಸಾಧಿಸಬಲ್ಲೇವು, ಟಿವಿ, ಇಂಟರ್ನೆಟ್ಗಳು ರೇಡಿಯೋ ಮತ್ತು ಪತ್ರಿಕೆಗಳ ಜೊತೆ ಸೇರಿ ಮಾಧ್ಯಮ ಕ್ರಾಂತಿಯೇ ಆಗಿದೆ. ಈ ಕ್ರಾಂತಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಕೂಡ ತಲುಪಿದೆ. ಆದರೂ ಈ ಸಮಾಜಕ್ಕೆ ತನ್ನೋಳಗೊಂದು ವ್ಯವಸ್ಥಿತ ಬದಲಾವಣೆ ತರಲು ಸಾಧ್ಯವಾಗುತ್ತಿಲ್ಲ.
ಮಾಧ್ಯಮಗಳು ತಮ್ಮ ಮೂಲ ಉದ್ದೇಶಗಳಿಗೆ ನಿಷ್ಠವಾಗಿಯೇ ಇವೆ ಎಂದು ಹೇಳುವುದು ಕಷ್ಟ ಆದರೂ ತಮ್ಮ ಉದ್ದೇಶ ಮರೆತಿಲ್ಲ. ಆದರೆ ಸಮಾಜ ಮಾತ್ರ ಎಲ್ಲವನ್ನೂ ಮಾಧ್ಯಮಗಳ ಮೇಲೆ ಹೊರಿಸಿ ತಾನು ಮಾತ್ರ ನಿಶ್ಚಿಂತವಾಗಿದೆ.
ರಸ್ತೆ ಸರಿಯಿಲ್ಲ ಎಂದು ಪತ್ರಕರ್ತ ಬರೆಯಬಹುದು ಮತ್ತು ಬರೆಯುತ್ತಾನೆ, ಆದರೆ ಅದನ್ನು ಅವನೇ ರಿಪೇರಿ ಮಾಡಿಸಿಕೊಡಬೇಕು ಎಂದು ಬಯಸಲು ಸಾಧ್ಯವಿಲ್ಲ ಇದು ಎಲ್ಲ ವಿಷಯಗಳಿಗೂ ಅನ್ವಯಿಸುತ್ತದೆ. ಯಾಕೆಂದರೆ ಅವನಿಗೆ ಸಾಂವಿಧಾನಿಕವಾದ ಯಾವುದೇ ವಿಶೇಷ ಹಕ್ಕಿಲ್ಲ, ಒಬ್ಬ ಜನ ಸಾಮಾನ್ಯನಿಗೆ ಇರುವ ಎಲ್ಲ ನೀತಿ ನಿಯಮಗಳು ಅವನಿಗೂ ಅನ್ವಯಿಸುತ್ತದೆ ಹಾಗೂ ಅವನು ಅದಕ್ಕೆ ಬದ್ದನಾಗಿರಬೇಕು. ಹಾಗೆಯೇ ಸಮಾಜದ ಉಳಿದವರಿಗೆ ಇರುವಂತಹ ಎಲ್ಲ ಸಂಬಂಧಗಳು, ಇತಿ ಮಿತಿಗಳು ಅವನಿಗೂ ಇರುತ್ತದೆ ಎಂಬುದನ್ನು ಮರೆಯಬಾರದು ಅಲ್ಲವೇ?
ಇದು ಕನ್ನಡ ಸಾಹಿತ್ಯಕ್ಕೆ ಸಮನ್ವಯ ಸಂಧಿ ಕಾಲ
ಇಲ್ಲಿ ನಾನು ಯಾವುದೇ ಸಾಹಿತಿಯ, ಸಾಹಿತ್ಯದ ಕಾಲಘಟ್ಟ ಅಥವಾ ಸಾಹಿತ್ಯ ಪ್ರಕಾರದ ಬಗ್ಗೆ ಉದ್ದೇಶಪೂರ್ವಕವಾಗಿ ಉಲ್ಲೇಖ ಮಾಡುತ್ತಿಲ್ಲ. ಯಾಕೆಂದರೆ ಕನ್ನಡದ ಲಭ್ಯವಿರುವ ಮೊದಲ ಲಿಖಿತ ಸಾಹಿತ್ಯ ಕೃತಿ ಕವಿರಾಜಮಾರ್ಗ ದಿಂದ ಹಿಡಿದು ಜನಪದವೂ ಸೇರಿದಂತೆ ಇಂದಿನ ಸಾಹಿತ್ಯದ ವರೆಗೂ ಪ್ರತಿಯೊಂದು ಸಾಹಿತ್ಯಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇದ್ದೆ ಇದೆ. ಎಲ್ಲ ಸಾಹಿತ್ಯ ಪ್ರಕಾರಗಳ ಸಮ್ಮೀಳನದಿಂದ, ಹಿರಿಮೆಯಿಂದ ಮತ್ತು ಕೊಡುಗೆಯಿಂದ ತಾನೇ ಕನ್ನಡ ಸಾಹಿತ್ಯಕ್ಕೆ ವೈವಿಧ್ಯತೆ ಮತ್ತು ಶ್ರೇಷ್ಟತೆ ದಕ್ಕಿದ್ದು. ಒಂದು ಒಳ್ಳೆಯ ಸಾಂಬಾರಿಗೆ ನಾನ ವಸ್ತುಗಳು ಬೇರೆ ಬೇರೆ ಪ್ರಮಾಣದಲ್ಲಿ ಹೇಗೆ ಸೇರಬೇಕೋ ಹಾಗೆ ಇದು ಕೂಡ. ಎಲ್ಲವೂ ಒಂದೇ ಪ್ರಮಾಣದಲ್ಲಿ ಸೇರಿದರೆ ಏನಾಗಬಹುದು? ಆಡುಗೆ ಮಾಡುವವ ಯಾವ ರೀತಿ ಆಡುಗೆ ಪದಾರ್ಥಗಳ ಮೇಲೆ ನಿಯಂತ್ರಣ ಹೊಂದಿರುತ್ತಾನೋ ಅದೇ ರೀತಿ ಕನ್ನಡದ ಮಟ್ಟಿಗೆ ಕಾಲ ಚಕ ಆ ಕೆಲಸ ಮಾಡಿತು ಎಂದು ನನಗನಿಸುತ್ತಿದೆ.
ಆದರೆ ಒಂದು ಮಾತನ್ನು ನಾನಿಲ್ಲಿ ಬರೆದೆ ಮುಂದುವರಿಯಬೇಕು. ಹಿಂದಿನ ಹೆಚ್ಚಿನೆಲ್ಲ ಸಾಹಿತಿಗಳು ವಿದ್ವಾಂಸರಾಗಿದ್ದರು ಇಲ್ಲವೇ ಅವರಲ್ಲಿ ಜೀವನಾನುಭವ ಪೊಗದಸ್ತಾಗಿತ್ತು . ಜನಪದ ಸಾಹಿತಿಗಳು ವಿದ್ವಾಂಸರು ಎಂಬ ಪರಿಧಿಯೊಳಗೆ ಬಾರದಿದ್ದರು ಅವರವರು ಬದುಕಿದ ರೀತಿ ಮತ್ತು ತಮ್ಮ ಪರಿಸರವನ್ನು ಕಟ್ಟಿ ಕೊಟ್ಟ ರೀತಿಯನ್ನು ಗಮನಿಸಿದಾಗ ಅವರನ್ನೂ ಕೂಡ ಪಂಡಿತರು ಎಂದು ಪರಿಗಣಿಸಬಹುದು.
ಆಗಿನ ಶಿಷ್ಟ ಸಾಹಿತಿಯೊಬ್ಬನಿಗೆ ತನ್ನ ಕೃತಿಯನ್ನು ಅಥವಾ ಬರಹವನ್ನು ಜನರ ಮುಂದೆ ತರುವುದು ಅಷ್ಟು ಸುಲಭವಾಗಿರಲಿಲ್ಲ. ಅದೇ ರೀತಿ ಒಬ್ಬ ಜನಪದ ಸಾಹಿತಿಗೆ ಕೂಡ ತನ್ನ ಸಾಹಿತ್ಯವನ್ನು ಇನ್ನೊಬ್ಬರಿಗೆ ದಾಟಿಸುವುದು ಅಷ್ಟು ಸುಲಭವಾಗಿರಲಿಲ್ಲ. ಅದ್ದರಿಂದ ನನಗನಿಸುವಂತೆ ಈ ಎರಡು ಸಾಹಿತ್ಯ ಪ್ರಕಾರದಲ್ಲೂ ಜೊಳ್ಳುಗಳು ಕಾಲಗರ್ಭ ಸೇರಿ ಗಟ್ಟಿಕಾಳುಗಳು ಮಾತ್ರ ಉಳಿದವು. ಆದರೆ ಇಂದು ಏನಾಗಿದೆ?
ನಾವು ಇಪ್ಪತ್ತನೆಯ ಶತಮಾನವನ್ನು ಸಾಹಿತ್ಯದ ದೃಷ್ಟಿಯಿಂದ ನವೋದಯ, ನವ್ಯ, ನವ್ಯೋತ್ತರ, ಬಂಡಾಯ ಹೀಗೆ ವಿಂಗಡಿಸುತ್ತೇವೆ. ಆದರೆ ಕಳೆದ ಶತಮಾನದ ಕೊನೆಯ ಒಂದುವರೆ ದಶಕ ಮತ್ತು ಈ ಶತಮಾನದ ಆದಿಯನ್ನು ಯಾವ ವೇದಿಕೆಯಡಿ ತರುವುದು ಎಂಬದೇ ದೊಡ್ಡ ಸಮಸ್ಯೆ. ಇಲ್ಲಿಂದಲೇ ಇಂದಿನ ಕನ್ನಡ ಸಾರಸ್ವತ ಲೋಕದ ಅಜಲುಗೊಜಲು ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತದೆ.
ಈ ಕಾಲಘಟ್ಟದ ಸಾಹಿತ್ಯವನ್ನು ಒಂದೇ ವೇದಿಕೆಯಡಿ ತಾರದಿದ್ದರೆ ಏನಾಗುತ್ತದೆ? ಎಂದು ನೀವು ಕೇಳಲೇ ಬೇಕಾದ ಪ್ರಶ್ನೆ. ನನ್ನ ಉತ್ತರವೂ ಸ್ಪಷ್ಟವಾಗಿದೆ. ಏನೂ ಆಗುವುದಿಲ್ಲ, ಒಂದು ರೀತಿಯಲ್ಲಿ ಒಳ್ಳೆಯದೇ ಆಗುತ್ತದೆ, ಸಾಹಿತ್ಯಕ್ಕೆ ಚೌಕಟ್ಟು ಹಾಕುವುದು, ಸಾಹಿತ್ಯವೆಂದರೆ ಇದೇ ರೀತಿ ಇರಬೇಕು ಎಂದು ಹೇಳುವುದು ಸರಿಯಲ್ಲ. ಆದರೆ ಇದನ್ನೇ ಸ್ಪಷ್ಟವಾಗಿ ಆಥವಾ ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಇಂದಿನ ಸಾಹಿತ್ಯಕ್ಕೆ ನಿರ್ದಿಷ್ಟ ಉದ್ದೇಶ, ಗುರಿ, ಅಥವಾ ಇಂದಿನ ಸಾಹಿತಿಗಳು ಯಾವುದೋ ಒಂದು ಉದ್ದೇಶಕ್ಕಾಗಿ ಅಥವಾ ಏಕ ಉದ್ದೇಶವಿಟ್ಟುಕೊಂಡು ಬರೆಯುತ್ತಿಲ್ಲ ಎಂಬುದಕ್ಕೆ ನಿದರ್ಶನ. ಅಂದರೆ ಬಿಡಿಯಾದ ಪ್ರಜ್ಞೆ ನಮ್ಮಲ್ಲಿ ಹುಟ್ಟಿಕೊಂಡಿದೆ. ಇದರೊಂದಿಗೆ ಈ ಕಾಲಘಟ್ಟದ ಆಗುಹೋಗುಗಳಿಗೆ ಅಕ್ಷರದ ಮೂಲಕ ಮೂರ್ತ ರೂಪ ನೀಡುವ ಸಾಮರ್ಥ್ಯವಿರುವ ಒಬ್ಬ ಮಹಾನ್ ಸಾಹಿತಿಯ ಕೊರತೆ ನಮ್ಮನ್ನು ಕಾಡುತ್ತಿದೆ. ಹಿಂದೆ ನಾನು ಹೇಳಿದ ನಾಲ್ಕು ವಿಂಗಡನೆಗಳ ಸಮಯದಲ್ಲಿ ಅದಕ್ಕೆ ಹೊರತಾದ ಸಾಹಿತ್ಯ ರಚನೆಗಳೂ ಕೂಡ ಬಂದಿದ್ದವು ಎಂಬುದನ್ನು ನಾನಿಲ್ಲಿ ನಿರಾಕರಿಸುತ್ತಿಲ್ಲ.
ಕನ್ನಡದಲ್ಲಿ ಇಂದಿಗೂ ಮಹಾನ್ ಸಾಹಿತಿಗಳಿದ್ದಾರೆ. ಆದರೆ, ಅದರಲ್ಲಿ ಎಷ್ಟು ಮಂದಿ ಸಾಹಿತ್ಯಿಕವಾಗಿ ಬದುಕಿದ್ದಾರೆ ಎಂಬುದು ಮುಖ್ಯ. ಹೆಚ್ಚಿನ ಸಾಹಿತಿಗಳು ಇತಿಹಾಸದ ಬೆನ್ನು ಹಿಡಿದಿದ್ದಾರೆ ಎಂದೆನಿಸುತ್ತದೆ. ಇದು ಅವರ ಪಲಾಯನವಾದ ಖಂಡಿತವಾಗಿಯೂ ಆಲ್ಲ, ಬದಲಾಗಿ ಅವರ ಮಿತಿ.
ಇಂದು ಪತ್ರಿಕೆಗಳು ಬರಹಗಾರರಿಗೆ ಸಾಕಷ್ಟು ಆವಕಾಶ ಕೊಡುತ್ತಿವೆ. ಹಿಂದೆ ಇಂತಹ ಅವಕಾಶಗಳು ಕಡಿಮೆ ಇತ್ತು. ಗುಣಮಟ್ಟದ ಬರಹಗಳು ಮಾತ್ರ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದವು. ಅದ್ದರಿಂದಲೇ ಇರಬೇಕು ಕಳೆದ ಶತಮಾನದ ಕೊನೆಯ ದಶಕದವರೆಗೂ ಗುಣಮಟ್ಟದ ಬರಹಗಳು ಮತ್ತು ಬರಹಗಾರರು ಮಾತ್ರ ನಿಯತಕಾಲಿಕಗಳಲ್ಲಿ ಮತ್ತು ದಿನ ಪತ್ರಿಕೆಗಳ ಸಾಪ್ತಾಹಿಕಗಳಲ್ಲಿ ಸ್ಥಾನ ಪಡೆಯುತ್ತಿದ್ದರು.
ಆದರೆ ಪತ್ರಿಕೆಗಳು ಕೊಟ್ಟಿರುವ, ಕೊಡುತ್ತಿರುವ ವೇದಿಕೆಯನ್ನು ಯುವ ಬರಹಗಾರರು ಯಾವ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂದು ಗಮನಿಸಿದರೆ ನಿರಾಶೆ ಕಟ್ಟಿಟ್ಟ ಬುತ್ತಿ.
ಇಂದಿನ ಯುವ ಸಾಹಿತಿಗಳು ಅದರಲ್ಲೂ ಕಾಲೇಜು ಸಾಹಿತ್ಯವೆಂಬುದು ಪ್ರೀತಿ, ಪ್ರೇಮ, ಪ್ರಣಯದ ಸುತ್ತಲೇ ಗಿರಕಿ ಹೊಡಿಯುತ್ತಿದೆ. ತಪ್ಪಿದರೆ ಮೊಬೈಲ್, ಕಾಲೇಜಿನಲ್ಲಿನ ಮೊದಲ ದಿ, ಬಾಲ್ಯದ ನೆನಪು, ಕಾಲೇಜ್ ಕಾರಿಡಾರ್, ಗೆಳೆತನ, ಅಥವಾ ಉಪದೇಶ ನೀಡುವುದಕ್ಕೇ ಸೀಮಿತವಾಗುತ್ತಿದೆ. ಅದು ಸುತ್ತಲಿನ ಪರಿಸರಕ್ಕೆ ಕುರುಡಾಗಿದೆ. ಕುರುಡಾಗಿದ್ರೂ ಪರ್ವಾಗಿರಲಿಲ್ಲ ತನ್ನ ಸ್ಪರ್ಶಜ್ಞಾನವನ್ನೇ ಕಳೆದುಕೊಂಡಿದೇಯೇನೋ ಎಂದೆನಿಸುತ್ತದೆ.
ಬರವಣಿಗೆಯ ಆರಂಭದ ದಿನಗಳಲ್ಲಿ ಇಂತಹ ಬರಹಗಳನ್ನು ಬರೆದರೆ ತಪ್ಪಿಲ್ಲ, ಇದು ಬರಹಗಾರನ ಅತ್ಮವಿಶ್ವಾಸ ಹೆಚ್ಚಿಸುತ್ತದೆ. ಯಾಕೆಂದರೆ ಆಗ ಬರಹ ಪ್ರಕಟಗೊಳ್ಳುವುದೇ ಮುಖ್ಯ. ಅದರೆ ಅದೇ ಅಭ್ಯಾಸವಾದರೇ?
ಈ ಪ್ರೀತಿ ಬಗ್ಗೆ ಒಂದೆರಡು ಸರಳ ಪದ್ಯ ಬರೆದರೆ ಒಂದಿಷ್ಟು ಹಣ, ಹೆಸರು ದಕ್ಕಿ ಬಿಡುತ್ತದೆ. ಅದರಾಚೆ, ಅಧ್ಯಯನ ಮಾಡಿ ಬರೆಯಬೇಕು, ಸಮಾಜದ ನೋವು ನಲಿವು ನನ್ನ ಬರಹದ ಮೂಲಕ ಧ್ವನಿ ಪಡೆದುಕೊಳ್ಳಬೇಕು ಎಂಬ ಆಶಯ ಇಂತಹ ಬರಹಗಳಲ್ಲಿ ಕಾಣುತ್ತಿಲ್ಲ. ಸಮಾಜದ ಬದಲು ವೈಯುಕ್ತಿಕ ವಿಷಯವನ್ನೇ ಅಥವಾ ಡೈರಿಯಲ್ಲಿ ಬರೆದು ಮುಚ್ಚಿಡಬೇಕಾದ ವಿಷಯಗಳನ್ನು ಬರೆದು ಪತ್ರಿಕೆಗಳಿಗೆ ಕಳುಹಿಸಿ ಬರಹಗಾರನೆಂದು ಕರೆಸಿಕೊಳ್ಳುವ ಜಾಯಮಾನ ಇವರದ್ದು. ಇಂತಹ ಅರೆಬೆಂದ ಸಾಹಿತಿಗಳಿಂದ ನಮ್ಮ ಸಾಹಿತ್ಯ ಪರಂಪರೆಯ ಮುಂದುವರಿಕೆ ಸಾಧ್ಯಾನಾ? ಸಾಧ್ಯವಾದರೂ ಕೂಡ ಅದಕ್ಕೆ ಶ್ರೀಮಂತಿಕೆ ತುಂಬಲು ಇವರಿಂದ ಸಾಧ್ಯವಾಗುತ್ತಾ?
ಇಂತಹ ಬರಹಗಾರರು ಎರಡು ರೀತಿಯಲ್ಲಿ ಸೋಲುತ್ತಿದ್ದಾರೆ. ಮೊದಲನೆಯದಾಗಿ ಅವರು ತಮ್ಮ ಹಿಂದಿನ ಪರಂಪರೆಯನ್ನು ಅರಿತು ಕೊಳ್ಳುತ್ತಿಲ್ಲ. ಅಂದರೆ, ಓದು ಕಡಿಮೆಯಾಗುತ್ತಿದೆ. ಎರಡನೆಯದಾಗಿ ಸಮಾಜವನ್ನು ಗಮನಿಸುತ್ತಿಲ್ಲ. ಜೊತೆಗೆ ಏನು ಬರೆದರೂ ಪತ್ರಿಕೆಗಳು ಪ್ರಕಟಿಸುತ್ತವೆ ಅದ್ದರಿಂದ ಯಾಕೆ ಸುಮ್ಮನೆ ಕಷ್ಟ ಪಡುವುದು ಎಂಬ ಮನೋಭಾವ.
ಇನ್ನೂ ಹಿರಿಯ ಸಾಹಿತಿಗಳನ್ನು ಗಮನಿಸಿದರೆ ಅವರು ಕಾರಣವಿ(ವ)ಲ್ಲದ ಕಾರಣಗಳಿಂದ ಒಡೆದು ಹಂಚಿ ಹೋಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಇದೊಂದು ದೊಡ್ಡ ಹೊಡೆತ. ಇದರಿಂದ ಮುಖ್ಯ ಬರಹಗಳಿಗೆ ಅಥವಾ ವಿಷಯಗಳಿಗೆ ಸಂಬಂಧಿಸಿದಂತೆ ವಸ್ತುನಿಷ್ಟ ವಿಮರ್ಶೆ ಮರೆಯಾಗಿ ವ್ಯಕ್ತಿ ನಿಷ್ಟ ಮತ್ತು ಸಿದ್ಧಾಂತ ನಿಷ್ಟ ವಿಮರ್ಶೆ ಮತ್ತು ಬರಹಗಳು ಅವರಿಂದ ಬರುತ್ತಿದೆ.
ಹಿಂದೆ ಗುರು ಇಲ್ಲ, ಮುಂದೆ ಗುರಿ ಇಲ್ಲದ ಈ ಸ್ಥಿತಿಯ ಪರಿಣಾಮವಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ನಿರ್ವಾತವೊಂದು ಸೃಷ್ಟಿಯಾಗುವಂತಾಗಿದೆ.
ಹಾಗಂತ ಕನ್ನಡ ಪುಸ್ತಕಗಳು ಪ್ರಕಟಗೊಳ್ಳುತ್ತಿಲ್ವಾ? ಖಂಡಿತವಾಗಿಯೂ ತರಹೇವಾರಿ ಪುಸ್ತಕಗಳು ಪ್ರಕಟಗೊಳ್ಳುತ್ತಿವೆ. ಅವುಗಳ ಮುದ್ರಣ ಮತ್ತು ವಿನ್ಯಾಸ ಚೇತೋಹಾರಿಯಾಗಿದೆ. ಭೌತಿಕವಾದ ಹೊಸತನ ತುಂಬುವುದರಲ್ಲಿ ನಮ್ಮ ಸಾಹಿತ್ಯ ಲೋಕ ಹಿಂದೆ ಬಿದ್ದಿಲ್ಲ ಆದರೆ ನಾವು ಸೋಲುತ್ತಿರುವುದು ಒಳಗಿನ ಹೂರಣ ತುಂಬುವುದರಲ್ಲಿ. ಅಂದರೆ ಯಂತ್ರ ಮಾಡುವ ಕೆಲಸಕ್ಕಿಂತ ಮನಸ್ಸು ಮಾಡಬೇಕಾದ ಕೆಲಸ ಕನ್ನಡದಲ್ಲಿ ಆಗಬೇಕಿದೆ.
ಇಂದಿನ ಕನ್ನಡ ಸಾಹಿತ್ಯದ ಧನಾತ್ಮಕ ಅಂಶವೆಂದರೆ ವಿವಿಧ ಬಗೆಯ ಸಾಹಿತ್ಯ ಹುಟ್ಟಿಕೊಳ್ಳುತ್ತಿದೆ, ಜೊತೆಗೆ ಹಿಂದೆ ಹುಟ್ಟಿದ ಕೆಲ ಸಾಹಿತ್ಯ ಪ್ರಕಾರಗಳು ಅಭಿವೃದ್ಧಿಕಾಣುತ್ತಿದೆ. ಇದರ ಜೊತೆ ಜೊತೆಗೆ ಜಾಗತೀಕರಣದ ಪ್ರಭಾವದಿಂದ ಹುಟ್ಟಿಕೊಂಡ ವೃತ್ತಿಗಳನ್ನು ಮಾಡುತ್ತಿರುವವರು ಕೂಡ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದಾರೆ.
ಒಟ್ಟಿನಲ್ಲಿ ಕನ್ನಡ ಸಾಹಿತ್ಯಕ್ಕೆ ಇದೊಂದು ಹೊಸ ಬಗೆಯ ಸಮನ್ವಯ ಸಂಧಿ ಕಾಲ. ಹಿರಿಕಿರಿಯರು ಒಟ್ಟಾಗಿ ಈ ಸ್ಥಿತಿಯನ್ನು ಎದುರಿಸಬೇಕು. ಹಿರಿಯರ ಅನುಭವ, ಕಿರಿಯರ ಉತ್ಸಾಹ ಸಮನ್ವಯಗೊಂಡರೆ ಮಾತ್ರ ಕನ್ನಡ ಸಾಹಿತ್ಯ ಉಳಿಯಬಹುದು, ಹಬ್ಬಬಹುದು, ಬೆಳೆಯಬಹುದು.
ಇಲ್ಲದಿದ್ದಲ್ಲಿ ಇಂದಿನ ಸಾಹಿತಿಗಳಲ್ಲಿ ಸಾಮಾನ್ಯವಾಗಿ ಕಾಣುವ ಜಾಗತೀಕರಣದ ವಿರುದ್ದದ ಬೈಗುಳ ನಿತ್ಯಮಂತ್ರವಾಗಿ ಬಿಡಬಹುದು. ಕನ್ನಡ ಸಾಹಿತ್ಯದ ಹರಿವು ಬತ್ತಿ ಹೋಗಬಹುದು!
Monday, December 7, 2009
ಅವರಿಗೆ ’ಮತ’ದಾಸೆ, ನಮಗೆ ದೇಶದಾಸೆ!
ಛೇ, ಏನಿದು? ಇಲ್ಲ, ಅವರು ದೇಶದ ಮುಖ್ಯವಾಹಿನಿಗೆ ಸೇರುವುದೇ ಇಲ್ಲ. ಉಳಿದವರನ್ನು ಸೇರಲು ಕೂಡ ಬಿಡುವುದಿಲ್ಲ. ಅವರ ಸ್ವಾರ್ಥಕ್ಕೆ ಮತದ ಮುಖವಾಡ, ಅಲ್ಲಿ ಮತವೇ ಫುಟ್ಬಾಲ್ ಮತ್ತು ಅಂಪೈರ್ಗಳಾದ್ದೇ ಆಟ!
ಈ ರೀತಿ ಹೇಳದೆ, ಬರೆಯದೆ ವಿಧಿಯಿಲ್ಲ. ಕಾರಣ, ಮುಸ್ಲಿಂಮರು ’ವಂದೇ ಮಾತರಂ’ ಹಾಡುವುದರ ವಿರುದ್ದ ಜಾಮತೇ ಉಲೇಮಾ ಈ ಹಿಂದ್ ಹೊರಡಿಸಿರುವ ಫತ್ವಾ!
ವಾರೆವ್ಹಾ ಜಾಮತೇ ಉಲೇಮಾ ಈ ಹಿಂದ್ ವಾರೆವ್ಹಾ!
ಮುಸ್ಲಿಂಮರು, ಕೊಲೆ, ಕಳ್ಳತನ, ಅತ್ಯಾಚಾರ, ದೇಶದ್ರೋಹ ಮಾಡುವುದು ವಿಶಾಲವಾಗಿ ಹೇಳುವುದಾದರೆ ದೇಶದ ಕಾನೂನನ್ನು , ಮಾನವೀಯತೆಯನ್ನು ಗೌರವಿಸದಿರುವುದು ಇಸ್ಲಾಂ ವಿರೋಧಿಯಲ್ಲ ಆದರೆ ’ವಂದೇ ಮಾತರಂ’ ಹಾಡುವುದು ಮಾತ್ರ ಇಸ್ಲಾಂ ವಿರೋಧಿ! ಎಂಥಹ ಪರಿಕಲ್ಪನೆ ನಿಮ್ಮದು. ಅದ್ಭುತ... ಅದ್ಭುತ!
’ವಂದೇ ಮಾತರಂ’ನ್ನು ಬಂಕಿಮ ಚಂದ್ರ ಚಟರ್ಜಿ ಬರೆದದ್ದು ೧೮೭೫ರಲ್ಲಿ. ಆದರೆ ಅದು ಅವರ ಕಾದಂಬರಿ ’ಅನಂದ ಮಠ’ದ ಮೂಲಕ ಬೆಳಕು ಕಂಡದ್ದು ಮುಂದಿನ ದಶಕದ ಆದಿಯಲ್ಲಿ.
’ವಂದೇ ಮಾತರಂ’ನ್ನು ೧೮೯೬ರ ಕಾಂಗ್ರೇಸ್ ಅಧಿವೇಶನದಲ್ಲಿ ರವೀಂದ್ರನಾಥ್ ಠಾಗೋರ್ ಹಾಡಿದರು. ತದನಂತರ ೧೯೦೫ರಲ್ಲಿ ಲಾರ್ಡ್ ಕರ್ಜನ್ ಬಂಗಾಳವನ್ನು ವಿಭಜಿಸಿದ. ಈ ಸಂದರ್ಭದಲ್ಲೇ ’ವಂದೇ ಮಾತರಂ’ ಎಂಬ ಸುಪ್ತ ಜ್ವಾಲಾಮುಖಿ ಸ್ಪೋಟಗೊಂಡು ಇಡೀ ಬೆಂಗಾಳಿಯರನ್ನು ಬೆಸೆದು ಬ್ರಿಟೀಷ್ ಆದಿಪತ್ಯದ ಮೇಲೆ ಬೆಂಕಿಯ ವರ್ಷಧಾರೆ ಸುರಿಸಿದ್ದು.
ಈ ವಂಗ ಭಂಗ ಚಳವಳಿಯ ಬೀಜಮಂತ್ರವಾಯಿತು ಈ ಹಾಡು. ೧೯೧೧ರಲ್ಲಿ ಬಂಗಾಳ ಮತ್ತೆ ಒಂದಾಯಿತು. ಅಷ್ಟರಲ್ಲೇ ’ವಂದೇ ಮಾತರಂ’ ಗಿದ್ದ ಅಗಾಧ ಶಕ್ತಿ ಮತ್ತು ಚೈತನ್ಯ ಬೆಂಗಾಳಿಯರಿಗೆ ಮನದಟ್ಟಾಗಿತ್ತು ಮತ್ತು ಬ್ರಿಟೀಷ್ ದೊರೆಗಳಿಗೆ ಆರ್ಥವಾಗಿತ್ತು!
ಇದೇ ಕಾಲದಲ್ಲಿ ಮತ್ತು ತದನಂತರ ಈ ಹಾಡು ಬಂಗಾಳದ ಎಲ್ಲೆಗಳನ್ನು ದಾಟಿ, ದೇಶದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರ ಹೃದಯಗಳನ್ನು ಮೀಟಿ ಬ್ರೀಟಿಷರ ಹುಟ್ಟಡಗಿಸಲೆಂದೇ ಹುಟ್ಟಿಕೊಂಡ ಹೊಸ ಅಸ್ತ್ರ ಅಥವಾ ಶಕ್ತಿಯಾಗಿ ಪರಿಗಣಿಸಲ್ಪಟ್ಟಿತ್ತು.
ಅಲ್ಲಿಂದ ೧೯೨೩ರ ಕಾಕಿನಾಡ ಕಾಂಗ್ರೇಸ್ ಅಧಿವೇಶನದ ತನಕ ’ವಂದೇ ಮಾತರಂ’ ಯಾವುದೇ ವಿವಾದಗಳಿಗೆ ತುತ್ತಾಗದೇ ದೇಶ ಬಾಂಧವರನ್ನು ಒಟ್ಟುಗೂಡಿಸುತ್ತ ಸಾಗಿತು.
ಆದರೆ ಆ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಮೌಲಾನಾ ಮಹಮ್ಮದ್ ಆಲಿ, ಅಧಿವೇಶನದಲ್ಲಿ ಈ ಹಾಡನ್ನು ಹಾಡುವುದಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿ ಈ ಹಾಡಿಗೆ ಮತ್ತು ಈ ಹಾಡಿನ ಆಶಯಕ್ಕೆ ಮೈಲಿಗೆ ಮಾಡುವ ಕೆಲಸಕ್ಕೆ ಮೂಹುರ್ತವಿಟ್ಟರು.
ಅಲ್ಲಿಂದ ನಂತರ ಹೆಚ್ಚಿನ ಮುಸ್ಲಿಂ ನಾಯಕರುಗಳಿಂದ ’ವಂದೇ ಮಾತರಂ’ನ ವಿರೋಧ ಪರ್ವ. ಇದೀಗ ಜಮಾತೆ ಉಲೇಮಾ ಸಂಘಟನೆ ಈ ಪರಂಪರೆಗೆ ಮತ್ತೊಂದು ಕೊಂಡಿ ಸೇರಿಸಿದೆ. ಇದು ಆ ಸಂಘಟನೆ ಸಂಕುಚಿತ ಚಿಂತನೆ ಮತ್ತು ಮನೋಭಾವದ ತುತ್ತಾತುದಿ ತಲುಪಿದೆ ಎಂಬುದನ್ನು ಸಾರಿದೆ. ಇಂತಹ ಮನಸ್ಥಿತಿ ಹುಟ್ಟಿಕೊಳ್ಳಲು ದೇಶದ ’ಜಾತ್ಯತೀತ’ಪಕ್ಷಗಳ ಕೊಡುಗೆ ಅಪಾರ. ಮುಸ್ಲಿಂ ಒಲವಿಗಾಗಿ ಪರಿತಪಿಸುವ ಪಕ್ಷಗಳಿಗೆ ’ವಂದೇ ಮಾತರಂ’ಅಸ್ಪಶ್ಯ,
ಇಲ್ಲೊಂದು ಗಮನಿಸಬೇಕಾದ ಸಂಗತಿಯಿದೆ. ಅದೇನೇಂದರೆ ೧೮೮೦ ರಿಂದ ೧೯೨೩ರವರೆಗೆ ಯಾವೊಬ್ಬ ಮುಸ್ಲಿಂ ಮತ ಪಂಡಿತನೂ ಈ ಹಾಡಿನ ಬಗ್ಗೆ ತಕರಾರು ಎತ್ತಿರಲಿಲ್ಲ. ಸ್ವತ: ಈಗ ಫತ್ವಾ ಹೊರಡಿಸಿರುವ ಜಾಮಾತೇ ಉಲೇಮಾ ಕೂಡ! ಅಂದರೆ ಇದರರ್ಥ, ಆಗಿದ್ದ ಇಸ್ಲಾಂ ಮತ ಪಂಡಿತರಲ್ಲಿ ಮತ ಪಾಂಡಿತ್ಯದ ಕೊರತೆಯಿತ್ತೆಂದ? ಅಥವಾ ಅವರಿಗೆ ವಂದೇ ಮಾತರಂನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇರಲಿಲ್ಲ ಎಂದಾ? ಅಥವಾ ಅವರಿಗೆ ಇಸ್ಲಾಂ ಸರಿಯಾಗಿ ಗೊತ್ತಿರಲಿಲ್ಲ ಎಂದಾ? ಅಥವಾ ೧೯೨೦ರ ನಂತರದ ಹಲವು ಮುಸ್ಲಿಂ ನಾಯಕರು ಅಧಿಕಾರ ದಾಹಕ್ಕಾಗಿ ಈ ಹಾಡನ್ನು ಗೊತ್ತಿದ್ದು ಗೊತ್ತಿದ್ದು ತಪ್ಪಾಗಿ ಅರ್ಥೈಸಿಕೊಂಡರಾ?
ಮುಸ್ಲಿಂ ನಾಯಕರ ’ವಂದೇ ಮಾತರಂ’ದ್ವೇಷಕ್ಕೆ ಮತ್ತೊಂದು ಕಾರಣವನ್ನು ಊಹಿಸಬಹುದು. ಅದೇನೆಂದರೆ ಈ ಹಾಡು ಇರುವ ’ಅನಂದ ಮಠ’ಕಾದಂಬರಿಯ ಕಥಾವಸ್ತು. ಇಲ್ಲಿ ಬಂಗಾಳದ ಸಂತಾನ ಎಂಬ ಗುಡ್ಡಗಾಡು ಜನರು, ಆಕ್ರಮಣಕಾರಿ ಮುಸ್ಲಿಂರ ವಿರುದ್ಧ ಹೋರಾಡುತ್ತಾರೆ. ಈ ಗುಡ್ಡಗಾಡು ಜನರಿಗೆ ಸ್ಪೂರ್ತಿಯಾಗಿ ಈ ಹಾಡು ಕಾದಂಬರಿಯಲ್ಲಿ ಬಳಕೆಯಾಗುತ್ತದೆ. ಇದು ಮುಸ್ಲಿಂ ನಾಯಕರುಗಳಿಗೆ ನೋವು ತಂದಿರಬಹುದು.
ಸರಿ, ಒಪ್ಪೋಣ. ದೇಶದ ಜನರು ಆ ಕಾದಂಬರಿಯನ್ನು ಬಾಯಿ ಪಾಠ ಹೊಡೆಯಲಿ, ಆ ಪುಸ್ತಕವನ್ನ ’ರಾಷ್ಟ್ರ ಪುಸ್ತಕ’ಎಂದು ಘೋಷಿಸಲಿ ಎಂದು ಇಲ್ಲಿ ಯಾರೂ ಹೇಳುತ್ತಿಲ್ಲ. ಇನ್ನು ಈ ಕಾದಂಬರಿಯ ಬಗ್ಗೆ ದೇಶದ ಶೇ. ೯೯ ಮಂದಿಗೆ ಅರಿವೆ ಇರಲಿಕ್ಕಿಲ್ಲ. ಇದ್ದರೂ ಅದರ ಕಥಾಹಂದರದ ಬಗ್ಗೆ ಗೊತ್ತೇ ಇರಲಿಕ್ಕಿಲ್ಲ. ಅವರಿಗೆ ಈ ಹಾಡು ಹುಟ್ಟಿಸುವ ದೇಶಭಕ್ತಿ ಮುಖ್ಯ ಉಳಿದ ವಿಷಯಗಳು ನಗಣ್ಯ.
ಅದರಲ್ಲೂ ಆ ’ಹಿರಿದಾದ’ಹಾಡಿನಲ್ಲಿರುವ ಹಿಂದೂ ದೇವತೆಗಳ ವರ್ಣನೆಯನ್ನು ತೆಗೆದು ಟ್ರಿಮ್ ಮಾಡಿ ಮುಸ್ಲಿಂಮರ ಧಾರ್ಮಿಕ ನಂಬಿಕೆಗೆ ಯಾವ ಚ್ಯುತಿಯೂ ಆಗದ ರೀತಿಯಲ್ಲಿ ಈ ಹಾಡನ್ನು ಈಗ ಬಳಸಿಕೊಳ್ಳಲಾಗುತ್ತಿದೆ. ಆದರೂ ಉಲೇಮಾದ ನಖಾರ ಅದರ ಉದ್ದಟತನದ ಪ್ರತೀಕ.
ಈಗ ದೇಶದ ರಾಷ್ಟ್ರಗೀತೆ ’ಜನಗಣಮನ’ವನ್ನು ತೆಗೆದುಕೊಳ್ಳಿ. ಈ ಹಾಡನ್ನು ಎಲ್ಲರೂ ಗೌರವಿಸುತ್ತಾರೆ ನಿಜ. ಅದರೆ ಈ ಹಾಡು ’ಉತ್ಸವ ಮೂರ್ತಿ’ ರೀತಿ ಅನಿಸಿಬಿಟ್ಟಿದೆ. ಅದು ಇಂದಿಗೂ ದೇಶವಾಸಿಗಳ ಹೃದಯದ ಹಾಡಗಿಲ್ಲ, ಜನರನ್ನು ಬೆಸೆದಿಲ್ಲ, ಜನರಲ್ಲಿ ಯಾವುದೋ ಒಂದು ಉದ್ದೇಶಕ್ಕಾಗಿ ಶ್ರಮಿಸುವಂತೆ, ಹೋರಾಡುವಂತೆ ಮಾಡಿಲ್ಲ, ಜನರಿಗೆ ಸ್ಪೂರ್ತಿಯಾಗಿಲ್ಲ ಅದಕ್ಕಿಂತ ಹೆಚ್ಚಾಗಿ ಜನರ ಪ್ರಜ್ಞೆಗೆ ಇಳಿದೇ ಇಲ್ಲ.
’ವಂದೇ ಮಾತರಂ’ ಆ ಕಾಲದಲ್ಲಿ ಕೇವಲ ಹತ್ತು ವರ್ಷದಲ್ಲಿ ಸಾಧಿಸಿದನ್ನು ’ಜನಗಣಮನ’ಕ್ಕೇ ಈ ಕಾಲದಲ್ಲಿ ಕಳೆದ ೬೦ ವರ್ಷಗಳಿಂದ ಸಾಧಿಸಲು ಸಾಧ್ಯವಾಗಿಲ್ಲ.
ಇನ್ನು ಜಮಾತೇ ಉಲೇಮಾದ ವಿಷಯಕ್ಕೆ ಬರೋಣ, ಇದು ಅಸ್ತಿತ್ವಕ್ಕೆ ಬಂದದ್ದು ೧೯೧೯ರಲ್ಲಿ. ಭಾರತದಲ್ಲಿನ ಮುಸ್ಲಿಂಮರ ಶ್ರೇಯೋಭಿವೃಧಿ ಇದರ ಉದ್ದೇಶ. ಇದರ ಮುಖ್ಯ ಕಚೇರಿ ೧, ಬಹದ್ದೂರ್ ಶಾ ಜಾಫರ್ ರಸ್ತೆ, ನವದೆಹಲಿಯಲ್ಲಿದೆ.
ಇದು ಪಾಕಿಸ್ತಾನದ ಸೃಷ್ಟಿಯನ್ನು ವಿರೋಧಿಸಿತ್ತು. ಇದಕ್ಕಿಂತ ಅಶ್ಚರ್ಯದ ವಿಷಯವೆಂದರೆ ಕಳೆದವರ್ಷ ಭಯೋತ್ಪಾದನೆ ವಿರುದ್ದ ಪತ್ವಾ ಹೋರಡಿಸಿತ್ತು. ಈಗ ’ವಂದೇ ಮಾತರಂ’ವಿರುದ್ದ ಫತ್ವಾ! ಅಂದರೆ ಮುಗ್ದರನ್ನು ಕೊಲ್ಲವವರು ಮತ್ತು ’ವಂದೇ ಮಾತರಂ’ಹಾಡುವ ಮುಸ್ಲಿಂಮರು ಒಂದೇ ಎಂದ ಹಾಗಯ್ತು.
ಒಬ್ಬ ಮುಗ್ದನನ್ನು ಕೊಲ್ಲುವುದು, ಇಡೀ ಮಾನವ ಜನಾಂಗದ ಹತ್ಯೆ ಮಾಡಿದ ಪಾಪಕ್ಕೆ ಸಮ ಎಂದು ಕುರಾನ್ನಲ್ಲಿ ಇದೆಯೆಂದು ಬಲ್ಲವರು ಹೇಳುತ್ತಾರೆ. ಆದರೆ ಅದೆಲ್ಲದಕ್ಕಿಂತ ಹೆಚ್ಚು ಪಾಪದ ಕೆಲಸ ’ವಂದೇ ಮಾತರಂ’ಹಾಡುವುದು!
’ವಂದೇ ಮಾತರಂ’ಹಾಡಿದೊಡನೆ ಕುಸಿದು ಬೀಳುವಷ್ಟು ಜಾಳಾಗಿದೆಯಾ ಇಸ್ಲಾಂ? ಇದು ಪ್ರಶ್ನೆಯಲ್ಲ, ಸಂಶಯ.
ಸೂಡಾನ್ನ ಶೇಕ್ ಸಾದಿಕ್ ಅಬ್ದದಲ್ಲಾ ಬಿನ್ ಮಜೀದ್ ಎಂಬ ಮುಸ್ಲಿಂ ನಾಯಕ ಮಕ್ಕಳಿಗೆ ಲಸಿಕೆ ಕೊಡಿಸುವುದರ ವಿರುದ್ದ ಫತ್ವಾ ಹೊರಡಿಸಿದ್ದ. ಇರಾನ್ನ ಅಯೆತೊಲ್ಲ ಆಲಿ ಕಮೇನಿ, ಅಣ್ವಸ್ತ್ರ ಬಳಕೆ ಮತ್ತು ಶೇಖರಣೆ ವಿರುದ್ದ ಫತ್ವಾ ಹೊರಡಿಸಿದ್ದ. ಇನ್ನು, ಒಸಮಾ ಬಿನ್ ಲಾದನ್ ೧೯೯೬ ಮತ್ತು ೧೯೯೮ರಲ್ಲಿ ಹೊರಡಿಸಿದ್ದ ಫತ್ವಾದಲ್ಲಿ ಅಮೆರಿಕ, ಇಸ್ರೇಲ್ಗೆ ತನ್ನ ಬೆಂಬಲ ವಾಪಸ್ ಪಡೆದುಕೊಳ್ಳುವವರೆಗೆ ಮತ್ತು ಮುಸ್ಲಿಂ ರಾಷ್ಟ್ರಗಳಲ್ಲಿರುವ ತನ್ನ ಸೈನ್ಯವನ್ನು ವಾಪಸ್ ಪಡೆದುಕೊಳ್ಳುವವರೆಗೆ ಅದರ ನಾಗರಿಕರನ್ನು ಮತ್ತು ಸೈನಿಕರನ್ನು ಕೊಲ್ಲುವಂತೆ ಹೇಳಿದ್ದ. ಇವು ಕೆಲವೇ ಕೆಲವು ಸಾಮಾಜಿಕ ಪರಿಣಾಮ ಬೀರುವ ಮತ್ತು ಬೀರಿದ ಫತ್ವಾಗಳು.
ಇದರ ಜೊತೆ ಜೊತೆಗೆ ಸಿಗರೇಟ್ ಸೇವನೆಯ ವಿರುದ್ದ ಫತ್ವಾವಿದೆ. ಭಯೋತ್ಪಾದನೆಯ ವಿರುದ್ದವೂ ಫತ್ವಾವಿದೆ. ಇಂತಹ ಫತ್ವಾ ಇದ್ದರೂ ಮುಸ್ಲಿಂಮರು ಎಗ್ಗಿಲ್ಲದೆ ಸಿಗರೇಟ್ ಸೇದುತ್ತಾರೆ. ಭಯೋತ್ಪಾದನ ಚಟುವಟಿಕೆ ಅಥವಾ ಕೊಲ್ಲುವ, ಹಲ್ಲೆ ಮಾಡುವ ಚಟುವಟಿಕೆಗಳಲ್ಲಿ ’ಉತ್ಸಾಹ’ದಿಂದ ಪಾಲ್ಗೊಳ್ಳುತ್ತಾರೆ. ಇದರರ್ಥ, ಅವರು ಫತ್ವಾಕ್ಕೆ ಸೊಪ್ಪು ಹಾಕುತ್ತಿಲ್ಲ ಬದಲು ಟೋಪಿ ಹಾಕುತ್ತಿದ್ದರೆ ಎಂದಾಯಿತು.
ಅದ್ದರಿಂದ ’ವಂದೇ ಮಾತರಂ’ಬಗೆಗೂ ಅವರ ಪ್ರತಿಕ್ರಿಯೆ ಅದೇ ರೀತಿ ಇರಬಹುದು ಎಂದು ಊಹಿಸಬಹುದು. ಹಾಗೇ ಆಗಿದ್ದೇ ಆದಲ್ಲಿ ಖಂಡಿತ ಇದೊಂದು ಅಭೂತ ಪೂರ್ವ ಬೆಳವಣಿಗೆ. ಆದರೆ ಇದು ಹಾಗೇ ಆಗುವುದಿಲ್ಲ ಎಂದು ನಂಬಲು ಬಲವಾದ ಕಾರಣವಿದೆ. ಯಾಕೆಂದರೆ ’ವಂದೇ ಮಾತರಂ’ನ್ನು ವಿರೋಧಿಸಲು ಮತ ಪಂಡಿತರು ನೀಡಿರುವ ಕಾರಣ ಅದು ಹಿಂದೂ ದೇವತೆಗಳನ್ನು ಹೊಗಳುತ್ತದೆ ಎಂಬುದು. ಇಸ್ಲಾಂ ’ಅಲ್ಲಾಹು’ನ ಹೊರತಾಗಿ ಯಾರನ್ನೂ ಮತ್ತೂ ಯಾವುದನ್ನು ದೇವರೆಂದು ಪರಿಗಣಿಸುವುದಿಲ್ಲ. ಈಗ ನೀ ’ವಂದೇ ಮಾತರಂ’ಹಾಡಿದರೆ ಅದು ನೀನು ’ಅಲ್ಲಾಹು’ವಿಗೆ ಮಾಡುವ ಅಪಚಾರ ಎಂದು ಬಿಂಬಿಸಿದರೆ ಸಾಕು. ಮುಸ್ಲಿಂಮರು ತಪ್ಪಿಯೂ ಅ ಪದವನ್ನು ಉಸುರುವುದಿಲ್ಲ.
ಫತ್ವಾ ಹೊರಡಿಸುವವರು ’ಪರಿಶುದ್ದ’ರು ಎಂದು ನೀವು ತಿಳಿದುಕೊಳ್ಳಬೇಡಿ. ೨೦೦೮ರಲ್ಲಿ ಟಿವಿ ಚಾನೆಲ್ವೊಂದು ನಡೆಸಿದ ’ಕುಟುಕು ಕಾರ್ಯಾಚರಣೆ’ಯಲ್ಲಿ ಹಣ ಪಡೆದು ಫತ್ವಾ ಹೋರಾಡಿಸುತ್ತಿದ್ದ ಅನೇಕ ಮುಸ್ಲಿಂ ನಾಯಕರು ’ಬೆಳಕಿಗೆ’ ಬಂದಿದ್ದರು.
ದೇಶದ ೯೦ ಕೋಟಿ ಜನರಿಂದ ಈ ೧೬ ಕೋಟಿ ಮುಸ್ಲಿಂಮರನ್ನು ದೂರವಿಡುವ ಕೆಲಸವನ್ನು ಕಾಲಕಾಕ್ಕೆ ಈ ಮುಸ್ಲಿಂ ನಾಯಕರುಗಳು ಯಾಕೆ ಮಾಡುತ್ತಿದ್ದಾರೆ? ಈ ಹಿಂದೆಯೂ ಇಂತಹ ನಾಯಕರುಗಳ ಮಾತು ಕೇಳಿದ ಮುಸ್ಲಿಂಮರು ಇಂದು ಪಾಕಿಸ್ತಾನ ಮತ್ತು ಬಾಂಗ್ಲದೇಶಗಳಲ್ಲಿ ಪಡಬಾರದ ಯಾತನೆ ಪಡುತ್ತಿದ್ದಾರೆ. ಅದ್ದರಿಂದ ಇಂತಹ ದೊಣ್ಣೆ ನಾಯಕರುಗಳ ವಿಷ ಮಾತುಗಳಿಗೆ ದೇಶದ ಮುಸ್ಲಿಂಮರು ಮಣೆ ಹಾಕಬಾರದು.
ಇಲ್ಲಿನ ಬಹುಸಂಖ್ಯಾತರ ಜೊತೆ ಕೂಡಿ ಬಾಳುವ ದಿಸೆಯಲ್ಲಿ, ಮತ್ತವರ ನಂಬಿಕೆಯನ್ನು ಗೌರವಿಸಿ ಸಾಮರಸ್ಯದ ಬದುಕು ಕಟ್ಟುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ದೇಶ ಖಂಡಿತವಾಗಿಯೂ ಅವರನ್ನು ಹೃದಯದಲ್ಲಿಟ್ಟು ಗೌರವಿಸುತ್ತದೆ. ಉದಾಹರಣೆಗೆ ಪ್ರಸಕ್ತ ಭಾರತದ ಸರ್ವಶ್ರೇಷ್ಟ ನಾಯಕ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಚಲನಚಿತ್ರ ತಾರೆಯರು, ಕ್ರೀಡಾ ಕಲಿಗಳನ್ನು, ನಾನ ಕ್ಷೇತ್ರಗಳಲ್ಲಿನ ಸಾಧಕರನ್ನು ನಾವು ಜಾತಿ ಮತದ ಹಂಗಿಲ್ಲದೆ ಗೌರವಿಸಿದ್ದೇವೆ, ಪ್ರೀತಿಸಿದ್ದೇವೆ ಮುಂದೆಯೂ ನಾವು ಈ ಕಾರ್ಯ ಮಾಡಲಿದ್ದೇವೆ.
ಇಲ್ಲ, ನಿಮಗೆ ಇಂತಹ ಫತ್ವಾಗಳೇ ಮುಖ್ಯವಾಗುವುದಾದರೇ ಅಂದು ಫತ್ವಾ ಹೊರಡಿಸುವಾಗ ವೇದಿಕೆಯಲ್ಲಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಇದ್ದರು ಮತ್ತು ಅವರು ಸುಮ್ಮನಿದ್ದರು ಮತ್ತು ಈಗಲೂ ಸುಮ್ಮನಿದ್ದಾರೆ ಬಹುಶಃ ಮುಂದೆಂಯೂ ಸುಮ್ಮನಿರುತ್ತಾರೆ. ಅವರಿಗೆ ಮತ್ತು ಫತ್ವಾ ಹೊರಡಿಸಿದವರಿಗೆ ’ಮತ’ದಾಸೆ. ಆದರೆ ದೇಶದ ೯೦ ಕೋಟಿ ಜನರು ಹಾಗಿಲ್ಲ, ಹಾಗಿರುವುದು ಇಲ್ಲ! ಯಾಕೆಂದರೆ ಅವರಿಗಿರುವುದು ದೇಶದ ಸಮಗ್ರತೆಯನ್ನು ಉಳಿಸಿಕೊಳ್ಳುತ್ತೇವೆ ಎಂಬ ಮಹಾದಾಸೆ!
Friday, October 23, 2009
ಮೈಸೂರಿನಲ್ಲೊಂದು ಪತ್ರಿಕೋದ್ಯಮ ಕಾರ್ಯಾಗಾರ... ಈಗ ನನ್ನದು ವರದಿ ನೀಡೋ ಸರದಿ!
ಇದನ್ನು ನಾನು ವಿಶ್ಲೇಷಣ ವರದಿ ಅಂತ ಅಂದ್ಕೊಡಿದ್ದೇನೆ...!
ಅಂದು ಗುರುವಾರ, ದಿನಾಂಕ 8/10/2009. ಸಮಯ ಮಧ್ಯಾಹ್ನ 2 ಗಂಟೆ. ನಮ್ಮ ಕಾಲೇಜಿನ (ಎಸ್ ಡಿ ಎಂ ಕಾಲೇಜು) ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ 16 ವಿದ್ಯಾರ್ಥಿಗಳು ಧರ್ಮಸ್ಥಳದಿಂದ ಮೈಸೂರಿಗೆ ಹೋಗುತ್ತಿದ್ದ ಬಸ್ ಏರಿ ಆಗಿತ್ತು. ನಮ್ಮೊಂದಿಗೆ ಚಂದ್ರಲೇಖ ಮ್ಯಾಮ್ ಕೂಡ ಇದ್ದರು. ಆ ಬಸ್ ನಲ್ಲಿ ನಾವು 17 ಮಂದಿಯ ಹೊರತಾಗಿ ಒಬ್ಬನೇ ಪಯಣಿಗನಿದ್ದದ್ದು! ಅದ್ದರಿಂದ ಆ ಬಸ್ಸು ನಮ್ಮದೇ ಆಗಿತ್ತು ಎನ್ನಲೂ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಾಗಿಲ್ಲ!
ಬಸ್ಸಿನ ಕುಲುಕಾಟಕ್ಕೆ ನಮ್ಮ ಹುಡುಗಾಟದ ಸಾಥ್ ಸೇರಿ ಪಯಣವಂತೂ ಬೊಂಬಾಟ್. ಬಗೆ ಬಗೆ ತಿಂಡಿತಿನಿಸುಗಳು ಗೆಳೆಯ - ಗೆಳತಿಯರ ಜೋಳಿಗೆಯಲ್ಲಿತ್ತು. ಅದನ್ನು ನಾವೆಲ್ಲ ಹಂಚಿಕೊಂಡು ತಿನ್ನುತ್ತಾ 'ಹಂಚಿ ತಿನ್ನುವುದರಲ್ಲಿ ಸ್ವರ್ಗಸುಖವಿದೆ' ಎಂಬ ಹಿರಿಯರ ಮಾತನ್ನು ಪರಾಂಬರಿಸಿ ನೋಡಿದೇವು. ಚೇತನ್ ಅಲಿಯಾಸ್ ಚೇತು ತಿಂಡಿ ವಿತರಣೆಯ ಸಂಪೂರ್ಣ ಹಕ್ಕನ್ನು ಪಡೆದುಕೊಂಡಿದ್ದ ಮತ್ತು ಇದರಿಂದ ಅವನು ಸಾಕಷ್ಟು ಲಾಭಮಾಡಿಕೊಂಡಿದ್ದಾನೆ ಎಂದು ಜನರಾಡಿಕೊಳ್ಳುತ್ತಿದ್ದಾರೆ! ನಂದಂತೂ 'ಓಸಿ ಜೀವನವೇ ಲೇಸು ಸರ್ವಜ್ಙ' ಎಂಬ ಜನರ ಮಾತನ್ನು ಸತ್ಯಮಾಡಲೇಬೇಕು ಎಂಬ ಪಣ.
ನಾವು ರಾತ್ರಿ 9 ಗಂಟೆಯ ಸುಮಾರಿಗೆ ಮೈಸೂರು ತಲುಪಿದೆವು. ಅಲ್ಲಿ ಊಟ ಮುಗಿಸ್ಕೊಂಡು ಎರಡು ಗುಂಪಾಗಿ ಭಾಗವಾದೇವು. ಒಂದು ಗುಂಪು ಕೇಂದ್ರ ಸರಕಾರದ ಒಡೆತನದ ಯೂತ್ ಹಾಸ್ಟೆಲ್ ಗೆ ಹೋದರೆ ಮತ್ತೊಂದು ಗುಂಪು ಕರ್ನಾಟಕ ಒಪನ್ ಯುನಿವರ್ಸಿಟಿಯ ಹಾಸ್ಟೇಲ್ ಸೇರಿಕೊಂಡಿತು.
ನಾವು ಸುಖಾಸುಮ್ಮನೆ ಮೈಸೂರಿಗೆ ಹೋದದ್ದಲ್ಲ. ಅಲ್ಲಿನ ಜಯಲಕ್ಷ್ಮಿಪುರಂನಲ್ಲಿರುವ ಮಹಾಜನ ಕಾಲೇಜಿನಲ್ಲಿ ಅಕ್ಟೋಬರ್ 9 ಮತ್ತು 10 ರಂದು ಆಯೋಸಲಾಗಿದ್ದ 'ಪ್ರಸ್ತುತ ಪತ್ರಿಕೋದ್ಯಮ: ಪತ್ರಕರ್ತರ ಮುಂದಿರುವ ಸೃಜನಶೀಲ ಸವಾಲುಗಳು' ಎಂಬ ರಾಜ್ಯಮಟ್ಟದ ಕಾರ್ಯಗಾರದಲ್ಲಿ ಭಾಗವಹಿಸಲು.
ಕಾರ್ಯಗಾರ: ಮಾಹಿತಿಯ ಆಗರ
ನಾನು ಅಲ್ಲಿ ಕಳೆದ ಎಲ್ಲಾ ಕ್ಷಣಗಳನ್ನು ಇಲ್ಲಿ ಬರೆಯುವುದಿಲ್ಲ. ಬರೆದರೆ, ಅದು ನನ್ನ ಡೈರಿ ಅಥವಾ ವರದಿಯಾಗಿ ಬಿಡಬಹುದು. ಅದ್ದರಿಂದ ಹೇಳಲೇ ಬೇಕು ಎಂದೆನಿಸಿ, ಹೇಳದೆ ಇರಲಾಗದ್ದನ್ನು ಮತ್ತು ಈ ಬ್ಲಾಗ್ ನ ಓದುಗರಿಗೆ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಒಂಚೂರಾದರೂ ಪ್ರಯೋಜನವಾಗಬಹುದು ಎಂದೆನಿಸಿದನ್ನು ಮಾತ್ರ ಇಲ್ಲಿ ಬರೆಯುತ್ತೇನೆ.
ಕಾರ್ಯಗಾರವನ್ನು 'ವಾಯ್ಸ್ ಅಫ್ ಮೈಸೂರು' ಪತ್ರಿಕೆಯ ಸಂಪಾದಕ, ರಾಜಕಾರಣಿ, ವಾಸು ಉದ್ಘಾಟಿಸಿದರು.
ಆದರೆ ಕಾರ್ಯಕ್ರಮದಲ್ಲಿ ಚಿಂತನೆಯ ಕಿಡಿ ಹೊತ್ತಿಸಿದ್ದು 'ಮೈಸೂರು ಮಿತ್ರ’ ಮತ್ತು 'ಸ್ಟಾರ್ ಅಫ್ ಮೈಸೂರು' ಪತ್ರಿಕೆಯ ಸಂಪಾದಕ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ. ವಿ. ಗಣಪತಿ. ಅವರು ಅಕ್ಷರಶ: ಸಿಡಿಗುಂಡೇ ಆಗಿದ್ದರು. ಅದರಲ್ಲೂ ಕೆಲ ಪತ್ರಿಕೆಗಳ ’ತಲೆಬರಹ’ ಶೈಲಿಯನ್ನು ಉದಾಹರಣೆ ಸಹಿತ ಖಂಡಿಸಿದ ಅವರು ಪತ್ರಿಕೆಗಳ ಮನೋಭಾವವನ್ನು ಪ್ರಶ್ನಿಸುತ್ತಾ ಸಾಗಿದರು. ಸ್ವಾತಂತ್ರ್ಯ ಪೂರ್ವದಲ್ಲೂ ಜನಪ್ರಿಯ ಅಂಗ್ಲ ಪತ್ರಿಕೆಗಳ ಬ್ರಿಟೀಷ್ ಸೇವೆ ಮತ್ತು ಅದರ ಇಬ್ಬಂದಿತನವನ್ನು ಬೆತ್ತಲೆ ಮಾಡಿದ ಅವರು ಭಾಷಾ ಪತ್ರಿಕೆಗಳು ಮಾತ್ರ ಸ್ವಾತಂತ್ರ್ಯ ಹೋರಾಟದ ಕೈಂಕರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವು ಎಂದರು. 'ಕಾರ್ಯಕಾರಿ ಸಂಪಾದಕ' ಎಂಬ ಹೊಸ ಬೆಳವಣಿಗೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು ಪರ್ತಕರ್ತರು ಸ್ವತಂತ್ರ ಮತ್ತು ವೃತ್ತಿಪರರಾಗಿರಬೇಕು ಎಂದರು.
ಅವರು ಕನ್ನಡದ ಜನಪ್ರಿಯ ಪತ್ರಿಕೆಯೊಂದನ್ನು ಗುರಿಯಾಗಿಸಿಕೊಂಡೇ ಮಾತನಾಡಿದರು ಎಂದು ಯಾರಿಗಾದರೂ ಅನಿಸದೇ ಹೋಗಿದ್ದರೆ ಅವರ ಮಾತಿಗೆಯೇ ಅವಮಾನ ಮಾಡಿದಂತೆ.
ಕೆ.ವಿ. ಗಣಪತಿ ಹೇಳಿದ ಅನೇಕ ಸಂಗತಿಗಳು ಸತ್ಯವಾದದ್ದು. ಆದರೆ ಅವರು ಎಲ್ಲೋ ಒಂದು ಕಡೆ ವಸ್ತುನಿಷ್ಟತೆಯನ್ನು ಮರೆತು 'ಇಸಂ'ನಿಷ್ಟತೆಗೆ ಬಲಿಯಾದರು ಎಂದು ಅನಿಸದೇ ಇರಲಿಲ್ಲ. ಅದರಲ್ಲು ಅವರು 'ತಲೆ ಬರಹ'ಕ್ಕೆ ಉದಾಹರಣೆ ಕೊಡುತ್ತ ಒಂದು ಅಥವಾ ಎರಡು ಪತ್ರಿಕೆಯ 'ತಲೆಬರಹ'ಗಳ ಉದಾಹರಣೆ ಮಾತ್ರ ಕೊಟ್ಟರು. ಅದರರ್ಥ, ಕನ್ನಡದಲ್ಲಿ ನೂರಾರು ಪತ್ರಿಕೆಗಳಿದ್ದರು ಎರಡು ಪತ್ರಿಕೆಗಳು ಮಾತ್ರ ಕೆಟ್ಟ 'ತಲೆಬರಹ' ಕೊಡುತ್ತವೆ ಎಂದಾ? ಹಾಗಾದರೆ ಇದು ಸಂತಸ ಪಡಬೇಕಾದ ಸಂಗತಿ ಅಲ್ಲವೇ?
ಮುಂದಿನದ್ದು ಅವಧಿಗಳ ಯುಗ...
ಬೀಟ್ ನಲ್ಲಿ ಬೇರು ಬಿಡಿ ಆದರೆ ತಳವೂರಬೇಡಿ: ಭಟ್
ಮೊದಲ ಅವಧಿ 'ಸಂಪಾದಕೀಯ ಪುಟ'ದ ಬಗೆ ಇತ್ತು. ಸಂಪನ್ಮೂಲ ವ್ಯಕ್ತಿಯಾಗಿ ’ವಿಜಯ ಕರ್ನಾಟಕ’ದ ಕಾರ್ಯನಿವಾರ್ಹಕ ಸಂಪಾದಕ, ವಿಶ್ವೇಶ್ವರ ಭಟ್ ಆಗಮಿಸಿದರು. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಅವರು 'ಸಂಪಾದಕೀಯ ಪುಟ'ದ ಬಗೆ ಒಂದೇ ಒಂದು ಮಾತು ಆಡಲಿಲ್ಲ! ಹಾಗಂತ ಗೊತ್ತುಗುರಿಯಿಲ್ಲದ ಮಾತು ಅವರದಾಗಿರಲಿಲ್ಲ. ಅವರ ಮಾತು ಗಿರಕಿ ಹೊಡೆದದ್ದು ಒಬ್ಬ ಪತ್ರಕರ್ತನಿಗೆ ಅದರಲ್ಲೂ ಭಾವಿ ಪತ್ರಕರ್ತನಿಗೆ ಇ- ಮೈಲ್, ಟ್ವೀಟರ್, ಬ್ಲಾಗ್ ಮುಂತಾದವು ಎಷ್ಟು ಅವಶ್ಯಕ ಎಂಬುದರ ಬಗೆ.
ಆಧುನಿಕ ಸಂಪರ್ಕ ಸಾಧನಗಳ ಬಳಕೆಯ ಬಗ್ಗೆ ನಿಮಗೆ ಗೊತ್ತಿಲ್ಲವೆಂದರೆ ನೀವು ಎಷ್ಟು ಚೆನ್ನಾಗಿ ಬರೆಯುವವರಾದರೂ ನಾನಂತು ನಿಮಗೆ ಖಂಡಿತವಾಗಿಯೂ ಕೆಲಸ ಕೊಡುವುದಿಲ್ಲ ಎಂದು ಭಟ್ರು ಇದೇ ಸಂದರ್ಭದಲ್ಲಿ ಒಂಚೂರು ಖಾರವಾಗಿ ಹೇಳಿದರು.. ಒಬ್ಬ ಪತ್ರಕರ್ತನಿಗೆ ಅಧುನಿಕ ಸಂಪರ್ಕ ಸಾಧನಗಳ ಬಗೆಗಿನ ಆರಿವು ಇರಬೇಕು, ನಿಜ. ಆದರೆ ಆದೇ ಅವನ ಬರವಣಿಗೆಗೆ ಬದಲಿ ಎಂದೆನಿಸಿಕೊಳ್ಳುವುದು ಸರಿಯಾ? ಉದಾಹರಣೆಗೆ ಇ - ಮೈಲ್ ಬಳಕೆಯನ್ನು ಒಂದು ಗಂಟೆಯೊಳಗೆ ಯಾರು ಬೇಕಾದರೂ ಕಲಿತುಕೊಳ್ಳಬಹುದು, ಅದೇ ಬರವಣಿಗೆಯನ್ನು ಹಾಗೆ ಬಗ್ಗಿಸಿಕೊಳ್ಳಲು ಸಾಧ್ಯನಾ?
ಇನ್ನೂ ಎರಡು ವರ್ಷಗಳಲ್ಲೇ ಭಾಷಣ ವರದಿಗಾರಿಕೆ ಎಂಬುದೇ ಇರುವುದಿಲ್ಲ ಎಂಬ ಅಭಿಪ್ರಾಯ ಅವರದ್ದು. ಅದ್ದರಿಂದ ಭಾಷಣಗಳ ವರದಿ ಮಾಡಿ ನಾನು ಪತ್ರಕರ್ತನಾಗುತ್ತೇನೆ ಅಥವಾ ಆಗಿದ್ದೇನೆ ಎಂದು ಭಾವಿಸುವವರ ಅಥವಾ ಭಾವಿಸುತ್ತಿರುವವರ ತಲೆ ಮೇಲೆ ಅಪಾಯದ ಬಾವುಟ ನೆಟ್ಟಿದ್ದಾರೆ ಭಟ್ರು. ಇದು ನಮಗೆಲ್ಲರಿಗೂ ಎಚ್ಚರಿಕೆಯ ಗಂಟೆಯೂ ಹೌದು ಪತ್ರಿಕಾವರದಿಗಾರಿಕೆ ಹೊಸ ಸಾದ್ಯತೆಯೊಂದನ್ನು ಕಂಡುಕೊಳ್ಳಲಿದೆ ಎಂಬುದರ ಸೂಚನೆಯೂ ಹೌದು.
ಭಟ್ರು, ಮತ್ತೊಂದು ವಾಗ್ಬಾಣ ಬಿಟ್ಟದ್ದು ಹುಡುಗಿಯರ ಮೇಲೆ. ಅವರು ತಮ್ಮ ದೈನಂದಿನ ಅಂಕಣ, 'ವಕ್ರತುಂಡೋಕ್ತಿ'ಯಲ್ಲಿ ಹುಡುಗಿಯರ ಮೇಲೆ ಸಾಕಷ್ಟು ಬಾಣ ಪ್ರಯೋಗಿಸಿದ್ದರೂ ಕೂಡ ಇಲ್ಲಿ ಅವರು ಎತ್ತಿಕೊಂಡಿದ್ದ ವಿಷಯ ತುಸು ಗಂಭೀರ. ನಾನು ಎರಡು ಮೂರು ವರ್ಷ ಪರ್ತಕರ್ತೆಯಾಗಿರುತ್ತೇನೆ ಅಥವಾ ಮದುವೆಯಾಗುವ ತನಕ ಮಾತ್ರ ಈ ವೃತ್ತಿ ನನ್ನದು ಎಂದು ಭಾವಿಸಿಕೊಂಡು ದಯಮಾಡಿ ಈ ಕ್ಷೇತ್ರಕ್ಕೆ ಬರಬೇಡಿ ಎಂಬುದು ಅವರ ವಿನಂತಿ. ವಿಷಯ ಸರಳವಾಗಿದ್ದರು ಕೂಡ ಇದರೊಳಗೊಂದು ಗಂಭೀರ ಪ್ರಶ್ನೆ ಮತ್ತು ಕಟು ಸತ್ಯವಿದೆ.
ನಮ್ಮನ್ನು ನಾವು 'ರಿ - ಇನ್ವೇಂಟ್' ಮಾಡಿಕೊಳ್ಳುತ್ತಿರಬೇಕು ಇಲ್ಲದಿದ್ದಲ್ಲಿ ಅಪ್ರಸ್ತುತರಾಗಿ ಬಿಡುತ್ತೇವೆ, ನಮ್ಮ ಯೋಚನೆಗಳು ಉಳಿದವರಿಗಿಂತ ಭಿನ್ನವಾಗಿರಲಿ ನಾವು ಎಲ್ಲಿದ್ದೇವೆ ಎಂಬುದು ಮುಖ್ಯವಲ್ಲ ಏನು ಮಾಡುತ್ತಿದ್ದೇವೆ ಎಂಬುದು ಮುಖ್ಯ ಹೀಗೆ ಅವರ ಮಾತು ಸಾಗಿತು.
'ನೀವು ನೀಡುವ ವರದಿ ವಿಭಿನ್ನವಾಗಿರಲಿ' ಎಂಬ ಅವರ ಮಾತು ಕೂಡ ಚಚರ್ಗೆ ಕಾರಣವಾಗುವಂತದ್ದು ಮತ್ತು ಕಾರಣವಾಗಿದ್ದು. ಯಾಕೆಂದರೆ 'ವರದಿ' ಅಂದಾಗ ನಮ್ಮ ಕಣ್ಣ ಮುಂದೆ ಕೆಲವು ಸಿದ್ಧ ಮಾದರಿಗಳು ಬರುತ್ತವೆ. ಆದರೆ ಅದರೊಂದಿಗೆ ಕೆಲವು ಸುದ್ದಿ ಮೌಲ್ಯಗಳು ಕೂಡ ಸೇರಿಕೊಂಡಿರುತ್ತದೆ ಅದರಲ್ಲೂ ಸರಳ ಭಾಷೆ, ವಸ್ತುನಿಷ್ಟತೆ ಮತ್ತು ನಿಖರತೆ ಮುಖ್ಯವಾದದು ಅನ್ನುವುದಕ್ಕಿಂತ ಇರಲೇ ಬೇಕಾದದ್ದು ಎಂದರೆ ಸೂಕ್ತ. ಇನ್ನೂ ಯಾವ ಪತ್ರಿಕೆ, ಎಷ್ಟರ ಮಟ್ಟಿಗೆ ಈ ಮೌಲ್ಯಗಳನ್ನು ಪಾಲಿಸುತ್ತಿದೆ ಎಂಬ ಪ್ರಶ್ನೆ ನಮ್ಮ ಮುಂದೆ ಬರಬಹುದು. ಅದರೆ ಅದನ್ನು ಬದಿಗಿಟ್ಟು ಯೋಚಿಸಿದರೆ 'ವರದಿಗಾರಿಕೆ'ಗೆ ವಿಭಿನ್ನತೆ ಕೊಡುವ ಪ್ರಯತ್ನ ಪತ್ರಿಕೋದ್ಯಮದ ಬುಡವನ್ನೇ ಅಲುಗಾಡಿಸುವಂತದ್ದು ಎಂದು ನನಗನಿಸುತ್ತದೆ. ಯಾಕೆಂದರೆ ಈ ಸಂದರ್ಭದಲ್ಲಿ ವರದಿಗಾರ ತನ್ನ 'ವರದಿ'ಯ ಮೇಲೆ ಒಂದು ರೀತಿಯ ಸ್ವಾಯತ್ತತೆ ಪಡೆದುಕೊಳ್ಳುತ್ತಾನೆ ಮತ್ತು ತನ್ನ ಮೂಗಿನ ನೇರಕ್ಕೆ ಎಲ್ಲವನ್ನೂ ಕಾಣಲು ಶುರುಮಾಡುತ್ತಾನೆ ಇದರಿಂದ ಸುದ್ದಿಯ ವಿಶ್ವಾಸಾರ್ಹತೆ ಕುಂದುತ್ತದೆ ಅದರೊಂದಿಗೆ ಪತ್ರಿಕೆಯ 'ಇಸಂ' ಕೂಡ ಸೇರಿ ಸುದ್ದಿಯ ಶುದ್ದತೆ ಹಾಳಾಗಿ ಸುದ್ದಿ ಎಂಜಲೆಲೆ ಆಗಬಹುದು. ಆದರೆ ಪ್ರಬುದ್ಧ ವರದಿಗಾರ ಮತ್ತು ಉಪಸಂಪಾದಕರಿದ್ದಲ್ಲಿ ಇದು ಒಳಿತನ್ನುಂಟು ಮಾಡಬಹುದು. ಆದರೆ ಪತ್ರಕರ್ತ ಮತ್ತು ಪ್ರಬುದ್ದತೆ ಎಂಬುದು ಪರಸ್ಸರ ವಿರುದ್ಧ ಪದಗಳಾಗುತ್ತಿರುವ ಈ ಕಾಲಘಟ್ಟದಲ್ಲಿ ಇಂತಹ ಯೋಚನೆಯೇ ತಿರುಕನ ಕನಸು ಎಂದು ನನಗನಿಸುತ್ತದೆ.
ಭಟ್ರು 'ಪವರ್ ಪಾಯಿಂಟ್ ಪ್ರಸೆಂಟೇಶನ್' ಮೂಲಕ ತಮ್ಮ ಸಲಹೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ 'ಸಾಸಿವೆ ಬಿದ್ದರು ಕೇಳಿಸುವಷ್ಟು ಮೌನ'ವಿತ್ತು. ಇದರರ್ಥ ಎಲ್ಲರೂ ನಿದ್ದೆ ಮಾಡುತ್ತಿದ್ದರು ಎಂದಲ್ಲ! ಅಷ್ಟೂ ತದೇಕಚಿತ್ತರಾಗಿ ಭಟ್ರ ಮಾತು ಕೇಳಿಸುತ್ತಿದ್ದರು.
ಅವರ ಸರಳತೆಯ ಅರಿವು ನನಗಾದದ್ದು, ಅವರು ಊಟಕ್ಕೆ ಕುಳಿತಾಗ. ಒಬ್ಬ ಅರೆ ಹುಚ್ಚ ತಾನು ಕೂಡ ಅವರ ಜತೆ ಊಟಕ್ಕೆ ಕೂರುತ್ತೇನೆ ಎಂದು ಹಠ ಹಿಡಿದಿದ್ದ. ಸಂಘಟಕರು ಅವನನ್ನು ಒದ್ದು ಹೊರ ಹಾಕಲು ಸಿದ್ಧರಾಗಿದ್ದರು ಆದರೆ ಭಟ್ರು ಅವನನ್ನು ತನ್ನ ಜೊತೆ ಕುಳ್ಳಿರಿಸಿ ಸಹಭೋಜನ ಮಾಡಿದರು.
ಮಧ್ಯಾಹ್ನದ ಸುಗ್ರಾಸ ಭೋಜನದ ಬಳಿಕದ ಅವಧಿಯನ್ನು ಪ್ರಖ್ಯಾತ ಸುದ್ದಿ ಚಿತ್ರ ಬರಹಗಾರ್ತಿ ಸುಶೀಲಾ ನಾಯರ್ ತೆಗೆದುಕೊಂಡರು. ಅವರು ವಿಶೇಷ ವಿಷಯಗಳನ್ನೇನೂ ಹೇಳಲಿಲ್ಲ. ಬಹುಶ: ಒಂಚೂರಾದರೂ ಸಪ್ಪೆ ಎನಿಸಿಕೊಂಡ ಅವಧಿ ಇವರದ್ದೇ ಇರಬೇಕು. ಪ್ರತಿ ಅವಧಿಯಲ್ಲಿ ಮುಗಿ ಬಿದ್ದು ಪ್ರಶ್ನೆ ಕೇಳುತ್ತಿದ್ದವರು ಆಗ ನಿದ್ದೆಗೆ ಶರಣಾಗಿದ್ದರು!
ಅನಂತರದ ಅವಧಿ ಬಿಸಿಬಿಸಿ ಸುದ್ದಿಗೆ ಹೆಸರಾದ ಕನ್ನಡದ ಮೊದಲ 24*7 ಸುದ್ದಿ ಚಾನೆಲ್ ಟಿವಿ 9ನ ಕಾರ್ಯಕ್ರಮ ನಿರ್ಮಾಪಕ ರಾಘವೇಂದ್ರರಿಂದ. ಅವರು ಮಾತನಾಡಿದ್ದು ಕ್ರೈಮ್ ರಿಪೋರ್ಟಿಂಗ್ ಬಗೆಗೆ.
ಅವರು ಆರಂಭ ಮಾಡಿದ್ದೆ 'ವರದಿ' ಯೆಂಬುದು ನಿರಾಭರಣ ಸುಂದರಿ ಎಂಬುದರ ಮೂಲಕ. ಅಂದರೆ ಭಟ್ರು ಹೇಳಿದ ಮಾತಿಗೆ ಸರಿ ಉಲ್ಟಾ! ಆದರೆ ಅವರ ಚಾನೆಲ್ ಇದನ್ನು ಎಷ್ಟು ಪಾಲಿಸುತ್ತದೆ ಎಂದು ಕೇಳಿದರೆ ಖಂಡಿತವಾಗಿಯೂ ಅವರಲ್ಲಿ ಉತ್ತರವಿರಲಿಕ್ಕಿಲ್ಲ. ಬಹುಶ: ಭಟ್ರ ಮಾತನ್ನು ಪಾಲಿಸಿದ್ದೆ ಆದರೆ ಮಾಧ್ಯಮಗಳು ಯಾವ ರೀತಿ ಆಗಬಹುದು ಎಂಬುದಕ್ಕೇ ಈ ಚಾನೆಲ್ ನಷ್ಟು ಒಳ್ಳೆಯ ನಿದರ್ಶನ ಬೇರೆ ಎಲ್ಲೂ ಸಿಗಲಿಕ್ಕಿಲ್ಲ!
'ಒಬ್ಬ ಕ್ರೈಂ ರಿಪೋರ್ಟರ್ ಮನುಷ್ಯನನ್ನು ಸರಿಯಾಗಿ ಅರ್ಥ ಮಾಡಿಕೊಂಡಿರಬೇಕು, ಸುದ್ದಿಯ ಮೂಲ ಮತ್ತು ಅದರಾಚೆಯೂ ಹುಡುಕುವ ಛಾತಿ ಇರಬೇಕು. ಆದರೆ ಯಾವ ಕಾರಣಕ್ಕೂ ಇನ್ನೊಬ್ಬರ ತೆಜೋವಧೆ ಮಾಡಬಾರದು' ಎಂಬ 'ವಾರಾಂಟ್' ಅವರಿಂದ. ಸಹಜವಾಗಿಯೇ ಅವರಿಗೆ ಪ್ರಶ್ನೆಗಳ ಸುರಿಮಳೆ, ಅಷ್ಟೇ ಚಾಣಕ್ಷತನದ ಉತ್ತರ ಅವರಿಂದ.
ನಂತರ ಮನರಂಜನಾ ಕಾರ್ಯಕ್ರಮ.
ಜೋಗಿ ಜೋಳಿಗೆಯಿಂದ...
ಎರಡನೇ ದಿನ ಅರ್ಥಾತ್ ಕೊನೆಯ ದಿನದ ಮೊದಲ ಅವಧಿಯನ್ನು ಕನ್ನಡದ ಖ್ಯಾತ ಬರಹಗಾರ, 'ಜೋಗಿ'ಯೆಂದೆ ಪ್ರಸಿದ್ದರಾಗಿರುವ ಗಿರೀಶ್ ರಾವ್ ತೆಗೆದುಕೊಂಡರು.
ಪತ್ರಕರ್ತರು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶುರುವಿಟ್ಟುಕೊಂಡ ಅವರು ಅನಂತರ ಅಂಕಣ ಅಂದರೆ ಹೇಗಿರಬೇಕು ಎಂಬುದರ ಬಗೆಗೆಯೇ ತಮ್ಮ ಗಮನ ಹರಿಸಿದರು.
ಬರೆಯುತ್ತ ಬರೆಯುತ್ತ ಬರಹ ಮತ್ತು ಬರಹಗಾರ ಪಕ್ವವಾಗುತ್ತಾನೆ ಎಂಬುದು ಅವರ ಅನಿಸಿಕೆ.
ಅವರು ಮಾತನಾಡುತ್ತ 'ಸತ್ಯ’ ಬದಲಾಗುತ್ತದೆ ಎಂದು ಹೇಳಿದರು. ಅದು ಹೇಗೆ ಸಾಧ್ಯ ಎಂಬುದು ನನ್ನ ಪ್ರಶ್ನೆ. ಒಂದೋ ಬರಹಗಾರನ ಮನೋಭಾವ, ದೃಷ್ಟಿಕೋನ ಬದಲಾಗಬಹುದು ಅಥವಾ ಅವನು ವಿಷಯವನ್ನು ಗ್ರಹಿಸಿಕೊಂಡ ರೀತಿ ಅಥವಾ ಗ್ರಹಿಸುವ ರೀತಿ ಬದಲಾಗಬಹುದೇ ಹೊರತು 'ಸತ್ಯ' ಹೇಗೆ ಬದಲಾಗುತ್ತದೆ? ಹಾಗೆ ಬದಲಾಗುವುದಿದ್ದರೇ ಅದನ್ನು 'ಸತ್ಯ' ಎಂದು ಕರೆಯುತ್ತೇವೇಯೇ?
ಭಡ್ತಿ ಹೇಳಿದ್ದು...
ಅನಂತರದ ಅವಧಿ 'ವಿಜಯ ಕರ್ನಾಟಕ' ಪತ್ರಿಕೆಯ ಹಿರಿಯ ಉಪಸಂಪಾದಕ ಮತ್ತು ತಮ್ಮ 'ನೀರು ನೆರಳು' ಅಂಕಣದಿಂದ ಪ್ರಖ್ಯಾತರಾಗಿರುವ ರಾಧಕೃಷ್ಣ ಭಡ್ತಿ ಅವರಿಂದ 'ಪುಟ ವಿನ್ಯಾಸ'ದ ಬಗ್ಗೆ. ಅವರು 'ಪವರ್ ಪಾಯಿಂಟ್'ನ ಬಳಕೆಯನ್ನು ಅತ್ಯುತ್ತಮವಾಗಿ ಮಾಡಿದರು. ಅವರು ಅಡುಗೆ ಭಟ್ಟನ ಕೆಲಸ ಮತ್ತು ಒಬ್ಬ ಉಪಸಂಪಾದಕನ ಕೆಲಸಕ್ಕಿರುವ ಸಾಮ್ಯತೆಯ ಮೂಲಕವೇ ಉದಾಹರಣೆಗಳನ್ನು ಪೋಣಿಸುತ್ತ ಸಾಗಿದರು. ಒಂದು ಪುಟದಲ್ಲಿರುವ ಬೇರೆ ಬೇರೆ ಭಾಗಗಳು ಮತ್ತು ಅಂಶಗಳ ಬಗ್ಗೆ ಅವರು ಮಾಹಿತಿ ನೀಡಿದರು.
ಬ್ಲಬ್ð, ಬಾಕ್ಸ್, ಇಂಟ್ರೋ, ಬುಲೆಟ್ ಪಾಯಿಂಟ್ ಗಳ ಬಳಕೆಯ ಅಗತ್ಯತೆಯ ಬಗ್ಗೆ ಒತ್ತಿ ಹೇಳಿದ ಅವರು ಇವುಗಳ ಬಳಕೆ ಇಲ್ಲದಿದ್ದಲ್ಲಿ ಸುದ್ದಿ ಮತ್ತು ಪುಟ ಹೇಗೆ ನೀರಸವಾಗುತ್ತದೆ ಎಂಬುದನ್ನು ತೋರಿಸಿಕೊಟ್ಟರು.
ಅವರು ಒಳ್ಳೆಯ ಪುಟ ವಿನ್ಯಾಸಕ್ಕೆ ವಿಜಯ ಕರ್ನಾಟಕವನ್ನೇ ಉದಾಹರಣೆಯಾಗಿಸಿಕೊಂಡು ಕೆಟ್ಟ ಪುಟ ವಿನ್ಯಾಸಕ್ಕೇ ಕನ್ನಡದ ಮತ್ತೊಂದು ಜನಪ್ರಿಯ ಪತ್ರಿಕೆಯನ್ನು ಹೆಚ್ಚಾಗಿ ಬಳಸಿದ್ದು ಮುಂದಿನ ಅವಧಿ ತೆಗೆದು ಕೊಳ್ಳಲಿದ್ದವರ ಕಣ್ಣು ಕೆಂಪಾಗುವಂತೆ ಮಾಡಿತ್ತು. ಅದರೊಂದಿಗೆ ದಕ್ಷಿಣ ಕನ್ನಡದ ಜನ 'ಉದಯವಾಣಿ'ಯನ್ನು ಅದರಲ್ಲಿರುವ ಸತ್ತವರ ಜಾಹೀರಾತು ನೋಡಲು ಮತ್ತು ಬೆಂಗಳೂರು ನಗರದ ಜನ 'ಪ್ರಜಾವಾಣಿ' ಪತ್ರಿಕೆಯನ್ನು ಬಿಡಿಎ ಜಾಹೀರಾತಿಗಾಗಿ ನೋಡುತ್ತಾರೆ ಎಂದದ್ದು ನನಗಂತೂ ಒಂಚೂರು ಕಸಿವಿಸಿಯುಂಟು ಮಾಡಿತು. ನಿಮಗೇ ಭಡ್ತಿ ಹೇಳಿದ ಈ ಮಾತು ಸತ್ಯ ಎಂದೆನಿಸುತ್ತಾ?
'ನಾಲ್ಕಾನೆ ಆಯಾಮ' ನೀಡಿದ ಪದ್ಮರಾಜ ದಂಡಾವತಿ
ಪ್ರಜಾವಾಣಿಯ ಸುದ್ದಿ ಸಂಪಾದಕ ಪದ್ಮರಾಜ ದಂಡಾವತಿ ಮಾತನಾಡಿದ್ದು ಪ್ರಸ್ತುತ ಪತ್ರಿಕೋದ್ಯಮದ ಬಗ್ಗೆ. ಆರಂಭದಲ್ಲೇ ತಮ್ಮ ಖಡಕ್ ಮಾತಿನಿಂದ ಉಸಿರು ಬಿಗೆ ಹಿಡಿದು ಅವರ ಮಾತಿಗೆ ಕಿವಿಯಾಗುವಂತೆ ಮಾಡಿದ ಅವರು ಅನಂತರ ತಮ್ಮ ಮಾತಿಗೆ ಕೇಳುಗರು ತನ್ಮಯರಾಗುವಂತೆ ಮಾಡಿದರು.
ಅವರು 'ಕನ್ನಡ ಪತ್ರಿಕೋದ್ಯಮದ ಪಿತಾಮಹ' ಡಿ. ವಿ. ಗುಂಡಪ್ಪರ 'ವೃತ್ತ ಪತ್ರಿಕೆ'ಯನ್ನು ಎಷ್ಟು ಮಂದಿ ಓದಿದ್ದೀರಿ? ಎಂದು ಕೇಳಿದಾಗ ಒಂದೇ ಒಂದು ಕೈ ಮೇಲೆಳಲಿಲ್ಲ.
"ಇಂದಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಲ್ಲಿ ಶ್ರಧ್ಧೆಯ ಕೊರತೆಯಿದೆ. ಕುವೆಂಪು, ಶಿವರಾಮ ಕಾರಂತ, ಮಾಸ್ತಿ, ಲಂಕೇಶ್ ಮುಂತಾದವರನ್ನು ಓದಿಲ್ಲ, ಓದುತ್ತಿಲ್ಲ. ಹೀಗಾದ್ದಲ್ಲಿ ಭಾಷೆಯ ಬೆಳವಣಿಗೆ ಸಾಧ್ಯವಿಲ್ಲ" ಎಂದು ತಿಳಿಸಿದರು.
ಡಿವಿಜಿಯವರ ’ಪತ್ರಿಕೆಗಳು ಕಲಿಸಬೇಕಾದದ್ದು ಸಿದ್ದಾಂತವನ್ನಲ್ಲ, ಸಿದ್ದಾಂತ ಮಾಡುವ ಪ್ರಕ್ರಿಯೆಯನ್ನು’ ಎಂಬ ಮಾತನ್ನು ಉದ್ದರಿಸಿ ಇಂದಿನ ಪತ್ರಿಕೋದ್ಯಮದ ವಿಶ್ಲೇಷಣೆಗೆ ಇಳಿದರು.
ಇಂದು ಪತ್ರಿಕೋದ್ಯಮ ವಿಭಾಗಗಳು ಮತ್ತು ಪತ್ರಿಕಾ ಕಚೇರಿಗಳ ನಡುವಿನ ಸಂಬಂಧ ಇಂಟನ್ðಶಿಪ್ ಗೆ ಮಾತ್ರ ಸೀಮಿತವಾಗುತ್ತಿರುವುದಕ್ಕೆ ಅವರು ಖೇದ ವ್ಯಕ್ತಪಡಿಸಿದರು.
ವಾಚಕರ ವಾಣಿಯ ವೇದಿಕೆಯನ್ನು ಯುವ ಬರಹಗಾರರು ಬಳಸಿಕೊಳ್ಳಬೇಕು, ಪರ್ತಕರ್ತರಲ್ಲಿ ವಿನಯವಿರಲೇಬೇಕು ಎಂದರು.
ಮಾಧ್ಯಮಗಳ ಬ್ರೇಕಿಂಗ್ ದಿ ಸೊಸೈಟಿ ಟ್ರೆಂಡ್ ಹೋಗಿ ಬ್ರೀಡ್ಜೀಂಗ್ ದ ಸೊಸೈಟಿ ಆಗಲಿ ಎಂದು ಆಶಿಸಿದರು.
ಪತ್ರಿಕೆಗಳನ್ನು ಪ್ರತಿಕ್ರಿಯಾತ್ಮಕ ಮನೋಭಾವ ಬೆಳೆಸಿಕೊಳ್ಳಲು ಓದಬೇಕು, ಸಾಹಿತ್ಯವನ್ನು ಮಾನವೀಯ ಮುಖ ನೀಡಲು ಓದಬೇಕು ಎಂಬುದು ಅವರ ಸಲಹೆ.
ನಂತರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಉಪನ್ಯಾಸಕ ಕೆ. ಜಿ. ಜೋಸೆಫ್, "ಪದವಿಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಬರೆಯುತ್ತಾರೆ ಆದರೆ ಸ್ನಾತಕೋತ್ತರ ಪದವಿಗೆ ಬಂದಾಗ ಬರವಣಿಗೆ ಕಡಿಮೆಯಾಗುತ್ತದೆ. ಇದಕ್ಕೆ ಮನಸ್ಸು ಕಲ್ಮಷವಾಗುವುದೇ ಕಾರಣ" ಎಂದರು. ಇದರೊಂದಿಗೆ ನನಗನಿಸುವ ಮಟ್ಟಿಗೆ ಸ್ನಾತಕೋತ್ತರ ಪದವಿಯ ಪತ್ರಿಕೋದ್ಯಮ ಸಿಲೆಬಸ್ ಗಳು ವಿಧ್ಯಾರ್ಥಿಯನ್ನು ಒಬ್ಬ ಪತ್ರಕರ್ತನನ್ನಾಗಿ ಮಾಡೋದಕ್ಕಿಂತ ಲೆಕ್ಚರರ್ ಮಾಡೋದು ಹೇಗೆ ಎಂಬುದರ ಸುತ್ತಲೇ ಸುತ್ತುತ್ತಿರುವುದು ಕೂಡ ಒಂದು ಮುಖ್ಯ ಕಾರಣ ಎಂದು ನನಗನಿಸುತ್ತದೆ.
ಸುಮಾರು 16 ಕಾಲೇಜುಗಳಿಂದ 300ಕ್ಕೂ ಮಿಕ್ಕ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಬಹುಶ: ಕಾರ್ಯಾಗಾರದ ಮಟ್ಟಿಗೆ ಇದು ಮೂರು ಪಟ್ಟು ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದರು ಎಂದು ನನಗನಿಸುತ್ತದೆ. ಅದ್ದರಿಂದ ಇದು ಸ್ವಲ್ಪ ಮಟ್ಟಿಗೆ ಜಾತ್ರೆ ರೀತಿ ಆಯಿತು ಎಂದು ನನಗನಿಸಿತ್ತು.
ಅದರೊಂದಿಗೆ ಕಾರ್ಯಗಾರದ ಶೀರ್ಷಿಕೆಗೆ ಪೂರಕವಾದ ಅವಧಿಯೇ ಇರಲಿಲ್ಲ!
ಪತ್ರಕರ್ತರು, ರಾಜಕಾರಣಿಗಳನ್ನು ಮೀರಿಸುವಂತೆ ಪರಸ್ಪರರ ಕಾಲೆಲೆದರು, ಕೆಸರೆರಚಿಕೊಂಡರು. ’ಹೇಳುವುದು ಶಾಸ್ತ್ರ ತಿನ್ನುವುದು ಬದನೆಕಾಯಿ’ ಎಂಬ ಗಾದೆಮಾತನ್ನು ಸತ್ಯ ಮಾಡಿದರು!
ಉಳಿದಂತೆ ಎಲ್ಲ ವ್ಯವಸ್ಥೆಗಳು ಅಚ್ಚುಕಟ್ಟಾಗಿತ್ತು. ಸಮಯಪಾಲನೆಗೆ ಹೆಚ್ಚಿನ ಮಹತ್ವ ನೀಡಲಾಗಿತ್ತು.
ಮರುದಿನ ಮೈಸೂರು ದರ್ಶನ. ರಾತ್ರಿ 11ಕ್ಕೆ ಮರಳಿ ಗೂಡಿಗೆ...
ಒಂದಷ್ಟು ನೆನಪು ಮತ್ತು ಪಾಠದೊಂದಿಗೆ!