Friday, January 1, 2010

ಎಲ್ಲ ಜವಾಬ್ದಾರಿಗಳು ಪತ್ರಕರ್ತನದ್ದೇಯಲ್ಲ !

ಹೀಗೊಂದು ನೈಜ ಮೆಸೆಜ್ ಸಂಭಾಷಣೆ.
ಇವತ್ತು ನೀವು ಸೂಪರ್ಬ್ ಆಗಿ ಕಾಣುತ್ತಿದ್ದೀರಿ...
ಥ್ಯಾಂಕ್ಯೂ, ಹು ಇಸ್ ದಿಸ್?
ನಾನು ನಿಮ್ಮ ಅಭಿಮಾನಿ...
ಅಭಿಮಾನಿಯಾ? ವೆರಿ ನೈಸ್. ನೀವ್ಯಾಕೆ ನನ್ನ ಅಭಿಮಾನಿ?
ನಿಮ್ಮ ಡ್ರೆಸ್ ಸೆನ್ಸ್, ಮಾತನಾಡೋ ಸ್ಟೈಲ್, ನಿಮ್ಮ ಕಣ್ಣು... ಅದ್ಬುತ ಅದಕ್ಕೆ...
ನೀವು ನನ್ನನ್ನು ಎಷ್ಟು ದಿನದಿಂದ ನೋಡುತ್ತಿದ್ದೀರಿ?
೧೫ ದಿನದಿಂದ...
ಹೌದಾ! ನಿಮ್ಮ ಹೆಸರು ಹೇಳಿ ಪ್ಲೀಸ್.
ಇಲ್ಲ, ನೀವೇ ಹುಡುಕಿ... ಹೀಗೆ ಮುಂದುವರಿದ ಈ ಮೆಸೆಜ್ ಅವಳು ತನ್ನ ಮನೆ ವಿಳಾಸ ಕೊಡುವ ತನಕ ತಲುಪಿತ್ತು. ನಂತರ ನಾವು ಭೇಟಿಯಾಗುವ ದಿನ, ಸ್ಥಳ ಎಲ್ಲ ನಿಗದಿಯಾಯಿತು ಕೂಡ.

ವಾಸ್ತವವಾಗಿ ಆ ಹುಡುಗಿ ನನಗೆ ಪರಿಚಿತಳು. ಅವಳಿಗೂ ನನ್ನ ಪರಿಚಯವಿದ್ದೆ ಇದೆ. ಆದರೆ ಇದು ನನ್ನ ನಂಬರ್ ಮತ್ತು ನಾನು ಈ ರೀತಿ ’ಆಟವಾಡಿಸುತ್ತಿದ್ದೇನೆ’ ಎಂದು ಅವಳಿಗೆ ಗೊತ್ತಿರಲಿಲ್ಲ.

ನೀವು ಅಂಗನವಾಡಿಯಲ್ಲಿ ಟೀಚರಾ? ಎಂಬ ಪ್ರಶ್ನೆಯೊಂದಿಗೆ ಮಾತು ಶುರುಮಾಡಿ, ಹುಡುಗಿಯರನ್ನು ಮರಳು ಮಾಡಿ ಬುಟ್ಟಿಗೆ ಹಾಕಿಕೊಂಡು ಮದುವೆಯಾಗುವುದಾಗಿ ನಂಬಿಸಿ ನಂತರ ಸೈನೈಡ್ ಕೊಟ್ಟು ಬರ್ಬರವಾಗಿ ಕೊಲೆ ಮಾಡುತ್ತಿದ್ದ ಮೋಹನ್ ಕುಮಾರ್‌ನ ವಿದ್ಯೆಗೂ, ಈ ತಂತ್ರಕ್ಕೂ ಏನಾದರೂ ವ್ಯತ್ಯಾಸವಿದೆಯಾ? ಅದರೂ ನಮ್ಮ ಹುಡುಗಿಯರು ಬುದ್ದಿ ಕಲಿತಿಲ್ಲ! ಸಮಾಜ, ಮಾಧ್ಯಮಗಳಿಗೆ ಮತ್ತು ಪೊಲೀಸರಿಗೆ ಶಾಪ ಹಾಕುವುದನ್ನು ಬಿಟ್ಟಿಲ್ಲ!

ಮೇಲೆ ನಾ ಹೇಳಿದ ರೀತಿಯ ಮೊಬೈಲ್ ಚ್ಯಾಟ್‌ಗಳು ಸಾಮಾನ್ಯವಾಗಿ ನಡೆಯುತ್ತದೆ. ಅದರೆ ಅದು ಒಂದು ಮಿತಿಯನ್ನು ದಾಟಿದರೆ ಮೋಹನ್ ಕುಮಾರ್ ನಂತವರು ಹುಟ್ಟಿಕೊಳ್ಳುತ್ತಾರೆ.

ಮೋಹನ್ ಕುಮಾರ್‌ನ ಪಾಶವೀ ಕೃತ್ಯ ಬೆಳಕಿಗೆ ಬರುತ್ತಲೇ ಆತನ ಪ್ರತಿ ಚಲನವಲನಗಳ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಿದವು. ಈ ನಡುವೆ ’ಲವ್ ಜಿಹಾದ್’ ಎಂಬ ಪಿಡುಗಿನ ಬಗೆಯೂ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ನೂರಾರು ಯುವತಿಯರು ’ಲವ್ ಜಿಹಾದ್’ಗೆ ಈಡಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರೀತಿಯ ನಾಟಕವಾಡಿ ಹುಡುಗಿಯರನ್ನು ವೇಶ್ಯಾವಟಿಕೆಗೆ ತಳ್ಳಿದ ಸಾಕಷ್ಟು ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾಗಿವೆ. ಇಷ್ಟೆಲ್ಲಾ ಅಗಬಾರದ ಅನಾಹುತಗಳಾಗುತ್ತಿದ್ದರೂ ಹುಡುಗಿಯರ ನಾಪತ್ತೆ ಮತ್ತು ಪರಾರಿ ಪ್ರಕರಣಗಳು ಮುಂದುವರಿಯುತ್ತಲೇ ಇದೆ.

ಎಲ್ಲರಿಗೂ ಗೊತ್ತಿರುವಂತೆ ಮಾಧ್ಯಮಗಳ ಮುಖ್ಯ ಜವಾಬ್ದಾರಿ ಜನರಿಗೆ ಮಾಹಿತಿ, ಶಿಕ್ಷಣ ಮತ್ತು ಮನರಂಜನೆ ನೀಡುವುದು. ಅದರಲ್ಲೂ ಮಾಧ್ಯಮಗಳು ಮಾಹಿತಿ ಮತ್ತು ಶಿಕ್ಷಣ ನೀಡಿದಾಗ ಜನರಲ್ಲಿ ’ಜಾಗ್ರತಿ’ ಮೂಡುತ್ತದೆ. ಈ ’ಜಾಗ್ರತಿ’ಯಿಂದ ಜನರು ಸಮಾಜದಲ್ಲಿ ಅಥವಾ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಶ್ರಮಿಸುತ್ತಾರೆ. ಅದ್ದರಿಂದ ಮಾಧ್ಯಮಗಳಿಗೆ ಸಮಾಜದಲ್ಲಿ ಅತ್ಯಂತ ಗೌರವಯುತ ಮತ್ತು ಜವಾಬ್ದಾರಿಯುತ ಸ್ಥಾನ.

ಮಾಧ್ಯಮಗಳು ಬಹುಪಾಲು ಸಂದರ್ಭದಲ್ಲಿ ಈ ಕೆಲಸವನ್ನು ನಿಷ್ಠೆಯಿಂದ ಮಾಡಿಕೊಂಡು ಬಂದಿವೆ. ಕೆಲ ಸಂದರ್ಭಗಳಲ್ಲಿ ಮತ್ತು ಕೆಲ ಮಾಧ್ಯಮಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆ, ವೈಭವೀಕರಣ, ನಿರ್ಲಕ್ಷ್ಯ ಮತ್ತು ತಮ್ಮ ’ಇಸಂ’ಗಳ ಮಿಶ್ರಣದಿಂದ ಪತ್ರಿಕಾಧರ್ಮಕ್ಕೆ ಚ್ಯುತಿಯಾಗಿರಬಹುದು. ಅದನ್ನು ಹೊರತು ಪಡಿಸಿ ಮತ್ತು ಕೆಲ ಬಾಲ ಬಡುಕ ಮತ್ತು ಪಕ್ಷ ನಿಷ್ಠ, ಮತ್ತು ವ್ಯಕ್ತಿ ನಿಷ್ಠ ಮಾಧ್ಯಮಗಳನ್ನು ಬದಿಗಿಟ್ಟು ನೋಡಿದರೆ ಇಂದಿಗೂ ಮಾಧ್ಯಮಗಳು ತಮ್ಮ ಮೂಲ ಆಶಯವನ್ನು ಮರೆಯದೆ ಜನರಲ್ಲಿ ಜಾಗ್ರತಿ ಮೂಡಿಸುವ ಕಾರ್ಯನಿರ್ವಹಿಸುತ್ತಿವೆ. ಆದರೆ ಸಮಾಜ ತಾನು ಜಾಗ್ರತ ಗೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಬಿದ್ದು ಕೊಂಡರೆ ಅದಕ್ಕೆ ಯಾರು ಹೊಣೆ?

ಮೋಹನ್ ಕುಮಾರ್‌ನ ಪ್ರಕರಣದ ಎಳೆ ಎಳೆಯನ್ನು ಜನರ ಮುಂದೆ ಬಿಚ್ಚಿಟ್ಟಿದ್ದರೂ ಕೂಡ ಓಡಿ ಸುಸ್ತಾಗುವವರ ಸಂಖ್ಯೆ ಕಡಿಮೆಯಾಗಿಲ್ಲ ಎಂದರೆ ಅದಕ್ಕೆ ಸಮಾಜವೇ ಕಾರಣ ಅಲ್ಲವೇ? ಈ ವಿಷಯದಲ್ಲಿ ಮಾಧ್ಯಮಗಳು ಜನರಲ್ಲಿ ಜಾಗ್ರತಿಯುಂಟು ಮಾಡುವ ಕೆಲಸವನ್ನು ಮಾಡಿದವು. ಅದ್ದರಿಂದ ಇಂದು ಈ ಜಿಲ್ಲೆಯ ಬಹುತೇಕ ಎಲ್ಲರಿಗೂ ಮೋಹನ್ ಕುಮಾರ್‌ನ ಕುಕೃತ್ಯಗಳ ಪರಿಚಯವಿದೆ ಆ ಮೂಲಕ ತಾವೂ ಕೂಡ ಯಾವ ರೀತಿ ಮೋಸದ ಜಾಲಕ್ಕೆ ಸಿಲುಕಬಹುದು ಎಂಬರಿವಿದೆ. ಹಾಗೆಯೇ ತಾವು ಅನೈತಿಕ ದಂಧೆಯ ಪಾಲಾಗಬಹುದು ಎಂಬುದು ಕೂಡ ತಿಳಿದಿದೆ. ಆದರೇನು ಪ್ರಯೋಜನ? ಓಡಿ ಹೋಗುವವರು ನಿಲ್ಲುತ್ತಲೇ ಇಲ್ಲ!

ಜಾಗತಿಕ ತಾಪಮಾನ ಏರಿಕೆಯ ದುಷ್ಪರಿಣಾಮದ ಬಗ್ಗೆ ಮಾಧ್ಯಮಗಳು ಕೆಲ ವರ್ಷಗಳ ಹಿಂದಿನಿಂದಿನಿಂದಲೇ ಜನರಲ್ಲಿ ಜಾಗ್ರತಿಯುಂಟು ಮಾಡುವ ಕೆಲಸ ಮಾಡಿದ್ದವು. ಆದರೆ, ಆ ಬಗ್ಗೆ ಯಾರೂ ಗಂಭೀರವಾಗಿ ಯೋಚಿಸಿರಲಿಲ್ಲ. ಯೋಚಿಸಿದ್ದರೂ ಕೂಡ ಅದನ್ನು ಸಂಘಟಿತರಾಗಿ ಆಡಳಿತರೂಡರ ಗಮನಕ್ಕೆ ತಂದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಾಡುವಲ್ಲಿ ವಿಫಲರಾಗಿದ್ದರು.

ಜಗತ್ತಿನ ತಾಪಮಾನ ಏರುತ್ತಿದೆ ಎಂಬುದಕ್ಕೆ ಸಾಕಷ್ಟು ಆಧಾರಗಳಿದ್ದವು ಮತ್ತು ಅದರಿಂದ ದುಷ್ಪರಿಣಾಮಗಳಾಗುತ್ತವೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳನ್ನು ವಿಜ್ಞಾನಿಗಳು ಇದೇ ಮಾಧ್ಯಮಗಳ ಮೂಲಕ ಜನರಿಗೆ ನೀಡಿದ್ದರು. ಆದರೆ ಸಮಾಜದ್ದು ಎಂದಿನ ’ಘನ’ ನಿದ್ದೆ. ಆದೇ ಯಾರೋ ಕಿಸಿಬಾಯಿ ದಾಸಯ್ಯ ಡಿಸೆಂಬರ್ ೨೧, ೨೦೧೨ಕ್ಕೆ ಪ್ರಳಯವಾಗುತ್ತದೆ ಎಂದದ್ದೇ ತಡ ಆ ಸುದ್ದಿ ಬೆಳಕಿನ ವೇಗದಲ್ಲಿ ಜನರ ನಡುವೆ ಓಡಾಡಿತ್ತು. ಟಿವಿಯಲ್ಲಿ ಬರುವ ಜ್ಯೋತಿಷಿಗಳು ನಾಯಿ ಮಲ ತಿಂದರೆ ನಿನ್ನ ಸಮಸ್ಯೆ ಪರಿಹಾರವಾಗುತ್ತದೆ ಎಂದರೆ ಅದನ್ನು ತಿನ್ನಲು ತಯಾರಾಗಿರುವವರಿದ್ದಾರೆ. ಆದೇ ಒಬ್ಬ ವಿಜ್ಞಾನಿ ಕುದಿಸಿದ ನೀರು ಕುಡಿಯಿರಿ ಎಂದರೆ ನಮಗೆ ಒಗ್ಗಿ ಬರುವುದಿಲ್ಲ. ಇಂದಿಗೂ ಮೂಢ ನಂಬಿಕೆಗಳಿಂದ ಹೊರಬರಲು ಸಾಧ್ಯವಾಗದ ಸಮಾಜದ ಮಧ್ಯೆ ವ್ಯೆಜ್ಞಾನಿಕ ಮನೋಭಾವ ಬಿತ್ತುವುದು ಅದೇಷ್ಟು ಕಷ್ಟ. ಈ ಮಿತಿಯಲ್ಲೂ ಮಾಧ್ಯಮಗಳು ವೈಜ್ಞಾನಿಕ ಮಾಹಿತಿ ಕೊಡುವಲ್ಲಿ ಶ್ರಮಿಸಿವೆ. ಆದರೆಡೆಯಲ್ಲಿ ಕೆಲವರು ಮೂಡನಂಬಿಕೆಗಳನ್ನು ಮಾರ್ಕೆಟ್ ಮಾಡುವ ಕೆಲಸ ಮಾಡಿರಬಹುದು. ಆದರೂ ಅವರು ಜಾಗತಿಕ ತಾಪಮಾನದ ಬಗ್ಗೆ ಈ ಮೊದಲು ಉಲ್ಲೇಖ ಮಾಡಿದ್ದರು.

ಮಾಧ್ಯಮಗಳಿಗೆ ರೈತರ ಅತ್ಮಹತ್ಯೆಗಳಿಗಿಂತ ಫ್ಯಾಶನ್ ಶೋಗಳು, ಸೆಲೆಬ್ರಿಟಿಗಳು ಮುಖ್ಯವಾಗಿದ್ದಾರೆ, ಮುಖ್ಯವಾಗುತ್ತಿದ್ದಾರೆ, ಈ ಮಾಧ್ಯಮಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಹುಯಿಲೆಬ್ಬಿಸುವ ಕೆಲಸ ಒಂದು ಕಡೆ ನಡೆಯುತ್ತಿದೆ. ಹೌದು, ಮಾಧ್ಯಮಗಳು ರೈತನ ಅತ್ಮಹತ್ಯೆಗೆ ಎಲ್ಲೋ ಒಂದು ಮೂಲೆಯಲ್ಲಿ ಸ್ಥಾನ ಕೊಟ್ಟಿರಬಹುದು. ಆದರೆ ಇಂದು ದೇಶದ ಬಹುತೇಕ ವಿದ್ಯಾವಂತ ಜನರಿಗೆ ರೈತರು ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬರಿವು ಮಾಧ್ಯಮಗಳಿಂದ ದಕ್ಕಿದೆ. ಆದರೆ, ಎಷ್ಟು ಮಂದಿ ರ‍್ಯೆತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ?

ಜನರಿಗೆ ವರ್ಷಕ್ಕೆ ಸಾವಿರಾರು ರೈತರು ಅತ್ಮಹತ್ಯೆ ಮಾಡಿಕೊಳ್ಳುವಂತದ್ದು ಒಂದು ಸಾಮಾನ್ಯ ಸುದ್ದಿಯಾಗಿಯೇ ಉಳಿಯುವುದಾದರೆ, ಅದಕ್ಕೆ ಸ್ಪಂದಿಸುವ ಮನಸ್ಸಿಲ್ಲ ಎಂದಾದರೆ ಆ ಜಾಗವನ್ನು ಸೆಲೆಬ್ರಿಟಿಗಳ ಸುದ್ದಿ ಅಲಂಕರಿಸುವುದರಲ್ಲಿ ತಪ್ಪೇನಿದೆ?

ಇವತ್ತು ರೈತರ ಸಮಸ್ಯೆಗಳ ಅರಿವು ಇರುವವರು ಎಂದೆನಿಸಿಕೊಂಡವರು ಕೂಡ ಸಂತೆಗೆ ಹೋಗಿ ೧ ರೂಪಾಯಿಗೆ ೨ ಕೆಜಿ ಟೊಮೆಟೊ ಕೊಡು ಅನ್ನುತ್ತಾರೆ. ಅದೇ ಮಾಲ್‌ಗಳಿಗೆ ಹೋಗಿ ಅದೇ ಟೊಮೆಟೊಕ್ಕೆ ಕೆಜಿಗೆ ೩೦ ರೂಪಾಯಿ ಅಂದರೂ ತುಟಿ ಬಿಚ್ಚದೇ ನೋಟು ಬಿಚ್ಚುತ್ತಾನೆ. ಈಗ ಹೇಳಿ, ತಮ್ಮ ಜವಾಬ್ದಾರಿ ಮರೆತಿರುವುದು ಮಾಧ್ಯಮಗಳಾ? ಅಥವಾ ಸಮಾಜವಾ?
ಇಂದು ದೇಶದ ಬಹುತೇಕ ಎಲ್ಲ ಕೃಷಿಕರು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ಮಾಧ್ಯಮಗಳು ವ್ಯವಸ್ಥೆಯ ಗಮನಕ್ಕೆ ತಂದಿವೆ. ಆದರೆ ಎಲ್ಲೂ ಎಲ್ಲ ಕೃಷಿಕರನ್ನು ಒಂದೇ ಸೂರಿನಡಿಗೆ ತಂದು ಒಂದು ಹೋರಾಟ ಸಂಘಟಿಸಲು ಸಾಧ್ಯವಾಗಿಲ್ಲ, ಯಾಕೆ? ಜನರನ್ನು ಧರ್ಮದ ಹೆಸರಲ್ಲಿ, ಜಾತಿಯ ಹೆಸರಲ್ಲಿ, ಭಾಷೆಯ ಹೆಸರಲ್ಲಿ ಸಂಘಟಿಸಿ ಆಧಿಕಾರದ ರುಚಿ ಸವಿದವರಿದ್ದಾರೆ, ರೈತರ ಹೆಸರು ಹೇಳಿ ಅಧಿಕಾರದ ದಿಬ್ಬಣ ಏರಿದ ಹೆಗ್ಗಣಗಳ ಸಂಖ್ಯೆಗೂ ಮಿತಿಯಿಲ್ಲ. ಅದರೂ ಇಂದಿಗೂ ರೈತ ಅನಾಥ. ಈ ಬಗ್ಗೆ ಮಾಧ್ಯಮಗಳು ’ಜಾಗೃತಿ’ಯುಂಟು ಮಾಡುವ ಕೆಲಸ ಮಾಡಿಲ್ಲವೇ?

ಶೋಷಣೆ, ಭ್ರಷ್ಟಾಚಾರ, ಲಂಚಕೋರತನ, ದುಷ್ಟ ರಾಜಕೀಯದ ಬಗ್ಗೆ ಸಿನಿಮಾ ಸೇರಿದಂತೆ ಎಲ್ಲ ಮಾಧ್ಯಮಗಳು ಜನರೇ ಜಾಗ್ರತರಾಗಿ, ಈ ದುಷ್ಟಕೂಟದಿಂದ ಯಾವ ರೀತಿ ಹೊರಬರಬಹುದು ಎಂದು ಬಾಯಿ ಬಾಯಿ ಬಡಿದುಕೊಂಡಿವೆ ಅದರೂ ಈ ಪಿಡುಗು ಕಿಂಚಿತ್ ಕಡಿಮೆಯಾಗಿಲ್ಲ. ಹೋಗಲಿ, ನಮ್ಮ ಲೋಕಾಯುಕ್ತವಂತೂ ಭ್ರಷ್ಟ ಖದೀಮರ ವಿರುದ್ದ ಸಾರಿರುವ ಸಮರಕ್ಕೆ ಎಲ್ಲ ಮಾಧ್ಯಮಗಳು ತುಂಬು ಪ್ರಚಾರ ನೀಡುತ್ತಿವೆ. ಆದರೂ ಜನ ತಮ್ಮ ಕೆಲಸ ಮಾಡಿ ಕೊಡಲು ಅಧಿಕಾರಿಗಳಿಗೆ ಹಣ ಕೊಡುವುದನ್ನು ನಿಲ್ಲಿಸಿಲ್ಲ. ಹಣ ಕೇಳುವ ಅಧಿಕಾರಿಗಳ ವಿರುದ್ದ ದೂರು ಕೂಡ ಕೊಡುತ್ತಿಲ್ಲ. ಕೊಟ್ಟರು ಅಂಥವರ ಪ್ರಮಾಣ ತೀರಾ ಕಡಿಮೆ. ಎಲ್ಲವನ್ನೂ ಮಾಧ್ಯಮಗಳ ತನಿಖಾ ವರದಿ ಅಥವಾ ಕುಟುಕು ಕಾರ್ಯಾಚರಣೆಯೇ ಮಾಡಲಿ, ಇಂತಹ ಪಿಡುಗುಗಳ ವಿರುದ್ದ ಹೋರಾಡುವುದು, ಸಮಾಜದಲ್ಲಿ ಬದಲಾವಣೆ ತರುವುದು ಮಾಧ್ಯಮಗಳಿಗೆ ಮಾತ್ರ ಸೀಮಿತವಾದ ಕರ್ತವ್ಯ ಮತ್ತು ಜವಾಬ್ದಾರಿ ಎಂಬ ಮನೋಭಾವ ಸಮಾಜದಲ್ಲಿ ಈಗಾಗಲೇ ಬಲವಾಗಿ ಬೇರುಬಿಟ್ಟಿದೆ.

ಇದು ಮಾಧ್ಯಮಗಳ ಮಹಿಮೆ, ಸಾಮರ್ಥ್ಯ, ಮತ್ತು ಶಕ್ತಿಯನ್ನು ಪರಿಗಣಿಸಿ ಸಮಾಜ ನೀಡಿದ ಗೌರವ ಎಂದು ಭಾವಿಸುವ ಸಂಗತಿಯಾಗಿ ಉಳಿದಿದ್ದರೆ ಖಂಡಿತವಾಗಿ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರೆಲ್ಲರೂ ಬಹು ಹೆಮ್ಮ ಪಡಬೇಕಾದ ವಿಷಯವಾಗಿರುತ್ತಿತ್ತು. ಅಥವಾ ಮಾಧ್ಯಮಗಳಲ್ಲಿ ಪ್ರಕಟವಾದರೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಹಾಗೂ ವ್ಯವಸ್ಥೆ ಮತ್ತು ಸಮಾಜ ಅದಕ್ಕೆ ಸ್ಪಂದಿಸುತ್ತದೆ ಎಂಬ ವಿಶ್ವಾಸ ಇದರ ಹಿಂದೆ ಇದ್ದಿದ್ದರೂ ಕೂಡ ಅದು ಮಾಧ್ಯಮಗಳ ಹಿರಿಮೆಯೆನಿಸುತ್ತಿತ್ತು. ಆದರೆ ದುರದೃಷ್ಟವಶಾತ್ ಇಂದಿನ ಮಾಧ್ಯಮಗಳ ಮೇಲಿನ ಸಮಾಜದ ನಿರೀಕ್ಷೆಯ ಹಿಂದಿರುವುದು ಅದರ ಪಲಾಯಾನವಾದ.
ಸ್ವಾತಂತ್ರ್ಯಪೂರ್ವದಲ್ಲಿ ಆದರ್ಶ ಪತ್ರಿಕೋದ್ಯಮವಿತ್ತು ಈಗ ಇಲ್ಲ ಎಂದು ಕನವರಿಸುವವರು ಆಗೀನ ಸಮಾಜ ಹೇಗಿತ್ತು? ಅದು ಸಮಸ್ಯೆಗಳಿಗೆ, ಹೋರಾಟಗಳಿಗೆ ಯಾವ ರೀತಿ ಸ್ಪಂದಿಸುತ್ತಿತ್ತು ಎಂಬುದನ್ನು ಮೊದಲು ಗಮನಿಸಬೇಕು. ಅಂದು ಒಂದು ಸಮಸ್ಯೆಯ ಬಗ್ಗೆ ಬರೆದರೆ ಅದರ ಬಗ್ಗೆ ಯೋಚಿಸುವ ಸಮಾಜವಿತ್ತು, ಅಗತ್ಯಬಿದ್ದರೆ ಮನೆ ಮಠ ಬಿಟ್ಟು ಕೂಡ ಹೋರಾಡುತ್ತಿದ್ದರು. ಅದ್ದರಿಂದ ಸಮಸ್ಯೆ ಪರಿಹಾರವಾಗುತ್ತಿತ್ತು.

ನೆನಪಿಡಿ, ಆಗ ಇದ್ದದ್ದು ಈಗೀನ ಅಕ್ಷರಸ್ಥರ ಪ್ರಮಾಣದ ಆರ್ಧಕ್ಕಿಂತಲೂ ಕಡಿಮೆ ಅಕ್ಷರಸ್ಥರು. ಮಾಧ್ಯಮ ಎಂದರೆ ಪತ್ರಿಕೆ ಮಾತ್ರ. ರೇಡಿಯೋ ತನ್ನ ಅಸ್ತಿತ್ವ ಕಂಡುಕೊಂಡದ್ದು ೧೯೩೫ರ ಬಳಿಕ. ಸಂಪರ್ಕ ಸಾಧನಗಳಾಗಲೀ, ರಸ್ತೆಗಳಾಗಲೀ ತೀರಾ ಬಾಲಾವಸ್ಥೆಯಲ್ಲಿತ್ತು. ಆದರೂ ಅವರು ಹೋರಾಡಿದರು ಮತ್ತು ಗೆದ್ದರು.

ಆದೇ ಈಗ? ಕ್ಷಣ ಮಾತ್ರದಲ್ಲಿ ಜಗತ್ತಿನ ಯಾವುದೇ ಪ್ರದೇಶಕ್ಕೆ ಸಂಪರ್ಕ ಸಾಧಿಸಬಲ್ಲೇವು, ಟಿವಿ, ಇಂಟರ್ನೆಟ್‌ಗಳು ರೇಡಿಯೋ ಮತ್ತು ಪತ್ರಿಕೆಗಳ ಜೊತೆ ಸೇರಿ ಮಾಧ್ಯಮ ಕ್ರಾಂತಿಯೇ ಆಗಿದೆ. ಈ ಕ್ರಾಂತಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಕೂಡ ತಲುಪಿದೆ. ಆದರೂ ಈ ಸಮಾಜಕ್ಕೆ ತನ್ನೋಳಗೊಂದು ವ್ಯವಸ್ಥಿತ ಬದಲಾವಣೆ ತರಲು ಸಾಧ್ಯವಾಗುತ್ತಿಲ್ಲ.

ಮಾಧ್ಯಮಗಳು ತಮ್ಮ ಮೂಲ ಉದ್ದೇಶಗಳಿಗೆ ನಿಷ್ಠವಾಗಿಯೇ ಇವೆ ಎಂದು ಹೇಳುವುದು ಕಷ್ಟ ಆದರೂ ತಮ್ಮ ಉದ್ದೇಶ ಮರೆತಿಲ್ಲ. ಆದರೆ ಸಮಾಜ ಮಾತ್ರ ಎಲ್ಲವನ್ನೂ ಮಾಧ್ಯಮಗಳ ಮೇಲೆ ಹೊರಿಸಿ ತಾನು ಮಾತ್ರ ನಿಶ್ಚಿಂತವಾಗಿದೆ.
ರಸ್ತೆ ಸರಿಯಿಲ್ಲ ಎಂದು ಪತ್ರಕರ್ತ ಬರೆಯಬಹುದು ಮತ್ತು ಬರೆಯುತ್ತಾನೆ, ಆದರೆ ಅದನ್ನು ಅವನೇ ರಿಪೇರಿ ಮಾಡಿಸಿಕೊಡಬೇಕು ಎಂದು ಬಯಸಲು ಸಾಧ್ಯವಿಲ್ಲ ಇದು ಎಲ್ಲ ವಿಷಯಗಳಿಗೂ ಅನ್ವಯಿಸುತ್ತದೆ. ಯಾಕೆಂದರೆ ಅವನಿಗೆ ಸಾಂವಿಧಾನಿಕವಾದ ಯಾವುದೇ ವಿಶೇಷ ಹಕ್ಕಿಲ್ಲ, ಒಬ್ಬ ಜನ ಸಾಮಾನ್ಯನಿಗೆ ಇರುವ ಎಲ್ಲ ನೀತಿ ನಿಯಮಗಳು ಅವನಿಗೂ ಅನ್ವಯಿಸುತ್ತದೆ ಹಾಗೂ ಅವನು ಅದಕ್ಕೆ ಬದ್ದನಾಗಿರಬೇಕು. ಹಾಗೆಯೇ ಸಮಾಜದ ಉಳಿದವರಿಗೆ ಇರುವಂತಹ ಎಲ್ಲ ಸಂಬಂಧಗಳು, ಇತಿ ಮಿತಿಗಳು ಅವನಿಗೂ ಇರುತ್ತದೆ ಎಂಬುದನ್ನು ಮರೆಯಬಾರದು ಅಲ್ಲವೇ?

ಇದು ಕನ್ನಡ ಸಾಹಿತ್ಯಕ್ಕೆ ಸಮನ್ವಯ ಸಂಧಿ ಕಾಲ

ಕನ್ನಡಿಗರ ಸಾಹಿತ್ಯದ ಹಸಿವು ಮತ್ತು ಸಾಮರ್ಥ್ಯಕ್ಕೆ ಕಳೆದ ಒಂದಿಡೀ ಸಹಸ್ರಮಾನವೇ ಸಾಕ್ಷಿಯಾಗಿ ನಿಂತಿದೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಿನಂತೆ ಕನ್ನಡಿಗರ ಕೈ ಹಿಡಿಯದ ಸಾಹಿತ್ಯ ಪ್ರಕಾರವೇ ಉಳಿದಿಲ್ಲ ಎಂಬಷ್ಟು ವಿಶಾಲವಾಗಿ ಮತ್ತು ಆಳವಾಗಿ ನಮ್ಮ ಸಾಹಿತ್ಯದ ಬೇರು ಹಬ್ಬಿದೆ.

ಇಲ್ಲಿ ನಾನು ಯಾವುದೇ ಸಾಹಿತಿಯ, ಸಾಹಿತ್ಯದ ಕಾಲಘಟ್ಟ ಅಥವಾ ಸಾಹಿತ್ಯ ಪ್ರಕಾರದ ಬಗ್ಗೆ ಉದ್ದೇಶಪೂರ್ವಕವಾಗಿ ಉಲ್ಲೇಖ ಮಾಡುತ್ತಿಲ್ಲ. ಯಾಕೆಂದರೆ ಕನ್ನಡದ ಲಭ್ಯವಿರುವ ಮೊದಲ ಲಿಖಿತ ಸಾಹಿತ್ಯ ಕೃತಿ ಕವಿರಾಜಮಾರ್ಗ ದಿಂದ ಹಿಡಿದು ಜನಪದವೂ ಸೇರಿದಂತೆ ಇಂದಿನ ಸಾಹಿತ್ಯದ ವರೆಗೂ ಪ್ರತಿಯೊಂದು ಸಾಹಿತ್ಯಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇದ್ದೆ ಇದೆ. ಎಲ್ಲ ಸಾಹಿತ್ಯ ಪ್ರಕಾರಗಳ ಸಮ್ಮೀಳನದಿಂದ, ಹಿರಿಮೆಯಿಂದ ಮತ್ತು ಕೊಡುಗೆಯಿಂದ ತಾನೇ ಕನ್ನಡ ಸಾಹಿತ್ಯಕ್ಕೆ ವೈವಿಧ್ಯತೆ ಮತ್ತು ಶ್ರೇಷ್ಟತೆ ದಕ್ಕಿದ್ದು. ಒಂದು ಒಳ್ಳೆಯ ಸಾಂಬಾರಿಗೆ ನಾನ ವಸ್ತುಗಳು ಬೇರೆ ಬೇರೆ ಪ್ರಮಾಣದಲ್ಲಿ ಹೇಗೆ ಸೇರಬೇಕೋ ಹಾಗೆ ಇದು ಕೂಡ. ಎಲ್ಲವೂ ಒಂದೇ ಪ್ರಮಾಣದಲ್ಲಿ ಸೇರಿದರೆ ಏನಾಗಬಹುದು? ಆಡುಗೆ ಮಾಡುವವ ಯಾವ ರೀತಿ ಆಡುಗೆ ಪದಾರ್ಥಗಳ ಮೇಲೆ ನಿಯಂತ್ರಣ ಹೊಂದಿರುತ್ತಾನೋ ಅದೇ ರೀತಿ ಕನ್ನಡದ ಮಟ್ಟಿಗೆ ಕಾಲ ಚಕ ಆ ಕೆಲಸ ಮಾಡಿತು ಎಂದು ನನಗನಿಸುತ್ತಿದೆ.

ಆದರೆ ಒಂದು ಮಾತನ್ನು ನಾನಿಲ್ಲಿ ಬರೆದೆ ಮುಂದುವರಿಯಬೇಕು. ಹಿಂದಿನ ಹೆಚ್ಚಿನೆಲ್ಲ ಸಾಹಿತಿಗಳು ವಿದ್ವಾಂಸರಾಗಿದ್ದರು ಇಲ್ಲವೇ ಅವರಲ್ಲಿ ಜೀವನಾನುಭವ ಪೊಗದಸ್ತಾಗಿತ್ತು . ಜನಪದ ಸಾಹಿತಿಗಳು ವಿದ್ವಾಂಸರು ಎಂಬ ಪರಿಧಿಯೊಳಗೆ ಬಾರದಿದ್ದರು ಅವರವರು ಬದುಕಿದ ರೀತಿ ಮತ್ತು ತಮ್ಮ ಪರಿಸರವನ್ನು ಕಟ್ಟಿ ಕೊಟ್ಟ ರೀತಿಯನ್ನು ಗಮನಿಸಿದಾಗ ಅವರನ್ನೂ ಕೂಡ ಪಂಡಿತರು ಎಂದು ಪರಿಗಣಿಸಬಹುದು.

ಆಗಿನ ಶಿಷ್ಟ ಸಾಹಿತಿಯೊಬ್ಬನಿಗೆ ತನ್ನ ಕೃತಿಯನ್ನು ಅಥವಾ ಬರಹವನ್ನು ಜನರ ಮುಂದೆ ತರುವುದು ಅಷ್ಟು ಸುಲಭವಾಗಿರಲಿಲ್ಲ. ಅದೇ ರೀತಿ ಒಬ್ಬ ಜನಪದ ಸಾಹಿತಿಗೆ ಕೂಡ ತನ್ನ ಸಾಹಿತ್ಯವನ್ನು ಇನ್ನೊಬ್ಬರಿಗೆ ದಾಟಿಸುವುದು ಅಷ್ಟು ಸುಲಭವಾಗಿರಲಿಲ್ಲ. ಅದ್ದರಿಂದ ನನಗನಿಸುವಂತೆ ಈ ಎರಡು ಸಾಹಿತ್ಯ ಪ್ರಕಾರದಲ್ಲೂ ಜೊಳ್ಳುಗಳು ಕಾಲಗರ್ಭ ಸೇರಿ ಗಟ್ಟಿಕಾಳುಗಳು ಮಾತ್ರ ಉಳಿದವು. ಆದರೆ ಇಂದು ಏನಾಗಿದೆ?

ನಾವು ಇಪ್ಪತ್ತನೆಯ ಶತಮಾನವನ್ನು ಸಾಹಿತ್ಯದ ದೃಷ್ಟಿಯಿಂದ ನವೋದಯ, ನವ್ಯ, ನವ್ಯೋತ್ತರ, ಬಂಡಾಯ ಹೀಗೆ ವಿಂಗಡಿಸುತ್ತೇವೆ. ಆದರೆ ಕಳೆದ ಶತಮಾನದ ಕೊನೆಯ ಒಂದುವರೆ ದಶಕ ಮತ್ತು ಈ ಶತಮಾನದ ಆದಿಯನ್ನು ಯಾವ ವೇದಿಕೆಯಡಿ ತರುವುದು ಎಂಬದೇ ದೊಡ್ಡ ಸಮಸ್ಯೆ. ಇಲ್ಲಿಂದಲೇ ಇಂದಿನ ಕನ್ನಡ ಸಾರಸ್ವತ ಲೋಕದ ಅಜಲುಗೊಜಲು ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತದೆ.

ಕಾಲಘಟ್ಟದ ಸಾಹಿತ್ಯವನ್ನು ಒಂದೇ ವೇದಿಕೆಯಡಿ ತಾರದಿದ್ದರೆ ಏನಾಗುತ್ತದೆ? ಎಂದು ನೀವು ಕೇಳಲೇ ಬೇಕಾದ ಪ್ರಶ್ನೆ. ನನ್ನ ಉತ್ತರವೂ ಸ್ಪಷ್ಟವಾಗಿದೆ. ಏನೂ ಆಗುವುದಿಲ್ಲ, ಒಂದು ರೀತಿಯಲ್ಲಿ ಒಳ್ಳೆಯದೇ ಆಗುತ್ತದೆ, ಸಾಹಿತ್ಯಕ್ಕೆ ಚೌಕಟ್ಟು ಹಾಕುವುದು, ಸಾಹಿತ್ಯವೆಂದರೆ ಇದೇ ರೀತಿ ಇರಬೇಕು ಎಂದು ಹೇಳುವುದು ಸರಿಯಲ್ಲ. ಆದರೆ ಇದನ್ನೇ ಸ್ಪಷ್ಟವಾಗಿ ಆಥವಾ ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಇಂದಿನ ಸಾಹಿತ್ಯಕ್ಕೆ ನಿರ್ದಿಷ್ಟ ಉದ್ದೇಶ, ಗುರಿ, ಅಥವಾ ಇಂದಿನ ಸಾಹಿತಿಗಳು ಯಾವುದೋ ಒಂದು ಉದ್ದೇಶಕ್ಕಾಗಿ ಅಥವಾ ಏಕ ಉದ್ದೇಶವಿಟ್ಟುಕೊಂಡು ಬರೆಯುತ್ತಿಲ್ಲ ಎಂಬುದಕ್ಕೆ ನಿದರ್ಶನ. ಅಂದರೆ ಬಿಡಿಯಾದ ಪ್ರಜ್ಞೆ ನಮ್ಮಲ್ಲಿ ಹುಟ್ಟಿಕೊಂಡಿದೆ. ಇದರೊಂದಿಗೆ ಈ ಕಾಲಘಟ್ಟದ ಆಗುಹೋಗುಗಳಿಗೆ ಅಕ್ಷರದ ಮೂಲಕ ಮೂರ್ತ ರೂಪ ನೀಡುವ ಸಾಮರ್ಥ್ಯವಿರುವ ಒಬ್ಬ ಮಹಾನ್ ಸಾಹಿತಿಯ ಕೊರತೆ ನಮ್ಮನ್ನು ಕಾಡುತ್ತಿದೆ. ಹಿಂದೆ ನಾನು ಹೇಳಿದ ನಾಲ್ಕು ವಿಂಗಡನೆಗಳ ಸಮಯದಲ್ಲಿ ಅದಕ್ಕೆ ಹೊರತಾದ ಸಾಹಿತ್ಯ ರಚನೆಗಳೂ ಕೂಡ ಬಂದಿದ್ದವು ಎಂಬುದನ್ನು ನಾನಿಲ್ಲಿ ನಿರಾಕರಿಸುತ್ತಿಲ್ಲ.
ಕನ್ನಡದಲ್ಲಿ ಇಂದಿಗೂ ಮಹಾನ್ ಸಾಹಿತಿಗಳಿದ್ದಾರೆ. ಆದರೆ, ಅದರಲ್ಲಿ ಎಷ್ಟು ಮಂದಿ ಸಾಹಿತ್ಯಿಕವಾಗಿ ಬದುಕಿದ್ದಾರೆ ಎಂಬುದು ಮುಖ್ಯ. ಹೆಚ್ಚಿನ ಸಾಹಿತಿಗಳು ಇತಿಹಾಸದ ಬೆನ್ನು ಹಿಡಿದಿದ್ದಾರೆ ಎಂದೆನಿಸುತ್ತದೆ. ಇದು ಅವರ ಪಲಾಯನವಾದ ಖಂಡಿತವಾಗಿಯೂ ಆಲ್ಲ, ಬದಲಾಗಿ ಅವರ ಮಿತಿ.

ಇಂದು ಪತ್ರಿಕೆಗಳು ಬರಹಗಾರರಿಗೆ ಸಾಕಷ್ಟು ಆವಕಾಶ ಕೊಡುತ್ತಿವೆ. ಹಿಂದೆ ಇಂತಹ ಅವಕಾಶಗಳು ಕಡಿಮೆ ಇತ್ತು. ಗುಣಮಟ್ಟದ ಬರಹಗಳು ಮಾತ್ರ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದವು. ಅದ್ದರಿಂದಲೇ ಇರಬೇಕು ಕಳೆದ ಶತಮಾನದ ಕೊನೆಯ ದಶಕದವರೆಗೂ ಗುಣಮಟ್ಟದ ಬರಹಗಳು ಮತ್ತು ಬರಹಗಾರರು ಮಾತ್ರ ನಿಯತಕಾಲಿಕಗಳಲ್ಲಿ ಮತ್ತು ದಿನ ಪತ್ರಿಕೆಗಳ ಸಾಪ್ತಾಹಿಕಗಳಲ್ಲಿ ಸ್ಥಾನ ಪಡೆಯುತ್ತಿದ್ದರು.

ಆದರೆ ಪತ್ರಿಕೆಗಳು ಕೊಟ್ಟಿರುವ, ಕೊಡುತ್ತಿರುವ ವೇದಿಕೆಯನ್ನು ಯುವ ಬರಹಗಾರರು ಯಾವ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂದು ಗಮನಿಸಿದರೆ ನಿರಾಶೆ ಕಟ್ಟಿಟ್ಟ ಬುತ್ತಿ.
ಇಂದಿನ ಯುವ ಸಾಹಿತಿಗಳು ಅದರಲ್ಲೂ ಕಾಲೇಜು ಸಾಹಿತ್ಯವೆಂಬುದು ಪ್ರೀತಿ, ಪ್ರೇಮ, ಪ್ರಣಯದ ಸುತ್ತಲೇ ಗಿರಕಿ ಹೊಡಿಯುತ್ತಿದೆ. ತಪ್ಪಿದರೆ ಮೊಬೈಲ್, ಕಾಲೇಜಿನಲ್ಲಿನ ಮೊದಲ ದಿ, ಬಾಲ್ಯದ ನೆನಪು, ಕಾಲೇಜ್ ಕಾರಿಡಾರ್, ಗೆಳೆತನ, ಅಥವಾ ಉಪದೇಶ ನೀಡುವುದಕ್ಕೇ ಸೀಮಿತವಾಗುತ್ತಿದೆ. ಅದು ಸುತ್ತಲಿನ ಪರಿಸರಕ್ಕೆ ಕುರುಡಾಗಿದೆ. ಕುರುಡಾಗಿದ್ರೂ ಪರ‍್ವಾಗಿರಲಿಲ್ಲ ತನ್ನ ಸ್ಪರ್ಶಜ್ಞಾನವನ್ನೇ ಕಳೆದುಕೊಂಡಿದೇಯೇನೋ ಎಂದೆನಿಸುತ್ತದೆ.

ಬರವಣಿಗೆಯ ಆರಂಭದ ದಿನಗಳಲ್ಲಿ ಇಂತಹ ಬರಹಗಳನ್ನು ಬರೆದರೆ ತಪ್ಪಿಲ್ಲ, ಇದು ಬರಹಗಾರನ ಅತ್ಮವಿಶ್ವಾಸ ಹೆಚ್ಚಿಸುತ್ತದೆ. ಯಾಕೆಂದರೆ ಆಗ ಬರಹ ಪ್ರಕಟಗೊಳ್ಳುವುದೇ ಮುಖ್ಯ. ಅದರೆ ಅದೇ ಅಭ್ಯಾಸವಾದರೇ?

ಪ್ರೀತಿ ಬಗ್ಗೆ ಒಂದೆರಡು ಸರಳ ಪದ್ಯ ಬರೆದರೆ ಒಂದಿಷ್ಟು ಹಣ, ಹೆಸರು ದಕ್ಕಿ ಬಿಡುತ್ತದೆ. ಅದರಾಚೆ, ಅಧ್ಯಯನ ಮಾಡಿ ಬರೆಯಬೇಕು, ಸಮಾಜದ ನೋವು ನಲಿವು ನನ್ನ ಬರಹದ ಮೂಲಕ ಧ್ವನಿ ಪಡೆದುಕೊಳ್ಳಬೇಕು ಎಂಬ ಆಶಯ ಇಂತಹ ಬರಹಗಳಲ್ಲಿ ಕಾಣುತ್ತಿಲ್ಲ. ಸಮಾಜದ ಬದಲು ವೈಯುಕ್ತಿಕ ವಿಷಯವನ್ನೇ ಅಥವಾ ಡೈರಿಯಲ್ಲಿ ಬರೆದು ಮುಚ್ಚಿಡಬೇಕಾದ ವಿಷಯಗಳನ್ನು ಬರೆದು ಪತ್ರಿಕೆಗಳಿಗೆ ಕಳುಹಿಸಿ ಬರಹಗಾರನೆಂದು ಕರೆಸಿಕೊಳ್ಳುವ ಜಾಯಮಾನ ಇವರದ್ದು. ಇಂತಹ ಅರೆಬೆಂದ ಸಾಹಿತಿಗಳಿಂದ ನಮ್ಮ ಸಾಹಿತ್ಯ ಪರಂಪರೆಯ ಮುಂದುವರಿಕೆ ಸಾಧ್ಯಾನಾ? ಸಾಧ್ಯವಾದರೂ ಕೂಡ ಅದಕ್ಕೆ ಶ್ರೀಮಂತಿಕೆ ತುಂಬಲು ಇವರಿಂದ ಸಾಧ್ಯವಾಗುತ್ತಾ?

ಇಂತಹ ಬರಹಗಾರರು ಎರಡು ರೀತಿಯಲ್ಲಿ ಸೋಲುತ್ತಿದ್ದಾರೆ. ಮೊದಲನೆಯದಾಗಿ ಅವರು ತಮ್ಮ ಹಿಂದಿನ ಪರಂಪರೆಯನ್ನು ಅರಿತು ಕೊಳ್ಳುತ್ತಿಲ್ಲ. ಅಂದರೆ, ಓದು ಕಡಿಮೆಯಾಗುತ್ತಿದೆ. ಎರಡನೆಯದಾಗಿ ಸಮಾಜವನ್ನು ಗಮನಿಸುತ್ತಿಲ್ಲ. ಜೊತೆಗೆ ಏನು ಬರೆದರೂ ಪತ್ರಿಕೆಗಳು ಪ್ರಕಟಿಸುತ್ತವೆ ಅದ್ದರಿಂದ ಯಾಕೆ ಸುಮ್ಮನೆ ಕಷ್ಟ ಪಡುವುದು ಎಂಬ ಮನೋಭಾವ.

ಇನ್ನೂ ಹಿರಿಯ ಸಾಹಿತಿಗಳನ್ನು ಗಮನಿಸಿದರೆ ಅವರು ಕಾರಣವಿ(ವ)ಲ್ಲದ ಕಾರಣಗಳಿಂದ ಒಡೆದು ಹಂಚಿ ಹೋಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಇದೊಂದು ದೊಡ್ಡ ಹೊಡೆತ. ಇದರಿಂದ ಮುಖ್ಯ ಬರಹಗಳಿಗೆ ಅಥವಾ ವಿಷಯಗಳಿಗೆ ಸಂಬಂಧಿಸಿದಂತೆ ವಸ್ತುನಿಷ್ಟ ವಿಮರ್ಶೆ ಮರೆಯಾಗಿ ವ್ಯಕ್ತಿ ನಿಷ್ಟ ಮತ್ತು ಸಿದ್ಧಾಂತ ನಿಷ್ಟ ವಿಮರ್ಶೆ ಮತ್ತು ಬರಹಗಳು ಅವರಿಂದ ಬರುತ್ತಿದೆ.
ಹಿಂದೆ ಗುರು ಇಲ್ಲ, ಮುಂದೆ ಗುರಿ ಇಲ್ಲದ ಈ ಸ್ಥಿತಿಯ ಪರಿಣಾಮವಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ನಿರ್ವಾತವೊಂದು ಸೃಷ್ಟಿಯಾಗುವಂತಾಗಿದೆ.

ಹಾಗಂತ ಕನ್ನಡ ಪುಸ್ತಕಗಳು ಪ್ರಕಟಗೊಳ್ಳುತ್ತಿಲ್ವಾ? ಖಂಡಿತವಾಗಿಯೂ ತರಹೇವಾರಿ ಪುಸ್ತಕಗಳು ಪ್ರಕಟಗೊಳ್ಳುತ್ತಿವೆ. ಅವುಗಳ ಮುದ್ರಣ ಮತ್ತು ವಿನ್ಯಾಸ ಚೇತೋಹಾರಿಯಾಗಿದೆ. ಭೌತಿಕವಾದ ಹೊಸತನ ತುಂಬುವುದರಲ್ಲಿ ನಮ್ಮ ಸಾಹಿತ್ಯ ಲೋಕ ಹಿಂದೆ ಬಿದ್ದಿಲ್ಲ ಆದರೆ ನಾವು ಸೋಲುತ್ತಿರುವುದು ಒಳಗಿನ ಹೂರಣ ತುಂಬುವುದರಲ್ಲಿ. ಅಂದರೆ ಯಂತ್ರ ಮಾಡುವ ಕೆಲಸಕ್ಕಿಂತ ಮನಸ್ಸು ಮಾಡಬೇಕಾದ ಕೆಲಸ ಕನ್ನಡದಲ್ಲಿ ಆಗಬೇಕಿದೆ.

ಇಂದಿನ ಕನ್ನಡ ಸಾಹಿತ್ಯದ ಧನಾತ್ಮಕ ಅಂಶವೆಂದರೆ ವಿವಿಧ ಬಗೆಯ ಸಾಹಿತ್ಯ ಹುಟ್ಟಿಕೊಳ್ಳುತ್ತಿದೆ, ಜೊತೆಗೆ ಹಿಂದೆ ಹುಟ್ಟಿದ ಕೆಲ ಸಾಹಿತ್ಯ ಪ್ರಕಾರಗಳು ಅಭಿವೃದ್ಧಿಕಾಣುತ್ತಿದೆ. ಇದರ ಜೊತೆ ಜೊತೆಗೆ ಜಾಗತೀಕರಣದ ಪ್ರಭಾವದಿಂದ ಹುಟ್ಟಿಕೊಂಡ ವೃತ್ತಿಗಳನ್ನು ಮಾಡುತ್ತಿರುವವರು ಕೂಡ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದಾರೆ.

ಒಟ್ಟಿನಲ್ಲಿ ಕನ್ನಡ ಸಾಹಿತ್ಯಕ್ಕೆ ಇದೊಂದು ಹೊಸ ಬಗೆಯ ಸಮನ್ವಯ ಸಂಧಿ ಕಾಲ. ಹಿರಿಕಿರಿಯರು ಒಟ್ಟಾಗಿ ಈ ಸ್ಥಿತಿಯನ್ನು ಎದುರಿಸಬೇಕು. ಹಿರಿಯರ ಅನುಭವ, ಕಿರಿಯರ ಉತ್ಸಾಹ ಸಮನ್ವಯಗೊಂಡರೆ ಮಾತ್ರ ಕನ್ನಡ ಸಾಹಿತ್ಯ ಉಳಿಯಬಹುದು, ಹಬ್ಬಬಹುದು, ಬೆಳೆಯಬಹುದು.

ಇಲ್ಲದಿದ್ದಲ್ಲಿ ಇಂದಿನ ಸಾಹಿತಿಗಳಲ್ಲಿ ಸಾಮಾನ್ಯವಾಗಿ ಕಾಣುವ ಜಾಗತೀಕರಣದ ವಿರುದ್ದದ ಬೈಗುಳ ನಿತ್ಯಮಂತ್ರವಾಗಿ ಬಿಡಬಹುದು. ಕನ್ನಡ ಸಾಹಿತ್ಯದ ಹರಿವು ಬತ್ತಿ ಹೋಗಬಹುದು!

Monday, December 7, 2009

ಅವರಿಗೆ ’ಮತ’ದಾಸೆ, ನಮಗೆ ದೇಶದಾಸೆ!

ಛೇ, ಏನಿದು? ಇಲ್ಲ, ಅವರು ದೇಶದ ಮುಖ್ಯವಾಹಿನಿಗೆ ಸೇರುವುದೇ ಇಲ್ಲ. ಉಳಿದವರನ್ನು ಸೇರಲು ಕೂಡ ಬಿಡುವುದಿಲ್ಲ. ಅವರ ಸ್ವಾರ್ಥಕ್ಕೆ ಮತದ ಮುಖವಾಡ, ಅಲ್ಲಿ ಮತವೇ ಫುಟ್‌ಬಾಲ್ ಮತ್ತು ಅಂಪೈರ್‌ಗಳಾದ್ದೇ ಆಟ!
ಈ ರೀತಿ ಹೇಳದೆ, ಬರೆಯದೆ ವಿಧಿಯಿಲ್ಲ. ಕಾರಣ, ಮುಸ್ಲಿಂಮರು ’ವಂದೇ ಮಾತರಂ’ ಹಾಡುವುದರ ವಿರುದ್ದ ಜಾಮತೇ ಉಲೇಮಾ ಈ ಹಿಂದ್ ಹೊರಡಿಸಿರುವ ಫತ್ವಾ!
ವಾರೆವ್ಹಾ ಜಾಮತೇ ಉಲೇಮಾ ಈ ಹಿಂದ್ ವಾರೆವ್ಹಾ!
ಮುಸ್ಲಿಂಮರು, ಕೊಲೆ, ಕಳ್ಳತನ, ಅತ್ಯಾಚಾರ, ದೇಶದ್ರೋಹ ಮಾಡುವುದು ವಿಶಾಲವಾಗಿ ಹೇಳುವುದಾದರೆ ದೇಶದ ಕಾನೂನನ್ನು , ಮಾನವೀಯತೆಯನ್ನು ಗೌರವಿಸದಿರುವುದು ಇಸ್ಲಾಂ ವಿರೋಧಿಯಲ್ಲ ಆದರೆ ’ವಂದೇ ಮಾತರಂ’ ಹಾಡುವುದು ಮಾತ್ರ ಇಸ್ಲಾಂ ವಿರೋಧಿ! ಎಂಥಹ ಪರಿಕಲ್ಪನೆ ನಿಮ್ಮದು. ಅದ್ಭುತ... ಅದ್ಭುತ!
’ವಂದೇ ಮಾತರಂ’ನ್ನು ಬಂಕಿಮ ಚಂದ್ರ ಚಟರ್ಜಿ ಬರೆದದ್ದು ೧೮೭೫ರಲ್ಲಿ. ಆದರೆ ಅದು ಅವರ ಕಾದಂಬರಿ ’ಅನಂದ ಮಠ’ದ ಮೂಲಕ ಬೆಳಕು ಕಂಡದ್ದು ಮುಂದಿನ ದಶಕದ ಆದಿಯಲ್ಲಿ.
’ವಂದೇ ಮಾತರಂ’ನ್ನು ೧೮೯೬ರ ಕಾಂಗ್ರೇಸ್ ಅಧಿವೇಶನದಲ್ಲಿ ರವೀಂದ್ರನಾಥ್ ಠಾಗೋರ್ ಹಾಡಿದರು. ತದನಂತರ ೧೯೦೫ರಲ್ಲಿ ಲಾರ್ಡ್ ಕರ್ಜನ್ ಬಂಗಾಳವನ್ನು ವಿಭಜಿಸಿದ. ಈ ಸಂದರ್ಭದಲ್ಲೇ ’ವಂದೇ ಮಾತರಂ’ ಎಂಬ ಸುಪ್ತ ಜ್ವಾಲಾಮುಖಿ ಸ್ಪೋಟಗೊಂಡು ಇಡೀ ಬೆಂಗಾಳಿಯರನ್ನು ಬೆಸೆದು ಬ್ರಿಟೀಷ್ ಆದಿಪತ್ಯದ ಮೇಲೆ ಬೆಂಕಿಯ ವರ್ಷಧಾರೆ ಸುರಿಸಿದ್ದು.
ವಂಗ ಭಂಗ ಚಳವಳಿಯ ಬೀಜಮಂತ್ರವಾಯಿತು ಈ ಹಾಡು. ೧೯೧೧ರಲ್ಲಿ ಬಂಗಾಳ ಮತ್ತೆ ಒಂದಾಯಿತು. ಅಷ್ಟರಲ್ಲೇ ’ವಂದೇ ಮಾತರಂ’ ಗಿದ್ದ ಅಗಾಧ ಶಕ್ತಿ ಮತ್ತು ಚೈತನ್ಯ ಬೆಂಗಾಳಿಯರಿಗೆ ಮನದಟ್ಟಾಗಿತ್ತು ಮತ್ತು ಬ್ರಿಟೀಷ್ ದೊರೆಗಳಿಗೆ ಆರ್ಥವಾಗಿತ್ತು!
ಇದೇ ಕಾಲದಲ್ಲಿ ಮತ್ತು ತದನಂತರ ಈ ಹಾಡು ಬಂಗಾಳದ ಎಲ್ಲೆಗಳನ್ನು ದಾಟಿ, ದೇಶದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರ ಹೃದಯಗಳನ್ನು ಮೀಟಿ ಬ್ರೀಟಿಷರ ಹುಟ್ಟಡಗಿಸಲೆಂದೇ ಹುಟ್ಟಿಕೊಂಡ ಹೊಸ ಅಸ್ತ್ರ ಅಥವಾ ಶಕ್ತಿಯಾಗಿ ಪರಿಗಣಿಸಲ್ಪಟ್ಟಿತ್ತು.
ಅಲ್ಲಿಂದ ೧೯೨೩ರ ಕಾಕಿನಾಡ ಕಾಂಗ್ರೇಸ್ ಅಧಿವೇಶನದ ತನಕ ’ವಂದೇ ಮಾತರಂ’ ಯಾವುದೇ ವಿವಾದಗಳಿಗೆ ತುತ್ತಾಗದೇ ದೇಶ ಬಾಂಧವರನ್ನು ಒಟ್ಟುಗೂಡಿಸುತ್ತ ಸಾಗಿತು.
ಆದರೆ ಆ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಮೌಲಾನಾ ಮಹಮ್ಮದ್ ಆಲಿ, ಅಧಿವೇಶನದಲ್ಲಿ ಈ ಹಾಡನ್ನು ಹಾಡುವುದಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿ ಈ ಹಾಡಿಗೆ ಮತ್ತು ಈ ಹಾಡಿನ ಆಶಯಕ್ಕೆ ಮೈಲಿಗೆ ಮಾಡುವ ಕೆಲಸಕ್ಕೆ ಮೂಹುರ್ತವಿಟ್ಟರು.
ಅಲ್ಲಿಂದ ನಂತರ ಹೆಚ್ಚಿನ ಮುಸ್ಲಿಂ ನಾಯಕರುಗಳಿಂದ ’ವಂದೇ ಮಾತರಂ’ನ ವಿರೋಧ ಪರ್ವ. ಇದೀಗ ಜಮಾತೆ ಉಲೇಮಾ ಸಂಘಟನೆ ಈ ಪರಂಪರೆಗೆ ಮತ್ತೊಂದು ಕೊಂಡಿ ಸೇರಿಸಿದೆ. ಇದು ಆ ಸಂಘಟನೆ ಸಂಕುಚಿತ ಚಿಂತನೆ ಮತ್ತು ಮನೋಭಾವದ ತುತ್ತಾತುದಿ ತಲುಪಿದೆ ಎಂಬುದನ್ನು ಸಾರಿದೆ. ಇಂತಹ ಮನಸ್ಥಿತಿ ಹುಟ್ಟಿಕೊಳ್ಳಲು ದೇಶದ ’ಜಾತ್ಯತೀತ’ಪಕ್ಷಗಳ ಕೊಡುಗೆ ಅಪಾರ. ಮುಸ್ಲಿಂ ಒಲವಿಗಾಗಿ ಪರಿತಪಿಸುವ ಪಕ್ಷಗಳಿಗೆ ’ವಂದೇ ಮಾತರಂ’ಅಸ್ಪಶ್ಯ,
ಇಲ್ಲೊಂದು ಗಮನಿಸಬೇಕಾದ ಸಂಗತಿಯಿದೆ. ಅದೇನೇಂದರೆ ೧೮೮೦ ರಿಂದ ೧೯೨೩ರವರೆಗೆ ಯಾವೊಬ್ಬ ಮುಸ್ಲಿಂ ಮತ ಪಂಡಿತನೂ ಈ ಹಾಡಿನ ಬಗ್ಗೆ ತಕರಾರು ಎತ್ತಿರಲಿಲ್ಲ. ಸ್ವತ: ಈಗ ಫತ್ವಾ ಹೊರಡಿಸಿರುವ ಜಾಮಾತೇ ಉಲೇಮಾ ಕೂಡ! ಅಂದರೆ ಇದರರ್ಥ, ಆಗಿದ್ದ ಇಸ್ಲಾಂ ಮತ ಪಂಡಿತರಲ್ಲಿ ಮತ ಪಾಂಡಿತ್ಯದ ಕೊರತೆಯಿತ್ತೆಂದ? ಅಥವಾ ಅವರಿಗೆ ವಂದೇ ಮಾತರಂನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇರಲಿಲ್ಲ ಎಂದಾ? ಅಥವಾ ಅವರಿಗೆ ಇಸ್ಲಾಂ ಸರಿಯಾಗಿ ಗೊತ್ತಿರಲಿಲ್ಲ ಎಂದಾ? ಅಥವಾ ೧೯೨೦ರ ನಂತರದ ಹಲವು ಮುಸ್ಲಿಂ ನಾಯಕರು ಅಧಿಕಾರ ದಾಹಕ್ಕಾಗಿ ಈ ಹಾಡನ್ನು ಗೊತ್ತಿದ್ದು ಗೊತ್ತಿದ್ದು ತಪ್ಪಾಗಿ ಅರ್ಥೈಸಿಕೊಂಡರಾ?
ಮುಸ್ಲಿಂ ನಾಯಕರ ’ವಂದೇ ಮಾತರಂ’ದ್ವೇಷಕ್ಕೆ ಮತ್ತೊಂದು ಕಾರಣವನ್ನು ಊಹಿಸಬಹುದು. ಅದೇನೆಂದರೆ ಈ ಹಾಡು ಇರುವ ’ಅನಂದ ಮಠ’ಕಾದಂಬರಿಯ ಕಥಾವಸ್ತು. ಇಲ್ಲಿ ಬಂಗಾಳದ ಸಂತಾನ ಎಂಬ ಗುಡ್ಡಗಾಡು ಜನರು, ಆಕ್ರಮಣಕಾರಿ ಮುಸ್ಲಿಂರ ವಿರುದ್ಧ ಹೋರಾಡುತ್ತಾರೆ. ಈ ಗುಡ್ಡಗಾಡು ಜನರಿಗೆ ಸ್ಪೂರ್ತಿಯಾಗಿ ಈ ಹಾಡು ಕಾದಂಬರಿಯಲ್ಲಿ ಬಳಕೆಯಾಗುತ್ತದೆ. ಇದು ಮುಸ್ಲಿಂ ನಾಯಕರುಗಳಿಗೆ ನೋವು ತಂದಿರಬಹುದು.
ಸರಿ, ಒಪ್ಪೋಣ. ದೇಶದ ಜನರು ಆ ಕಾದಂಬರಿಯನ್ನು ಬಾಯಿ ಪಾಠ ಹೊಡೆಯಲಿ, ಆ ಪುಸ್ತಕವನ್ನ ’ರಾಷ್ಟ್ರ ಪುಸ್ತಕ’ಎಂದು ಘೋಷಿಸಲಿ ಎಂದು ಇಲ್ಲಿ ಯಾರೂ ಹೇಳುತ್ತಿಲ್ಲ. ಇನ್ನು ಈ ಕಾದಂಬರಿಯ ಬಗ್ಗೆ ದೇಶದ ಶೇ. ೯೯ ಮಂದಿಗೆ ಅರಿವೆ ಇರಲಿಕ್ಕಿಲ್ಲ. ಇದ್ದರೂ ಅದರ ಕಥಾಹಂದರದ ಬಗ್ಗೆ ಗೊತ್ತೇ ಇರಲಿಕ್ಕಿಲ್ಲ. ಅವರಿಗೆ ಈ ಹಾಡು ಹುಟ್ಟಿಸುವ ದೇಶಭಕ್ತಿ ಮುಖ್ಯ ಉಳಿದ ವಿಷಯಗಳು ನಗಣ್ಯ.
ಅದರಲ್ಲೂ ಆ ’ಹಿರಿದಾದ’ಹಾಡಿನಲ್ಲಿರುವ ಹಿಂದೂ ದೇವತೆಗಳ ವರ್ಣನೆಯನ್ನು ತೆಗೆದು ಟ್ರಿಮ್ ಮಾಡಿ ಮುಸ್ಲಿಂಮರ ಧಾರ್ಮಿಕ ನಂಬಿಕೆಗೆ ಯಾವ ಚ್ಯುತಿಯೂ ಆಗದ ರೀತಿಯಲ್ಲಿ ಈ ಹಾಡನ್ನು ಈಗ ಬಳಸಿಕೊಳ್ಳಲಾಗುತ್ತಿದೆ. ಆದರೂ ಉಲೇಮಾದ ನಖಾರ ಅದರ ಉದ್ದಟತನದ ಪ್ರತೀಕ.
ಈಗ ದೇಶದ ರಾಷ್ಟ್ರಗೀತೆ ’ಜನಗಣಮನ’ವನ್ನು ತೆಗೆದುಕೊಳ್ಳಿ. ಈ ಹಾಡನ್ನು ಎಲ್ಲರೂ ಗೌರವಿಸುತ್ತಾರೆ ನಿಜ. ಅದರೆ ಈ ಹಾಡು ’ಉತ್ಸವ ಮೂರ್ತಿ’ ರೀತಿ ಅನಿಸಿಬಿಟ್ಟಿದೆ. ಅದು ಇಂದಿಗೂ ದೇಶವಾಸಿಗಳ ಹೃದಯದ ಹಾಡಗಿಲ್ಲ, ಜನರನ್ನು ಬೆಸೆದಿಲ್ಲ, ಜನರಲ್ಲಿ ಯಾವುದೋ ಒಂದು ಉದ್ದೇಶಕ್ಕಾಗಿ ಶ್ರಮಿಸುವಂತೆ, ಹೋರಾಡುವಂತೆ ಮಾಡಿಲ್ಲ, ಜನರಿಗೆ ಸ್ಪೂರ್ತಿಯಾಗಿಲ್ಲ ಅದಕ್ಕಿಂತ ಹೆಚ್ಚಾಗಿ ಜನರ ಪ್ರಜ್ಞೆಗೆ ಇಳಿದೇ ಇಲ್ಲ.
’ವಂದೇ ಮಾತರಂ’ ಆ ಕಾಲದಲ್ಲಿ ಕೇವಲ ಹತ್ತು ವರ್ಷದಲ್ಲಿ ಸಾಧಿಸಿದನ್ನು ’ಜನಗಣಮನ’ಕ್ಕೇ ಈ ಕಾಲದಲ್ಲಿ ಕಳೆದ ೬೦ ವರ್ಷಗಳಿಂದ ಸಾಧಿಸಲು ಸಾಧ್ಯವಾಗಿಲ್ಲ.
ಇನ್ನು ಜಮಾತೇ ಉಲೇಮಾದ ವಿಷಯಕ್ಕೆ ಬರೋಣ, ಇದು ಅಸ್ತಿತ್ವಕ್ಕೆ ಬಂದದ್ದು ೧೯೧೯ರಲ್ಲಿ. ಭಾರತದಲ್ಲಿನ ಮುಸ್ಲಿಂಮರ ಶ್ರೇಯೋಭಿವೃಧಿ ಇದರ ಉದ್ದೇಶ. ಇದರ ಮುಖ್ಯ ಕಚೇರಿ ೧, ಬಹದ್ದೂರ್ ಶಾ ಜಾಫರ್ ರಸ್ತೆ, ನವದೆಹಲಿಯಲ್ಲಿದೆ.
ಇದು ಪಾಕಿಸ್ತಾನದ ಸೃಷ್ಟಿಯನ್ನು ವಿರೋಧಿಸಿತ್ತು. ಇದಕ್ಕಿಂತ ಅಶ್ಚರ್ಯದ ವಿಷಯವೆಂದರೆ ಕಳೆದವರ್ಷ ಭಯೋತ್ಪಾದನೆ ವಿರುದ್ದ ಪತ್ವಾ ಹೋರಡಿಸಿತ್ತು. ಈಗ ’ವಂದೇ ಮಾತರಂ’ವಿರುದ್ದ ಫತ್ವಾ! ಅಂದರೆ ಮುಗ್ದರನ್ನು ಕೊಲ್ಲವವರು ಮತ್ತು ’ವಂದೇ ಮಾತರಂ’ಹಾಡುವ ಮುಸ್ಲಿಂಮರು ಒಂದೇ ಎಂದ ಹಾಗಯ್ತು.
ಒಬ್ಬ ಮುಗ್ದನನ್ನು ಕೊಲ್ಲುವುದು, ಇಡೀ ಮಾನವ ಜನಾಂಗದ ಹತ್ಯೆ ಮಾಡಿದ ಪಾಪಕ್ಕೆ ಸಮ ಎಂದು ಕುರಾನ್‌ನಲ್ಲಿ ಇದೆಯೆಂದು ಬಲ್ಲವರು ಹೇಳುತ್ತಾರೆ. ಆದರೆ ಅದೆಲ್ಲದಕ್ಕಿಂತ ಹೆಚ್ಚು ಪಾಪದ ಕೆಲಸ ’ವಂದೇ ಮಾತರಂ’ಹಾಡುವುದು!
’ವಂದೇ ಮಾತರಂ’ಹಾಡಿದೊಡನೆ ಕುಸಿದು ಬೀಳುವಷ್ಟು ಜಾಳಾಗಿದೆಯಾ ಇಸ್ಲಾಂ? ಇದು ಪ್ರಶ್ನೆಯಲ್ಲ, ಸಂಶಯ.
ಸೂಡಾನ್‌ನ ಶೇಕ್ ಸಾದಿಕ್ ಅಬ್ದದಲ್ಲಾ ಬಿನ್ ಮಜೀದ್ ಎಂಬ ಮುಸ್ಲಿಂ ನಾಯಕ ಮಕ್ಕಳಿಗೆ ಲಸಿಕೆ ಕೊಡಿಸುವುದರ ವಿರುದ್ದ ಫತ್ವಾ ಹೊರಡಿಸಿದ್ದ. ಇರಾನ್‌ನ ಅಯೆತೊಲ್ಲ ಆಲಿ ಕಮೇನಿ, ಅಣ್ವಸ್ತ್ರ ಬಳಕೆ ಮತ್ತು ಶೇಖರಣೆ ವಿರುದ್ದ ಫತ್ವಾ ಹೊರಡಿಸಿದ್ದ. ಇನ್ನು, ಒಸಮಾ ಬಿನ್ ಲಾದನ್ ೧೯೯೬ ಮತ್ತು ೧೯೯೮ರಲ್ಲಿ ಹೊರಡಿಸಿದ್ದ ಫತ್ವಾದಲ್ಲಿ ಅಮೆರಿಕ, ಇಸ್ರೇಲ್‌ಗೆ ತನ್ನ ಬೆಂಬಲ ವಾಪಸ್ ಪಡೆದುಕೊಳ್ಳುವವರೆಗೆ ಮತ್ತು ಮುಸ್ಲಿಂ ರಾಷ್ಟ್ರಗಳಲ್ಲಿರುವ ತನ್ನ ಸೈನ್ಯವನ್ನು ವಾಪಸ್ ಪಡೆದುಕೊಳ್ಳುವವರೆಗೆ ಅದರ ನಾಗರಿಕರನ್ನು ಮತ್ತು ಸೈನಿಕರನ್ನು ಕೊಲ್ಲುವಂತೆ ಹೇಳಿದ್ದ. ಇವು ಕೆಲವೇ ಕೆಲವು ಸಾಮಾಜಿಕ ಪರಿಣಾಮ ಬೀರುವ ಮತ್ತು ಬೀರಿದ ಫತ್ವಾಗಳು.
ಇದರ ಜೊತೆ ಜೊತೆಗೆ ಸಿಗರೇಟ್ ಸೇವನೆಯ ವಿರುದ್ದ ಫತ್ವಾವಿದೆ. ಭಯೋತ್ಪಾದನೆಯ ವಿರುದ್ದವೂ ಫತ್ವಾವಿದೆ. ಇಂತಹ ಫತ್ವಾ ಇದ್ದರೂ ಮುಸ್ಲಿಂಮರು ಎಗ್ಗಿಲ್ಲದೆ ಸಿಗರೇಟ್ ಸೇದುತ್ತಾರೆ. ಭಯೋತ್ಪಾದನ ಚಟುವಟಿಕೆ ಅಥವಾ ಕೊಲ್ಲುವ, ಹಲ್ಲೆ ಮಾಡುವ ಚಟುವಟಿಕೆಗಳಲ್ಲಿ ’ಉತ್ಸಾಹ’ದಿಂದ ಪಾಲ್ಗೊಳ್ಳುತ್ತಾರೆ. ಇದರರ್ಥ, ಅವರು ಫತ್ವಾಕ್ಕೆ ಸೊಪ್ಪು ಹಾಕುತ್ತಿಲ್ಲ ಬದಲು ಟೋಪಿ ಹಾಕುತ್ತಿದ್ದರೆ ಎಂದಾಯಿತು.
ಅದ್ದರಿಂದ ’ವಂದೇ ಮಾತರಂ’ಬಗೆಗೂ ಅವರ ಪ್ರತಿಕ್ರಿಯೆ ಅದೇ ರೀತಿ ಇರಬಹುದು ಎಂದು ಊಹಿಸಬಹುದು. ಹಾಗೇ ಆಗಿದ್ದೇ ಆದಲ್ಲಿ ಖಂಡಿತ ಇದೊಂದು ಅಭೂತ ಪೂರ್ವ ಬೆಳವಣಿಗೆ. ಆದರೆ ಇದು ಹಾಗೇ ಆಗುವುದಿಲ್ಲ ಎಂದು ನಂಬಲು ಬಲವಾದ ಕಾರಣವಿದೆ. ಯಾಕೆಂದರೆ ’ವಂದೇ ಮಾತರಂ’ನ್ನು ವಿರೋಧಿಸಲು ಮತ ಪಂಡಿತರು ನೀಡಿರುವ ಕಾರಣ ಅದು ಹಿಂದೂ ದೇವತೆಗಳನ್ನು ಹೊಗಳುತ್ತದೆ ಎಂಬುದು. ಇಸ್ಲಾಂ ’ಅಲ್ಲಾಹು’ನ ಹೊರತಾಗಿ ಯಾರನ್ನೂ ಮತ್ತೂ ಯಾವುದನ್ನು ದೇವರೆಂದು ಪರಿಗಣಿಸುವುದಿಲ್ಲ. ಈಗ ನೀ ’ವಂದೇ ಮಾತರಂ’ಹಾಡಿದರೆ ಅದು ನೀನು ’ಅಲ್ಲಾಹು’ವಿಗೆ ಮಾಡುವ ಅಪಚಾರ ಎಂದು ಬಿಂಬಿಸಿದರೆ ಸಾಕು. ಮುಸ್ಲಿಂಮರು ತಪ್ಪಿಯೂ ಅ ಪದವನ್ನು ಉಸುರುವುದಿಲ್ಲ.
ಫತ್ವಾ ಹೊರಡಿಸುವವರು ’ಪರಿಶುದ್ದ’ರು ಎಂದು ನೀವು ತಿಳಿದುಕೊಳ್ಳಬೇಡಿ. ೨೦೦೮ರಲ್ಲಿ ಟಿವಿ ಚಾನೆಲ್‌ವೊಂದು ನಡೆಸಿದ ’ಕುಟುಕು ಕಾರ್ಯಾಚರಣೆ’ಯಲ್ಲಿ ಹಣ ಪಡೆದು ಫತ್ವಾ ಹೋರಾಡಿಸುತ್ತಿದ್ದ ಅನೇಕ ಮುಸ್ಲಿಂ ನಾಯಕರು ’ಬೆಳಕಿಗೆ’ ಬಂದಿದ್ದರು.
ದೇಶದ ೯೦ ಕೋಟಿ ಜನರಿಂದ ಈ ೧೬ ಕೋಟಿ ಮುಸ್ಲಿಂಮರನ್ನು ದೂರವಿಡುವ ಕೆಲಸವನ್ನು ಕಾಲಕಾಕ್ಕೆ ಈ ಮುಸ್ಲಿಂ ನಾಯಕರುಗಳು ಯಾಕೆ ಮಾಡುತ್ತಿದ್ದಾರೆ? ಈ ಹಿಂದೆಯೂ ಇಂತಹ ನಾಯಕರುಗಳ ಮಾತು ಕೇಳಿದ ಮುಸ್ಲಿಂಮರು ಇಂದು ಪಾಕಿಸ್ತಾನ ಮತ್ತು ಬಾಂಗ್ಲದೇಶಗಳಲ್ಲಿ ಪಡಬಾರದ ಯಾತನೆ ಪಡುತ್ತಿದ್ದಾರೆ. ಅದ್ದರಿಂದ ಇಂತಹ ದೊಣ್ಣೆ ನಾಯಕರುಗಳ ವಿಷ ಮಾತುಗಳಿಗೆ ದೇಶದ ಮುಸ್ಲಿಂಮರು ಮಣೆ ಹಾಕಬಾರದು.
ಇಲ್ಲಿನ ಬಹುಸಂಖ್ಯಾತರ ಜೊತೆ ಕೂಡಿ ಬಾಳುವ ದಿಸೆಯಲ್ಲಿ, ಮತ್ತವರ ನಂಬಿಕೆಯನ್ನು ಗೌರವಿಸಿ ಸಾಮರಸ್ಯದ ಬದುಕು ಕಟ್ಟುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ದೇಶ ಖಂಡಿತವಾಗಿಯೂ ಅವರನ್ನು ಹೃದಯದಲ್ಲಿಟ್ಟು ಗೌರವಿಸುತ್ತದೆ. ಉದಾಹರಣೆಗೆ ಪ್ರಸಕ್ತ ಭಾರತದ ಸರ್ವಶ್ರೇಷ್ಟ ನಾಯಕ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಚಲನಚಿತ್ರ ತಾರೆಯರು, ಕ್ರೀಡಾ ಕಲಿಗಳನ್ನು, ನಾನ ಕ್ಷೇತ್ರಗಳಲ್ಲಿನ ಸಾಧಕರನ್ನು ನಾವು ಜಾತಿ ಮತದ ಹಂಗಿಲ್ಲದೆ ಗೌರವಿಸಿದ್ದೇವೆ, ಪ್ರೀತಿಸಿದ್ದೇವೆ ಮುಂದೆಯೂ ನಾವು ಈ ಕಾರ್ಯ ಮಾಡಲಿದ್ದೇವೆ.
ಇಲ್ಲ, ನಿಮಗೆ ಇಂತಹ ಫತ್ವಾಗಳೇ ಮುಖ್ಯವಾಗುವುದಾದರೇ ಅಂದು ಫತ್ವಾ ಹೊರಡಿಸುವಾಗ ವೇದಿಕೆಯಲ್ಲಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಇದ್ದರು ಮತ್ತು ಅವರು ಸುಮ್ಮನಿದ್ದರು ಮತ್ತು ಈಗಲೂ ಸುಮ್ಮನಿದ್ದಾರೆ ಬಹುಶಃ ಮುಂದೆಂಯೂ ಸುಮ್ಮನಿರುತ್ತಾರೆ. ಅವರಿಗೆ ಮತ್ತು ಫತ್ವಾ ಹೊರಡಿಸಿದವರಿಗೆ ’ಮತ’ದಾಸೆ. ಆದರೆ ದೇಶದ ೯೦ ಕೋಟಿ ಜನರು ಹಾಗಿಲ್ಲ, ಹಾಗಿರುವುದು ಇಲ್ಲ! ಯಾಕೆಂದರೆ ಅವರಿಗಿರುವುದು ದೇಶದ ಸಮಗ್ರತೆಯನ್ನು ಉಳಿಸಿಕೊಳ್ಳುತ್ತೇವೆ ಎಂಬ ಮಹಾದಾಸೆ!

Friday, October 23, 2009

ಮೈಸೂರಿನಲ್ಲೊಂದು ಪತ್ರಿಕೋದ್ಯಮ ಕಾರ್ಯಾಗಾರ... ಈಗ ನನ್ನದು ವರದಿ ನೀಡೋ ಸರದಿ!

[ಈ ಬರಹ ಸ್ವಲ್ಪ ಅಲ್ಲ ತುಂಬಾನೇ ಉದ್ದವಿದೆ... ಇದನ್ನು ಟ್ರೀಮ್ ಮಾಡಿ ಬ್ಲಾಗ್ ಗೆ ಹಾಕೋಣ ಎಂದು ಒಮ್ಮೆ ಯೋಚಿಸಿದ್ದೆ. ಆದರೆ ಹಾಗೆ ಮಾಡಿಲ್ಲ... ಇಲ್ಲಿನ ಕೆಲ ವಿಷಯಗಳು ಕೆಲವರಿಗೆ ಅಪ್ರಸ್ತುತ ಎಂದು ಅನಿಸಬಹುದು ಅದರೆ ಕೆಲವರಿಗೆ ಅದು ಬೇಕಾಗಿರುವುದರಿಂದ ಅದನ್ನು 'ಕಟ್' ಮಾಡಿಲ್ಲ. ಅದ್ದರಿಂದ ಸಹೃದಯಿ ಓದುಗರು ಸಹಕರಿಬೇಕು.]
ಇದನ್ನು ನಾನು ವಿಶ್ಲೇಷಣ ವರದಿ ಅಂತ ಅಂದ್ಕೊಡಿದ್ದೇನೆ...!
ಅಂದು ಗುರುವಾರ, ದಿನಾಂಕ 8/10/2009. ಸಮಯ ಮಧ್ಯಾಹ್ನ 2 ಗಂಟೆ. ನಮ್ಮ ಕಾಲೇಜಿನ (ಎಸ್ ಡಿ ಎಂ ಕಾಲೇಜು) ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ 16 ವಿದ್ಯಾರ್ಥಿಗಳು ಧರ್ಮಸ್ಥಳದಿಂದ ಮೈಸೂರಿಗೆ ಹೋಗುತ್ತಿದ್ದ ಬಸ್ ಏರಿ ಆಗಿತ್ತು. ನಮ್ಮೊಂದಿಗೆ ಚಂದ್ರಲೇಖ ಮ್ಯಾಮ್ ಕೂಡ ಇದ್ದರು. ಆ ಬಸ್ ನಲ್ಲಿ ನಾವು 17 ಮಂದಿಯ ಹೊರತಾಗಿ ಒಬ್ಬನೇ ಪಯಣಿಗನಿದ್ದದ್ದು! ಅದ್ದರಿಂದ ಆ ಬಸ್ಸು ನಮ್ಮದೇ ಆಗಿತ್ತು ಎನ್ನಲೂ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಾಗಿಲ್ಲ!
ಬಸ್ಸಿನ ಕುಲುಕಾಟಕ್ಕೆ ನಮ್ಮ ಹುಡುಗಾಟದ ಸಾಥ್ ಸೇರಿ ಪಯಣವಂತೂ ಬೊಂಬಾಟ್. ಬಗೆ ಬಗೆ ತಿಂಡಿತಿನಿಸುಗಳು ಗೆಳೆಯ - ಗೆಳತಿಯರ ಜೋಳಿಗೆಯಲ್ಲಿತ್ತು. ಅದನ್ನು ನಾವೆಲ್ಲ ಹಂಚಿಕೊಂಡು ತಿನ್ನುತ್ತಾ 'ಹಂಚಿ ತಿನ್ನುವುದರಲ್ಲಿ ಸ್ವರ್ಗಸುಖವಿದೆ' ಎಂಬ ಹಿರಿಯರ ಮಾತನ್ನು ಪರಾಂಬರಿಸಿ ನೋಡಿದೇವು. ಚೇತನ್ ಅಲಿಯಾಸ್ ಚೇತು ತಿಂಡಿ ವಿತರಣೆಯ ಸಂಪೂರ್ಣ ಹಕ್ಕನ್ನು ಪಡೆದುಕೊಂಡಿದ್ದ ಮತ್ತು ಇದರಿಂದ ಅವನು ಸಾಕಷ್ಟು ಲಾಭಮಾಡಿಕೊಂಡಿದ್ದಾನೆ ಎಂದು ಜನರಾಡಿಕೊಳ್ಳುತ್ತಿದ್ದಾರೆ! ನಂದಂತೂ 'ಓಸಿ ಜೀವನವೇ ಲೇಸು ಸರ್ವಜ್ಙ' ಎಂಬ ಜನರ ಮಾತನ್ನು ಸತ್ಯಮಾಡಲೇಬೇಕು ಎಂಬ ಪಣ.
ನಾವು ರಾತ್ರಿ 9 ಗಂಟೆಯ ಸುಮಾರಿಗೆ ಮೈಸೂರು ತಲುಪಿದೆವು. ಅಲ್ಲಿ ಊಟ ಮುಗಿಸ್ಕೊಂಡು ಎರಡು ಗುಂಪಾಗಿ ಭಾಗವಾದೇವು. ಒಂದು ಗುಂಪು ಕೇಂದ್ರ ಸರಕಾರದ ಒಡೆತನದ ಯೂತ್ ಹಾಸ್ಟೆಲ್ ಗೆ ಹೋದರೆ ಮತ್ತೊಂದು ಗುಂಪು ಕರ್ನಾಟಕ ಒಪನ್ ಯುನಿವರ್ಸಿಟಿಯ ಹಾಸ್ಟೇಲ್ ಸೇರಿಕೊಂಡಿತು.
ನಾವು ಸುಖಾಸುಮ್ಮನೆ ಮೈಸೂರಿಗೆ ಹೋದದ್ದಲ್ಲ. ಅಲ್ಲಿನ ಜಯಲಕ್ಷ್ಮಿಪುರಂನಲ್ಲಿರುವ ಮಹಾಜನ ಕಾಲೇಜಿನಲ್ಲಿ ಅಕ್ಟೋಬರ್ 9 ಮತ್ತು 10 ರಂದು ಆಯೋಸಲಾಗಿದ್ದ 'ಪ್ರಸ್ತುತ ಪತ್ರಿಕೋದ್ಯಮ: ಪತ್ರಕರ್ತರ ಮುಂದಿರುವ ಸೃಜನಶೀಲ ಸವಾಲುಗಳು' ಎಂಬ ರಾಜ್ಯಮಟ್ಟದ ಕಾರ್ಯಗಾರದಲ್ಲಿ ಭಾಗವಹಿಸಲು.
ಕಾರ್ಯಗಾರ: ಮಾಹಿತಿಯ ಆಗರ
ನಾನು ಅಲ್ಲಿ ಕಳೆದ ಎಲ್ಲಾ ಕ್ಷಣಗಳನ್ನು ಇಲ್ಲಿ ಬರೆಯುವುದಿಲ್ಲ. ಬರೆದರೆ, ಅದು ನನ್ನ ಡೈರಿ ಅಥವಾ ವರದಿಯಾಗಿ ಬಿಡಬಹುದು. ಅದ್ದರಿಂದ ಹೇಳಲೇ ಬೇಕು ಎಂದೆನಿಸಿ, ಹೇಳದೆ ಇರಲಾಗದ್ದನ್ನು ಮತ್ತು ಈ ಬ್ಲಾಗ್ ನ ಓದುಗರಿಗೆ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಒಂಚೂರಾದರೂ ಪ್ರಯೋಜನವಾಗಬಹುದು ಎಂದೆನಿಸಿದನ್ನು ಮಾತ್ರ ಇಲ್ಲಿ ಬರೆಯುತ್ತೇನೆ.
ಕಾರ್ಯಗಾರವನ್ನು 'ವಾಯ್ಸ್ ಅಫ್ ಮೈಸೂರು' ಪತ್ರಿಕೆಯ ಸಂಪಾದಕ, ರಾಜಕಾರಣಿ, ವಾಸು ಉದ್ಘಾಟಿಸಿದರು.
ಆದರೆ ಕಾರ್ಯಕ್ರಮದಲ್ಲಿ ಚಿಂತನೆಯ ಕಿಡಿ ಹೊತ್ತಿಸಿದ್ದು 'ಮೈಸೂರು ಮಿತ್ರ’ ಮತ್ತು 'ಸ್ಟಾರ್ ಅಫ್ ಮೈಸೂರು' ಪತ್ರಿಕೆಯ ಸಂಪಾದಕ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ. ವಿ. ಗಣಪತಿ. ಅವರು ಅಕ್ಷರಶ: ಸಿಡಿಗುಂಡೇ ಆಗಿದ್ದರು. ಅದರಲ್ಲೂ ಕೆಲ ಪತ್ರಿಕೆಗಳ ’ತಲೆಬರಹ’ ಶೈಲಿಯನ್ನು ಉದಾಹರಣೆ ಸಹಿತ ಖಂಡಿಸಿದ ಅವರು ಪತ್ರಿಕೆಗಳ ಮನೋಭಾವವನ್ನು ಪ್ರಶ್ನಿಸುತ್ತಾ ಸಾಗಿದರು. ಸ್ವಾತಂತ್ರ್ಯ ಪೂರ್ವದಲ್ಲೂ ಜನಪ್ರಿಯ ಅಂಗ್ಲ ಪತ್ರಿಕೆಗಳ ಬ್ರಿಟೀಷ್ ಸೇವೆ ಮತ್ತು ಅದರ ಇಬ್ಬಂದಿತನವನ್ನು ಬೆತ್ತಲೆ ಮಾಡಿದ ಅವರು ಭಾಷಾ ಪತ್ರಿಕೆಗಳು ಮಾತ್ರ ಸ್ವಾತಂತ್ರ್ಯ ಹೋರಾಟದ ಕೈಂಕರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವು ಎಂದರು. 'ಕಾರ್ಯಕಾರಿ ಸಂಪಾದಕ' ಎಂಬ ಹೊಸ ಬೆಳವಣಿಗೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು ಪರ್ತಕರ್ತರು ಸ್ವತಂತ್ರ ಮತ್ತು ವೃತ್ತಿಪರರಾಗಿರಬೇಕು ಎಂದರು.
ಅವರು ಕನ್ನಡದ ಜನಪ್ರಿಯ ಪತ್ರಿಕೆಯೊಂದನ್ನು ಗುರಿಯಾಗಿಸಿಕೊಂಡೇ ಮಾತನಾಡಿದರು ಎಂದು ಯಾರಿಗಾದರೂ ಅನಿಸದೇ ಹೋಗಿದ್ದರೆ ಅವರ ಮಾತಿಗೆಯೇ ಅವಮಾನ ಮಾಡಿದಂತೆ.
ಕೆ.ವಿ. ಗಣಪತಿ ಹೇಳಿದ ಅನೇಕ ಸಂಗತಿಗಳು ಸತ್ಯವಾದದ್ದು. ಆದರೆ ಅವರು ಎಲ್ಲೋ ಒಂದು ಕಡೆ ವಸ್ತುನಿಷ್ಟತೆಯನ್ನು ಮರೆತು 'ಇಸಂ'ನಿಷ್ಟತೆಗೆ ಬಲಿಯಾದರು ಎಂದು ಅನಿಸದೇ ಇರಲಿಲ್ಲ. ಅದರಲ್ಲು ಅವರು 'ತಲೆ ಬರಹ'ಕ್ಕೆ ಉದಾಹರಣೆ ಕೊಡುತ್ತ ಒಂದು ಅಥವಾ ಎರಡು ಪತ್ರಿಕೆಯ 'ತಲೆಬರಹ'ಗಳ ಉದಾಹರಣೆ ಮಾತ್ರ ಕೊಟ್ಟರು. ಅದರರ್ಥ, ಕನ್ನಡದಲ್ಲಿ ನೂರಾರು ಪತ್ರಿಕೆಗಳಿದ್ದರು ಎರಡು ಪತ್ರಿಕೆಗಳು ಮಾತ್ರ ಕೆಟ್ಟ 'ತಲೆಬರಹ' ಕೊಡುತ್ತವೆ ಎಂದಾ? ಹಾಗಾದರೆ ಇದು ಸಂತಸ ಪಡಬೇಕಾದ ಸಂಗತಿ ಅಲ್ಲವೇ?

ಮುಂದಿನದ್ದು ಅವಧಿಗಳ ಯುಗ...

ಬೀಟ್ ನಲ್ಲಿ ಬೇರು ಬಿಡಿ ಆದರೆ ತಳವೂರಬೇಡಿ: ಭಟ್

ಮೊದಲ ಅವಧಿ 'ಸಂಪಾದಕೀಯ ಪುಟ'ದ ಬಗೆ ಇತ್ತು. ಸಂಪನ್ಮೂಲ ವ್ಯಕ್ತಿಯಾಗಿ ’ವಿಜಯ ಕರ್ನಾಟಕ’ದ ಕಾರ್ಯನಿವಾರ್ಹಕ ಸಂಪಾದಕ, ವಿಶ್ವೇಶ್ವರ ಭಟ್ ಆಗಮಿಸಿದರು. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಅವರು 'ಸಂಪಾದಕೀಯ ಪುಟ'ದ ಬಗೆ ಒಂದೇ ಒಂದು ಮಾತು ಆಡಲಿಲ್ಲ! ಹಾಗಂತ ಗೊತ್ತುಗುರಿಯಿಲ್ಲದ ಮಾತು ಅವರದಾಗಿರಲಿಲ್ಲ. ಅವರ ಮಾತು ಗಿರಕಿ ಹೊಡೆದದ್ದು ಒಬ್ಬ ಪತ್ರಕರ್ತನಿಗೆ ಅದರಲ್ಲೂ ಭಾವಿ ಪತ್ರಕರ್ತನಿಗೆ ಇ- ಮೈಲ್, ಟ್ವೀಟರ್, ಬ್ಲಾಗ್ ಮುಂತಾದವು ಎಷ್ಟು ಅವಶ್ಯಕ ಎಂಬುದರ ಬಗೆ.
ಆಧುನಿಕ ಸಂಪರ್ಕ ಸಾಧನಗಳ ಬಳಕೆಯ ಬಗ್ಗೆ ನಿಮಗೆ ಗೊತ್ತಿಲ್ಲವೆಂದರೆ ನೀವು ಎಷ್ಟು ಚೆನ್ನಾಗಿ ಬರೆಯುವವರಾದರೂ ನಾನಂತು ನಿಮಗೆ ಖಂಡಿತವಾಗಿಯೂ ಕೆಲಸ ಕೊಡುವುದಿಲ್ಲ ಎಂದು ಭಟ್ರು ಇದೇ ಸಂದರ್ಭದಲ್ಲಿ ಒಂಚೂರು ಖಾರವಾಗಿ ಹೇಳಿದರು.. ಒಬ್ಬ ಪತ್ರಕರ್ತನಿಗೆ ಅಧುನಿಕ ಸಂಪರ್ಕ ಸಾಧನಗಳ ಬಗೆಗಿನ ಆರಿವು ಇರಬೇಕು, ನಿಜ. ಆದರೆ ಆದೇ ಅವನ ಬರವಣಿಗೆಗೆ ಬದಲಿ ಎಂದೆನಿಸಿಕೊಳ್ಳುವುದು ಸರಿಯಾ? ಉದಾಹರಣೆಗೆ ಇ - ಮೈಲ್ ಬಳಕೆಯನ್ನು ಒಂದು ಗಂಟೆಯೊಳಗೆ ಯಾರು ಬೇಕಾದರೂ ಕಲಿತುಕೊಳ್ಳಬಹುದು, ಅದೇ ಬರವಣಿಗೆಯನ್ನು ಹಾಗೆ ಬಗ್ಗಿಸಿಕೊಳ್ಳಲು ಸಾಧ್ಯನಾ?
ಇನ್ನೂ ಎರಡು ವರ್ಷಗಳಲ್ಲೇ ಭಾಷಣ ವರದಿಗಾರಿಕೆ ಎಂಬುದೇ ಇರುವುದಿಲ್ಲ ಎಂಬ ಅಭಿಪ್ರಾಯ ಅವರದ್ದು. ಅದ್ದರಿಂದ ಭಾಷಣಗಳ ವರದಿ ಮಾಡಿ ನಾನು ಪತ್ರಕರ್ತನಾಗುತ್ತೇನೆ ಅಥವಾ ಆಗಿದ್ದೇನೆ ಎಂದು ಭಾವಿಸುವವರ ಅಥವಾ ಭಾವಿಸುತ್ತಿರುವವರ ತಲೆ ಮೇಲೆ ಅಪಾಯದ ಬಾವುಟ ನೆಟ್ಟಿದ್ದಾರೆ ಭಟ್ರು. ಇದು ನಮಗೆಲ್ಲರಿಗೂ ಎಚ್ಚರಿಕೆಯ ಗಂಟೆಯೂ ಹೌದು ಪತ್ರಿಕಾವರದಿಗಾರಿಕೆ ಹೊಸ ಸಾದ್ಯತೆಯೊಂದನ್ನು ಕಂಡುಕೊಳ್ಳಲಿದೆ ಎಂಬುದರ ಸೂಚನೆಯೂ ಹೌದು.
ಭಟ್ರು, ಮತ್ತೊಂದು ವಾಗ್ಬಾಣ ಬಿಟ್ಟದ್ದು ಹುಡುಗಿಯರ ಮೇಲೆ. ಅವರು ತಮ್ಮ ದೈನಂದಿನ ಅಂಕಣ, 'ವಕ್ರತುಂಡೋಕ್ತಿ'ಯಲ್ಲಿ ಹುಡುಗಿಯರ ಮೇಲೆ ಸಾಕಷ್ಟು ಬಾಣ ಪ್ರಯೋಗಿಸಿದ್ದರೂ ಕೂಡ ಇಲ್ಲಿ ಅವರು ಎತ್ತಿಕೊಂಡಿದ್ದ ವಿಷಯ ತುಸು ಗಂಭೀರ. ನಾನು ಎರಡು ಮೂರು ವರ್ಷ ಪರ್ತಕರ್ತೆಯಾಗಿರುತ್ತೇನೆ ಅಥವಾ ಮದುವೆಯಾಗುವ ತನಕ ಮಾತ್ರ ಈ ವೃತ್ತಿ ನನ್ನದು ಎಂದು ಭಾವಿಸಿಕೊಂಡು ದಯಮಾಡಿ ಈ ಕ್ಷೇತ್ರಕ್ಕೆ ಬರಬೇಡಿ ಎಂಬುದು ಅವರ ವಿನಂತಿ. ವಿಷಯ ಸರಳವಾಗಿದ್ದರು ಕೂಡ ಇದರೊಳಗೊಂದು ಗಂಭೀರ ಪ್ರಶ್ನೆ ಮತ್ತು ಕಟು ಸತ್ಯವಿದೆ.
ನಮ್ಮನ್ನು ನಾವು 'ರಿ - ಇನ್ವೇಂಟ್' ಮಾಡಿಕೊಳ್ಳುತ್ತಿರಬೇಕು ಇಲ್ಲದಿದ್ದಲ್ಲಿ ಅಪ್ರಸ್ತುತರಾಗಿ ಬಿಡುತ್ತೇವೆ, ನಮ್ಮ ಯೋಚನೆಗಳು ಉಳಿದವರಿಗಿಂತ ಭಿನ್ನವಾಗಿರಲಿ ನಾವು ಎಲ್ಲಿದ್ದೇವೆ ಎಂಬುದು ಮುಖ್ಯವಲ್ಲ ಏನು ಮಾಡುತ್ತಿದ್ದೇವೆ ಎಂಬುದು ಮುಖ್ಯ ಹೀಗೆ ಅವರ ಮಾತು ಸಾಗಿತು.
'ನೀವು ನೀಡುವ ವರದಿ ವಿಭಿನ್ನವಾಗಿರಲಿ' ಎಂಬ ಅವರ ಮಾತು ಕೂಡ ಚಚರ್ಗೆ ಕಾರಣವಾಗುವಂತದ್ದು ಮತ್ತು ಕಾರಣವಾಗಿದ್ದು. ಯಾಕೆಂದರೆ 'ವರದಿ' ಅಂದಾಗ ನಮ್ಮ ಕಣ್ಣ ಮುಂದೆ ಕೆಲವು ಸಿದ್ಧ ಮಾದರಿಗಳು ಬರುತ್ತವೆ. ಆದರೆ ಅದರೊಂದಿಗೆ ಕೆಲವು ಸುದ್ದಿ ಮೌಲ್ಯಗಳು ಕೂಡ ಸೇರಿಕೊಂಡಿರುತ್ತದೆ ಅದರಲ್ಲೂ ಸರಳ ಭಾಷೆ, ವಸ್ತುನಿಷ್ಟತೆ ಮತ್ತು ನಿಖರತೆ ಮುಖ್ಯವಾದದು ಅನ್ನುವುದಕ್ಕಿಂತ ಇರಲೇ ಬೇಕಾದದ್ದು ಎಂದರೆ ಸೂಕ್ತ. ಇನ್ನೂ ಯಾವ ಪತ್ರಿಕೆ, ಎಷ್ಟರ ಮಟ್ಟಿಗೆ ಈ ಮೌಲ್ಯಗಳನ್ನು ಪಾಲಿಸುತ್ತಿದೆ ಎಂಬ ಪ್ರಶ್ನೆ ನಮ್ಮ ಮುಂದೆ ಬರಬಹುದು. ಅದರೆ ಅದನ್ನು ಬದಿಗಿಟ್ಟು ಯೋಚಿಸಿದರೆ 'ವರದಿಗಾರಿಕೆ'ಗೆ ವಿಭಿನ್ನತೆ ಕೊಡುವ ಪ್ರಯತ್ನ ಪತ್ರಿಕೋದ್ಯಮದ ಬುಡವನ್ನೇ ಅಲುಗಾಡಿಸುವಂತದ್ದು ಎಂದು ನನಗನಿಸುತ್ತದೆ. ಯಾಕೆಂದರೆ ಈ ಸಂದರ್ಭದಲ್ಲಿ ವರದಿಗಾರ ತನ್ನ 'ವರದಿ'ಯ ಮೇಲೆ ಒಂದು ರೀತಿಯ ಸ್ವಾಯತ್ತತೆ ಪಡೆದುಕೊಳ್ಳುತ್ತಾನೆ ಮತ್ತು ತನ್ನ ಮೂಗಿನ ನೇರಕ್ಕೆ ಎಲ್ಲವನ್ನೂ ಕಾಣಲು ಶುರುಮಾಡುತ್ತಾನೆ ಇದರಿಂದ ಸುದ್ದಿಯ ವಿಶ್ವಾಸಾರ್ಹತೆ ಕುಂದುತ್ತದೆ ಅದರೊಂದಿಗೆ ಪತ್ರಿಕೆಯ 'ಇಸಂ' ಕೂಡ ಸೇರಿ ಸುದ್ದಿಯ ಶುದ್ದತೆ ಹಾಳಾಗಿ ಸುದ್ದಿ ಎಂಜಲೆಲೆ ಆಗಬಹುದು. ಆದರೆ ಪ್ರಬುದ್ಧ ವರದಿಗಾರ ಮತ್ತು ಉಪಸಂಪಾದಕರಿದ್ದಲ್ಲಿ ಇದು ಒಳಿತನ್ನುಂಟು ಮಾಡಬಹುದು. ಆದರೆ ಪತ್ರಕರ್ತ ಮತ್ತು ಪ್ರಬುದ್ದತೆ ಎಂಬುದು ಪರಸ್ಸರ ವಿರುದ್ಧ ಪದಗಳಾಗುತ್ತಿರುವ ಈ ಕಾಲಘಟ್ಟದಲ್ಲಿ ಇಂತಹ ಯೋಚನೆಯೇ ತಿರುಕನ ಕನಸು ಎಂದು ನನಗನಿಸುತ್ತದೆ.
ಭಟ್ರು 'ಪವರ್ ಪಾಯಿಂಟ್ ಪ್ರಸೆಂಟೇಶನ್' ಮೂಲಕ ತಮ್ಮ ಸಲಹೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ 'ಸಾಸಿವೆ ಬಿದ್ದರು ಕೇಳಿಸುವಷ್ಟು ಮೌನ'ವಿತ್ತು. ಇದರರ್ಥ ಎಲ್ಲರೂ ನಿದ್ದೆ ಮಾಡುತ್ತಿದ್ದರು ಎಂದಲ್ಲ! ಅಷ್ಟೂ ತದೇಕಚಿತ್ತರಾಗಿ ಭಟ್ರ ಮಾತು ಕೇಳಿಸುತ್ತಿದ್ದರು.
ಅವರ ಸರಳತೆಯ ಅರಿವು ನನಗಾದದ್ದು, ಅವರು ಊಟಕ್ಕೆ ಕುಳಿತಾಗ. ಒಬ್ಬ ಅರೆ ಹುಚ್ಚ ತಾನು ಕೂಡ ಅವರ ಜತೆ ಊಟಕ್ಕೆ ಕೂರುತ್ತೇನೆ ಎಂದು ಹಠ ಹಿಡಿದಿದ್ದ. ಸಂಘಟಕರು ಅವನನ್ನು ಒದ್ದು ಹೊರ ಹಾಕಲು ಸಿದ್ಧರಾಗಿದ್ದರು ಆದರೆ ಭಟ್ರು ಅವನನ್ನು ತನ್ನ ಜೊತೆ ಕುಳ್ಳಿರಿಸಿ ಸಹಭೋಜನ ಮಾಡಿದರು.
ಮಧ್ಯಾಹ್ನದ ಸುಗ್ರಾಸ ಭೋಜನದ ಬಳಿಕದ ಅವಧಿಯನ್ನು ಪ್ರಖ್ಯಾತ ಸುದ್ದಿ ಚಿತ್ರ ಬರಹಗಾರ್ತಿ ಸುಶೀಲಾ ನಾಯರ್ ತೆಗೆದುಕೊಂಡರು. ಅವರು ವಿಶೇಷ ವಿಷಯಗಳನ್ನೇನೂ ಹೇಳಲಿಲ್ಲ. ಬಹುಶ: ಒಂಚೂರಾದರೂ ಸಪ್ಪೆ ಎನಿಸಿಕೊಂಡ ಅವಧಿ ಇವರದ್ದೇ ಇರಬೇಕು. ಪ್ರತಿ ಅವಧಿಯಲ್ಲಿ ಮುಗಿ ಬಿದ್ದು ಪ್ರಶ್ನೆ ಕೇಳುತ್ತಿದ್ದವರು ಆಗ ನಿದ್ದೆಗೆ ಶರಣಾಗಿದ್ದರು!
ಅನಂತರದ ಅವಧಿ ಬಿಸಿಬಿಸಿ ಸುದ್ದಿಗೆ ಹೆಸರಾದ ಕನ್ನಡದ ಮೊದಲ 24*7 ಸುದ್ದಿ ಚಾನೆಲ್ ಟಿವಿ 9ನ ಕಾರ್ಯಕ್ರಮ ನಿರ್ಮಾಪಕ ರಾಘವೇಂದ್ರರಿಂದ. ಅವರು ಮಾತನಾಡಿದ್ದು ಕ್ರೈಮ್ ರಿಪೋರ್ಟಿಂಗ್ ಬಗೆಗೆ.
ಅವರು ಆರಂಭ ಮಾಡಿದ್ದೆ 'ವರದಿ' ಯೆಂಬುದು ನಿರಾಭರಣ ಸುಂದರಿ ಎಂಬುದರ ಮೂಲಕ. ಅಂದರೆ ಭಟ್ರು ಹೇಳಿದ ಮಾತಿಗೆ ಸರಿ ಉಲ್ಟಾ! ಆದರೆ ಅವರ ಚಾನೆಲ್ ಇದನ್ನು ಎಷ್ಟು ಪಾಲಿಸುತ್ತದೆ ಎಂದು ಕೇಳಿದರೆ ಖಂಡಿತವಾಗಿಯೂ ಅವರಲ್ಲಿ ಉತ್ತರವಿರಲಿಕ್ಕಿಲ್ಲ. ಬಹುಶ: ಭಟ್ರ ಮಾತನ್ನು ಪಾಲಿಸಿದ್ದೆ ಆದರೆ ಮಾಧ್ಯಮಗಳು ಯಾವ ರೀತಿ ಆಗಬಹುದು ಎಂಬುದಕ್ಕೇ ಈ ಚಾನೆಲ್ ನಷ್ಟು ಒಳ್ಳೆಯ ನಿದರ್ಶನ ಬೇರೆ ಎಲ್ಲೂ ಸಿಗಲಿಕ್ಕಿಲ್ಲ!
'ಒಬ್ಬ ಕ್ರೈಂ ರಿಪೋರ್ಟರ್ ಮನುಷ್ಯನನ್ನು ಸರಿಯಾಗಿ ಅರ್ಥ ಮಾಡಿಕೊಂಡಿರಬೇಕು, ಸುದ್ದಿಯ ಮೂಲ ಮತ್ತು ಅದರಾಚೆಯೂ ಹುಡುಕುವ ಛಾತಿ ಇರಬೇಕು. ಆದರೆ ಯಾವ ಕಾರಣಕ್ಕೂ ಇನ್ನೊಬ್ಬರ ತೆಜೋವಧೆ ಮಾಡಬಾರದು' ಎಂಬ 'ವಾರಾಂಟ್' ಅವರಿಂದ. ಸಹಜವಾಗಿಯೇ ಅವರಿಗೆ ಪ್ರಶ್ನೆಗಳ ಸುರಿಮಳೆ, ಅಷ್ಟೇ ಚಾಣಕ್ಷತನದ ಉತ್ತರ ಅವರಿಂದ.
ನಂತರ ಮನರಂಜನಾ ಕಾರ್ಯಕ್ರಮ.

ಜೋಗಿ ಜೋಳಿಗೆಯಿಂದ...

ಎರಡನೇ ದಿನ ಅರ್ಥಾತ್ ಕೊನೆಯ ದಿನದ ಮೊದಲ ಅವಧಿಯನ್ನು ಕನ್ನಡದ ಖ್ಯಾತ ಬರಹಗಾರ, 'ಜೋಗಿ'ಯೆಂದೆ ಪ್ರಸಿದ್ದರಾಗಿರುವ ಗಿರೀಶ್ ರಾವ್ ತೆಗೆದುಕೊಂಡರು.
ಪತ್ರಕರ್ತರು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶುರುವಿಟ್ಟುಕೊಂಡ ಅವರು ಅನಂತರ ಅಂಕಣ ಅಂದರೆ ಹೇಗಿರಬೇಕು ಎಂಬುದರ ಬಗೆಗೆಯೇ ತಮ್ಮ ಗಮನ ಹರಿಸಿದರು.
ಬರೆಯುತ್ತ ಬರೆಯುತ್ತ ಬರಹ ಮತ್ತು ಬರಹಗಾರ ಪಕ್ವವಾಗುತ್ತಾನೆ ಎಂಬುದು ಅವರ ಅನಿಸಿಕೆ.
ಅವರು ಮಾತನಾಡುತ್ತ 'ಸತ್ಯ’ ಬದಲಾಗುತ್ತದೆ ಎಂದು ಹೇಳಿದರು. ಅದು ಹೇಗೆ ಸಾಧ್ಯ ಎಂಬುದು ನನ್ನ ಪ್ರಶ್ನೆ. ಒಂದೋ ಬರಹಗಾರನ ಮನೋಭಾವ, ದೃಷ್ಟಿಕೋನ ಬದಲಾಗಬಹುದು ಅಥವಾ ಅವನು ವಿಷಯವನ್ನು ಗ್ರಹಿಸಿಕೊಂಡ ರೀತಿ ಅಥವಾ ಗ್ರಹಿಸುವ ರೀತಿ ಬದಲಾಗಬಹುದೇ ಹೊರತು 'ಸತ್ಯ' ಹೇಗೆ ಬದಲಾಗುತ್ತದೆ? ಹಾಗೆ ಬದಲಾಗುವುದಿದ್ದರೇ ಅದನ್ನು 'ಸತ್ಯ' ಎಂದು ಕರೆಯುತ್ತೇವೇಯೇ?

ಭಡ್ತಿ ಹೇಳಿದ್ದು...

ಅನಂತರದ ಅವಧಿ 'ವಿಜಯ ಕರ್ನಾಟಕ' ಪತ್ರಿಕೆಯ ಹಿರಿಯ ಉಪಸಂಪಾದಕ ಮತ್ತು ತಮ್ಮ 'ನೀರು ನೆರಳು' ಅಂಕಣದಿಂದ ಪ್ರಖ್ಯಾತರಾಗಿರುವ ರಾಧಕೃಷ್ಣ ಭಡ್ತಿ ಅವರಿಂದ 'ಪುಟ ವಿನ್ಯಾಸ'ದ ಬಗ್ಗೆ. ಅವರು 'ಪವರ್ ಪಾಯಿಂಟ್'ನ ಬಳಕೆಯನ್ನು ಅತ್ಯುತ್ತಮವಾಗಿ ಮಾಡಿದರು. ಅವರು ಅಡುಗೆ ಭಟ್ಟನ ಕೆಲಸ ಮತ್ತು ಒಬ್ಬ ಉಪಸಂಪಾದಕನ ಕೆಲಸಕ್ಕಿರುವ ಸಾಮ್ಯತೆಯ ಮೂಲಕವೇ ಉದಾಹರಣೆಗಳನ್ನು ಪೋಣಿಸುತ್ತ ಸಾಗಿದರು. ಒಂದು ಪುಟದಲ್ಲಿರುವ ಬೇರೆ ಬೇರೆ ಭಾಗಗಳು ಮತ್ತು ಅಂಶಗಳ ಬಗ್ಗೆ ಅವರು ಮಾಹಿತಿ ನೀಡಿದರು.
ಬ್ಲಬ್ð, ಬಾಕ್ಸ್, ಇಂಟ್ರೋ, ಬುಲೆಟ್ ಪಾಯಿಂಟ್ ಗಳ ಬಳಕೆಯ ಅಗತ್ಯತೆಯ ಬಗ್ಗೆ ಒತ್ತಿ ಹೇಳಿದ ಅವರು ಇವುಗಳ ಬಳಕೆ ಇಲ್ಲದಿದ್ದಲ್ಲಿ ಸುದ್ದಿ ಮತ್ತು ಪುಟ ಹೇಗೆ ನೀರಸವಾಗುತ್ತದೆ ಎಂಬುದನ್ನು ತೋರಿಸಿಕೊಟ್ಟರು.
ಅವರು ಒಳ್ಳೆಯ ಪುಟ ವಿನ್ಯಾಸಕ್ಕೆ ವಿಜಯ ಕರ್ನಾಟಕವನ್ನೇ ಉದಾಹರಣೆಯಾಗಿಸಿಕೊಂಡು ಕೆಟ್ಟ ಪುಟ ವಿನ್ಯಾಸಕ್ಕೇ ಕನ್ನಡದ ಮತ್ತೊಂದು ಜನಪ್ರಿಯ ಪತ್ರಿಕೆಯನ್ನು ಹೆಚ್ಚಾಗಿ ಬಳಸಿದ್ದು ಮುಂದಿನ ಅವಧಿ ತೆಗೆದು ಕೊಳ್ಳಲಿದ್ದವರ ಕಣ್ಣು ಕೆಂಪಾಗುವಂತೆ ಮಾಡಿತ್ತು. ಅದರೊಂದಿಗೆ ದಕ್ಷಿಣ ಕನ್ನಡದ ಜನ 'ಉದಯವಾಣಿ'ಯನ್ನು ಅದರಲ್ಲಿರುವ ಸತ್ತವರ ಜಾಹೀರಾತು ನೋಡಲು ಮತ್ತು ಬೆಂಗಳೂರು ನಗರದ ಜನ 'ಪ್ರಜಾವಾಣಿ' ಪತ್ರಿಕೆಯನ್ನು ಬಿಡಿಎ ಜಾಹೀರಾತಿಗಾಗಿ ನೋಡುತ್ತಾರೆ ಎಂದದ್ದು ನನಗಂತೂ ಒಂಚೂರು ಕಸಿವಿಸಿಯುಂಟು ಮಾಡಿತು. ನಿಮಗೇ ಭಡ್ತಿ ಹೇಳಿದ ಈ ಮಾತು ಸತ್ಯ ಎಂದೆನಿಸುತ್ತಾ?

'ನಾಲ್ಕಾನೆ ಆಯಾಮ' ನೀಡಿದ ಪದ್ಮರಾಜ ದಂಡಾವತಿ

ಪ್ರಜಾವಾಣಿಯ ಸುದ್ದಿ ಸಂಪಾದಕ ಪದ್ಮರಾಜ ದಂಡಾವತಿ ಮಾತನಾಡಿದ್ದು ಪ್ರಸ್ತುತ ಪತ್ರಿಕೋದ್ಯಮದ ಬಗ್ಗೆ. ಆರಂಭದಲ್ಲೇ ತಮ್ಮ ಖಡಕ್ ಮಾತಿನಿಂದ ಉಸಿರು ಬಿಗೆ ಹಿಡಿದು ಅವರ ಮಾತಿಗೆ ಕಿವಿಯಾಗುವಂತೆ ಮಾಡಿದ ಅವರು ಅನಂತರ ತಮ್ಮ ಮಾತಿಗೆ ಕೇಳುಗರು ತನ್ಮಯರಾಗುವಂತೆ ಮಾಡಿದರು.
ಅವರು 'ಕನ್ನಡ ಪತ್ರಿಕೋದ್ಯಮದ ಪಿತಾಮಹ' ಡಿ. ವಿ. ಗುಂಡಪ್ಪರ 'ವೃತ್ತ ಪತ್ರಿಕೆ'ಯನ್ನು ಎಷ್ಟು ಮಂದಿ ಓದಿದ್ದೀರಿ? ಎಂದು ಕೇಳಿದಾಗ ಒಂದೇ ಒಂದು ಕೈ ಮೇಲೆಳಲಿಲ್ಲ.
"ಇಂದಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಲ್ಲಿ ಶ್ರಧ್ಧೆಯ ಕೊರತೆಯಿದೆ. ಕುವೆಂಪು, ಶಿವರಾಮ ಕಾರಂತ, ಮಾಸ್ತಿ, ಲಂಕೇಶ್ ಮುಂತಾದವರನ್ನು ಓದಿಲ್ಲ, ಓದುತ್ತಿಲ್ಲ. ಹೀಗಾದ್ದಲ್ಲಿ ಭಾಷೆಯ ಬೆಳವಣಿಗೆ ಸಾಧ್ಯವಿಲ್ಲ" ಎಂದು ತಿಳಿಸಿದರು.
ಡಿವಿಜಿಯವರ ’ಪತ್ರಿಕೆಗಳು ಕಲಿಸಬೇಕಾದದ್ದು ಸಿದ್ದಾಂತವನ್ನಲ್ಲ, ಸಿದ್ದಾಂತ ಮಾಡುವ ಪ್ರಕ್ರಿಯೆಯನ್ನು’ ಎಂಬ ಮಾತನ್ನು ಉದ್ದರಿಸಿ ಇಂದಿನ ಪತ್ರಿಕೋದ್ಯಮದ ವಿಶ್ಲೇಷಣೆಗೆ ಇಳಿದರು.
ಇಂದು ಪತ್ರಿಕೋದ್ಯಮ ವಿಭಾಗಗಳು ಮತ್ತು ಪತ್ರಿಕಾ ಕಚೇರಿಗಳ ನಡುವಿನ ಸಂಬಂಧ ಇಂಟನ್ðಶಿಪ್ ಗೆ ಮಾತ್ರ ಸೀಮಿತವಾಗುತ್ತಿರುವುದಕ್ಕೆ ಅವರು ಖೇದ ವ್ಯಕ್ತಪಡಿಸಿದರು.
ವಾಚಕರ ವಾಣಿಯ ವೇದಿಕೆಯನ್ನು ಯುವ ಬರಹಗಾರರು ಬಳಸಿಕೊಳ್ಳಬೇಕು, ಪರ್ತಕರ್ತರಲ್ಲಿ ವಿನಯವಿರಲೇಬೇಕು ಎಂದರು.
ಮಾಧ್ಯಮಗಳ ಬ್ರೇಕಿಂಗ್ ದಿ ಸೊಸೈಟಿ ಟ್ರೆಂಡ್ ಹೋಗಿ ಬ್ರೀಡ್ಜೀಂಗ್ ದ ಸೊಸೈಟಿ ಆಗಲಿ ಎಂದು ಆಶಿಸಿದರು.
ಪತ್ರಿಕೆಗಳನ್ನು ಪ್ರತಿಕ್ರಿಯಾತ್ಮಕ ಮನೋಭಾವ ಬೆಳೆಸಿಕೊಳ್ಳಲು ಓದಬೇಕು, ಸಾಹಿತ್ಯವನ್ನು ಮಾನವೀಯ ಮುಖ ನೀಡಲು ಓದಬೇಕು ಎಂಬುದು ಅವರ ಸಲಹೆ.
ನಂತರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಉಪನ್ಯಾಸಕ ಕೆ. ಜಿ. ಜೋಸೆಫ್, "ಪದವಿಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಬರೆಯುತ್ತಾರೆ ಆದರೆ ಸ್ನಾತಕೋತ್ತರ ಪದವಿಗೆ ಬಂದಾಗ ಬರವಣಿಗೆ ಕಡಿಮೆಯಾಗುತ್ತದೆ. ಇದಕ್ಕೆ ಮನಸ್ಸು ಕಲ್ಮಷವಾಗುವುದೇ ಕಾರಣ" ಎಂದರು. ಇದರೊಂದಿಗೆ ನನಗನಿಸುವ ಮಟ್ಟಿಗೆ ಸ್ನಾತಕೋತ್ತರ ಪದವಿಯ ಪತ್ರಿಕೋದ್ಯಮ ಸಿಲೆಬಸ್ ಗಳು ವಿಧ್ಯಾರ್ಥಿಯನ್ನು ಒಬ್ಬ ಪತ್ರಕರ್ತನನ್ನಾಗಿ ಮಾಡೋದಕ್ಕಿಂತ ಲೆಕ್ಚರರ್ ಮಾಡೋದು ಹೇಗೆ ಎಂಬುದರ ಸುತ್ತಲೇ ಸುತ್ತುತ್ತಿರುವುದು ಕೂಡ ಒಂದು ಮುಖ್ಯ ಕಾರಣ ಎಂದು ನನಗನಿಸುತ್ತದೆ.
ಸುಮಾರು 16 ಕಾಲೇಜುಗಳಿಂದ 300ಕ್ಕೂ ಮಿಕ್ಕ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಬಹುಶ: ಕಾರ್ಯಾಗಾರದ ಮಟ್ಟಿಗೆ ಇದು ಮೂರು ಪಟ್ಟು ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದರು ಎಂದು ನನಗನಿಸುತ್ತದೆ. ಅದ್ದರಿಂದ ಇದು ಸ್ವಲ್ಪ ಮಟ್ಟಿಗೆ ಜಾತ್ರೆ ರೀತಿ ಆಯಿತು ಎಂದು ನನಗನಿಸಿತ್ತು.
ಅದರೊಂದಿಗೆ ಕಾರ್ಯಗಾರದ ಶೀರ್ಷಿಕೆಗೆ ಪೂರಕವಾದ ಅವಧಿಯೇ ಇರಲಿಲ್ಲ!
ಪತ್ರಕರ್ತರು, ರಾಜಕಾರಣಿಗಳನ್ನು ಮೀರಿಸುವಂತೆ ಪರಸ್ಪರರ ಕಾಲೆಲೆದರು, ಕೆಸರೆರಚಿಕೊಂಡರು. ’ಹೇಳುವುದು ಶಾಸ್ತ್ರ ತಿನ್ನುವುದು ಬದನೆಕಾಯಿ’ ಎಂಬ ಗಾದೆಮಾತನ್ನು ಸತ್ಯ ಮಾಡಿದರು!
ಉಳಿದಂತೆ ಎಲ್ಲ ವ್ಯವಸ್ಥೆಗಳು ಅಚ್ಚುಕಟ್ಟಾಗಿತ್ತು. ಸಮಯಪಾಲನೆಗೆ ಹೆಚ್ಚಿನ ಮಹತ್ವ ನೀಡಲಾಗಿತ್ತು.
ಮರುದಿನ ಮೈಸೂರು ದರ್ಶನ. ರಾತ್ರಿ 11ಕ್ಕೆ ಮರಳಿ ಗೂಡಿಗೆ...
ಒಂದಷ್ಟು ನೆನಪು ಮತ್ತು ಪಾಠದೊಂದಿಗೆ!

Friday, September 18, 2009

ಬಾಲ್ಯದ ನೆನಪುಗಳವು!

ನೆನಪಿನ ರಾಶಿಯನ್ನು ಕೆದಕಿದಾಗ ದೊಡ್ಡ ಪೆಟ್ಟಿಗೆಯಲ್ಲಿ ಕಟ್ಟಿಟ್ಟ ಪೊಗದಸ್ತಾದ ನೆನಪೊಂದು ಸಿಕ್ಕಿತ್ತು. ಬಿಚ್ಚಿ ನೋಡುತ್ತೇನೆ... ಇಂದಿಗೂ ಘಮಘಮಿಸುವ ಬಾಲ್ಯದ ನೆನಪುಗಳವು! ಅದರಲ್ಲೂ ಚಿಕ್ಕ ರಜೆ ಸಿಗಲೆಂದು ಕಾತರಿಸಿ ಸಿಕ್ಕಾಗ ಕುಣಿದು ಕುಪ್ಪಳಿಸಿ ಸಿಕ್ಕ ನಂತರ ಪ್ರತಿಕ್ಷಣವನ್ನು ಅಸ್ವಾದಿಸಿದ ಸುಮಧುರ ನೆನಪದು.
ಆಡೋದು, ಓಡೋದು, ನೆಂಟರ ಮನೆಗೆ ಹೋಗೋದು, ಚಿಕ್ಕ ತೊರೆಯಲ್ಲಿ ಮೀನು ಹಿಡಿಯೋದು ಇವೆಲ್ಲ ಪ್ರತಿ ರಜೆಯ ಸಹಜ ದಿನಚರಿ. ಅಂದು ಚಿಕ್ಕ ಚಿಕ್ಕ ಸಂತೋಷಗಳನ್ನು ಬೃಹತ್ತಾಗಿ ಕಂಡು ಅನುಭವಿಸುವ ಮುಗ್ದ ಮನಸ್ಸಿತ್ತು. ಆ ಮನಸ್ಸಿಗೋ ತನಗನಿಸಿದ ಕೀಟಲೆ ಮಾಡುವ ಸ್ವಾತಂತ್ರ್ಯವಿತ್ತು. ಆ ಸ್ವಾತಂತ್ರ್ಯ ಸ್ವೇಚ್ಚೆಯಾದಗ ನಿಯಂತ್ರಿಸಲು ಅಪ್ಪನ ಗದರಿಕೆ, ಬೆತ್ತ ಅಥವಾ ಅಮ್ಮನ ಬುದ್ದಿಮಾತಿನ ಕಡಿವಾಣವಿತ್ತು. ನೋವಾದಾಗ ಆಳುವ ಅವಕಾಶವಿತ್ತು. ಖುಷಿಯಾದಾಗ ನಮ್ಮ ಅಭಿವ್ಯಕ್ತಿಯನ್ನು ಕಂಡೇ ಸಂತೋಷಪಡುವ ಬಂಧುಬಳಗವಿತ್ತು. ಆಡಿದ, ಆಡುವ ಪ್ರತಿ ಮಾತಲ್ಲೂ ಮುಗ್ದತೆಯನ್ನು ಕಂಡು ಅದಕ್ಯಾವುದೇ ಅರ್ಥ ಆರೋಪಿಸದೆ ಅದರ ಸ್ನಿಗ್ದ ಸೌಂದರ್ಯವನ್ನು ಅನುಭವಿಸುವ ನೆಂಟರಿಷ್ಟರಿದ್ದರು. ನಮ್ಮ ಬಗ್ಗೆ ನಮಗಿಂತ ಹೆಚ್ಚು ಕಾಳಜಿ ವಹಿಸುವ ಮನೆಯವರಿದ್ದರು.
ಅವರೇ ಈಗಲೂ ಇದ್ದಾರೆ. ರಜೆಯೀಗಲೂ ಬರುತ್ತದೆ. ಆದರೆ ಅವರಿಗೂ ನಮಗೂ ಪ್ರಬುದ್ಧತೆ ಎಂಬ ಬೇಡಿ ಹಾಕಲಾಗಿದೆ. ಇವತ್ತೇನಿದ್ದರೂ ಆಟವೆಂದರೆ, ಕ್ರಿಕೆಟ್, ಕಬಡ್ಡಿ, ವಾಲಿಬಾಲ್ ಗಳೆಂಬ ಆಟಗಳನ್ನೇ ಆಡಬೇಕಾಗಿದೆ. ಮನಸ್ಸಿಗನಿಸಿದ ಕೀಟಲೆ ಮಾಡ ಹತ್ತಿದರೆ ಸಾರ್ವಜನಿಕರಿಂದ ಧರ್ಮದೇಟು ತಿನ್ನಬೇಕು!. ಅದರೊಂದಿಗೆ ಅನಾಮತ್ತಾಗಿ ಹುಚ್ಚನ ಸ್ಥಾನ ಸಿಗುತ್ತದೆ. ಬೇಸರವೆನಿಸಿ ಅತ್ತರೆ ಧಮಿಲ್ಲದವನೆಂಬ ಪಟ್ಟ ಕಾದಿರುತ್ತದೆ. ಖುಷಿಯಾದರೆ ನಗಬೇಕು ಅಥವಾ ಪಾರ್ಟಿ ಕೊಡಬೇಕು. ಅದು ಬಿಟ್ಟು ಬೇರೇನೋ ಮಾಡ ಹತ್ತಿದರೆ ಅದಕ್ಕೆ ನೂರಾರು ಅರ್ಥ. ಆಡುವ ಪ್ರತಿ ಮಾತು ಕೂಡ ಜಾಗರೂಕವಾಗಿರಬೇಕು. ಇಲ್ಲದೇ ಹೋದಲ್ಲಿ ಆಡಿದವನ ಯೋಚನೆಗೆ ನಿಲುಕದ ಭಾವಗಳು ಮಾತಿನ ಹಿಂದೆ ಇದೆ ಎಂಬ ಗುಮಾನಿ. ನಮ್ಮ ಬಗ್ಗೆ ಯಾರಾದರೂ ಹೆಚ್ಚಿನ ಕಾಳಜಿ ವಹಿಸಿದರೆ 'ಏನೋ ಇದೆ' ಎಂಬ ಶಂಕೆ ಅದರಲ್ಲೂ ಅವರು ನಮ್ಮ ವಿರುಧ್ಧ ಲಿಂಗಿಯಾಗಿದ್ದಾರೆ ಕತೆ ಮುಗಿಯಿತು. ನೋಡು ನೋಡುತ್ತಲೇ ಅದೇಷ್ಟು ಬದಲಾವಣೆ!
ಬಾಲ್ಯ, ಈ ಯವ್ವನ ಎರಡು ಬೇರೆ ಬೇರೆ ತುಂಡುಗಳು ಎಂದು ಅನಿಸುತ್ತಿಲ್ಲವೇ?

Friday, September 11, 2009

ಗುರು

ಅಂದು ಗುರು ಸಾಕ್ಷತ್ ಪರಬ್ರಹ್ಮ ಸ್ವರೂಪ. ಇದ್ದದ್ದು, ಇ(ಬ)ರುತ್ತಿದ್ದದ್ದು ಪೂಜ್ಯ ಭಾವನೆಯೊಂದೇ. ಅವರು ಏನು ಹೇಳಿದರು, ಮಾಡಿದರು ಅದರಲ್ಲಿ ಜಿನುಗುತ್ತಿದ್ದದ್ದು ಸದಾಶಯ. ಆ ಗುರುವಿನ ಶಿಷ್ಯನಾಗುವುದು ಅಷ್ಟು ಸುಲಭವಾಗಿರಲಿಲ್ಲ. ಸಾಕಷ್ಟು ಸತ್ವ ಪರೀಕ್ಷೆಗಳಿಗೆ ಈಡಾಗಬೇಕಿತ್ತು, ಅದರಲ್ಲಿ ಯಶ ಪಡೆಯಬೇಕಿತ್ತು. ಅಷ್ಟರಲ್ಲೇ ವಿದ್ಯಾಕಾಂಕ್ಷಿ ಹಣ್ಣುಗಾಯಿ ನೀರುಗಾಯಿಯಾಗುತ್ತಿದ್ದ. ಮತ್ತೂ ಗುರುಮುಖೇನ ಕಲಿಯುವ ತುಡಿತ ಉಳಿದಿದ್ದೇ ಆದರೆ ಅನಂತರ 'ಮಾಗುವ' ಪ್ರಕ್ರಿಯೆ ಶುರು.
ಕಲಿಕೆ ಅಂದರೆ ಅದೊಂದು ತಪಸ್ಸು. ಕಲಿಯುವಿಕೆಯ ಹಂತಗಳಲ್ಲಿ ಗುರು ಶಿಷ್ಯರು ಪರಸ್ಪರ ವಶ ಮತ್ತು ವಿವಶ. ಗುರು ಕೊಡುವ ಶಿಕ್ಷೆ ಅಂದರೆ ಆದು ಆಶಿರ್ವಾದ ಸ್ವರೂಪ. ಅದರಲ್ಲೂ ಕಲಿಯುವಿಕೆಯ ಆನಂದ. ಗುರುವಿನ ಶಿಕ್ಷೆ ಆತನ ಮನಸ್ಸಿನ ಅಸಹನೆ, ದ್ವೇಷ, ಅಹಂ ಅಥವಾ ಹೆಂಡತಿ ಜೊತೆ ಜಗಳವಾಡಿದ ಕಾರಣದಿಂದ ಬರುತ್ತಿದ್ದಲ್ಲ. ಅದು ಸಹಜ, ಅನಿವಾರ್ಯ ಮತ್ತು ಶಿಷ್ಯನಲ್ಲಿ ಕಲಿಯುವಿಕೆಯ ಹಪಾಹಪಿ ಹುಟ್ಟಿಸುವಂತದ್ದು ಮತ್ತು ಆ ಕಲಿಕೆಗೆ ಸಮಗ್ರತೆಗೆ ತುಂಬುತ್ತಿತ್ತು. ಇದು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲ, ಬದಲು ಗುರು ಪರಂಪರೆ. ಗುರುಕುಲವೇ ಅಂದಿನ ಜ್ಞಾನದೇಗುಲ.
ಅನಂತರ
ಗುರು ಪರಂಪರೆಯನ್ನು ಆವರಿಸಿಕೊಂಡದ್ದು ಶಿಕ್ಷಣ ವ್ಯವಸ್ಥೆ. ಇದು ಮೊಳಕೆಯೊಡೆದದ್ದು 1835ರಲ್ಲಿ. ಈ ವ್ಯವಸ್ಥೆಯ ಓಘ 1990ರ ತನಕ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿತ್ತು. ಇದೇ ಸಂದರ್ಭ ಭಾರತದ ಸ್ವಾತಂತ್ರ್ಯ ಹೋರಾಟ, ಅದರಲ್ಲಿನ ಗೆಲುವು ಮತ್ತು ಎಲ್ಲಾ ರೀತಿಯ ಐರೋಪ್ಯ ಮತ್ತು ಪೌರತ್ಯ ಪ್ರಣೀತ ಚಿಂತನೆಗಳು ಮತ್ತು ಸಾಧನಗಳು ನಮ್ಮ ನೆಲವನ್ನು ಪ್ರವೇಶಿಸಿದ್ದು. ಮತ್ತು ನಾವು ಕೂಡ ಆ ಸಂಗತಿಗಳಲ್ಲಿ ಸಾಧನೆ ಮಾಡಿದ್ದು. ಇದಕ್ಕೆಲ್ಲ ಕಲಶವಿಟ್ಟಂತೆ ಪ್ರಜಾಪ್ರಭುತ್ವವನ್ನು ನಮ್ಮ ಆಡಳಿತ ವಿಧಾನವಾಗಿ ಸ್ವೀಕರಿಸಿದ್ದು. ಈ ವ್ಯವಸ್ಥೆಯ ಸಮರ್ಪಕತೆಯ ಬಗ್ಗೆ ಪ್ರಶ್ನೆಗಳಿದ್ದರೂ ವಿದ್ಯೆಯನ್ನು ಸಾರ್ವತ್ರಿಕ ಮಾಡಿತು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಉಳಿದಂತೆ ಇದರ ಒಳಿತು ಕೆಡುಕುಗಳು ಮತ್ತು ಈ ವ್ಯವಸ್ಥೆ ಹುಟ್ಟಿಕೊಳ್ಳಲು ಕಾರಣವಾದ ಸಂಗತಿಗಳು ಒತ್ತಟ್ಟಿಗಿರಲಿ. ಇಲ್ಲಿ 'ಗುರು' 'ಶಿಕ್ಷಕ'ನಾದ. ಆದರೆ ಆಶಯ ಬದಲಾಗಲಿಲ್ಲ, ಬರಡಾಗಲಿಲ್ಲ. ಕಾರಣವಿಷ್ಟೇ ಈ ವ್ಯವಸ್ಥೆ ಹೀರಿಕೊಂಡದ್ದು ಆ ಪರಂಪರೆಯಿಂದ!
ಶಿಕ್ಷಕ, ಮೇಷ್ಟ್ರು, ಟೀಚರ್, ಲೆಕ್ಚರರ್ ಅಂದರೆ ತುಂಬು ಗೌರವ ಅ ಗುರುವಿಗೆ ಸಂದಂತೆ ಇವರಿಗೂ ಸಲ್ಲುತ್ತಿತ್ತು. ಇಲ್ಲಿ ಅವರಿಗೆ ದೈವಂಶ ಸಂಭೂತರೆಂಬ ಪಟ್ಟವಿರದಿದ್ದರು ಬೀದಿಯಲ್ಲಿ ಅವರ ತಲೆ ಕಂಡರೆ ಸಾಕು ಹಿರಿಕಿರಿಯರೆನ್ನದೇ ಎಲ್ಲರಿಂದಲೂ ನಮಸ್ತೆಗಳ ಸುರಿಮಳೆ. ಅದೇನೂ ಒತ್ತಾಯಪೂರ್ವಕವಾಗಿ ಬರುತ್ತಿದ್ದದ್ದಲ್ಲ. ಅದು ಸಹಜ ಮತ್ತು ಭಕ್ತಿ ಪೂರ್ವಕ. ನಮ್ಮ ಹಳ್ಳಿಗಳಲ್ಲಿ ಈ ಟೀಚರ್ ಕೈಗೇ ಮಕ್ಕಳನ್ನು ಒಪ್ಪಿಸಿ ಅಂದರೆ ಶಾಲೆಗೆ ಕಳುಹಿಸಿದರೆ ಮನೆಮಂದಿಯಲ್ಲಿ ಅದೇನೋ ಒಂದು ಸಂತೃಪ್ತ ಭಾವ ಮತ್ತೊಂದು ಸುಂದರ ಕನಸು.
ಈ ವ್ಯವಸ್ಥೆಯಲ್ಲಿ ಪ್ರೀತಿಯಿಂದ ತೀಡುವ ವಿಠಲ ಮೇಷ್ಟ್ರು ಇದ್ದರು, ಕೋಲಿನಿಂದ ಬಡಿಯುವ ರುದ್ರಪ್ಪ ಮೇಷ್ಟ್ರು ಇದ್ದರು. ಅವೆಲ್ಲವನ್ನು, ಅವರೆಲ್ಲರನ್ನೂ ಮಕ್ಕಳು ಜೀರ್ಣಿಸಿಕೊಳ್ಳುತ್ತಿದ್ದರು ಅದಕ್ಕಿಂತ ಹೆಚ್ಚಾಗಿ ಹೆತ್ತವರು ಕೂಡ! ಆ ಪೆಟ್ಟಿನ ಭಯದಿಂದ ಕಲಿತು ಮಹನೀಯರಾದವರು ಬಹಳಷ್ಟು ಮಂದಿ. ನಮ್ಮ ನಮ್ಮ ಅಪ್ಪ ಅಮ್ಮಂದಿರೂ ಕೂಡ!
ಈಗ
ಹೊಡೆತಕ್ಕೆ ಬಿದ್ದಿದೆ ಫುಲ್ ಸ್ಟಾಪ್. ಸ್ವತಃ ಸರಕಾರವೇ ಈ ನಿರ್ದೆಶನವಿತ್ತಿದೆ. ಶಿಕ್ಷಣ ವ್ಯವಸ್ಥೆ, ಶಿಕ್ಷಣ ಕ್ಷೇತ್ರವಾಗಿದೆ. ಶಿಕ್ಷಕನದ್ದು ಒಂದು ವೃತ್ತಿ ಅಷ್ಟೆ. ಅದಕ್ಕಿಂತ ಆಚೆ ಅವನು ವಿಸ್ತರಿಸಲಾರ. ವಿಸ್ತರಿಸಿದರೂ ಕತ್ತರಿಸುವ ಕೈಗಳು ಸಮಾಜದಲ್ಲೇ ಇದೆ. ಒಬ್ಬ ವಿಧ್ಯಾರ್ಥಿಯ ಮೇಲಿರುವ ತನ್ನ ಜವಾಬ್ದಾರಿಗಳನ್ನು ಆತ ಸಂಕುಚಿತಗೊಳಿಸಿಕೊಂಡಿದ್ದಾನೆ ಅಥವಾ ಹಾಗೇ ಮಾಡುವಂತೆ ನಿರ್ಬಂಧಿಸಲಾಗುತ್ತಿದೆ. ಈ ಶಿಕ್ಷಕನಿಗೆ ವೃತ್ತಿ ಪರತೆ ತುಂಬುವ ಪ್ರಯತ್ನ ನಡೆಯುತ್ತದೆಯೇ ಹೊರತು ಸಮಗ್ರತೆ ಮತ್ತು ಸಂಸ್ಕಾರವನಲ್ಲ. ಅವನಿಗೆ ಸಿಗದ ಸಂಸ್ಕಾರವನ್ನು ಅವ ಹೇಗೆ ತಾನೇ ತನ್ನ ವಿಧ್ಯಾರ್ಥಿಗಳಿಗೆ ಅಂದರೆ ಮುಂದಿನ ಪೀಳಿಗೆಗೆ ದಾಟಿಸಬಲ್ಲ?
ಈಗ ಮಕ್ಕಳಿಗೆ ಹೊಡೆಯುವಂತಿಲ್ಲ. ನಿಜ, ಯಾವ ರೀತಿಯ ಹೊಡೆತವೂ ಅಕ್ಷಮ್ಯವೇ. ಆದರೆ ಕೆಲ ಮಕ್ಕಳು ಪೆಟ್ಟು ತಿನ್ನದೇ ಸರಿಯಾಗುವುದಿಲ್ಲ. ಕಲ್ಲು ಮೂರ್ತಿಯಾಗುವುದು ಉಳಿ ಪೆಟ್ಟಿನಿಂದಾಗಿಯೇ ಹೊರತು ಪ್ರಾರ್ಥನೆಯಿಂದ ಅಲ್ಲ! ನಾ ಆಗಲೇ ಬರೆದಂತೆ ನಮ್ಮಲ್ಲಿ ಅಥವಾ ನಮ್ಮ ಹಿಂದಿನ ಪೀಳಿಗೆಯ ಬಹಳಷ್ಟು ಮಂದಿ ಮೇಷ್ಟ್ರ ಕೈಯಿಂದ ಪೆಟ್ಟು ತಿಂದೆ ಗಟ್ಟಿಯಾದವರು.
ಈಗ ಶಿಕ್ಷಕನ ಜ್ಞಾನಕ್ಕೂ ಅಷ್ಟೊಂದು ಮಹತ್ವವಿಲ್ಲ. ಅದು ಎಲ್ಲ ಕಡೆಯೂ ಸಿಗುವ ಸಂಗತಿಯಾಗಿ ಬಿಟ್ಟಿದೆ. ಮಕ್ಕಳನ್ನು ಬೇಕಾಬಿಟ್ಟಿ ಪಾಸ್ ಮಾಡಿಸಬೇಕೆಂಬ ಸರಕಾರದ ಹವಣಿಕೆಗೆ ಈ ಮೇಷ್ಟ್ರುಗಳು ಬಲಿಪಶುಗಳು. ಈ ಕ್ಷೇತ್ರದ ಮೇಲೆ ಮತ್ತು ಇಲ್ಲಿ ದುಡಿಯುವವರ ಮೇಲೆ ಇಡಬಹುದಾದ ನಂಬಿಕೆ ಧರಾಶಾಯಿಯಾಗುತ್ತಿದೆ. ಇದು ಜಾಗತಿಕರಣದ ಕೊಡುಗೆ. ಇಲ್ಲಿ ಶಿಕ್ಷಕನ ಮಾದರಿತನಕ್ಕೆ ಕುರುಹು ಆತ ವಿಧ್ಯಾರ್ಥಿಗಳಿಗೆ ತುಂಬಿರುವ ಆದರ್ಶವಲ್ಲ ಬದಲು ಆವರಿಗೆ ಉದ್ಯೋಗ ಲೋಕದಲ್ಲಿ ಐದಂಕಿ ಸಂಬಳ ಗಳಿಸುವ ಆರ್ಹತೆ ಇದೆಯಾ? ಎಂಬುದು. ಈಗ ಗುರುವಿಗೂ ಗುರಿ ಇಲ್ಲ ಇದ್ದರೂ ಆದಕ್ಕೇ ಬೆಲೆ ಇಲ್ಲ!
ನಾಳೆ
ಮಾನವ ಪಾಠ ಮಾಡುವುದು ಅನುಮಾನ. ಯಂತ್ರ ಮಾನವನಿಗೆ ಸಿಗಬಹುದು ಈ ಸ್ಥಾನಮಾನ. ಮಾನವ ಪಾಠ ಮಾಡಿದರೂ ಮಕ್ಕಳು ಮತ್ತು ಮೇಷ್ಟ್ರ ಮಧ್ಯೆ ಭಾವನಾ ಶೂನ್ಯತೆ ಆಥವಾ ನಿರ್ವಾತ ನೆಲೆ ಮಾಡಿರಬಹುದು. ಬಿಳಿ ಚಾಕ್, ಕರಿ ಬೋರ್ಡ್ ನಮ್ಮ ನೆನಪಿನ ಕೋಶ ಸೇರಿರಬಹುದು. ಸಮಾಜದ ದೃಷ್ಟಿಯಲ್ಲಿ ಮೇಷ್ಟ್ರು ಕೆಲಸಕ್ಕೂ ಕಾರಕೂನನ ಕೆಲಸಕ್ಕೂ ಒಂದಿನಿತೂ ವ್ಯತ್ಯಾಸ ಉಳಿದಿರಲಾರದು. ಈ ಮೇಷ್ಟ್ರುಗಳು ಮತ್ತವರು ಕಲಿಸಿದ ಪಾಠ ಎರಡು ವರ್ಷವೂ ವಿಧ್ಯಾರ್ಥಿಗಳ ಮನದಲ್ಲಿ ಬಾಳದೇ ಹೋಗಬಹುದು. ಮಗುವಿನ ಅಗತ್ಯಕ್ಕೂ ಮಿಗಿಲಾದ ಕಂಪ್ಯೂಟರ್ ಬಳಕೆ ಸೇರಿಕೊಳ್ಳಬಹುದು. ಶಿಸ್ತಿನ ಹೆಸರಲ್ಲಿ ಅನೇಕ ಸರ್ಕಸ್ ಗಳು ನಡೆಯಬಹುದು.
ಶಿಕ್ಷಕರ ದಿನಾಚರಣೆ ಮಾತ್ರ ಅದ್ದೂರಿಯಾಗಿ ಜರುಗಬಹುದು!

Saturday, September 5, 2009

ನ್ಯಾನೋಗೆ ಉತ್ತರವಾಗಬಲ್ಲದೇ ರೈನೋ?



ನ್ಯಾನೋ ಕಾರು ಆರ್ಥಿಕವಾಗಿ ಎಷ್ಟು ಮುಖ್ಯವಾಗಿದೆಯೋ ಅಷ್ಟೇ ಮುಖ್ಯವಾಗಿ ಅದು ನಮ್ಮ ಚಿಂತನಕ್ರಮದಲ್ಲೊಂದು ಬದಲಾವಣೆ ತಂದಿದೆ. ಇಂದು ಬಹುತೇಕ ಕಾರು ಉತ್ಪಾದಕರು ಚಿಕ್ಕ ಕಾರು ತಯಾರಿಸುವತ್ತ ಗಮನಹರಿಸುತ್ತಿರುವಾಗಲೇ ಬೆಂಗಳೂರಿನ ಮೆಕ್ಯಾನಿಕಲ್ ಇಂಜಿನಿಯರೊಬ್ಬರು ಅದನ್ನು ಸಾಧಿಸಿ ತೋರಿಸಿದ್ದಾರೆ.
'ರೈನೋ' ಎಂಬ ನಾಮಧೇಯದ ಈ ಕಾರು ನೋಡಲು ರೈನೋಸಾರಸ್ ನಂತೆಯೆ ಇದೆ.ಅಚ್ಚರಿಯೆಂದರೇ ರೈನೋ ಬರೀ 150 ಕೆಜಿ ತೂಗುತ್ತದೆ. ಆದರೆ 30 ರಿಂದ 35 ಕಿ.ಮೀ ಮೈಲೇಜ್ ಕೊಡುತ್ತದೆ. ಗಂಟೆಗೆ 60 ಕಿ.ಮೀ ವೇಗದಲ್ಲಿ ಸರಾಗವಾಗಿ ಚಲಿಸಬಲ್ಲದು.ನಾಲ್ಕು ಫೀಟ್ ಅಗಲ, ನಾಲ್ಕು ಫೀಟ್ ಎತ್ತರ ಮತ್ತು ಎಂಟು ಫೀಟ್ ಉದ್ದವಿರುವ ಈ ಕಾರಲ್ಲಿ ಡ್ರೈವರ್ ಸೇರಿ ಇಬ್ಬರು ಕೂರಬಹುದು. 25 ಕೆ.ಜಿ ಲಗೇಜ್ ಇಟ್ಟುಕೊಳ್ಳಬಹುದು.ಮಡಚಬಹುದಾದ ಸ್ಟೇರಿಂಗ್ ಮತ್ತು ಒಂದೇ ಬಾಗಿಲು ಈ ಕಾರಿನ ವೈಶಿಷ್ಟ್ಯ. ಯಾವುದೇ ಇಂಜಿನ್ ಕೂಡ ಬಳಸಬಹುದು.ಗೇರ್ ವ್ಯವಸ್ಥೆ ಇರುವ ಕಾರು ಇದಾಗಿರುವುದರಿಂದ ಎತ್ತರ ಪ್ರದೇಶಕ್ಕೂ ನಿರಾಯಾಸವಾಗಿ ಚಲಿಸಬಲ್ಲದು ಆದರೆ ಚಕ್ರ ಚಿಕ್ಕದಾಗಿರುವುದರಿಂದ ಗುಂಡಿಗಳಿರುವ ರಸ್ತೆಯಾದ್ರೆ ಸ್ವಲ್ಪ ಕಷ್ಟ, ಆದರೆ
ದೊಡ್ಡ ಚಕ್ರವನ್ನು ಬೇಕಾದರೆ ಆಳವಡಿಸಿಕೊಳ್ಳಬಹುದು ಎಂಬುದು ನಿರ್ಮಾತೃವಿನ ಅಭಿಪ್ರಾಯ.
ಬೆಂಗಳೂರಿನ ಪಾರ್ಕಿಂಗ್ ಸಮಸ್ಯೆಯಿಂದ ಬೇಸತ್ತು ಅದಕ್ಕೆ ಪರಿಹಾರವಾಗಿ ನಾನು ಈ ಕಾರು ತಯಾರಿಸುವ ನಿಟ್ಟಿನಲ್ಲಿ ಯೋಚಿಸಿದೆ ಎನ್ನುತ್ತಾರೆ ಇದರ ರೂವಾರಿ ನರಸಿಂಹರಾಜು. ಇಂಜಿನ್ ಮತ್ತು ಚಕ್ರಗಳನ್ನು ಹೊರತು ಪಡಿಸಿದರೆ ಉಳಿದೆಲ್ಲವನ್ನು ನಾನೇ ವಿನ್ಯಾಸ ಮಾಡಿಕೊಂಡೆ ಎನ್ನುತ್ತಾರವರು. ಅಂಗವಿಕಲರಿಂದ ಈ ಕಾರಿಗೆ ಹೆಚ್ಚಿನ ಬೇಡಿಕೆ ಇದೆ ಆದರೆ ಕ್ಲಚ್ ಮತ್ತು ಬ್ರೇಕ್ ಕಾಲಲ್ಲೇ ಉಪಯೋಗಿಸುವ ರೀತಿಯಲ್ಲಿ ವಿನ್ಯಾಸವಿರುವುದರಿಂದ ಅದರ ಬಳಕೆಗೆ ಕಷ್ಟವಾಗಬಹುದು ಅದ್ದರಿಂದ ಅವನ್ನು ಕೈಯಿಂದ ಬಳಸುವಂತೆ ರೂಪಿಸುವ ದಿಸೆಯಲ್ಲಿ ಅವರು ಗಂಭೀರವಾಗಿ ಚಿಂತಿಸುತ್ತಿದ್ದಾರೆ.ನನ್ನಿಂದ ಇದರ ಬೃಹತ್ ಪ್ರಮಾಣದ ಉತ್ಪಾದನೆ ಸಾಧ್ಯವಿಲ್ಲ, ದೊಡ್ಡ ಕಂಪೆನಿಗಳು ಮುಂದೆ ಬಂದರೆ ನಾನು ಇದರ ತಂತ್ರಜ್ಙಾನ ಕೊಡುತ್ತೇನೆ ಎನ್ನುವ ಇವರು ಹೀಗಾದರೆ ಈ ಕಾರು ರೂ. 80,000ಕ್ಕೆ ಗ್ರಾಹಕರ ಕೈಸೇರಬಹುದು ಎಂದು ಅಭಿಪ್ರಾಯ ಪಡುತ್ತಾರೆ. ಕಿಸೆಗೂ, ರಸ್ತೆಗೂ ಹಗುರವಾಗಿರುವ ಈ ಕಾರು ಅದಷ್ಟೂ ಬೇಗ ನಮ್ಮ ರಸ್ತೆಗಳಲ್ಲಿ ಓಡುವಂತಾದರೆ ಅನೇಕರ ಕಾರು ಕೊಳ್ಳುವ ಕನಸು ನನಸಾಗಬಹುದು. ಹಾಗೆಯೇ ನಗರಗಳ ಪಾರ್ಕಿಂಗ್ ಸಮಸ್ಯೆ ಕೂಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು.
ಇವರ ಪ್ರಯೋಗಶೀಲತೆ ಇಷ್ಟಕ್ಕೆ ಸೀಮಿತವಾಗಿಲ್ಲ. ಗ್ರಾಮೀಣ ಜನತೆಯನ್ನು ಗಮನವಿಟ್ಟುಕೊಂಡು ಸೈಕಲ್ ಗೆ ಶಾಕ್ ಅಬ್ಸರ್ವರ್ ಅಳವಡಿಸುವ ಪ್ರಯತ್ನ ಮಾಡಿ ಅದರಲ್ಲೂ ಯಶ ಕಂಡಿದ್ದಾರೆ. ಇದು ಬೆನ್ನು ನೋವಿನಿಂದ ನರಳುತ್ತಿರುವವರಿಗೆ ಉಪಯುಕ್ತ ಎಂಬುದು ಅವರ ಅನಿಸಿಕೆ. ರಕ್ಷಣಾ ಉದ್ದೇಶಕ್ಕೆ ಬಳಸಬಹುದಾದ ರೊಬೊಟ್ ಕೂಡ ಇವರ ಕೈಯಲ್ಲಿ ರೂಪುಗೊಂಡಿದೆ. ಇದನ್ನು ರಿಮೋಟ್ ಕಂಟ್ರೋಲ್ ಬಳಸಿ ನಿಯಂತ್ರಸಬಹುದಾಗಿದ್ದು ತನ್ನ ಕೈಯಲ್ಲಿ ಮೂರು ಕೆಜಿ ಭಾರ
ಎತ್ತಿ ಅದನ್ನು ಅತ್ತಿತ್ತ ಕೊಂಡೊಯ್ಯಬಲ್ಲದು ಅಲ್ಲದೆ ಅದನ್ನು ನಾಶಮಾಡಬಲ್ಲದು. ಇದು ಬಾಂಬ್ ನಿಷ್ಕ್ರೀಯಗೊಳಿಸಲು ಸಹಕಾರಿ. ತಲೆ ಮೇಲೆ ಗನ್ ಇಟ್ಟುಕೊಳ್ಳುವ ವ್ಯವಸ್ಥೆಯಿದ್ದು ಅದನ್ನು 360 ಡಿಗ್ರಿಯಷ್ಟು ತಿರುಗಿಸಬಹುದಾಗಿದೆ. ಮೇಲೆ ಕೆಳಗೆ ಚಲಿಸುವಂತೆಯೂ ಮಾಡಬಹುದು. ಇದು ಶತ್ರುಗಳ ಮೇಲೆ ಗುಂಡಿನ ದಾಳಿ ನಡೆಸಲು ಉಪಯುಕ್ತ. ಇದು ಚಕ್ರದ ಸಹಾಯದಿಂದ ಚಲಿಸುತ್ತದೆ ಅದುದರಿಂದ ಸಮತಟ್ಟಾದ ಜಾಗಗಳಲ್ಲಿ ಮಾತ್ರ ಇದರ ಬಳಕೆ ಸಾಧ್ಯ. ಅದರೆ ಚಕ್ರದ ಬದಲು ಟ್ರ್ಯಾಕ್ ಬಳಸಿ ಗುಡ್ಡಗಾಡು ಪ್ರದೇಶಗಳಲ್ಲೂ ಇದನ್ನು ಬಳಸುವಂತೆ ಮಾಡಬಹುದಾಗಿದೆ.
ಇದರೊಂದಿಗೆ ರೋಟಿ ಮೇಕರ್ ಎಂಬ ಅಡುಗೆ ಮನೆಯಲ್ಲಿ ಬಳಸುವ ಉಪಕರಣವೊಂದನ್ನು ಅವರು ತಯಾರಿಸಿದ್ದು ಇದರ ಸಹಾಯದಿಂದ ಅರೆ ನಿಮಿಷದಲ್ಲಿ ಎಣ್ಣೆ ರಹಿತ ಚಪಾತಿ ಮಾಡಲು ಸಾಧ್ಯ. ಇನ್ನು ಬೆಂಗಳೂರಿನ ಚರಂಡಿ, ಮೋರಿಗಳಲ್ಲಿ ಹರಿದ ವ್ಯರ್ಥವಾಗುತ್ತಿರುವ ಕೊಳಚೆ ನೀರನ್ನು ಬಳಸಿ ವಿದ್ಯುತ್‌ ತಯಾರಿಸುವ ಹಂಬಲ ಇವರದ್ದು. ಆಸಕ್ತರು ನರಸಿಂಹರಾಜು ಅವರನ್ನು (9845115142) ಸಂಪರ್ಕಿಸಬಹುದು.