Tuesday, February 22, 2011

ವಿದಾಯ ಹೇಳುವ ಮುನ್ನಾ

ಆ ದಾರಿಯಲ್ಲಿ ನಾ
ಏಕಾಂಗಿಯಾದೇನೆ?
ಸಾವಿರಾರು ಹೆಜ್ಜೆಯಿಟ್ಟಿದ್ದ
ದಾರಿಯಲ್ಲಿ ನಾ
ಇಂಗಿಹೋದೇನೆ?
ಆ ನಗು, ನಲಿವುಗಳೆಲ್ಲ
ಅವರ ಪಾದದಡಿಯ ಧೂಳಾಯಿತೇ?
ಕಾದಿದ್ದೆ ನಾ ಆ ದಾರಿಯಲ್ಲಿ
ನನ್ನ ಗೆಳೆಯರಿಗಾಗಿ
ಅವರು, ಅದೇ ದಾರಿಯಲ್ಲಿ ಬಂದೆ ಬರುವರೆಂದು
ಇಂದೂ ಅಲ್ಲೇ ಕಾಯುತ್ತಿರುವೆ
ಅವರಿನ್ನೂ ಬರಲಾರರು ಎಂದು ತಿಳಿದು ಸಹ!

ಯಾರಿಗೋ ವಿಶ್ ಮಾಡಿದ್ದೆ
ಇನ್ಯಾರನ್ನೋ ಪುಶ್ ಮಾಡಿದ್ದೆ
ಅವನ್ಯಾರೋ ನನ್ನನ್ನು ಕಂಡು ಬುಸ್ ಗುಟ್ಟಿದ್ದ
ಕಣ್ಣಂಚಲ್ಲಿ ಅವಳ ಚೆಲುವ ಹೀರಿದ್ದೆ
ನನ್ನ ಕಣ್ಣಮಿಂಚಲ್ಲಿ ಅವಳ ಪುಲಕಗೊಳಿಸಿದ್ದೆ
ಒಂದು ತುಂಟ ನಗು ನಕ್ಕು ಮರೆಯಾಗಿದ್ದೆ
ಇದೆಲ್ಲ ಕ್ಷಣಗಳು ಸೆರೆಯಾಗಿದೆ ನನ್ನ ಮನದಲ್ಲಿ
ಕೂರಲಾರದ ತೆರೆಯಾಗಿದೆ ನನ್ನ ಹೃದಯದಲ್ಲಿ.

ಅಂದು ನನ್ನ ಸುತ್ತಲೇ ಕುಂಯ್ ಗುಟ್ಟುತ್ತಿದ್ದ ನನ್ನ ಜೂನಿಯರ್
ಇಂದು ನಾನೇ ತಲೆ ಬಾಗಿದರು ಡೋಂಟ್ ಕೇರ್
ಇದೆಂತಹ ಪ್ಯಾರ್?
ಆದರೂ ನಾ ಅವನನ್ನು ಕ್ಷಮಿಸಲೇ ಬೇಕು
ಯಾಕೆಂದರೆ ಆ ದಾರಿಯಲ್ಲಿ ನಾನೊಬ್ಬನೆ!

ಅಂದು ಆಡಿದ ಮಾತುಗಳು, ಮಾಡಿದ ಕೀಟಲೆಗಳು
ನಗುವಿನ ಸೆಲೆಗಳು, ಆತ್ಮೀಯತೆಯ ಅಭಿವ್ಯಕ್ತಿಗಳು
ಇವಕ್ಕೆಲ್ಲ ಆ ಕಾರಿಡಾರಿನ ಇಟ್ಟಿಗೆಗಳು ಮೂಕ ಸಾಕ್ಷಿಗಳು
ನೆನೆದಾಗ ಹನಿಯಾಗುತ್ತವೆ ನನ್ನ ಅಕ್ಷಿಗಳು
ಬೆಳಕಿಲ್ಲದಿದ್ದರೂ ನಡೆಯುವೆ ಆ
ದಾರಿಯಲ್ಲಿ ಅನ್ನುವ ಧೈರ್ಯ ನನಗಿತ್ತು
ಏನೇ ಬಂದರೂ ಜಯಿಸುವೆ ಎಂಬ
ಶೌರ್ಯ ಮನದೊಳಗಿತ್ತು

ಈ ಬೆಳಕಲ್ಲೆ, ಅದೇ ಮನಸ್ಸಲ್ಲೆ
ಏನೊಂದು ತಡೆಯಿಲ್ಲದಿದ್ದರೂ
ನಡೆಯಲಾರದೇ ಕುಸಿಯುತ್ತಿದ್ದೇನೆ
ದಾರಿಯ ಮಧ್ಯದಲ್ಲಿ
ರಕ್ಷಣೆಗೆ ಒರ್ವನೂ ನನ್ನವನ್ನಿಲ್ಲ
ವೀಕ್ಷಣೆಗೆ, ಭಕ್ಷಣೆಗೆ ಈ ದಾರಿಯ
ಇಂದಿನ ಪಯಣಿಗರು ನಾಳೆಯ
ಏಕಾಂಗಿಗಳು ಸಿದ್ಧರಾಗಿರುವರು!

ಕೂಗಿ ಹೇಳಬೇಕೆನಿಸುತ್ತದೆ, ಗೆಳೆಯರೇ,
ಇಂದು ನಗಬೇಡಿ, ನಾಳೆ ಇಲ್ಲಿ ನಿಂತು
ನನ್ನ ಹಾಗೆ ನೀವು ಮರುಗಬೇಡಿ ಎಂದು
ಆದರೇನು? ಗಂಟಲಿನಿಂದ ಹೊರಟ ದನಿ
ಅವರಿಗೆ ಕೇಳಿಸುತ್ತಿಲ್ಲ
ಕೇಳಿದರು, ಕೇಳಿಸದಂತಿರುವರೋ ಅದು ಗೊತ್ತಿಲ್ಲ!
ಅಲ್ಲ, ಆ ದನಿ ನನ್ನ ಭ್ರಮೆಯೋ?
ಇಗೋ ಇಂಗಿ ಹೋಗುತ್ತಿದ್ದೇನೆ ಈ ದಾರಿಯಲ್ಲಿ
ಏಕಾಂಗಿಯಾಗಿ...
ನಾನಿಟ್ಟ ಹೆಜ್ಜೆಯಡಿಯಲ್ಲಿ
ಅವರ ಹೆಜ್ಜೆಯ ಸಪ್ಪಳದ ಅಡಿಯಲ್ಲಿ!!!

(ಪದವಿಯ ಕೊನೆಯ ದಿನಗಳಲ್ಲಿ ಬರೆದ ಕವನವಿದು)

No comments: