Thursday, January 12, 2012

"ಸಾಹಿತ್ಯ ಕ್ಷೇತ್ರದಲ್ಲೂ ಜಾತೀಯತೆ ಹೆಚ್ಚಾಗಿದೆ"


ನಾರಾಯಣ ಭಟ್ಟ ಅವರು ನಾ ಮೊಗಸಾಲೆ ಎಂಬ ಹೆಸರಿನಿಂದ ಬರವಣಿಗೆಯ ಕೃಷಿ ಮಾಡಿ ನಾಡಿನಾದ್ಯಂತ ಪ್ರಸಿದ್ಧರಾಗಿದ್ದಾರೆ. ಅವರು ತಮ್ಮ ವೈದ್ಯ ಕಾಯಕ, ಸಾಹಿತ್ಯದ ಕೈಂಕರ್ಯ ಮತ್ತು ಸಾಹಿತ್ಯ ಸಂಘಟನೆಗೆ ಆಯ್ದುಕೊಂಡದ್ದು ಕಾಂತವಾರ ಎಂಬ ಕುಗ್ರಾಮವನ್ನು. ಅವರೊಂದಿಗೆ 'ದಿ ಸಂಡೆ ಇಂಡಿಯನ್' ಪತ್ರಿಕೆಯ ಸಾಕ್ಷಿಪ್ರಜ್ಷೆ ಅಂಕಣಕ್ಕಾಗಿ ನಾನು  ನಡೆಸಿದ ಸಂದರ್ಶನ.

ವೈದ್ಯಕೀಯ ವೃತ್ತಿಯೊಂದಿಗೆ ಸಾಹಿತ್ಯ ಮತ್ತು ಸಂಘಟನೆಗಳ ಒಡನಾಟ ಹೇಗೆ ಹುಟ್ಟಿಕೊಂಡಿತು?
ವೃತ್ತಿಯಲ್ಲಿ ವೈದ್ಯನಾದರೂ ನಾನು ಮೂಲತಃ ಸಾಹಿತಿ. ತಾನು ಹುಟ್ಟಿ ಬೆಳೆದ ಪರಿಸರ ಮತ್ತು ಮನೆಯ ವಾತವರಣ ಸಾಹಿತ್ಯಕ್ಕೆ ಪೂರಕವಾಗಿತ್ತು. ನನ್ನ ಸಂಬಂಧಿಕರೊಬ್ಬರು ನಾಟಿ ವೈದ್ಯರಾಗಿದ್ದರೂ ಕೂಡ ನಾನು ವೈದ್ಯನಾದದ್ದು ಮಾತ್ರ ಕಾಕತಾಳೀಯ. ನಾನು ಇಂಗ್ಲೀಷ್ ಅಧ್ಯಾಪಕನಾಗಬೇಕು ಎಂದು ಬಯಸಿದ್ದೆ. ನಾನು ಕಾಸರಗೋಡಿನ ಕೋಳ್ಯೂರುನ ಮೊಗಸಾಲೆಯಲ್ಲಿ ಶ್ರೀಮಂತ ಮನೆತನದಲ್ಲಿ ಜನಿಸಿದ್ದೆ. ಆದರೆ ನನ್ನ ತಂದೆಯ ಕಾಲಕ್ಕೆ ನಮ್ಮ ಮನೆಯಲ್ಲಿ ಬಡತನ ತಾಂಡವವಾಡುತ್ತಿತ್ತು. ನನ್ನ ಚಿಕ್ಕಪ್ಪ ಯಕ್ಷಗಾನದ ಅರ್ಥಧಾರಿ, ತಂದೆಯ ಅಕ್ಕ (ಸೋದರತ್ತೆ) ಓಲೆಗರಿ ಗ್ರಂಥಗಳನ್ನು ಓದುವ ಪರಿಪಾಠ ಇಟ್ಟುಕೊಂಡಿದ್ದರು. ಅವರದನ್ನ್ನು ಗಮಕದ ರೀತಿಯಲ್ಲಿ ಹೇಳುತ್ತಿದ್ದರು. ಇದು ನನ್ನ ಮೇಲೆ ತುಂಬಾ ಪ್ರಭಾವ ಬೀರಿತು. ನಾನು ಒಡಿಯೂರಿನಲ್ಲಿದ ಸೋದರ ಮಾವನ ಮನೆಯಿಂದ ಕನ್ಯಾನ ಶಾಲೆಗೆ ಹೋಗುತ್ತಿದ್ದೆ. ಅಲ್ಲಿ ಪಂಜಾಜೆ ಶಂಕರ ಭಟ್ಟ ಎಂಬ ಉತ್ತಮ ಮೇಷ್ಟ್ರು ಇದ್ದರು. ಆಗ ಶಿವರಾಮ ಕಾರಂತರು ೧೫೦ ಶಾಲೆಗಳಲ್ಲಿ ಮಕ್ಕಳ ಕೂಟಗಳನ್ನು ನಡೆಸಿದ್ದರು. ಅವರು ಈ ಕಾರ್ಯಕ್ರಮದಿಂದ ಪ್ರೇರಣೆ ಪಡೆದರು. ಇವರ ಜೊತೆಗೆ ಬಿ ಎಂ ಇದಿನಬ್ಬ ಅವರು ಕೂಡ ಮಕ್ಕಳ ಹಾಡುಗಳನ್ನು ಹಾಡುತ್ತಿದ್ದರು. ಇದು ನನ್ನ ಮೇಲೆ ಪ್ರಭಾವ ಬೀರಿತು. ನಾನು ಕೂಡ ಸಾಹಿತಿಯಾಗಬೇಕು ಎಂಬ ಆಸೆ ಮೊಳಕೆಯೊಡೆಯಿತು. ನನ್ನ ಮನೆಯಲ್ಲಿ ಮೊದಲು ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿದ್ದು ನಾನೆ. ನಾನು ಪಿಯುಸಿ ಸೇರಲೆಂದು ಪೂರ್ಣಪ್ರಜ್ಞಾ ಮತ್ತು ಎಮ್‌ಜಿಎಮ್ ಕಾಲೇಜ್‌ಗೆ ಹೋದಾಗ ಅಲ್ಲಿ ಎಲ್ಲ ಸೀಟ್‌ಗಳು ಭರ್ತಿಯಾಗಿದ್ದವು. ಅದ್ದರಿಂದ ಉಡುಪಿಯ ಆಯುರ್ವೇದ ಕಾಲೇಜ್‌ನ್ನು ೧೯೬೧ರಲ್ಲಿ ಸೇರಿಕೊಂಡೆ. ಅಲ್ಲಿ ಡೊನೇಷನ್, ಶುಲ್ಕಗಳಿರಲಿಲ್ಲ. ಪೇಜಾವರಶ್ರೀಗಳೆ ನನಗೆ ಆಶ್ರಯ ನೀಡಿದ್ದರು. ಆಗ ನಾನು ಆಯುವೇದಕ್ಕಿಂತ ಸಾಹಿತ್ಯದ ಆಧ್ಯಯನವನ್ನೇ ಹೆಚ್ಚಾಗಿ ಮಾಡಿದೆ. ಸಣ್ಣಪುಟ್ಟ ಪತ್ರಿಕೆಯಲ್ಲಿ ಬರೆಯುತ್ತಿದ್ದೆ. ೧೯೬೫ರ ಹೊತ್ತಿಗೆ ಉದಯೋನ್ಮುಖ ಬರಹಗಾರನಾಗಿ ಗುರುತಿಸಲ್ಪಟ್ಟೆ. ೧೮ನೇ ವರ್ಷದಲ್ಲಿ ಮಣ್ಣಿನ ಮಕ್ಕಳು ಕಾದಂಬರಿ ಬರೆದೆ. ೨೦ನೇ ವಯಸ್ಸಿನಲ್ಲಿ ಅನಂತ ಕಾದಂಬರಿ ಬರೆದೆ. ಇದರಲ್ಲಿನ ಸಂಭಾಷಣೆಗಳು ಹವ್ಯಕ ಭಾಷೆಯಲ್ಲೇ ಇತ್ತು. ನಂತರ ಡಿ.ಎಸ್..ಸಿ ಡಿಪ್ಲೋಮಾ ಪದವಿ ಮುಗಿಸಿ ಮನೆಗೆ ಬಂದೆ. ಆಗ ಸ್ವಂತದ್ದೊಂದು ಕ್ಲಿನಿಕ್ ತೆರೆಯಲು ಕೂಡ ನನ್ನಲ್ಲಿ ಹಣವಿರಲಿಲ್ಲ. ಆಗ ಕಾಂತವರದಲ್ಲಿ ತಾಲೂಕು ಬೋರ್ಡ್ ಅಸ್ಪತ್ರೆ ತೆರೆಯಲು ಸರ್ಕಾರ ನಿರ್ಧರಿಸಿದೆ ಎಂಬುದು ತಿಳಿಯಿತು. ಹಾಗೆ ಇಲ್ಲಿನ ರೂರಲ್ ಡಿಸ್ಪೆನ್ಸರಿಯಲ್ಲಿ ಅರೆಕಾಲಿಕ ವೈದ್ಯನಾಗಿ ಸೇರಿಕೊಂಡೆ. ಇಲ್ಲಿ ಮೂಲಭೂತ ಸೌಕರ್ಯಗಳಿರಲಿಲ್ಲ. ಆದರೆ ಇಲ್ಲಿನ ಜನರು ನನ್ನನ್ನು ತುಂಬ ಪ್ರೀತಿಸಿದರು. ಅವರದ್ದು ಸಹಜವಾದ ಒಳ್ಳೆಯತನವಾಗಿತ್ತು. ಈ ಊರಿನವರೇ ಆಗಿದ್ದ ಪ್ರೇಮಲತಾರನ್ನು ವಿವಾಹವಾದೆ. ಪ್ರೇಮಲತಾರವರ ತಂದೆ ರಾಮಕೃಷ್ಣಯ್ಯ ನನ್ನ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದರು.

ನೀವು ನಿಮ್ಮನ್ನು ಬರವಣಿಗೆಗಷ್ಟೆ ಸೀಮಿತಗೊಳಿಸದೇ ಸಮಾಜ ಸೇವೆ, ಸಂಘಟನೆ ಮುಂತಾದ ಕೆಲಸಗಳನ್ನು ಮಾಡಿದವರರು. ಇದು ಹೇಗೆ ಸಾಧ್ಯವಾಯಿತು? ಮತ್ತು ಯಾಕಾಗಿ?
ಇಲ್ಲಿ ಯಾವುದೇ ಸಾಹಿತ್ಯ ಚಟುವಟಿಕೆಗಳು ನಡೆಯುತ್ತಿರಲಿಲ್ಲ. ಬೇಲಾಡಿಯ ಶಾಲೆಯಲ್ಲಿ ಸಾಹಿತ್ಯ ಚಟುವಟಿಕೆಗಳು ನಡೆಯುತ್ತಿದ್ದವು. ಇದನ್ನು ಕಂಡು ನಮ್ಮೂರಲ್ಲಿ ಕೂಡ ಇಂತಹ ಚಟುವಟಿಕೆ ನಡೆಯಬೇಕು ಎಂದು ರೈತ ಯುವಕ ಮಂಡಲ ಮಾಡಿದೆವು. ಆದರೆ ಅದರಲ್ಲಿ ಹುಟ್ಟಿಕೊಂಡ ಗೊಂದಲಗಳಿಂದಾಗಿ ನಾನು ಅದರಿಂದ ವಿಮುಖನಾದೆ. ನಂತರ ‘ಕಾಂತವರ ಕನ್ನಡ ಸಂಘ (೧೯೭೬)ವನ್ನು ಸ್ಥಾಪಿಸಿದೆ. ಇದರಿಂದ ನನಗೆ ಸಾಹಿತಿಗಳ ಸಂಪರ್ಕ ಸಾಧ್ಯವಾಯಿತು. ಈ ಮೂಲಕ ಗ್ರಾಮೀಣ ಭಾಗದಲ್ಲಿಯೂ ಸಾಹಿತ್ಯ ಚಟುವಟಿಕೆಗಳು ಪ್ರಾರಂಭವಾಯಿತು. ಇನ್ನು ಮುದ್ದಣ್ಣ ಕಾವ್ಯ ಸ್ಮಾರಕ ಪ್ರಶಸ್ತಿ ಮತ್ತು ಅನಂತರ ವರ್ಧಮಾನ ಪ್ರಶಸ್ತಿ ಪೀಠ (೧೯೭೮))ದ ಮೂಲಕ ವರ್ಧಮಾನ ಸಾಹಿತ್ಯ ಪ್ರಶಸ್ತಿಯನ್ನು ನಾವು ಕಳೆದ ೩೪ ವರ್ಷಗಳಿಂದ ನೀಡುತ್ತಿದ್ದೇವೆ. ವರ್ಧಮಾನ ಪೀಠ ಈಗ ಸ್ವಾಯತ್ತವಾಗಿದೆ. ಇತ್ತೀಚೆಗೆ ‘ಅಲ್ಲಮ ಪೀಠದ ಕಲ್ಪನೆ ಮೂಡಿದೆ. ಈ ಪೀಠದ ಮೂಲಕ ಒಂದು ಆಧ್ಯಯನ ಕೇಂದ್ರ, ಒಪನ್ ಥಿಯೇಟರ್, ಗ್ರಂಥಾಲಯ ತೆರೆಯಬೇಕು ಎಂಬುದು ನಮ್ಮ ಯೋಚನೆ. ಇದು ಅಂದಾಜು ೧೫ ಕೋಟಿಯ ಯೋಜನೆ. ೫೦ ಲಕ್ಷ ಕೊಡುವುದಾಗಿ ಸರ್ಕಾರ ಘೋಷಿಸಿದೆ. ಇದಕ್ಕಾಗಿ ಈಗಾಗಲೇ ೪ ಎಕರೆ ಜಾಗವನ್ನು ಸರ್ಕಾರ ಕೊಂಡು ಕೊಂಡಿದೆ. ಅದೇ ರೀತಿ ಹೊರಗಿನಿಂದ ಬಂದು ಇಲ್ಲಿ ನೆಲೆಸಿ ಗ್ರಾಮೀಣ ಜೀವನವನ್ನು ಸವಿಯುವ ಮನಸ್ಸಿರುವವರಿಗೆ ಸೈಟ್ ನೀಡುವ ಯೋಜನೆಯನ್ನು ಕೂಡ ಹಾಕಿಕೊಳ್ಳಲಾಗಿದೆ. ಹಳ್ಳಿಗಳತ್ತ ಜನರನ್ನು ಸೆಳೆಯಬೇಕು ಎಂಬುದೇ ಈ ಯೋಜನೆಯು ಉದ್ದೇಶ. ಇದು ಗ್ರಾಮ ಜೀವನದ ಅಸ್ಮಿತೆಯನ್ನು ಉಳಿಸುವ ನನ್ನ ಪ್ರಯತ್ನ ಮತ್ತು ಜಾಗತೀಕರಣದ ವಿರುದ್ಧದ ನನ್ನ ಪ್ರತಿರೋಧವನ್ನು ವ್ಯಕ್ತ ಪಡಿಸುವ ರೀತಿ.

ಅನೇಕ ಪ್ರಶಸ್ತಿ, ಪುರಸ್ಕಾರಗಳಿಗೆ ಪಾತ್ರವಾದ ನಿಮ್ಮ ಪ್ರಸಿದ್ಧ ಕೃತಿ ಉಲ್ಲಂಘನೆಯ ಕುರಿತು...
ಇಲ್ಲಿ, ನನಗೆ ಹೆಚ್ಚು ಸಂಪರ್ಕಕ್ಕೆ ಬಂದವರು ಬಂಟರು, ಬಿಲ್ಲವರು ಮತ್ತು ಕೆಳವರ್ಗದವರು. ನಾನು ಈ ಕೃತಿಯಲ್ಲಿ ದಕ್ಷಿಣ ಕನ್ನಡದ ಸಾಂಸ್ಕೃತಿಕ ಚಿತ್ರಣಕ್ಕೆ ಹೆಚ್ಚಿನ ಮಹತ್ವ ಕೊಡಬೇಕು ಎಂದು ಬಯಸಿದ್ದೆ. ನಾನು ತಿಳಿದುಕೊಂಡಂತೆ ಇದಕ್ಕೆ ಬಂಟ ಸಮುದಾಯವೇ ಸೂಕ್ತ. ಕರಾವಳಿ ಭಾಗದಲ್ಲಿ ಬಂಟರು ಅತ್ಯಂತ ಬಲಿಷೃರಾಗಿದ್ದರು ಎಂಬುದನ್ನು ನಾವು ಅಲ್ಲಗಳೆಯುವ ಹಾಗಿಲ್ಲ. ಇಂದು ಗುತ್ತಿನ ಮನೆಯ ವೈಭವ ಸಹಜವಾಗಿಯೇ ಕುಸಿಯುತ್ತಿದ್ದೆ. ಒಬ್ಬ ಮನುಷ್ಯನನ್ನು ಒಂದು ಚೌಕಟ್ಟಿನಲ್ಲಿ ನೋಡಲು ಸಾಧ್ಯವಿಲ್ಲ. ಈ ದೃಷ್ಟಿಯಿಂದ ಉಲ್ಲಂಘನೆ ಮುಖ್ಯವಾಗುತ್ತದೆ. ತುಂಬಾ ಮಾನವೀಯ ಉದ್ದೇಶವನ್ನು ಹೊಂದಿದ್ದ ಭೂಮಸೂದೆ ಕಾಯ್ದೆ ಕೂಡ ತನ್ನ ಆಶಯವನ್ನು ಈಡೇರಿಸಿಕೊಳ್ಳುವಲ್ಲಿ ವಿಫಲವಾತು. ಬಹಳಷ್ಟು ಭವ್ಯ ಗುತ್ತಿನ ಮನೆಗಳು ನಾಶವಾಗುತ್ತಿರುವುದನ್ನು ಕಂಡಾಗ ನನಗೆ ಭಯವಾಗಿತ್ತು. ಗುತ್ತು ನಾಶವಾಗುತ್ತಿದೆ ಅಂದರೆ ಅದರರ್ಥ ನಮ್ಮ ಕೃಷಿ ಸಂಸ್ಕೃತಿ ನಾಶವಾಗುತ್ತದೆ ಎಂಬುದೇ ನನ್ನ ಭಯಕ್ಕೆ ಕಾರಣ. ಹಳ್ಳಿ ನಾಶವಾಗುತ್ತಿದೆ, ಅನೇಕ ಪಲ್ಲಟಗಳಾಗುತ್ತಿದೆ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ನನ್ನ ಈ ಕೃತಿಯನ್ನು ಓದಿದ್ದ ಅನೇಕ ಬಂಟರು ತಮ್ಮ ಸಂಸ್ಕೃತಿಯ ಬಗ್ಗೆ ಅಶ್ಚರ್ಯ ಚಕಿತರಾಗಿದ್ದರು.

ಹಳ್ಳಿಗಳ ಪ್ರಗತಿ ಎತ್ತ ಸಾಗುತ್ತಿದೆ?
ನಮಗೆ ತೋರಿಕೆಯ ಪ್ರಗತಿ ಕಾಣುತ್ತಿದೆ. ಪ್ರಗತಿ ಎಂದರೆ ನಮಗೆ ಅರ್ಥಿಕ ಅಭಿವೃದ್ಧಿಯನ್ನು ತೋರಿಸುತ್ತಾರೆ. ಆದರೆ ಕೃಷಿಯ ಅಭಿವೃದ್ಧಿಗೆ ಬೇಕಾದ ಮೂಲಭೂತ ಸಂಗತಿಗಳನ್ನು ಸರ್ಕಾರ ಇನ್ನೂ ಕೊಟ್ಟಿಲ್ಲ. ರೈತರಿಗೆ ತಾವು ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಸಬ್ಸಿಡಿ ಕೊಟ್ಟ ಕ್ಷಣ ರೈತರ ಅಭಿವೃದ್ಧಿ ಆಗುವುದಿಲ್ಲ. ಅವರಿಗೆ ಮಾರ್ಗದರ್ಶನದ ಕೊರತೆಯಿದೆ. ಕೆಲವು ಕೆಲಸ ಮಾಡುವುದು ತಪ್ಪು ಎಂಬ ಕೀಳರಿಮೆ ಇದೆ. ಇಂದಿನ ಜನಾಂಗಕ್ಕೆ ಕುಲ ಕಸುಬು ಬೇಕಿಲ್ಲ. ಜನರು ಸುಲಭದ ಕೆಲಸಕ್ಕೆ ಮಾರು ಹೋಗುತ್ತಿದ್ದಾರೆ. ಪ್ರಾಣಿ ಪಕ್ಷಿಗಳ ಜೊತೆಗಿನ ಅವರ ಒಡನಾಟ ಕಡಿಮೆಯಾಗಿದೆ. ನಮ್ಮ ಹಿರಿಯರಿಗೆ ಬದುಕನ್ನು ಕಟ್ಟಿಕೊಡುವ ಕಲೆಗಾರಿಕೆ ಇತ್ತು. ಆದರೆ ಈಗ ಬದುಕನ್ನು ಬಿಚ್ಚಿಡುವ ಕೆಲಸವೇ ನಡೆಯುತ್ತಿದೆ.

ಪಠ್ಯಗಳಲ್ಲಿ ಪ್ರಾದೇಶಿಕತೆ ತರುವ ಬಗ್ಗೆ ನಿಮ್ಮ ಅನಿಸಿಕೆ.
ನಮ್ಮ ಶಿಕ್ಷಣ ನೀತಿಯೇ ಸರಿ ಇಲ್ಲ. ಇಲ್ಲಿ ವೈಜ್ಞಾನಿಕ ನೀತಿ ನಿಯಮಗಳು ಆಗಿಲ್ಲ. ನಾವು ಸಾಹಿತ್ಯದಲ್ಲಿ ದೇಸಿ ಬೇಕು ಎನ್ನುತ್ತೇವೆ ಆದರೆ ಶಿಕ್ಷಣ ವ್ಯವಸ್ಥೆಯಲ್ಲಿ ದೇಸಿ ತುಂಬುವ ಪ್ರಯತ್ನಗಳೇ ಆಗಿಲ್ಲ. ನಮ್ಮ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ನಾಲ್ಕು ಭಾಗಗಳನ್ನಾಗಿ ಮಾಡಿ ಪ್ರತಿ ಭಾಗದಲ್ಲಿಯೂ ಅಲ್ಲಿನ ಸಂಸ್ಕೃತಿಯ ಬಗ್ಗೆ ಕಲಿಸಬೇಕು ಮತ್ತು ಅಲ್ಲಿರುವ ಒಂದು ಉಪಭಾಷೆಯಲ್ಲಿ ಒಂದು ಉಪಪಠ್ಯ ಅಗತ್ಯವಾಗಿ ಇರಬೇಕು. ಪ್ರಾದೇಶಿಕತೆಗೆ ಇತಿಹಾಸ ಪಠ್ಯದಲ್ಲದರೂ ಆದ್ಯತೆ ನೀಡಬೇಕು. ನಮ್ಮದು ಮಾತಿನಲ್ಲಿ ಒಕ್ಕೂಟ ವ್ಯವಸ್ಥೆ ಆದರೆ ನೀತಿಯಲ್ಲಿ ಮಾತ್ರ ಅದಕ್ಕೆ ವಿರುದ್ಧವಾದದನ್ನೇ ನಾವೇ ಪಾಲಿಸುತ್ತೇವೆ.

ಪಶ್ಚಿಮ ಘಟ್ಟದಲ್ಲಿ ನಕ್ಸಲೀಯರ ಅಟ್ಟಹಾಸ ಅಂಕೆ ಮೀರಿ ಬೆಳೆಯುತ್ತಿರುವುದರ ಬಗ್ಗೆ ನಿಮ್ಮ ಅಭಿಪ್ರಾಯ.
ನಿರುದ್ಯೋಗ ಮತ್ತು ಎಡಪಂಥೀಯ ಚಿಂತನೆಗಳಿಂದ ನಕ್ಸಲಿಸಂ ಹುಟ್ಟಿಕೊಂಡಿರುವುದು ಸ್ವಲ್ಪ ಮಟ್ಟಿಗೆ ನಿಜ. ವಿದ್ಯಾವಂತರು ಕೂಡ ನಕ್ಸಲರಾಗಿರುವುದು ನನ್ನ ಮಾತನ್ನು ಪುಷ್ಠಿಕರಿಸುತ್ತದೆ. ಈ ಸಮಸ್ಯೆಯ ಪರಿಹಾರದಲ್ಲಿ ಸ್ವಲ್ಪ ಮಟ್ಟಿಗೆ ಎಡವಟ್ಟು ಆಗಿರುವುದು ಕೂಡ ನಿಜ. ಆದರೆ ಈ ಬಗ್ಗೆ ಮಾತನಾಡಲು ನನಗೆ ಹೆಚ್ಚು ಗೊತ್ತಿಲ್ಲ. ಆದರೆ ನನಗೆ ಅವರ ಬಗ್ಗೆ ಕನಿಕರವಿಲ್ಲ. ರಕ್ತಪಾತದಲ್ಲಿ ನನಗೆ ನಂಬಿಕೆ ಇಲ್ಲ. ವಾಸ್ತವದಲ್ಲಿ ನಕ್ಸಲ್ ಚಟವಟಿಕೆಯೇ ಅನಗತ್ಯ, ಆದರೆ ಅದಕ್ಕೆ ನಾವು ರಾಜಕೀಯ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದೇವೆ.

ಲೋಕಪಾಲದ ಬಗ್ಗೆ ನಡೆಯುತ್ತಿರುವ ಜಟಾಪಟಿಯನ್ನು ಕಂಡಾಗ ನಿಮಗೆ ಏನನ್ನಿಸುತ್ತದೆ?
ಲೋಕಪಾಲದ ವಿಷಯದಲ್ಲಿ ಅಣ್ಣಾರ ನಿಲುವಿಗೆ ನನ್ನ ಸಹಮತವಿದೆ. ಆದರೆ ಲೋಕಪಾಲರ ಪ್ರಾಮಾಣಿಕತೆ ಮತ್ತು ಕಾರ್ಯಾನುಷ್ಠಾನದ ಬಗ್ಗೆ ನನಗೆ ಸಂಶಯವಿದೆ. ಉದಾಹರಣೆಗೆ ಈಗ ನಮ್ಮ ರಾಜ್ಯದಲ್ಲಿ ನಮಗೆ ಲೋಕಾಯುಕ್ತರೇ ಸಿಗುತ್ತಿಲ್ಲ.

ಪ್ರಾಥಮಿಕ ಶಾಲೆಯಲ್ಲಿ ಕನ್ನಡವನ್ನು ಕ್ರಮಬದ್ಧವಾಗಿ ಕಲಿಸುತ್ತೀಲ್ಲ ಎಂಬ ಕೂಗು ಹುಟ್ಟಿಕೊಂಡಿದೆಯಲ್ಲ?
ಇಂದು ಡಿಎಡ್‌ಗೆ ಡೊನೇಷನ್ ಕೊಟ್ಟರೆ ಯಾರನ್ನೂ ಬೇಕಾದರೂ ತೆಗೆದುಕೊಳ್ಳುತ್ತಾರೆ. ಹೆಚ್ಚು ಅಂಕ ಪಡೆದವರು, ರ‍್ಯಾಂಕ್ ಪಡೆದವರು ಭಾರಿ ಬುದ್ಧಿವಂತರು ಎಂಬ ಭ್ರಮೆ ಕೂಡ ಸರಿಯಲ್ಲ. ಇಂದು ಪದವಿ ಪೂರೈಸಿದವರಿಗೂ ನೆಟ್ಟಗೆ ಒಂದು ಪತ್ರ ಬರೆಯಲು ಗೊತ್ತಿಲ್ಲ ಅನ್ನುವ ಸ್ಥಿತಿ ಇದೆ. ಇಂದು ಪಾಠ ಮಾಡುವವರಿಗೆಯೇ ಸರಿಯಾದ ಶಿಕ್ಷಣ ಸಿಗುತ್ತಿಲ್ಲ. ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆಯನ್ನು ಯಾವತ್ತೂ ಲಾಭದ ದೃಷ್ಟಿಯಿಂದ ನೋಡಬಾರದು. ಈ ಇಲಾಖೆಗಳಿರುವುದೇ ಸೇವೆಗಾಗಿ. ಇಲ್ಲಿ ಮಕ್ಕಳ ಸಂಖ್ಯೆಯನ್ನು ನೋಡದೆ ಪ್ರತಿ ತರಗತಿಗೂ ಒಬ್ಬ ಶಿಕ್ಷಕರಿರುವಂತೆ ನೋಡಿಕೊಳ್ಳಬೇಕು. ಉದಾಹರಣೆಗೆ ಒಂದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೫ ತರಗತಿಗಳಿದ್ದರೆ ಅಲ್ಲಿ ೫ ಮಂದಿ ಶಿಕ್ಷಕರಿರಬೇಕು. ಇನ್ನು ಅಂಗ್ಲ ಮಾಧ್ಯಮಕ್ಕೆ ಅವಕಾಶ ಮಾಡಿಕೊಟ್ಟಿದ್ದೆ ತಪ್ಪು. ಈಗ ಕೇಂದ್ರಿಯ ಪಠ್ಯಕ್ರಮವನ್ನು ಬೋಧಿಸಲು ಕಣ್ಣು ಮುಚ್ಚಿ ಅನುಮತಿ ನೀಡಲಾಗುತಿದೆ ಇದು ಕೂಡ ಸರಿಯಲ್ಲ.

ಕರಾವಳಿ ಕರ್ನಾಟಕದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಬ್ರಹ್ಮ ಕಲಶೋತ್ಸವ, ಭೂತಕೋಲದ ಟ್ರೆಂಡ್‌ನ ಬಗ್ಗೆ?
ಇದು ಧಾರ್ಮಿಕ ಪುನರುತ್ಥಾನವಂತೂ ಅಲ್ಲ. ಇದು ಒಂದು ರೀತಿಯ ಭಯ ಇರಬಹುದು ಅಂತ ನನಗೆ ಕಾಣಿಸುತ್ತದೆ. ದೇವರ ಬಗ್ಗೆ ಭಯ ಇರಬಾರದು ಬದಲಾಗಿ ಭಕ್ತಿ, ಮತ್ತು ಗೌರವವಿರಬೇಕು. ಇಂದು ಬಹುತೇಕ ಧಾರ್ಮಿಕ ಕೇಂದ್ರಗಳು ಉದ್ಯಮವಾಗಿ ಬೆಳೆಯುತ್ತಿವೆ.

ಜಾತೀಯತೆ ಮತ್ತು ಕೋಮುವಾದ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂದು ನಿಮಗೆ ಅನಿಸುತ್ತಿಲ್ಲವೇ?
ಸಾಹಿತ್ಯ ಕ್ಷೇತ್ರದಲ್ಲೂ ಜಾತೀಯತೆ ಹೆಚ್ಚಾಗಿದೆ. ಜಾತಿ ಮೂಲಕ ಗುರುತಿಸಿಕೊಳ್ಳುವುದನ್ನು ನಾವು ಈಗ ಹೆಚ್ಚಾಗಿ ಕಾಣಬಹುದು. ಕರ್ನಾಟಕದಲ್ಲೇ ಜಾತಿಯತೆಯ ಹೊಗೆಯಾಡುತ್ತಿದೆ. ಇಂದು ರಾಜ್ಯದ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಸಾಹಿತಿಕ ಲೋಕ ಜಾತೀಯತೆಯಿಂದ ಕೂಡಿದೆ. ಈ ಮೂಲಕ ನಾವು ಕಲಿತದ್ದಕ್ಕೆ ಅರ್ಥವೇ ಇಲ್ಲ ಅನ್ನುವ ಹಾಗೆ ನಮ್ಮ ಪರಂಪರೆಗೆ, ಧಾರ್ಮಿಕ ಗ್ರಂಥಗಳಿಗೆ, ಸಂತರಿಗೆ ನಾವು ನೇರವಾಗಿ ಅಥವಾ ಪರೋಕ್ಷವಾಗಿ ಅಗೌರವ ತೋರುತ್ತಿದ್ದೇವೆ. ಹಿಂದೆ ಸಂಘರ್ಷದಲ್ಲಿಯೇ ಸಾಮರಸ್ಯವಿತ್ತು. ಈಗ ಇಲ್ಲ.

ಓದುವ ಸಂಸ್ಕೃತಿ ಹೇಗಿದೆ?
ಒಳ್ಳೆಯ ಕೃತಿಗಳಿಗೆ ಇಂದಿಗೂ ಓದುಗರಿದ್ದಾರೆ. ಇತ್ತಿಜೆಗಷ್ಟೇ ಕೇಂದ್ರ ಸಾಹಿತ್ಯ ಅಕಾಡೆಮೆ ಪ್ರಶಸ್ತಿ ಪಡೆದ ಸ್ವಪ್ನ ಸಾರಸ್ವತ ನಾಲ್ಕನೇಯ ಮುದ್ರಣ ಕಂಡಿದೆ. ನನ್ನ ಉಲ್ಲಂಘನೆಯ ಕೃತಿ ಎರಡೇ ವರ್ಷದಲ್ಲಿ ಎರಡನೇ ಮುದ್ರಣ ಕಂಡಿದೆ. ಇಂದು ಓದುಗರ ಸಂಖ್ಯೆ ಕಡಿಮೆಯಾಗಿಲ್ಲ. ಜನರಲ್ಲಿ ಸಾಂಸ್ಕೃತಿಕ ಅರಿವು ಕಡಿಮೆಯಾಗಿದೆ ಎಂದು ತಕ್ಷಣ ಹೇಳಲಾಗದು

No comments: